Showing posts with label ಸಿನಿಮಾ. Show all posts
Showing posts with label ಸಿನಿಮಾ. Show all posts

Saturday, September 18, 2010

Director's Special: ಸಿನಿಮಾ ಮಾಡಲಾಗದ ಕಥೆಗಳು ಮತ್ತಿತರ ಲೇಖನಗಳು - ಒಂದು ನೋಟ.

೨ ವಾರಗಳ ಹಿಂದೆಯೇ ಬರಬೇಕಿದ್ದ ಈ ಅಂಕಣಕ್ಕೆ ನನ್ನ ಸೋಂಬೇರಿತನವೇ ಹೊಣೆ.

ಇದನ್ನು ವಿಮರ್ಶೆ ಎನ್ನಬೇಕೋ ಅನಿಸಿಕೆ ಎನ್ನಬೇಕೋ ತಿಳಿಯದೇ ಒಂದು ನೋಟ ಎಂದು ಉದ್ಧರಿಸಿರುವೆನಷ್ಟೇ. ವಿಮರ್ಶೆ ಎಂದರೆ ನನಗೆ ಕೆಲವೊಮ್ಮೆ ಭಯವಾಗುವುದುಂಟು. ನಾನು ವಿಮರ್ಶೆ ಎಂದು ಬರೆದೆನೆಂದರೆ ಹೆಚ್ಚಾಗಿ ಅದರ ಬಗ್ಗೆ ತಿರಸ್ಕಾರವೇ ಇರುತ್ತದೆ. ನನಗೆ ಅದು ಬಹಳವಾಗಿ ಹಿಡಿಸಿದರೆ ಅದರ ವಿಮರ್ಶೆಯ ಗೊಡವೆಗೆ ಹೋಗುವುದಿಲ್ಲ. ಏಕೆಂದರೆ, ಒಂದು ವಿಮರ್ಶೆಯನ್ನು ಬರೆದೆನೆಂದರೆ, ಅದರ ಬಗ್ಗೆ ಅಭಿಮಾನ ಮುಂಚಿನಂತಿರುವುದಿಲ್ಲ. ಇವೆಲ್ಲವನ್ನೂ ಮೀರಿ ಈ ಅಂಕಣವನ್ನು ಬರೆಯುತ್ತಿರುವೆನಾದ್ದರಿಂದ ಇದಕ್ಕೆ ಒಂದು ಹಿನ್ನೆಲೆಯನ್ನು ಬರೆಯೋಣ.

ಸದಭಿರುಚಿಯ ಕನ್ನಡ ಸಿನೆಮಾಗಳ ವೀಕ್ಷಕರಿಗೆ ಗುರುಪ್ರಸಾದರು ಅಪರಿಚಿತರೇನಲ್ಲ. ಅವರ 'ಮಠ' ಹಾಗು 'ಎದ್ದೇಳು ಮಂಜುನಾಥ' ಅವರ ಪ್ರತಿಭೆಗೆ ಸಾಕ್ಷಿ. ನನ್ನ ನೆಚ್ಚಿನ ನಿರ್ದೇಶಕರಲ್ಲಿ, ಅಗ್ರಗಣ್ಯರ ಸ್ಥಾನದಲ್ಲಿ ಇವರೂ ಒಬ್ಬರು. ೨ ವಾರದ ಹಿಂದೆ ಅವರ 'ಸಿನಿಮಾ ಮಾಡಲಾಗದ ಕಥೆಗಳು' ಹೊತ್ತಿಗೆ ಬಿಡುಗಡೆಯಾಯಿತು ಎಂದು ಪ್ರಜಾವಾಣಿಯ 'ಸಿನೆಮ ರಂಜನೆ'ಯಲ್ಲಿ ಓದಿ ಆ ಸಂಜೆಯೇ ಗಾಂಧಿನಗರದ 'ನವಕರ್ನಾಟಕ ಪ್ರಕಾಶನ'ದಲ್ಲಿ ಆ ಪುಸ್ತಕ ಕೊಂಡಮೇಲಷ್ಟೇ ಸಮಾಧಾನವಾದುದು. ವರ್ಷದ ಹಿಂದೆಯೇ ಅದರ ಬಗ್ಗೆ ಓದಿ ಇದ್ದ ಬದ್ದ ಪುಸ್ತಕಾಲಯಗಳಲೆಲ್ಲಾ ಹುಡುಕಾಡಿದ್ದಷ್ಟೇ ಬಂತು.

ಪೀಠಿಕೆ ಸಾಕು. ವಿಚಾರಕ್ಕೆ ಬರೋಣ. ಈ ಪುಸ್ತಕಗಳಲ್ಲಿ ಅವರ ೧೮ ಅಂಕಣಗಳಿವೆ. ಮಹಾಭಾರತದ ೧೮ ಅಧ್ಯಾಯಗಳ ತರಹ. ಹೆಹ್ಹೆಹ್ಹೆ. ಹಲವು ಹಿಂದೆಯೇ ಕೆಲವು ಪತ್ರಿಕೆಗಳಲ್ಲಿ ಪ್ರಕಟಗೊಂಡವು, ಕೆಲವು ಹೊಸತು. ಇವರ ಕಾವ್ಯನಾಮ ಶಾರದಾಸುತ. ನಿಜಕ್ಕೂ ಸರಸ್ವತಿ ಪುತ್ರರೇ. ತಮ್ಮ ಹತ್ತಿರದ ಬಳಗದವರಿಗೆಲ್ಲ ವಿಭಿನ್ನವಾಗಿ ಅರ್ಪಿಸುತ್ತ, ಪುಸ್ತಕವನ್ನು ಕೊಂಡು ಓದುವ ನಮಗೂ ಅರ್ಪಿಸುತ್ತಾರೆ. ಕೊನೆಗೆ ಶಾರದೆಗೂ.

ಈ ಎರಡು ವಾರಗಳಲ್ಲಿ ಇದನ್ನು ಓದಿ ೧೦ ದಿನದ ಮೇಲಾಯಿತು. ಕಥೆಗಳು ಜ್ಞಾಪಕವಿದ್ದರೂ, ಅದರಲ್ಲಿ ನನಗೆ ಬಹಳ ಇಷ್ಟವಾದ ಸಂಭಾಷಣೆಗಳು ಕೆಲವು ಮರೆತು ಹೋದಂತಿವೆ. ಈ ಅಂಕಣವು ಆ ಸಂಭಾಷಣೆಗಳನ್ನು ಭಟ್ಟಿ ಇಳಿಸುವುದಿಲ್ಲ. ಇನ್ನೊಮ್ಮೆ ಮೆಲುಕು ಹಾಕಿದಲ್ಲಿ ಕ್ಷಣಮಾತ್ರದಲ್ಲಿ ನೆನಪಿಗೆ ಬರುವುವು. ನಾನು ಬರೆಯಬೇಕೆಂದು ಕೊಂಡ ಕೆಲವು ಸಾಲುಗಳು ಬರದೆ ಇರಬಹುದು. ನೆನಪಾದಾಗ, ಮಗದೊಮ್ಮೆ ಓದಿದಾಗ, ಅವಶ್ಯವಾಗಿ ಅದರ ಬಗ್ಗೆ ಇದೇ ಅಂಕಣದಲ್ಲಿ ಬರೆಯುವೆನು.

ಈ ಕಥೆಗಳಲ್ಲಿ ಕೆಲವು ಕಚಗುಳಿ ಕೊಡುವಂತವುವು, ಎಲ್ಲವೂ ಅನುಭವಗಳು ಹಾಗು ಕೆಲವು ಸಾಮಾನ್ಯ ಕಥೆಯಾಗಿದ್ದರೂ, ನಿರೂಪಣೆಯಲ್ಲಿ ವಿಭಿನ್ನ ಜಾಡು ಹೊಂದಿರುವಂಥವು. ಕೊನೆಗೆ ಒಂದು ಸಂದರ್ಶನ.

ತಡಮಾಡದೆ ಪುಸ್ತಕಕ್ಕೆ ಇಳಿಯೋಣ.

ಲೇಖಕರು: ಗುರುಪ್ರಸಾದ್.
ಪುಸ್ತಕ: Director's Special
ಅಡಿಪಟ್ಟಿ: ಸಿನಿಮ ಮಾಡಲಾಗದ ಕಥೆಗಳು ಮತ್ತಿತರ ಲೇಖನಗಳು.
ಬೆಲೆ: ೧೫೦ ರೂಪಾಯಿಗಳು.

ಮೊದಲ ಮೂರು ಅಂಕಣಗಳು: ಇವೆಲ್ಲ ಒಟ್ಟುಗೂಡಿ ಒಂದು ಕಥೆ. ೨೦೦೫ರಲ್ಲಿ ರೂಪತಾರಕ್ಕೆ ಬರೆದ ಅಂಕಣಗಳು. ಆಸ್ಪತ್ರೆ ನರ್ಸೊಬ್ಬಳು (ಜಿನ್ಸಿ) ಆತ್ಮಹತ್ಯೆ ಮಾಡಿಕೊಂಡ ಸಾಮಾನ್ಯ ದಾರುಣ ಕಥೆ. ಶುರುವಿನಲ್ಲಿ ರಸವತ್ತಾಗಿ ಬಣ್ಣಿಸುವ ಈ ಕಥೆಯ ಮೊದಲ ಅಂಕಣದ ಕೊನೆಯಲ್ಲಿ ಎಣಿಸಲಾರದ ತಿರುವು ಸಿಕ್ಕು ಕಥೆಯು ರೋಚಕವಾಗುತ್ತದೆ. 'ಮಣಿ ಚಿತ್ರ ತಾಳ್' ಎಂಬ ಮಲಯಾಳಿ ಚಿತ್ರದ ಕಥೆಗಾರರನ್ನು ಹುಡುಕಿ ಕೇರಳಕ್ಕೆ ಹೊರಟ ಗುರು, ಬಸ್ಸಿನಲ್ಲಿ ಸಿಕ್ಕ ಈ ನರ್ಸಿನ ಕಥೆ ಹುಡುಕಿಕೊಂಡು ಬರೆದಂತಿದೆ. ಮೊದಲ ಅಂಕಣದಲ್ಲಿ ಗುರು ರ ಅನುಭವವಾದರೆ, ಮಿಕ್ಕೆರಡು ಅಂಕಣಗಳು ಆ ನರ್ಸಿನ ಗೋರಿಯ ಚೀತ್ಕಾರಗಳು.

ಈ ಕಥೆಯಲ್ಲಿ ನನಗೆ ಅಚ್ಚರಿಯಾದ ಒಂದು ಅಂಶವೆಂದರೆ, ಗುರುಪ್ರಸಾದರಿಗೆ 'ಆಪ್ತಮಿತ್ರ' ಚಿತ್ರ ಇಷ್ಟವಾದುದು. ಬುದ್ಧಿವಂತರು ರೀಮೇಕ್ ಮಾಡಬಾರದು; ದಡ್ಡರು ಸ್ವಮೇಕ್ ಮಾಡಬಾರದು ಎಂದ ಗುರು ಗೆ, ಆಪ್ತಮಿತ್ರ ಇಷ್ಟವಾದುದು ಅಚ್ಚರಿಯೇ. ವಯ್ಯಕ್ತಿಕವಾಗಿ ನನಗೆ ಆ ಚಿತ್ರ ಹಿಡಿಸಲಿಲ್ಲ. ಅದರ ಬಗ್ಗೆ ಚರ್ಚೆ ಮಾಡಲು ಈ ಅಂಕಣವನ್ನು ಉಪಯೋಗಿಸಲಿಚ್ಚಿಸುವುದಿಲ್ಲ. ಏನಿದ್ದರೂ ಅದು ಈ ಕಥೆಯಲ್ಲಿ ಗೌಣ.

