Showing posts with label ಕಥೆ. Show all posts
Showing posts with label ಕಥೆ. Show all posts

Sunday, September 18, 2011

ಭಾಷಾಭಿಮಾನ

ಅವನು ದಿನಸಿ ತರಲು ಅಂಗಡಿಗೆ ಹೋದ. ಒಂದೋ ಎರಡೋ ವಸ್ತುಗಳನ್ನಷ್ಟೇ ಕೊಂಡುಕೊಳ್ಳಬೇಕಾದ್ದರಿಂದ ಇವನ ಕೆಲಸ ಬೇಗ ಮುಗಿಯಿತು. ಹಣ ಪಾವತಿಸಲು ಬಿಲ್ಲಿಂಗ್ ಕೌಂಟರಿನತ್ತ ಹೆಜ್ಜೆ ಹಾಕಿದ.

ಇವನ ಎದುರುಗಡೆ ಇಬ್ಬರಿದ್ದರು. ಮುಂದಿದ್ದ ಹೆಂಗಸು, ಕೌಂಟರಿನಲ್ಲಿದ್ದವನ ಜೊತೆ ತೆಲುಗಿನಲ್ಲಿ ವ್ಯವಹರಿಸುತ್ತಿದ್ದಳು. ಬಿಲ್ಲು ೪೧ ರುಪಾಯಿಯಾಗಿದ್ದರೆ ೫೦೦ರ ನೋಟು ಮುಂದೆ ಹಿಡಿದು ಚಿಲ್ಲರೆ ಕೊಡು ಎಂದು ಲಘುವಾಗಿ ಜಗಳ ಕಾಯುತ್ತಿದಳು.

ಕೌಂಟರಿನವ: ೫೦೦ ರುಪಾಯಿ ಚಿಲ್ಲರೆ ಇಲ್ಲ ಮೇಡಂ. ಚಿಲ್ಲರೆ ಕೊಡಿ.
ಮಹಿಳೆ: ನಾ ತೋ ಲೇದು ಬಾಬು. ನುವ್ವೇ ಪಂಪಿಚ್ಚೆಯಿ.
ಕೌಂಟರಿನವ: ಇಪ್ಪುಡೆ ಓಪನ್ ಚೇಸ್ಯಾನು. ನಾ ತೋ ಲೇದು. ಮೀರೆ ಈಯಂಡಿ.
....
....
....

ಕೊನೆಗೂ ಜಗಳ ಮುಗಿದು ಅವನು ತನ್ನ ಕ್ಯಾಶ್ ಕೌಂಟರಿನಲ್ಲೆ ಚಿಲ್ಲರೆ ಹುಡುಕಿ ಹುಡುಕಿ ತೆಗೆದು ಕೊಟ್ಟ.

ಅವಳು ಚಿಲ್ಲರೆ ತೆಗೆದುಕೊಂಡು ತನ್ನ ಕಾರಿನತ್ತ ಕಾಲ್ಕಿತ್ತಳು. ಅವಳ ಹಿಂದಿದ್ದ ಆಸಾಮಿಗೆ ಕೌಂಟರಿನವ 'ಅವಳ ಧಿಮಾಕು ನೋಡು' ಎಂದು ದೂರಿತ್ತನು. ಆ ಆಸಾಮಿಯೂ ಅವನ ಕೋಪಕ್ಕೆ ಸೊಪ್ಪು ಹಾಕುತ್ತ ತನ್ನ ಕೆಲಸವನ್ನು ಮುಗಿಸಿದನು.

ಈಗ ಇವನ ಸರದಿ. ೩೪ ರುಪಾಯಿ ವ್ಯಾಪಾರ ಮಾಡಿದ್ದ. ೫೦ ರುಪಾಯಿಯನ್ನಿತ್ತು ಚಿಲ್ಲರೆಗಾಗಿ ಕಾದು ನಿಂತ.

