Showing posts with label ಕನ್ನಡ. Show all posts
Showing posts with label ಕನ್ನಡ. Show all posts

Sunday, April 01, 2012

ಗೂಗಲ್ ನ ಕನ್ನಡ ಅವತರಣಿಕೆಗೆ ಒಂದು ಸಲಹೆ.

ಹೀಗೆ ಗೂಗಲ್ ಕನ್ನಡ ಬಳಸುತ್ತಿದ್ದೆ. ನೀವು ಗೂಗಲ್ ಅನ್ನು ಕನ್ನಡದಲ್ಲಿ ಉಪಯೋಗಿಸುತ್ತಿದ್ದರೂ ಅದರ ಲಾಂಛನ ಆಂಗ್ಲದಲ್ಲಿಯೇ ಬರುತ್ತಿದೆ.

ಹಾಗಾಗಿ ಗೂಗಲ್ಗಾಗಿ ನಾವೇ ಏಕೆ ಒಂದು ಹೊಸ ಆಯಾಮ ಕೊಡಬಾರದೆನ್ನಿಸಿತು? ತಕ್ಷಣ ನನ್ನ ಪೆದ್ದು ತಲೆಗೆ ಹೊಳೆದ ಆಲೋಚನೆಯನ್ನು ಕಾರ್ಯರೂಪಕ್ಕೆ ತಂದಿರಿಸಿದ್ದೇನೆ. ಕೆಳಕಂಡ ಚಿತ್ರಗಳು ಬಾಲಿಶವಾದರೂ ಅವು ನನ್ನದೆಂಬ ಖುಷಿ ನನಗಿದೆ. ನಿಮ್ಮಲ್ಲೂ ಈ ರೀತಿ ಆಲೋಚನೆ ಬಂದಿರಬಹುದು. ಹಲವರು ಇದನ್ನು ಬರೆದಿರಲೂ ಬಹುದು. ನನ್ನ ಮಟ್ಟಿಗಿನ ಯೋಚನೆಯನ್ನು ಹೊರಹಾಕಲು ಈ ಅಂಕಣವನ್ನು ಉಪಯೋಗಿಸುತ್ತಿದ್ದೇನೆ. ಗೂಗಲ್ ಇದನ್ನು ಗಣನೆಗೆ ತಂದುಕೊಂಡರೆ ಇನ್ನೂ ಹೆಚ್ಚಿನ ಖುಷಿಯಾಗುತ್ತದೆ. (ಆದರೂ ಇದು ಚಾಲ್ತಿಯಲ್ಲಿ ಬರುವ ಯಾವುದೇ ಹಂಬಲವಾಗಲಿ ನನ್ನಲಿಲ್ಲವೆಂದು ಈ ಮುಂಚೆಯೇ ಹೇಳಿಕೊಂದಿರುತ್ತೇನೆ). ನನ್ನ ಹುಚ್ಚು ಕಲ್ಪನೆಗಳನ್ನು ಹೊರಗೆಡವುತ್ತೇನೆ.

ಗೂಗಲ್ ಕನ್ನಡದ ಮುಖಪುಟಕ್ಕೆ ಈ ಚಿತ್ರ...
ನಾವು ಏನೇ ಹುಡುಕಿದರೂ ಗೂಗಲ್ ತನ್ನದೇ ಅಡಿಪಟ್ಟಿಯಲ್ಲಿ ಪುಟಗಳ ಸಂಖ್ಯೆಗಳನ್ನು ಹಾಕಿರುವುದನ್ನು ನೀವು ಕಂಡಿರುತ್ತೀರ. ಪ್ರತಿಯೊಂದು ಪುಟಕ್ಕೂ ಆಂಗ್ಲದ 'o' ಅಕ್ಷರವನ್ನು ಅಳವಡಿಸಿರುತ್ತಾರೆ. ಇದನ್ನು ಹೇಗೆ ಹೊರತರಬಹುದೆಂದು ಯೋಚಿಸುತ್ತಿದ್ದಾಗ ನನಗೆ ಈ ರೀತಿ ಸರಿಯಾಗಿ ಕಂಡು ಬಂತು.

ತುಂಬಾ ಬಾಲಿಶವಾಗಿದೆ ಎಂದು ನನಗೆ ಗೊತ್ತು. ನನ್ನ ಲಿನಕ್ಸ್ ಡಬ್ಬಿಯಲ್ಲಿ ಇರುವ ತಂತ್ರಾಂಶಗಳನ್ನು ಉಪಯೋಗಿಸಿ ಈ ಚಿತ್ರವನ್ನು ಬಿಡಿಸಿರುತ್ತೇನೆ. Gimp ಅನ್ನು ಉಪಯೋಗಿಸಬಹುದಿತ್ತು ಎಂದು ಎಲ್ಲೋ ಅನಿಸುತ್ತಿದೆ. ಅದಾನ್ನು ಕಲಿತು ಬಿದಿಸುವಷ್ಟು ವ್ಯವಧಾನ ನನ್ನಲ್ಲಿ ಸಧ್ಯಕ್ಕೆ ಇಲ್ಲವಾದ ಕಾರಣ kolourpaint ಉಪಯೋಗಿಸಿ ಬರೆದಿರುತ್ತೇನೆ. ಗೂ ಕಾರ ಬರುಬರುತ್ತಾ ಸೋತ್ತಗಾಗಿರುವುದನ್ನು ನೀವೇ ಕಣ್ಣಾರೆ ನೋಡಿದ್ದೀರಿ. ನೀವು ಉತ್ತಮ ಚಿತ್ರವನ್ನು ಕೊತ್ತಿರಾದರೆ ಅದನ್ನು ಪ್ರಕಟಿಸಿ ನಿಮ್ಮ ಹೆಸರನ್ನು ನಮೂದಿಸುತ್ತೇನೆ. :-)

ಎಲ್ಲ ಭಾರತೀಯ ಭಾಷೆಗಳನ್ನು ಇದೇ ರೀತಿ ಬರೆಯಬಹುದು ಎಂದು ನಾನು ನಂಬಿರುತ್ತೇನೆ. ಕಡೆಯ ಪಕ್ಷ ತೆಲುಗಿಗೂ ಇದನ್ನೇ ಅಳವಡಿಸಬಹುದು ಅಲ್ಲವೇ? ಈ ಮೂಲಕ ಗೂಗಲ್ ಗೆ ಕನ್ನಡದ ಜನರ ಬಳಿ ಇನ್ನೂ ಹತ್ತಿರ ಸಾಗುವ ಒಂದು ಸೂಚನೆಯನ್ನು ಕೊಡುವ ಭಾಗ್ಯ ನನ್ನದು.

ಈ ಕಾಣಿಕೆಯು ಮೂರ್ಖರ ದಿನಕ್ಕಲ್ಲ. ರಾಮನವಮಿಗೆ.

ಅಂಕಣವನ್ನು ಓದಿದ್ದಕ್ಕೆ ಧನ್ಯವಾದಗಳು.

ಶ್ರೀರಾಮ.

Sunday, September 18, 2011

ಭಾಷಾಭಿಮಾನ

ಅವನು ದಿನಸಿ ತರಲು ಅಂಗಡಿಗೆ ಹೋದ. ಒಂದೋ ಎರಡೋ ವಸ್ತುಗಳನ್ನಷ್ಟೇ ಕೊಂಡುಕೊಳ್ಳಬೇಕಾದ್ದರಿಂದ ಇವನ ಕೆಲಸ ಬೇಗ ಮುಗಿಯಿತು. ಹಣ ಪಾವತಿಸಲು ಬಿಲ್ಲಿಂಗ್ ಕೌಂಟರಿನತ್ತ ಹೆಜ್ಜೆ ಹಾಕಿದ.

ಇವನ ಎದುರುಗಡೆ ಇಬ್ಬರಿದ್ದರು. ಮುಂದಿದ್ದ ಹೆಂಗಸು, ಕೌಂಟರಿನಲ್ಲಿದ್ದವನ ಜೊತೆ ತೆಲುಗಿನಲ್ಲಿ ವ್ಯವಹರಿಸುತ್ತಿದ್ದಳು. ಬಿಲ್ಲು ೪೧ ರುಪಾಯಿಯಾಗಿದ್ದರೆ ೫೦೦ರ ನೋಟು ಮುಂದೆ ಹಿಡಿದು ಚಿಲ್ಲರೆ ಕೊಡು ಎಂದು ಲಘುವಾಗಿ ಜಗಳ ಕಾಯುತ್ತಿದಳು.