ಜಿನ್ಸಿ ಹಾಗು ಅವಳ ಪ್ರಿಯಕರನ ಸಂಭಾಷಣೆಗಳು ನಿಮ್ಮ ಮೆದುಳಿನಲ್ಲಿ ಹೊಸ ಆಲೋಚನೆಗಳು ತಂದರೆ ಅದರಲ್ಲಿ ಆಶ್ಚರ್ಯವಿಲ್ಲವಷ್ಟೇ.

ನಾಲ್ಕನೇ ಅಂಕಣ: ಲೇಖಕರೇ ಹೇಳಿಕೊಳ್ಳುವಂತೆ, ಈ ಕಥೆ, ಅವರಿಗೆ ಒಬ್ಬರೇ ಕೂತು ಗುಂಡು ಹಾಕುವಾಗ ಹೊಳೆದ ಕಥೆ. ಆ ಎಣ್ಣೆಯ ಗುಣ ಪೂರ್ತಿಯಾಗಿ ಈ ಕಥೆಗೆ ಎರಕ ಹೊಯ್ಯ್ದಂತಿದೆ. ಪ್ರತಿಯೊಬ್ಬ ಗಂಡ, ಹೆಂಡತಿ (ಕಡೆ ಪಕ್ಷ, ಹೆಚ್ಚಿನವರು) ತಮ್ಮ ಜೀವನದ ಯಾವುದಾದರೂ ಒಂದು ಹಂತದಲ್ಲಿ ಯೋಚಿಸುವ ಒಂದು ತಂತುವನ್ನು ಆಧಾರವಾಗಿಟ್ಟುಕೊಂಡು ಬರೆದ ಕಥೆ. ದಿನೇ ದಿನೇ ಹೊಸ ಮುಖದ ಅರ್ಧಾಂಗಿಯ ಪಡೆವ ಕಥೆ. ಇಂತಹ ಕಥೆಗೆ ಗುರು ಅವರು ಕೊಟ್ಟ ಕೊನೆಯೇ ಸರಿಯಾದುದು. ಅದನ್ನು ಓದಿಯೇ ಸವಿಯಬೇಕು.

ಈ ಕಥೆಯ ಜಾಣ, ಜಗತ್ತಿನ ಎಲ್ಲ ಗಂಡಂದಿರ ಪ್ರತೀಕ.

ಐದನೇ ಅಂಕಣ: ನರಕಕ್ಕೂ ಸ್ವರ್ಗಕ್ಕೂ ಇರುವ ವ್ಯತ್ಯಾಸವನ್ನು ಚಿಕ್ಕದಾಗಿ ಚೊಕ್ಕವಾಗಿ ಈ ಕಥೆಯಲ್ಲಿ ನಿರೂಪಿಸಿದ್ದಾರೆ ಗುರು. ಈ ಕಥೆಯಲ್ಲಿ ಬರುವ ಭಗ್ನ ಪ್ರೇಮಿ ಗಿರಿಧರ ಹಾಗು ಅಪಘಾತ ಮೃತ ನಂದಿನಿ ಈ ದೃಷ್ಠಾಂತಕ್ಕೆ ಸಾಕ್ಷಿಯಾಗುತ್ತಾರೆ. ನರಕದ ವರ್ಣನೆ, ಭೂಮಿಯ ಜೊತೆ ಅದರ ಹೋಲಿಕೆ, ನರಕದ ಹಿಟ್ಲರ್ ಹುಣಸೆ ಮರ, ನರಕದಿಂದ ಸ್ವರ್ಗಕ್ಕೆ ಹೋಗುವ ಪರಿ, ಲೇಖಕರ ಕ್ರಿಯಾಶೀಲತೆಗೆ ಒಂದು ಸಾಕ್ಷಿ.

ಆರನೇ ಅಂಕಣ: ಜಲಪ್ರಳಯದ ಕಥನ. ೨೦೦೮ರಲ್ಲಿ ಮಯುರಕ್ಕೆ ಬರೆದ ಕಥೆ. ಪ್ರಳಯದ ಕೊನೆಯ ಹಂತ ನಮ್ಮ ಬೆಂಗಳೂರಿನಲ್ಲಿ. ಕಥಾನಾಯಕ, ಭಾರಧ್ವಾಜ ಸನಾತನಿ ಹಾಗು ಈಜುಗಾರ. ಆಟ ಹಲಸೂರಿನಿಂದ ಯೆಶವಂತಪುರದ ವರೆಗೂ ಈಜಬಲ್ಲ. ನಾಯಕಿ ಭವತಿ. ಭಾರಧ್ವಾಜ ಭಾವತಿಯರು, ಪ್ರಕೃತಿ ಹಾಗು ಪುರುಷರಾಗಿ ವಿಶ್ವಮಾನವನನ್ನು ಹಡೆವ ಕಥೆಯೇ ಇದು. ಹೊಸ, ಆದರ್ಶ ಸಮಾಜವನ್ನು ಕಟ್ಟುವ ಕನಸನ್ನು ಹೊಂದಿದೆ. ಭಗವಂತನ ನಿಟ್ಟುಸಿರು ಈ ಕಥೆಗೆ ಮಂಗಳ ಹಾಡುತ್ತದೆ.

ಏಳನೇ ಅಂಕಣ: ೨೦೦೯ ರಲ್ಲಿ ಚಿತ್ತಾರಕ್ಕೆ ಬರೆದುಕೊಟ್ಟ ಕಥೆ. ಗುರು ಪ್ರಕಾರ ಇದು ಸತ್ಯ ಕಥೆ. ಆದರೆ ಅವರ ಅಭಿಮಾನಿಗಳಿಗೆ ಅದು ನಂಬಲಸದಳ. ಶಿಷ್ಯನ ವೃದ್ಧಿಯನ್ನು ಕಂಡು ಸಹಿಸದ ಗುರು ಅವನನ್ನು ಕೂಪಕ್ಕೆ ತಳ್ಳುವ ಕಥೆ. ಫೋನ್ ಮಾಡಿ ಕಾಡುವ ಶಿಷ್ಯ. ಶಿಷ್ಯ ವೃತ್ತಿ ಮಾಡಿಕೊಂಡಿರುತ್ತೇನೆ ಎಂಬ ಭರವಸೆ ಇತ್ತ ಮೇಲೆಯೇ ಶಿಷ್ಯನಾಗಿ ಸ್ವೀಕರಿಸುವ ಗುರು, ಅವನ ಏಳಿಗೆ ಕಂಡು ಕೊಂಚ ಕರುಬುತ್ತಾನೆ. ಕೊನೆಯಲ್ಲಿ ಅವನನ್ನು ಕಳಿಸಬೇಕಾದಲ್ಲಿಗೆ ಕಳಿಸಿ ನೆಮ್ಮದಿಯ ಉಸಿರು ಬಿಡುತ್ತಾನೆ. ಇದಕ್ಕಿಂತ ಹೆಚ್ಚು ಹೇಳಿದಲ್ಲಿ ನಿಮ್ಮ ಆಸಕ್ತಿ ಕರಗುತ್ತದೆ. ನೀವೇ ಕಥೆ ಓದಿ.

ಎಂಟನೆ ಅಂಕಣ: ಹೋಟೆಲ್ಲಿನ ಪುರಾಣ. ಲಾಬಿಯಲ್ಲಿ ಕುಳಿತು ಇತರ ಟೇಬಲ್ಲಿನತ್ತ ಕಣ್ಣು ಹಾಯಿಸುತ್ತ ಗೆಳತಿಗಾಗಿ ಕಾಯುತ್ತ ಕೂರುವ ನಿರ್ದೇಶಕರು. ಇನ್ನೊಂದು ಜೋಡಿಯನ್ನು ನೋಡಿ ಮರುಗುವವರು. ಕೊನೆಯಲ್ಲಿ ಒಂದು ಊಹಿಸಬಹುದಾದ ತಿರುವು. ಓಡಿಸಿಕೊಂಡು ಹೋಗುವ ಕಥೆ.

ಒಂಬತ್ತನೇ ಅಂಕಣ: ೨೦೦೯ರಲ್ಲಿ ಪ್ರಜಾವಾಣಿಯಲ್ಲಿ ಪ್ರಕಟಿಸಿದ ಕಥೆ. ನಿಜವಾದ ಜ್ಞಾನಾರ್ಜನೆ ಹೇಗೆ ಮಾಡಬೇಕು ಎಂದು ಕಲಿಸುವ ಕಥೆ. ಮಲ್ಲೇಪುರಂ ಜೀ. ವೆಂಕಟೇಶ್ ರವರು ತಮಗೆ ಕಲಿಸಿ ಕೊಟ್ಟ ಪಾಠವನ್ನು ಇಲ್ಲಿ ಬೇರೆಯದೇ ರೀತಿಯಲ್ಲಿ ಸ್ವಾಮಿ ಹಾಗು ಮಾನಸಿಯ ಸಂಭಾಷಣೆಯಲ್ಲಿ ಕೊಟ್ಟಿದ್ದಾರೆ. ಸ್ವಾಮಿಗಳಿಗೆ ಆಲುಗಡ್ಡೆ ಕೊಂಡು ಹೋಗುವುದು ಭೈರಪ್ಪ ನವರ 'ನಿರಾಕರಣ' ದಲ್ಲಿ ಓದಿದ್ದ ಜ್ಞಾಪಕ. ಗುರು ಕೂಡ ಅದರಿಂದಲೇ ಸ್ಪೂರ್ತಿ ಹೊಂದಿರಬಹುದು.

ಹತ್ತನೇ ಅಂಕಣ: ೨೦೦೫ ರಲ್ಲಿ ರೂಪತಾರಕ್ಕೆ ಬರೆದ ಅಂಕಣ. ಕನ್ನಡದಲ್ಲಿ ಕಥೆ ಇಲ್ಲ ಎಂದು ಸುಮಾರು ವರ್ಷಗಳ ಹಿಂದೆ ನಮ್ಮ ಎನ್. ಎಸ್. ರಾವ್ ರ ಸುಪುತ್ರ ಎನ್. ಓಂಪ್ರಕಾಶ್ ರಾವ್ ರವರು ಬಾಯಿ ಬಡಿದು ಕೊಳ್ಳುತ್ತಿದ್ದಾಗ ಬರೆದ ಕಥೆ. ರಾಮಾಯಣದಲ್ಲಿ ಹೇಳದಿದ್ದ ರಾಮನ ಕಲ್ಪಿತ ಕಥೆ. ರಾಮನು ಹೇಗೆ ಕಾಮನೆಗಳನ್ನು ನಿಗ್ರಹಿಸಿ, ಏಕ ಪತ್ನಿ ವ್ರತವನ್ನು ಆಚರಿಸುತ್ತಿದ್ದನೆಂದು ಸುಂದರವಾಗಿ ಚಿತ್ರಿಸುವ ಕಥೆ. ಕಥೆಯಲ್ಲಿ ಬರುವ ಶ್ಯಾಮಲೆಯ ಹಾಗು ಅನಂಗಪಾತ್ರ ಇಷ್ಟವಾಗುವುದು. ಜೈ ಶ್ರೀರಾಮ್.

