Wednesday, December 30, 2009

ಎರಡು ದಿನ ಎರಡು ಸಾವು.

ನೀವು ಕರ್ನಾಟಕದಲ್ಲಿದ್ದರೆ ಮಾಧ್ಯಮದಲ್ಲಿ, ಮೊಬೈಲಿನಲ್ಲಿ ನೀವೆಲ್ಲ ಈ ಸುದ್ದಿಯನ್ನು ಕೇಳೇ ಇರುತ್ತೀರಿ. ನಿನ್ನೆ ಸರಿ ಸುಮಾರು ಮಧ್ಯಾಹ್ನ ಹನ್ನೆರಡು ಗಂಟೆಗೆ ಸುಗಮ ಸಂಗೀತ, ಜನಪದ ಪ್ರಾಕಾರಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡ ಪ್ರಸಿದ್ಧ ಸಂಗೀತ ನಿರ್ದೇಶಕ, ಸಿ. ಅಶ್ವಥ್ ತೀರಿಕೊಂಡರು. ಕಿಡ್ನಿ ವೈಫಲ್ಯ ಅವರ ಸಾವಿಗೆ ಕಾರಣವಾಯಿತು. ಅದಾದ ದಿನದ ಒಳಗೆ ಕನ್ನಡ ಚಿತ್ರರಂಗದ ಪ್ರಮುಖ ನಟ ಡಾ|| ವಿಷ್ಣುವರ್ಧನ್ ಹೃದಯ ವೈಫಲ್ಯದಿಂದ ಬಳಲಿ ಆಸ್ಪತ್ರೆಗೆ ಸೇರುವ ಮುನ್ನವೇ ತೀರಿಕೊಂಡರೆಂದು ಈ ಬೆಳಿಗ್ಗೆ ಸುದ್ದಿ ಬಂತು.

ಇಬ್ಬರ ಸಾವನ್ನೂ ಬೇರೆ ಬೇರೆಯಾಗಿ ನಿರಪೇಕ್ಷವಾಗಿ ನೋಡೋಣ.

ಮೊದಲು ಅಶ್ವಥ್. ವಾರಗಳ ಹಿಂದೆ ಪತ್ರಿಕೆಯಲ್ಲಿ ಅಶ್ವಥ್ ರವರು ಅಸ್ವಸ್ಥರಾಗಿದ್ದರು ಎಂದು ಪ್ರಕಟವಾಗಿತ್ತು. ಅವರ ಆರೋಗ್ಯ ಅಷ್ಟರ ಮಟ್ಟಿಗೆ ಸರಿಯಾಗಿಲ್ಲವೆಂದು ಆಗಲೇ ಎಲ್ಲರಿಗೂ ತಿಳಿದಿತ್ತು. ಅವರು ಅಗಲುವ ಸಮಯ ಸನ್ನಿಹಿತವಾಯಿತೆಂದು ನಮಗೆಲ್ಲ ಆಗಲೇ ತಿಳಿಯಿತು. ಅವರ ಹುಟ್ಟಿದ ದಿನವೇ (ಆಂಗ್ಲ ನಿಯತಕಾಲಿಕದ ಪ್ರಕಾರ) ಅವರು ದೇಹತ್ಯಾಗ ಮಾಡಿದ್ದು ಅವರ ಸುಕೃತವೋ, ಕರ್ಮವೋ ನಾ ಕಾಣೆ. ೭೦ ವಸಂತಗಳನ್ನು ಅವರು ಕಳೆದದ್ದು ಹಲವಾರು ಸುಮಧುರ ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ ಕೀರ್ತಿಗೆ ಪಾತ್ರರಾಗುತ್ತಾರೆ. ಅವರ ಶ್ರಾವಣ, ದೀಪಿಕಾ, ಕೈಲಾಸಂ ಹಾಡುಗಳು, ಕುವೆಂಪು ಹಾಡುಗಳನ್ನು ನಾನು ಹಲವಾರು ಬಾರಿ ಕೇಳಿದ್ದೇನೆ. ಇನ್ನಿತರ ಹಾಡುಗಳನ್ನು ನಾನು ರೇಡಿಯೋದಲ್ಲಿ ಕೇಳಿ ಆನಂದಿಸಿದ್ದೇನೆ.

ಹಲವಾರು ಸಿನಿಮಾ ಹಾಡುಗಳಿಗೆ ಧ್ವನಿಯಾದ ಅಶ್ವಥ್ ಕೆಲವು ಚಿತ್ರಗಳಿಗೆ ಸಂಗೀತವನ್ನೂ ನೀಡಿದ್ದಾರೆ. ಕಾಕನಕೋಟೆ, ಕಾಡು ಕುದುರೆ, ಹೀಗೆ ಹಲವು ಚಿತ್ರಗಳಿಗೆ ಸಂಗೀತವನ್ನೋದಗಿಸಿದ್ದಾರೆ. ಅವರ ಇತ್ತೀಚಿನ ಹಾಡುಗಳು 'ತಪ್ಪು ಮಾಡದವ್ರ್ ಯಾರವ್ರೆ?' 'ಕೆಂಚಾಲೋ ಮಚ್ಚಾಲೋ' ಇಂದಿಗೂ ಎಲ್ಲ ಚಿತ್ರ ರಸಿಕರ ಬಾಯಲ್ಲಿ ಓಡಾಡುತ್ತಿರುತ್ತದೆ. ಈ ರಸಿಕರಲ್ಲಿ ಹಲವರಿಗೆ ಅಶ್ವಥ್ ರ ಬಗ್ಗೆ ಹೆಚ್ಚು ತಿಳಿದಿಲ್ಲವೆಂಬುದು ವಿಷಾದಕರ.

ಹುಟ್ಟಿದವರು ಸಾಯಲೇ ಬೇಕು, ಇದು ಶತ ಸಿದ್ಧ. ಜನರಿಗೆ ಈ ನೇರ ಸತ್ಯವು ಯಾಕೆ ತಟ್ಟುವುದಿಲ್ಲವೋ ನನಗೆ ತಿಳಿಯುತ್ತಿಲ್ಲ. ಯಾವುದೇ ಪ್ರಮುಖ ವ್ಯಕ್ತಿ ಸತ್ತನಂತರ ಹುಯಿಲಿಡುವುದು ಸರ್ವೇ ಸಾಮಾನ್ಯ ಸಂಗತಿಯಾಗಿದೆ. ಅದಕ್ಕೆ ತುಪ್ಪ ಸುರಿಯಲು ನಮ್ಮ ಹಲವು ಮಾಧ್ಯಮಗಳು ಬಕಪಕ್ಷಿಯಂತೆ ಕಾತರರಾಗಿರುತ್ತಾರೆ. ಅವರಿಗೆ ಸಾವಿನ ಬಗ್ಗೆ ಸಂತಾಪವಾಗಲಿ ಸಂಕತವಾಗಲಿ alla.  ಸುದ್ದಿ ಬಿತ್ತರಿಸುವ ತವಕವಷ್ಟೇ. ಈ ತತ್ವವನ್ನೆಲ್ಲ ಆಮೇಲೆ ಮಾತಾಡೋಣ.

ಬೆಳಿಗ್ಗೆ ಏಳುತ್ತಲೇ ನನ್ನ ಗೆಳೆಯ, ಗೆಳತಿಯರೆಲ್ಲರಿಗೂ ಒಂದು ಎಸ್.ಎಂ.ಎಸ್. ಕಳಿಸುವುದು ನನ್ನ ಅಭ್ಯಾಸ. ಇಂದಿನ ಮೆಸೇಜ್ ಕಳಿಸಿದ ನಂತರ, ೩ ಜನ ನನಗೆ ವಿಷ್ಣುವರ್ಧನರ ಸಾವಿನ ಸುದ್ದಿ ಹೇಳಿದರು. ಬೆಳಿಗ್ಗೆ ಏಳುತ್ತಲೇ ಸಾವಿನ ಸುದ್ದಿ. ಟಿವಿ ಹಚ್ಚುತ್ತಲೇ ಇದೇ ಸುದ್ದಿ. ೫ ನಿಮಿಷ ನೋಡುತ್ತಾ ನನ್ನ ಪ್ರಾತಃಕರ್ಮಗಳನ್ನು ಮುಗಿಸಲು ಎದ್ದೆ.

ಎಲ್ಲ ಮುಗಿಸಿ ಪುನಃ ಸ್ವಲ್ಪ ಹೊತ್ತು ಟಿವಿ ನೋಡುತ್ತಾ ಕುಳಿತೆ. ಎಲ್ಲೆಡೆಯೂ ಇದೇ ಸುದ್ದಿ. ಈ ಇಡೀ ದಿನ ಇದೇ ಸುದ್ದಿಯೆಂದು ಖಾಯಂ ಆದ ಮೇಲೆ ಟಿವಿ ನೋಡುವುದನ್ನು ಬಿಟ್ಟು ಎದ್ದೆ.

ವಿಷ್ಣುವರ್ಧನರ ಬಗ್ಗೆ ಬರೆಯುವುದು ಸ್ವಲ್ಪವಿದೆ. ಈ ಹೊತ್ತಿನಲ್ಲಿ ಕೆಲವರಿಗೆ ಅದು ಸ್ವಲ್ಪ ಆಘಾತಕಾರಿಯಾದರೂ ನಿಷ್ಟುರವಾಗಿ ಹೇಳುವುದು ನನ್ನ ಕರ್ತವ್ಯವೆಂದು ಭಾವಿಸುತ್ತಾ ಬರೆಯುತ್ತೇನೆ.

ವಿಷ್ಣುವರ್ಧನ್ ಒಬ್ಬ ಒಳ್ಳೆಯ ನಟ ಎಂಬುದು ಎಲ್ಲರೂ ತಿಳಿದ ವಿಷಯ. ಅವರ ಸಾವಿನ ನಂತರ ಕೆಲವು ವೆಬ್ ಸೈಟುಗಳು ಕೆಲವು ಕಳಪೆ ದರ್ಜೆಯ ಸರ್ವೆಗಳನ್ನು  ಮಾಡುತ್ತಿದ್ದಾರೆ. ರಾಜಕುಮಾರ್ ಹಾಗು ವಿಷ್ಣುವರ್ಧನ್ರಲ್ಲಿ   ಯಾರು ಉತ್ತಮ? ರಾಜಕುಮಾರ್ ಹಾಗು ವಿಷ್ಣುವರ್ಧನ್ರಲ್ಲಿನ ದ್ವೇಷವನ್ನು ಅಭಿವ್ಯಕ್ತಿಸಿದ್ದಾರೆ. ಅವರೆಲ್ಲರಿಗೆ ಬುದ್ಧಿ ಬರಲಿ ಎಂದು ನಾವು ಹಾರೈಸೋಣ.

ಚಿತ್ರರಂಗದಲ್ಲಿ ಅವರು ನಡೆದ ಹಾದಿಯನ್ನು ನೋಡೋಣ. ೯೦ರ ದಶಕದವರೆಗೂ ಅವರ ಹೆಚ್ಚಿನ ಚಿತ್ರಗಳಲ್ಲಿ ಸತ್ವಯುತವಾದ ಕಥೆಯಿರುವುದನ್ನು ನಾವು ಕಾಣಬಹುದು. ವಂಶವೃಕ್ಷದಲ್ಲಿ ಬಾಲನಟನಾಗಿ ಬಣ್ಣದ ಬದುಕಿಗೆ ನಾಂದಿ ಹಾಡಿದ ವಿಷ್ಣು, ಪ್ರಮುಖ ನಟರಾದದ್ದು ಪುಟ್ಟಣ್ಣ ಕಣಗಾಲರ 'ನಾಗರಹಾವು' ಚಿತ್ರದ ಬಳಿಕ. ಆಶ್ಚರ್ಯವೆಂದರೆ ಅಂಬರೀಶ್ ರವರೂ  ಇದೇ ಚಿತ್ರದಿಂದ ತಮ್ಮ  ಪ್ರಯಾಣವನ್ನು ಪ್ರಾರಂಭಿಸಿದರು. ನಾಗರಹಾವಿನ ಸಿಟ್ಟಿನ ಯುವಕನ ಪಾತ್ರದಲ್ಲಿ ಅವರು ಮಿಂಚಿದರು.

ಅಲ್ಲಿಂದ ಹೆಚ್ಚಿನ ಪಕ್ಷ ಅಂತಹ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತ ಬಂದರು. ಸಹೋದರರ ಸವಾಲ್, ಕಳ್ಳ ಕುಳ್ಳ, ಚಾಣಕ್ಯ, ಜಿಮ್ಮಿ ಗಲ್ಲು, ಖೈದಿ, ಸಾಹಸ ಸಿಂಹ ಹೀಗೆ ಇನ್ನಿತರ ಚಿತ್ರಗಳಲ್ಲಿ ಕಾಣಿಸಿಕೊಂಡರು. ವೈವಿಧ್ಯ ಬೇಕೆಂದು ಇನ್ನು ಹಲವು ಪಾತ್ರ ಮಾಡಿದ್ದರಲ್ಲಿ ಪ್ರಮುಖವಾದದ್ದು ಹೊಂಬಿಸಿಲು, ಅವಳ ಹೆಜ್ಜೆ, ಗಲಾಟೆ ಸಂಸಾರ. ಇಂತಹ ಪಾತ್ರಗಳಲ್ಲೂ ಗಟ್ಟಿಗರು ಎಂದೆನಿಸಿಕೊಂಡರು.

ಇದಾದ ನಂತರ, ೮೦ರ ದಶಕದಲ್ಲಿ ಹೆಚ್ಚಾಗಿ ಕೌಟುಂಬಿಕ ಚಿತ್ರಗಳತ್ತ ವಾಲಿದರು. ಕರ್ಣ, ಕಥೆಗಾರ, ಜೀವನ ಚಕ್ರ, ಕರುಣಾಮಯಿ, ಒಂದಾಗಿ ಬಾಳು, ಹೃದಯಗೀತೆ, ಮಲಯ ಮಾರುತ ಎಲ್ಲವೂ ಹೆಸರು ಮಾಡಿದ ಚಿತ್ರಗಳು. ಇಲ್ಲಿ ಹಲವು ಚಿತ್ರಗಳನ್ನು ನಾನು ಹೆಸರಿಸಿಲ್ಲ. ೮೦ನೆ ದಶಕದ ಮೊದಲಲ್ಲಿ ಬಂದ 'ಬಂಧನ' ಚಿತ್ರ ಒಂದು ಹೊಸ ರೀತಿಯ ಚಿತ್ರಗಳನ್ನು ಹುಟ್ಟು ಹಾಕಿತೆಂದು ಹೇಳಿದರೆ ಅತಿಶಯವಲ್ಲ.

೯೦ರ ದಶಕದ ಮೊದಲಿನಲ್ಲಿ ಒಳ್ಳೆಯ ಚಿತ್ರಗಳನ್ನೇ ಕೊಡುತ್ತ ಬಂದ ವಿಷ್ಣು, ಅದಾದ ನಂತರ ಸತ್ವಯುಕ್ತವಾದ ಯಾವುದೇ ಸ್ವಮೇಕ್ ಚಿತ್ರದಲ್ಲಿ ನಟಿಸದಿದ್ದಿದ್ದು ವಿಷಾದಕರ. ೯೦ರ ದಶಕದ ಮೊದಲಲ್ಲಿ ಬಂದ ಸುಪ್ರಭಾತ, ಮುತ್ತಿನಹಾರ ಭರ್ಜರಿ ಯಶಸ್ಸು ಗಳಿಸಿತು. ನಂತರ ಸುನಿಲ್ ಕುಮಾರ್ ದೇಸಾಯಿ ಅವರ ಸಂಘರ್ಷ, ನಿಷ್ಕರ್ಶ ಚಿತ್ರಗಳೂ ಚೆನ್ನಾಗಿದ್ದವು. ನಂತರ ವಿಷ್ಣು ಹೆಚ್ಚಾಗಿ ರಿಮೇಕ್ ಚಿತ್ರಗಳತ್ತ ವಾಲಿದರು. ಈ ಮಧ್ಯ ಕೆಲವು ಸ್ವಮೇಕ್ ಚಿತ್ರಗಳಲ್ಲಿ ಕೆಲಸ ಮಾಡಿದ್ದೆಂದರೆ ಹಾಲುಂಡ ತವರು, ಮಾತಾಡ್ ಮಾತಾಡ್ ಮಲ್ಲಿಗೆ ಚಿತ್ರಗಳು.

ಅವರ ರಿಮೇಕ್ ಚಿತ್ರಗಳು ಗೆದ್ದಿರಬಹುದು. ಆದರೆ ಅವರ ನೈಜ ಅಭಿಮಾನಿಗಳನ್ನು ಕಳೆದುಕೊಳ್ಳುವಲ್ಲಿ ಅದು ಸಹಕಾರಿಯಾಯಿತು. ೯೦ರ ದಶಕದ ನಂತರ ಅವರು ಮಾಡಿದ ೯೦% ಹೆಚ್ಚಿನ ಚಿತ್ರಗಳು ರಿಮೇಕ್ ಗಳು. ಕೆಲವನ್ನು ಹೆಸರಿಸಬೇಕೆಂದರೆ ಯಜಮಾನ, ಸಿಂಹಾದ್ರಿಯ ಸಿಂಹ, ಕೋಟಿಗೊಬ್ಬ, ಆಪ್ತಮಿತ್ರ, ಜಮೀನ್ದಾರರು, ಸೂರ್ಯವಂಶ, ಬಳ್ಳಾರಿ ನಾಗ, ನಮ್ ಯಜಮಾನ್ರು, ವಿಷ್ಣು ಸೇನಾ, ಇತ್ಯಾದಿ ಇತ್ಯಾದಿ. ಹಲವು ಚಿತ್ರಗಳು ಕಳಪೆ ದರ್ಜೆಯವು ಎಂದು ಹೇಳಲು ವಿಷಾದಿಸುತ್ತೇನೆ.