ಕೌಂಟರಿನವ: ಚಿಲ್ಲರೆ ಬೇಕು ಸಾರ್! ಚಿಲ್ಲರೆ ಕೊಡಿ.
ಇವನು: ಇಲ್ಲಪ್ಪ. ನನ್ನ ಹತ್ರ ಬರೀ ಈ ೫೦ ರುಪಾಯಿ ಮಾತ್ರ ಇದೆ.
ಕೌಂಟರಿನವ: ಎಲ್ಲ ಹೀಗಂದ್ರೆ ನಾನ್ ಎಲ್ಲಿಗೆ ಹೋಗ್ಲಿ? ಸರಿ, ಇನ್ನು ರುಪಾಯಿಗೆ ಏನಾದ್ರೂ ತೊಗೊಳ್ಳಿ.

ಇವನು ವಿಧಿಯಿಲ್ಲದೇ ೫ ರುಪಾಯಿಗೆ ಸಣ್ಣ ಮಕ್ಕಳು ತಿನ್ನುವ ಚಾಕಲೇಟ್ ಕೊಂಡ. ೧೧ ರುಪಾಯಿ ಚಿಲ್ಲರೆಯನ್ನಿತ್ತು ಅವನು ಮುಂದಿನ ಗಿರಾಕಿಯತ್ತ ಕೇಳಿದ.

ಅವನ್ಯಾರೋ ಹಿಂದಿಯವ. 'ಚಾವಲ್ ಕಾ ರೇಟ್ ಕ್ಯಾ ಹೇ??'
ಕೌಂಟರಿನವ: ಹಿಂದಿ ಇಲ್ಲ. ಕನ್ನಡ ಕನ್ನಡ!! ಹಿಂದಿ ನಹಿ.

ಸಾಮಾನು ತೆಗೆದುಕೊಳ್ಳುತ್ತಿದ್ದ ಇವನಿಗೆ ರೇಗಿತು. 'ಹಿಂದಿ ಬೇಡ ಅನ್ನೋ ನೀವು, ತೆಲುಗಲ್ಲಿಯೂ ಮಾತಾಡಬೇಡಿ. ಬರೀ ಕನ್ನಡದಲ್ಲೇ ಮಾತಾಡಿ' ಎಂದು ಹೇಳಿ ಅಲ್ಲಿಂದ ಹೋರಾಟ.

ಕೌಂಟರಿನವನ ಮೊಗದಲ್ಲಿ ಏನೋ ಅರ್ಥವಾದ ಹೊಸ ನಗುವಿತ್ತು.

Tuesday, August 16, 2011

ಪರಿವರ್ತನ

ಮಾರ್ಕೆಟ್ಟಲ್ಲಿ ಅವನು ಬಸ್ ಹತ್ತಿ ಕೂತ. ರಾತ್ರಿ ಒಂಬತ್ತೂ ಕಾಲಾದ್ದರಿಂದ ಖಾಲಿ ಖಾಲಿಯಾಗೆಯೇ ಇತ್ತು. ಗಾಳಿ ಬರಲೆಂದು ಕಿಟಕಿ ತೆರೆದು ಪುಸ್ತಕ ಓದಲು ಕೂತ.

ಮೆಜೆಸ್ಟಿಕ್ಕಿಗೆ ಬಂದ ಬಸ್ಸನ್ನು ಹಲವಾರು ಜನ ಏರಿದರು. ಇವನ ಎದುರುಗಡೆ ಒಬ್ಬ ಧಡೂತಿ ಆಸಾಮಿ ಬಂದು ಕೂತ. ಕೂತವನೇ ತನಗೆ ಬೇಕಾದಷ್ಟು ಕಿಟಕಿಯನ್ನು ತಳ್ಳಿ ತಣ್ಣನೆಯ ಗಾಳಿಯನ್ನು ಆಸ್ವಾದಿಸುತ್ತಾ ಕೂತ.

ಇವನಿಗೆ ಇರಿಸು ಮುರುಸಾಯಿತು. ಛಕ್ಕನೆ ಅವನಿಗೆ ಹೇಳಿದ: "ಸ್ವಾಮೀ, ನಾವೂ ಬಸ್ಸಲ್ಲಿದ್ದೇವೆ. ನಮಗೂ ಗಾಳಿ ಬೇಕು" ಎಂದವನೇ ಕಿಟಕಿಯನ್ನು ಮೊದಲಿದ್ದ ಹಾಗೆಯೇ ತಳ್ಳಿ ಓದಲು ಮುಂದುಮಾಡಿದ.

