Showing posts with label ಚಿತ್ರರಂಗ. Show all posts
Showing posts with label ಚಿತ್ರರಂಗ. Show all posts

Saturday, September 18, 2010

Director's Special: ಸಿನಿಮಾ ಮಾಡಲಾಗದ ಕಥೆಗಳು ಮತ್ತಿತರ ಲೇಖನಗಳು - ಒಂದು ನೋಟ.

೨ ವಾರಗಳ ಹಿಂದೆಯೇ ಬರಬೇಕಿದ್ದ ಈ ಅಂಕಣಕ್ಕೆ ನನ್ನ ಸೋಂಬೇರಿತನವೇ ಹೊಣೆ.

ಇದನ್ನು ವಿಮರ್ಶೆ ಎನ್ನಬೇಕೋ ಅನಿಸಿಕೆ ಎನ್ನಬೇಕೋ ತಿಳಿಯದೇ ಒಂದು ನೋಟ ಎಂದು ಉದ್ಧರಿಸಿರುವೆನಷ್ಟೇ. ವಿಮರ್ಶೆ ಎಂದರೆ ನನಗೆ ಕೆಲವೊಮ್ಮೆ ಭಯವಾಗುವುದುಂಟು. ನಾನು ವಿಮರ್ಶೆ ಎಂದು ಬರೆದೆನೆಂದರೆ ಹೆಚ್ಚಾಗಿ ಅದರ ಬಗ್ಗೆ ತಿರಸ್ಕಾರವೇ ಇರುತ್ತದೆ. ನನಗೆ ಅದು ಬಹಳವಾಗಿ ಹಿಡಿಸಿದರೆ ಅದರ ವಿಮರ್ಶೆಯ ಗೊಡವೆಗೆ ಹೋಗುವುದಿಲ್ಲ. ಏಕೆಂದರೆ, ಒಂದು ವಿಮರ್ಶೆಯನ್ನು ಬರೆದೆನೆಂದರೆ, ಅದರ ಬಗ್ಗೆ ಅಭಿಮಾನ ಮುಂಚಿನಂತಿರುವುದಿಲ್ಲ. ಇವೆಲ್ಲವನ್ನೂ ಮೀರಿ ಈ ಅಂಕಣವನ್ನು ಬರೆಯುತ್ತಿರುವೆನಾದ್ದರಿಂದ ಇದಕ್ಕೆ ಒಂದು ಹಿನ್ನೆಲೆಯನ್ನು ಬರೆಯೋಣ.

ಸದಭಿರುಚಿಯ ಕನ್ನಡ ಸಿನೆಮಾಗಳ ವೀಕ್ಷಕರಿಗೆ ಗುರುಪ್ರಸಾದರು ಅಪರಿಚಿತರೇನಲ್ಲ. ಅವರ 'ಮಠ' ಹಾಗು 'ಎದ್ದೇಳು ಮಂಜುನಾಥ' ಅವರ ಪ್ರತಿಭೆಗೆ ಸಾಕ್ಷಿ. ನನ್ನ ನೆಚ್ಚಿನ ನಿರ್ದೇಶಕರಲ್ಲಿ, ಅಗ್ರಗಣ್ಯರ ಸ್ಥಾನದಲ್ಲಿ ಇವರೂ ಒಬ್ಬರು. ೨ ವಾರದ ಹಿಂದೆ ಅವರ 'ಸಿನಿಮಾ ಮಾಡಲಾಗದ ಕಥೆಗಳು' ಹೊತ್ತಿಗೆ ಬಿಡುಗಡೆಯಾಯಿತು ಎಂದು ಪ್ರಜಾವಾಣಿಯ 'ಸಿನೆಮ ರಂಜನೆ'ಯಲ್ಲಿ ಓದಿ ಆ ಸಂಜೆಯೇ ಗಾಂಧಿನಗರದ 'ನವಕರ್ನಾಟಕ ಪ್ರಕಾಶನ'ದಲ್ಲಿ ಆ ಪುಸ್ತಕ ಕೊಂಡಮೇಲಷ್ಟೇ ಸಮಾಧಾನವಾದುದು. ವರ್ಷದ ಹಿಂದೆಯೇ ಅದರ ಬಗ್ಗೆ ಓದಿ ಇದ್ದ ಬದ್ದ ಪುಸ್ತಕಾಲಯಗಳಲೆಲ್ಲಾ ಹುಡುಕಾಡಿದ್ದಷ್ಟೇ ಬಂತು.

ಪೀಠಿಕೆ ಸಾಕು. ವಿಚಾರಕ್ಕೆ ಬರೋಣ. ಈ ಪುಸ್ತಕಗಳಲ್ಲಿ ಅವರ ೧೮ ಅಂಕಣಗಳಿವೆ. ಮಹಾಭಾರತದ ೧೮ ಅಧ್ಯಾಯಗಳ ತರಹ. ಹೆಹ್ಹೆಹ್ಹೆ. ಹಲವು ಹಿಂದೆಯೇ ಕೆಲವು ಪತ್ರಿಕೆಗಳಲ್ಲಿ ಪ್ರಕಟಗೊಂಡವು, ಕೆಲವು ಹೊಸತು. ಇವರ ಕಾವ್ಯನಾಮ ಶಾರದಾಸುತ. ನಿಜಕ್ಕೂ ಸರಸ್ವತಿ ಪುತ್ರರೇ. ತಮ್ಮ ಹತ್ತಿರದ ಬಳಗದವರಿಗೆಲ್ಲ ವಿಭಿನ್ನವಾಗಿ ಅರ್ಪಿಸುತ್ತ, ಪುಸ್ತಕವನ್ನು ಕೊಂಡು ಓದುವ ನಮಗೂ ಅರ್ಪಿಸುತ್ತಾರೆ. ಕೊನೆಗೆ ಶಾರದೆಗೂ.

ಈ ಎರಡು ವಾರಗಳಲ್ಲಿ ಇದನ್ನು ಓದಿ ೧೦ ದಿನದ ಮೇಲಾಯಿತು. ಕಥೆಗಳು ಜ್ಞಾಪಕವಿದ್ದರೂ, ಅದರಲ್ಲಿ ನನಗೆ ಬಹಳ ಇಷ್ಟವಾದ ಸಂಭಾಷಣೆಗಳು ಕೆಲವು ಮರೆತು ಹೋದಂತಿವೆ. ಈ ಅಂಕಣವು ಆ ಸಂಭಾಷಣೆಗಳನ್ನು ಭಟ್ಟಿ ಇಳಿಸುವುದಿಲ್ಲ. ಇನ್ನೊಮ್ಮೆ ಮೆಲುಕು ಹಾಕಿದಲ್ಲಿ ಕ್ಷಣಮಾತ್ರದಲ್ಲಿ ನೆನಪಿಗೆ ಬರುವುವು. ನಾನು ಬರೆಯಬೇಕೆಂದು ಕೊಂಡ ಕೆಲವು ಸಾಲುಗಳು ಬರದೆ ಇರಬಹುದು. ನೆನಪಾದಾಗ, ಮಗದೊಮ್ಮೆ ಓದಿದಾಗ, ಅವಶ್ಯವಾಗಿ ಅದರ ಬಗ್ಗೆ ಇದೇ ಅಂಕಣದಲ್ಲಿ ಬರೆಯುವೆನು.

ಈ ಕಥೆಗಳಲ್ಲಿ ಕೆಲವು ಕಚಗುಳಿ ಕೊಡುವಂತವುವು, ಎಲ್ಲವೂ ಅನುಭವಗಳು ಹಾಗು ಕೆಲವು ಸಾಮಾನ್ಯ ಕಥೆಯಾಗಿದ್ದರೂ, ನಿರೂಪಣೆಯಲ್ಲಿ ವಿಭಿನ್ನ ಜಾಡು ಹೊಂದಿರುವಂಥವು. ಕೊನೆಗೆ ಒಂದು ಸಂದರ್ಶನ.

ತಡಮಾಡದೆ ಪುಸ್ತಕಕ್ಕೆ ಇಳಿಯೋಣ.

ಲೇಖಕರು: ಗುರುಪ್ರಸಾದ್.
ಪುಸ್ತಕ: Director's Special
ಅಡಿಪಟ್ಟಿ: ಸಿನಿಮ ಮಾಡಲಾಗದ ಕಥೆಗಳು ಮತ್ತಿತರ ಲೇಖನಗಳು.
ಬೆಲೆ: ೧೫೦ ರೂಪಾಯಿಗಳು.