ಅದರಲ್ಲಿಯೂ ಆ ಆಪ್ತಮಿತ್ರ ಚಿತ್ರವಂತೂ ನೋಡಿ ತಲೆ ಕೆಟ್ಟುಹೋಯಿತು. ೯೦ರ ದಶಕದ ನಂತರ ನಾನು ಅವರ ಸಿನೆಮ ನೋಡುವುದಿಲ್ಲವೆಂದು ತೀರ್ಮಾನಿಸಿದ್ದಕ್ಕೆ ಇದೇ ಕಾರಣ.

ಇರಲಿ. ರಾಜಕುಮಾರ್ ರ ನಂತರ ಕನ್ನಡ ಚಿತ್ರರಂಗದ ಚುಕ್ಕಾಣಿ ಹಿಡಿಯಲು ಸರಿಯಾದ ವ್ಯಕ್ತಿ ವಿಷ್ಣುವರ್ಧನ್ ಎಂದು ಎಲ್ಲರೂ ತೀರ್ಮಾನಿಸಿದ್ದಕ್ಕೆ ಖಡಾಖಂಡಿತವಾಗಿ ಆಗುವುದಿಲ್ಲವೆಂದು ನಿರಾಕರಿಸಿದ್ದು ಇದೇ ವಿಷ್ಣುವರ್ಧನ್. ಕನ್ನಡ ಭಾಷೆ, ಚಿತ್ರರಂಗಕ್ಕೆ ಸಂಬಂಧಿಸಿದಂತೆ ಯಾವುದೇ ಬಿಕ್ಕಟ್ಟಿಗೆ ಮುಂದೊತ್ತಿ ಹೋಗಲು ನಿರಾಕರಿಸುತ್ತಿದ್ದರು. ಇಂಥಾದ್ದರಲ್ಲಿ ಕೆಲವರು ರಾಜಕುಮಾರ್ ರಿಗೂ ವಿಷ್ಣುವರ್ಧನ್ ರಿಗೂ ತುಲನೆಯಲ್ಲಿ ತೊಡಗುತ್ತಾರೆ.  ವಿಪರ್ಯಾಸ.

ಕೊನೆಯದ್ದಾಗಿ ಒಂದು ಹೇಳಲಿಚ್ಛಿಸುತ್ತೇನೆ. ಆಪ್ತಮಿತ್ರ ಬಿಡುಗಡೆಯಾಗುವ ಮುನ್ನ ನಟಿ ಸೌಂದರ್ಯ ಸತ್ತರು. ಆ ಅನುಕಂಪದಿಂದಷ್ಟೇ ಆ ಚಿತ್ರ ೧ ವರ್ಷ ಓಡಿತು. ಇನ್ನು ಅದರ ಮುಂದುವರಿದ ಭಾಗ, ಆಪ್ತರಕ್ಷಕ, ವಿಷ್ಣುವರ್ಧನರ ಸಾಆವಿನ ಛಾಯೆಯಲ್ಲಿ ಅದೇನೇ ಕಥೆಯಿದ್ದರೂ ೧ ವರ್ಷ ಓಡುವುದು ಶತಸಿದ್ದ.

ಸತ್ತವರ ಬಗೆಗೆ ಕಟುವಾಗಿ ಮಾತಾಡಬಾರದು ನಿಜ. ವಿಷ್ಣುವರ್ಧನರ ಹಳೆಯ ಸಿನೆಮಾಗಳ ಬಗ್ಗೆ ಈಗಲೂ ನನಗೆ ಗೌರವವಿದೆ. ಆದರೆ ಅವರು ಅದನ್ನು ಕೊನೆಯ ತನಕ ಉಳಿಸಿಕೊಳ್ಳಲ್ಲಿಲ್ಲ ಎಂಬುದಷ್ಟೇ ನನ್ನ ಅಂಬೋಣ.

ಸತ್ತವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೇಡಿಕೊಳ್ಳುವುದರಲ್ಲಿ ನನಗೆ ನಂಬಿಕೆ ಅಷ್ಟಾಗಿ ಇಲ್ಲ. ಆದದ್ದಾಯಿತು ಎನ್ನುವ ಜಾಯಮಾನ ನನ್ನದು. ಕನ್ನಡ ಚಿತ್ರರಂಗ ಹಾಗು ಸುಗಮ ಸಂಗೀತ ಕ್ಷೇತ್ರ ಇಬ್ಬರು ರತ್ನಗಳನ್ನು ಕಳೆದುಕೊಂಡಿತು ಎನ್ನುವುದು ನಾಟಕೀಯವೆನ್ನಿಸುತ್ತದೆ. ಅವರು ಸತ್ತರೂ ಅವರ ಕೆಲಸದಲ್ಲಿ ಅವರನ್ನು ನೋಡಬಹುದೆನ್ನುವುದು ನನ್ನ ನೋಟ. ಏನಂತೀರ?

Thursday, December 17, 2009

ಸೋನು ನಿಗಮ್ ಹಾಗು ಕನ್ನಡ ಹಾಡುಗಳು.

ಈ ಬ್ಲಾಗನ್ನು ಓದುವ ಹಲವರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು. ನನ್ನ ಸೋಂಬೇರಿತನವನ್ನು  ಮನ್ನಿಸಿ.

ಕನ್ನಡ ಚಿತ್ರಗೀತೆಗಳು  ಹಾಗು ಪರಕೀಯ ಗಾಯಕರು ಎಂದು ಪ್ರಕಟವಾಗಬೇಕಿದ್ದ ಈ ಅಂಕಣವು ಹಂತ ಹಂತವಾಗಿ ತೆರೆದುಕೊಳ್ಳಲಿದೆ. ಇದಕ್ಕೆ ಪ್ರೇರಣೆ ಸೀನಈ ಹಳೆಯ ಅಂಕಣ.

ಕನ್ನಡ ಚಿತ್ರಗೀತೆಗಳಲ್ಲಿ ಎಂದಿನಂತೆ ಪರಕೀಯ ಗಾಯಕರ ಹಾವಳಿ ಇದ್ದಿದ್ದೇ. ಇತ್ತೀಚಿನ ದಿನಗಳಲ್ಲಿ ಅದು ಇನ್ನು ಹೆಚ್ಚಿದೆ ಎನ್ನುವ ಮಾತು ಆಗಾಗ ಕೇಳಿಬರುತ್ತದೆ. ಇದರ ಇತಿಹಾಸವನ್ನು ಸ್ವಲ್ಪ ಮಟ್ಟಿಗೆ ತಿಳಿದುಕೊಳ್ಳೋಣ.

೧೯೩೪ನೇ ಇಸವಿಯಿಂದ ಪ್ರಾರಂಭವಾದ ಕನ್ನಡ ಚಿತ್ರರಂಗ, ಮೂಕಿಯಿಂದ ಟಾಕಿಯಾದದ್ದು ಸರಿ ಸುಮಾರು ೫೦ನೆ ದಶಕದಲ್ಲಿ ಎಂದು ಹಲವರ ಅಂಬೋಣ. [ಆಸಕ್ತರು ಜಾಲದಲ್ಲಿ ಹುಡುಕಾಡಿ] ಆಗಿನ ಕಾಲದಿಂದಲೂ ಕನ್ನಡದಲ್ಲಿ ಪರಕೀಯರ ಹಾಡುಗಾರಿಕೆಯೇ. ಸೀರ್ಕಾಳಿ ಗೋವಿಂದನ್, ಘಂಟಸಾಲ, ಪಿ ಸುಶೀಲ, ಹಲವರು. ಆಗಿನ ಕಾಲದಲ್ಲಿ ಕರ್ನಾಟಕದಲ್ಲಿ ಸ್ಟೂಡಿಯೋ ವ್ಯವಸ್ತೆಯಿಲ್ಲದಿರುವುದೂ ಇದಕ್ಕೆ ಒಂದು ಪ್ರಮುಖ ಕಾರಣವಾಗಿರಬಹುದು. ಇದೇ ಸಾಲಿನಲ್ಲಿ ಬರುವವರು ಪಿ. ಬಿ. ಶ್ರೀನಿವಾಸ್, ಎಸ್. ಜಾನಕಿ, ಎಸ್. ಪಿ. ಬಾಲಸುಬ್ರಮಣ್ಯಂ, ಎಸ್. ಪಿ. ಶೈಲಜಾ, ಎಲ್. ಆರ್. ಈಶ್ವರಿ, ವಾಣಿ ಜಯರಾಂ, ಕೆ. ಎಸ್. ಚಿತ್ರ, ಕೆ. ಜೆ. ಏಸುದಾಸ್, ಇನ್ನು ಹಲವರು.

ಇವರೆಲ್ಲ ದಕ್ಷಿಣ ಭಾರತದ ಪ್ರಮುಖರಾಯ್ತು.

ಉತ್ತರ ಭಾರತದವರ ಕಡೆ ಮುಖ ಮಾಡಿದರೆ ನಮಗೆ ಸಿಗುವುದು, ಮೊಹಮ್ಮದ್ ರಫಿ (ಒಂದು ಹಾಡು), ಕಿಶೋರ್ ಕುಮಾರ್ (೧ ಹಾಡು), ಲತಾ ಮಂಗೇಶ್ಕರ್ (೧ ಹಾಡು) ಆಶಾ ಭೋಂಸ್ಲೆ (೧ ಹಾಡು), ಮನ್ನಾ ಡೇ (೨-೩ ಹಾಡು). ಇವರೆಲ್ಲ ಹಳಬರು. ಹೊಸಬರಲ್ಲಿ ಕುಮಾರ್ ಸಾಣು, ಉದಿತ್ ನಾರಾಯಣ್, ಸೋನು ನಿಗಮ್, ಅಲ್ಕಾ ಯಾಗ್ನಿಕ್, ಸಾಧನ ಸರ್ಗಂ, ಕುನಾಲ್ ಗಾಂಜಾವಾಲ, ಅನುರಾಧ ಪೌದ್ವಾಲ್, ಕವಿತಾ ಕೃಷ್ಣಮೂರ್ತಿ, ಶ್ರೇಯಾ ಘೋಶಾಲ್, ಕೈಲಾಶ್ ಖೇರ್, ಶಾನ್ ಪ್ರಮುಖರು.

ಇವರ ಬಗ್ಗೆ ಇನ್ನೊಮ್ಮೆ ಯಾವಾಗಲಾದರು ಹೇಳಿದರಾಯ್ತು. ಈಗ ಈ ಅಂಕಣದ ಕೇಂದ್ರ ಬಿಂದು, ಸೋನು ನಿಗಮರ ಬಗ್ಗೆ ಬರೆಯೋಣ.

ಹೆಚ್ಚಿನ ಪಕ್ಷ ಉತ್ತರ ಭಾರತದ ಎಲ್ಲರೂ ಮೂಗಿನಿಂದಲೇ ಹಾಡುತ್ತಾರೆ. ಶ್ರೇಯಾ ಘೋಶಾಲ್ ಒಬ್ಬರು ಅಪವಾದ. ನಮ್ಮ ಸೋನು ನಿಗಮರಂತು ಮೂಗೀಶ್ವರನ ಅಪರಾವತಾರ. ಸರಿ ಸುಮಾರು ೨೦೦೦ ನೇ ಇಸವಿಯಿಂದ ಕನ್ನಡದಲ್ಲಿ ಹಾಡಲು ಬಂದ ಸೋನುವನ್ನು ಇಲ್ಲಿಯ ಹೆಚ್ಚಿನ ಜನ ಅಭಿನಂದಿಸಿದರು. ಸೋನು, ಹಿಂದಿಯಲ್ಲಿ ಉತ್ತಮ ಹಾಡುಗಾರ ನಿಜ. ಆದರೆ ಅವರನ್ನು ಕನ್ನಡಕ್ಕೆ ತಂದವರು ಕನ್ನಡದ ಉಚ್ಚ್ಹಾರವನ್ನು ಸರಿಯಾಗಿ ಕಲಿಸದೇ ಹಾಡಿಸುವುದು ಅಪರಾಧವೇ ಸರಿ.

೨೦೦೬ ನೇ ಇಸವಿಯ ತನಕ ವರ್ಷಕ್ಕೆ ೨-೩ ಕನ್ನಡ ಹಾಡುಗಳನ್ನು ಹಾಡುತ್ತಿದ್ದ ಸೋನು, ಏಕ ದಂ, ಪ್ರಸಿದ್ಧರಾದದ್ದು ಮುಂಗಾರು ಮಳೆಯ ಹಾಡುಗಳಿಂದ.

೨೦೦೬ರ ತನಕ ಸೋನು ನಿಗಮರ ಕೆಲವು ಪ್ರಸಿದ್ಧ ಕನ್ನಡ ಹಾಡುಗಳೆಂದರೆ:
೧. ಟೈಟಾನಿಕ್ ಹೀರೋಯಿನ್ ನನ್ನ ಚೆಲುವೆ (ಚಿತ್ರ: ಸ್ನೇಹ ಲೋಕ, ಸಾಹಿತ್ಯ, ಸಂಗೀತ: ಹಂಸಲೇಖ)
೨. ಮೊನಾಲೀಸಾ ಮೊನಾಲೀಸಾ (ಚಿತ್ರ: ಮೋನಲೀಸ, ಸಂಗೀತ: ವಲೀಶ ಸಂದೀಪ್)
೩. ಅಂಟ್ ಅಂಟ್ ಅಂಟ್ (ಚಿತ್ರ: ಸೂಪರ್ ಸ್ಟಾರ್,  ಸಾಹಿತ್ಯ, ಸಂಗೀತ: ಹಂಸಲೇಖ)
೪. ಉಸಿರೇ, ಉಸಿರೇ (ಚಿತ್ರ: ಹುಚ್ಚ, ಸಂಗೀತ: ರಾಜೇಶ್ ರಾಮನಾಥ್) 

ನಿಮಗೆ ತಿಳಿದಿರುವ ಹಲವಾರು ಹಾಡುಗಳನ್ನು ನಾನು ಬಿಟ್ಟಿರಬಹುದು. ಕ್ಷಮೆಯಿರಲಿ.

ಈ ಮೇಲ್ಕಂಡ ಹಾಡುಗಳೆಲ್ಲದರ ಸಾಹಿತ್ಯ, ಎಷ್ಟು ಬಾರಿ ಕೇಳಿದರು ಬೇಜಾರಾಗುವುದಿಲ್ಲ. (ನನ್ನ ಅಭಿಪ್ರಾಯದಲ್ಲಿ ೪ ನೇ ಹಾಡು, ಉಸಿರೇ, ಉಸಿರೇ ಕೂಡ ಕೇಳಲಾಗುವುದಿಲ್ಲ, ಆದರೆ ಹಲವರಿಗೆ ಹಾಗನ್ನಿಸುವುದಿಲ್ಲ, ಇರಲಿ...)

ಆದರೆ ಈ ಮುಂಗಾರು ಮಳೆ ಚಿತ್ರ ಬಂತು ನೋಡಿ, ಅದರ ಹಾಡುಗಳು ಪ್ರಸಿದ್ಧವಾಗಿದ್ದೆ ಆಗಿದ್ದು, ಸೋನು ನಿಗಮರ ಕನ್ನಡ ಹಾಡುಗಾರಿಕೆ ಬೇರೆಯದೇ ಮಟ್ಟವನ್ನು ಮುಟ್ಟಿತು. ಆ ಚಿತ್ರವನ್ನು ಜನ ಅದ್ಯಾಕೆ ಅಷ್ಟು ಹಚ್ಚಿಕೊಂಡರು ಎಂದು ನನಗೆ ಇನ್ನೂ ಸ್ಪಷ್ಟವಾಗಿಲ್ಲ. ಆ ಚಿತ್ರದಲ್ಲಿ ಇಷ್ಟವಾಗಬಹುದಾದದ್ದು ಒಂದಿದ್ದರೆ ಅಲ್ಲಿನ ಛಾಯಾಗ್ರಹಣ. ಅದೊಂದು ಬಿಟ್ಟರೆ ಆ ಚಿತ್ರದ ಗಣೇಶ್, ಪೂಜಾ ಗಾಂಧಿ ಅಭಿನಯವಾಗಲಿ, ಮನೋ ಮೂರ್ತಿಗಳ ಸಂಗೀತವಾಗಲಿ, ಯೋಗರಾಜಭಟ್ಟರ ನಿರ್ದೇಶನವಾಗಲಿ, ಭಟ್ಟರ ಹಾಗು ಕಾಯ್ಕಿಣಿಯವರ ಸಾಹಿತ್ಯವಾಗಲಿ  ದೈನ್ಯವೆನ್ನಿಸುತ್ತದೆ. ಕಥೆಯಂತೂ ಬಾಲಿಶವಾಗಿದೆ. ಇರಲಿ ಬಿಡಿ. ನಾವು ಈಗ ಮುಂಗಾರು ಮಳೆಯ ವಿಮರ್ಶೆ ಮಾಡುತ್ತಿಲ್ಲ.

ಇದಾದನಂತರ ಬಂದ ಸೋನು ನಿಗಮರ ಕೆಲವು ಹಾಡುಗಳ ಸಾಹಿತ್ಯದ ಬಗ್ಗೆ ನಾನು ಬರೆಯಲಿಚ್ಚಿಸುತ್ತೇನೆ. ಇಲ್ಲಿ ಒಂದು ವಿಷಯ ಸ್ಪಷ್ಟಪಡಿಸುತ್ತೇನೆ. ನನಗೆ ಇಲ್ಲಿ ಜಯಂತ ಕಾಯ್ಕಿಣಿಯವರ ಬಗ್ಗೆ ಅಪಾರ ಗೌರವವಿದೆ. ಮನೋ ಮೂರ್ತಿ ಹಾಗು ಸೋನು ನಿಗಮರ ಬಗ್ಗೆ ಯಾವುದೇ ವೈಷಮ್ಯವಿಲ್ಲ. ಹಾಗೆಯೇ ಈ ಹಾಡುಗಳನ್ನು ಹೊರತರುವಲ್ಲಿ ಕಷ್ಟಪಟ್ಟ ಎಲ್ಲರ ಬಗ್ಗೆ ನನ್ನ ಗೌರವ, ಸಹಾನುಭೂತಿ, ಕಳಕಳಿ ಇದೇ. ಯಾರೂ ಅನ್ಯತಾ ಭಾವಿಸಬಾರದೆಂದು ವಿನಂತಿ.