ಮನಸಿನಲ್ಲೇ ಬೈದುಕೊಳ್ಳುತ್ತಾ ಎದುರಿನಲ್ಲಿ ನಗುತ್ತ ಸಾವರಿಸಿಕೊಂಡು ಅವನೂ ತೆಪ್ಪಗಾದ.

ಐದು ನಿಮಿಷ ಕಳೆಯಿತು. ಸುಯಿ ಎಂದು ಬೀಸುತ್ತಿದ್ದ ಗಾಳಿ ತನ್ನ ಜೊತೆ ಭೋರ್ಗರೆಯುವ ಮಳೆಯನ್ನೂ ತಂದಿತು.

ಈಗ ಅವರಿಬ್ಬರೂ ಕಿಟಕಿ ಮುಚ್ಚುವುದಕ್ಕೆ ಮುಂದಾದರು.

Sunday, April 10, 2011

ವಿಪರ್ಯಾಸ.

ಅವನೇನು ಅಂಥಾ ಸುಂದರ ಅಲ್ಲ. ಅವಳೂ ಕೂಡ.

ಇಬ್ಬರೂ ಒಂದೇ ಕಛೇರಿಲಿ ಕೆಲಸ ಮಾಡೋರು. ಅಪರೂಪಕ್ಕೆ ಎದುರು ಬದುರು ಭೇಟಿ ಆಗ್ತಾ ಇದ್ದರೂ ಇಬ್ಬರಿಗೂ ಅಂತಹ ಹೇಳಿಕೊಳ್ಳೋ ಹಾಗೆ ಪರಿಚಯ ಇಲ್ಲ.

ಏನು ವಿಪರ್ಯಾಸನೋ? ಇಬ್ಬರೂ ಒಟ್ಟಿಗೆ ಕೆಲಸ ಮಾಡೋ ಪ್ರಮೇಯ ಬಂತು. ಸರಿ. ಎಷ್ಟ್ ಬೇಕೋ ಅಷ್ಟು ಮಾತಾಡ್ಕೊಂಡು ಇದ್ದ ಕೆಲಸ ಮುಗಿಸಿ ತಮ್ಮ ಪಾಡಿಗೆ ತಾವಿದ್ದರು. ಇಬ್ಬರ ನಡುವೆ ಬಿಂಕ ಇಲ್ಲ, ಬಿಗುಮಾನ ಇಲ್ಲ.

ಇದಾದ ನಂತರ ಆದ ವ್ಯತ್ಯಾಸ ಏನಂದ್ರೆ ಇಬ್ಬರೂ ಎದುರು ಬದುರಾದಾಗ ಒಂದು ಮಂದಸ್ಮಿತ ಇಬ್ಬರ ಮುಖದಲ್ಲೂ ಅರಳುತ್ತಿತ್ತು.

ದಿನ ಹೀಗೆ ಕಳೀತು. ಇಬ್ಬರೂ ತಮ್ಮ ಪಾಡಿಗೆ ಶಿವಾಂತ ಇದ್ದರು.

ಒಂದು ದಿನ ಇವನು ತಡವಾಗಿ ಮನೆ ಕಡೆ ಹೊರಟ. ಕಾಕತಾಳಿಯವಾಗಿ ಅವಳೂ ಅದೇ ಸಮಯದಲ್ಲಿ ಹೊರಟಳು. ಇಬ್ಬರೂ ಲಿಫ್ಟ್ ಹತ್ತಿರ ಸಿಕ್ಕಿದರು.

ಅವಳು: ಏನು? ಬೇಗ ಹೊರಡ್ತಾ ಇದ್ದೀರಿ?
ಅವನು: ಹಾಗೆ ಸುಮ್ನೆ. ಚೇಂಜ್ ಇರ್ಲಿ ಅಂತ.