ಹನ್ನೊಂದನೇ ಅಂಕಣ: ತಮ್ಮ ತಂಗಿಯ ಮದುವೆ ಪ್ರಕರಣವನ್ನು ಸವಿಸ್ತಾರವಾಗಿ ಎಲ್ಲರಿಗೂ ಹಿಡಿಸುವಂತೆ ಇಲ್ಲಿ ಗುರು ಕೊಟ್ಟಿದ್ದಾರೆ. ಉಗಾದಿಯ ದಿನ ಬರೆದ ಈ ಅಂಕಣ, ಉಗಾದಿಯ ಹಲವಾರು ಅರ್ಥಗಳನ್ನು ಮೆಲುಕು ಹಾಕುತ್ತದೆ. ಅಣ್ಣ ತಂಗಿ ಕಥೆ ಸಿನೆಮಾಗಳಲ್ಲಿ ತೋರಿಸುವಂತಲ್ಲದೆ ಸಹಜವಾಗಿ ಮೂಡಿಬಂದಿದೆ.

ಹನ್ನೆರಡನೆಯ ಅಂಕಣ: ತಮ್ಮ ಸ್ನೇಹಿತರ ಗರ್ವ ಎಂಬ ಪತ್ರಿಕೆಯ ಮೊದಲ ಪ್ರತಿಗೆ ಮಧ್ಯ ರಾತ್ರಿ ಕಳೆದು ಬರೆದ ಕಥೆ. ಪೂರ್ತಿ ಕಥೆಯನ್ನೋದಿದ ಮೇಲೆ ತಿಳಿಯುತ್ತದೆ ಇದೊಂದು ಸ್ವಗತ. ಎಲ್ಲರ ಮನದಲ್ಲಿಯೂ ಇಂತಹ ಸ್ವಗತಗಳು ಹಲವಿವೆ. ಈ ಸ್ವಗತದಿಂದಲೇ ಪತ್ರಿಕೆಯ ಓದುಗನನ್ನು ಸ್ವಾಗತಿಸುವ ಅಂಕಣ. ಸಂಭಾಷಣೆ ಓದಿಯೇ ಆನಂದಿಸ ತಕ್ಕದ್ದು.

ಹದಿಮೂರನೇ ಅಂಕಣ: ೨೦೦೫ರಲ್ಲಿ ರೂಪತಾರಕ್ಕೆ ಬರೆದುದು. ಒಬ್ಬ ಹತಾಶ ಪ್ರೇಕ್ಷಕನ ಸಾಕ್ಷಾತ್ ದರ್ಶನ ಮಾಡಿಸುತ್ತಾರೆ. ಹೊಣೆಯರಿಯದ ನಿರ್ದೇಶಕರ ಅಸಡ್ಡೆಗೆ ಈ ಕಥೆ ಕನ್ನಡಿ ಹಿಡಿಯುತ್ತದೆ. ಸಿನಿಮ ಹೇಗೆ ಮಾಡಬೇಕೆಂಬ ಜಿಜ್ಞಾಸೆಯನ್ನು ಇಲ್ಲಿ ಕಾಣಬಹುದು. ಹಲವಾರು ಉದಾಹರಣೆಗಳ ಸಹಿತ. ಅಂಕಣದ ಮೊದಲಿಗೆ ಹಾಗು ಕೊನೆಯಲ್ಲಿ ಬರುವ ಎರಡೂ ಪ್ರಸಂಗಗಳು ನಗಿಸುತ್ತವೆ. ಹೆಚ್ಚೇಕೆ? ನೀವೇ ಓದಿ ನೋಡಿ.

ಹದಿನಾಲ್ಕನೇ ಅಂಕಣ: ೨೦೦೬ರಲ್ಲಿ ರೂಪತಾರಕ್ಕೆ ಬರೆದುದು. ಈ ಅಂಕಣವನ್ನು ಎರಡು ಪ್ರಸಂಗಗಳಲ್ಲಿ ಪ್ರೇಮವನ್ನು ಬಣ್ಣಿಸಲು ವ್ಯಯಿಸಿದ್ದಾರೆ. ಒಂದು ಓರ್ವ ಹಿರಿಯ ಕಲಾವಿದೆಯದ್ದು. ನನಗನಿಸಿದ ಮಟ್ಟಿಗೆ ಅದು 'ಭಾರ್ಗವಿ ನಾರಾಯಣ್', ರಂಗ ಕರ್ಮಿ ನಾಣಿಯವರ ಪತ್ನಿ. ಇನ್ನೊಂದು ತಮ್ಮದೇ ಸ್ವಂತ ಅನುಭವ. ಎರಡೂ ಮೊದಲ ಪ್ರೇಮ. ಎರಡರ ಹೋಲಿಕೆಯನ್ನೂ ಲೇಖಕರು ಮಾಡುತ್ತಾರೆ. ಎರಡೂ ದುಖಾಂತದಲ್ಲಿ ಕೊನೆಗೊಳ್ಳುತ್ತದೆ.

ಹದಿನೈದನೇ ಹಾಗು ಹದಿನಾರನೇ ಅಂಕಣ: ಮಠ ಚಿತ್ರಕ್ಕೆ ಮೀಸಲು. ಸೆನ್ಸಾರ್ ಸ್ಕ್ರಿಪ್ಟು ನೋಡಿ ಸಿನಿಮಾ ನೋಡದೆಯೇ ಕೆಂಗಣ್ಣಿಗೆ ಗುರಿಯಾದದ್ದು, ಸಿನಿಮಾ ನೋಡಿ ಆನಂದಿಸಿದ್ದು, ನಿರ್ದೇಶಕರು ಅದರ ಪೂರ್ವ ತಯಾರಿಗೆ ಎರಡು ಸೂಟ್ ಕೇಸು ಸಾಕ್ಷಿ ಪುರಾವೆಗಳನ್ನು ಹೊತ್ತು ಕೊಂಡು ಹೋದದ್ದು ಎಲ್ಲವು ನಗಿಸುತ್ತದೆ. ತನ್ನ ಸ್ವ ಸಾಮರ್ಥದ ಮೇಲೆ ನಂಬಿಕೆ ಇರುವ ನಿರ್ದೇಶಕನ ಧೈರ್ಯ, ನಿಮ್ಮನ್ನು ಎರಡೂವರೆ ಗಂಟೆ ಖುಷಿ ಪಡಿಸುತ್ತೇನೆ ಎನ್ನುವ ಅಚಲ ವಿಶ್ವಾಸ, ಗುರು ಅವರ ಬಗ್ಗೆ ನಮ್ಮಲ್ಲಿ ಗೌರವ ನೂರ್ಮಡಿಸುವಂತೆ ಮಾಡುತ್ತದೆ.

ಹದಿನೇಳನೆ ಅಂಕಣ: ಸಿನಿಮಲೋಕದ ಹಲವು ಸತ್ಯಗಳನ್ನು ಹೊರಗೆಡಹುತ್ತಾ ಅದರ ವಿವಿಧ ರಂಗುಗಳ ಬಣ್ಣನೆ ಮಾಡುತ್ತಾರೆ ಗುರು. ಬ್ಲಾಕ್ ಎಂಬ ಹಿಂದಿ ಸಿನಿಮಾ ಬಿಡುಗಡೆ ಆದ ಸಮಯ. ಅವರು ಅ ಚಿತ್ರದ ಬಗ್ಗೆ ಬಹಳ ಖುಷಿಯಲ್ಲಿದ್ದಾರೆ. ನನಗೆ ತಿಳಿದ ಮಟ್ಟಿಗೆ ಅದು ಹೆಲ್ಲೇನ್ ಕೆಲ್ಲರ್ ರ ಕಥೆ. ನಾನು ಆ ಚಿತ್ರ ನೋಡಿಲ್ಲ. ಅದರ ಬಗ್ಗೆ ಇಲ್ಲಿ ಬರೆಯಲಿಚ್ಚಿಸುವುದೂ ಇಲ್ಲ.

ಹದಿನೆಂಟನೆ ಅಂಕಣ: ಇದು ಒಂದು ಸಂದರ್ಶನ. ಸಂಯುಕ್ತ ಕರ್ನಾಟಕದಲ್ಲಿ ಇದೇ(2010) ಜೂನ್ ನಲ್ಲಿ ಪ್ರಕಟವಾದುದು. ಇಲ್ಲಿ ಗುರು ತಮ್ಮ ಇಲ್ಲಿಯವರೆಗಿನ ಹಾದಿ, ಮುಂದಿನ ಗುರು ಎಲ್ಲವನ್ನು ಹೊರಗೆಡಹಿದ್ದಾರೆ. ಕನ್ನಡದಲ್ಲಿ ೨೦ ಸಿನಿಮಾ ಮಾಡುವ ಇರಾದೆ ಓದಿ ಬಹಳವೇ ಖುಷಿ ಆಯಿತು. ಇನ್ನೊಂದು ಕಡೆ ಬೇಜಾರೂ ಆಯಿತು. ಇನ್ನೂ ಹೆಚ್ಚು ಚಿತ್ರಗಳು ಅವರ ಬತ್ತಳಿಕೆಯಿಂದ ಬರಲಿ. ಅವರ ಸತತ ಅಧ್ಯಯನ, ೫೦೦೦ಕ್ಕೂ ಹೆಚ್ಚು ಚಿತ್ರ ವೀಕ್ಷಣೆಯ ಅನುಭವ, ಕನ್ನಡ ಚಿತ್ರಗಳ ಬಗೆಗೆ ಅವರಲ್ಲಿರುವ ಕಳಕಳಿ ಯಾರನ್ನಾದರೂ ಮೆಚ್ಚಿಸುವಂಥಹದ್ದೆ.ಚಿತ್ರರಂಗದ ಅವರ ಕೆಲ ಅನುಭವಗಳು, ಅವರ ಉಪೇಂದ್ರರ ನಡುವಿನ ಸಂಬಂಧ, ಎಲ್ಲದರ ಬಗ್ಗೆ ಮಾತನಾಡುತ್ತಾರೆ. ಕಡೆಗೆ ಆಸ್ಕರ್ ಪ್ರಶಸ್ತಿಗೂ ಕಣ್ಣು ಹಾಕಿದ್ದಾರೆ. ಅವರು ಇಚ್ಚಿಸುವ ಎಲ್ಲವೂ ಅವರಿಗೆ ದಕ್ಕಲಿ ಎಂದು ನಾವು ಹಾರೈಸುತ್ತೇವೆ. aಆದರೆ ಅವರು ಕನ್ನಡ ಚಿತ್ರಗಳನ್ನೇ ಯಾವಾಗಲು ಮಾಡಲಿ ಎಂಬುದು ನಮ್ಮ ಆಸೆಯಷ್ಟೇ.

ಗುರು ಅವರಲ್ಲಿ ಕಾಣಬಹುದಾದ ಇನ್ನೊಂದು ಪ್ರಮುಖ ಅಂಶವೇನೆಂದರೆ, ತನ್ನ ಸಾಮರ್ಥ್ಯದ ಬಗ್ಗೆ ಅಚಲ ವಿಶ್ವಾಸವಿರುವುದು. ಅವರ ಈ ಗುಣ ನಮಗೆ ದೇವುಡು ರನ್ನು ಭೈರಪ್ಪನವರನ್ನು ನೆನೆಯುವಂತೆ ಮಾಡುತ್ತದೆ. ಇವರುಗಳಂತೆಯೇ ಗುರು ರವರ ಕನ್ನಡ ಅಸ್ಖಲಿತವಾದುದು.