ಮೊದಲೇ ಹೇಳಿದಂತೆ, ಮುಂಗಾರು ಮಳೆಯ ನಂತರ ಬಂದ ಹೆಚ್ಚಿನ ಸೋನು ಹಾಡುಗಳು ಒಂದೇ ಕಾಯ್ಕಿಣಿಯವರು ಬರೆದದ್ದು ಅಥವಾ ಮನೋ ಮೂರ್ತಿ ಸಂಗೀತ ಸಂಯೋಜಿಸಿದ್ದು ಅಥವಾ ಎರಡೂ. ಇತರರೂ ಮಾಡಿದ್ದಾರೆ ಆದರೆ ಇವರುಗಳು ಜಾಸ್ತಿ. ಈ ಎಲ್ಲಾ ಹಾಡುಗಳಲ್ಲಿ ಒಂದು ಪ್ರಮುಖ ಗುಣ, ಹಾಡಿನ ದೈನ್ಯತೆ. ಹೆಚ್ಚಿನ ಪಕ್ಷ ಎಲ್ಲ ಹಾಡುಗಳಲ್ಲಿಯೂ ದೈನ್ಯತೆ ಎದ್ದು ಕಾಣುತ್ತದೆ. ಹಲವನ್ನು ಇಲ್ಲಿ ಉದಾಹರಿಸುತ್ತೇನೆ.

೧. ಚಿತ್ರ: ಮುಂಗಾರು ಮಳೆ
     ಹಾಡು: ಅನಿಸುತಿದೆ ಯಾಕೋ ಇಂದು...
     ಸಾಹಿತ್ಯ: ಜಯಂತ್ ಕಾಯ್ಕಿಣಿ.
     ಸಂಗೀತ: ಮನೋ ಮೂರ್ತಿ.
      ದೈನ್ಯತೆಯ ಪರಮಾವಧಿಯ ಸಾಲುಗಳು:  "ನೀನೇನೆ ನನ್ನವಳೆಂದು..." "ಇನ್ನ್ಯಾರ ಕನಸಲೋ ನೀನು ಬಂದರೆ ತಳಮಳ" "ನನ್ನ ಹೆಸರ ಕೂಗೆ ಒಮ್ಮೆ ಹಾಗೆ ಸುಮ್ಮನೆ"

೨. ಚಿತ್ರ: ಗಾಳಿಪಟ
     ಹಾಡು: ಮಿಂಚಾಗಿ ನೀನು ಬರಲು
     ಸಂಗೀತ: ಹರಿಕೃಷ್ಣ
     ದೈನ್ಯತೆಯ ಪರಮಾವಧಿ: "ನಾ ನಿನ್ನ ಕನಸಿಗೆ ಚಂದಾದಾರನು, ಚಂದಾ ಬಾಕಿ ನೀಡಲು ಬಂದೇ ಬರುವೆನು"
     ನನ್ನ ಅನಿಸಿಕೆ: ಅಯ್ಯೋ ಬೇಡ ಬಿಡು ಗುರು. ನಿಂಗ್ ಫ್ರೀಯಾಗೆ ಕೊಡ್ತೀನಿ. ನನ್ನ ಗೆಳೆಯ ಸೀನ ಇದಕ್ಕೆ ಅಣಕ ಹಾಡಿದ್ದ. "ನಾ ನಿನ್ನ ಚಪ್ಪಲಿಯ ಚಮ್ಮಾರನು, ಕಿತ್ತೋದ್ ಚಪ್ಪಲಿ ಹೊಲಿಯಲು ಬಂದೇ ಬರುವೆನು... ಯಪ್ಪಾ!!)

೩. ಚಿತ್ರ: ನವಗ್ರಹ
     ಹಾಡು: ಕಣ್ಣ ಕಣ್ಣ ಸಲಿಗೆ
     ಸಂಗೀತ: ಹರಿಕೃಷ್ಣ
     ದೈನ್ಯತೆಯ ಪರಮಾವಧಿ: ಇಡೀ ಹಾಡೇ ದೈನ್ಯವಾಗಿದೆ. ಅದರಲ್ಲಿಯೂ ಎರಡನೆಯ ಚರಣದಲ್ಲಿ "ಪ್ರೀತೀ ಮಾಡೇ" ಅಂತೂ ಅರಚಿಕೊಳ್ಳುವಂತಿದೆ. ಈ ಹಾಡು ಕೇಳಿದಾಗಲೆಲ್ಲ ಮೈ ಪರಚಿಕೊಳ್ಳುವಂತಾಗುತ್ತದೆ.

೪. ಚಿತ್ರ: ಸರ್ಕಸ್
     ಹಾಡು: ಪಿಸುಗುಡಲೇ... ಸವಿ ಮಾತೊಂದ...
     ಸಂಗೀತ: ಎಮಿಲ್
     ದೈನ್ಯತೆಯ ಪರಮಾವಧಿ: ಅಸಂಬದ್ಧ ಕಲ್ಪನೆಗಳು. "ನನ್ನ ನೂರು ಆಸೆಗೆಲ್ಲ, ಕೋಟಿ ಕೋಟಿ ಬಣ್ಣಗಳ ಕನಸಿನ ಅಂಗಿಯ ತೊಡಿಸಿ...."
     ಅಣಕ: ಇನ್ನ್ ಏನ್ ಏನ್ ಆಸೆ ಎಲ್ಲ ಇಟ್ಟುಕೊಂಡು ಇದ್ದೀಯ  ಸಿವಾ?

೫. ಚಿತ್ರ: ಮಳೆಯಲಿ... ಜೊತೆಯಲಿ...
     ಹಾಡು: ನೀ ಸನಿಹಕೆ ಬಂದರೆ...
     ಸಂಗೀತ: ಹರಿಕೃಷ್ಣ
     ದೈನ್ಯತೆಯ ಪರಮಾವಧಿ: ಶೀರ್ಷಿಕೆಯೇ ಹೇಳುತ್ತದೆ. "ನೀ ಸನಿಹಕೆ ಬಂದರೆ ಹೃದಯದ ಗತಿ ಏನು?"
     ಅಣಕ: ಹುಡ್ಗೀರ, ಇವನ್ ಹತ್ರ ಹೋಗಬೇಡಿರಮ್ಮ.

ಹೇಳುತ್ತಾ ಹೋದರೆ ಈ ಸರತಿ ತುಂಬಿ ಹೋಗಬಹುದು. ಸೋನು, ಮನೋ, ಕಾಯ್ಕಿಣಿ ತ್ರಯರು ಹೊರತಂದ ಆಲ್ಬಮ್ "ನೀನೆ, ಬರಿ ನೀನೆ" ಅಲ್ಲಿ ದೈನ್ಯತೆಯನ್ನು ಯಥೇಚ್ಚವಾಗಿ ಕಾಣಬಹುದು. ಇದರಲ್ಲಿ ಇನ್ನು ಹಲವು ಗಾಯಕರ ಪಾತ್ರವೂ ಇದೇ. ಆದರೆ ಸೋನು ನಿಗಮ್ ಎಲ್ಲರನ್ನು ಮೀರಿಸಿದ್ದಾರೆ. ದೈನ್ಯತೆಯಲ್ಲಿ.

ಮೇಲೆ ಹೇಳಿದ ಹಾಡುಗಳು ಶೇಕಡಾ ೯೮% ಜನರಿಗೆ ಅಚ್ಚು ಮೆಚ್ಚು. ಅದು ಅವರ ಇಚ್ಛೆ. ನನ್ನ ಅಭಿಪ್ರಾಯವನ್ನು ಇಲ್ಲಿ ನಿರ್ದಾಕ್ಷಿಣ್ಯವಾಗಿ ಮಂಡಿಸಿದ್ದೇನೆ. ಅಂಕಣವನ್ನು ಓದಿ ನೋವಾಗಿದ್ದರೆ ಕ್ಷಮೆಯಿರಲಿ.

ಕೊನೆಯದಾಗಿ ಒಂದು ಮಾತು. ಈ ಎಲ್ಲ ಹಾಡುಗಳನ್ನು ಇಷ್ಟಪಡುವವರು ದೈನ್ಯತೆಯೇ ಸಂಗೀತ, ದೈನ್ಯತೆಯೇ ಮಾಧುರ್ಯವೆಂದು (Melody) ತಿಳಿದಿದ್ದಾರೆ.  ಹಾಗೆಂದು ಘಂಟಾಘೋಷವಾಗಿ ಎಲ್ಲ ಕಡೆ ಹೇಳಿಕೊಂಡು ಬರುತ್ತಾರೆ. ಇಂಥವರಿಗೆ ನನ್ನದೊಂದು ಸಲಹೆ. ದೈನ್ಯತೆಯನ್ನು ಮೀರಿ ಸಂಗೀತವಿದೆ. ಅದರಲ್ಲಿ ಬರಿಯ ಸಂತೋಷವಿದೆ. ಉದಾಹರಣೆಗೆ ಹಂಸಲೇಖರ ಹಾಡುಗಳನ್ನು ಕೇಳಿ, ಸಾಧು ಕೋಕಿಲರವರ ಹಲವು ಹಾಡುಗಳನ್ನು ಕೇಳಿ. (ಹೌದು, ಸಾಧು ಅವರು ಕೆಲವು ಹಾಡುಗಳನ್ನು ಅಚ್ಚು ಇಳಿಸುತ್ತಾರೆ. ಆದರೂ ಅವರ ಹಲವು ಹಾಡುಗಳಲ್ಲಿ ಆನಂದವಿದೆ, ಉದಾ: ಗಂಡುಗಲಿಯ ಹಾಡುಗಳು, ಸವ್ಯಸಾಚಿಯ ಹಾಡುಗಳು, ನೋ. ೧ ಚಿತ್ರದ ಹಾಡುಗಳು, ಇಂತಿ ನಿನ್ನ ಪ್ರೀತಿಯ ಹಾಗು ದೇವ್ರು ಚಿತ್ರದ ಹಾಡುಗಳು) ಕೇಳಿ ನೋಡಿ. ಈ ಹಾಡುಗಳಲ್ಲಿ ದೈನ್ಯತೆ ಇಲ್ಲ. ಹಾಗೆಂದು ಇವರಾರೂ ದೈನ್ಯತೆಯ ಹಾಡುಗಳನ್ನು ಮಾಡಿದವರೇ ಅಲ್ಲವೆಂದಲ್ಲ. ಅತಿ ವಿರಳ. ಇಲ್ಲವೆಂದೇ ಹೇಳಬಹುದು. ವಯ್ಯಕ್ತಿಕವಾಗಿ ನನಗೆ ಇಂತಹ ಹಾಡುಗಳು ಇಷ್ಟವಾಗುತ್ತವೆ.

ಸರಿ. ಸೋನು (ನೋಸು??) ನಿಗಮರ ಅಭಿಮಾನಿಗಳೇ, ಅನಿಸಿಕೆ ಬರೆಯಲು ತಯಾರಾ?

Monday, August 31, 2009

ಮೊಝಿಲ್ಲಾ ಫೈರ್ಫಾಕ್ಸ್ ಕನ್ನಡದಲ್ಲಿಯೂ ಲಭ್ಯ!

ಮೊಝಿಲ್ಲಾ ಫೈರ್ಫಾಕ್ಸ್ ಕನ್ನಡದಲ್ಲಿ ತಮ್ಮ ತಂತ್ರಾಂಶವನ್ನು ಹೊರತಂದಿದ್ದಾರೆ. ಬಹಳ ಹಿಂದೆಯೇ ಈ ಕೆಲಸ ಮಾಡಿರಬೇಕಾದರೂ ನಾನು ಇದನ್ನು ನೋಡಿದ್ದು ಇತ್ತೀಚಿಗೆ, ಅಂದರೆ ಒಂದು ವಾರದ ಕೆಳಗೆ. ನೀವೂ ಉಪಯೋಗಿಸುವ ಹಾಗಿದ್ದರೆ ಇಲ್ಲಿದೆ ನೋಡಿ ತಂತು.

ವಿಂಡೋಸ್, ಮ್ಯಾಕ್ ಓ.ಎಸ್ X ಹಾಗು ಲಿನಕ್ಸ್ ಎಲ್ಲ ಆಪರೇಟಿಂಗ್ ಸಿಸ್ಟಂಗಳಿಗೂ ಇದನ್ನು ಪೋರ್ಟ್ ಮಾಡಲಾಗಿದೆ. ಕನ್ನಡಿಗರಾಗಿ ನಾವೇ ಇದನ್ನು ಉಪಯೋಗಿಸದಿದ್ದರೆ ಇನ್ನ್ಯಾರು ಉಪಯೋಗಿಸುತ್ತಾರೆ ನೀವೇ ಹೇಳಿ? ನಾನು ದಿನಂಪ್ರತಿ ಇದನ್ನೇ ಬಳಸುತ್ತಿದ್ದೇನೆ. ಇಲ್ಲಿಯ ವರೆಗೂ ಯಾವ ತೊಂದರೆಯೂ ಅಥವಾ ತೊಡಕೂ ಕಂಡುಬಂದಿಲ್ಲ.

ನೀವುಗಳೂ ಇದನ್ನು ಉಪಯೋಗಿಸಿ ಎಂದು ನನ್ನ ಸವಿನಯ ಪ್ರಾರ್ಥನೆ.

Tuesday, August 04, 2009

ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಪುರಾಣ...

ಒಂದ್ ರಾತ್ರಿ ಬೆಂಗಳೂರಲ್ಲಿರೋ ಎಲ್ಲಾ ಪ್ರತಿಮೆಗಳು ವಿಧಾನ ಸೌಧದ ಎದುರು ಹಾಜರಾದವು. ರಾತ್ರಿ ಸುಮಾರು ಗಂಟೆ ಇರಬಹುದೋ ಏನೋ? ಒಬ್ಬೊಬ್ಬರೆ ಮಾತಾಡಕ್ಕೆ ಶುರು ಹಚ್ಚಿದವು.

ಮೊದಲಿಗೆ ಆನಂದ್ ರಾವ್ ಸರ್ಕಲ್ ಬಳಿಯ ಗಾಂಧಿ ಪ್ರತಿಮೆ ಮಾತು ಶುರು ಮಾಡಿತು.
ಗಾಂಧಿ: ಯಪ್ಪಾ! ಸಾಕಪ್ಪಾ! ಸಾಕು! ಬಿಸಿಲಲ್ಲಿ ಕೂರೋದೂ ಸಾಕು... ಮೈಯೆಲ್ಲಾ ಉರಿಯೋದು ಸಾಕು.
ಎಲ್ಲಾ ಪ್ರತಿಮೆಗಳು: ಹೌದು ಬಾಪು! ನಮಗಂತೂ ಬಿಸಿಲಲ್ಲಿ ನಿಂತು ನಿಂತೂ ಸಾಕಾಗ್ಹೊಯ್ತು.
ಗಾಂಧಿ: ಸಧ್ಯ! ಈಗ ಮೇಲೆ ಒಂದ್ ಫ್ಲೈ-ಓವರ್ ಇದೇ. ಇಲ್ಲಾಂದ್ರೆ ಮಧ್ಯಾಹ್ನ ಗಂಟೆ ಮೇಲೂ ಬಿಸಿಲಲ್ಲೇ ಕೂರ್ಬೇಕಾಗ್ತಿತ್ತು. ಇನ್ನೊಂದ್ ಒಳ್ಳೆ ಕೆಲಸ ಏನಪ್ಪಾ ಮಾಡಿದ್ರು ಅಂದ್ರೆ ಮುಂಚೆ, ಹಾಳು ರೇಸ್ ಕೋರ್ಸ್ ಗೇ ಮುಖ ಮಾಡಿ ಇಟ್ಟಿದ್ದರು. ಈಗ ಅದರ ವಿರುದ್ದ ಇಟ್ಟಿದ್ದಾರೆ.

ಅಷ್ಟರಲ್ಲಿ ಕಿತ್ತೂರು ಚೆನ್ನಮ್ಮ ತನ್ನ ನೋವು ಹೇಳಿಕೊಂಡಳು.
ಚೆನ್ನಮ್ಮ: ನಂಗೂ ಒಂದ್ ಪ್ರತಿಮೆ ಮಾಡ್ಸಿದ್ದಾರೆ ಟೌನ್ ಹಾಲ್ ಪಕ್ಕ. ಯುದ್ಧ ಮಾಡೋವಾಗ ಸತ್ತರು ಅಂತ ಕುದುರೆ ಮೇಲೆ ಕೂಡ್ಸಿ ಅದರ ಎರಡೂ ಕಾಲು ಮೇಲ ಎತ್ತಿದ್ದಾರೆ. ರೀತಿ ಕೂತೂ ಕೂತೂ ನನ್ನ ಬೆನ್ನೆಲ್ಲಾ ನೋವು. ಸಾಲದ್ದಕ್ಕೆ ಕೈಯಲ್ಲಿರೋ ಕತ್ತಿ ಕೂಡ ಮೇಲೆತ್ಹ್ಸಿದ್ದಾರೆ. ಕೈ ಕೂಡ ನೋವು.