ಮೊದಲ ಮೂರು ಅಂಕಣಗಳು: ಇವೆಲ್ಲ ಒಟ್ಟುಗೂಡಿ ಒಂದು ಕಥೆ. ೨೦೦೫ರಲ್ಲಿ ರೂಪತಾರಕ್ಕೆ ಬರೆದ ಅಂಕಣಗಳು. ಆಸ್ಪತ್ರೆ ನರ್ಸೊಬ್ಬಳು (ಜಿನ್ಸಿ) ಆತ್ಮಹತ್ಯೆ ಮಾಡಿಕೊಂಡ ಸಾಮಾನ್ಯ ದಾರುಣ ಕಥೆ. ಶುರುವಿನಲ್ಲಿ ರಸವತ್ತಾಗಿ ಬಣ್ಣಿಸುವ ಈ ಕಥೆಯ ಮೊದಲ ಅಂಕಣದ ಕೊನೆಯಲ್ಲಿ ಎಣಿಸಲಾರದ ತಿರುವು ಸಿಕ್ಕು ಕಥೆಯು ರೋಚಕವಾಗುತ್ತದೆ. 'ಮಣಿ ಚಿತ್ರ ತಾಳ್' ಎಂಬ ಮಲಯಾಳಿ ಚಿತ್ರದ ಕಥೆಗಾರರನ್ನು ಹುಡುಕಿ ಕೇರಳಕ್ಕೆ ಹೊರಟ ಗುರು, ಬಸ್ಸಿನಲ್ಲಿ ಸಿಕ್ಕ ಈ ನರ್ಸಿನ ಕಥೆ ಹುಡುಕಿಕೊಂಡು ಬರೆದಂತಿದೆ. ಮೊದಲ ಅಂಕಣದಲ್ಲಿ ಗುರು ರ ಅನುಭವವಾದರೆ, ಮಿಕ್ಕೆರಡು ಅಂಕಣಗಳು ಆ ನರ್ಸಿನ ಗೋರಿಯ ಚೀತ್ಕಾರಗಳು.

ಈ ಕಥೆಯಲ್ಲಿ ನನಗೆ ಅಚ್ಚರಿಯಾದ ಒಂದು ಅಂಶವೆಂದರೆ, ಗುರುಪ್ರಸಾದರಿಗೆ 'ಆಪ್ತಮಿತ್ರ' ಚಿತ್ರ ಇಷ್ಟವಾದುದು. ಬುದ್ಧಿವಂತರು ರೀಮೇಕ್ ಮಾಡಬಾರದು; ದಡ್ಡರು ಸ್ವಮೇಕ್ ಮಾಡಬಾರದು ಎಂದ ಗುರು ಗೆ, ಆಪ್ತಮಿತ್ರ ಇಷ್ಟವಾದುದು ಅಚ್ಚರಿಯೇ. ವಯ್ಯಕ್ತಿಕವಾಗಿ ನನಗೆ ಆ ಚಿತ್ರ ಹಿಡಿಸಲಿಲ್ಲ. ಅದರ ಬಗ್ಗೆ ಚರ್ಚೆ ಮಾಡಲು ಈ ಅಂಕಣವನ್ನು ಉಪಯೋಗಿಸಲಿಚ್ಚಿಸುವುದಿಲ್ಲ. ಏನಿದ್ದರೂ ಅದು ಈ ಕಥೆಯಲ್ಲಿ ಗೌಣ.

ಜಿನ್ಸಿ ಹಾಗು ಅವಳ ಪ್ರಿಯಕರನ ಸಂಭಾಷಣೆಗಳು ನಿಮ್ಮ ಮೆದುಳಿನಲ್ಲಿ ಹೊಸ ಆಲೋಚನೆಗಳು ತಂದರೆ ಅದರಲ್ಲಿ ಆಶ್ಚರ್ಯವಿಲ್ಲವಷ್ಟೇ.

ನಾಲ್ಕನೇ ಅಂಕಣ: ಲೇಖಕರೇ ಹೇಳಿಕೊಳ್ಳುವಂತೆ, ಈ ಕಥೆ, ಅವರಿಗೆ ಒಬ್ಬರೇ ಕೂತು ಗುಂಡು ಹಾಕುವಾಗ ಹೊಳೆದ ಕಥೆ. ಆ ಎಣ್ಣೆಯ ಗುಣ ಪೂರ್ತಿಯಾಗಿ ಈ ಕಥೆಗೆ ಎರಕ ಹೊಯ್ಯ್ದಂತಿದೆ. ಪ್ರತಿಯೊಬ್ಬ ಗಂಡ, ಹೆಂಡತಿ (ಕಡೆ ಪಕ್ಷ, ಹೆಚ್ಚಿನವರು) ತಮ್ಮ ಜೀವನದ ಯಾವುದಾದರೂ ಒಂದು ಹಂತದಲ್ಲಿ ಯೋಚಿಸುವ ಒಂದು ತಂತುವನ್ನು ಆಧಾರವಾಗಿಟ್ಟುಕೊಂಡು ಬರೆದ ಕಥೆ. ದಿನೇ ದಿನೇ ಹೊಸ ಮುಖದ ಅರ್ಧಾಂಗಿಯ ಪಡೆವ ಕಥೆ. ಇಂತಹ ಕಥೆಗೆ ಗುರು ಅವರು ಕೊಟ್ಟ ಕೊನೆಯೇ ಸರಿಯಾದುದು. ಅದನ್ನು ಓದಿಯೇ ಸವಿಯಬೇಕು.

ಈ ಕಥೆಯ ಜಾಣ, ಜಗತ್ತಿನ ಎಲ್ಲ ಗಂಡಂದಿರ ಪ್ರತೀಕ.

ಐದನೇ ಅಂಕಣ: ನರಕಕ್ಕೂ ಸ್ವರ್ಗಕ್ಕೂ ಇರುವ ವ್ಯತ್ಯಾಸವನ್ನು ಚಿಕ್ಕದಾಗಿ ಚೊಕ್ಕವಾಗಿ ಈ ಕಥೆಯಲ್ಲಿ ನಿರೂಪಿಸಿದ್ದಾರೆ ಗುರು. ಈ ಕಥೆಯಲ್ಲಿ ಬರುವ ಭಗ್ನ ಪ್ರೇಮಿ ಗಿರಿಧರ ಹಾಗು ಅಪಘಾತ ಮೃತ ನಂದಿನಿ ಈ ದೃಷ್ಠಾಂತಕ್ಕೆ ಸಾಕ್ಷಿಯಾಗುತ್ತಾರೆ. ನರಕದ ವರ್ಣನೆ, ಭೂಮಿಯ ಜೊತೆ ಅದರ ಹೋಲಿಕೆ, ನರಕದ ಹಿಟ್ಲರ್ ಹುಣಸೆ ಮರ, ನರಕದಿಂದ ಸ್ವರ್ಗಕ್ಕೆ ಹೋಗುವ ಪರಿ, ಲೇಖಕರ ಕ್ರಿಯಾಶೀಲತೆಗೆ ಒಂದು ಸಾಕ್ಷಿ.

ಆರನೇ ಅಂಕಣ: ಜಲಪ್ರಳಯದ ಕಥನ. ೨೦೦೮ರಲ್ಲಿ ಮಯುರಕ್ಕೆ ಬರೆದ ಕಥೆ. ಪ್ರಳಯದ ಕೊನೆಯ ಹಂತ ನಮ್ಮ ಬೆಂಗಳೂರಿನಲ್ಲಿ. ಕಥಾನಾಯಕ, ಭಾರಧ್ವಾಜ ಸನಾತನಿ ಹಾಗು ಈಜುಗಾರ. ಆಟ ಹಲಸೂರಿನಿಂದ ಯೆಶವಂತಪುರದ ವರೆಗೂ ಈಜಬಲ್ಲ. ನಾಯಕಿ ಭವತಿ. ಭಾರಧ್ವಾಜ ಭಾವತಿಯರು, ಪ್ರಕೃತಿ ಹಾಗು ಪುರುಷರಾಗಿ ವಿಶ್ವಮಾನವನನ್ನು ಹಡೆವ ಕಥೆಯೇ ಇದು. ಹೊಸ, ಆದರ್ಶ ಸಮಾಜವನ್ನು ಕಟ್ಟುವ ಕನಸನ್ನು ಹೊಂದಿದೆ. ಭಗವಂತನ ನಿಟ್ಟುಸಿರು ಈ ಕಥೆಗೆ ಮಂಗಳ ಹಾಡುತ್ತದೆ.

ಏಳನೇ ಅಂಕಣ: ೨೦೦೯ ರಲ್ಲಿ ಚಿತ್ತಾರಕ್ಕೆ ಬರೆದುಕೊಟ್ಟ ಕಥೆ. ಗುರು ಪ್ರಕಾರ ಇದು ಸತ್ಯ ಕಥೆ. ಆದರೆ ಅವರ ಅಭಿಮಾನಿಗಳಿಗೆ ಅದು ನಂಬಲಸದಳ. ಶಿಷ್ಯನ ವೃದ್ಧಿಯನ್ನು ಕಂಡು ಸಹಿಸದ ಗುರು ಅವನನ್ನು ಕೂಪಕ್ಕೆ ತಳ್ಳುವ ಕಥೆ. ಫೋನ್ ಮಾಡಿ ಕಾಡುವ ಶಿಷ್ಯ. ಶಿಷ್ಯ ವೃತ್ತಿ ಮಾಡಿಕೊಂಡಿರುತ್ತೇನೆ ಎಂಬ ಭರವಸೆ ಇತ್ತ ಮೇಲೆಯೇ ಶಿಷ್ಯನಾಗಿ ಸ್ವೀಕರಿಸುವ ಗುರು, ಅವನ ಏಳಿಗೆ ಕಂಡು ಕೊಂಚ ಕರುಬುತ್ತಾನೆ. ಕೊನೆಯಲ್ಲಿ ಅವನನ್ನು ಕಳಿಸಬೇಕಾದಲ್ಲಿಗೆ ಕಳಿಸಿ ನೆಮ್ಮದಿಯ ಉಸಿರು ಬಿಡುತ್ತಾನೆ. ಇದಕ್ಕಿಂತ ಹೆಚ್ಚು ಹೇಳಿದಲ್ಲಿ ನಿಮ್ಮ ಆಸಕ್ತಿ ಕರಗುತ್ತದೆ. ನೀವೇ ಕಥೆ ಓದಿ.