ಕೌಂಟರಿನವ: ೫೦೦ ರುಪಾಯಿ ಚಿಲ್ಲರೆ ಇಲ್ಲ ಮೇಡಂ. ಚಿಲ್ಲರೆ ಕೊಡಿ.
ಮಹಿಳೆ: ನಾ ತೋ ಲೇದು ಬಾಬು. ನುವ್ವೇ ಪಂಪಿಚ್ಚೆಯಿ.
ಕೌಂಟರಿನವ: ಇಪ್ಪುಡೆ ಓಪನ್ ಚೇಸ್ಯಾನು. ನಾ ತೋ ಲೇದು. ಮೀರೆ ಈಯಂಡಿ.
....
....
....

ಕೊನೆಗೂ ಜಗಳ ಮುಗಿದು ಅವನು ತನ್ನ ಕ್ಯಾಶ್ ಕೌಂಟರಿನಲ್ಲೆ ಚಿಲ್ಲರೆ ಹುಡುಕಿ ಹುಡುಕಿ ತೆಗೆದು ಕೊಟ್ಟ.

ಅವಳು ಚಿಲ್ಲರೆ ತೆಗೆದುಕೊಂಡು ತನ್ನ ಕಾರಿನತ್ತ ಕಾಲ್ಕಿತ್ತಳು. ಅವಳ ಹಿಂದಿದ್ದ ಆಸಾಮಿಗೆ ಕೌಂಟರಿನವ 'ಅವಳ ಧಿಮಾಕು ನೋಡು' ಎಂದು ದೂರಿತ್ತನು. ಆ ಆಸಾಮಿಯೂ ಅವನ ಕೋಪಕ್ಕೆ ಸೊಪ್ಪು ಹಾಕುತ್ತ ತನ್ನ ಕೆಲಸವನ್ನು ಮುಗಿಸಿದನು.

ಈಗ ಇವನ ಸರದಿ. ೩೪ ರುಪಾಯಿ ವ್ಯಾಪಾರ ಮಾಡಿದ್ದ. ೫೦ ರುಪಾಯಿಯನ್ನಿತ್ತು ಚಿಲ್ಲರೆಗಾಗಿ ಕಾದು ನಿಂತ.

ಕೌಂಟರಿನವ: ಚಿಲ್ಲರೆ ಬೇಕು ಸಾರ್! ಚಿಲ್ಲರೆ ಕೊಡಿ.
ಇವನು: ಇಲ್ಲಪ್ಪ. ನನ್ನ ಹತ್ರ ಬರೀ ಈ ೫೦ ರುಪಾಯಿ ಮಾತ್ರ ಇದೆ.
ಕೌಂಟರಿನವ: ಎಲ್ಲ ಹೀಗಂದ್ರೆ ನಾನ್ ಎಲ್ಲಿಗೆ ಹೋಗ್ಲಿ? ಸರಿ, ಇನ್ನು ರುಪಾಯಿಗೆ ಏನಾದ್ರೂ ತೊಗೊಳ್ಳಿ.

ಇವನು ವಿಧಿಯಿಲ್ಲದೇ ೫ ರುಪಾಯಿಗೆ ಸಣ್ಣ ಮಕ್ಕಳು ತಿನ್ನುವ ಚಾಕಲೇಟ್ ಕೊಂಡ. ೧೧ ರುಪಾಯಿ ಚಿಲ್ಲರೆಯನ್ನಿತ್ತು ಅವನು ಮುಂದಿನ ಗಿರಾಕಿಯತ್ತ ಕೇಳಿದ.

ಅವನ್ಯಾರೋ ಹಿಂದಿಯವ. 'ಚಾವಲ್ ಕಾ ರೇಟ್ ಕ್ಯಾ ಹೇ??'
ಕೌಂಟರಿನವ: ಹಿಂದಿ ಇಲ್ಲ. ಕನ್ನಡ ಕನ್ನಡ!! ಹಿಂದಿ ನಹಿ.

ಸಾಮಾನು ತೆಗೆದುಕೊಳ್ಳುತ್ತಿದ್ದ ಇವನಿಗೆ ರೇಗಿತು. 'ಹಿಂದಿ ಬೇಡ ಅನ್ನೋ ನೀವು, ತೆಲುಗಲ್ಲಿಯೂ ಮಾತಾಡಬೇಡಿ. ಬರೀ ಕನ್ನಡದಲ್ಲೇ ಮಾತಾಡಿ' ಎಂದು ಹೇಳಿ ಅಲ್ಲಿಂದ ಹೋರಾಟ.

ಕೌಂಟರಿನವನ ಮೊಗದಲ್ಲಿ ಏನೋ ಅರ್ಥವಾದ ಹೊಸ ನಗುವಿತ್ತು.

Friday, August 26, 2011

ಎಲ್ಲರಿಗೂ ಕನ್ನಡ ಕಲಿಸುವ ಪದ: ಮಾಡಿ

ರೀ ಡ್ರೈವರ್!! ಡೋರ್ ಓಪನ್ ಮಾಡಿ!

ರೀ! ಸ್ವಾಮಿ! ಸ್ವಲ್ಪ ಅಡ್ಜಸ್ಟ್ ಮಾಡ್ಕೊಂಡ್ ಒಳಗ್ ನುಗ್ಗ್ರಿ!

ಎಂಜಾಯ್ ಮಾಡಿ!!

ಸ್ವಲ್ಪ ಸ್ಪೇಸ್ ಮಾಡಿ!!

ಹೋದ ತಕ್ಷಣ ನಂಗೆ ಒಂದು ಕಾಲ್ ಮಾಡಿ!

ಏನಿದು ಒಂದಕ್ಕೊಂದು ಸಂಬಂಧಾನೇ ಇಲ್ಲ ಅಂತ ಯೋಚಿಸ್ತಿದ್ದೀರಾ? ಇವು ನಮ್ಮ ಉದ್ಯಾನ ನಗರಿಯ ಕನ್ನಡದ ತುಣುಕುಗಳು (ಸ್ಯಾಂಪಲ್ಲುಗಳು) ಅಷ್ಟೇ.

ಮಾಡಿ.

ಬೆಂಗಳೂರಿನಲ್ಲಿ ಯಾರ ಬಳಿಗೂ ಹೋಗಿ ಕನ್ನಡದಲ್ಲಿ ಮಾತನಾಡಿದರೆ ಅವರು ಒಮ್ಮೆಯಾದರು ಈ ಪದವನ್ನು ಉಪಯೋಗಿಸದೇ ಇರುವುದಿಲ್ಲ. ಅವರಿಗೆ ಕನ್ನಡ ಬರಲಿ, ಬರದೇ ಇರಲಿ ಈ ಪದವಂತೂ ಹೆಚ್ಚಿನ ಪಕ್ಷ ತಿಳಿದೇ ಇರುತ್ತದೆ. ಕಾಲೇಜು, ಕಛೇರಿಗಳಲ್ಲಿಯ ಕನ್ನಡೇತರರಂತೂ ತುಸು ಹೆಚ್ಚಾಗಿಯೇ ಉಪಯೋಗಿಸಿದ್ದಾರೆ.

ಪ್ರಿಂಟ್ ಔಟ್ ಮಾಡಿ.
ಕ್ಲಾಸ್ ಬಂಕ್ ಮಾಡಿ.
ಲಂಚ್ ಮಾಡಿ.
ಸಿಗ್ನಲ್ ಜಂಪ್ ಮಾಡಿ.
ಸ್ಟಾಪ್ ಮಾಡಿ.
...
...
...

ಇಡೀ ವಾಕ್ಯವನ್ನು ಆಂಗ್ಲದಲ್ಲಿ ಹೇಳಿ ಕೊನೆಯಲ್ಲಿ ಈ 'ಮಾಡಿ' ಬಾಲಂಗೋಚಿಯನ್ನು ಅಂಟಿಸಿಬಿಡುತ್ತಾರೆ. ಹೀಗೆ ಹೇಳುವುದರಿಂದ ಅವರು ಕನ್ನಡ ಮಾತಾಡುತ್ತೇವೆ ಎಂದು ಸಾಧಿಸುತ್ತಾರೆ. ಕೆಲವೊಮ್ಮೆ ಈ ವಾಕ್ಯಗಳಿಗೆ ಸರಿಯಾದ ಅರ್ಥವಿರದಿದ್ದರೂ ನಮಗದು ಅರ್ಥವಾಗಿ ಬಿಡುತ್ತದೆ.