ವಿಧಾನ ಸೌಧದ ಮುಂದೆ ಇರೋ ಅಂಬೇಡ್ಕರ್ ಪ್ರತಿಮೆ ಈಗ ಮಾತು ಶುರು ಹಚ್ಚಿತು.
ಅಂಬೇಡ್ಕರ್: ಅಮ್ಮ! ನೀವಾದ್ರೂ ಕುದುರೆ ಮೇಲೆ ಕುಳಿತಿರುತ್ತೀರಾ. ನಾನು ಬಡಪಾಯಿ. ನನ್ನನ್ನು ನಿಲ್ಲಿಸಿ ಎಡಗೈ ಗೆ ಒಂದು ಪುಸ್ತಕ, ಬಲಗೈಯನ್ನು ಮೇಲೆತ್ತಿ ಎಲ್ಲಿಗೋ ಬೆರಳು ಮಾಡುವಂತೆ ಮಾಡಿದ್ದಾರೆ. ಇಡೀ ದಿನ ಬಿಸಿಲಲ್ಲಿ ಕೈಯನ್ನು ರೀತಿ ಇಟ್ಟುಕೊಂಡು ನನಗಂತೂ ರೋಸಿ ಹೋಗಿದೆ.

ಪಕ್ಕದಲ್ಲೇ ಇದ್ದ ಸೆಂಟ್ರಲ್ ಬಳಿ ಇದ್ದ ರಾಜೀವ್ ಗಾಂಧಿ ಪ್ರತಿಮೆ ಅದಕ್ಕೆ ಹೂಂಕರಿಸಿತು.
ರಾಜೀವ್ ಗಾಂಧಿ: ಅದೇ ಮತ್ತೆ! ನಮ್ಮದು ಅದೇ ಪರಿಸ್ಥಿತಿ.

ಈಗ ಕಾರ್ಪೋರೇಷನ್ನಿನ ಕೆಂಪೇಗೌಡರು ಮಾತನಾಡಿದರು.
ಕೆಂಪೇಗೌಡರು: ನಮ್ಮದು ಬೇರೆಯದೇ ರಗಳೆ. ದಿನಕ್ಕೆ ಮೂರು ನಾಲ್ಕು ಹಕ್ಕಿಗಳು ನಮ್ಮ ತಲೆ, ಹೆಗಲಮೇಲೆ ಕುಳಿತುಕೊಂಡು ಅಸಹ್ಯ ಮಾಡುತ್ತವೆ. ಇದನ್ನೆಲ್ಲಾ ಯಾರಿಗೆ ಹೇಳೋದು? ವಾರಕ್ಕೋ ತಿಂಗಳಿಗೋ ಬರುವ ಮಳೆಗೆ ಕಾಯಬೇಕು. ಕಾರ್ಪೋರೇಷನ್ನಿನವರಂತೂ ನಮಗೆ ಸ್ನಾನ ಮಾಡಿಸುವುದಿಲ್ಲ. ಕೈಯಲ್ಲಿ ಕತ್ತಿ ಇದ್ದರೇನು ಪ್ರಯೋಜನ? ಹಕ್ಕಿಗಳನ್ನು ಓಡಿಸಲಾದೀತೇ?

ಎಲ್ಲರೂ ಒಗ್ಗೂಡಿದರು: ನಮ್ಮೆಲ್ಲರ ಗೋಳಿನಲ್ಲೂ ರಗಳೆ ಇದ್ದ್ದಿದ್ದೇ.

ಚಾಲುಕ್ಯ ಹೋಟೆಲಿನ ಬಳಿಯಿರುವ ವೃತ್ತ ಬಸವಣ್ಣನವರು ಈಗ ಮಾತನಾಡಿದರು.
ಬಸವಣ್ಣನವರು: ಇರುವುದರಲ್ಲಿ ನಮ್ಮ ಪರಿಸ್ಥಿತಿಯೇ ಮೇಲೆನ್ನಿಸುತ್ತಿದೆ. ತಂಪಾದ ನೆರಳಿದೆ. ಕುಳಿತುಕೊಳ್ಳಲು ಕುದುರೆಯಿದೆ. ರಣರಂಗದಲ್ಲಲ್ಲದಿದ್ದರೂ, ಯುದ್ಧ ಮಾಡುವಾಗ ಆದ ಗಾಯದಿಂದ ಸತ್ತೆನೆಂದು ಕುದುರೆಯ ಒಂದು ಕಾಳಿ ಮೇಲಿದೆ. ಆದರೆ ಅದರಿಂದ ನನ್ನ ಬೆನ್ನಿಗೇನು ನೋವಿಲ್ಲ. ಹಕ್ಕಿಗಳ ತಾಪತ್ರಯ ಬಿಟ್ಟರೆ, ಬೇರೆ ಯಾವ ತೊಂದರೆಯೂ ಇಲ್ಲವೆನ್ನಿಸುತ್ತದೆ.

ಗಾಂಧಿನಗರದ ಕೆಂಪೇಗೌಡ ವೃತ್ತದಲ್ಲಿರುವ ಡಾ|| ರಾಜಕುಮಾರ್ ಪ್ರತಿಮೆ ಈಗ ಮಾತನಾಡಿತು.
ರಾಜಕುಮಾರ್: ನೀವೊಬ್ಬರೇ ನೋಡಿ ಒಳ್ಳೆ ಮಾತಾಡ್ತಾ ಇರೋದು. ಎಷ್ಟೇ ಆಗ್ಲಿ ವಚನಕಾರರಲ್ಲವೇ? ನಮ್ಮ ಪರಿಸ್ಥಿತಿ ಯಾರಿಗೂ ಬೇಡ. ನಿಮಗೆಲ್ಲರಿಗೂ ನಿಮ್ಮ ಅಂಗಾಂಗ ನೆಟ್ಟಗಿದೆ. ನಮಗೆ ಕೈ ಕಾಲಿರಲಿ, ದೇಹವೇ ಇಲ್ಲ. ಎದೆಯ ಮಟ್ಟಕ್ಕೆ ಮಾತ್ರ ಪ್ರತಿಮೆ. ನಾವೇನು ಮಾಡಬೇಕು?

ವಿಧಾನ ಸೌಧದ ಮತ್ತೊಂದು ಪ್ರತಿಮೆ, ಡಿ. ದೇವರಾಜ್ ಅರಸ್ ಸರದಿ ಈಗ:
ನಮ್ಮ ಕಾಲದಲ್ಲಿ ಬೆಂಗಳೂರನ್ನು ಉದ್ಯಾನನಗರಿ ಎಂದು ಬೆಳೆಸಿದ್ದೆವು. ಎಲ್ಲೇ ಹೋಗಲಿ, ಎಲ್ಲವೂ ತಂಪು ತಂಪು. ಈಗ ಅದೇನೋ ಹಾಳಾದ . ಟಿ ಅಂತೆ. ಅದು ಬಂದ ಮೇಲೆ ಸರ್ವನಾಶವಾಯಿತು. ಉದ್ಯಾನನಗರಿ, ಅದ್ವಾನನಗರಿಯಾಯಿತು. ಬೆಂಗಳೂರಿನ ತಾಪಮಾನ ವರ್ಷೆ ವರ್ಷೇ ಏರುತ್ತಿದೆ ವಿನಃ ಇಳಿಯುವುದು ಕನಸಿನ ಮಾತಾಯಿತು. ನಮ್ಮ ಪ್ರತಿಮೆಗಳಿಗೂ ನೆರಳಿಲ್ಲ. ಈಗ ನಮ್ಮ ಬೆಂಗಳೂರಿನಲ್ಲಿ ಇನ್ನ್ಯಾವುದೋ ತಮಿಳು ಕವಿಯ ಪ್ರತಿಮೆ ಪ್ರತಿಷ್ಟಾಪಿಸುವುದಕ್ಕೆ ದೊಡ್ಡ ವಾಗ್ವಾದವೇ ನಡೆಯುತ್ತಿದೆಯಂತೆ. ನಮ್ಮ ಗೋಳಿನಲ್ಲಿ ಇನ್ನೊಬ್ಬರು ಬಂದು ಸೇರಿಕೊಂಡರು.


ಕೇಳಿದಿರಲ್ಲ ಈ ಪ್ರತಿಮೆಗಳ ಗೋಳು? ಇವು ಕೇವಲ ಸ್ಯಾಂಪಲ್ ಅಷ್ಟೆ. ಇನ್ನೂ ಬಹಳವಿರಬಹುದು ಇವರ ಗೋಳುಗಳು.

ಈಗ ವಿಚಾರಕ್ಕೆ ಬರೋಣ.

ಈ ತಮಿಳು ಕವಿ ತಿರುವಳ್ಳುವರ್ ಅವರ ಪ್ರತಿಮೆ, ಬೆಂಗಳೂರಿನಲ್ಲಿ ಬೇಕೇ ಬೇಡವೇ?

ಬೇಕು ಎನ್ನುವವರ ವಾದ ನೋಡೋಣ.
೧. ತಿರುವಳ್ಳುವರ್ ತಮಿಳಿನ ಶ್ರೇಷ್ಠ ಜ್ಞಾನಿ, ದಾರ್ಶನಿಕ, ಸಾಹಿತಿ ಇತ್ಯಾದಿ ಇತ್ಯಾದಿ. ಅಂತಹ ಮಹಾ ಪುರುಷರ ಪ್ರತಿಮೆ, ಬೆಂಗಳೂರಿನಲ್ಲಿ ಏಕೆ ಇರಬಾರದು?
೨. ಕನ್ನಡಿಗರು ಸಹಿಷ್ಣುಗಳು. ಅವರು ಕನ್ನಡಿಗರು, ತಮಿಳರು, ತೆಲುಗರು, ಉತ್ತರ ಭಾರತೀಯ, ಹೀಗೆ ಭೇದ ಭಾವ ಮಾಡುವುದಿಲ್ಲ. ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡುತ್ತಾರೆ. ಬೆಂಗಳೂರಿನಲ್ಲಿ ವಳ್ಳುವರ್ ರ ಪ್ರತಿಮೆ ಸ್ಥಾಪಿಸಿದರೆ ಕನ್ನಡಿಗರ ಸಹಿಷ್ಣುತೆ ಮೆರೆದಂತಾಗುತ್ತದೆ.
೩. ತಮಿಳುನಾಡಿನ ಜೊತೆ, ಹೊಗೆನೇಕಲ್ ಹಾಗು ಕಾವೇರಿ ವಿವಾದ ಒಂದು ಪ್ರತಿಮೆ ನೆಡುವುದರಿಂದ ಪರಿಹಾರವಾಗುವುದೆಂದರೆ, ಎಲ್ಲರ ಒಳಿತಿಗೆ ಪ್ರತಿಷ್ಟಾಪಿಸುವುದರಲ್ಲಿ ತಪ್ಪೇನು ಕಾಣಿಸುವುದಿಲ್ಲ.
೪. ಕನ್ನಡಕ್ಕೆ ಅನ್ಯಭಾಷಿಗರಿಂದ ತಕ್ಕ ಮಟ್ಟಿಗೆ ಕೊಡುಗೆಯಿದೆ (ತಮಿಳರು ಕೂಡ ಇದರಲ್ಲಿ ಸೇರಿದ್ದಾರೆ, ಉದಾ: ಮಾಸ್ತಿ, ಟಿ.ಪಿ.ಕೈಲಾಸಂ, ಮರಾಠಿಯ ದ. ರಾ. ಬೇಂದ್ರೆ). ಹಾಗಾಗಿ ವಳ್ಳುವರ್ ಪ್ರತಿಮೆ ಬರಲಿ. ಯಾಕೆ ಬೇಡ?

ಈಗ ಬೇಡ ಎನ್ನುವವರ ವಾದ ನೋಡೋಣ.
೧. ವಳ್ಳುವರ್, ತಮಿಳಿನ ಶ್ರೇಷ್ಠ ದಾರ್ಶನಿಕನಾದರೇನಂತೆ? ಕನ್ನಡ ಅಥವಾ ಕರ್ನಾಟಕಕ್ಕೆ ಅವರ ಕೊಡುಗೆಯೇನಾದರು ಇದೆಯೇ? ಅಂದ ಮೇಲೆ ಅವರ ಪ್ರತಿಮೆಯನ್ನು ಕರ್ನಾಟಕದಲ್ಲಿ ಏಕೆ ನೆಡಬೇಕು?
೨. ಸ್ವಾಮಿ, ಕನ್ನಡಿಗರು ಸಹಿಷ್ಣುಗಳು, ಎಂದು ಕನ್ನಡಿಗರನ್ನು ತುಳಿದಿದ್ದು ಸಾಕು. ಕನ್ನಡಿಗರ ಸಹಿಷ್ಣುತೆಗೆ ಆ ಕಾಲದಿಂದಲೂ ಅನ್ಯರು ಪೆಟ್ಟು ಕೊಡುತ್ತಲೇ ಬಂದಿದ್ದಾರೆ. ಇನ್ನು ಮೇಲೆ ಹಾಗಾಗಬಾರದು. ಕನ್ನಡಿಗರು ಅತಿಯಾಗಿ ಸಹಿಷ್ಣುಗಳಾಗಿದ್ದಕ್ಕೇ ಅವರಿಗೆ ಈ ಪರಿಸ್ಥಿತಿ ಬಂದಿರುವುದು. ತಮ್ಮ ನಾಡಿನಲ್ಲಿ ತಮ್ಮ ಭಾಷೆಯನ್ನೂ ಮಾತನಾಡುವುದಕ್ಕೆ ಅಂಜುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೇನಾಗಬೇಕು? ಆದ್ದರಿಂದ ಕನ್ನಡಿಗರೇ, ಎಚ್ಚೆತ್ತುಕೊಳ್ಳಿ.
೩. ಇದು ತಮಿಳರದ್ದೆ ಕುತಂತ್ರ. ಸಮಸ್ಯೆಯ ಹಿನ್ನೆಲೆಯಲ್ಲಿ ತಮ್ಮ ಬೇಳೆಕಾಳು ಬೇಯಿಸಿಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿರುವ, ಅದರಲ್ಲೂ ಬೆಂಗಳೂರಿನಲ್ಲಿರುವ ತಮಿಳರ ಪರವಾಗಿ ಈ ರೀತಿಯಾಗಿ ತ.ನಾ ಸರಕಾರ ಹುನ್ನಾರ ಮಾಡುತ್ತಿದೆ. ಇದಕ್ಕೆ ಕರ್ನಾಟಕ ಬಲಿಯಾಗಬಾರದು.
೪. ಅನ್ಯಭಾಶಿಗರೆಂದು ಇವರು ಹೇಳುವ ಜನರು, ತಾವೆಂದು ಅನ್ಯಭಾಷಿಗರು ಎಂದು ಹೇಳಿಕೊಂಡಿಲ್ಲ. ಅವರೆಲ್ಲರೂ ತಾವು ಕನ್ನಡಿಗರೆಂದೇ ಮೆರೆದಿದ್ದಾರೆ. ಈ ರೀತಿ ಮಾತನಾಡಿ ಅವರ ಗೌರವಕ್ಕೆ ಧಕ್ಕೆ ಉಂಟುಮಾಡುತ್ತಿದ್ದೀರಿ. ಇದನ್ನು ನಿಲ್ಲಿಸಿ.
೫. ಸಮತೋಲನ ಮಾಡಲು ತಮಿಳುನಾಡಿನ ಚೆನ್ನೈ ಅಲ್ಲಿ ನಮ್ಮವನೇ ಆದ ಸರ್ವಜ್ಞ ಕವಿಯ ಪ್ರತಿಮೆಯನ್ನು ಸ್ಥಾಪಿಸುತ್ತೆವೆಂದು ಹೇಳಿ, ಅದನ್ನು ಚೆನ್ನೈ ಇಂದ ಸುಮಾರ್ ಮೈಲಿ ದೂರವಿರುವ ಯಾವುದೋ ಕೊಂಪೆಯಲ್ಲಿ ಪ್ರತಿಷ್ಠಾಪಿಸುತ್ತಿದ್ದೀರಿ. ಇದು ಎಲ್ಲಿಯ ನ್ಯಾಯ?

ಹೀಗೆ ಮುಂದುವರೆಯುತ್ತಾ ಸಾಗುತ್ತದೆ ಎರಡೂ ಕಡೆಗಿನ ಮಾತುಕತೆ.

ಈಗ ನನ್ನ ನಿಲುವಿಗೆ ಬರೋಣ.

ವೈಯಕ್ತಿಕವಾಗಿ ನನಗೆ ಆ ಪ್ರತಿಮೆಯೋಳಗಿರುವ ಎಲ್ಲಾ ಮಹಾನುಭಾವರ ಬಗ್ಗೆ ಗೌರವ ಇದ್ದೆ ಇದೆ. (ಕೆಲವರ ಬಗ್ಗೆ ಭಿನ್ನಾಭಿಪ್ರಾಯವೂ ಉಂಟು. ಇಲ್ಲಿ ಅದು ಅಪ್ರಸ್ತುತ). ನನ್ನ ನಿಲುವೇನೆಂದರೆ, ಮಹಾನುಭಾವರಿಗೆ ಪ್ರತಿಮೆ ಮಾಡಿದರೆ ಅವರಿಗೆ ಗೌರವ ಕೊಟ್ಟ ಹಾಗೆ ಎನ್ನುವುದು ಸುಳ್ಳು. ಏನೇ ಗೌರವವಿರಲಿ, ಅದು ನಿಮ್ಮ ಮನಸ್ಸಿನಲ್ಲಿರಬೇಕು. ಮನಸ್ಸಿನಲ್ಲಿ ಯಾವ ರೀತಿಯ ಗೌರವವು ಇಲ್ಲದೆ, ಬಾಹ್ಯವಾಗಿ ಈ ರೀತಿ ಪ್ರತಿಮೆಗಳಾಗಲಿ, ಸ್ಮಾರಕಗಳಾಗಲಿ ಎಷ್ಟೇ ಕಟ್ಟಿದರೂ ಏನೂ ಪ್ರಯೋಜನವಿಲ್ಲ.