ಎಂಟನೆ ಅಂಕಣ: ಹೋಟೆಲ್ಲಿನ ಪುರಾಣ. ಲಾಬಿಯಲ್ಲಿ ಕುಳಿತು ಇತರ ಟೇಬಲ್ಲಿನತ್ತ ಕಣ್ಣು ಹಾಯಿಸುತ್ತ ಗೆಳತಿಗಾಗಿ ಕಾಯುತ್ತ ಕೂರುವ ನಿರ್ದೇಶಕರು. ಇನ್ನೊಂದು ಜೋಡಿಯನ್ನು ನೋಡಿ ಮರುಗುವವರು. ಕೊನೆಯಲ್ಲಿ ಒಂದು ಊಹಿಸಬಹುದಾದ ತಿರುವು. ಓಡಿಸಿಕೊಂಡು ಹೋಗುವ ಕಥೆ.

ಒಂಬತ್ತನೇ ಅಂಕಣ: ೨೦೦೯ರಲ್ಲಿ ಪ್ರಜಾವಾಣಿಯಲ್ಲಿ ಪ್ರಕಟಿಸಿದ ಕಥೆ. ನಿಜವಾದ ಜ್ಞಾನಾರ್ಜನೆ ಹೇಗೆ ಮಾಡಬೇಕು ಎಂದು ಕಲಿಸುವ ಕಥೆ. ಮಲ್ಲೇಪುರಂ ಜೀ. ವೆಂಕಟೇಶ್ ರವರು ತಮಗೆ ಕಲಿಸಿ ಕೊಟ್ಟ ಪಾಠವನ್ನು ಇಲ್ಲಿ ಬೇರೆಯದೇ ರೀತಿಯಲ್ಲಿ ಸ್ವಾಮಿ ಹಾಗು ಮಾನಸಿಯ ಸಂಭಾಷಣೆಯಲ್ಲಿ ಕೊಟ್ಟಿದ್ದಾರೆ. ಸ್ವಾಮಿಗಳಿಗೆ ಆಲುಗಡ್ಡೆ ಕೊಂಡು ಹೋಗುವುದು ಭೈರಪ್ಪ ನವರ 'ನಿರಾಕರಣ' ದಲ್ಲಿ ಓದಿದ್ದ ಜ್ಞಾಪಕ. ಗುರು ಕೂಡ ಅದರಿಂದಲೇ ಸ್ಪೂರ್ತಿ ಹೊಂದಿರಬಹುದು.

ಹತ್ತನೇ ಅಂಕಣ: ೨೦೦೫ ರಲ್ಲಿ ರೂಪತಾರಕ್ಕೆ ಬರೆದ ಅಂಕಣ. ಕನ್ನಡದಲ್ಲಿ ಕಥೆ ಇಲ್ಲ ಎಂದು ಸುಮಾರು ವರ್ಷಗಳ ಹಿಂದೆ ನಮ್ಮ ಎನ್. ಎಸ್. ರಾವ್ ರ ಸುಪುತ್ರ ಎನ್. ಓಂಪ್ರಕಾಶ್ ರಾವ್ ರವರು ಬಾಯಿ ಬಡಿದು ಕೊಳ್ಳುತ್ತಿದ್ದಾಗ ಬರೆದ ಕಥೆ. ರಾಮಾಯಣದಲ್ಲಿ ಹೇಳದಿದ್ದ ರಾಮನ ಕಲ್ಪಿತ ಕಥೆ. ರಾಮನು ಹೇಗೆ ಕಾಮನೆಗಳನ್ನು ನಿಗ್ರಹಿಸಿ, ಏಕ ಪತ್ನಿ ವ್ರತವನ್ನು ಆಚರಿಸುತ್ತಿದ್ದನೆಂದು ಸುಂದರವಾಗಿ ಚಿತ್ರಿಸುವ ಕಥೆ. ಕಥೆಯಲ್ಲಿ ಬರುವ ಶ್ಯಾಮಲೆಯ ಹಾಗು ಅನಂಗಪಾತ್ರ ಇಷ್ಟವಾಗುವುದು. ಜೈ ಶ್ರೀರಾಮ್.

ಹನ್ನೊಂದನೇ ಅಂಕಣ: ತಮ್ಮ ತಂಗಿಯ ಮದುವೆ ಪ್ರಕರಣವನ್ನು ಸವಿಸ್ತಾರವಾಗಿ ಎಲ್ಲರಿಗೂ ಹಿಡಿಸುವಂತೆ ಇಲ್ಲಿ ಗುರು ಕೊಟ್ಟಿದ್ದಾರೆ. ಉಗಾದಿಯ ದಿನ ಬರೆದ ಈ ಅಂಕಣ, ಉಗಾದಿಯ ಹಲವಾರು ಅರ್ಥಗಳನ್ನು ಮೆಲುಕು ಹಾಕುತ್ತದೆ. ಅಣ್ಣ ತಂಗಿ ಕಥೆ ಸಿನೆಮಾಗಳಲ್ಲಿ ತೋರಿಸುವಂತಲ್ಲದೆ ಸಹಜವಾಗಿ ಮೂಡಿಬಂದಿದೆ.

ಹನ್ನೆರಡನೆಯ ಅಂಕಣ: ತಮ್ಮ ಸ್ನೇಹಿತರ ಗರ್ವ ಎಂಬ ಪತ್ರಿಕೆಯ ಮೊದಲ ಪ್ರತಿಗೆ ಮಧ್ಯ ರಾತ್ರಿ ಕಳೆದು ಬರೆದ ಕಥೆ. ಪೂರ್ತಿ ಕಥೆಯನ್ನೋದಿದ ಮೇಲೆ ತಿಳಿಯುತ್ತದೆ ಇದೊಂದು ಸ್ವಗತ. ಎಲ್ಲರ ಮನದಲ್ಲಿಯೂ ಇಂತಹ ಸ್ವಗತಗಳು ಹಲವಿವೆ. ಈ ಸ್ವಗತದಿಂದಲೇ ಪತ್ರಿಕೆಯ ಓದುಗನನ್ನು ಸ್ವಾಗತಿಸುವ ಅಂಕಣ. ಸಂಭಾಷಣೆ ಓದಿಯೇ ಆನಂದಿಸ ತಕ್ಕದ್ದು.

ಹದಿಮೂರನೇ ಅಂಕಣ: ೨೦೦೫ರಲ್ಲಿ ರೂಪತಾರಕ್ಕೆ ಬರೆದುದು. ಒಬ್ಬ ಹತಾಶ ಪ್ರೇಕ್ಷಕನ ಸಾಕ್ಷಾತ್ ದರ್ಶನ ಮಾಡಿಸುತ್ತಾರೆ. ಹೊಣೆಯರಿಯದ ನಿರ್ದೇಶಕರ ಅಸಡ್ಡೆಗೆ ಈ ಕಥೆ ಕನ್ನಡಿ ಹಿಡಿಯುತ್ತದೆ. ಸಿನಿಮ ಹೇಗೆ ಮಾಡಬೇಕೆಂಬ ಜಿಜ್ಞಾಸೆಯನ್ನು ಇಲ್ಲಿ ಕಾಣಬಹುದು. ಹಲವಾರು ಉದಾಹರಣೆಗಳ ಸಹಿತ. ಅಂಕಣದ ಮೊದಲಿಗೆ ಹಾಗು ಕೊನೆಯಲ್ಲಿ ಬರುವ ಎರಡೂ ಪ್ರಸಂಗಗಳು ನಗಿಸುತ್ತವೆ. ಹೆಚ್ಚೇಕೆ? ನೀವೇ ಓದಿ ನೋಡಿ.

ಹದಿನಾಲ್ಕನೇ ಅಂಕಣ: ೨೦೦೬ರಲ್ಲಿ ರೂಪತಾರಕ್ಕೆ ಬರೆದುದು. ಈ ಅಂಕಣವನ್ನು ಎರಡು ಪ್ರಸಂಗಗಳಲ್ಲಿ ಪ್ರೇಮವನ್ನು ಬಣ್ಣಿಸಲು ವ್ಯಯಿಸಿದ್ದಾರೆ. ಒಂದು ಓರ್ವ ಹಿರಿಯ ಕಲಾವಿದೆಯದ್ದು. ನನಗನಿಸಿದ ಮಟ್ಟಿಗೆ ಅದು 'ಭಾರ್ಗವಿ ನಾರಾಯಣ್', ರಂಗ ಕರ್ಮಿ ನಾಣಿಯವರ ಪತ್ನಿ. ಇನ್ನೊಂದು ತಮ್ಮದೇ ಸ್ವಂತ ಅನುಭವ. ಎರಡೂ ಮೊದಲ ಪ್ರೇಮ. ಎರಡರ ಹೋಲಿಕೆಯನ್ನೂ ಲೇಖಕರು ಮಾಡುತ್ತಾರೆ. ಎರಡೂ ದುಖಾಂತದಲ್ಲಿ ಕೊನೆಗೊಳ್ಳುತ್ತದೆ.