ಅವಳು ಲಿಫ್ಟ್ ಕಡೆ ಮುಖ ಮಾಡಿದಳು. ಅವನು, ನಾನು ಮೆಟ್ಟಲು ಇಳ್ಕೊಂಡು ಹೋಗ್ತೀನಿ ಎಂದು ಹೊರಟ. ಅವಳು ಗಾಡಿ ತೆಗಿಯೋಕೆ ಬೇಸ್ಮೆಂಟ ಕಡೆ ಲಿಫ್ಟಲ್ಲಿ ಹೊರಟಳು. ಇವನು ಮೆಟ್ಟಿಲು ಇಳ್ಕೊಂಡು ಬಸ್ ಸ್ಟಾಂಡಿನ ಕಡೆ ನಡ್ಕೊಂಡೇ ಹೊರಟ.

ಕಚೇರಿ ಬಿಟ್ಟು ಮಾರು ದೂರ ಹೋಗಿದ್ದ ಅಷ್ಟೇ. ಅವಳು ಹಿಂದುಗಡೆ ಇಂದ ಬಂದಳು.

ಅವಳು: ಎಲ್ಲಿ ತನಕ ಡ್ರಾಪ್ ಮಾಡ್ಲಿ?
(ಇವನಿಗೆ ಅದೇನು ಮುಜುಗರನೋ? ಬಿಗುಮಾನನೋ?)
ಅವನು: ನನಗೆ ನಡ್ಕೊಂಡ್ ಹೋಗೋದ್ರಲ್ಲೇ ಖುಷಿ. ನೀವು ಹೋಗಿ. ಬಸ್ ಸ್ಟ್ಯಾಂಡ್ ಹೆಚ್ಚು ದೂರ ಇಲ್ಲ. ನಾನು ನಡ್ಕೊಂಡೇ ಹೋಗ್ತೀನಿ.
ಅವಳು: ಬನ್ನಿ ಪರವಾಗಿಲ್ಲ. ಸ್ವಲ್ಪ ಬೇಗ ಹೋಗೋರಂತೆ.
ಅವನು: ಅಡ್ಡಿ ಇಲ್ಲ. ತಾವು ತಮ್ಮ ಪಾಡಿಗೆ ಹೋಗಿ. ಬೇಜಾರ್ ಮಾಡ್ಕೋಬೇಡಿ. ನಂಗ್ ನಡ್ಕೊಂಡ್ ಹೋಗಕ್ಕೆ ಇಷ್ಟ.
ಅವಳು: ಸರಿ ಬಿಡಿ. ಬೈ!!

ಅಂದಿನಿಂದ ಇಬ್ಬರೂ ಒಬ್ಬರನ್ನೊಬ್ಬರು ಮಾತನಾಡಿಸಲಿಲ್ಲ.

Sunday, December 12, 2010

ಪ್ರಾಣಿಗಳೇಕೆ ಮಾತನಾಡುವುದಿಲ್ಲ? - ಒಂದು ಜಾನಪದ ಕಥೆ.

ಇಂದು ಮಧ್ಯಾಹ್ನ ಹೀಗೆ ಮನೆಯಲ್ಲಿ ಹರಟೆ ಹೊಡೆಯುತ್ತಿರುವಾಗ ಮಾವನ ಬಾಯಿಂದ ಹೊಮ್ಮಿ ಬಂದ ಕಥೆ. ಚಿಕ್ಕದಾಗಿ ಚೊಕ್ಕವಾಗಿ ಹೇಳ್ತೀನಿ. ಕೇಳಿ...

ಒಂದಾನೊಂದು ಕಾಲದಲ್ಲಿ, ತುಂಬಾ ಹಿಂದೆ, ತುಂಬಾಂದ್ರೆ ತುಂಬಾ ಹಿಂದೆ ಪ್ರಾಣಿಗಳೆಲ್ಲ ಮಾತಾಡ್ತಾ ಇದ್ದವು. ಎಲ್ಲಾ ಭಾಷೇನೂ ಮಾತಾಡ್ತಾ ಇದ್ದವು. ಜನರೂ, ಪ್ರಾಣಿಗಳು, ಒಬ್ಬರಿಗೊಬ್ಬರು ಮಾತಾಡುತ್ತ ಕಾಲ ಕಳೀತಾ ಇದ್ದರು. ಎಲ್ಲಾ ಸುಭಿಕ್ಷವಾಗಿದ್ದವು.

