Sunday, December 12, 2010

ಪ್ರಾಣಿಗಳೇಕೆ ಮಾತನಾಡುವುದಿಲ್ಲ? - ಒಂದು ಜಾನಪದ ಕಥೆ.

ಇಂದು ಮಧ್ಯಾಹ್ನ ಹೀಗೆ ಮನೆಯಲ್ಲಿ ಹರಟೆ ಹೊಡೆಯುತ್ತಿರುವಾಗ ಮಾವನ ಬಾಯಿಂದ ಹೊಮ್ಮಿ ಬಂದ ಕಥೆ. ಚಿಕ್ಕದಾಗಿ ಚೊಕ್ಕವಾಗಿ ಹೇಳ್ತೀನಿ. ಕೇಳಿ...

ಒಂದಾನೊಂದು ಕಾಲದಲ್ಲಿ, ತುಂಬಾ ಹಿಂದೆ, ತುಂಬಾಂದ್ರೆ ತುಂಬಾ ಹಿಂದೆ ಪ್ರಾಣಿಗಳೆಲ್ಲ ಮಾತಾಡ್ತಾ ಇದ್ದವು. ಎಲ್ಲಾ ಭಾಷೇನೂ ಮಾತಾಡ್ತಾ ಇದ್ದವು. ಜನರೂ, ಪ್ರಾಣಿಗಳು, ಒಬ್ಬರಿಗೊಬ್ಬರು ಮಾತಾಡುತ್ತ ಕಾಲ ಕಳೀತಾ ಇದ್ದರು. ಎಲ್ಲಾ ಸುಭಿಕ್ಷವಾಗಿದ್ದವು.

ಹೀಗಿರೋವಾಗ, ಒಂದಿನ ಏನಾಯ್ತು ಗೊತ್ತ? ಒಂದೂರಲ್ಲಿ ಒಬ್ಬ ಗೃಹಿಣಿ ಸಂಜೆ ಹಾಲು ಕರೆಯೋಕೆ ಅಂತ ಹಟ್ಟಿ ಕಡೆ ಬಂದಳು. ಪ್ರತೀ ದಿನ ಚೆನ್ನಾಗಿ ಮಾತಾಡ್ತಾ ಇದ್ದ ಹಸು, ಈವತ್ತು ಹೇಳಿದ್ದ ಮಾತು ಕೇಳಿ ಅವಳು ಕಂಗಾಲಾದಳು.

ಹಸು: ಹೂ ಹೂ, ಕರಿ ಕರಿ... ಈವತ್ತು ನಿನ್ ಗಂಡನ ಕೊನೆ ದಿನ ಅಲ್ವಾ? ಹೊಟ್ಟೆ ತುಂಬಾ ಹಾಲು ಕೊಡು ಅವನಿಗೆ.

ಹೆಂಗಸು: ಏಯ್! ನಿನ್ಗೆನಾಗಿದೆ ಈವತ್ತು? ಬುದ್ಧಿ ನೆಟ್ಟಗಿದ್ಯಾ ಹೆಂಗೆ?

ಹಸು: ನನಗೇನಾಗಿದೆ? ಚೆನ್ನಾಗೆ ಇದ್ದೀನಿ...

ಹೆಂಗಸು: ಮತ್ತೆ? ಏನೇನೋ ವಟಗುಟ್ಟುತ್ತಾ ಇದ್ದೀಯ?

ಹಸು: ಅಯ್ಯೋ! ಇರೋ ವಿಷಯ ಹೇಳ್ದೆ.

ಹೆಂಗಸು: ಇರೋ ವಿಷ್ಯ? ಅದೇನ್ ಸ್ವಲ್ಪ ಬಿಡಿಸಿ ಹೇಳು.

ಹಸು: ನಾಳೆ ಬೆಳಿಗ್ಗೆ ಹೊತ್ತಿಗೆ ನಿನ್ ಗಂಡ ಶಿವನ ಪಾದ ಸೇರ್ಕೊತಾನೆ. ನೋಡ್ಕೋ ಅಂದೇ ಅಷ್ಟೇ.