ಹದಿನೈದನೇ ಹಾಗು ಹದಿನಾರನೇ ಅಂಕಣ: ಮಠ ಚಿತ್ರಕ್ಕೆ ಮೀಸಲು. ಸೆನ್ಸಾರ್ ಸ್ಕ್ರಿಪ್ಟು ನೋಡಿ ಸಿನಿಮಾ ನೋಡದೆಯೇ ಕೆಂಗಣ್ಣಿಗೆ ಗುರಿಯಾದದ್ದು, ಸಿನಿಮಾ ನೋಡಿ ಆನಂದಿಸಿದ್ದು, ನಿರ್ದೇಶಕರು ಅದರ ಪೂರ್ವ ತಯಾರಿಗೆ ಎರಡು ಸೂಟ್ ಕೇಸು ಸಾಕ್ಷಿ ಪುರಾವೆಗಳನ್ನು ಹೊತ್ತು ಕೊಂಡು ಹೋದದ್ದು ಎಲ್ಲವು ನಗಿಸುತ್ತದೆ. ತನ್ನ ಸ್ವ ಸಾಮರ್ಥದ ಮೇಲೆ ನಂಬಿಕೆ ಇರುವ ನಿರ್ದೇಶಕನ ಧೈರ್ಯ, ನಿಮ್ಮನ್ನು ಎರಡೂವರೆ ಗಂಟೆ ಖುಷಿ ಪಡಿಸುತ್ತೇನೆ ಎನ್ನುವ ಅಚಲ ವಿಶ್ವಾಸ, ಗುರು ಅವರ ಬಗ್ಗೆ ನಮ್ಮಲ್ಲಿ ಗೌರವ ನೂರ್ಮಡಿಸುವಂತೆ ಮಾಡುತ್ತದೆ.

ಹದಿನೇಳನೆ ಅಂಕಣ: ಸಿನಿಮಲೋಕದ ಹಲವು ಸತ್ಯಗಳನ್ನು ಹೊರಗೆಡಹುತ್ತಾ ಅದರ ವಿವಿಧ ರಂಗುಗಳ ಬಣ್ಣನೆ ಮಾಡುತ್ತಾರೆ ಗುರು. ಬ್ಲಾಕ್ ಎಂಬ ಹಿಂದಿ ಸಿನಿಮಾ ಬಿಡುಗಡೆ ಆದ ಸಮಯ. ಅವರು ಅ ಚಿತ್ರದ ಬಗ್ಗೆ ಬಹಳ ಖುಷಿಯಲ್ಲಿದ್ದಾರೆ. ನನಗೆ ತಿಳಿದ ಮಟ್ಟಿಗೆ ಅದು ಹೆಲ್ಲೇನ್ ಕೆಲ್ಲರ್ ರ ಕಥೆ. ನಾನು ಆ ಚಿತ್ರ ನೋಡಿಲ್ಲ. ಅದರ ಬಗ್ಗೆ ಇಲ್ಲಿ ಬರೆಯಲಿಚ್ಚಿಸುವುದೂ ಇಲ್ಲ.

ಹದಿನೆಂಟನೆ ಅಂಕಣ: ಇದು ಒಂದು ಸಂದರ್ಶನ. ಸಂಯುಕ್ತ ಕರ್ನಾಟಕದಲ್ಲಿ ಇದೇ(2010) ಜೂನ್ ನಲ್ಲಿ ಪ್ರಕಟವಾದುದು. ಇಲ್ಲಿ ಗುರು ತಮ್ಮ ಇಲ್ಲಿಯವರೆಗಿನ ಹಾದಿ, ಮುಂದಿನ ಗುರು ಎಲ್ಲವನ್ನು ಹೊರಗೆಡಹಿದ್ದಾರೆ. ಕನ್ನಡದಲ್ಲಿ ೨೦ ಸಿನಿಮಾ ಮಾಡುವ ಇರಾದೆ ಓದಿ ಬಹಳವೇ ಖುಷಿ ಆಯಿತು. ಇನ್ನೊಂದು ಕಡೆ ಬೇಜಾರೂ ಆಯಿತು. ಇನ್ನೂ ಹೆಚ್ಚು ಚಿತ್ರಗಳು ಅವರ ಬತ್ತಳಿಕೆಯಿಂದ ಬರಲಿ. ಅವರ ಸತತ ಅಧ್ಯಯನ, ೫೦೦೦ಕ್ಕೂ ಹೆಚ್ಚು ಚಿತ್ರ ವೀಕ್ಷಣೆಯ ಅನುಭವ, ಕನ್ನಡ ಚಿತ್ರಗಳ ಬಗೆಗೆ ಅವರಲ್ಲಿರುವ ಕಳಕಳಿ ಯಾರನ್ನಾದರೂ ಮೆಚ್ಚಿಸುವಂಥಹದ್ದೆ.ಚಿತ್ರರಂಗದ ಅವರ ಕೆಲ ಅನುಭವಗಳು, ಅವರ ಉಪೇಂದ್ರರ ನಡುವಿನ ಸಂಬಂಧ, ಎಲ್ಲದರ ಬಗ್ಗೆ ಮಾತನಾಡುತ್ತಾರೆ. ಕಡೆಗೆ ಆಸ್ಕರ್ ಪ್ರಶಸ್ತಿಗೂ ಕಣ್ಣು ಹಾಕಿದ್ದಾರೆ. ಅವರು ಇಚ್ಚಿಸುವ ಎಲ್ಲವೂ ಅವರಿಗೆ ದಕ್ಕಲಿ ಎಂದು ನಾವು ಹಾರೈಸುತ್ತೇವೆ. aಆದರೆ ಅವರು ಕನ್ನಡ ಚಿತ್ರಗಳನ್ನೇ ಯಾವಾಗಲು ಮಾಡಲಿ ಎಂಬುದು ನಮ್ಮ ಆಸೆಯಷ್ಟೇ.

ಗುರು ಅವರಲ್ಲಿ ಕಾಣಬಹುದಾದ ಇನ್ನೊಂದು ಪ್ರಮುಖ ಅಂಶವೇನೆಂದರೆ, ತನ್ನ ಸಾಮರ್ಥ್ಯದ ಬಗ್ಗೆ ಅಚಲ ವಿಶ್ವಾಸವಿರುವುದು. ಅವರ ಈ ಗುಣ ನಮಗೆ ದೇವುಡು ರನ್ನು ಭೈರಪ್ಪನವರನ್ನು ನೆನೆಯುವಂತೆ ಮಾಡುತ್ತದೆ. ಇವರುಗಳಂತೆಯೇ ಗುರು ರವರ ಕನ್ನಡ ಅಸ್ಖಲಿತವಾದುದು.

ಕಡೆಯದಾಗಿ ಯಾವುದೇ ಪುಸ್ತಕದ ಬಗ್ಗೆ ಎಷ್ಟೇ ವಿಮರ್ಶೆ ಬರೆದರೂ ಅದನ್ನು ಓದಿದಂತಾಗುವುದಿಲ್ಲ. ನಿಮ್ಮಲ್ಲಿ ನನ್ನ ಅರಿಕೆಯೇನೆಂದರೆ ಈ ಪುಸ್ತಕವನ್ನು ಕೊಂಡು ಓದಿ. ನೀವು ಖಂಡಿತ ಇಷ್ಟ ಪಡುತ್ತೀರ. ನಿಮಗೆ ಗುರುಪ್ರಸಾದರ ಬಗ್ಗೆ ಒಲವಿದ್ದಲ್ಲಿ ನೀವು ಖಂಡಿತ ಆ ಕೆಲಸವನ್ನು ಮಾಡುವಿರೆಂದು ನನಗೆ ತಿಳಿದಿದೆ. ಓದಿದ ಮೇಲೆ ಇಲ್ಲಿ ಬಂದು ಒಂದು ಕಾಮೆಂಟ್ ಬರೆಯಿರಿ. ಅವರಿಂದ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಪುಸ್ತಕಗಳೂ ಚಿತ್ರಗಳೂ ಬರಲಿ.

ಸರಿ ಮುಂದಿನ ಅಂಕಣದಲ್ಲಿ ಮತ್ತೆ ಭೇಟಿಯಾಗುತ್ತೇನೆ. ಬರ್ಲಾ?

ವಿಶೇಷ ಸೂಚನೆ: ಕೆಲವು ಕಡೆ ಉತ್ಪ್ರೇಕ್ಷೆ ಎನಿಸುವಂತೆ ಬರೆಯಲಾಗಿದೆ ಎಂದೆನಿಸಿದರೆ, ಅದು ಈ ಪುಸ್ತಕದ ಗುಣ. ಇದಕ್ಕೆ ನಾನು ಜವಾಬ್ದಾರನಲ್ಲ.

Wednesday, December 30, 2009

ಎರಡು ದಿನ ಎರಡು ಸಾವು.

ನೀವು ಕರ್ನಾಟಕದಲ್ಲಿದ್ದರೆ ಮಾಧ್ಯಮದಲ್ಲಿ, ಮೊಬೈಲಿನಲ್ಲಿ ನೀವೆಲ್ಲ ಈ ಸುದ್ದಿಯನ್ನು ಕೇಳೇ ಇರುತ್ತೀರಿ. ನಿನ್ನೆ ಸರಿ ಸುಮಾರು ಮಧ್ಯಾಹ್ನ ಹನ್ನೆರಡು ಗಂಟೆಗೆ ಸುಗಮ ಸಂಗೀತ, ಜನಪದ ಪ್ರಾಕಾರಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡ ಪ್ರಸಿದ್ಧ ಸಂಗೀತ ನಿರ್ದೇಶಕ, ಸಿ. ಅಶ್ವಥ್ ತೀರಿಕೊಂಡರು. ಕಿಡ್ನಿ ವೈಫಲ್ಯ ಅವರ ಸಾವಿಗೆ ಕಾರಣವಾಯಿತು. ಅದಾದ ದಿನದ ಒಳಗೆ ಕನ್ನಡ ಚಿತ್ರರಂಗದ ಪ್ರಮುಖ ನಟ ಡಾ|| ವಿಷ್ಣುವರ್ಧನ್ ಹೃದಯ ವೈಫಲ್ಯದಿಂದ ಬಳಲಿ ಆಸ್ಪತ್ರೆಗೆ ಸೇರುವ ಮುನ್ನವೇ ತೀರಿಕೊಂಡರೆಂದು ಈ ಬೆಳಿಗ್ಗೆ ಸುದ್ದಿ ಬಂತು.