ಕಡೆಯದಾಗಿ ಯಾವುದೇ ಪುಸ್ತಕದ ಬಗ್ಗೆ ಎಷ್ಟೇ ವಿಮರ್ಶೆ ಬರೆದರೂ ಅದನ್ನು ಓದಿದಂತಾಗುವುದಿಲ್ಲ. ನಿಮ್ಮಲ್ಲಿ ನನ್ನ ಅರಿಕೆಯೇನೆಂದರೆ ಈ ಪುಸ್ತಕವನ್ನು ಕೊಂಡು ಓದಿ. ನೀವು ಖಂಡಿತ ಇಷ್ಟ ಪಡುತ್ತೀರ. ನಿಮಗೆ ಗುರುಪ್ರಸಾದರ ಬಗ್ಗೆ ಒಲವಿದ್ದಲ್ಲಿ ನೀವು ಖಂಡಿತ ಆ ಕೆಲಸವನ್ನು ಮಾಡುವಿರೆಂದು ನನಗೆ ತಿಳಿದಿದೆ. ಓದಿದ ಮೇಲೆ ಇಲ್ಲಿ ಬಂದು ಒಂದು ಕಾಮೆಂಟ್ ಬರೆಯಿರಿ. ಅವರಿಂದ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಪುಸ್ತಕಗಳೂ ಚಿತ್ರಗಳೂ ಬರಲಿ.

ಸರಿ ಮುಂದಿನ ಅಂಕಣದಲ್ಲಿ ಮತ್ತೆ ಭೇಟಿಯಾಗುತ್ತೇನೆ. ಬರ್ಲಾ?

ವಿಶೇಷ ಸೂಚನೆ: ಕೆಲವು ಕಡೆ ಉತ್ಪ್ರೇಕ್ಷೆ ಎನಿಸುವಂತೆ ಬರೆಯಲಾಗಿದೆ ಎಂದೆನಿಸಿದರೆ, ಅದು ಈ ಪುಸ್ತಕದ ಗುಣ. ಇದಕ್ಕೆ ನಾನು ಜವಾಬ್ದಾರನಲ್ಲ.

Monday, April 13, 2009

ಉಪೇಂದ್ರ ನಿರ್ದೇಶನದ ಹೊಸ ಚಿತ್ರ : ಲಂಡನ್ ಗೌಡ

ಉಪೇಂದ್ರ ಅವರು 'ತಮಸೋಮಾ ಜ್ಯೋತಿರ್ಗಮಯ' ಅನ್ನೋ ಚಿತ್ರ ನಿರ್ದೇಶಿಸುತ್ತಿದ್ದಾರೆ ಅಂತ ವರ್ಷದ ಹಿಂದೆ ಒಂದು ಸುದ್ದಿ ಬಂದಿತ್ತು. ಗಾಳಿಸುದ್ದಿಗಳು ಬಹು ಬೇಗ ಹರಡಿತ್ತು. ಒಮ್ಮೆ ಆ ಚಿತ್ರದಲ್ಲಿ ಉಪೇಂದ್ರ ದಂಪತಿಗಳು ಅಭಿನಯಿಸುತ್ತಾರೆ ಅಂತ ಇದ್ದರೆ, ಇನ್ನೊಮ್ಮೆ ಆ ಚಿತ್ರದ ನಾಯಕ ಶಿವರಾಜಕುಮಾರ್ ಅಂತ ಇತ್ತು.

ಇವೆಲ್ಲ ಸುದ್ದಿ ಆದಮೇಲೆ ಈಗ, ಒಂದು ವಾರದ ಹಿಂದೆ ತಾಜಾ ಸುದ್ದಿಯೊಂದು ಬಂದಿದೆ. ಅದೇನೆಂದರೆ, ಉಪೇಂದ್ರ ತಮ್ಮದೇ ನಿರ್ದೇಶನದಲ್ಲಿ ೧೦ ವರ್ಷಕ್ಕೂ ಮೇಲ್ಪಟ್ಟು ಒಂದು ಸಿನೆಮ ಮಾಡುತ್ತಿದ್ದರೆ. ಅದರ ಹೆಸರು ಲಂಡನ್ ಗೌಡ ಎಂದು. ನಾಯಕ ಅವರೇ, ನಾಯಕಿ ಕನ್ನಡದವರೇ ಆದ ಸ್ನೇಹ ಉಳ್ಳಾಲ್ ಎಂದು.

ಕೆಲವರು ಉಪೇಂದ್ರ ಈ ಚಿತ್ರ ನಿರ್ದೇಶನ ಮಾಡುವುದಿಲ್ಲ ಅಂದರೆ, ಇನ್ನು ಕೆಲವರು ಅವರು ಮಾಡುತ್ತಾರೆ ಅನ್ನುತ್ತಾರೆ. ಅದೇನೆಂದು ಕಾದು ನೋಡಬೇಕು. ಆದರೆ ಕಥೆ, ಚಿತ್ರಕಥೆ, ಉಪೇಂದ್ರರದ್ದೇ ಆಗಿರುತ್ತದೆ.

ಅವರು ಈ ಸಿನಿಮಾಕ್ಕೆ 'ಲಂಡನ್ ಗೌಡ' ಎಂದೆ ಏಕೆ ಹೆಸರಿಟ್ಟರು? ದುಬೈ ಬಾಬು ತರಹದ್ದೇ ಒಂದು ಹೆಸರು ಇಡಲು ಹೋಗಿ ಹೀಗಿತ್ತಿದ್ದರೆ ಎಂದು ಕೆಲವರು ಹೇಳುತ್ತಾರೆ. ನನಗೇನೋ ಹಾಗನ್ನಿಸುವುದಿಲ್ಲ. ಉಪೇಂದ್ರ ಯಾವಾಗಲು ತಮ್ಮ ಕಥೆಗೆ ವಿಶಿಷ್ಟ ಹೆಸರಿಡುತ್ತಾರೆ ಎಂದು ನನ್ನ ನಂಬಿಕೆ. ಕೆಲವರಿಗೆ ಅದು ವಿಚಿತ್ರವೂ ಆಗಬಹುದು, ಹೇಸಿಗೆಯೂ ಆಗಬಹುದು. ಏನೇ ಇರಲಿ. ನನ್ನ ಮಟ್ಟಿಗೆ ಆ ಹೆಸರಿಡಲು ಒಂದು ವಿಚಿತ್ರ ಕಾರಣವೆಂದರೆ

'ಲಂಡನ್ ಗೌಡ' ಈ ಹೆಸರಲ್ಲಿ ಮೊದಲ ಅಕ್ಷರಗಳ ವ್ಯಂಜನ ಭಾಗವನ್ನು ಪರಸ್ಪರ ಬದಲಾಯಿಸಿ. ಸ್ವರವು ಹಾಗೆಯೇ ಇರಲಿ. ಆಗ ನಿಮಗೆ ಉಪೇಂದ್ರರ ರಸಿಕತನ ತಿಳಿಯುವುದು. ಅದನ್ನು ನಾನು ಇಲ್ಲಿ ಬರೆಯುವುದಿಲ್ಲ. ಬರೆದರೆ ಕೆಲವರಿಗೆ ಮುಜುಗರವಾಗಬಹುದು.

ಉದಾಹರಣೆಗೆ : 'ದುಬೈ ಬಾಬು'ವನ್ನು ಇದೇ ರೀತಿ ಬದಲಾಯಿಸಿದರೆ, 'ಬುಬೈ ದಾಬು' ಎಂದಾಗುತ್ತಾರೆ. ಹೀಗೆ ಲಂಡನ್ ಗೌಡಕ್ಕೂ ಮಾಡಿ ನೋಡಿ.

=) ಮುಂದಿನ ಅಂಕಣದಲ್ಲಿ ಸಿಗೋಣ.

Tuesday, October 28, 2008

ಸಂಗಮ - ವಿಮರ್ಶೆ

ಈ ಅಂಕಣ ಶುಕ್ರವಾರಾನೆ ಬರೀಬೇಕಂತ ಇದ್ದೆ. ಕಾರಣಾಂತರಗಳಿಂದ ಆಗ್ಲಿಲ್ಲ.

ಸಿನಿಮಾ ಬಗ್ಗೆ ಹೇಳಬೇಕಾದದ್ದು ಏನು ಇಲ್ಲ. ಇನ್ನೊಂದು ತಿಪ್ಪೆ ಸಿನಿಮಾ. ನಾನು ನೋಡಿರೋ ತಿಪ್ಪೆ ಸಿನಿಮಾಗಳಿಗೆ ಲೆಖ್ಖ ನೇ ಇಲ್ಲ ಬಿಡಿ. ಒಂದ್ ನಯಾ ಪೈಸ ಕಥೆ ಇಲ್ಲ. ನಾಯಕ, ನಾಯಕಿಗಳಿಗಂತೂ ಮೊದಲೇ ಕೆಲಸ ಇಲ್ಲ. ಐದು ನಿಮಿಷದಲ್ಲಿ ಮುಗಿಸಬಹುದಾದ ಕಥೇನ ೨:೩೦ ಗಂಟೆ ಕುಯ್ಯ್ದಿದ್ದಾರೆ.

ಆ ಕಥೆ ಅನ್ನೋ ಕಥೆ ನ ಹೇಳ್ತೀನಿ ಕೇಳಿ. ನಾಯಕ ಗಣೇಶ್ (ಸಿನೆಮಾದಲ್ಲಿ 'ಬಾಲು') ರಿಯಲ್ ಎಸ್ಟೇಟ್ ಉದ್ಯಮಿ. ಆದರೆ ಅವನು ಆ ಕೆಲಸ ಮಾಡೋಕಿಂತ ಬ್ರೋಕರ್ ಕೆಲಸಾನೇ ಜಾಸ್ತಿ. ಒಂದ್ ಹುಡುಗಿಗೆ ಗಂಡು ಕೂಡಿದರೆ, ಆ ಗಂಡಿನ ಪೂರ್ವಾಪರ ವಿಚಾರ್ಸ್ಕೊಂಡ್ ಬರೋದು, ಆ ಹುಡುಗಿಗೆ ಅವಳಿಗಿಷ್ಟ ಇರೋ ಗಂಡನ್ನು ಹುಡುಕೋದು, ಇತ್ಯಾದಿ ಕೆಲಸಗಳು.

ನಾಯಕಿ ವೇದಿಕಾ (ಸಿನೆಮಾದಲ್ಲಿ ಮಹಾಲಕ್ಷ್ಮಿ ಅಲಿಯಾಸ್ ಲಚ್ಚಿ ) , ತನ್ನ ಗಂಡ ಸಾಫ್ಟ್ವೇರ್ ಇಂಜಿನಿಯರೇ ಆಗಿರಬೇಕು, ವಿದೇಶದಲ್ಲೇ ಸೆಟ್ಟಲ್ ಆಗಿರಬೇಕು, ಕೈತುಂಬ ಸಂಬಳ ತರಬೇಕು ಅಂತ ಬಹಳ ಯೋಜನೆಗಳನ್ನ ಹಾಕಿಕೊಂಡಿರುವ ಹುಡುಗಿ. ಅದಕ್ಕೋಸ್ಕರ ಏನೇನೋ ವ್ರತಗಳನ್ನ ಮಾಡೋಳು. ಈ ಬಾಲು ಅವಳ ಸಹಾಯಕ್ಕೆ ಬರ್ತಾನಾದ್ರು ಅವನಿಗೆ ಅವಳಮೆಲೆಯಾಗಲಿ, ಅವಳಿಗೆ ಅವನ ಮೇಲಾಗಲಿ ಪ್ರೇಮಾಂಕುರವಾಗುವುದಿಲ್ಲ. ಅವಳ ವ್ರತಕ್ಕೆ ಸಹಾಯ ಮಾಡುವ ಸಮಯದಲ್ಲಿ ಅವಳಿಗೆ ಅವನ ಮೇಲೆ ಪ್ರೀತಿಯುಂಟಾಗಿ, ಇಷ್ಟರಲ್ಲೇ ಅವನು ಅವಳಿಗೆ ಜರ್ಮನಿ ಗಂಡು ನೋಡಿ, ಅವಳು ಅದನ್ನು ಎಲ್ಲರೆದುರು ನಿರಾಕರಿಸುವುದಿಲ್ಲ. ಆದರೂ ಅವಳು ಬಾಲುವನ್ನು ಪ್ರೀತಿಸುವುದನ್ನು ನಿಲ್ಲಿಸುವುದಿಲ್ಲ. ಅವಳ ರೀತಿಯೇ ಒಂದು ಅತಿರೇಕಕ್ಕೆ ಎಡೆಮಾಡಿಕೊಡುತ್ತದೆ. ಇವನು ಪಕ್ಕಾ ಜೆಂಟಲ್ ಮ್ಯಾನ್ ರೀತಿಯಲ್ಲಿ ಆಡ್ತಾನೆ. ಆದರೂ ಕೋಪ ಮಾಡ್ಕೋತಾನೆ. ಈ ಎಲ್ಲ ಅಸಂಬದ್ದಗಳ ನಡುವೆ ಆ ಮದುವೆ ದಿನ ಬಂದೇಬಿಡುತ್ತದೆ. ಅಲ್ಲಿ ನಡೆಯುವ ನಾಟಕ ಮಾತ್ರ ತೋರಿಸಿದ್ದಾರೆ ಸರಿ ಹೋಗುತ್ತಿತ್ತು.