ಹೀಗಿರೋವಾಗ, ಒಂದಿನ ಏನಾಯ್ತು ಗೊತ್ತ? ಒಂದೂರಲ್ಲಿ ಒಬ್ಬ ಗೃಹಿಣಿ ಸಂಜೆ ಹಾಲು ಕರೆಯೋಕೆ ಅಂತ ಹಟ್ಟಿ ಕಡೆ ಬಂದಳು. ಪ್ರತೀ ದಿನ ಚೆನ್ನಾಗಿ ಮಾತಾಡ್ತಾ ಇದ್ದ ಹಸು, ಈವತ್ತು ಹೇಳಿದ್ದ ಮಾತು ಕೇಳಿ ಅವಳು ಕಂಗಾಲಾದಳು.

ಹಸು: ಹೂ ಹೂ, ಕರಿ ಕರಿ... ಈವತ್ತು ನಿನ್ ಗಂಡನ ಕೊನೆ ದಿನ ಅಲ್ವಾ? ಹೊಟ್ಟೆ ತುಂಬಾ ಹಾಲು ಕೊಡು ಅವನಿಗೆ.

ಹೆಂಗಸು: ಏಯ್! ನಿನ್ಗೆನಾಗಿದೆ ಈವತ್ತು? ಬುದ್ಧಿ ನೆಟ್ಟಗಿದ್ಯಾ ಹೆಂಗೆ?

ಹಸು: ನನಗೇನಾಗಿದೆ? ಚೆನ್ನಾಗೆ ಇದ್ದೀನಿ...

ಹೆಂಗಸು: ಮತ್ತೆ? ಏನೇನೋ ವಟಗುಟ್ಟುತ್ತಾ ಇದ್ದೀಯ?

ಹಸು: ಅಯ್ಯೋ! ಇರೋ ವಿಷಯ ಹೇಳ್ದೆ.

ಹೆಂಗಸು: ಇರೋ ವಿಷ್ಯ? ಅದೇನ್ ಸ್ವಲ್ಪ ಬಿಡಿಸಿ ಹೇಳು.

ಹಸು: ನಾಳೆ ಬೆಳಿಗ್ಗೆ ಹೊತ್ತಿಗೆ ನಿನ್ ಗಂಡ ಶಿವನ ಪಾದ ಸೇರ್ಕೊತಾನೆ. ನೋಡ್ಕೋ ಅಂದೇ ಅಷ್ಟೇ.

ಹೆಂಗಸು: ಏಯ್! ನಾಲಗೆ ಬಿಗಿ ಹಿಡಿದ್ ಮಾತಾಡು. ಇಷ್ಟ್ ವರ್ಷ ದಂಡಿ ದಂಡಿ ಬೂಸಾ, ಹುಲ್ಲು ಹಾಕಿದ್ದಕ್ಕೆ ಈ ಥರ ಶಾಪ ಹಾಕ್ತ ಇದ್ದೀಯ ನಂಗೆ? ನಾನೇನ್ ಕಮ್ಮಿ ಮಾಡಿದ್ದೆ ನಿಂಗೆ?

ಹಸು: ಇದೊಳ್ಳೆ ಕಥೆ ಆಯ್ತಲ್ಲ? ಇದ್ದಿದ್ದ್ ಇದ್ದ ಹಾಗ್ ಹೇಳಿದ್ರೆ ಎದ್ದ ಬಂದ್ ಎದೆಗ್ ಒದ್ದರಂತೆ. ಹಾಗಾಯ್ತು ಕಥೆ. ಏನೋ ನೀನು ನಮ್ಮ ಯಜಮಾಂತಿ. ಮುಂಚೆನೇ ತಿಲಿಸನ ಅಂದ್ರೆ ನೀನ್ ಯಾಕ್ ಹೀಗ್ ಆಡ್ತೀಯ?