ಇಬ್ಬರ ಸಾವನ್ನೂ ಬೇರೆ ಬೇರೆಯಾಗಿ ನಿರಪೇಕ್ಷವಾಗಿ ನೋಡೋಣ.

ಮೊದಲು ಅಶ್ವಥ್. ವಾರಗಳ ಹಿಂದೆ ಪತ್ರಿಕೆಯಲ್ಲಿ ಅಶ್ವಥ್ ರವರು ಅಸ್ವಸ್ಥರಾಗಿದ್ದರು ಎಂದು ಪ್ರಕಟವಾಗಿತ್ತು. ಅವರ ಆರೋಗ್ಯ ಅಷ್ಟರ ಮಟ್ಟಿಗೆ ಸರಿಯಾಗಿಲ್ಲವೆಂದು ಆಗಲೇ ಎಲ್ಲರಿಗೂ ತಿಳಿದಿತ್ತು. ಅವರು ಅಗಲುವ ಸಮಯ ಸನ್ನಿಹಿತವಾಯಿತೆಂದು ನಮಗೆಲ್ಲ ಆಗಲೇ ತಿಳಿಯಿತು. ಅವರ ಹುಟ್ಟಿದ ದಿನವೇ (ಆಂಗ್ಲ ನಿಯತಕಾಲಿಕದ ಪ್ರಕಾರ) ಅವರು ದೇಹತ್ಯಾಗ ಮಾಡಿದ್ದು ಅವರ ಸುಕೃತವೋ, ಕರ್ಮವೋ ನಾ ಕಾಣೆ. ೭೦ ವಸಂತಗಳನ್ನು ಅವರು ಕಳೆದದ್ದು ಹಲವಾರು ಸುಮಧುರ ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ ಕೀರ್ತಿಗೆ ಪಾತ್ರರಾಗುತ್ತಾರೆ. ಅವರ ಶ್ರಾವಣ, ದೀಪಿಕಾ, ಕೈಲಾಸಂ ಹಾಡುಗಳು, ಕುವೆಂಪು ಹಾಡುಗಳನ್ನು ನಾನು ಹಲವಾರು ಬಾರಿ ಕೇಳಿದ್ದೇನೆ. ಇನ್ನಿತರ ಹಾಡುಗಳನ್ನು ನಾನು ರೇಡಿಯೋದಲ್ಲಿ ಕೇಳಿ ಆನಂದಿಸಿದ್ದೇನೆ.

ಹಲವಾರು ಸಿನಿಮಾ ಹಾಡುಗಳಿಗೆ ಧ್ವನಿಯಾದ ಅಶ್ವಥ್ ಕೆಲವು ಚಿತ್ರಗಳಿಗೆ ಸಂಗೀತವನ್ನೂ ನೀಡಿದ್ದಾರೆ. ಕಾಕನಕೋಟೆ, ಕಾಡು ಕುದುರೆ, ಹೀಗೆ ಹಲವು ಚಿತ್ರಗಳಿಗೆ ಸಂಗೀತವನ್ನೋದಗಿಸಿದ್ದಾರೆ. ಅವರ ಇತ್ತೀಚಿನ ಹಾಡುಗಳು 'ತಪ್ಪು ಮಾಡದವ್ರ್ ಯಾರವ್ರೆ?' 'ಕೆಂಚಾಲೋ ಮಚ್ಚಾಲೋ' ಇಂದಿಗೂ ಎಲ್ಲ ಚಿತ್ರ ರಸಿಕರ ಬಾಯಲ್ಲಿ ಓಡಾಡುತ್ತಿರುತ್ತದೆ. ಈ ರಸಿಕರಲ್ಲಿ ಹಲವರಿಗೆ ಅಶ್ವಥ್ ರ ಬಗ್ಗೆ ಹೆಚ್ಚು ತಿಳಿದಿಲ್ಲವೆಂಬುದು ವಿಷಾದಕರ.

ಹುಟ್ಟಿದವರು ಸಾಯಲೇ ಬೇಕು, ಇದು ಶತ ಸಿದ್ಧ. ಜನರಿಗೆ ಈ ನೇರ ಸತ್ಯವು ಯಾಕೆ ತಟ್ಟುವುದಿಲ್ಲವೋ ನನಗೆ ತಿಳಿಯುತ್ತಿಲ್ಲ. ಯಾವುದೇ ಪ್ರಮುಖ ವ್ಯಕ್ತಿ ಸತ್ತನಂತರ ಹುಯಿಲಿಡುವುದು ಸರ್ವೇ ಸಾಮಾನ್ಯ ಸಂಗತಿಯಾಗಿದೆ. ಅದಕ್ಕೆ ತುಪ್ಪ ಸುರಿಯಲು ನಮ್ಮ ಹಲವು ಮಾಧ್ಯಮಗಳು ಬಕಪಕ್ಷಿಯಂತೆ ಕಾತರರಾಗಿರುತ್ತಾರೆ. ಅವರಿಗೆ ಸಾವಿನ ಬಗ್ಗೆ ಸಂತಾಪವಾಗಲಿ ಸಂಕತವಾಗಲಿ alla.  ಸುದ್ದಿ ಬಿತ್ತರಿಸುವ ತವಕವಷ್ಟೇ. ಈ ತತ್ವವನ್ನೆಲ್ಲ ಆಮೇಲೆ ಮಾತಾಡೋಣ.

ಬೆಳಿಗ್ಗೆ ಏಳುತ್ತಲೇ ನನ್ನ ಗೆಳೆಯ, ಗೆಳತಿಯರೆಲ್ಲರಿಗೂ ಒಂದು ಎಸ್.ಎಂ.ಎಸ್. ಕಳಿಸುವುದು ನನ್ನ ಅಭ್ಯಾಸ. ಇಂದಿನ ಮೆಸೇಜ್ ಕಳಿಸಿದ ನಂತರ, ೩ ಜನ ನನಗೆ ವಿಷ್ಣುವರ್ಧನರ ಸಾವಿನ ಸುದ್ದಿ ಹೇಳಿದರು. ಬೆಳಿಗ್ಗೆ ಏಳುತ್ತಲೇ ಸಾವಿನ ಸುದ್ದಿ. ಟಿವಿ ಹಚ್ಚುತ್ತಲೇ ಇದೇ ಸುದ್ದಿ. ೫ ನಿಮಿಷ ನೋಡುತ್ತಾ ನನ್ನ ಪ್ರಾತಃಕರ್ಮಗಳನ್ನು ಮುಗಿಸಲು ಎದ್ದೆ.

ಎಲ್ಲ ಮುಗಿಸಿ ಪುನಃ ಸ್ವಲ್ಪ ಹೊತ್ತು ಟಿವಿ ನೋಡುತ್ತಾ ಕುಳಿತೆ. ಎಲ್ಲೆಡೆಯೂ ಇದೇ ಸುದ್ದಿ. ಈ ಇಡೀ ದಿನ ಇದೇ ಸುದ್ದಿಯೆಂದು ಖಾಯಂ ಆದ ಮೇಲೆ ಟಿವಿ ನೋಡುವುದನ್ನು ಬಿಟ್ಟು ಎದ್ದೆ.

ವಿಷ್ಣುವರ್ಧನರ ಬಗ್ಗೆ ಬರೆಯುವುದು ಸ್ವಲ್ಪವಿದೆ. ಈ ಹೊತ್ತಿನಲ್ಲಿ ಕೆಲವರಿಗೆ ಅದು ಸ್ವಲ್ಪ ಆಘಾತಕಾರಿಯಾದರೂ ನಿಷ್ಟುರವಾಗಿ ಹೇಳುವುದು ನನ್ನ ಕರ್ತವ್ಯವೆಂದು ಭಾವಿಸುತ್ತಾ ಬರೆಯುತ್ತೇನೆ.

ವಿಷ್ಣುವರ್ಧನ್ ಒಬ್ಬ ಒಳ್ಳೆಯ ನಟ ಎಂಬುದು ಎಲ್ಲರೂ ತಿಳಿದ ವಿಷಯ. ಅವರ ಸಾವಿನ ನಂತರ ಕೆಲವು ವೆಬ್ ಸೈಟುಗಳು ಕೆಲವು ಕಳಪೆ ದರ್ಜೆಯ ಸರ್ವೆಗಳನ್ನು  ಮಾಡುತ್ತಿದ್ದಾರೆ. ರಾಜಕುಮಾರ್ ಹಾಗು ವಿಷ್ಣುವರ್ಧನ್ರಲ್ಲಿ   ಯಾರು ಉತ್ತಮ? ರಾಜಕುಮಾರ್ ಹಾಗು ವಿಷ್ಣುವರ್ಧನ್ರಲ್ಲಿನ ದ್ವೇಷವನ್ನು ಅಭಿವ್ಯಕ್ತಿಸಿದ್ದಾರೆ. ಅವರೆಲ್ಲರಿಗೆ ಬುದ್ಧಿ ಬರಲಿ ಎಂದು ನಾವು ಹಾರೈಸೋಣ.