ಈ ನಡುವೆ ಕೋಮಲ್ ನಗಿಸುವಲ್ಲಿ ಬಹಳವಾಗಿ ಎಡವಿದ್ದಾರೆ. ಆದರೂ ಕೆಲವು ದೃಶ್ಯಗಳು ನಗಿಸುತ್ತವೆ. ಸಾಧು ಕೋಕಿಲ ಪರವಾಗಿಲ್ಲ. ಮೈನ ಚಂದ್ರು ಖೋಜ ಪಾತ್ರದಲ್ಲಿ ನ್ಯಾಯ ಸಲ್ಲಿಸಿದ್ದಾರಾದರೂ ಅವರ ಪಾತ್ರವೇ ಬೇಡವಾಗಿತ್ತು ಎಂದರೂ ಅತಿಶಯವಲ್ಲ.

ಸಂಗೀತಕ್ಕೆ ಬಂದರೆ ತೆಲುಗಿನ ದೇವಿಶ್ರೀಪ್ರಸಾದರ ಹಾಡುಗಳಲ್ಲಿ ಎರಡು ಕೇಳಬಹುದು. ಆದರು ಕನ್ನಡದವರಿಗೆ ಆದ್ಯತೆ ಕೊಟ್ಟಿದ್ದಾರೆ ಅವು ಇನ್ನೂ ಸಹನೀಯವಾಗುತ್ತಿತ್ತೋ ಏನೋ? ಅವರೇ ಹಾಡಿರುವ ಹಾಡಲ್ಲಿ ಕೆಲವು ಉಚ್ಚಾರ ತೆಲುಗಿನದು ಎಂದು ಗೊತ್ತಾಗುತದೆ.

ನಾಯಕಿ ವೇದಿಕಾರವರಿಂದ ಏನನ್ನು ಅಪೇಕ್ಷಿಸಲು ಸಾಧ್ಯವಿಲ್ಲ. ಇಲ್ಲಿ ನಿರ್ದೇಶಕರೇ ಎಡವಿದ್ದಾರೆ. ಅವರ ಬೇರೆ ಸಿನಿಮಾ ಬಂದರೆ ಅಲ್ಲಿಂದ ಅವರ ಅಭಿನಯವನ್ನು ಅಳೆಯಬಹುದು. ಒಟ್ಟಾರೆ ಹೇಳಬೇಕೆಂದರೆ ಹಾಡಿನಲ್ಲಿ ಕುಣಿಯುವುದಕ್ಕೆ ಮಾತ್ರ ಇಲ್ಲಿ ಅವರನ್ನು ಬಳಸಲಾಗಿದೆ.

ಗಣೇಶ್ ಬಗ್ಗೆ ಏನ್ ಹೇಳಿದರೂ ವಾಕರಿಕೆ ಬರುತ್ತದೆ. ಇದು ಅವರ ೪ನೇ ನಿಶ್ಚಿತಾರ್ತೋತ್ತರ ಸಿನಿಮಾ. (post engagement syndrome cinema). ಅಂದರೆ, ನಿಶ್ಚಿತಾರ್ಥ ಆದಮೇಲೆ ಹುಡುಗಿಯ ಮನ ಸೆಳೆಯುವ ಚಿತ್ರ. (ಮುಂಗಾರು ಮಳೆ, ಅರಮನೆ, ಬೊಂಬಾಟ್, ಮುಂಚಿನ ಮೂರು ಚಿತ್ರಗಳು, ಇದೇ ಕಾರಣಕ್ಕೆ ಈ ಮೇಲಿನ ಮೂರು ಚಿತ್ರಗಳು ನನಗೆ ಇಷ್ಟ ಆಗಲಿಲ್ಲ) ಇವರು ಹೀಗೆ ಮಾಡ್ತಾ ಇದ್ದರೆ ಗೋಲ್ಡನ್ ಸ್ಟಾರ್ ಹೋಗಿ ಗುಲ್ದು ಸ್ಟಾರ್ ಆಗೋದ್ರಲ್ಲಿ ಏನು ಅನುಮಾನಾನೆ ಇಲ್ಲ. ಚಿತ್ರಗಳನ್ನು ಎದ್ವಾತದ್ವ ಸೆಲೆಕ್ಟ್ ಮಾಡ್ತಾ ಇದ್ದಾರೆ. ಹುಶಾರಾಗಿರೋದು ಒಳ್ಳೇದು ಅಂತ ಒಂದು ಸಲಹೆ ಕೊಡಬಹುದು ಏನಂತೀರಾ?

ಚಿತ್ರ ನೀವು ನೋಡಿಲ್ಲದಿದ್ದರೆ ನೋಡದಿರುವುದೇ ಲೇಸು. ನೋಡಿದ್ದರೆ ನಿಮ್ಮ ಅನಿಸಿಕೆ ಬರೆಯಿರಿ.

Sunday, October 05, 2008

ವಂಶಿ - ವಿಮರ್ಶೆ

ಈವತ್ತ್ ಮಧ್ಯಾಹ್ನ ವಂಶಿ ನೋಡ್ಕೊಂಡ್ ಬಂದ್ವಿ ನಾವ್ ಸಿಸ್ಯಂದ್ರು. ಚೆನ್ನಾಗಿದೆ. ಪುನೀತ್ ರಾಜಕುಮಾರ್ ರ ಬೇರೆ ಚಿತ್ರಕ್ಕೆ ಹೋಲಿಸಿದರೆ ಈ ಚಿತ್ರದಲ್ಲಿ ಸ್ವಲ್ಪ ಹೊಡೆದಾಟ ಬಡಿದಾಟ ಹೆಚ್ಚು ಅನ್ನಿಸಬಹುದು ಆದರೆ ನೀವು ಇಷ್ಟ ಪದೊದ್ರಲ್ಲಿ ಸಂಶಯ ನೇ ಇಲ್ಲ.

ಕಥೆ ಮಾಮೂಲಿ. ಕೋಪಿಷ್ಠ ಮಗ. ಸಾಧ್ವಿ ತಾಯಿ, ಕನಸಿನ ಪೋಲಿಸ್ ಕೆಲಸ, ರೌಡಿಗಳು, ಲಾಂಗು, ಮಚ್ಚು, ಹೊಡೆದಾಟ, ಬಡಿದಾಟ. ಕಥೆಯ ಬಗ್ಗೆ ತೆರೆಯ ಮೇಲೆ ನೋಡಿ ಆನಂದಿಸಿ. ಪುನೀತ್ ಚಿತ್ರಗಳಲ್ಲಿ ಹೆಚ್ಚಾಗಿರದ ಲಾಂಗು ಮಚ್ಚು ಇಲ್ಲಿ ಸ್ವಲ್ಪ ತೋರಿಸಲಾಗಿದೆ. ಚಕ್ರೇಶ್ವರಿ ಕಂಬ್ಯ್ನೆಸ್ ಲಾಂಛನದಲ್ಲಿ ತಯಾರಾದ ಈ ಚಿತ್ರದ ನಿರ್ದೇಶಕರು ಖುಷಿ, ಮಿಲನ ಖ್ಯಾತಿಯ ಪ್ರಕಾಶ್ (ಪುನೀತ್ ಕಸಿನ್). ಅವರ ಚಿತ್ರಗಳಲ್ಲಿರುವಂತೆ ಮಸಾಲೆ ಸಾಕಷ್ಟಿದೆ. ಒಂದು ಲೋಪವೇನೆಂದರೆ ಅವರ ಎಲ್ಲ ಚಿತ್ರಗಳಲ್ಲಿರುವಂತೆ ಇಲ್ಲಿ ಒಂದು ಕ್ಯಾಬರೆ ಅಥವಾ ಪುಬ್ಬಲ್ಲೋ ಡಿಸ್ಕೊಥೆಕ್ಕಲ್ಲೋ ಒಂದು ಹಾಡು ಇದ್ದೆ ಇರುತ್ತದೆ. ಈ ಚಿತ್ರದಲ್ಲಿ ಇಲ್ಲ. ಕಾರಣ ಬಹುಷಃ ಇದು ರಾಜಕುಮಾರ್ ಸಂಸ್ಥೆಯ ಚಿತ್ರ ಅಂತ ಇರಬಹುದು.

ಪುನೀತ್, ಪ್ರಕಾಶ್ ಇಬ್ಬರೂ ಒಟ್ಟಿಗೆ ಕೆಲಸ ಮಾಡ್ತಾ ಇರೋದ್ರಲ್ಲಿ ಇದು ಎರಡನೇ ಚಿತ್ರ. ಮೊದಲ ಚಿತ್ರ ಮಿಲನ, ಒಳ್ಳೆ ಕಮಾಯಿ ಮಾಡ್ತು. ಈ ಚಿತ್ರವು ಶತದಿನೋತ್ಸವ ಆಚರಿಸೋದ್ರಲ್ಲಿ ಯಾವ ಅನುಮಾನಾನೂ ಇಲ್ಲ ಅನೋದಕ್ಕೆ ಚಿತ್ರಮಂದಿರದ ಟಿಕೆಟ್ಗಳು ಖಾಲಿಯಾಗಿ ಬ್ಲಾಕ್ ಕೂಡ ಸಿಗದಿರುವುದು ಸಾಕ್ಷಿ.

ಅಭಿನಯದ ಮಟ್ಟಿಗೆ ಹೇಳುವದಾದರೆ ಪುನೀತ್ ಎಂದಿನಂತೆ ಮಿಂಚಿದ್ದಾರೆ. ಕೋಪ ಎಲ್ಲರ ಮೇಲೂ ಹರಿದು ಬರುತ್ತದೆ. ಅವರ ತಾಯಿಯೂ ಹೊರತಲ್ಲ. ನಟನೆಯಲ್ಲಿ ಮಾಗುತ್ತಿದ್ದಾರೆ. ಅವರ ಮ್ಯಾನರಿಸಂಗಳು ಈ ಚಿತ್ರದಲ್ಲೂ ಕಾಣಸಿಗುತ್ತವೆ. ಕಟ್ಟಾ ಪೋಲಿಸ್ ಅಧಿಕಾರಿಯ ಖದರ್ರು, ನ್ಯಾಯ ನೀತಿಯ ಮೇಲೆ ತನಗಿರುವ ಗುರವ ಸೂಚಿಸುವಲ್ಲಿ ಕೂಡ ಮಿಂಚಿದ್ದಾರೆ. ಥಿಯೇಟರಲ್ಲಿ ನಾಯಕಿಯ ಹೆಗಲ ಮೇಲೆ ಕೈ ಹಾಕುವ ದೃಶ್ಯ ನಗೆ ಉಕ್ಕಿಸುತ್ತದೆ. ಸಿನೆಮಾದಲ್ಲಿ ಹೊಡೆದಾಟ ಹೆಚ್ಚಿದ್ದರೆ ಅದು ನಿರ್ದೇಶಕರ ಪ್ರಭಾವವೇ ಹೊರತು ಇನ್ನ್ಯಾವುದೂ ಅಲ್ಲ.