ಇದೆಲ್ಲಾ ಶುರುವಾಗಿದ್ದು ಎಲ್ಲಿಂದ? ಎಂಬ ಪ್ರಶ್ನೆಯನ್ನು ನಾವೇ ಹಾಕಿಕೊಳ್ಳುವುದು ಒಳ್ಳೆಯದು.

ನನಗೆ ತಿಳಿದ ಮಟ್ಟಿಗೆ ಇದನ್ನು ಮೊದಲು ಶುರು ಮಾಡಿದವರು ಮೊಬೈಲು ಸೇವೆಯ ವಿತರಕರಾದ 'ಸ್ಪೈಸ್' (ಈಗಿನ ಐಡಿಯಾ) ಸಂಸ್ಥೆಯವರು. ಮೊಬೈಲು ಕರೆಗಳು ದುಬಾರಿಯಾಗಿದ್ದ ಕಾಲದಲ್ಲಿ ಕಡಿಮೆ ದರದ ಪ್ಲ್ಯಾನ್ ಒಂದನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ 'ಸಿಂಪ್ಲಿ ಟಾಕ್ ಮಾಡಿ' ಎಂಬ ಅಡಿಬರಹದೊಂದಿಗೆ ಇದರ ಪ್ರಚಾರವನ್ನು ಮೊದಲುಮಾಡಿತು.

ವೃತ್ತಪತ್ರಿಕೆಗಳಲ್ಲಿ, ರೇಡಿಯೋಗಳಲ್ಲಿ ಇದನ್ನೇ ಕೇಳುತ್ತಿದ್ದ ಮಂದಿಗೂ ಇದೇ ರುಚಿ ಹಿಡಿದು ಇದರಂತೆಯೇ ತಮಾಷೆಯಾಗಿ ಮಾತನಾಡಲು ಪ್ರಾರಂಭಿಸಿತು. ಅದರಲ್ಲೇ ಒಂದು ರೀತಿಯ ಮೋಜು ಕಂಡಿತು. ಹಾಗೆ ಅದು ಬೃಹದಾಕಾರವಾಗಿ ಬೆಳೆದೂ ಬಿಟ್ಟಿತು. ನಮ್ಮ ಮಾಹಿತಿ ತಂತ್ರಜ್ಞರ ಕಿವಿಗಳ ಮೇಲೆ ಬಿದ್ದಮೇಲೆ ಅವರಿಗೆ ಎಲ್ಲಿಲ್ಲದ ಹುರುಪು ತುಂಬಿತು. ಸಿಕ್ಕ ಸಿಕ್ಕ ಕಡೆ ಇದನ್ನೇ ಉಪಯೋಗಿಸತೊಡಗಿದರು. ಬೆಂಗಳೂರಿನಲ್ಲಿರುವ ಎಲ್ಲರಿಗೂ ಈ 'ಮಾಡಿ' ಪದ ಕೆಲವೇ ದಿನಗಳಲ್ಲಿ ಎಂತಹ ಮೋಡಿ ಮಾಡಿತ್ತೆಂದು ತಿಳಿದವರೇ ಬಲ್ಲರು. ದಿನವಿಡೀ ಸಾವಿರ ಮಾಡಿಗಳನ್ನು ಕೇಳಿದವರಿದ್ದಾರೆ. ಕೇಳೀ ಕೇಳಿ ತಲೆ ಚಿಟ್ಟು ಹಿಡಿಸಿಕೊಂಡವರಿದ್ದಾರೆ.

ಪ್ರಮುಖ ಶೂ ತಯಾರಕರಾದ ನೈಕೀ ಗೆ ನಿಜವಾಗಿಯೂ ಈ ಪದದ ಅರ್ಥ ತಿಳಿದುಬಿಟ್ಟಿದ್ದರೆ ಅವರ 'Just Do it' ಕನ್ನಡದಲ್ಲಿ 'ಸುಮ್ನೆ ಮಾಡಿ' ಆಗಿಬಿಡುತ್ತಿತ್ತು. ಹೆಹ್ಹೆಹ್ಹೆ!!

ಇದನ್ನೇ ಹಲವರು ಪ್ರೇರಣೆಯಾಗಿ ತೆಗೆದುಕೊಂಡರು. ಬಟ್ಟೆ ಅಂಗಡಿಯವರು, ಚಿನ್ನದ ಅಂಗಡಿಯವರು ಇನ್ನೂ ಹಲವರು ಇದನ್ನೇ ಉಪಯೋಗಿಸಲು ಶುರು ಮಾಡಿದರು. ಎಲ್ಲರ ಬಾಯಲ್ಲಿಯೂ 'ಮಾಡಿ' ನಲಿದಾಡುತ್ತಿತ್ತು.

ಆದರೆ, ಈಗ;

ನಾವುಗಳೇ ಅದನ್ನು ಕನ್ನಡೇತರರಂತೆ ಉಪಯೋಗಿಸುತ್ತಿದ್ದೇವೆ. ಬಸ್ಸಿನಲ್ಲಿ ಎಷ್ಟು ಮಂದಿ 'ಬಾಗಿಲು ತೆಗೆಯಿರಿ' ಅನ್ನುತ್ತೇವೆ? ಎಲ್ಲರೂ 'ಡೋರ್ ಓಪನ್ ಮಾಡಿ'ಗೆ ಶರಣಾಗಿದ್ದೇವೆ. ಕಾಲ್ ಮಾಡಿ, ಫೋನ್ ಮಾಡಿ, ಕನೆಕ್ಟ ಮಾಡಿ, ಎಲ್ಲಾ ಮಾಮೂಲಾಗಿ ಬಿಟ್ಟಿದೆ. ಈ ಉದಾಹರಣೆಗಳು ಕೊಡುತ್ತಾ ಹೋದರೆ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಎಲ್ಲೋ ಒಂದು ಕಡೆ ಎಲ್ಲ ಕನ್ನಡ ಅಭಿಮಾನಿಗೂ ಇದು ಬೇಸರ ತರಿಸುತ್ತದೆ.

ಕನ್ನಡಿಗರೆಲ್ಲರಲ್ಲೂ ನನ್ನ ಮನವಿ ಇಷ್ಟೇ. ಕನ್ನಡ ಶ್ರೀಮಂತ ಭಾಷೆ. ಅದನ್ನು ಸಮೃದ್ಧವಾಗಿ ಬಳಸಿ. ಭಾಷೆ ಬರದಿರುವವರಂತೆ ಎಲ್ಲದಕ್ಕೂ 'ಮಾಡಿ'ಯನ್ನು ಆಂಟಿಸಬೇಡಿ. ಆಸಕ್ತ ಕನ್ನಡೇತರರಿಗೆ 'ಮಾಡಿ' ಯ ಬದಲು ಬೇರೆ ಪದಗಳನ್ನೂ ತಿಳಿಸಿ ಕೊಡಿ.

ಕೊನೆಯದಾಗಿ ಈ ಅಂಕಣವನ್ನು 'ಸಿಂಪ್ಲಿ ಎಂಜಾಯ್ ಮಾಡಿ' =)

Tuesday, August 16, 2011

ಪರಿವರ್ತನ

ಮಾರ್ಕೆಟ್ಟಲ್ಲಿ ಅವನು ಬಸ್ ಹತ್ತಿ ಕೂತ. ರಾತ್ರಿ ಒಂಬತ್ತೂ ಕಾಲಾದ್ದರಿಂದ ಖಾಲಿ ಖಾಲಿಯಾಗೆಯೇ ಇತ್ತು. ಗಾಳಿ ಬರಲೆಂದು ಕಿಟಕಿ ತೆರೆದು ಪುಸ್ತಕ ಓದಲು ಕೂತ.

ಮೆಜೆಸ್ಟಿಕ್ಕಿಗೆ ಬಂದ ಬಸ್ಸನ್ನು ಹಲವಾರು ಜನ ಏರಿದರು. ಇವನ ಎದುರುಗಡೆ ಒಬ್ಬ ಧಡೂತಿ ಆಸಾಮಿ ಬಂದು ಕೂತ. ಕೂತವನೇ ತನಗೆ ಬೇಕಾದಷ್ಟು ಕಿಟಕಿಯನ್ನು ತಳ್ಳಿ ತಣ್ಣನೆಯ ಗಾಳಿಯನ್ನು ಆಸ್ವಾದಿಸುತ್ತಾ ಕೂತ.