ಚಿತ್ರರಂಗದಲ್ಲಿ ಅವರು ನಡೆದ ಹಾದಿಯನ್ನು ನೋಡೋಣ. ೯೦ರ ದಶಕದವರೆಗೂ ಅವರ ಹೆಚ್ಚಿನ ಚಿತ್ರಗಳಲ್ಲಿ ಸತ್ವಯುತವಾದ ಕಥೆಯಿರುವುದನ್ನು ನಾವು ಕಾಣಬಹುದು. ವಂಶವೃಕ್ಷದಲ್ಲಿ ಬಾಲನಟನಾಗಿ ಬಣ್ಣದ ಬದುಕಿಗೆ ನಾಂದಿ ಹಾಡಿದ ವಿಷ್ಣು, ಪ್ರಮುಖ ನಟರಾದದ್ದು ಪುಟ್ಟಣ್ಣ ಕಣಗಾಲರ 'ನಾಗರಹಾವು' ಚಿತ್ರದ ಬಳಿಕ. ಆಶ್ಚರ್ಯವೆಂದರೆ ಅಂಬರೀಶ್ ರವರೂ  ಇದೇ ಚಿತ್ರದಿಂದ ತಮ್ಮ  ಪ್ರಯಾಣವನ್ನು ಪ್ರಾರಂಭಿಸಿದರು. ನಾಗರಹಾವಿನ ಸಿಟ್ಟಿನ ಯುವಕನ ಪಾತ್ರದಲ್ಲಿ ಅವರು ಮಿಂಚಿದರು.

ಅಲ್ಲಿಂದ ಹೆಚ್ಚಿನ ಪಕ್ಷ ಅಂತಹ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತ ಬಂದರು. ಸಹೋದರರ ಸವಾಲ್, ಕಳ್ಳ ಕುಳ್ಳ, ಚಾಣಕ್ಯ, ಜಿಮ್ಮಿ ಗಲ್ಲು, ಖೈದಿ, ಸಾಹಸ ಸಿಂಹ ಹೀಗೆ ಇನ್ನಿತರ ಚಿತ್ರಗಳಲ್ಲಿ ಕಾಣಿಸಿಕೊಂಡರು. ವೈವಿಧ್ಯ ಬೇಕೆಂದು ಇನ್ನು ಹಲವು ಪಾತ್ರ ಮಾಡಿದ್ದರಲ್ಲಿ ಪ್ರಮುಖವಾದದ್ದು ಹೊಂಬಿಸಿಲು, ಅವಳ ಹೆಜ್ಜೆ, ಗಲಾಟೆ ಸಂಸಾರ. ಇಂತಹ ಪಾತ್ರಗಳಲ್ಲೂ ಗಟ್ಟಿಗರು ಎಂದೆನಿಸಿಕೊಂಡರು.

ಇದಾದ ನಂತರ, ೮೦ರ ದಶಕದಲ್ಲಿ ಹೆಚ್ಚಾಗಿ ಕೌಟುಂಬಿಕ ಚಿತ್ರಗಳತ್ತ ವಾಲಿದರು. ಕರ್ಣ, ಕಥೆಗಾರ, ಜೀವನ ಚಕ್ರ, ಕರುಣಾಮಯಿ, ಒಂದಾಗಿ ಬಾಳು, ಹೃದಯಗೀತೆ, ಮಲಯ ಮಾರುತ ಎಲ್ಲವೂ ಹೆಸರು ಮಾಡಿದ ಚಿತ್ರಗಳು. ಇಲ್ಲಿ ಹಲವು ಚಿತ್ರಗಳನ್ನು ನಾನು ಹೆಸರಿಸಿಲ್ಲ. ೮೦ನೆ ದಶಕದ ಮೊದಲಲ್ಲಿ ಬಂದ 'ಬಂಧನ' ಚಿತ್ರ ಒಂದು ಹೊಸ ರೀತಿಯ ಚಿತ್ರಗಳನ್ನು ಹುಟ್ಟು ಹಾಕಿತೆಂದು ಹೇಳಿದರೆ ಅತಿಶಯವಲ್ಲ.

೯೦ರ ದಶಕದ ಮೊದಲಿನಲ್ಲಿ ಒಳ್ಳೆಯ ಚಿತ್ರಗಳನ್ನೇ ಕೊಡುತ್ತ ಬಂದ ವಿಷ್ಣು, ಅದಾದ ನಂತರ ಸತ್ವಯುಕ್ತವಾದ ಯಾವುದೇ ಸ್ವಮೇಕ್ ಚಿತ್ರದಲ್ಲಿ ನಟಿಸದಿದ್ದಿದ್ದು ವಿಷಾದಕರ. ೯೦ರ ದಶಕದ ಮೊದಲಲ್ಲಿ ಬಂದ ಸುಪ್ರಭಾತ, ಮುತ್ತಿನಹಾರ ಭರ್ಜರಿ ಯಶಸ್ಸು ಗಳಿಸಿತು. ನಂತರ ಸುನಿಲ್ ಕುಮಾರ್ ದೇಸಾಯಿ ಅವರ ಸಂಘರ್ಷ, ನಿಷ್ಕರ್ಶ ಚಿತ್ರಗಳೂ ಚೆನ್ನಾಗಿದ್ದವು. ನಂತರ ವಿಷ್ಣು ಹೆಚ್ಚಾಗಿ ರಿಮೇಕ್ ಚಿತ್ರಗಳತ್ತ ವಾಲಿದರು. ಈ ಮಧ್ಯ ಕೆಲವು ಸ್ವಮೇಕ್ ಚಿತ್ರಗಳಲ್ಲಿ ಕೆಲಸ ಮಾಡಿದ್ದೆಂದರೆ ಹಾಲುಂಡ ತವರು, ಮಾತಾಡ್ ಮಾತಾಡ್ ಮಲ್ಲಿಗೆ ಚಿತ್ರಗಳು.

ಅವರ ರಿಮೇಕ್ ಚಿತ್ರಗಳು ಗೆದ್ದಿರಬಹುದು. ಆದರೆ ಅವರ ನೈಜ ಅಭಿಮಾನಿಗಳನ್ನು ಕಳೆದುಕೊಳ್ಳುವಲ್ಲಿ ಅದು ಸಹಕಾರಿಯಾಯಿತು. ೯೦ರ ದಶಕದ ನಂತರ ಅವರು ಮಾಡಿದ ೯೦% ಹೆಚ್ಚಿನ ಚಿತ್ರಗಳು ರಿಮೇಕ್ ಗಳು. ಕೆಲವನ್ನು ಹೆಸರಿಸಬೇಕೆಂದರೆ ಯಜಮಾನ, ಸಿಂಹಾದ್ರಿಯ ಸಿಂಹ, ಕೋಟಿಗೊಬ್ಬ, ಆಪ್ತಮಿತ್ರ, ಜಮೀನ್ದಾರರು, ಸೂರ್ಯವಂಶ, ಬಳ್ಳಾರಿ ನಾಗ, ನಮ್ ಯಜಮಾನ್ರು, ವಿಷ್ಣು ಸೇನಾ, ಇತ್ಯಾದಿ ಇತ್ಯಾದಿ. ಹಲವು ಚಿತ್ರಗಳು ಕಳಪೆ ದರ್ಜೆಯವು ಎಂದು ಹೇಳಲು ವಿಷಾದಿಸುತ್ತೇನೆ.

ಅದರಲ್ಲಿಯೂ ಆ ಆಪ್ತಮಿತ್ರ ಚಿತ್ರವಂತೂ ನೋಡಿ ತಲೆ ಕೆಟ್ಟುಹೋಯಿತು. ೯೦ರ ದಶಕದ ನಂತರ ನಾನು ಅವರ ಸಿನೆಮ ನೋಡುವುದಿಲ್ಲವೆಂದು ತೀರ್ಮಾನಿಸಿದ್ದಕ್ಕೆ ಇದೇ ಕಾರಣ.

ಇರಲಿ. ರಾಜಕುಮಾರ್ ರ ನಂತರ ಕನ್ನಡ ಚಿತ್ರರಂಗದ ಚುಕ್ಕಾಣಿ ಹಿಡಿಯಲು ಸರಿಯಾದ ವ್ಯಕ್ತಿ ವಿಷ್ಣುವರ್ಧನ್ ಎಂದು ಎಲ್ಲರೂ ತೀರ್ಮಾನಿಸಿದ್ದಕ್ಕೆ ಖಡಾಖಂಡಿತವಾಗಿ ಆಗುವುದಿಲ್ಲವೆಂದು ನಿರಾಕರಿಸಿದ್ದು ಇದೇ ವಿಷ್ಣುವರ್ಧನ್. ಕನ್ನಡ ಭಾಷೆ, ಚಿತ್ರರಂಗಕ್ಕೆ ಸಂಬಂಧಿಸಿದಂತೆ ಯಾವುದೇ ಬಿಕ್ಕಟ್ಟಿಗೆ ಮುಂದೊತ್ತಿ ಹೋಗಲು ನಿರಾಕರಿಸುತ್ತಿದ್ದರು. ಇಂಥಾದ್ದರಲ್ಲಿ ಕೆಲವರು ರಾಜಕುಮಾರ್ ರಿಗೂ ವಿಷ್ಣುವರ್ಧನ್ ರಿಗೂ ತುಲನೆಯಲ್ಲಿ ತೊಡಗುತ್ತಾರೆ.  ವಿಪರ್ಯಾಸ.