ಹೆಂಗಸು: ಏಯ್! ನಾಲಗೆ ಬಿಗಿ ಹಿಡಿದ್ ಮಾತಾಡು. ಇಷ್ಟ್ ವರ್ಷ ದಂಡಿ ದಂಡಿ ಬೂಸಾ, ಹುಲ್ಲು ಹಾಕಿದ್ದಕ್ಕೆ ಈ ಥರ ಶಾಪ ಹಾಕ್ತ ಇದ್ದೀಯ ನಂಗೆ? ನಾನೇನ್ ಕಮ್ಮಿ ಮಾಡಿದ್ದೆ ನಿಂಗೆ?

ಹಸು: ಇದೊಳ್ಳೆ ಕಥೆ ಆಯ್ತಲ್ಲ? ಇದ್ದಿದ್ದ್ ಇದ್ದ ಹಾಗ್ ಹೇಳಿದ್ರೆ ಎದ್ದ ಬಂದ್ ಎದೆಗ್ ಒದ್ದರಂತೆ. ಹಾಗಾಯ್ತು ಕಥೆ. ಏನೋ ನೀನು ನಮ್ಮ ಯಜಮಾಂತಿ. ಮುಂಚೆನೇ ತಿಲಿಸನ ಅಂದ್ರೆ ನೀನ್ ಯಾಕ್ ಹೀಗ್ ಆಡ್ತೀಯ?

ಹೆಂಗಸು: ಇದ್ದಿದ್ದ್ ಇದ್ದ ಹಾಗೆ ಅಂತೀಯಲಾ, ನಿಂಗ್ ಯಾರ್ ಹೇಳಿದ್ದು?

ಹಸು: ಇನ್ನ್ ಯಾರು? ನನ್ ಗಂಡ, ಅದೇ, ಯಮನ ವಾಹನ, ಕೋಣನೇ ಹೇಳಿದ್ದು... ಈವತ್ತ್ ರಾತ್ರಿ ಯಮ ಬಂದು ನಿನ್ನ್ ಗಂಡನ ಪ್ರಾಣ ಹೊತ್ತ್ಕೊಂಡ್ ಹೋಗ್ತಾನಂತೆ.

ಹೆಂಗಸು: ಅಯ್ಯೋ ಅಯ್ಯೋ ಅಯ್ಯೋ!! ಇಷ್ಟ್ ಬೇಗ ನಾನ್ ಮುಂಡೆ ಆಗೋಗ್ತೀನ? ನನ್ನ ಗಂಡಂಗೆ ಇಷ್ಟೇನಾ ಆಯುಷ್ಯ ಇರೋದು? ಇದಕ್ಕೇನು ಮಾಡಕ್ಕಾಗಲ್ವಾ? ಅಯ್ಯೋ ದೇವ್ರೇ... ಇದೇನ್ ಗತಿ ತಂದೆ ನಂಗೆ?

ಹಸು: ನಿನ್ನ್ ಸ್ಥಿತಿ ನೋಡಿ ಅಯ್ಯೋ ಪಾಪ ಅನ್ನ್ಸತ್ತೆ...ನಿಂಗ್ ಸಹಾಯ ಮಾಡ್ಬೇಕು ಅಂತಾನೂ ಅನ್ನ್ಸತ್ತೆ. ಆದ್ರೆ ಏನ್ ಮಾಡೋದು? ವಿಧಿ...

ಹೆಂಗಸು: ಇದಕ್ಕೆ ಏನಾದ್ರೂ ಉಪಾಯ ಇದ್ಯಾ? ನಿನ್ನ್ ದಮ್ಮಯ್ಯ ಅಂತೀನಿ... ನಂಗೆ ಸಹಾಯ ಮಾಡು...