ಇವನಿಗೆ ಇರಿಸು ಮುರುಸಾಯಿತು. ಛಕ್ಕನೆ ಅವನಿಗೆ ಹೇಳಿದ: "ಸ್ವಾಮೀ, ನಾವೂ ಬಸ್ಸಲ್ಲಿದ್ದೇವೆ. ನಮಗೂ ಗಾಳಿ ಬೇಕು" ಎಂದವನೇ ಕಿಟಕಿಯನ್ನು ಮೊದಲಿದ್ದ ಹಾಗೆಯೇ ತಳ್ಳಿ ಓದಲು ಮುಂದುಮಾಡಿದ.

ಮನಸಿನಲ್ಲೇ ಬೈದುಕೊಳ್ಳುತ್ತಾ ಎದುರಿನಲ್ಲಿ ನಗುತ್ತ ಸಾವರಿಸಿಕೊಂಡು ಅವನೂ ತೆಪ್ಪಗಾದ.

ಐದು ನಿಮಿಷ ಕಳೆಯಿತು. ಸುಯಿ ಎಂದು ಬೀಸುತ್ತಿದ್ದ ಗಾಳಿ ತನ್ನ ಜೊತೆ ಭೋರ್ಗರೆಯುವ ಮಳೆಯನ್ನೂ ತಂದಿತು.

ಈಗ ಅವರಿಬ್ಬರೂ ಕಿಟಕಿ ಮುಚ್ಚುವುದಕ್ಕೆ ಮುಂದಾದರು.

Monday, August 15, 2011

ಕನ್ನಡ ವರ್ಣಮಾಲೆಯ ಅನಾಥ ಕೂಸು.

ೠ.

ನಾವೆಲ್ಲಾ ಪಾಠ ಮಾಡೋವಾಗ ಇದ್ದ ಈ ಅಕ್ಷರ ಸುಮಾರು ವರ್ಷಗಳಿಂದ ಕನ್ನಡ ವರ್ಣಮಾಲೆಯಿಂದ ಕಣ್ಮರೆಯಾಗಿದೆ. ಈಗಿನ ಮಕ್ಕಳು ಇವನ್ನು ತಮ್ಮ ಪಠ್ಯ ಪುಸ್ತಕದಲ್ಲಿ ಕಾಣುವುದಿಲ್ಲ. ನಮ್ಮ ಘನ ಕರ್ನಾಟಕ ಸರ್ಕಾರ ಈ ಅಕ್ಷರವನ್ನು ಕನ್ನಡದಿಂದ ಉಚ್ಚಾಟಿಸಿದೆ.

ನಮ್ಮ ಪುಣ್ಯ. ಇದು ಹೇಗೋ ತಂತ್ರಾಂಶದಿಂದ ಹೊರಗೆ ಹೋಗಿಲ್ಲ. ಈಗಲೂ ನಾವು ೠ ಎಂದು ಕೀಲಿಮಣೆಯಿಂದ ಬರೆಯಬಹುದು. ಇದನ್ನೂ ಹೊಡೆದೋಡಿಸದಿದ್ದರಷ್ಟೇ ಸಾಕು. ಈ ವಿಷಯ ಬರೆಯಲು ಆಗುತ್ತದೋ ಇಲ್ಲವೋ ಎಂದು ಶಂಕಿಸಿದ್ದ ನನಗೆ ತೃಪ್ತಿ ನೀಡಿತು.

ಇದಕ್ಕೆ ಕಾರಣ ಇನ್ನೂ ಹಾಸ್ಯಾಸ್ಪದ. ಸಂಸ್ಕೃತದಿಂದ ಆಯ್ದ ಈ ಸ್ವರ ಎಲ್ಲೂ ಉಪಯೋಗವಾಗಿಲ್ಲ. ಈ ಸ್ವರವನ್ನು ಉಪಯೋಗಿಸಿ ಯಾವ ಶಬ್ಧವಾಗಲಿ ಇಲ್ಲ. ಅದರಿಂದ ಇದರ ಉಪಯೋಗವಿಲ್ಲ.

ಇರಬಹುದು. ಆದರೆ ಆ ಕಾರಣ ಈ ಸ್ವರವನ್ನು ತೆಗೆದುಹಾಕಿದಲ್ಲಿ ನಾವು ಏನು ಸಾಧಿಸಿದಂತಾಗುತ್ತದೆ? ಅದು ಇದ್ದರೆ ನಮಗೇನು ಪ್ರಯೋಜನವಿಲ್ಲ; ಅಂದ ಮಾತ್ರಕ್ಕೆ ಅದನ್ನು ತೆಗೆದೇ ಬಿಡುವುದು ಯಾವ ನ್ಯಾಯ? ಸಂಸ್ಕೃತದಿಂದ ನಾವು ಎಷ್ಟೋ ಪದಗಳನ್ನು ಎರವಲು ಪಡೆದಿಲ್ಲವೇ? ಹಾಗೆಯೇ ಈ ಸ್ವರವನ್ನು ಪಡೆದಿದ್ದೆವಷ್ಟೇ. ಈ ಸ್ವರದ ಜಾಗ ಖಾಲಿ ಮಾಡಿ ನಾವು ಅಲ್ಲಿ ಏನಿಡಬೇಕಾಗಿದೆ? ಅದೆಷ್ಟು ಜಾಗ ಆಕ್ರಮಿಸಿಕೊಳ್ಳುತ್ತದೆ?

ಕೆಲವು ಜನರ ಅಭಿಪ್ರಾಯಕ್ಕೆ ಒಂದು ಸ್ವರವನ್ನೇ ಕಿತ್ತರೆ ಅದೆಷ್ಟರ ಮಟ್ಟಿಗೆ ಸರಿ?

ಆಗೀಗ ಹೊಸ ಪದಗಳನ್ನು ಟಂಕಿಸುವ ನಮಗೆ ಈ ಅಕ್ಷರ ಉಪಯೋಗಿಸಿ ಒಂದೂ ಪದವನ್ನು ಸೃಜಿಸಲು ಆಗಿಲ್ಲವೇ?

ಕನ್ನಡ ಶಬ್ದ ಬ್ರಹ್ಮರ ಎದುರು ಈ ಪ್ರಶ್ನೆಯನ್ನಿತ್ತು ಈ ಅಂಕಣವನ್ನು ಮುಗಿಸುತ್ತೇನೆ. ನನಗೇನಾದರೂ ಹೊಸ ಪದ ಆವಿಷ್ಕರಿಸಬೇಕಾಗಿ ಬಂದ ಸಂದರ್ಭದಲ್ಲಿ ಖಂಡಿತವಾಗಿಯೂ ಈ ಸ್ವರವನ್ನು ಗಣನೆಗೆ ತಂದುಕೊಳ್ಳುತ್ತೇನೆ ಎಂದು ಆಶ್ವಾಸನೆ ಕೊಡುತ್ತೇನೆ.

Saturday, July 23, 2011

ನೂತನ ಗಾಂಧಿವಾದಿ/ಉಪೇಂದ್ರವಾದಿಯೊಡನೆ ಒಂದು ಘಳಿಗೆ...

ಸುಮಾರು ಎರಡು ವಾರಗಳ ಹಿಂದೆ ಇರಬಹುದು. ಕಚೇರಿಯಿಂದ ತಡವಾಗಿ ಹೋಗುತ್ತಿದ್ದ ನನಗೆ ಮನೆಗೆ ಹೋಗಲು ಮೆಜೆಸ್ಟಿಕ್ಕಿನಿಂದ ೧೧ ಗಂಟೆಗೆ ಒಂದು ಬಸ್ಸು ಸಿಕ್ಕಿತು. ಯಥಾ ಪ್ರಕಾರ ಓಡಿ ಹೋಗಿ ಹತ್ತಿದ್ದರಿಂದ ನನಗೆ ಸೀಟು ಸಿಕ್ಕಿತು.

ಬಸ್ಸಿನಲ್ಲಿ ಬೆಳಕು ತಕ್ಕ ಮಟ್ಟಿಗೆ ಇದ್ದದ್ದರಿಂದ ನಾನು ನನ್ನ ಹವ್ಯಾಸವಾದ ಪುಸ್ತಕ ಓದುವುದನ್ನು ಮುಂದುವರಿಸಿದೆನು. ಹತ್ತು ನಿಮಿಷ ಜನರಿಗಾಗಿ ಕಾದ ಬಸ್ಸು ಹೊರಟಿತು.