ಅಲ್ಲದೇ, ಎಲ್ಲರಿಗೂ ಪ್ರತಿಮೆ ಕಟ್ಟುತ್ತಾ ಹೋದರೆ, ಅದನ್ನು ಎಲ್ಲಿ ಇಡುತ್ತೀರಿ? ಕೊನೆಗೊಂದು ದಿನ ಪ್ರತಿಮೆಗಳಿಗೆ ಜಾಗವೇ ಇರುವುದಿಲ್ಲ.

ಇನ್ನು ಕೆಲವರಿಗೆ ಪ್ರತಿಮೆಗಳು ಬೇಕು. ತಮ್ಮ ಮುಂದಿನ ಜನಾಂಗಕ್ಕೆ ಮಾದರಿಯಾಗಲಾದರೂ ಅವು ಬೇಕು ಎನ್ನುತ್ತಾರೆ. ಹೋಗಲಿ. ಹಾಗೆ ಎಂದಿಟ್ಟುಕೊಳ್ಳೋಣ. ಬೆಂಗಳೂರಿನಲ್ಲೇ, ಸರ್ವಜ್ಞನ ಪ್ರತಿಮೆ, ಯಾವ ಪ್ರಮುಖ ಜಾಗದಲ್ಲಿದೆ? ಪಂಪ, ರನ್ನ, ಜನ್ನ, ಪೊನ್ನ, ಕುಮಾರವ್ಯಾಸ ಇವರನ್ನೆಲ್ಲಾ ಎಲ್ಲಿ ಪ್ರತಿಷ್ಠಾಪಿಸಿದ್ದಾರೆ? ಹೋಗಲಿ. ಅವರೆಲ್ಲಾ ಹಳೆಯ ಕವಿಗಳಾದರು. ನಮ್ಮ ಪಂಜೆ ಮಂಗೇಶರಾಯರು, ಗೋವಿಂದ ಪೈಗಳು, ಗೊರೂರು ರಾಮಸ್ವಾಮಿ ಅಯ್ಯಂಗಾರರು, ಕುವೆಂಪು, ಬೀ. ಎಂ. ಶ್ರೀ, ದ. ರಾ. ಬೇಂದ್ರೆ, ಮಾಸ್ತಿ, ಇವರಿಗೆಲ್ಲ ಎಲ್ಲಿ ಜಾಗ ಕೊಟ್ಟಿದ್ದಾರೆ?

ಮೊದಲು ಇವರಿಗೆಲ್ಲಾ ಪ್ರತಿಮೆ ಮಾಡಿಸಿ ಆಮೇಲೆ ವಳ್ಳುವರ್, ನಾಣಯ್ಯ, ಕಬೀರ, ಇನ್ನೆಲ್ಲಾರಿಗೂ ಪ್ರತಿಮೆ ಮಾಡಿಸಲಿ. ಏನಂತೀರಾ?

Saturday, August 01, 2009

ಉಪೇಂದ್ರ ನಿರ್ದೇಶನದ ಅಭಿನಯದ ಹೊಸ ಚಿತ್ರ.

ತಡವಾಗಿ ಹೇಳ್ತಾ ಇರೋದಕ್ಕೆ ಕ್ಷಮೆ ಇರಲಿ. ನಿನ್ನೆ ಪ್ರಜಾವಾಣಿ ಕೊನೆ ಪುಟ ಓದ್ತಾ ಇದ್ದಾಗ ಇದನ್ನು ನೋಡಿ ಬಹಳನೇ ಖುಷಿ ಆಯಿತು.

ಉಪೇಂದ್ರ ತಮ್ಮ ಹೊಸ ನಿರ್ದೇಶನದ ಚಿತ್ರ ತಯಾರಿಸೋಕೆ ನಿರ್ಧಾರ ಮಾಡಿದ ಹಾಗಿದೆ. ಎಲ್ಲ ಹಳೆಯ ನಿರ್ಧಾರಗಳನ್ನು ಹುಸಿಯಾಗಿಸಿ ಒಂದು ಹೊಸ ಚಿತ್ರ ತಯಾರಿಸಲು ಮುಂದಾಗಿದ್ದಾರೆ ಎಂದು ಹೇಳಲು ಹೊಸ ಮಾಹಿತಿ ದೊರಕಿದೆ. ಪ್ರಜಾವಾಣಿಯಲ್ಲಿ ಖಾತೆ ಇಲ್ಲದವರಿಗೆ ಅದರ ನಕಲನ್ನು ನಾನು ತೆಗೆದಿದ್ದೇನೆ ಆದರೆ ಅದರ ಸಂಪೂರ್ಣ ಹಕ್ಕುಗಳು ಪ್ರಜಾವಾಣಿ ಹಾಗು ಈ ಚಿತ್ರದ ನಿರ್ಮಾಪಕರಿಗೆ ಸಲ್ಲುತ್ತದೆ.


ಈ ಹಿಂದೆ ಅವರು ನಿರ್ದೇಶನ ಮಾಡುತ್ತಿದ್ದರೆ ಎಂದು ಹೇಳುವ ೨-೩ ಸುದ್ದಿ ಗಾಂಧಿನಗರಿಯಲ್ಲಿ ಓಡಾಡುತ್ತಿತ್ತು.
೧. ತಮಸೋಮಾ ಜ್ಯೋತಿರ್ಗಮಯ, ನಾಯಕನಾಗಿ ಶಿವರಾಜ್ ಕುಮಾರ್ , ನಾಯಕಿಯಾಗಿ ಪ್ರಿಯಾಂಕ (ಉಪೇಂದ್ರ ರ ಹೆಂಡತಿ) ಅಭಿನಯಿಸುತ್ತಾರೆ ಎಂದು ಇತ್ತು.
೨. ಲಂಡನ್ ಗೌಡ, ಉಪೇಂದ್ರ ನಾಯಕರಾಗಿ ಸ್ನೇಹ ಉಳ್ಳಾಲ್ ನಾಯಕಿಯಾಗಿ ಅಭಿನಯಿಸುತ್ತಾರೆ ಎಂದು ಇತ್ತು. (ಕೋಣೆಗೆ ತಿಳಿಯಿತು, ಇದು, ಯಾವುದೋ ಹಿಂದಿ ಸಿನೆಮಾ ದ ರಿಮೇಕ್ ಎಂದು.
೩. ಇದೀಗ ನಿನ್ನೆಯಿಂದ ಚಾಲ್ತಿಯಲ್ಲಿರುವ, ಉಪೇಂದ್ರ ಅಭಿನಯದ, ಅವರದೇ ನಿರ್ದೇಶನದ ಸೂಪರ್ ಅನ್ನುವ ಚಿಹ್ನೆಯ ಚಿತ್ರ.

ನಿನ್ನೆ ಈ ಸುದ್ದಿ ಕೇಳಿ ಮಜ್ಜಿಗೆ ಕುಡಿದಷ್ಟು ಸಂತೋಷ ಆಯ್ತು. (ನಂಗೆ ಹಾಲು ಕುಡಿಯೋದು ಅಷ್ಟಕ್ಕೆ ಅಷ್ಟೆ). =)

ಈ ಮೇಲಿನ ಮೂರು ಚಿತ್ರಗಳಲ್ಲಿ ಮೂರನೆಯದು ಹೆಚ್ಚು ಪ್ರಸ್ತುತ ಎನ್ನಿಸುತ್ತದೆ. ಕಾರಣಗಳು ಇಂತಿವೆ.

೧. ಮುಖ್ಯವಾಗಿ, ಮೊದಲೆರಡೂ ಉದ್ದ ಹೆಸರಿನ ಚಿತ್ರಗಳು. ಉಪೇಂದ್ರ ತಮ್ಮ ಚಿತ್ರಗಳಿಗೆ ಚಿಕ್ಕದಾಗಿ ಚೊಕ್ಕವಾಗಿ ಹೆಸರು ಇಡುವುದು ಹಿಂದಿನಿಂದ ಬಂದ ಪದ್ಧತಿ. (ತರ್ಲೆ ನನ್ ಮಗ, ಆಪರೇಷನ್ ಅಂತ ಇದಕ್ಕೆ ಅಪವಾದ), ಬೇರೆ ಎಲ್ಲ ಸಿನಿಮಾ ತೆಗೆದುಕೊಂಡರೂ ಹೆಸರು ಕೇಳಿದ ತಕ್ಷಣ ಸಿನಿಮಾ ನೋಡುವ, ಎನ್ನಿಸುವಂಥ ಶೀರ್ಷಿಕೆಗಳು. ಕೆಲವು ಚಿತ್ರಗಳ ಹೆಸರನ್ನು ಉಚ್ಚರಿಸಲು ತಡಬಡಾಯಿಸುತ್ತಾ ಇದ್ದರು. (ಉದಾ: ಶ್!, ಸ್ವಸ್ತಿಕ್,) ಇದು ಅದೇ ಸಾಲಿಗೆ ಸೇರುವ ಶೀರ್ಷಿಕೆ.

೨. ಮೊದಲೆರಡು ಚಿತ್ರಗಳ ಯಾವುದೇ ಪೋಸ್ಟರ್ ಇದುವರೆಗೆ ಕಂಡಿಲ್ಲ. ಇದು ಸುದ್ದಿ ಮಾಡಿದ್ದೆ ಪೋಸ್ಟರ್ನಿಂದ. ಅದಕ್ಕೆ ಇದು ಅತಿ ಶೀಘ್ರದಲ್ಲಿ ಸೆಟ್ಟೇರಲಿರುವ ಚಿತ್ರ ಎಂದು ನನ್ನ ಅಂಬೋಣ.

೩. ಚಿತ್ರದ ಪೋಸ್ತೆರಿನಲ್ಲೂ ಸುಮಾರು ವಿಶೇಷಗಳು ಇರುತ್ತವೆ. ಇದರಲ್ಲೂ ಅಂತ ಟಿಪಿಕಲ್ ಉಪೇಂದ್ರ ರ ವಿಶೇಷತೆಯನ್ನು ನಾವು ಕಾಣಬಹುದು.

ಇದು ಇನ್ನು ಹಲವು ಭಾಷೆಗಳಲ್ಲಿ ತೆರೆ ಕಂಡರೂ , ಇದು ಕನ್ನಡ ಸಿನಿಮಾ, ಕನ್ನಡಿಗನ ಸಿನಿಮಾ, ಕನ್ನಡಿಗರ ಸಿನಿಮಾ ಅನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ಅದಕ್ಕೆ ಇದು ಪಕ್ಕಾ ಉಪೇಂದ್ರರ ಚಿತ್ರ ಎಂದು ಖಚಿತ ಪಡಿಸಿಕೊಳ್ಳುತ್ತ, ಈ ಚಿತ್ರ ಸೆಟ್ಟೇರಿ, ಬಿಡುಗಡೆ ಆಗಿ ಶತದಿನೋತ್ಸವ ಆಚರಿಸಲಿ ಎಂದು ಕೋರುತ್ತ ಈ ಅಂಕಣವನ್ನು ಮುಗಿಸುತ್ತೇನೆ.

Wednesday, July 15, 2009

ಕನ್ನಿಂಗ್ ಹ್ಯಾಮ್ ರಸ್ತೆ ಹಾಗು ಕನ್ನಡ ಪ್ರೇಮ.

ನಾಡಿನ ಭಾಷೆ ಮಾತನಾಡುವ ಕನ್ನಿಂಗ್ ಹ್ಯಾಮ್ ರಸ್ತೆಗೆ ಹೋಗಿದ್ದೆ. ರಿಲಯನ್ಸ್ ಟೈಮ್ ಔಟ್ ಅಲ್ಲಿ ಕೆಲವು ಮೊಬೈಲ್ ಫೋನುಗಳನ್ನು ನೋಡೋಣ ಏನು ಹೋಗಿದ್ದು. ಅಲ್ಲಿಂದ ವಾಪಸ್ ಬರುತ್ತಾ ಈ ಫಲಕ ನೋಡಿ ಮಾರು ಹೋದೆ.


ಇನ್ನೊಮ್ಮೆ ಅದನ್ನು ಬರೆಯುವಾಸೆ.

ಎನಿತು ಇನಿದು ಕನ್ನಡ ನುಡಿಯು
ಮನವನು ತಣಿಸುವ ಮೋಹದ ಸುಧೆಯು

ಆದರೆ ಇದನ್ನು ನೋಡಿ ಎಷ್ಟು ಖುಷಿಯಾಯಿತೋ ಅಷ್ಟೆ ದುಃಖವೂ ಆಯಿತು. ಕಾರಣ ನಿಮಗೆ ತಿಳಿಯದಿದ್ದುದೇನಲ್ಲ. ಈ ಫಲಕ ನೆಟ್ಟು ಎಷ್ಟು ದಿನ, ತಿಂಗಳು ಅಥವಾ ವರ್ಷವಾಯಿತೋ ಗೊತ್ತಿಲ್ಲ ಆದರೆ ನಾನು ನೋಡಿದ್ದು ಅದೇ ಮೊದಲು. ಈ ಫಲಕದ ಮೇಲೆ ರಾರಾಜಿಸುತ್ತಿರುವ ಕನ್ನಡ ಪ್ರೀತಿ ಆ ರಸ್ತೆಯಲ್ಲಿ ಎಲ್ಲೂ ನನಗೆ ಕಾಣಬರುವುದಿಲ್ಲ. ಅಲ್ಲಿರುವ ಸಿಗ್ಮಾ ಮಾಲ್ ಆಗಲೀ, ರಿಲಯನ್ಸ್ ಟೈಮ್ ಔಟ್ ಆಗಲೀ, Wockhardt ಹೃದಯಾಲಯವಾಗಲಿ ಅಥವಾ ಯಾವುದೇ ಅಂಗಡಿ, ಮುಂಗತ್ತುಗಳನ್ನ ತೆಗೆದುಕೊಳ್ಳಿ ಎಲ್ಲಿಯೂ ಕನ್ನಡವನ್ನು ಸ್ವ-ಇಚ್ಛೆಯಿಂದ ಮಾತನಾಡಿದ್ದು ನಾನು ಕಂಡಿಲ್ಲ. ಸರಿ ಸುಮಾರ್ ೬೦ ಪ್ರತಿಶತ ಅಂಗಡಿಗಳ ಫಲಕಗಳ ಮೇಲೆಯಷ್ಟೇ ಕನ್ನಡವನ್ನು ನೋಡಬಹುದಷ್ಟೇ ವಿನಃ ಒಳಗೆ ಹೋಗಿ ಕನ್ನಡ ಮಾತನಾಡಿದರೆ ಯಾವುದೋ ಬೇರೆಯ ಲೋಕದಿಂದ ಬಂದ ವಿಚಿತ್ರ ಪ್ರಾಣಿಯನ್ನು ನೋಡುವಂತೆ ನೋಡುತ್ತಾರೆ ಜನರು. ಜನ ಯಾಕ್ ಹೀಗ್ ಮಾಡ್ತಾರೆ ಅಂತ ನನಗೆ ಇದುವರೆಗೂ ತಿಳಿದಿಲ್ಲ. ಒಮ್ಮೆ ಸುಶೀಮನ ಜೊತೆ ಅವನ ಮೊಬೈಲ್ ರೆಪೇರಿಗೆ ಕೊಡಲು ಹೋದಾಗ ನಾವು ಕನ್ನಡ ಮಾತನಾಡಿದ್ದಕ್ಕೆ ಅವರು ಹಾಗೆ ಒಮ್ಮೆ ನೋಡಿ ನಮ್ಮ ಬಳಿ ಕನ್ನಡವನ್ನೇನೋ ಮಾತನಾಡಿದರು. ಆದರೆ ಅವರವರ ಒಳಗೆ ತಮಿಳು ಮಾತನ್ನದಿದ್ದು ನೋಡಿ ನನಗೆ ಅಸಹ್ಯವೆನಿಸಿತು.

ಎಲ್ಲೇ ಹೋಗಲಿ, ಇಂಗ್ಲಿಷ್ ಅಲ್ಲೇ ಮಾತನಾಡಿಸುವ ಈ ಮಂದಿಗೆ ಈ ನಾಡಿನ ಭಾಷೆ ಮಾತನಾಡುವ ಬುದ್ಧಿ ಬರಲಿ ಎಂದು ಹಾರಿಸುತ್ತ ಈ ಅಂಕಣವನ್ನು ಮುಗಿಸುತ್ತೇನೆ.

Saturday, June 06, 2009

ಸಂಸ್ಕೃತ ವೇದ ವಿಶ್ವವಿದ್ಯಾಲಯ ಏಕೆ ಬೇಡ?

ನಮ್ಮ ಕರ್ನಾಟಕ ಸರಕಾರ ರಾಜ್ಯದಲ್ಲಿ ಒಂದು ಸಂಸ್ಕೃತ ವೇದ ವಿಶ್ವವಿದ್ಯಾಲಯ ತೆರೆಯಬೇಕೆಂಬ ನಿರ್ಧಾರ ಕೈಗೊಂಡಿದೆ. ನಿಜಕ್ಕೂ ವೈಯ್ಯಕ್ತಿಕವಾಗಿ ನನಗೆ ಈ ನಿರ್ಧಾರ ಸಂತಸ ತಂದಿದೆ.

ಇನ್ನೂ ಹೆಚ್ಚಿನ ಆನಂದ ಎಂದರೆ ನಮ್ಮ ರಾಜ್ಯಪಾಲರು ಇದಕ್ಕೆ ತಮ್ಮ ಅನುಮೋದನೆ ಕೊಟ್ಟಿದ್ದಾರೆ.