ಸ್ವಲ್ಪ ಹೊತ್ತು ಯೋಚಿಸಿದ ಹಸು,

ಹಸು: ನೋಡಮ್ಮ, ಒಂದ್ ಉಪಾಯ ಮಾಡಬಹುದು... ಈಗ ನೀನು ಹಾಲು ಕರ್ಕೊಂಡು ಮನೆಗೆ ತೊಗೊಂಡ್ ಹೋಗ್ತೀಯಲ್ಲಾ? ಅದನ್ನ ಮನೆ ಒಳಗ್ ಒಯ್ಯಬೇಡ. ಹಾಗೆ ಹೊಸಿಲಲ್ಲಿ ಇಡು. ಯಮ ಬಂದವನು ಒಳಗೆ ಬರೋಕೆ ಮುಂಚೆ, ಹೊಸಿಲಲ್ಲಿ ಹಾಲು ನೋಡ್ತಾನಲ್ಲ, ಅದನ್ನ ಕುಡೀತಾನೆ. ಹಾಲು ಕುಡಿದ ಮೇಲೆ ಅವನಿಗೆ ಅದೇ ಮನೆ ಯಜಮಾನನ್ ಪ್ರಾಣ ಹೇಗ್ ತೊಗೊಂಡ್ ಹೋಗ್ತಾನೆ? ಉಂಡ ಮನೆಗೆ ದ್ರೋಹ ಮಾಡಿದ ಹಾಗಾಗಲ್ವಾ? ಹಾಗೆ ವಾಪಸ್ ಹೋಗ್ತಾನೆ. ನಿನ್ನ್ ಗಂಡನ ಪ್ರಾಣಾನೂ ಉಳಿಯತ್ತೆ.

ಅವಳು ಹಾಗೇ ಮಾಡ್ತಾಳೆ. ಯಮ ಬರ್ತಾನೆ. ಹೊಸಿಲಲ್ಲಿ ಹಾಲು ನೋಡ್ತಾನೆ. ಕುಡೀತಾನೆ. ಹಾಲು ಕುಡಿದ ಋಣ ಅವನನ್ನ ಕರ್ಮಭ್ರಷ್ಟನನ್ನಾಗಿ ಮಾಡುತ್ತದೆ. ಮಾರನೆ ದಿನವೂ ಬರುತ್ತಾನೆ, ಆ ದಿನವೂ ಹಾಲಿರುತ್ತದೆ, ಕುಡಿದ ಮೇಲೆ ವಾಪಸ್ ಹೋಗುತ್ತಾನೆ. ಹೀಗೆ ಸುಮಾರು ದಿನ ನಡೆಯುತ್ತದೆ.

ಕೊನೆಗೆ ಯಮನಿಗೆ ಇದರಲ್ಲೇನೋ ಮಸಲತ್ತಿದೆ ಎಂದು ತಿಳಿಯುತ್ತದೆ. ಇದನ್ನು ಹೇಗಾದರೂ ಮಾಡಿ ಪತ್ತೆ ಹಚ್ಚಬೇಕೆಂದು ಉಪಾಯವಾಗಿ ಆ ಗೃಹಿಣಿಯ ಮೆನೆಗೆ ಮಾರುವೇಷದಲ್ಲಿ ಹೋಗುತ್ತಾನೆ. ಲೋಕಾಭಿರಾಮವಾಗಿ ಮಾತನಾಡುತ್ತ ಈ ವಿಷಯಕ್ಕೆ ಹೇಗೋ ಬರುತ್ತಾನೆ. ಇವನ ಸೌಮ್ಯ ಗುಣಕ್ಕೆ ಮೆಚ್ಚಿ ಅವಳು ಗುಟ್ಟನ್ನು ಬಿಚ್ಚಿಡುತ್ತಾ ಇದೇ ವೃತ್ತಾಂತವನ್ನು ಯಮನಿಗೊಪ್ಪಿಸುತಾಳೆ.

ಇದನ್ನು ತಿಳಿದ ಯಮನು ಕುಪಿತನಾದನು. ಇನ್ನು ಮುಂದೆ ಹೀಗಾಗದಿರಲು ಮನುಷ್ಯನ ಬಿಟ್ಟು ಎಲ್ಲಾ ಪ್ರಾಣಿಗಳಿಗೂ ಮಾತು ನಿಂತು ಹೋಗಲಿ ಎಂದು ಶಾಪವಿಟ್ಟನು.

ಅಂದಿನಿಂದ ಮನುಷ್ಯನ ಹೊರತಾಗಿ ಎಲ್ಲಾ ಪ್ರಾಣಿಗಳ ಬಾಯಿ ಬಿದ್ದು ಹೋಯಿತು.

2 comments:

ಚುಕ್ಕಿಚಿತ್ತಾರ said...

kathe channaagide...:)

Unknown said...

@ ಚುಕ್ಕಿಚಿತ್ತಾರ & ರವಿ ಭರತ್ Dhanyavaadagalu.