ಎಲ್ಲವೂ ತಣ್ಣಗಿರಲು ಮುಂದಿನಿಂದ ಒಂದು ಸ್ವರ ಹೊರಟಿತು. ಅದು ಸುಮಾರು ೪೫-೫೦ ರ ಪ್ರಾಯದ ಗಂಡಸಿನ ಧ್ವನಿ. ಅಲ್ಲಿ ನಡೆದ ಸಂಭಾಷಣೆಯ ಯಥಾವತ್ ನಕಲು ಇಲ್ಲಿದೆ. (ಅವಾಚ್ಯ ಶಬ್ದಗಳನ್ನು ಮನ್ನಿಸಿ)

ಹಿರಿಯ ಗಂಡಸು: ರೀ ಸ್ವಾಮಿ, ನಿಮ್ಮ ಪಕ್ಕ ಒಂದ್ ಹೆಂಗಸು ನಿಂತ್ಕೊಂಡಿದೆ. ಲೇಡೀಸ್ ಸೀಟ್ ಅಲ್ಲಿ ಕೂತಿದ್ದೀರಾ, ಎದ್ದು ಅವರಿಗೆ ಜಾಗ ಕೊಡ್ರಿ.

ಆ ಕಡೆ ಇಂದ ಏನೂ ಉತ್ತರ ಬರಲಿಲ್ಲ.

ಹಿರಿಯ ಗಂಡಸು: ರೀ ರೆಡ್ ಶರ್ಟ್! ನಿಮಗೇ ಕಣ್ರೀ ಹೇಳ್ತಿರೋದು. ಪಕ್ಕದಲ್ಲಿ ಹೆಂಗಸು ನಿಂತಿರೋದು ಕಾಣಿಸುತ್ತಿಲ್ವಾ? ನಿಮ್ಮ ಅಮ್ಮ ನೋ ತಂಗಿ ನೋ ಹೀಗೇ ನಿಂತಿದ್ದರೆ ಸುಮ್ನೆ ಕೂರ್ತ ಇದ್ದ್ರಾ? ಎದ್ದು ಜಾಗ ಕೊಡ್ರಿ...

ಕಿರಿಯ ಗಂಡಸು: ರೀ ಸುಮ್ನಿರಿ ಸಾಕು. ದೊಡ್ಡದಾಗಿ ಹೇಳಕ್ಕೆ ಬಂದ್ಬಿಟ್ತ್ರು. ಸುಮ್ನೆ ನಿಮ್ಮ ಪಾಡಿಗೆ ನೀವ್ ನಿಂತ್ಕೊಳ್ಳ್ರೀ.

ಹಿರಿಯ: (ಬೇಡಿಕೊಳ್ಳುವ ಧ್ವನಿಯಲ್ಲಿ) ಅಪ್ಪ! ತಿರ್ಗ ಹೇಳ್ತಾ ಇದ್ದೀನಿ. ನಿಮ್ಮ ಅಕ್ಕಾನೋ ಅಮ್ಮ ನೋ ನಿಂತಿದ್ದರೆ ನೀನ್ ಹೀಗೆ ಮಾಡ್ತಿದ್ದ? ಎದ್ದೇಳಪ್ಪ.

ಕಿರಿಯ: ಹೋಗೊಲೋ ಲೌ* ಕೆ ಬಾ*!! ಹುಚ್ಚು ಸೂ* ಮಗನೆ! ಕೂತಿರೋರಿಗೆ ಕೂತಿರಕ್ಕೂ ಬಿಡಲ್ಲ... ನಾಯಿ ನನ್ನ ಮಕ್ಕಳು...

ಹಿರಿಯ: ಹೌದಪ್ಪ!! ಹೌದು. ಹೆಂಗಸರಿಗೆ ಅವ್ರ ಸೀಟಲ್ಲೇ ಜಾಗ ಬಿಡಿ ಅಂತ ಹೆಲೋ ನಾನು ಲೌ& ಕೆ #ಲೇ!! ನಾನಿಷ್ಟು ಮಾತಾಡ್ತಾ ಇದ್ದ್ರೂನೂ ಬೇರೆ ಜನ ಇರ್ಲಿ... ಕಂಡಕ್ಟರೂ ನನ್ನ ಸಹಾಯಕ್ಕೆ ಬರ್ತಿಲ್ಲ ನೋಡಿ... ನಾನು ಹುಚ್ಚು ಸೂ%$ ಮಗಾನೇ!! ಈ ಹೆಂಗಸರಿಗೋಸ್ಕರ ನಿಮ್ಮ ಹತ್ರ ಸೀಟ್ ಬಿಟ್ಟ ಕೊಡಿ ಅಂತ ಹೇಳ್ದೆ ನೋಡಿ, ಅವರೂ ನನ್ನ ಸಪೋರ್ಟಿಗೆ ಬರ್ಲಿಲ್ಲ ಅಂದ್ರೆ ನಾನು ನಾಯಿ ನನ್ನ ಮಗನೆ ಇರ್ಬೇಕು... ಥೂ ನಮ್ಮ ದೇಶಕ್ಕೆ. ಹೆಂಗಸರಿಗೆ ತುಂಬಾ ಮರ್ಯಾದೆ ಕೊಡತ್ತೆ... ಗುರು ಹಿರಿಯರಿಗೆ ಗೌರವ ಕೊಡ್ತಾರೆ ಅಂತ ಏನೇನೋ ಬಡಾಯಿ ಕೊಚ್ಚ್ಕೊತಾರೆ... ಎಲ್ಲ ಓಳು. ಇಡೀ ದೇಶ ಬರೀ ಹಲ್ಕಾ ನನ್ನ ಮಕ್ಕ್ಳಿಂದಾನೆ ತುಂಬ್ಕೊಂಡಿದೆ.

ಹೆಂಗಸರಿಗೆ ಸೀಟ್ ಕೊಡ್ರೋ ಅಂತ ಬೇಡ್ಕೊತೀವಲ್ಲ, ನಾವು ಸುವರ್ರ್ ನನ್ನ ಮಕ್ಕಳು... ಆರಾಮಾಗಿ ಹೆಂಗಸರ ಸೀಟಲ್ಲಿ ಕೂತ್ಕೊತೀರಲ್ಲ , ನೀವೆಲ್ಲ ಮಹಾನುಭಾವರೇ ಬಿಡಿ. ಏನೋ ಈ ಸಂನ್ ಮನುಷ್ಯನ್ನ ಕ್ಷಮಿಸಿ ಬಿಡಿ....


ಇನ್ನು ಮುಂದುವರೀತಾನೆ ಇತ್ತು ಅವನ ಪುರಾಣ ೫ ನಿಮಿಷಕ್ಕೆ. ಈ ರೀತಿ ಶಾಲಲ್ಲಿ ಚಪ್ಪಲಿ ಸುತ್ತ್ಕೊಂಡು ಹೊದೀತಿರೋದ್ ಕೇಳಕ್ಕಾಗ್ದೆ ಕಡೆಗೆ ಕೂತಿದ್ದ ಆ ಮಹಾ ಪುರುಷ ಎದ್ದ.

ಅಂತೂ ಕೊನೆಗೆ ಧರ್ಮಕ್ಕೆ ಜಯ.

Sunday, April 10, 2011

ವಿಪರ್ಯಾಸ.

ಅವನೇನು ಅಂಥಾ ಸುಂದರ ಅಲ್ಲ. ಅವಳೂ ಕೂಡ.

ಇಬ್ಬರೂ ಒಂದೇ ಕಛೇರಿಲಿ ಕೆಲಸ ಮಾಡೋರು. ಅಪರೂಪಕ್ಕೆ ಎದುರು ಬದುರು ಭೇಟಿ ಆಗ್ತಾ ಇದ್ದರೂ ಇಬ್ಬರಿಗೂ ಅಂತಹ ಹೇಳಿಕೊಳ್ಳೋ ಹಾಗೆ ಪರಿಚಯ ಇಲ್ಲ.

ಏನು ವಿಪರ್ಯಾಸನೋ? ಇಬ್ಬರೂ ಒಟ್ಟಿಗೆ ಕೆಲಸ ಮಾಡೋ ಪ್ರಮೇಯ ಬಂತು. ಸರಿ. ಎಷ್ಟ್ ಬೇಕೋ ಅಷ್ಟು ಮಾತಾಡ್ಕೊಂಡು ಇದ್ದ ಕೆಲಸ ಮುಗಿಸಿ ತಮ್ಮ ಪಾಡಿಗೆ ತಾವಿದ್ದರು. ಇಬ್ಬರ ನಡುವೆ ಬಿಂಕ ಇಲ್ಲ, ಬಿಗುಮಾನ ಇಲ್ಲ.