ನಾಯಕಿ ನಿಖಿತಾ ಭರವಸೆ ಮೂಡಿಸುತ್ತಾರೆ. ಚಿತ್ರದುದ್ದಕ್ಕೂ ಲವಲವಿಕೆಯಿಂದ ಪುಟಿಯುತ್ತ, ಹೊಡೆದಾಟದ ದೃಶ್ಯಕ್ಕೆ ಒಂದು ಕಡಿವಾಣದಂತೆ ಕಾಣುತ್ತಾರೆ. ಪಕ್ಕಾ ರಾಜಕುಮಾರ್ ಫಿಲ್ಮಿನ ಹೀರೋಯಿನ್ ಥರ. ಡಾನ್ಸ್ ಅಲ್ಲಿ ಪುನೀತ್ ಜೊತೆ ಮಿಂಚಿದ್ದಾರೆ. ಈ ಮುನ್ನ ಅವರನ್ನು ನೀ ಟಾಟಾ ನಾ ಬಿರ್ಲಾ ಚಿತ್ರದಲ್ಲಿ ನೋಡಿದ ನೆನಪು. ಅಲ್ಲಿ ಹೀಗೆ ಇತ್ತು ಅವರ ನಟನೆ. ಮುಂದೆ ಒಳ್ಳೆ ನಟಿಯಾಗಬಹುದೋ ಏನೋ ಗೊತ್ತಿಲ್ಲ. ಕಾದು ನೋಡೋಣ.

ಲಕ್ಷ್ಮಿಯ ಮಟ್ಟಿಗೆ ಏನು ಹೇಳುವಂತಿಲ್ಲ. ಮಾಗಿದ ಅಭಿನಯ. ಪಕ್ಕಾ ಅಮ್ಮನ ಪಾತ್ರ. ಮಗನನ್ನು ತಂದೆಯ ಸಹಾಯವಿಲ್ಲದೆ ಬೆಳೆಸುವ ಪಾತ್ರ. ಮಗ ಗಲಾಟೆಗೆ ಹೋದ ಏನು ಮರುಗುವ ಪಾತ್ರ. ಚೆನ್ನಾಗಿ ಅಭಿನಯಿಸಿದ್ದಾರೆ.

ಕಾಮಿಡಿ ಗೆ ಕೋಮಲ್ ಇದ್ದಾರೆ. maಕ್ಕಳನ್ನು ಕಿಡ್ನಾಪ್ ಮಾಡುತ್ತಾ, ರೌಡಿ ಹೆಸರು ಹೇಳಿಕೊಂಡು ರೋಲ್ ಕಾಲ್ ಮಾಡೋ ಪಾತ್ರ. ಖಳನಾಯಕರ ಪಾತ್ರದಲ್ಲಿ ಅವಿನಾಶ್, ಸೈನೈಡ್ ಕಾಳೇ, ಅಭಿನಯ ಚೆನ್ನಾಗಿದೆ. ಮಿಕ್ಕ ಪೋಷಕ ಪಾತ್ರಗಳು ತಮ್ಮ ಪಾತ್ರಕ್ಕೆ ಎಷ್ಟು ಬೇಕೋ ಅಷ್ಟು ನ್ಯಾಯ ಒದಗಿಸಿವೆ.

ಆರ್. ಪಿ. ಪಟ್ನಾಯಕ್ ಹಾಡುಗಳಲ್ಲಿ ಎರಡು ಗುನುಗುನಿಸಲು ಅರ್ಹ. ಅವೇ "ಜೊತೆ ಜೊತೆಯಲಿ" ಹಾಗು "ಭುವನಂ ಗಗನಂ". ಮಿಕ್ಕಾಗಿ ಅಮಲೂ ಅಮಲೂ, ಮಾಯಗಾತಿ ನಿಂಗವ್ವ, ಸೋನು ನಿಗಮ್ ರ ಒಂದು ಹಾಡು ಕೆಲಳದ್ದಿ ಕೇಳಲು ಅಡ್ಡಿ ಇಲ್ಲ.

ಒಟ್ಟಿನಲ್ಲಿ ಹೇಳಬೇಕೆಂದರೆ, ಚಿತ್ರ ಒಮ್ಮೆ ಹೋಗಿ ಆರಾಮಾಗಿ ನೋಡಬಹುದು. ರೇಟಿಂಗ್ ಕೇಳಿದರೆ ಐದರಲ್ಲಿ ಮೂರು.

Sunday, September 21, 2008

ಆಕಸ್ಮಿಕ... ಅಪರಾಧಿ... ಪರಿಣಾಮ...

ಈ ಅಂಕಣದಲ್ಲಿ ನಾನು ಇತ್ತೀಚೆಗಷ್ಟೇ ಓದಿದ ಕಾದಂಬರಿ ಹಾಗು ಅದರ ಸಿನಿಮಾ ರೂಪದ ವಿಶ್ಲೇಷಣೆ ಬರೀತೀನಿ.

ನಾನು ಈ ಮೂರು ಕಾದಂಬರಿಗಳನ್ನ ಓದಿ ಸುಮಾರು ಮೂರು ತಿಂಗಳಾಯಿತು. ಈ ಮೂರು ಕಾದಂಬರಿಗಳ ಮೇಲೆ ರಚಿತವಾದ ಆಕಸ್ಮಿಕ ಚಿತ್ರ ನೋಡಬೇಕನ್ನ್ಸ್ತು. ನನ್ನ ಗೆಳೆಯನ ಬಳಿ ಇದ್ದ ವೀಸಿಡಿ ತೊಗೊಂಡು ಮೊನ್ನೆ ಭಾನುವಾರ ನೋಡಿದೆ. ಎರಡರಲ್ಲೂ ಬಹಳ ವ್ಯತ್ಯಾಸ ಇದ್ದರೂ ಎರಡೂ ಚೆನ್ನಾಗಿವೆ. ಎರಡರ ಕಾಲ ವ್ಯತ್ಯಾಸವಿದೆ.

ಮೂರು ಕಾದಂಬರಿಗಳ ಕಾಲ ೧೯೫೭. ಆಕಸ್ಮಿಕ ಮೇ ೧೯೫೭, ಅಪರಾಧಿ ಅಕ್ಟೋಬರ್ ೧೯೫೭ ಹಾಗು ಪರಿಣಾಮ ಫೆಬ್ರವರಿ ೧೯೫೮ ಕ್ಕೆ ಬಿಡುಗಡೆಗೊಂಡವು. ಮೂರು ಕಾದಂಬರಿಗಳ ಮೂಲಕ .ರಾ.ಸು ರವರು ಸ್ವಾತಂತ್ರೋತ್ತರ ಭಾರತದ ಯುವಕರ ಅಧಃಪತನದ ಚಿತ್ರಣ ಮಾಡಿದ್ದಾರೆ. ಸಿನಿಮಾ ೧೯೯೩ರಲ್ಲಿ ಬಿಡುಗಡೆಯಾಯಿತು .

ಮೂಲ ಕಥೆಗೆ ಬಂದರೆ, ಕಥೆ ಶುರುವಾಗೋದು ರೈಲು ಪ್ರಯಾಣದಲ್ಲಿ. ಸಿನೆಮಾದಲ್ಲಿ ಕಥೆ ಕೊನೆಗೊಳ್ಳುವುದೂ ರೈಲು ನಿಲ್ದಾಣದಲ್ಲಿಯೇ ಆದರೂ ಮೂಲ ಕಾದಂಬರಿಯಲ್ಲಿ ಹಾಗಲ್ಲ. ಕಾದಂಬರಿಗೂ ಸಿನೆಮಾಗೂ ಮುಖ್ಯವಾಗಿ ನಾಯಕನ ಸ್ವಭಾವದಲ್ಲಿ ಮಹತ್ತರ ಬದಲಾವಣೆ ಕಾಣಬಹುದು.

ಕಾದಂಬರಿಯಲ್ಲಿ ನಾಯಕ ಮೂರ್ತಿ ಹೆಣ್ಣಿಗ. ಸಿಕ್ಕ ಸಿಕ್ಕ ಹೆಣ್ಣುಮಕ್ಕಳನ್ನು ಕಾಮುಕ ದೃಷ್ಟಿಯಿಂದ ನೋಡುತ್ತಾ ಆ ಹೆಣ್ಣು ತನಗೆ ಒಲಿಯುತ್ತಾಳೋ ಇಲ್ಲವೋ ಎಂದು ಕನಸು ಕಾಣುವಾತ. ಅವನಿಗೆ ಕಾಲೇಜಿನಲ್ಲಿ ಸಹಪಾಠಿಯಾದ ಅಲಕನಂದೆಯೂ ಬೇಕು, ಪಕ್ಕದ ಮನೆಯಲ್ಲಿರುವ ಬಡ ಗೌರಿಯೂ ಬೇಕು, ರೈಲಿನಲ್ಲಿ ಆಕಸ್ಮಿಕವಾಗಿ ಪರಿಚಯವಾದ ಇಂದಿರೆಯ ಸಂಗವೂ ಚೆನ್ನ, ಹಾಗೇ ಪ್ಲಾಜ ಥಿಯೇಟರಲ್ಲಿ ಸಿಗುವ ಕ್ಲಾರಾ ಕೂಡ ಬೇಕು. ಅವನ ಕನಸಿಗೆ, ಬಯಕೆಗೆ ಪಾರವೇ ಇಲ್ಲ! ಅವನೊಬ್ಬ ಹಗಲುಗನಸುಗಾರ. ಈ ಹೆಣ್ಣುಗಳು ಬೇಕು ಎಂದು ಅವನು ಸಿಗುವ ಬಗ್ಗೆ ಯೋಚನೆ ಮಾಡ್ತ್ಹಾನಷ್ಟೇ. ಅದನ್ನು ಕಾರ್ಯರೂಪಕ್ಕೆ ತರುವ ಮಟ್ಟಕ್ಕೆ ಬರಲು ಅಂಜುತ್ತಾನೆ. ಸ್ವಾತಂತ್ಯ್ರ ಸಂಗ್ರಾಮದಲ್ಲಿ ಪಾಲ್ಗೊಳ್ಳುತ್ತಾನೆ, ಒಂದೆರಡು ಕಲ್ಲು ತೂರಾಟ ನೋಡಿ ಹೆದರಿ ಮನೆಯಲ್ಲೇ ಕೊಳೆಯುತ್ತಾನೆ. ಇದಕ್ಕೆ ಅವನ ಅಪ್ಪ ಅಮ್ಮನು ಒಪ್ಪಿಕೊತಾರೆ.