ಆದರೆ ನಮ್ಮ ಕೆಲ ಬಂಡಾಯ ಸಾಹಿತಿಗಳು ಇದಾಗುವುದು ಬೇಡ ಎಂದು ತಕರಾರು ಎತ್ತಿದ್ದಾರೆ. ಅವರ ನಿಲುವೇ ನನಗೆ ಅಷ್ಟಾಗಿ ಅರ್ಥವಾಗುತ್ತಿಲ್ಲ.

ಪ್ರಜಾವಾಣಿಯಲ್ಲಿ ಒಂದು ವಾರದ ಹಿಂದೆ ಪ್ರಕಟವಾದ ಡಾ|| ಚಂದ್ರಶೇಖರ ಕಂಬಾರ ರ ಲೇಖನ ಓದಿ ಜನ ಯಾಕೆ ಈ ರೀತಿ ಯೋಚಿಸುತ್ತಾರೆ ಎಂದು ಖೇದವಾಯಿತು. ಇದನ್ನೇ ಅವರ ಹಲವಾರು ಮಿತ್ರರೂ (ಜೀಎಸ್ಸ್ಎಸ್ಸ್, ಚೆನ್ನವೀರ ಕಣವಿ, ಎಂ ಎಂ ಕಲ್ಬುರ್ಗಿ, ಕೆ. ಎಸ್. ಭಗವಾನ್, ಹಂ. ಪಾ. ನಾಗರಾಜಯ್ಯ, ಇನ್ನೂ ಹಲವರು...) ಇಂದಿನ ಪ್ರಜಾವಾಣಿಯ ಕಂತಿನಲ್ಲಿ ಪ್ರತಿಧ್ವನಿಸಿದ್ದಾರೆ. ಈ ಬಂಡಾಯ ಸಾಹಿತಿಗಳು ಎತ್ತುವ ಮಾತುಗಳೇನೆಂದರೆ:

೧. ಕನ್ನಡಕ್ಕೆ ಕಳೆದ ವರ್ಷವಷ್ಟೇ ಶಾಸ್ತ್ರೀಯ ಭಾಷೆಯ ಸ್ಥಾನ ದೊರೆತಿದೆ. ಕನ್ನಡ ಪರ ಕೆಲಸ ಮಾಡುವುದು ಬಿಟ್ಟು ಸಂಸ್ಕೃತದ ಉದ್ಧಾರದಲ್ಲಿ ಸರಕಾರ ತೊಡಗಿದೆ.

೨. ಸಂಸ್ಕೃತ ಸತ್ತ ಭಾಷೆ. ಅದರ ಅಧ್ಯಯನ ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ. ಸರಕಾರ ಜನರ ದುಡ್ಡು ಪೋಲು ಮಾಡುತ್ತಿದೆ.

೩. ಸಂಸ್ಕೃತ ಬರೀ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾದ ಭಾಷೆ. ಸರ್ಕಾರ ಆ ಸಮುದಾಯಕ್ಕೆ ಪುಷ್ಟಿ ಕೊಡಲು ಈ ರೀತಿ ಮಾಡುತ್ತಿದೆ.

೪.ನಮ್ಮ ಭಾಷೆಯ ಅಕ್ಕ ತಂಗಿಯರಾದ ತುಳು, ಕೊಂಕಣಿಗಳನ್ನು ಉದ್ಧಾರ ಮಾಡುವ ಬದಲು ಈ ನಿರ್ಧಾರವೆಕೆ ತೆಗೆದುಕೊಂಡಿತು?

೫. ಕೆಲವರು ಲ್ಯಾಟಿನ್, ಉರ್ದು, ಪಾಳಿ, ಎಲ್ಲದಕ್ಕೂ ಒಂದೊಂದು ಅಥವಾ ಎಲ್ಲವನ್ನೂ ಒಗ್ಗೂಡಿಸಿ ಒಂದು ಮಿಶ್ರ ವಿಶ್ವವಿದ್ಯಾಲಯ ತೆರೆಯಬೇಕೆಂದು ಆಗ್ರಹಿಸಿದ್ದಾರೆ.

೬. ಭಾರತದಲ್ಲಿ ಈಗಾಗಲೇ ೧೨ ಸಂಸ್ಕೃತ ವಿಶ್ವವಿದ್ಯಾಲಯ ತೆರೆಯಲಾಗಿದೆ. ಇನ್ನೊಂದು ಬೇಕಿತ್ತೆ?

೭. ಬರಿಯ ಸಂಸ್ಕೃತ ವಿಶ್ವವಿದ್ಯಾಲಯ ಮಾಡದೆ ಅದಕ್ಕೆ ವೇದದ ಅಡಿಪತ್ತಿ ಕೊಟ್ಟಿರುವುದು ಎಷ್ಟರ ಮಟ್ಟಿಗೆ ಸರಿ?

ಇನ್ನೂ ಹಲವು ಅಂಶಗಳು ಇವೆ. ಇವು ಮುಖ್ಯವಾದವು.

ಇವನ್ನು ಒಂದೊಂದಾಗಿ ತೆಗೆದುಕೊಳ್ಳೋಣ.

ಮೊದಲನೆಯದು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ದೊರಕಿದೆ. ಅದರ ಪರವಾಗಿ ಕೆಲಸ ಮಾಡುವುದು ಬಿಟ್ಟು ಸಂಸ್ಕೃತದ ಅಡಿಯಾಳಾಗಬೇಕಾ? ಯಾಕೆ ಈ ರೀತಿ ಯೋಚಿಸುತ್ತೀರಾ? ಕನ್ನಡ ದ್ರಾವಿಡ ಭಾಷೆಯಾದರೂ ಸಂಸ್ಕೃತದಿಂದ ಅದು ಪಡೆದಿರುವ ಸಂಪತ್ತು ಅಮೂಲ್ಯ. ಅದನ್ನು ಎರವಲು ಎಂದುಕೊಂಡರೆ ಅದು ನಿಮ್ಮ ತಪ್ಪು. ಕನ್ನಡ ಸ್ವತಂತ್ರ ಭಾಷೆ ಎಂದು ನಾನೂ ಒಪ್ಪುತ್ತೇನೆ ಹಾಗು ಪ್ರತಿಪಾದಿಸುತ್ತೇನೆ, ಆದರೆ ಸಂಸ್ಕೃತದಿಂದ ಅದು ಸಾಕಷ್ಟು ಪ್ರೇರಿತವಾಗಿದೆ ಎಂದೂ ನಾನು ಮಾತ್ರ ಅಲ್ಲ, ಎಲ್ಲ ಕನ್ನಡಾಭಿಮಾನಿಯೂ ಒಪ್ಪಲೇಬೇಕಾದ ಮಾತು. ಸಂಸ್ಕೃತ ಭಾರತೀಯ ಭಾಷೆಗಳ ತಾಯಿ. ಅದರಿಂದ ಪ್ರೇರಿತರಾಗದ ಭಾಷೆಯೇ ಇಲ್ಲ. ಭಾಷೆಯ ಬೆಳವಣಿಗೆಯ ರೀತಿಯೇ ಹಾಗೆ. ಈ ಸರಕಾರ ಕನ್ನಡ ಪರ ಕೆಲಸ ಮಾದುತ್ತಿಲ್ಲವೆನ್ದಾದಲ್ಲಿ ಅದನ್ನು ಖಂಡಿಸಬೇಕೆ ಹೊರತು ಇದು ಸಂಸ್ಕೃತ ವೇದ ವಿ. ವಿ.ಯೊಂದನ್ನು ತರುತ್ತಿದೆ ಎಂದರೆ ಅದಕ್ಕೆ ಅಡ್ಡಿ ಮಾಡುವುದು ಕನ್ನಡತನವಲ್ಲ.

ಎರಡನೆಯದಾಗಿ, ಸಂಸ್ಕೃತ ಸತ್ತ ಭಾಷೆ. ಅದರ ಅಧ್ಯಯನದಲ್ಲಿ ಯಾವುದೇ ಉಪಯೋಗವಿಲ್ಲ. ಜನರ ಹಣ ಸರ್ಕಾರ ಪೋಲು ಮಾಡುತ್ತಿದೆ. ಸಂಸ್ಕೃತ ಸತ್ತದ್ದೇ ಆದರೆ, ಸಾಯಿಸಿದ್ದು ಯಾರು? ಅದನ್ನು ಮಾತನಾಡದ ನಾವು. ಯಾವುದೋ ಒಂದು ಶ್ಲೋಕದಲ್ಲಿ ಸಂಸ್ಕೃತವನ್ನು ಸರಿಯಾಗಿ ಉಚ್ಚಾರ ಮಾಡದಿದ್ದರೆ ಅವನು ನರಕಕ್ಕೆ ಹೋಗುತ್ತಾನೆ ಎನ್ನುವ ಮಾತನ್ನು ಕಟ್ಟಿಕೊಂಡು ಸಾಮಾನ್ಯರು ಅದನ್ನು ಸರಳಗೊಳಿಸಿ ಪ್ರಾಕೃತ ಎಂದರು. ಅದನ್ನೇ ಸ್ವಲ್ಪ ಬದಲಾಯಿಸಿ ಪಾಳಿ ಮಾಡಿದರು. ಹೀಗೆ ಸಂಸ್ಕೃತ ಹಲವು ಕವಲು ಒಡೆದು ಹಲವು ಭಾಷೆಗೆ ದಾರಿ ಮಾಡಿಕೊಟ್ಟಿತು. ಆ ಶ್ಲೋಕದ ಭಾವ, ಉಚ್ಚಾರ ಸರಿಯಾಗಿರಬೇಕು ಎಂದು ಸಾರುವುದಿತ್ತೇ ಹೊರತು ನರಕಕ್ಕೆ ಹೋಗುವುದಲ್ಲ. ಸಾಮನ್ಯ ಜನರು ಇದನ್ನೇ ತಪ್ಪಾಗಿ ತಿಳಿದು ಅದನ್ನು ಉಪಯೋಗಕ್ಕೆ ಬಾರದ ಭಾಷೆಯನ್ನಾಗಿ ಮಾಡಿಬಿಟ್ಟರು. ಸಂಸ್ಕೃತ ಸತ್ತ ಭಾಷೆಯಾದರೆ, ನಮ್ಮದೇ ಕರ್ನಾಟಕದಲ್ಲಿ ಇರುವ ಮತ್ತೂರಿನಲ್ಲಿ ಮಾತನಾಡುವ ಭಾಷೆಗೆ ಏನೆಂದು ಹೇಳುತ್ತಾರೆ?

ಸಂಸ್ಕೃತದ ಅಧ್ಯಯನದಲ್ಲಿ ಯಾವುದೇ ಉಪಯೋಗವಿಲ್ಲ ಎನ್ನುವವರು, ಸಂಸೃತವನ್ನು ಮೇಲ್ಪದರದ ಮಟ್ಟಿಗಾದರೂ ತಿಳಿದು ಈ ಮಾತನ್ನಾಡಿದ್ದಾರೆ ಎಂದು ಅನ್ನಿಸುವುದಿಲ್ಲ. ಸಂಸ್ಕೃತದಷ್ಟು ವ್ಯಾಕರಣಬದ್ಧವಾದ ಭಾಷೆ ಈ ಭೂಮಿ ಮೇಲೆ ಇನ್ನೊಂದಿಲ್ಲ. ಅದರ ಒಂದೊಂದು ಪದವೂ ಅರ್ಥಬದ್ಧ, ಪ್ರಮಾಣಬದ್ಧ. ಇಂಗ್ಲೀಷಿನಲ್ಲಿ ನೀವು ಹೇಳುವ ಹಾಗೆ 'Completely Etymological'. ಇದನ್ನು ನೀವು ಯಾವುದೇ ಶಾಸ್ತ್ರಜ್ಞರೊಂದಿಗೆ ಚರ್ಚಿಸಬಹುದು. ಅದರ ಪ್ರತಿಯೊಂದು ಧಾತುವೂ ಪ್ರಮಾಣಬದ್ಧ. ಅದನ್ನು ಕಲಿಯುವುದೂ ಒಂದು ಕಲೆ. ತಿಳಿಯದೆ, ನಮ್ಮದೇ ಭಾಷೆಗೆ ಈ ರೀತಿ ಅಪಮಾನ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಜನರ ತೆರಿಗೆ ಹಣ ಸರ್ಕಾರ ವ್ಯರ್ಥ ಮಾಡುತ್ತಿದೆ ಎನ್ನುವ ಇವರು, ನಮ್ಮ ರಾಜಕಾರಣಿಗಳು ಪೋಲು ಮಾಡುತ್ತಿರುವ ಕೋಟ್ಯಾಂತರ ರುಪಾಯಿಗಳನ್ನು ನೋಡಿಲ್ಲವೇನು? ಅದಕ್ಕೆ ಬಾಯಿ ಮುಚ್ಚಿಕೊಂಡು ಹೇಗೆ ಸುಮ್ಮನಿದ್ದಾರೆ ಇವರು?

ಮೂರನೆಯದಾಗಿ, ಸಂಸ್ಕೃತ ಬರೀ ಒಂದು ಸಮುದಾಯದ ಭಾಷೆ. ಆ ಸಮುದಾಯಕ್ಕೆ ಪುಷ್ಟಿ ಕೊಡಲು ಸರ್ಕಾರ ಈ ರೀತಿಯ ನಿಲುವನ್ನು ತೆಗೆದುಕೊಂಡಿದೆ ಎನ್ನುವ ಮಾತು. ನೇರವಾಗಿ ಬ್ರಾಹ್ಮಣರ ಭಾಷೆಯೇನ್ನಲೂ ಹಿಂಜರಿಯುವ ಇವರನ್ನು ಏನೆನ್ನಬೇಕು? ಅದನ್ನು ಬರಿಯ ಬ್ರಾಹ್ಮಣರ ಭಾಷೆಯನ್ನಾಗಿ ಮಾಡಿದವರು ಯಾರು? ಅದನ್ನು ಉಪಯೋಗಿಸದೆ ಬಿಟ್ಟ (ಅವರೇ ಹೇಳಿಕೊಳ್ಳುವಂತೆ, ಇತರ ಸಮುದಾಯದವರು). ಬ್ರಾಹ್ಮಣರೇನಾದರು ಇವರಿಗೆ ಸಂಸ್ಕೃತ ಉಪಯೋಗಿಸಬೇಡಿ ಎಂದಿದ್ದರೆ? ವೇದ ಉಪನಿಷತ್ತು ಏಕೆ? ರಾಮಾಯಣ ಬರೆದಿದ್ದು ಪೂರ್ವಾಶ್ರಮದಲ್ಲಿ ಶೂದ್ರನಾಗಿದ್ದ (ಬೇಡ) ವಾಲ್ಮಿಕಿಯಲ್ಲವೇ? ರಾಜರೆಲ್ಲರೂ ಸಂಸ್ಕೃತವನ್ನು ಮಾತನಾಡುತ್ತಲಿರಲಿಲ್ಲವೇ? ಮೊದಲೇ ಹೇಳಿದ ಒಂದು ಶ್ಲೋಕದ ಅಪಾರ್ಥದಿಂದ ಸಂಸ್ಕೃತ ಮಾತನಾಡದಿದ್ದರೆ ಅದು ಬ್ರಾಹ್ಮಣರ ತಪ್ಪೇ? ನಾನೇ ವರ್ಣಾಶ್ರಮ ಧರ್ಮದ ಬಗ್ಗೆ ಬರೆದಿರುವ ಅಂಕಣವನ್ನು ತಾವು ಓದಬೇಕೆಂದು ಕೋರುತ್ತೇನೆ. ಅದರ ಎರಡನೆಯ ಭಾಗವು ಇಲ್ಲಿದೆ. ಅದರ ಬಗ್ಗೆ ಇನ್ನೂ ಹಲವು ವಿಚಾರಗಳು ಬರೆಯುವುದಿದೆ. ವರ್ಣಾಶ್ರಮ ಧರ್ಮ ತಪ್ಪು ಎನ್ನುವ ಇವರು, ಈಗ ಪಾಲಿಸುತ್ತಿರುವುದು ಇವರು ಜರಿಯುತ್ತಿದ್ದ ವರ್ಣಾಶ್ರಮವಲ್ಲದೆ ಮತ್ತಿನೇನು? ಅವರು ಹೇಳುವಂತೆ ಮೊದಲು ಬ್ರಾಹ್ಮಣರಿಗೆ ಪ್ರಾಧಾನ್ಯ ಕೊಡುತ್ತಿದ್ದರೆ, ಈಗ ಪರಿಶಿಷ್ಟ ಜಾತಿ ಹಾಗು ಪಂಗಡಗಳಿಗೆ ಮಾನ್ಯತೆ ಸಿಗುತ್ತಿಲ್ಲವೇನು? ಇದರಿಂದ ಏನು ಸಾಧಿಸಿದಂತಾಗುತ್ತದೆ? ಚಕ್ರ ತಿರುಗುತ್ತದೆ. ನಾಳೆ ಇದೇ ವ್ಯವಸ್ಥೆ ಇದ್ದರೆ ಬ್ರಾಹ್ಮಣರು ಇವರು ತಿಳಿದುಕೊಂಡ ರೀತಿಯಲ್ಲಿ ಮೇಲೆ ಬರುವುದರಲ್ಲೂ ಯಾವ ಸಂಶಯವೂ ಇಲ್ಲ. ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡುವ ಬದಲು ಸಮಾಜದ ಯಾವುದೇ ಸಮುದಾಯಕ್ಕೆ ವಿಶೇಷ ಅನುದಾನ ನೀಡಿದರೆ ಆಗುವುದೇ ಹೀಗೆ. ಇದರ ಬಗ್ಗೆ ಇನ್ನೊಂದು ಅಂಕಣದಲ್ಲಿ ಬರೆಯೋಣ. ಇವರು ಏನೇ ಮಾಡಿದರೂ ವರ್ಣಾಶ್ರಮ ಧರ್ಮವನ್ನು ಅಲ್ಲಗಳೆಯಲು ಯಾರಿಂದಲೂ ಸಾಧ್ಯವಿಲ್ಲ (ಹೇಗೆ ಎಂದು ಹೇಳುವುದಕ್ಕೆ ಇನ್ನೊಂದು ಅಂಕಣ ಮೀಸಲು). ಈ ರೀತಿ ಸಂಸ್ಕೃತ ಒಂದು ಪಂಗಡದ ಭಾಷೆ ಎನ್ನುವವರು ತಮ್ಮ ಮೇಲೆ ತಾವೇ ಕೆಸರು ಎರಚಿಕೊಳ್ಳುವವರು ಎನ್ನೋಣವೇ?