ಇದಾದ ನಂತರ ಆದ ವ್ಯತ್ಯಾಸ ಏನಂದ್ರೆ ಇಬ್ಬರೂ ಎದುರು ಬದುರಾದಾಗ ಒಂದು ಮಂದಸ್ಮಿತ ಇಬ್ಬರ ಮುಖದಲ್ಲೂ ಅರಳುತ್ತಿತ್ತು.

ದಿನ ಹೀಗೆ ಕಳೀತು. ಇಬ್ಬರೂ ತಮ್ಮ ಪಾಡಿಗೆ ಶಿವಾಂತ ಇದ್ದರು.

ಒಂದು ದಿನ ಇವನು ತಡವಾಗಿ ಮನೆ ಕಡೆ ಹೊರಟ. ಕಾಕತಾಳಿಯವಾಗಿ ಅವಳೂ ಅದೇ ಸಮಯದಲ್ಲಿ ಹೊರಟಳು. ಇಬ್ಬರೂ ಲಿಫ್ಟ್ ಹತ್ತಿರ ಸಿಕ್ಕಿದರು.

ಅವಳು: ಏನು? ಬೇಗ ಹೊರಡ್ತಾ ಇದ್ದೀರಿ?
ಅವನು: ಹಾಗೆ ಸುಮ್ನೆ. ಚೇಂಜ್ ಇರ್ಲಿ ಅಂತ.

ಅವಳು ಲಿಫ್ಟ್ ಕಡೆ ಮುಖ ಮಾಡಿದಳು. ಅವನು, ನಾನು ಮೆಟ್ಟಲು ಇಳ್ಕೊಂಡು ಹೋಗ್ತೀನಿ ಎಂದು ಹೊರಟ. ಅವಳು ಗಾಡಿ ತೆಗಿಯೋಕೆ ಬೇಸ್ಮೆಂಟ ಕಡೆ ಲಿಫ್ಟಲ್ಲಿ ಹೊರಟಳು. ಇವನು ಮೆಟ್ಟಿಲು ಇಳ್ಕೊಂಡು ಬಸ್ ಸ್ಟಾಂಡಿನ ಕಡೆ ನಡ್ಕೊಂಡೇ ಹೊರಟ.

ಕಚೇರಿ ಬಿಟ್ಟು ಮಾರು ದೂರ ಹೋಗಿದ್ದ ಅಷ್ಟೇ. ಅವಳು ಹಿಂದುಗಡೆ ಇಂದ ಬಂದಳು.

ಅವಳು: ಎಲ್ಲಿ ತನಕ ಡ್ರಾಪ್ ಮಾಡ್ಲಿ?
(ಇವನಿಗೆ ಅದೇನು ಮುಜುಗರನೋ? ಬಿಗುಮಾನನೋ?)
ಅವನು: ನನಗೆ ನಡ್ಕೊಂಡ್ ಹೋಗೋದ್ರಲ್ಲೇ ಖುಷಿ. ನೀವು ಹೋಗಿ. ಬಸ್ ಸ್ಟ್ಯಾಂಡ್ ಹೆಚ್ಚು ದೂರ ಇಲ್ಲ. ನಾನು ನಡ್ಕೊಂಡೇ ಹೋಗ್ತೀನಿ.
ಅವಳು: ಬನ್ನಿ ಪರವಾಗಿಲ್ಲ. ಸ್ವಲ್ಪ ಬೇಗ ಹೋಗೋರಂತೆ.
ಅವನು: ಅಡ್ಡಿ ಇಲ್ಲ. ತಾವು ತಮ್ಮ ಪಾಡಿಗೆ ಹೋಗಿ. ಬೇಜಾರ್ ಮಾಡ್ಕೋಬೇಡಿ. ನಂಗ್ ನಡ್ಕೊಂಡ್ ಹೋಗಕ್ಕೆ ಇಷ್ಟ.
ಅವಳು: ಸರಿ ಬಿಡಿ. ಬೈ!!

ಅಂದಿನಿಂದ ಇಬ್ಬರೂ ಒಬ್ಬರನ್ನೊಬ್ಬರು ಮಾತನಾಡಿಸಲಿಲ್ಲ.

Sunday, December 12, 2010

ಪ್ರಾಣಿಗಳೇಕೆ ಮಾತನಾಡುವುದಿಲ್ಲ? - ಒಂದು ಜಾನಪದ ಕಥೆ.

ಇಂದು ಮಧ್ಯಾಹ್ನ ಹೀಗೆ ಮನೆಯಲ್ಲಿ ಹರಟೆ ಹೊಡೆಯುತ್ತಿರುವಾಗ ಮಾವನ ಬಾಯಿಂದ ಹೊಮ್ಮಿ ಬಂದ ಕಥೆ. ಚಿಕ್ಕದಾಗಿ ಚೊಕ್ಕವಾಗಿ ಹೇಳ್ತೀನಿ. ಕೇಳಿ...

ಒಂದಾನೊಂದು ಕಾಲದಲ್ಲಿ, ತುಂಬಾ ಹಿಂದೆ, ತುಂಬಾಂದ್ರೆ ತುಂಬಾ ಹಿಂದೆ ಪ್ರಾಣಿಗಳೆಲ್ಲ ಮಾತಾಡ್ತಾ ಇದ್ದವು. ಎಲ್ಲಾ ಭಾಷೇನೂ ಮಾತಾಡ್ತಾ ಇದ್ದವು. ಜನರೂ, ಪ್ರಾಣಿಗಳು, ಒಬ್ಬರಿಗೊಬ್ಬರು ಮಾತಾಡುತ್ತ ಕಾಲ ಕಳೀತಾ ಇದ್ದರು. ಎಲ್ಲಾ ಸುಭಿಕ್ಷವಾಗಿದ್ದವು.

ಹೀಗಿರೋವಾಗ, ಒಂದಿನ ಏನಾಯ್ತು ಗೊತ್ತ? ಒಂದೂರಲ್ಲಿ ಒಬ್ಬ ಗೃಹಿಣಿ ಸಂಜೆ ಹಾಲು ಕರೆಯೋಕೆ ಅಂತ ಹಟ್ಟಿ ಕಡೆ ಬಂದಳು. ಪ್ರತೀ ದಿನ ಚೆನ್ನಾಗಿ ಮಾತಾಡ್ತಾ ಇದ್ದ ಹಸು, ಈವತ್ತು ಹೇಳಿದ್ದ ಮಾತು ಕೇಳಿ ಅವಳು ಕಂಗಾಲಾದಳು.

ಹಸು: ಹೂ ಹೂ, ಕರಿ ಕರಿ... ಈವತ್ತು ನಿನ್ ಗಂಡನ ಕೊನೆ ದಿನ ಅಲ್ವಾ? ಹೊಟ್ಟೆ ತುಂಬಾ ಹಾಲು ಕೊಡು ಅವನಿಗೆ.

ಹೆಂಗಸು: ಏಯ್! ನಿನ್ಗೆನಾಗಿದೆ ಈವತ್ತು? ಬುದ್ಧಿ ನೆಟ್ಟಗಿದ್ಯಾ ಹೆಂಗೆ?

ಹಸು: ನನಗೇನಾಗಿದೆ? ಚೆನ್ನಾಗೆ ಇದ್ದೀನಿ...

ಹೆಂಗಸು: ಮತ್ತೆ? ಏನೇನೋ ವಟಗುಟ್ಟುತ್ತಾ ಇದ್ದೀಯ?

ಹಸು: ಅಯ್ಯೋ! ಇರೋ ವಿಷಯ ಹೇಳ್ದೆ.

ಹೆಂಗಸು: ಇರೋ ವಿಷ್ಯ? ಅದೇನ್ ಸ್ವಲ್ಪ ಬಿಡಿಸಿ ಹೇಳು.

ಹಸು: ನಾಳೆ ಬೆಳಿಗ್ಗೆ ಹೊತ್ತಿಗೆ ನಿನ್ ಗಂಡ ಶಿವನ ಪಾದ ಸೇರ್ಕೊತಾನೆ. ನೋಡ್ಕೋ ಅಂದೇ ಅಷ್ಟೇ.

ಹೆಂಗಸು: ಏಯ್! ನಾಲಗೆ ಬಿಗಿ ಹಿಡಿದ್ ಮಾತಾಡು. ಇಷ್ಟ್ ವರ್ಷ ದಂಡಿ ದಂಡಿ ಬೂಸಾ, ಹುಲ್ಲು ಹಾಕಿದ್ದಕ್ಕೆ ಈ ಥರ ಶಾಪ ಹಾಕ್ತ ಇದ್ದೀಯ ನಂಗೆ? ನಾನೇನ್ ಕಮ್ಮಿ ಮಾಡಿದ್ದೆ ನಿಂಗೆ?