ಈ ಮೇಲೆ ಹೇಳಿದಂತೆ ಮೊದಲು ಇವನ ಕಣ್ಣು ಕಾಲೇಜಿನಲ್ಲಿರುವ ಅಲಕನಂದೆಯ ಮೇಲಿರುತ್ತದೆ. ಅವನ ಕಾಲೇಜಿನ ಪ್ರೊಫೆಸರ್ ರ ಕಣ್ಣು ಆಕೆಯ ಮೇಲಿರುವುದನ್ನು ಅರಿತ ಇವನು ಅವರ ಬೆದರುಗಣ್ಣಿಗೆ ಹೆದರಿ ಅವಳನ್ನು ಬಿಟ್ಟು ತನ್ನ ಮನೆಗೆ ಗ್ರಾಮಾಫೋನ್ ಕೇಳಲು ಆಸೆಯಿಂದ ಬರುವ ಪಕ್ಕದ ಮನೆಯ ಬಡ ಹುಡುಗಿ ಗೌರಿಯ ಮೇಲೆ ಕಣ್ಣು ಹಾಯಿಸುತ್ತಾನೆ. ಅವಳನ್ನು ಒಲಿಸಿಯೂಕೊಳ್ಲ್ತ್ತಾನೆ. ಅವಳೂ ಇವನಿಗೆ ಇವನ ಆಸೆ ಅಭಿಲಾಷೆಯನ್ನ ಪೂರೈಸುವುದಕ್ಕೆ ಸಹಕರಿಸುತ್ತಾಳೆ. ಎರಡು ತಿಂಗಳ ನಂತರ ಮೈ ನೆರೆತ ಅವಳಿಗೆ ಇವನ ಬಗ್ಗೆ ಆಸೆ ಹೆಚ್ಚಾಗಿ ಇವನ ಬಳಿ ಬಂದಾಗ ಇವನು ಮನೆಯವರಿಗೆ ಹೆದರಿ ಇವಳನ್ನು ನಿರಾಕರಿಸುತ್ತಾನೆ. ಬೇಗೆ ತಡೆಯದ ಅವಳು ಬೇರೊಬ್ಬ ಹುಡುಗನ ಜೊತೆ ಓಡಿ ಹೋಗುತ್ತಾಳೆ. ಸಿನೆಮಾದಲ್ಲಿ ಈ ಇಬ್ಬರ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಅನಗತ್ಯವೆಂದು ಅದನ್ನು ಬದಿಗಿರಿಸಿದ್ದೆಂದು ಅನ್ನಿಸುತ್ತದೆ. ಎಷ್ಟೇ ಆಗಲೀ ಎರಡೂವರೆ ಘಂಟೆಯಲ್ಲಿ ಇಡೀ ಕಾದಂಬರಿಯನ್ನ ಚಿತ್ರಿಸುವುದರಲ್ಲಿ ಹೆಚ್ಚಿನ ನಿರ್ದೇಶಕರು ಒಲವು ತೋರಿಸುವುದಿಲ್ಲ.

ಸಿನೆಮಾದಲ್ಲಿ ಅದೇ ನಾಯಕ ಧೈರ್ಯವಂತ. ಡಾ||ರಾಜಕುಮಾರ್ ಅವರ ಇಮೇಜ್ ಗೆ ಭಂಗತರದೇ ಈ ಸಿನಿಮಾ ಮಾಡಬೇಕು ಅನ್ನೋದು ನಿರ್ದೇಶಕ ನಾಗಾಭರಣರವರ ಇಂಗಿತವಾಗಿತ್ತೋ ಏನೋ?

ರೈಲಿನಲ್ಲಿ ಸ್ನೇಹಿತನ ಮದುವೆ ಮುಗಿಸಿಕೊಂಡು ಬೆಂಗಳೂರಿಗೆ ಹೊರಟ ನಾಯಕ ಆಕಸ್ಮಿಕವಾಗಿ ಪರಿಚಯವಾದ ಹೆಣ್ಣಿನ ಸಹಾಯಕ್ಕೆ ನಿಂತು ತಾನೆ ಪೇಚಿಗೆ ಸಿಲುಕುವ ಪರಿಸ್ಥಿತಿಗೆ ತಲುಪುತ್ತಾನೆ. ಕಾದಂಬರಿಯಲ್ಲಿ ಅಂಜುಕುಳಿ ನಾಯಕ ತೊಂದರೆಯಿಂದ ತಪ್ಪಿಸಿಕೊಳ್ಳಲು ನೋಡಿದರೆ, ಸಿನೆಮಾದಲ್ಲಿ ನಾಯಕ ಹುಡುಗಿಯ ಸಹಾಯಕ್ಕೆ ಒದಗುತ್ತಾನೆ. ಆದರೂ ಖಳನಾಯಕನ ಸಂಚಿಗೆ ಬಲಿಯಾಗಿ ಅವಳನ್ನು ಬಿತ್ತುಕೊದಬೇಕಾದ ಪರಿಸ್ಥಿತಿ ಒದಗುತ್ತದೆ. ನಾಯಕನ ತಲೆಗೆ ಬಲವಾದ ಪೆಟ್ಟು ಬಿದ್ದು ಅವನು ಮನೆ ತಲುಪಿದ್ದೇ ದೊಡ್ಡದಾಗುತ್ತದೆ. ಕಾದಂಬರಿಯಲ್ಲಿ ಖಳನ ಆಮಿಷಕ್ಕೆ ಬಿದ್ದು ಆ ಹುಡುಗಿಯನ್ನ ಅನುಭವಿಸಬೇಕು, ಅಲಕನಂದೆಯಲ್ಲಿ ಹಾಗು ಗೌರಿಯಲ್ಲಿ ಪಡೆಯದೆ ಬಿಟ್ಟ ಅನುಭವ ಈ ಇಂದಿರೆಯಲ್ಲಿ ಪಡೆಯಬೇಕು ಎಂದು ಕಡೂರಿನ ಟ್ರಾವೆಲ್ಲೆರ್ಸ ಬಂಗಲೆಯಲ್ಲಿ ಇಳ್ಕೊತಾರೆ. ಇವನಿಗೆ ಎರಡು ಮನಸ್ಸು. ಅವಳನ್ನು ಅನುಭವಿಸು ಎಂದು ಕೆಟ್ಟ ಮನಸ್ಸು, ಹಾಗೆ ಮಾಡಬಾರದು. ಇವಳು ನಿನ್ನನ್ನೇ ನಂಬಿದ್ದಾಳೆ. ಅವಳಿಗೆ ಮೋಸ ಮಾಡಬೇಡ ಎನ್ನುವ ಒಳ್ಳೆಯ ಮನಸ್ಸು ಇನ್ನೊಂದು ಕಡೆ. ಇವನು ಹತಾಶನಾಗಿ ಹೊರಗೆ ಬರುವಾಗ ಖಳನ ಮರುದರ್ಶನ. ಈ ಮಧ್ಯ ಇಂದಿರೆಯ ಕಥೆ ಕೆಲ ಕಾಲ ತೆರೆಯ ಮೇಲೆ ಬರುತ್ತದೆ. ಅದನ್ನು ಯಥಾವತ್ತಾಗಿ ಚಿತ್ರಿಸಿದ್ದಾರೆ. ಅವಳು, ಅವಳ ಬಡ ಕುಟುಂಬ. ಪಕ್ಕದ ಮನೆಯ ಹಣವಂತೆ, ಸೂಳೆ ಆನಂದಿಯ ಚಿತ್ರಣ ಚೆನ್ನಾಗಿ ಆಗಬೇಕಂದರೆ ನೀವು ಕಾದಂಬರಿಯನ್ನೇ ಓದಬೇಕು. ಅವಳ ಹಾಗು ಖಳ ವ್ಯಾಸರಾಯನ ಪರಿಚಯ ಇತ್ಯಾದಿ ಇತ್ಯಾದಿ.

ಇವೆರಡೂ ಆಕಸ್ಮಿಕ ಹಾಗು ಅಪರಾಧಿಯಲ್ಲಿ ಸಿಗುತ್ತದೆ. ಈ ಎರಡು ಕಾದಂಬರಿಯ ಚಿತ್ರಣ ಸರಿ ಸುಮಾರು ಅರ್ಧ - ಮುಕ್ಕಾಲು ಗಂಟೆ ತೆಗೆದುಕೊಳ್ಳುತ್ತದೆ. ಸಿನಿಮಾ ನಿರ್ದೇಶಕರು ಪರಿಣಾಮದಲ್ಲಿ ಹೆಚ್ಚು ಆಸಕ್ತರೆಂದು ತೋರುತ್ತದೆ. ಅಲ್ಲಿ ಬರುವ ಕ್ಲಾರಾ, ಅವಳ ಅನ್ನ, ಅವಳ ಪೂರ್ವ ಕಥೆ, ಅವಳ ಗೆಳತಿ ಸುಂದರಿ, ಗೆಳೆಯ ರೆಜ್ಜಿ, ಮೋಸ ಹೋದ ಬಗೆ... ಇವೆಲ್ಲ ಸರಿ. ಎರಡರಲ್ಲೂ ಒಂದೇ ರೀತಿ ಚಿತ್ರಿತವಾಗಿದೆ. ಕ್ಲಾರಾ ಹಾಗು ಮೂರ್ತಿಯ ಪರಿಚಯವಾಗುವ ಬಗೆ ಎರಡರಲ್ಲೂ ಭಿನ್ನವಾಗಿವೆ, ಸಿನಿಮಾ ಹಾಲಲ್ಲಿ ಪರಿಚಯವಾಗುವ ಕಾದಂಬರಿಯ ಕ್ಲಾರಾ ದೈಹಿಕ ಸುಖಕ್ಕೆ ಮೂರ್ತಿಯನ್ನು ದಾಳವಾಗಿ ಬಳಸಿಕೊಳ್ಳುತ್ತಾಳೆ. ಅದಾದ ನಂತರ ಮೂರ್ತಿಯಲ್ಲಿ ಅನುರಕ್ತಳಾಗಿ ಅವನನ್ನೇ ಮದುವೆಯಾಗಬೇಕೆಂದು ನಿಶ್ಚಯಿಸುತ್ತಾಳೆ. ತನ್ನ ಅಳುಕಿನ ಕಾರಣ ಮೂರು ಹೆಣ್ಣುಗಳಿಂದ ವಂಚಿತನಾದ ಮೂರ್ತಿ ಇವಳನ್ನು ಹೇಗಾದರೂ ಸರಿ, ಪಡೆಯಲೇ ಬೇಕು ಎಂದು ನಿರ್ಧರಿಸುತ್ತಾನೆ.

ಅಡ್ಡಾದಿಡ್ಡಿ ಕಾರನ್ನು ಓಡಿಸುತ್ತಾ ಮರಕ್ಕೆ ಗುದ್ದುವ ಸಿನಿಮಾ ಕ್ಲಾರಳನ್ನು ಮೂರ್ತಿಯು ಸರಿದಾರಿಗೆ ತರುತ್ತಾನೆ. ಅವಳ ಕುಡಿಯುವ ಚಟ ಬಿಡಿಸಿ ಅವಳಿಗೆ ಬಾಳಿನ ಅರ್ಥ ತೋರಿಸಿಕೊಟ್ಟು ಮಾನವಳಾಗಿ ಮಾಡುತ್ತಾನೆ.