ನಾಲ್ಕನೆಯದಾಗಿ ನಮ್ಮ ಇತರ ಭಾಷೆಗಳ ಬಗ್ಗೆ. ಅವನ್ನೂ ಉಧ್ಧಾರ ಮಾಡಲಿ. ನಾವೇನು ಬೇಡ ಎನ್ನುತ್ತೆವೆಯೇ?ಅದರ ಜೊತೆ ಸಂಸ್ಕೃತದಂತಹ ಉಚ್ಚ ಭಾಷೆಯನ್ನೂ ಕಲಿತರೆ ಯಾವ ನಷ್ಟ ಒದಗೀತು?

ಕೆಲವು ಬುದ್ಧಿಜೀವಿಗಳು, ಐದನೇ ಮಾತನ್ನು ಕೇಳುತ್ತಾರೆ. ಅವರಿಗೆ ನಮ್ಮ ಭಾಷೆಯಾವುದೂ ಬೇಡ. ಅವರಿಗೆ ಲ್ಯಾಟಿನ್, ಇಂಗ್ಲಿಷ್, ಉರ್ದು ಎರವಲು ಭಾಷೆಗಳೇ ಪ್ರಾತಃಸ್ಮರಣೀಯ. ಈ ಮಾತಿಗೆ ನಿರ್ಧಾರ ನಿಮಗೇ ಬಿಟ್ಟದ್ದು. ನಾನು ಇನ್ನ್ನು ಹೆಚ್ಚು ವಿಸ್ತಾರವಾಗಿ ಹೇಳಲಾರೆ.

ಆರನೆಯದಾಗಿ ಇನ್ನೊಂದು ಸಂಸ್ಕೃತ ವಿ.ವಿ ಬೇಕಿತ್ತೆ ಎನ್ನುವ ವಿಚಾರ. ಇದ್ದರೆ ತಪ್ಪೇನು? ಕರ್ನಾಟಕದಲ್ಲಿರುವ ಸಂಸ್ಕೃತ ಆಸಕ್ತರು, ಅಧ್ಯಯನಕ್ಕಾಗಿ ಹೊರಗೆಲ್ಲೂ ಓದುವ ಬದಲು ಇಲ್ಲೇ ಓದಲಿ ಎನ್ನುವುದು ಸರ್ಕಾರದ ಅಂಬೋಣ. ತರಕಾರಿಗೆ ಪರವೂರಿಗೆ ಹೋಗುವ ಬದಲು ನಮ್ಮ ಊರಿನಲ್ಲೇ ಒಂದು ಅಂಗಡಿ ಇದ್ದರೆ ಎಷ್ಟು ಚೆನ್ನ ಅಲ್ಲವೇ?

ಕೊನೆಯದಾಗಿ, ಈ ವಿ.ವಿ ಗೆ ವೇದದ ಅಡಿಪಟ್ಟಿ ಬೇಕಿತ್ತೆ ಎಂಬುದು. ಅಲ್ಲ್ರಿ? ಕನ್ನಡ ಅಧ್ಯಯನ ಮಾಡಲು ಕವಿರಾಜಮಾರ್ಗ ಬೇಡ ಎಂದ ಹಾಗಾಯಿತು ಇವರ ವಾದ. ಸಂಸ್ಕೃತದ ವ್ಯಾಕರಣ, ಛಂದಸ್ಸು , ಅಲಂಕಾರ ಎಲ್ಲವೂ ವೇದೊಪನಿಶತ್ತುಗಳಲ್ಲಿ ಇರುವಾಗ, ಬೇರೆ ಏನು ಇಡಬೇಕು? ಸಂಸ್ಕೃತದ ಜೊತೆಗೆ ವೇದವನ್ನೂ ಓದಲಿ ಎನ್ನುವ ಅಂಬೋಣವನ್ನು ಏಕೆ ತಳ್ಳಿಹಾಕಬೇಕು?ವಾದದಲ್ಲಿ ಅಡಗಿರುವ ಸನಾತನ ಸತ್ಯಗಳ ಅನ್ವೇಷಣೆಯನ್ನು ಇದರ ಮೂಲಕ ಏಕೆ ಸಾಧಿಸಬಾರದು? ನಮ್ಮ ನೆಲದಲ್ಲಿ ಹುಟ್ಟಿ ಬೆಳೆದ ನಮ್ಮದೇ ಸಂಸ್ಕೃತಿಯನ್ನು ನಾವು ಉದ್ಧಾರ ಮಾಡದೆ ಇನ್ನ್ಯಾರು ಮಾಡಿಯಾರು? ನಮ್ಮ ವೇದಗಳನ್ನು ಹೊರಗಿನ ಜನ ಈ ೫ ದಶಕಗಳಲ್ಲಿ ನಮಗಿಂತ ಹೆಚ್ಚಾಗಿ ಅಧ್ಯಯನ ಮಾಡುವುದು, ನಮಗೆ ನಾಚಿಕೇಡಲ್ಲವೇ? ಸಂಸ್ಕೃತ ವಿ. ವಿ. ಬೇಡ ಎನ್ನುವವರು ಈ ಮಾತನ್ನು ಸ್ವಲ್ಪ ಯೋಚಿಸಬೇಕು. ನಮ್ಮ ಸಂಸ್ಕೃತಿಯಲ್ಲಿರುವಷ್ಟು ಪಾರಮಾರ್ಥಿಕ ಸತ್ಯಗಳು ಬೇರೆ ಯಾವ ಸಂಸ್ಕೃತಿಯಲ್ಲೂ ಸಿಗುವುದಿಲ್ಲವೆನ್ನುವುದು ಉತ್ಪ್ರೇಕ್ಷೆಯಲ್ಲ. (ನಮ್ಮ ಬುದ್ಧಿಜೀವಿಗಳಿಗೆ ಇದು ಉತ್ಪ್ರೇಕ್ಷೆಯಾಗಬಹುದು, ನಾವು ಅದಕ್ಕೇನೂ ಮಾಡಲಾಗುವುದಿಲ್ಲ. ಗೋರ್ಕಲ್ಲ ಮೇಲೆ ಮಳೆ ಸುರಿದಂತೆ.)

ಇಷ್ಟೆಲ್ಲಾ ಮಾತನಾಡುವ ಈ ಬಂಡಾಯ ಸಾಹಿತಿಗಳು, ವೇದ ಉಪನಿಷತ್ತುಗಳ ಕನ್ನಡ ಅವತರಣಿಕೆಗಳನ್ನು ಯಥಾವಥ್ಥ್ ಉಧ್ಧರಿಸಿದ್ದಾರೆಯೇ? ಇಲ್ಲ? ಮಾಡುವ ಕೆಲಸ ಬಹಳವಿದ್ದರೂ, ಈ ರೀತಿ ಟೀಕೆ ಮಾಡುವರೇ ವಿನಃ, ಅದಕ್ಕಾಗಿ ಏನು ಮಾಡಬಹುದು ಎಂದು ಯೋಚಿಸುವವರು ಬಹಳ ಕಡಿಮೆ. ಸ್ವಲ್ಪ ನಾನು ಹೇಳಿರೋ ಮಾತುಗಳನ್ನು ವಿಶ್ಲೇಷಿಸಿ ನೋಡಿ.

ನಾನೇನು ಕನ್ನಡ ವಿರೋಧಿಯಲ್ಲ. ನಾನು ಕನ್ನಡಪರನೇ. ಆದರೆ ಕನ್ನಡ ಪರರೆಂದು ಹೇಳಿಕೊಳ್ಳುವ ಈ ಬಂಡಾಯ ಸಾಹಿತಿಗಳ ಸಂಸ್ಕೃತ ದ್ವೇಷ ಸಲ್ಲದೆನ್ನುವುದು ನನ್ನ ಧೋರಣೆ.

ತಮಗೆ ನಾನು ಉದ್ಧರಿಸಿರುವ ಯಾವುದೇ ಮಾತು ಸರಿಯಿಲ್ಲವೆನ್ನಿಸಿದರೆ ದಯಮಾಡಿ ಸೂಚಿಸಿ. ಸರಿಯಾದಲ್ಲಿ ತಿದ್ದಿಕೊಳ್ಳುತ್ತೇನೆ. ತಪ್ಪಾದಲ್ಲಿ ನನ್ನ ನಿಲುವನ್ನು ಸಮರ್ಥಿಸುತ್ತೇನೆ. ಚರ್ಚೆ ನಡೆಯಲಿ.

Monday, April 13, 2009

ಉಪೇಂದ್ರ ನಿರ್ದೇಶನದ ಹೊಸ ಚಿತ್ರ : ಲಂಡನ್ ಗೌಡ

ಉಪೇಂದ್ರ ಅವರು 'ತಮಸೋಮಾ ಜ್ಯೋತಿರ್ಗಮಯ' ಅನ್ನೋ ಚಿತ್ರ ನಿರ್ದೇಶಿಸುತ್ತಿದ್ದಾರೆ ಅಂತ ವರ್ಷದ ಹಿಂದೆ ಒಂದು ಸುದ್ದಿ ಬಂದಿತ್ತು. ಗಾಳಿಸುದ್ದಿಗಳು ಬಹು ಬೇಗ ಹರಡಿತ್ತು. ಒಮ್ಮೆ ಆ ಚಿತ್ರದಲ್ಲಿ ಉಪೇಂದ್ರ ದಂಪತಿಗಳು ಅಭಿನಯಿಸುತ್ತಾರೆ ಅಂತ ಇದ್ದರೆ, ಇನ್ನೊಮ್ಮೆ ಆ ಚಿತ್ರದ ನಾಯಕ ಶಿವರಾಜಕುಮಾರ್ ಅಂತ ಇತ್ತು.

ಇವೆಲ್ಲ ಸುದ್ದಿ ಆದಮೇಲೆ ಈಗ, ಒಂದು ವಾರದ ಹಿಂದೆ ತಾಜಾ ಸುದ್ದಿಯೊಂದು ಬಂದಿದೆ. ಅದೇನೆಂದರೆ, ಉಪೇಂದ್ರ ತಮ್ಮದೇ ನಿರ್ದೇಶನದಲ್ಲಿ ೧೦ ವರ್ಷಕ್ಕೂ ಮೇಲ್ಪಟ್ಟು ಒಂದು ಸಿನೆಮ ಮಾಡುತ್ತಿದ್ದರೆ. ಅದರ ಹೆಸರು ಲಂಡನ್ ಗೌಡ ಎಂದು. ನಾಯಕ ಅವರೇ, ನಾಯಕಿ ಕನ್ನಡದವರೇ ಆದ ಸ್ನೇಹ ಉಳ್ಳಾಲ್ ಎಂದು.

ಕೆಲವರು ಉಪೇಂದ್ರ ಈ ಚಿತ್ರ ನಿರ್ದೇಶನ ಮಾಡುವುದಿಲ್ಲ ಅಂದರೆ, ಇನ್ನು ಕೆಲವರು ಅವರು ಮಾಡುತ್ತಾರೆ ಅನ್ನುತ್ತಾರೆ. ಅದೇನೆಂದು ಕಾದು ನೋಡಬೇಕು. ಆದರೆ ಕಥೆ, ಚಿತ್ರಕಥೆ, ಉಪೇಂದ್ರರದ್ದೇ ಆಗಿರುತ್ತದೆ.

ಅವರು ಈ ಸಿನಿಮಾಕ್ಕೆ 'ಲಂಡನ್ ಗೌಡ' ಎಂದೆ ಏಕೆ ಹೆಸರಿಟ್ಟರು? ದುಬೈ ಬಾಬು ತರಹದ್ದೇ ಒಂದು ಹೆಸರು ಇಡಲು ಹೋಗಿ ಹೀಗಿತ್ತಿದ್ದರೆ ಎಂದು ಕೆಲವರು ಹೇಳುತ್ತಾರೆ. ನನಗೇನೋ ಹಾಗನ್ನಿಸುವುದಿಲ್ಲ. ಉಪೇಂದ್ರ ಯಾವಾಗಲು ತಮ್ಮ ಕಥೆಗೆ ವಿಶಿಷ್ಟ ಹೆಸರಿಡುತ್ತಾರೆ ಎಂದು ನನ್ನ ನಂಬಿಕೆ. ಕೆಲವರಿಗೆ ಅದು ವಿಚಿತ್ರವೂ ಆಗಬಹುದು, ಹೇಸಿಗೆಯೂ ಆಗಬಹುದು. ಏನೇ ಇರಲಿ. ನನ್ನ ಮಟ್ಟಿಗೆ ಆ ಹೆಸರಿಡಲು ಒಂದು ವಿಚಿತ್ರ ಕಾರಣವೆಂದರೆ

'ಲಂಡನ್ ಗೌಡ' ಈ ಹೆಸರಲ್ಲಿ ಮೊದಲ ಅಕ್ಷರಗಳ ವ್ಯಂಜನ ಭಾಗವನ್ನು ಪರಸ್ಪರ ಬದಲಾಯಿಸಿ. ಸ್ವರವು ಹಾಗೆಯೇ ಇರಲಿ. ಆಗ ನಿಮಗೆ ಉಪೇಂದ್ರರ ರಸಿಕತನ ತಿಳಿಯುವುದು. ಅದನ್ನು ನಾನು ಇಲ್ಲಿ ಬರೆಯುವುದಿಲ್ಲ. ಬರೆದರೆ ಕೆಲವರಿಗೆ ಮುಜುಗರವಾಗಬಹುದು.

ಉದಾಹರಣೆಗೆ : 'ದುಬೈ ಬಾಬು'ವನ್ನು ಇದೇ ರೀತಿ ಬದಲಾಯಿಸಿದರೆ, 'ಬುಬೈ ದಾಬು' ಎಂದಾಗುತ್ತಾರೆ. ಹೀಗೆ ಲಂಡನ್ ಗೌಡಕ್ಕೂ ಮಾಡಿ ನೋಡಿ.

=) ಮುಂದಿನ ಅಂಕಣದಲ್ಲಿ ಸಿಗೋಣ.

Sunday, April 12, 2009

ಮೋಹನ ಮುರಲಿ

ಸುಮಾರು ೨ ವರ್ಷಗಳ ಹಿಂದೆ ಶ್ರೀನಿಧಿ ಹಂದೆ, ಅಡಿಗರ ಮೋಹನ ಮುರಲಿ ಯ ಸಾಹಿತ್ಯ ಸಿಗುವುದೇ ಎಂದು ಕೇಳಿದ್ದನು. ಅದಕ್ಕೆ ಉತ್ತರವಾಗಿ ಇಷ್ಟು ಬೇಗ ಅದನ್ನು ಇಲ್ಲಿ ಕೊಟ್ಟಿರುತ್ತೇನೆ. ತಾಳ್ಮೆಗಾಗಿ ವಂದನೆಗಳು.

ಕೃತಿ - ಮೋಹನ ಮುರಲಿ.
ರಚನೆ - ಗೋಪಾಲ ಕೃಷ್ಣ ಅಡಿಗ

ವಿ.ಸೂ : ಇದರ ಎಲ್ಲಾ ಹಕ್ಕುಗಳು ಆಯಾ ಪ್ರಕಾಶಕರಿಗೆ ಸೇರಿದ್ದು. ಅಂತರ್ಜಾಲದಲ್ಲಿ ಹುಡುಕುವವರಿಗೆ ಲಭ್ಯವಾಗಲಿ ಎಂದು ಇಲ್ಲಿ ಒಂದು ಪ್ರತಿಯನ್ನು ಪ್ರಕಟಿಸಿದ್ದೇನೆ. ತಪ್ಪಾದಲ್ಲಿ ಕ್ಷಮೆಯಿರಲಿ.

---------------------------------------------------------

ಯಾವ ಮೋಹನಮುರಲಿ ಕರೆಯಿತು ದೂರ ತೀರಕೆ ನಿನ್ನನು ?
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು ?

ಹೂವು ಹಾಸಿಗೆ, ಚಂದ್ರ, ಚಂದನ, ಬಾಹುಬಂಧನ ಚುಂಬನ;
ಬಯಕೆತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ;

ಒಲಿದ ಮಿದುವೆದೆ, ರಕ್ತಮಾಂಸದ ಬಿಸಿದುಸೋಂಕಿನ ಪಂಜರ;
ಇಷ್ಟೆ ಸಾಕೆಂದಿದ್ದೆಯಲ್ಲೋ! ಇಂದು ಏನಿದು ಬೇಸರ?

ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ?
ಯಾವ ಸುಮಧುರ ಯಾತನೆ? ಯಾವ ದಿವ್ಯದ ಯಾಚನೆ?

ಮರದೊಳಡಗಿದ ಬೆಂಕಿಯಂತೆ ಎಲ್ಲೊ ಮಲಗಿದೆ ಬೇಸರ;
ಏನೊ ತೀಡಲು ಏನೊ ತಾಗಲು ಹೊತ್ತಿ ಉರಿವುದು ಕಾತರ.

ಸಪ್ತಸಾಗರದಾಚೆಯೆಲ್ಲೋ ಸುಪ್ತಸಾಗರ ಕಾದಿದೆ,
ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗು ಹಾಯಿತೆ?