ಹಸು: ಇದೊಳ್ಳೆ ಕಥೆ ಆಯ್ತಲ್ಲ? ಇದ್ದಿದ್ದ್ ಇದ್ದ ಹಾಗ್ ಹೇಳಿದ್ರೆ ಎದ್ದ ಬಂದ್ ಎದೆಗ್ ಒದ್ದರಂತೆ. ಹಾಗಾಯ್ತು ಕಥೆ. ಏನೋ ನೀನು ನಮ್ಮ ಯಜಮಾಂತಿ. ಮುಂಚೆನೇ ತಿಲಿಸನ ಅಂದ್ರೆ ನೀನ್ ಯಾಕ್ ಹೀಗ್ ಆಡ್ತೀಯ?

ಹೆಂಗಸು: ಇದ್ದಿದ್ದ್ ಇದ್ದ ಹಾಗೆ ಅಂತೀಯಲಾ, ನಿಂಗ್ ಯಾರ್ ಹೇಳಿದ್ದು?

ಹಸು: ಇನ್ನ್ ಯಾರು? ನನ್ ಗಂಡ, ಅದೇ, ಯಮನ ವಾಹನ, ಕೋಣನೇ ಹೇಳಿದ್ದು... ಈವತ್ತ್ ರಾತ್ರಿ ಯಮ ಬಂದು ನಿನ್ನ್ ಗಂಡನ ಪ್ರಾಣ ಹೊತ್ತ್ಕೊಂಡ್ ಹೋಗ್ತಾನಂತೆ.

ಹೆಂಗಸು: ಅಯ್ಯೋ ಅಯ್ಯೋ ಅಯ್ಯೋ!! ಇಷ್ಟ್ ಬೇಗ ನಾನ್ ಮುಂಡೆ ಆಗೋಗ್ತೀನ? ನನ್ನ ಗಂಡಂಗೆ ಇಷ್ಟೇನಾ ಆಯುಷ್ಯ ಇರೋದು? ಇದಕ್ಕೇನು ಮಾಡಕ್ಕಾಗಲ್ವಾ? ಅಯ್ಯೋ ದೇವ್ರೇ... ಇದೇನ್ ಗತಿ ತಂದೆ ನಂಗೆ?

ಹಸು: ನಿನ್ನ್ ಸ್ಥಿತಿ ನೋಡಿ ಅಯ್ಯೋ ಪಾಪ ಅನ್ನ್ಸತ್ತೆ...ನಿಂಗ್ ಸಹಾಯ ಮಾಡ್ಬೇಕು ಅಂತಾನೂ ಅನ್ನ್ಸತ್ತೆ. ಆದ್ರೆ ಏನ್ ಮಾಡೋದು? ವಿಧಿ...

ಹೆಂಗಸು: ಇದಕ್ಕೆ ಏನಾದ್ರೂ ಉಪಾಯ ಇದ್ಯಾ? ನಿನ್ನ್ ದಮ್ಮಯ್ಯ ಅಂತೀನಿ... ನಂಗೆ ಸಹಾಯ ಮಾಡು...

ಸ್ವಲ್ಪ ಹೊತ್ತು ಯೋಚಿಸಿದ ಹಸು,

ಹಸು: ನೋಡಮ್ಮ, ಒಂದ್ ಉಪಾಯ ಮಾಡಬಹುದು... ಈಗ ನೀನು ಹಾಲು ಕರ್ಕೊಂಡು ಮನೆಗೆ ತೊಗೊಂಡ್ ಹೋಗ್ತೀಯಲ್ಲಾ? ಅದನ್ನ ಮನೆ ಒಳಗ್ ಒಯ್ಯಬೇಡ. ಹಾಗೆ ಹೊಸಿಲಲ್ಲಿ ಇಡು. ಯಮ ಬಂದವನು ಒಳಗೆ ಬರೋಕೆ ಮುಂಚೆ, ಹೊಸಿಲಲ್ಲಿ ಹಾಲು ನೋಡ್ತಾನಲ್ಲ, ಅದನ್ನ ಕುಡೀತಾನೆ. ಹಾಲು ಕುಡಿದ ಮೇಲೆ ಅವನಿಗೆ ಅದೇ ಮನೆ ಯಜಮಾನನ್ ಪ್ರಾಣ ಹೇಗ್ ತೊಗೊಂಡ್ ಹೋಗ್ತಾನೆ? ಉಂಡ ಮನೆಗೆ ದ್ರೋಹ ಮಾಡಿದ ಹಾಗಾಗಲ್ವಾ? ಹಾಗೆ ವಾಪಸ್ ಹೋಗ್ತಾನೆ. ನಿನ್ನ್ ಗಂಡನ ಪ್ರಾಣಾನೂ ಉಳಿಯತ್ತೆ.

ಅವಳು ಹಾಗೇ ಮಾಡ್ತಾಳೆ. ಯಮ ಬರ್ತಾನೆ. ಹೊಸಿಲಲ್ಲಿ ಹಾಲು ನೋಡ್ತಾನೆ. ಕುಡೀತಾನೆ. ಹಾಲು ಕುಡಿದ ಋಣ ಅವನನ್ನ ಕರ್ಮಭ್ರಷ್ಟನನ್ನಾಗಿ ಮಾಡುತ್ತದೆ. ಮಾರನೆ ದಿನವೂ ಬರುತ್ತಾನೆ, ಆ ದಿನವೂ ಹಾಲಿರುತ್ತದೆ, ಕುಡಿದ ಮೇಲೆ ವಾಪಸ್ ಹೋಗುತ್ತಾನೆ. ಹೀಗೆ ಸುಮಾರು ದಿನ ನಡೆಯುತ್ತದೆ.

ಕೊನೆಗೆ ಯಮನಿಗೆ ಇದರಲ್ಲೇನೋ ಮಸಲತ್ತಿದೆ ಎಂದು ತಿಳಿಯುತ್ತದೆ. ಇದನ್ನು ಹೇಗಾದರೂ ಮಾಡಿ ಪತ್ತೆ ಹಚ್ಚಬೇಕೆಂದು ಉಪಾಯವಾಗಿ ಆ ಗೃಹಿಣಿಯ ಮೆನೆಗೆ ಮಾರುವೇಷದಲ್ಲಿ ಹೋಗುತ್ತಾನೆ. ಲೋಕಾಭಿರಾಮವಾಗಿ ಮಾತನಾಡುತ್ತ ಈ ವಿಷಯಕ್ಕೆ ಹೇಗೋ ಬರುತ್ತಾನೆ. ಇವನ ಸೌಮ್ಯ ಗುಣಕ್ಕೆ ಮೆಚ್ಚಿ ಅವಳು ಗುಟ್ಟನ್ನು ಬಿಚ್ಚಿಡುತ್ತಾ ಇದೇ ವೃತ್ತಾಂತವನ್ನು ಯಮನಿಗೊಪ್ಪಿಸುತಾಳೆ.

ಇದನ್ನು ತಿಳಿದ ಯಮನು ಕುಪಿತನಾದನು. ಇನ್ನು ಮುಂದೆ ಹೀಗಾಗದಿರಲು ಮನುಷ್ಯನ ಬಿಟ್ಟು ಎಲ್ಲಾ ಪ್ರಾಣಿಗಳಿಗೂ ಮಾತು ನಿಂತು ಹೋಗಲಿ ಎಂದು ಶಾಪವಿಟ್ಟನು.

ಅಂದಿನಿಂದ ಮನುಷ್ಯನ ಹೊರತಾಗಿ ಎಲ್ಲಾ ಪ್ರಾಣಿಗಳ ಬಾಯಿ ಬಿದ್ದು ಹೋಯಿತು.

Saturday, September 18, 2010

Director's Special: ಸಿನಿಮಾ ಮಾಡಲಾಗದ ಕಥೆಗಳು ಮತ್ತಿತರ ಲೇಖನಗಳು - ಒಂದು ನೋಟ.

೨ ವಾರಗಳ ಹಿಂದೆಯೇ ಬರಬೇಕಿದ್ದ ಈ ಅಂಕಣಕ್ಕೆ ನನ್ನ ಸೋಂಬೇರಿತನವೇ ಹೊಣೆ.