ಹೆಂಗಸು: ಇದ್ದಿದ್ದ್ ಇದ್ದ ಹಾಗೆ ಅಂತೀಯಲಾ, ನಿಂಗ್ ಯಾರ್ ಹೇಳಿದ್ದು?

ಹಸು: ಇನ್ನ್ ಯಾರು? ನನ್ ಗಂಡ, ಅದೇ, ಯಮನ ವಾಹನ, ಕೋಣನೇ ಹೇಳಿದ್ದು... ಈವತ್ತ್ ರಾತ್ರಿ ಯಮ ಬಂದು ನಿನ್ನ್ ಗಂಡನ ಪ್ರಾಣ ಹೊತ್ತ್ಕೊಂಡ್ ಹೋಗ್ತಾನಂತೆ.

ಹೆಂಗಸು: ಅಯ್ಯೋ ಅಯ್ಯೋ ಅಯ್ಯೋ!! ಇಷ್ಟ್ ಬೇಗ ನಾನ್ ಮುಂಡೆ ಆಗೋಗ್ತೀನ? ನನ್ನ ಗಂಡಂಗೆ ಇಷ್ಟೇನಾ ಆಯುಷ್ಯ ಇರೋದು? ಇದಕ್ಕೇನು ಮಾಡಕ್ಕಾಗಲ್ವಾ? ಅಯ್ಯೋ ದೇವ್ರೇ... ಇದೇನ್ ಗತಿ ತಂದೆ ನಂಗೆ?

ಹಸು: ನಿನ್ನ್ ಸ್ಥಿತಿ ನೋಡಿ ಅಯ್ಯೋ ಪಾಪ ಅನ್ನ್ಸತ್ತೆ...ನಿಂಗ್ ಸಹಾಯ ಮಾಡ್ಬೇಕು ಅಂತಾನೂ ಅನ್ನ್ಸತ್ತೆ. ಆದ್ರೆ ಏನ್ ಮಾಡೋದು? ವಿಧಿ...

ಹೆಂಗಸು: ಇದಕ್ಕೆ ಏನಾದ್ರೂ ಉಪಾಯ ಇದ್ಯಾ? ನಿನ್ನ್ ದಮ್ಮಯ್ಯ ಅಂತೀನಿ... ನಂಗೆ ಸಹಾಯ ಮಾಡು...

ಸ್ವಲ್ಪ ಹೊತ್ತು ಯೋಚಿಸಿದ ಹಸು,

ಹಸು: ನೋಡಮ್ಮ, ಒಂದ್ ಉಪಾಯ ಮಾಡಬಹುದು... ಈಗ ನೀನು ಹಾಲು ಕರ್ಕೊಂಡು ಮನೆಗೆ ತೊಗೊಂಡ್ ಹೋಗ್ತೀಯಲ್ಲಾ? ಅದನ್ನ ಮನೆ ಒಳಗ್ ಒಯ್ಯಬೇಡ. ಹಾಗೆ ಹೊಸಿಲಲ್ಲಿ ಇಡು. ಯಮ ಬಂದವನು ಒಳಗೆ ಬರೋಕೆ ಮುಂಚೆ, ಹೊಸಿಲಲ್ಲಿ ಹಾಲು ನೋಡ್ತಾನಲ್ಲ, ಅದನ್ನ ಕುಡೀತಾನೆ. ಹಾಲು ಕುಡಿದ ಮೇಲೆ ಅವನಿಗೆ ಅದೇ ಮನೆ ಯಜಮಾನನ್ ಪ್ರಾಣ ಹೇಗ್ ತೊಗೊಂಡ್ ಹೋಗ್ತಾನೆ? ಉಂಡ ಮನೆಗೆ ದ್ರೋಹ ಮಾಡಿದ ಹಾಗಾಗಲ್ವಾ? ಹಾಗೆ ವಾಪಸ್ ಹೋಗ್ತಾನೆ. ನಿನ್ನ್ ಗಂಡನ ಪ್ರಾಣಾನೂ ಉಳಿಯತ್ತೆ.