ಕೊನೆಯದ್ದಾಗಿ ಒಂದು ಹೇಳಲಿಚ್ಛಿಸುತ್ತೇನೆ. ಆಪ್ತಮಿತ್ರ ಬಿಡುಗಡೆಯಾಗುವ ಮುನ್ನ ನಟಿ ಸೌಂದರ್ಯ ಸತ್ತರು. ಆ ಅನುಕಂಪದಿಂದಷ್ಟೇ ಆ ಚಿತ್ರ ೧ ವರ್ಷ ಓಡಿತು. ಇನ್ನು ಅದರ ಮುಂದುವರಿದ ಭಾಗ, ಆಪ್ತರಕ್ಷಕ, ವಿಷ್ಣುವರ್ಧನರ ಸಾಆವಿನ ಛಾಯೆಯಲ್ಲಿ ಅದೇನೇ ಕಥೆಯಿದ್ದರೂ ೧ ವರ್ಷ ಓಡುವುದು ಶತಸಿದ್ದ.

ಸತ್ತವರ ಬಗೆಗೆ ಕಟುವಾಗಿ ಮಾತಾಡಬಾರದು ನಿಜ. ವಿಷ್ಣುವರ್ಧನರ ಹಳೆಯ ಸಿನೆಮಾಗಳ ಬಗ್ಗೆ ಈಗಲೂ ನನಗೆ ಗೌರವವಿದೆ. ಆದರೆ ಅವರು ಅದನ್ನು ಕೊನೆಯ ತನಕ ಉಳಿಸಿಕೊಳ್ಳಲ್ಲಿಲ್ಲ ಎಂಬುದಷ್ಟೇ ನನ್ನ ಅಂಬೋಣ.

ಸತ್ತವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೇಡಿಕೊಳ್ಳುವುದರಲ್ಲಿ ನನಗೆ ನಂಬಿಕೆ ಅಷ್ಟಾಗಿ ಇಲ್ಲ. ಆದದ್ದಾಯಿತು ಎನ್ನುವ ಜಾಯಮಾನ ನನ್ನದು. ಕನ್ನಡ ಚಿತ್ರರಂಗ ಹಾಗು ಸುಗಮ ಸಂಗೀತ ಕ್ಷೇತ್ರ ಇಬ್ಬರು ರತ್ನಗಳನ್ನು ಕಳೆದುಕೊಂಡಿತು ಎನ್ನುವುದು ನಾಟಕೀಯವೆನ್ನಿಸುತ್ತದೆ. ಅವರು ಸತ್ತರೂ ಅವರ ಕೆಲಸದಲ್ಲಿ ಅವರನ್ನು ನೋಡಬಹುದೆನ್ನುವುದು ನನ್ನ ನೋಟ. ಏನಂತೀರ?

Saturday, August 01, 2009

ಉಪೇಂದ್ರ ನಿರ್ದೇಶನದ ಅಭಿನಯದ ಹೊಸ ಚಿತ್ರ.

ತಡವಾಗಿ ಹೇಳ್ತಾ ಇರೋದಕ್ಕೆ ಕ್ಷಮೆ ಇರಲಿ. ನಿನ್ನೆ ಪ್ರಜಾವಾಣಿ ಕೊನೆ ಪುಟ ಓದ್ತಾ ಇದ್ದಾಗ ಇದನ್ನು ನೋಡಿ ಬಹಳನೇ ಖುಷಿ ಆಯಿತು.

ಉಪೇಂದ್ರ ತಮ್ಮ ಹೊಸ ನಿರ್ದೇಶನದ ಚಿತ್ರ ತಯಾರಿಸೋಕೆ ನಿರ್ಧಾರ ಮಾಡಿದ ಹಾಗಿದೆ. ಎಲ್ಲ ಹಳೆಯ ನಿರ್ಧಾರಗಳನ್ನು ಹುಸಿಯಾಗಿಸಿ ಒಂದು ಹೊಸ ಚಿತ್ರ ತಯಾರಿಸಲು ಮುಂದಾಗಿದ್ದಾರೆ ಎಂದು ಹೇಳಲು ಹೊಸ ಮಾಹಿತಿ ದೊರಕಿದೆ. ಪ್ರಜಾವಾಣಿಯಲ್ಲಿ ಖಾತೆ ಇಲ್ಲದವರಿಗೆ ಅದರ ನಕಲನ್ನು ನಾನು ತೆಗೆದಿದ್ದೇನೆ ಆದರೆ ಅದರ ಸಂಪೂರ್ಣ ಹಕ್ಕುಗಳು ಪ್ರಜಾವಾಣಿ ಹಾಗು ಈ ಚಿತ್ರದ ನಿರ್ಮಾಪಕರಿಗೆ ಸಲ್ಲುತ್ತದೆ.


ಈ ಹಿಂದೆ ಅವರು ನಿರ್ದೇಶನ ಮಾಡುತ್ತಿದ್ದರೆ ಎಂದು ಹೇಳುವ ೨-೩ ಸುದ್ದಿ ಗಾಂಧಿನಗರಿಯಲ್ಲಿ ಓಡಾಡುತ್ತಿತ್ತು.
೧. ತಮಸೋಮಾ ಜ್ಯೋತಿರ್ಗಮಯ, ನಾಯಕನಾಗಿ ಶಿವರಾಜ್ ಕುಮಾರ್ , ನಾಯಕಿಯಾಗಿ ಪ್ರಿಯಾಂಕ (ಉಪೇಂದ್ರ ರ ಹೆಂಡತಿ) ಅಭಿನಯಿಸುತ್ತಾರೆ ಎಂದು ಇತ್ತು.
೨. ಲಂಡನ್ ಗೌಡ, ಉಪೇಂದ್ರ ನಾಯಕರಾಗಿ ಸ್ನೇಹ ಉಳ್ಳಾಲ್ ನಾಯಕಿಯಾಗಿ ಅಭಿನಯಿಸುತ್ತಾರೆ ಎಂದು ಇತ್ತು. (ಕೋಣೆಗೆ ತಿಳಿಯಿತು, ಇದು, ಯಾವುದೋ ಹಿಂದಿ ಸಿನೆಮಾ ದ ರಿಮೇಕ್ ಎಂದು.
೩. ಇದೀಗ ನಿನ್ನೆಯಿಂದ ಚಾಲ್ತಿಯಲ್ಲಿರುವ, ಉಪೇಂದ್ರ ಅಭಿನಯದ, ಅವರದೇ ನಿರ್ದೇಶನದ ಸೂಪರ್ ಅನ್ನುವ ಚಿಹ್ನೆಯ ಚಿತ್ರ.

ನಿನ್ನೆ ಈ ಸುದ್ದಿ ಕೇಳಿ ಮಜ್ಜಿಗೆ ಕುಡಿದಷ್ಟು ಸಂತೋಷ ಆಯ್ತು. (ನಂಗೆ ಹಾಲು ಕುಡಿಯೋದು ಅಷ್ಟಕ್ಕೆ ಅಷ್ಟೆ). =)

ಈ ಮೇಲಿನ ಮೂರು ಚಿತ್ರಗಳಲ್ಲಿ ಮೂರನೆಯದು ಹೆಚ್ಚು ಪ್ರಸ್ತುತ ಎನ್ನಿಸುತ್ತದೆ. ಕಾರಣಗಳು ಇಂತಿವೆ.

೧. ಮುಖ್ಯವಾಗಿ, ಮೊದಲೆರಡೂ ಉದ್ದ ಹೆಸರಿನ ಚಿತ್ರಗಳು. ಉಪೇಂದ್ರ ತಮ್ಮ ಚಿತ್ರಗಳಿಗೆ ಚಿಕ್ಕದಾಗಿ ಚೊಕ್ಕವಾಗಿ ಹೆಸರು ಇಡುವುದು ಹಿಂದಿನಿಂದ ಬಂದ ಪದ್ಧತಿ. (ತರ್ಲೆ ನನ್ ಮಗ, ಆಪರೇಷನ್ ಅಂತ ಇದಕ್ಕೆ ಅಪವಾದ), ಬೇರೆ ಎಲ್ಲ ಸಿನಿಮಾ ತೆಗೆದುಕೊಂಡರೂ ಹೆಸರು ಕೇಳಿದ ತಕ್ಷಣ ಸಿನಿಮಾ ನೋಡುವ, ಎನ್ನಿಸುವಂಥ ಶೀರ್ಷಿಕೆಗಳು. ಕೆಲವು ಚಿತ್ರಗಳ ಹೆಸರನ್ನು ಉಚ್ಚರಿಸಲು ತಡಬಡಾಯಿಸುತ್ತಾ ಇದ್ದರು. (ಉದಾ: ಶ್!, ಸ್ವಸ್ತಿಕ್,) ಇದು ಅದೇ ಸಾಲಿಗೆ ಸೇರುವ ಶೀರ್ಷಿಕೆ.

೨. ಮೊದಲೆರಡು ಚಿತ್ರಗಳ ಯಾವುದೇ ಪೋಸ್ಟರ್ ಇದುವರೆಗೆ ಕಂಡಿಲ್ಲ. ಇದು ಸುದ್ದಿ ಮಾಡಿದ್ದೆ ಪೋಸ್ಟರ್ನಿಂದ. ಅದಕ್ಕೆ ಇದು ಅತಿ ಶೀಘ್ರದಲ್ಲಿ ಸೆಟ್ಟೇರಲಿರುವ ಚಿತ್ರ ಎಂದು ನನ್ನ ಅಂಬೋಣ.