ಸಿನೆಮಾದಲ್ಲಿ ಮದುವೆಯ ನಿಶ್ಚಯ ಮಾಡಿದ ಇಬ್ಬರೂ ನಾಯಕನ ತಾಯಿಯ ಬಳಿಸಾರಿ ಅವರನ್ನು ಹೆಚ್ಚು ಶ್ರಮವಿಲ್ಲದೆ ಒಪ್ಪಿಸುತ್ತಾರೆ. ಇದಕ್ಕೆ ನಾಯಕನ ಸ್ನೇಹಿತರು ಸಹಾಯಕರಾಗುತ್ತಾರೆ. ಕಾದಂಬರಿಯಲ್ಲಿ ಇದು ಒಂದು ದೊಡ್ಡ ಗಂಡಾಂತರವಾಗುತ್ತದೆ. ಮೂರ್ತಿಯ ತಂದೆ ತಾಯಿಯರನ್ನು ಒಪ್ಪಿಸಲು ಆದಾಗ ಮೂರ್ತಿ, ಕ್ಲಾರಾ ಇಲಿದುಕೊಂಡಿರುವ ಹೋಟೆಲ್ಲಿಗೆ ಬಂದು ಅವಳೊಂದಿಗೆ ಇರಲು ಪ್ರಾರಂಭಿಸುತ್ತಾನೆ. ಹೆತ್ತ ಕರುಳು ಒದ್ದಾಡಿ, ಜಾತಿ ಬೇರೆ ಅನ್ನೋ ಕಾರಣಕ್ಕಾಗಿ ಮೂರ್ತಿಯ ಭಾವ (ಅಕ್ಕನ ಗಂಡ)ನನ್ನು ಕರೆದು, ಅವನ ಮಧ್ಯಸ್ತಿಕೆಯಲ್ಲಿ ಉಭಾಯರಿಗೂ ಸಮಾಧಾನವಾಗುವಂತೆ ಮದುವೆ ನಡೆದು ಹೋಗುತ್ತದೆ.

ಇನ್ನ್ನೊಂದು ಪ್ರಮುಖ ವ್ಯತ್ಯಾಸವೇನೆಂದರೆ, ಕಾದಂಬರಿಯ ಕ್ಲಾರಾ ಅಂದ ಚೆಂದದಲ್ಲಿ ಎಷ್ಟು ಚೆಂದವೋ, ಯಾವ ಬಟ್ಟೆ ತೊಡುವುದರಲ್ಲೂ ಮೇಲುಗೈ. ಆದರೆ ಸಿನೆಮಾದಲ್ಲಿ ಕ್ಲಾರಾ ಸೀರೆ ಉಡುವುದೇ ಒಂದು ದೃಶ್ಯವಾಗುತ್ತದೆ. ಈಗಿನ ಕಾಲದ ಹುಡುಗಿಯರೂ ಸೀರೆ ಉಡುವುದನ್ನು ಎಲ್ಲಿ ಮರೆತಿದ್ದರೋ ಎನ್ನುವ ಹಾಗೆ ಈ ದೃಶ್ಯ ಚಿತ್ರಿತವಾಗಿದೆ. ಹಾಸ್ಯಾಸ್ಪದವಾಗಿದೆ.

ಮಧುಚಂದ್ರಕ್ಕೆ ಹೊರಟ ದಂಪತಿಗಳು , ಬರುವಾಗ ಮೂರ್ತಿ ಒಬ್ಬನೇ ಬರುತ್ತಾನೆ. ಆಗುಂಬೆ ಘಾಟಿಯಲ್ಲಿ ಮಧುಚಂದ್ರದ ಅಂತ್ಯ ತೋರಿಸುವ ಸಿನಿಮಾ, ಕಾದಂಬರಿಯಲ್ಲಿ ಆಗುಂಬೆಯಲ್ಲಿ ಶುರು ಮಾಡಿ, ಬರ್ಕಣದಲ್ಲಿ ಅಂತ್ಯಗೊಳ್ಳುತ್ತದೆ.

ಕ್ಲಾರಳ ಸಾವು ಮೂರ್ತಿಯನ್ನು ವ್ಯಘ್ರಗೊಳಿಸುತ್ತದೆ. ಅವನು ಪೋಲಿಸ್ ಇನ್ಸ್ಪೆಕ್ಟರ್ ಆಗಿ ಎಲ್ಲರ ಮೇಲೆ ನರಸಿಮ್ಹನಂತೆ ಎಗರುತ್ತ ಇರುತ್ತಾನೆ. ಕೊನೆಗೆ...

ಕಾದಂಬರಿಯಲ್ಲಿ ಇವನು ಇರುವ ಜಾಗಕ್ಕೆ ಓರ್ವ ಹೆಂಗಸು ಒಬ್ಬನ ಕೊಲೆ ಮಾಡಿರುವ ಕೇಸ್ ಬರುತ್ತದೆ. ಅಲ್ಲಿ ಹೋಗಿ ನೋಡಿದರೆ ಅದು ಇಂದಿರೆ ವ್ಯಾಸರಾಯನ ಕೊಲೆ ಮಾಡಿರುತ್ತಾಳೆ. ಅವಳ ಶೀಲಹರಣ ಮಾಡಿದ ವ್ಯಾಸರಾಯನ ಮೇಲೆ ಸೇಡು ತೀರಿಸಿಕೊಂಡ ಇಂದಿರೆಯನ್ನು ಹಾಗೆ ಹೋಗಲು ಬಿಟ್ಟು ಮೂರ್ತಿ, ತಾನು ಹಿಂದೆ ಮಾಡಿದ ತಪ್ಪಿಗೆ ಇದು ಸರಿಯಾದ ಪ್ರಾಯಶ್ಚಿತ್ತ ಎಂದುಕೊಳ್ಳುತ್ತಾನೆ.

ಸಿನೆಮಾದಲ್ಲಿ ಪೋಲಿಸ್ ಇನ್ಸ್ಪೆಕ್ಟರ್ ಆದ ಮೂರ್ತಿ, ಈ ಥಲೆಹಿದುಕರ ಜಾಲ ಪತ್ತೆ ಮಾಡಲು ಹರಸಾಹಸ ಪಡುತ್ತಾನೆ. ಅನಂದಿಯನ್ನು ಸುಳಿವಾಗಿತ್ತುಕೊಂಡು ಅಲ್ಲಿಂದ ವ್ಯಾಸರಾಯ, ಕಾಟಯ್ಯ ಹಾಗೆ ತಿಪ್ಪರಾಜು ಇವರುಗಳನ್ನು ಹಿಡಿಯಲು ಹೋಗಿ ಸಫಲನಾಗುತ್ತಾನೆ. ವ್ಯಾಸರಾಯನನ್ನು ಕೊನೆಗೆ ಹಿಡಿಯಲು ಹೋದ ಮೂರ್ತಿ, ರೈಲು ನಿಲ್ದಾಣದಲ್ಲೇ ಇನೊಮ್ಮೆ ಆಕಸ್ಮಿಕವಾಗಿ ಇಂದಿರೆಗೆ ಸಿಕ್ಕು ಅವಳನ್ನು ಮದುವೆಯಾಗುತ್ತಾನೆ. ಈ ಸಂಧರ್ಭದಲ್ಲೇ ವ್ಯಾಸರಾಯ ಹಾಗು ಅವನ ಸಂಗಡಿಗರನ್ನು ಸದೆಬಡಿದು, ವ್ಯಾಸರಾಯ ರೈಲಿನಡಿಯಲ್ಲಿ ಸಿಕ್ಕು ಭಸ್ಮವಾಗುತ್ತಾನೆ.

ಒಟ್ಟಾಗಿ ಹೇಳಬೇಕೆಂದರೆ ಎರಡು ಚೆನ್ನಾಗಿವೆ. ಮೂಲವನ್ನು ತೆಗೆದುಕೊಂಡರೆ, ಸಿನಿಮಾ ಕೆಲವೆಡೆ ಬೇರೆಯದೇ ಹಾಡಿ ಹಿಡಿಯುತ್ತದೆ, ಆದರೂ ಎಲ್ಲೂ ಪ್ರೇಕ್ಷಕರಿಗೆ ಬೇಜಾರು ಮಾಡುವುದಿಲ್ಲ. ತ.ರಾ.ಸು ಅವರು ಇದ್ದಿದ್ದರೆ ಈ ರೀತಿ ಕಥೆಯನ್ನು ತಿರುಚಲು ಬಿಡುತ್ತಿದ್ದರೋ ಇಲ್ಲವೊ ನಾಕಾಣೆ. ಅವರ ನಾಗರಹಾವು ಚೆನ್ನಾಗಿ ಚಿತ್ರಿತವಾಗಲಿಲ್ಲ ಎಂದು ಅವರು ಕಿಡಿಕಾರಿದ್ದು ನಿಮ್ಮಲ್ಲಿ ಕೆಲವರಿಗೆ ನೆನಪಿರಬಹುದು. ನನ್ನ ನಾಗರಹಾವನ್ನು ಕೆರೆ ಹಾವನ್ನಗಿ ಮಾಡಿದಿರಿ ಎಂದು ಅವರು ಹೇಳಿಕೆ ನೀಡಿದ್ದರು. ಇಲ್ಲಿ ಅವರ ನೋಟಕ್ಕೆ ವಿರುದ್ಧವಾಗಿ ಕಥೆ ಇದ್ದರೂ ಎಲ್ಲೂ ಹದ ಮೀರಿಲ್ಲದ ಕಾರಣ ಎಲ್ಲವು ಸರಿಯಾಗಿದೆ ಎಂದು ಅವರ ಧರ್ಮಪತ್ನಿ ಶ್ರೀಮತಿ ಅಂಬುಜ ತ.ರಾ.ಸು ಅವರು ಒಪ್ಪಿರಬಹುದು.

ನೀವು ಬರೀ ಚಿತ್ರವನ್ನು ನೋಡಿದ್ದರೆ, ಖಂಡಿತ, ಈ ಮೂರು ಕಾದಂಬರಿಗಳನ್ನು ಓಧಿ. ನಿಮಗೆ ಹಿಡಿಸುವುವು. ಬರೀ ಕಾದಂಬರಿಯನ್ನು ಓದಿದ್ದರೆ ಸಿನಿಮಾ ನೋಡಿ, ನಿಮಗೆ ಇಷ್ಟವಾಗಬಹುದು. ಎರಡೂ ನೋಡಿದ್ದರೆ ನಿಮ್ಮ ಅನಿಸಿಕೆಯನ್ನು ಇಲ್ಲಿ ಬರೆಯಬಹುದು. ಇಲ್ಲದಿದ್ದರೂ ಬರೆಯಬಹುದು.

Wednesday, September 10, 2008

ಈ ಸಂಜೆ ಯಾಕಾಗಿದೆ?

ವೀಡಿಯೊ ನೋಡಿ.

ಹಾಡಲ್ಲಿ ಅಂಥ ವಿಶೇಷತೆ ಏನು ಇಲ್ಲ. ಹೇಳ್ಬೇಕಂದ್ರೆ ಹಾಡ ಕೇಳೋವಾಗ ಏನ್ ಅಷ್ಟೊಂದ್ ಇಷ್ಟ ನೆ ಆಗಲ್ಲ. ದೈನ್ಯತೆ ಇದ್ದೇ ಇದೆ. ಆದ್ರೆ ಈ ಹಾಡನ್ನ ನೋಡೋವಾಗ ಯಾರಿಗಾದರು ಖುಷಿ ಆಗದೆ ಇರಲ್ಲ. ಹಾಗೆ ಇದನ್ನ ಚಿತ್ರೀಕರಿಸಲಾಗಿದೆ. ಈ ಹಾಡನ್ನ ಚಿತ್ರಿಸುವ ಸಲುವಾಗಿ ಒಂದು ಹೈ ರೆಸೋಲುಶನ್ ಕ್ಯಾಮೆರಾ ನ ತಂದ್ರಂತೆ. ತಂದಿದ್ದಕ್ಕು ಸಾರ್ಥಕ ಆಯಿತು. ನೀವೇ ನೋಡಿ ಆನಂದಿಸಿ. ಇದರ ಬಗ್ಗೆ ಇನ್ನು ಹೆಚ್ಚೇನು ಹೇಳೋಹಾಗಿಲ್ಲ. ಈವತ್ತು ಈ ಹಾಡ ನೋಡ್ತಾ ಇದ್ದೇ ಟಿವಿ ಲಿ. ಸುಮ್ನೆ ಇದರ ಬಗ್ಗೆ ಬರಿಯೋಣ ಅನ್ನಸ್ತು ಅಷ್ಟೆ.