ಅವಳು ಹಾಗೇ ಮಾಡ್ತಾಳೆ. ಯಮ ಬರ್ತಾನೆ. ಹೊಸಿಲಲ್ಲಿ ಹಾಲು ನೋಡ್ತಾನೆ. ಕುಡೀತಾನೆ. ಹಾಲು ಕುಡಿದ ಋಣ ಅವನನ್ನ ಕರ್ಮಭ್ರಷ್ಟನನ್ನಾಗಿ ಮಾಡುತ್ತದೆ. ಮಾರನೆ ದಿನವೂ ಬರುತ್ತಾನೆ, ಆ ದಿನವೂ ಹಾಲಿರುತ್ತದೆ, ಕುಡಿದ ಮೇಲೆ ವಾಪಸ್ ಹೋಗುತ್ತಾನೆ. ಹೀಗೆ ಸುಮಾರು ದಿನ ನಡೆಯುತ್ತದೆ.

ಕೊನೆಗೆ ಯಮನಿಗೆ ಇದರಲ್ಲೇನೋ ಮಸಲತ್ತಿದೆ ಎಂದು ತಿಳಿಯುತ್ತದೆ. ಇದನ್ನು ಹೇಗಾದರೂ ಮಾಡಿ ಪತ್ತೆ ಹಚ್ಚಬೇಕೆಂದು ಉಪಾಯವಾಗಿ ಆ ಗೃಹಿಣಿಯ ಮೆನೆಗೆ ಮಾರುವೇಷದಲ್ಲಿ ಹೋಗುತ್ತಾನೆ. ಲೋಕಾಭಿರಾಮವಾಗಿ ಮಾತನಾಡುತ್ತ ಈ ವಿಷಯಕ್ಕೆ ಹೇಗೋ ಬರುತ್ತಾನೆ. ಇವನ ಸೌಮ್ಯ ಗುಣಕ್ಕೆ ಮೆಚ್ಚಿ ಅವಳು ಗುಟ್ಟನ್ನು ಬಿಚ್ಚಿಡುತ್ತಾ ಇದೇ ವೃತ್ತಾಂತವನ್ನು ಯಮನಿಗೊಪ್ಪಿಸುತಾಳೆ.

ಇದನ್ನು ತಿಳಿದ ಯಮನು ಕುಪಿತನಾದನು. ಇನ್ನು ಮುಂದೆ ಹೀಗಾಗದಿರಲು ಮನುಷ್ಯನ ಬಿಟ್ಟು ಎಲ್ಲಾ ಪ್ರಾಣಿಗಳಿಗೂ ಮಾತು ನಿಂತು ಹೋಗಲಿ ಎಂದು ಶಾಪವಿಟ್ಟನು.

ಅಂದಿನಿಂದ ಮನುಷ್ಯನ ಹೊರತಾಗಿ ಎಲ್ಲಾ ಪ್ರಾಣಿಗಳ ಬಾಯಿ ಬಿದ್ದು ಹೋಯಿತು.

Monday, February 08, 2010

ಸದಾನಂದ

ಸ್ಮಶಾನದಲ್ಲಿ ಅವನು ಅಳುತ್ತಾ ಕೂತಿದ್ದ. ಅವನ ತಂದೆ, ಅವನಿಗಿದ್ದ ಒಂದೇ ಆಸರೆ, ಅವನನ್ನಗಲಿದ್ದ. ತನಗಿನ್ನಾರು ದಿಕ್ಕು? ತಾನಿನ್ನು ಒಬ್ಬಂಟಿ ಎಂದು ಮರುಗುತ್ತಿದ್ದ.

ಸ್ಮಶಾನದ ಚಂಡಾಳ ಇವನನ್ನೇ ದಿಟ್ಟಿಸಿ ನೋಡುತ್ತಿದ್ದ. ಅವನ ಕೆಲಸವೆಲ್ಲ ಮುಗಿದಿತ್ತು. ಆ ದಿನ ಹೆಣ ಸುಟ್ಟು, ೩-೪ ಹೆಣಗಳನ್ನು ಹೂತಿದ್ದ.