ವಿವಶವಾಯಿತು ಪ್ರಾಣ; ಹಾ! ಪರವಶವು ನಿನ್ನೀ ಚೇತನ;
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?

ಯಾವ ಮೋಹನಮುರಲಿ ಕರೆಯಿತು ಇದ್ದಕಿದ್ದೊಲೆ ನಿನ್ನನು ?
ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು?

----------------------------------------------------------

Wednesday, March 04, 2009

ಮಹತ್ತರ ಬದಲಾವಣೆ

ಈ ಬ್ಲಾಗಿನಲ್ಲಿ ಒಂದು ಮಹತ್ತರ ಬದಲಾವಣೆಯಾಗುವ ಸಂಭವ ಕಾಣುತ್ತಿದೆ. ಕಾದು ನೋಡಿ.

Monday, January 19, 2009

ಮತಾಂತರ, ವರ್ಣಾಶ್ರಮ ಧರ್ಮ ಹಾಗು ಅಸ್ಪೃಶ್ಯತೆ. ಭಾಗ ೨

ಒಂದೇ ಅಂಕಣದಲ್ಲಿ ಬರೆಯ ಹೋದ ವಿಚಾರವನ್ನು ಎರಡು ಭಾಗವನ್ನಾಗಿ ಬಿಡಿಸಲು ಬ್ಲಾಗರ್ ನ ಕೆಲವು ಅಡಚಣೆಗಳಾದವು. ವರ್ಣಾಶ್ರಮ ಧರ್ಮದಲ್ಲಿ ತಾರತಮ್ಯ ಹೇಗೆ ಹುಟ್ಟಿರಬಹುದು ಎಂಬ ಪ್ರಶ್ನೆಯಿಂದ ಮುಕ್ತಾಯಗೊಳಿಸಿದ್ದ ಕಳೆದ ಅಂಕಣವನ್ನು ನಮ್ಮ ಕಥೆಯಿಂದ ಮುಂದುವರೆಸೋಣ.

ರೀತಿ ಎಲ್ಲರೂ ತಮ್ಮ ತಮ್ಮ ಕೆಲಸಗಳನ್ನು ಮಾಡಿಕೊಂಡು ಹೋಗ್ತಾ ಇದ್ದರು. ಕಾಲಕ್ರಮೇಣ ಆಯಾ ಕುಟುಂಬಗಳು ಆಯಾ ಕೆಲಸಗಳನ್ನು ಮಾಡುವುದು ಪದ್ಧತಿಯಂತೆ ಬೆಳೆದು ಬಂತು. ನಾಲ್ಕು ಕುಟುಂಬಗಳು ನಾಲ್ಕು ವರ್ಗಗಳಾಗ, ವರ್ಗಗಳೇ ವರ್ಣಗಳೆಂದು ಆಚರಣೆಗೆ ಬಂತು. ಅವೇ:
. ಬ್ರಾಹ್ಮಣರು: ಯಾವುದೇ ಪೂಜೆ ಪುನಸ್ಕಾರಗಳನ್ನು ಮಾಡುವಾಗ ಇವರನ್ನು ಕರೆತರುವುದು. ಆಧ್ಯಾತ್ಮ, ತತ್ವ, ಜಿಜ್ಞಾಸೆ, ರೀತಿ ಹಲವು ವಿಚಾರಗಳ ಏಳಿಗೆಗೆ ಕಾರಣೀಭೂತರು ಕುಟುಂಬದವರು. ಬಹುಪಾಲು ಸಮಾಜದ ವಿಧಿವಿಧಾನಗಳನ್ನು ರೂಪಿಸುತ್ತಿದ್ದವರು ಕ್ಷತ್ರಿಯರಾದರೂ ಪರೋಕ್ಷವಾಗಿ ಅವರಿಗೆ ಸಲಹೆ ಸೂಚನೆ ಕೊಡುತ್ತಿದ್ದವರು ಇವರುಗಳು.
. ಕ್ಷತ್ರಿಯರು: ಸಮಾಜದ ಒಳಿತು ಕೆಡುಕುಗಳನ್ನು ರೂಪಿಸುವರು, ಅದರ ರಕ್ಷಕರು ಇವರುಗಳು. ಊರನ್ನು ಕಾಪಾಡುವವರು. ಒಟ್ಟಿನಲ್ಲಿ ಎಲ್ಲ ರೀತಿಯ ರಕ್ಷಣೆ, ಎಲ್ಲ ಕುಟುಂಬಗಳು ಸಾವಕಾಶವಾಗಿ ಜೀವಿಸಲು ಬೇಕಾದ ಸೌಲಭ್ಯಗಳನ್ನು ಒದಗಿಸಬೇಕಾದದ್ದು ಇವರ ಕರ್ತವ್ಯ.
. ವೈಶ್ಯರು: ವ್ಯಾಪಾರ, ಉದ್ದಿಮೆ, ವಹಿವಾಟುಗಳನ್ನು ನೋಡಿಕೊಳ್ಳಲು ವರ್ಗವನ್ನು ನೇಮಿಸಲಾಗಿತ್ತು. ಸಾಮಾನು, ಸರಂಜಾಮುಗಳು ಖಾಲಿಯಾದಾಗ ಪಕ್ಕದ ಊರಿಗೆ ಹೋಗಿ ತರುವುದು, ಇಲ್ಲಿ ಅದನ್ನು ತಂದು ವ್ಯಾಪಾರ ಮಾಡಿ ತಮ್ಮ ಜೀವನ ನಡೆಸುವುದು .
. ಶೂದ್ರರು: ಸಮಾಜದ ಶುದ್ದಿ, ಇವರ ಕೆಲಸ. ಕಸ ಗುಡಿಸುವುದು, ಬಟ್ಟೆ ಒಗೆಯುವುದು, ಕ್ಷೌರ, ಈ ರೀತಿ ಹಲವು ಕೆಲಸಗಳನ್ನು ಮಾಡುವುದು.

ಇಲ್ಲಿ ಕೆಲಸದ ಆಧಾರದ ಮೇಲೆ ರೀತಿ ವರ್ಗಗಳನ್ನು ನಿಯೋಜಿಸಲ್ಪಟ್ಟಿದೆಯೇ ಹೊರತು ಇಲ್ಲಿ ಯಾವುದೇ ತಾರತಮ್ಯಗಳಿಲ್ಲ. ವೇದಗಳ ಕಾಲದಲ್ಲಿ ಈ ರೀತಿ ತಾರತಮ್ಯಗಳಾವುದೂ ಕಂಡು ಬರುವುದಿಲ್ಲ ಎಂದು ಮೇಲೆ ಹೇಳಿದಂತೆ ಹಲವು ಜಿಜ್ನಾಸಿಗಳು ಉದಾಹರಿಸಿದ್ದಾರೆ.

ಈ ರೀತಿ ತಾರತಮ್ಯ ಹೇಗೆ ಹುಟ್ಟಿಕೊಂಡಿತು? ನನಗೆ ನಮ್ಮ ಹೆಚ್. ನರಸಿಂಹಯ್ಯ ನವರ ವೈಚಾರಿಕತೆ ಇಲ್ಲಿ ಸಹಾಯ ಮಾಡುತ್ತದೆ. ನಮ್ಮ PUC ಮೊದಲ ವರ್ಷದಲ್ಲಿ ಓದಿದ ಜ್ಞಾಪಕ. ಅವರ ವೈಚಾರಿಕತೆ ಪ್ರಬಂಧದಲ್ಲಿ ಅವರು ಒಂದು ಸಣ್ಣ ಕಥೆ ಹೇಳುತ್ತಾರೆ.

ಒಂದು ಬ್ರಾಹ್ಮಣ ಕುಟುಂಬ. ಮನೆಯ ಯಜಮಾನ ತನ್ನ ತಂದೆಯ ತಿಥಿ ಮಾಡುವಾಗ ಮನೆಯ ಬೆಕ್ಕು ಅಲ್ಲಿ ಇಲ್ಲಿ ಓಡಾಡಿ ತೊಂದರೆ ಮಾಡೀತು ಎಂದು ಅದನ್ನು ಮನೆಯ ಒಂದು ಕಂಭಕ್ಕೆ ಕಟ್ಟುತ್ತಿದ್ದನಂತೆ. ಅವನ ಕಾಲಾನಂತರ ಅವನ ಮಗ ಅವನ ತಿಥಿ ಮಾಡುವಾಗ ಮನೆಯ ಬೆಕ್ಕು ಸತ್ತಿತೆಂದು ಪಕ್ಕದ ಮನೆಯ ಬೆಕ್ಕನ್ನು ತಂದು ತಿಥಿ ಮಾಡುತ್ತಿದ್ದನಂತೆ.

ಒಂದು ಕೆಲಸವನ್ನು ಮಾಡುವಾಗ ಅದೇಕೆ ನಾವು ಹಾಗೆ ಮಾಡುತ್ತಿದ್ದೀವಿ ಎಂದು ತಿಳಿಯದವರಿಗೆ ಹೇಳದೆ ಹೋದರೆ ಆಗುವುದೇ ಹೀಗೆ. ಒಂದು ವೇಳೆ ಆ ಬ್ರಾಹ್ಮಣ ತನ್ನ ಮಗನಿಗೆ ಬೆಕ್ಕನ್ನು ಕಟ್ಟುತ್ತಿದ್ದ ಕಾರಣ ಹೇಳಿದ್ದರೆ ಈ ರೀತಿ ಆಗುತ್ತಿರಲಿಲ್ಲ. ಇದೇ ರೀತಿ ನಮ್ಮ ಕಥೆಯಲ್ಲಿ ಈ ರೀತಿ ನಡೆದಿರಬಹುದು.

ಒಬ್ಬ ಶೂದ್ರ ತನ್ನ ಕೆಲಸಗಳನ್ನ ಮುಗಿಸಿ ಮನೆಯ ಹಾದಿ ಹಿಡಿದಿದ್ದನು. ಕೆಲಸ ಮುಗಿಸಿ ಮಲಿನವಾಗಿದ್ದ ಶೂದ್ರನನ್ನು ಬ್ರಾಹ್ಮಣನು ತನ್ನ ಮಗನೊಂದಿಗೆ ಅದೇ ದಾರಿಯಲ್ಲಿ ನಡೆದುಬರುವಾಗ ಅಕಸ್ಮಾತ್ ಈ ಬ್ರಾಹ್ಮಣನ ಮಗನು ಅವನನ್ನು ಮುಟ್ಟಿದ. ಮಲಿನವಾಗಿದ್ದ ಅವನನ್ನು ಮುಟ್ಟಬೇಡ ಎಂದು ಹೇಳದೇ, "ಅವನನ್ನು ಮುಟ್ಟಬೇಡ" ಎಂದಷ್ಟೇ ಹೇಳಿರಬಹುದು. ಮುಂದೆ ಆ ಮಗನ ಮಗ, ತನ್ನ ಅಪ್ಪನ ಜೊತೆ ಬರುವಾಗ ಅವನೂ ಅದನ್ನೇ ಹೇಳಿರಬಹುದು. ಹೀಗೆ ಬೆಳೆದುಬಂದು ಶೂದ್ರರನ್ನು ಮುಟ್ಟಬಾರದೆಂಬ ಪ್ರತೀತಿ ಹುಟ್ಟಿರಬಹುದು.

ಹೀಗೆ ಆಗುತ್ತಿರಲು, ನಮ್ಮ ನಿಮ್ಮಂತಹ ಯಾರೋ ಒಬ್ಬ ತನ್ನಪ್ಪನನ್ನ ಯಾಕೆ ಅವನನ್ನು ಮುಟ್ಟಬಾರದೆಂದು ಕೇಳಿರಬಹುದು. ತನ್ನಪ್ಪ ಹಾಗೆ ಹೇಳಿಕೊಟ್ಟಿದ್ದಾಗ ಪ್ರಶ್ನೆ ಕೇಳದ ಅವನು, ಹಾರಿಕೆ ಉತ್ತರ ಕೊಟ್ಟಿರಬಹುದು. "ಭಾರೀ ಪ್ರಶ್ನೆ ಕೇಳಿಬಿಟ್ಟ! ಬುದ್ಧಿವಂತ! ಸುಮ್ನೆ ಬಾರೋ! ನನಗೆ ಎದುರಾಡ್ತಾನೆ!" ಎಂದು ಅವನನ್ನು ಎಳೆದುಕೊಂಡು ಹೋಗಿರಬಹುದು. ಈ ರೀತಿ ಹಲವಾರು ಪ್ರತೀತಿಗಳು ಕಾರಣ ತಿಳಿಯದೆ ಹುಟ್ಟಿರಬಹುದು.


ಈ ರೀತಿ ನಡೆಯದೇ, ಪ್ರತಿಯೊಂದಕ್ಕೂ ತಕ್ಕ ಕಾರಣ, ಅದನ್ನು ಯಾಕೆ ಮಾಡುತ್ತಿದ್ದೇವೆ ಎಂದು ವಿವರಿಸಿದ್ದರೆ, ಹೀಗಾಗುತ್ತಿರಲಿಲ್ಲವೇನೋ?

ಮೊನ್ನೆ ಹೀಗೆ ಚಾಮರಾಜಪೇಟೆಯಲ್ಲಿ ನಡ್ಕೊಂಡ್ ಬರ್ತಿದ್ದಾಗ ರಾಷ್ಟ್ರೋತ್ತಾನ ಪರಿಷತ್ತಿನ ಒಂದು ಪುಸ್ತಕ ಮಳಿಗೆಯಲ್ಲಿ ಕಳೆದ ಅಂಕಣದಲ್ಲಿ ವಿವರಿಸಿದ್ದಂತೆ, ಮತಾಂತರದ ವಿರುದ್ಧ ನಿಂತ ಬಣದ ಅಂಕಣಗಳು ಒಂದು ಪುಸ್ತಕವಾಗಿ ಬಿಡುಗಡೆಯಾಗಿದೆ. ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ ಇವರಿಂದ ಈ ಪುಸ್ತಕವು ಬಿಡುಗಡೆಯಾಗಿದೆ. ಮತಾಂತರದ ಪರವಾಗಿ ಯಾವ ಲೇಖನವು ಇಲ್ಲ. ಅಷ್ಟಕ್ಕೂ ಅದರ ಪರ ಯಾರೂ ಬರೆದಿಲ್ಲ. ಎಲ್ಲ ಬರೀ ಭೈರಪ್ಪನವರನ್ನು ಹಳಿದಿದ್ದಾರೆ. ಆಸಕ್ತರು ಕೊಂಡುಕೊಳ್ಳಬಹುದು. ಬೆಲೆ ನೂರು ರೂಪಾಯಿಗಳು.

ಹೀಗೆ ಬೆಳೆದು ಬಂದ ಪ್ರವೃತ್ತಿಯಿಂದ ಶೂದ್ರರು ಹೀನರು ಎಂಬ ಪ್ರತೀತಿ ಹುಟ್ಟಿತು. ಎಲ್ಲ ವರ್ಗಗಳಲ್ಲಿ ಒಳ ಪಂಗಡಗಳಾದವು. ಬ್ರಾಹ್ಮಣರಲ್ಲಿ ಸ್ಮಾರ್ತ, ವೈಷ್ಣವ, ಶಿವಳ್ಳಿ, ಹವ್ಯಕ, ಮಾಧ್ವ, ಹೀಗೆ ಹಲವಾರು ಆದರೆ, ಕ್ಷತ್ರಿಯರಲ್ಲಿ ಕೂಡ ಹಲವು ಪಂಗಡಗಳಾದವು. ಗೌಡ, ಜಮೀನ್ದಾರ, ಹೀಗೆ ಹಲವು ಎಂದು ತಿಳಿಯೋಣ, ವೈಶ್ಯರಲ್ಲಿ, ಶೆಟ್ಟರು, ಬಣಜಿಗರು, ಶೂದ್ರರಲ್ಲಿ ಮಾದಿಗ, ಹೊಲೆಯ, ನಾಯಿಂದ, ಹೀಗೆ ಹಲವಾರು ಪಂಗಡಗಳು ಹುಟ್ಟಿಕೊಂಡವು.

ಒಂದು ವರ್ಗದಲ್ಲೇ ಹಲವು ತಾರತಮ್ಯ ಹುಟ್ಟಿಕೊಂಡಿದ್ದು ವೈದಿಕ ಧರ್ಮವನ್ನು ಹಳಿಯುವವರಿಗೆ ಒಂದು ಕಾರಣ ಮಾಡಿಕೊಟ್ಟಿತು. ಒಳಜಗಳಗಳಿಂದ ಕಿತ್ತಾಡಿಕೊಳ್ಳುತ್ತಿದ್ದ ವೈದಿಕ ಧರ್ಮಿಯರನ್ನು ನೋಡಿ ಹೊರಗಿನಿಂದ ಬಂದ ಮುಸಲ್ಮಾನರು, ಕ್ರೈಸ್ತರು, ಇದರ ಲಾಭ ಪಡೆಯಲು ಶುರು ಮಾಡಿದರು. ಒಬ್ಬರನ್ನೊಬ್ಬರು ಎತ್ತಿಕಟ್ಟಿ ತಮ್ಮ ಬೇಳೆ ಬೇಯಿಸಲು ಶುರು ಮಾಡಿದರು. ಹಲವಾರು ಸಿದ್ಧಾಂತಗಳನ್ನು ತಂದರು. ಆರ್ಯರು, ಮೂಲತಃ ಭಾರತೀಯರಲ್ಲ, ಅವರುಗಳು ಐರೋಪ್ಯ ರಾಷ್ಟ್ರಗಳಿಂದ ಇಲ್ಲಿಗೆ ವಲಸೆ ಬಂದಿದ್ದರು ಹಾಗೆ ಹೀಗೆ ಎಂದು.