೩. ಚಿತ್ರದ ಪೋಸ್ತೆರಿನಲ್ಲೂ ಸುಮಾರು ವಿಶೇಷಗಳು ಇರುತ್ತವೆ. ಇದರಲ್ಲೂ ಅಂತ ಟಿಪಿಕಲ್ ಉಪೇಂದ್ರ ರ ವಿಶೇಷತೆಯನ್ನು ನಾವು ಕಾಣಬಹುದು.

ಇದು ಇನ್ನು ಹಲವು ಭಾಷೆಗಳಲ್ಲಿ ತೆರೆ ಕಂಡರೂ , ಇದು ಕನ್ನಡ ಸಿನಿಮಾ, ಕನ್ನಡಿಗನ ಸಿನಿಮಾ, ಕನ್ನಡಿಗರ ಸಿನಿಮಾ ಅನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ಅದಕ್ಕೆ ಇದು ಪಕ್ಕಾ ಉಪೇಂದ್ರರ ಚಿತ್ರ ಎಂದು ಖಚಿತ ಪಡಿಸಿಕೊಳ್ಳುತ್ತ, ಈ ಚಿತ್ರ ಸೆಟ್ಟೇರಿ, ಬಿಡುಗಡೆ ಆಗಿ ಶತದಿನೋತ್ಸವ ಆಚರಿಸಲಿ ಎಂದು ಕೋರುತ್ತ ಈ ಅಂಕಣವನ್ನು ಮುಗಿಸುತ್ತೇನೆ.

Monday, April 13, 2009

ಉಪೇಂದ್ರ ನಿರ್ದೇಶನದ ಹೊಸ ಚಿತ್ರ : ಲಂಡನ್ ಗೌಡ

ಉಪೇಂದ್ರ ಅವರು 'ತಮಸೋಮಾ ಜ್ಯೋತಿರ್ಗಮಯ' ಅನ್ನೋ ಚಿತ್ರ ನಿರ್ದೇಶಿಸುತ್ತಿದ್ದಾರೆ ಅಂತ ವರ್ಷದ ಹಿಂದೆ ಒಂದು ಸುದ್ದಿ ಬಂದಿತ್ತು. ಗಾಳಿಸುದ್ದಿಗಳು ಬಹು ಬೇಗ ಹರಡಿತ್ತು. ಒಮ್ಮೆ ಆ ಚಿತ್ರದಲ್ಲಿ ಉಪೇಂದ್ರ ದಂಪತಿಗಳು ಅಭಿನಯಿಸುತ್ತಾರೆ ಅಂತ ಇದ್ದರೆ, ಇನ್ನೊಮ್ಮೆ ಆ ಚಿತ್ರದ ನಾಯಕ ಶಿವರಾಜಕುಮಾರ್ ಅಂತ ಇತ್ತು.

ಇವೆಲ್ಲ ಸುದ್ದಿ ಆದಮೇಲೆ ಈಗ, ಒಂದು ವಾರದ ಹಿಂದೆ ತಾಜಾ ಸುದ್ದಿಯೊಂದು ಬಂದಿದೆ. ಅದೇನೆಂದರೆ, ಉಪೇಂದ್ರ ತಮ್ಮದೇ ನಿರ್ದೇಶನದಲ್ಲಿ ೧೦ ವರ್ಷಕ್ಕೂ ಮೇಲ್ಪಟ್ಟು ಒಂದು ಸಿನೆಮ ಮಾಡುತ್ತಿದ್ದರೆ. ಅದರ ಹೆಸರು ಲಂಡನ್ ಗೌಡ ಎಂದು. ನಾಯಕ ಅವರೇ, ನಾಯಕಿ ಕನ್ನಡದವರೇ ಆದ ಸ್ನೇಹ ಉಳ್ಳಾಲ್ ಎಂದು.

ಕೆಲವರು ಉಪೇಂದ್ರ ಈ ಚಿತ್ರ ನಿರ್ದೇಶನ ಮಾಡುವುದಿಲ್ಲ ಅಂದರೆ, ಇನ್ನು ಕೆಲವರು ಅವರು ಮಾಡುತ್ತಾರೆ ಅನ್ನುತ್ತಾರೆ. ಅದೇನೆಂದು ಕಾದು ನೋಡಬೇಕು. ಆದರೆ ಕಥೆ, ಚಿತ್ರಕಥೆ, ಉಪೇಂದ್ರರದ್ದೇ ಆಗಿರುತ್ತದೆ.

ಅವರು ಈ ಸಿನಿಮಾಕ್ಕೆ 'ಲಂಡನ್ ಗೌಡ' ಎಂದೆ ಏಕೆ ಹೆಸರಿಟ್ಟರು? ದುಬೈ ಬಾಬು ತರಹದ್ದೇ ಒಂದು ಹೆಸರು ಇಡಲು ಹೋಗಿ ಹೀಗಿತ್ತಿದ್ದರೆ ಎಂದು ಕೆಲವರು ಹೇಳುತ್ತಾರೆ. ನನಗೇನೋ ಹಾಗನ್ನಿಸುವುದಿಲ್ಲ. ಉಪೇಂದ್ರ ಯಾವಾಗಲು ತಮ್ಮ ಕಥೆಗೆ ವಿಶಿಷ್ಟ ಹೆಸರಿಡುತ್ತಾರೆ ಎಂದು ನನ್ನ ನಂಬಿಕೆ. ಕೆಲವರಿಗೆ ಅದು ವಿಚಿತ್ರವೂ ಆಗಬಹುದು, ಹೇಸಿಗೆಯೂ ಆಗಬಹುದು. ಏನೇ ಇರಲಿ. ನನ್ನ ಮಟ್ಟಿಗೆ ಆ ಹೆಸರಿಡಲು ಒಂದು ವಿಚಿತ್ರ ಕಾರಣವೆಂದರೆ

'ಲಂಡನ್ ಗೌಡ' ಈ ಹೆಸರಲ್ಲಿ ಮೊದಲ ಅಕ್ಷರಗಳ ವ್ಯಂಜನ ಭಾಗವನ್ನು ಪರಸ್ಪರ ಬದಲಾಯಿಸಿ. ಸ್ವರವು ಹಾಗೆಯೇ ಇರಲಿ. ಆಗ ನಿಮಗೆ ಉಪೇಂದ್ರರ ರಸಿಕತನ ತಿಳಿಯುವುದು. ಅದನ್ನು ನಾನು ಇಲ್ಲಿ ಬರೆಯುವುದಿಲ್ಲ. ಬರೆದರೆ ಕೆಲವರಿಗೆ ಮುಜುಗರವಾಗಬಹುದು.

ಉದಾಹರಣೆಗೆ : 'ದುಬೈ ಬಾಬು'ವನ್ನು ಇದೇ ರೀತಿ ಬದಲಾಯಿಸಿದರೆ, 'ಬುಬೈ ದಾಬು' ಎಂದಾಗುತ್ತಾರೆ. ಹೀಗೆ ಲಂಡನ್ ಗೌಡಕ್ಕೂ ಮಾಡಿ ನೋಡಿ.

=) ಮುಂದಿನ ಅಂಕಣದಲ್ಲಿ ಸಿಗೋಣ.

Friday, May 30, 2008

ರಮ್ಯಾ ಮದುವೆ ಆದ್ಮೇಲೆ ಯಾರ್ ಜೊತೆ ಇರ್ತಾರೆ?

ಬೆಳಿಗ್ಗೆ ತಿಂಡಿ ತಿನ್ತಾ ಈವತ್ತಿನ ಚಿತ್ರ ರಂಜನೆ ಓದ್ತಾ ಇದ್ದೆ. ಈ ಸುದ್ದಿ ನೋಡಿ ನಗು ತಡಿಯಕ್ಕಾಗ್ಲಿಲ್ಲ. ನೀವೇ ಪುಟ ನೋಡಿ.

ಕೊನೆ ಪ್ರಶ್ನೆಗೆ ಉತ್ತರ ನೋಡಿದ್ರೆ ಗೊತ್ತಾಗತ್ತೆ ಅವ್ರ ಮದುವೆ ಇನ್ನು ಮೂರ್ ವರ್ಷ ಇದ್ಯಂತೆ. ಆಗ ಅವರಿಗೆ ಗುರುಬಲ ಇದ್ಯಂತೆ. ಮದುವೆ ಆದಮೇಲೆ ನಟಿಸುವುದಿಲ್ಲ. ಮಕ್ಕಳು ಹಾಗು ನಾಯಿಗಳ ಜೊತೆ ಹಾಯಾಗಿ ಇರ್ತಾರಂತೆ. ಗಂಡ ಎನ್ ಮಾಡ್ಬೇಕು? ಅಥವ ಗಂಡ ನೆ ನಾಯಿ ನ? ನೀವೇ ಯೋಚನೆ ಮಾಡಿ ಹೇಳಿ.

ಇಷ್ಟನ್ನ ಹೇಳಬೇಕಿತ್ತು. ಮುಂದಿನ ಬ್ಲಾಗಲ್ಲಿ ಇನ್ನು ಹಲವು ವಿಷಯಗಳ ಬಗ್ಗೆ ಬರೀತೀನಿ.