ಇವನ ಬಳಿ ಬಂದು ಕೇಳಿದ: "ಯಾಕ್ ಮರಿ ಅಳತ ಇದ್ದೀಯ? ಮನೆಗ್ ಒಗಾಕಿಲ್ವ?"

"ನಮ್ಮಯ್ಯ ಸತ್ತ್ಹೊಗವ್ರೆ! ನಂಗ್ಯಾರು ಗತಿ ಇಲ್ಲ. ಮನೆಗ್ ಹೋದ್ರೆ ಬರೀ ಅಯ್ಯನ್ನ್ ನೆನಪೆ ಬತ್ತೈತೆ. ನಾ ಮನೆಗ್ ಹೊಗಾಕಿಲ್ಲ"

"ಹಂಗಲ್ಲ ಅನ್ನ್ಬ್ಯಾಡದು ಮಗಾ! ಮೇಲಿರೋ ನಿಮ್ಮಯ್ಯನ್ಗೆ ಸಿಟ್ಟ ಬರಾಕಿಲ್ವ? ಓಗು! ಮನೆಗ್ ಹೋಗಿ ಸಂದಾಗ್ ಬದುಕು"

"ನಾ ಒಗಾಕಿಲ್ಲಂದ್ರೆ ಒಗಾಕಿಲ್ಲ".

"ನೀ ಹೀಂಗ್ ಹೇಳಿದ್ರೆ ಹೋಗಲ್ಲ. ಇಲ್ ಬಾ. ಇದ ನೋಡು. ಏನಿದು?"

"ತಲೆ ಬುಲ್ಡೆ ಕಣ್ ಏಳು".

"ಇದ ಯಾವಗಾನ ಅತ್ತಿದ್ದೂ ಬೇಜಾರ್ ಮಾಡ್ಕಂದಿದ್ದೂ ನೀ ಕಂಡೀಯ?"

"ಏಯ್! ಆದ ಯಾಕ್ ಬೇಜಾರ್ ಮಾಡ್ಕತ್ತದೆ? ಅದ್ಕೆನ್ ಬುದ್ದಿ ಐತಾ?"

"ಅದೇ ನಾನು ಏಳೋದು. ನೀ ಬ್ಯಾಜಾರ್ ಮಾಡ್ಕಂದ್ರೂ, ಸಿಟ್ಟ ಮಾಡ್ಕಂದ್ರೂ ಏನೇ ಮಾಡ್ಕಂದ್ರೂ ಈ ತಲೆ ಬುಲ್ಡೆ ಮಾತ್ರ ಯಾವಾಗಲೂ ನಗ್ತಾ ಇರ್ತದೆ. ಅಳೋ ತಲೆ ಬುಲ್ಡೆ ನ ಯಾರೂ ಇಲ್ಲೀಗಂಟ ಕಂಡೇ ಇಲ್ಲ. ತಿಳ್ಕ. ನೀ ಹೆಂಗೆ ಇರು, ಈ ಬುಲ್ಡೆ ಮಾತ್ರ ಯಾವಾಗಲೂ ನಗ್ತಾನೆ ಇರ್ತೈತೆ. ಹಂಗೆ ಏನೇ ಆದ್ರೂ ನೀನು ನಗ್ತಾನೆ ಇರ್ಬೇಕು. ಈಗ ನಿಮ್ಮಪ್ಪ ಸತ್ತೋದ್ರು ಅಂತ ನೀ ಸುಮ್ಕಿದ್ದ್ರೆ ನೀನು ಸತ್ತ್ಹೊಯ್ತೀ. ನಿಮ್ಮಪ್ಪ ನಿನ್ನ ಕಷ್ಟ ಪಟ್ಟು ಸಾಕಿದ್ದು ಇದ್ಕೆಯ? ಹೋಗು. ಕಷ್ಟ ಪಟ್ಟು ದುಡಿದು ನಿಮ್ಮಪ್ಪನ್ ಋಣ ತೀರ್ಸೋಗು. "

ಬಾಳಿನಲ್ಲಿ ಏನೋ ಹೊಸ ಅರ್ಥ ಕಂಡ ಆ ಹುಡುಗ ಮುನ್ನಡೆದ.