ಇದನ್ನು ವಿಮರ್ಶೆ ಎನ್ನಬೇಕೋ ಅನಿಸಿಕೆ ಎನ್ನಬೇಕೋ ತಿಳಿಯದೇ ಒಂದು ನೋಟ ಎಂದು ಉದ್ಧರಿಸಿರುವೆನಷ್ಟೇ. ವಿಮರ್ಶೆ ಎಂದರೆ ನನಗೆ ಕೆಲವೊಮ್ಮೆ ಭಯವಾಗುವುದುಂಟು. ನಾನು ವಿಮರ್ಶೆ ಎಂದು ಬರೆದೆನೆಂದರೆ ಹೆಚ್ಚಾಗಿ ಅದರ ಬಗ್ಗೆ ತಿರಸ್ಕಾರವೇ ಇರುತ್ತದೆ. ನನಗೆ ಅದು ಬಹಳವಾಗಿ ಹಿಡಿಸಿದರೆ ಅದರ ವಿಮರ್ಶೆಯ ಗೊಡವೆಗೆ ಹೋಗುವುದಿಲ್ಲ. ಏಕೆಂದರೆ, ಒಂದು ವಿಮರ್ಶೆಯನ್ನು ಬರೆದೆನೆಂದರೆ, ಅದರ ಬಗ್ಗೆ ಅಭಿಮಾನ ಮುಂಚಿನಂತಿರುವುದಿಲ್ಲ. ಇವೆಲ್ಲವನ್ನೂ ಮೀರಿ ಈ ಅಂಕಣವನ್ನು ಬರೆಯುತ್ತಿರುವೆನಾದ್ದರಿಂದ ಇದಕ್ಕೆ ಒಂದು ಹಿನ್ನೆಲೆಯನ್ನು ಬರೆಯೋಣ.

ಸದಭಿರುಚಿಯ ಕನ್ನಡ ಸಿನೆಮಾಗಳ ವೀಕ್ಷಕರಿಗೆ ಗುರುಪ್ರಸಾದರು ಅಪರಿಚಿತರೇನಲ್ಲ. ಅವರ 'ಮಠ' ಹಾಗು 'ಎದ್ದೇಳು ಮಂಜುನಾಥ' ಅವರ ಪ್ರತಿಭೆಗೆ ಸಾಕ್ಷಿ. ನನ್ನ ನೆಚ್ಚಿನ ನಿರ್ದೇಶಕರಲ್ಲಿ, ಅಗ್ರಗಣ್ಯರ ಸ್ಥಾನದಲ್ಲಿ ಇವರೂ ಒಬ್ಬರು. ೨ ವಾರದ ಹಿಂದೆ ಅವರ 'ಸಿನಿಮಾ ಮಾಡಲಾಗದ ಕಥೆಗಳು' ಹೊತ್ತಿಗೆ ಬಿಡುಗಡೆಯಾಯಿತು ಎಂದು ಪ್ರಜಾವಾಣಿಯ 'ಸಿನೆಮ ರಂಜನೆ'ಯಲ್ಲಿ ಓದಿ ಆ ಸಂಜೆಯೇ ಗಾಂಧಿನಗರದ 'ನವಕರ್ನಾಟಕ ಪ್ರಕಾಶನ'ದಲ್ಲಿ ಆ ಪುಸ್ತಕ ಕೊಂಡಮೇಲಷ್ಟೇ ಸಮಾಧಾನವಾದುದು. ವರ್ಷದ ಹಿಂದೆಯೇ ಅದರ ಬಗ್ಗೆ ಓದಿ ಇದ್ದ ಬದ್ದ ಪುಸ್ತಕಾಲಯಗಳಲೆಲ್ಲಾ ಹುಡುಕಾಡಿದ್ದಷ್ಟೇ ಬಂತು.

ಪೀಠಿಕೆ ಸಾಕು. ವಿಚಾರಕ್ಕೆ ಬರೋಣ. ಈ ಪುಸ್ತಕಗಳಲ್ಲಿ ಅವರ ೧೮ ಅಂಕಣಗಳಿವೆ. ಮಹಾಭಾರತದ ೧೮ ಅಧ್ಯಾಯಗಳ ತರಹ. ಹೆಹ್ಹೆಹ್ಹೆ. ಹಲವು ಹಿಂದೆಯೇ ಕೆಲವು ಪತ್ರಿಕೆಗಳಲ್ಲಿ ಪ್ರಕಟಗೊಂಡವು, ಕೆಲವು ಹೊಸತು. ಇವರ ಕಾವ್ಯನಾಮ ಶಾರದಾಸುತ. ನಿಜಕ್ಕೂ ಸರಸ್ವತಿ ಪುತ್ರರೇ. ತಮ್ಮ ಹತ್ತಿರದ ಬಳಗದವರಿಗೆಲ್ಲ ವಿಭಿನ್ನವಾಗಿ ಅರ್ಪಿಸುತ್ತ, ಪುಸ್ತಕವನ್ನು ಕೊಂಡು ಓದುವ ನಮಗೂ ಅರ್ಪಿಸುತ್ತಾರೆ. ಕೊನೆಗೆ ಶಾರದೆಗೂ.

ಈ ಎರಡು ವಾರಗಳಲ್ಲಿ ಇದನ್ನು ಓದಿ ೧೦ ದಿನದ ಮೇಲಾಯಿತು. ಕಥೆಗಳು ಜ್ಞಾಪಕವಿದ್ದರೂ, ಅದರಲ್ಲಿ ನನಗೆ ಬಹಳ ಇಷ್ಟವಾದ ಸಂಭಾಷಣೆಗಳು ಕೆಲವು ಮರೆತು ಹೋದಂತಿವೆ. ಈ ಅಂಕಣವು ಆ ಸಂಭಾಷಣೆಗಳನ್ನು ಭಟ್ಟಿ ಇಳಿಸುವುದಿಲ್ಲ. ಇನ್ನೊಮ್ಮೆ ಮೆಲುಕು ಹಾಕಿದಲ್ಲಿ ಕ್ಷಣಮಾತ್ರದಲ್ಲಿ ನೆನಪಿಗೆ ಬರುವುವು. ನಾನು ಬರೆಯಬೇಕೆಂದು ಕೊಂಡ ಕೆಲವು ಸಾಲುಗಳು ಬರದೆ ಇರಬಹುದು. ನೆನಪಾದಾಗ, ಮಗದೊಮ್ಮೆ ಓದಿದಾಗ, ಅವಶ್ಯವಾಗಿ ಅದರ ಬಗ್ಗೆ ಇದೇ ಅಂಕಣದಲ್ಲಿ ಬರೆಯುವೆನು.

ಈ ಕಥೆಗಳಲ್ಲಿ ಕೆಲವು ಕಚಗುಳಿ ಕೊಡುವಂತವುವು, ಎಲ್ಲವೂ ಅನುಭವಗಳು ಹಾಗು ಕೆಲವು ಸಾಮಾನ್ಯ ಕಥೆಯಾಗಿದ್ದರೂ, ನಿರೂಪಣೆಯಲ್ಲಿ ವಿಭಿನ್ನ ಜಾಡು ಹೊಂದಿರುವಂಥವು. ಕೊನೆಗೆ ಒಂದು ಸಂದರ್ಶನ.

ತಡಮಾಡದೆ ಪುಸ್ತಕಕ್ಕೆ ಇಳಿಯೋಣ.

ಲೇಖಕರು: ಗುರುಪ್ರಸಾದ್.
ಪುಸ್ತಕ: Director's Special
ಅಡಿಪಟ್ಟಿ: ಸಿನಿಮ ಮಾಡಲಾಗದ ಕಥೆಗಳು ಮತ್ತಿತರ ಲೇಖನಗಳು.
ಬೆಲೆ: ೧೫೦ ರೂಪಾಯಿಗಳು.

ಮೊದಲ ಮೂರು ಅಂಕಣಗಳು: ಇವೆಲ್ಲ ಒಟ್ಟುಗೂಡಿ ಒಂದು ಕಥೆ. ೨೦೦೫ರಲ್ಲಿ ರೂಪತಾರಕ್ಕೆ ಬರೆದ ಅಂಕಣಗಳು. ಆಸ್ಪತ್ರೆ ನರ್ಸೊಬ್ಬಳು (ಜಿನ್ಸಿ) ಆತ್ಮಹತ್ಯೆ ಮಾಡಿಕೊಂಡ ಸಾಮಾನ್ಯ ದಾರುಣ ಕಥೆ. ಶುರುವಿನಲ್ಲಿ ರಸವತ್ತಾಗಿ ಬಣ್ಣಿಸುವ ಈ ಕಥೆಯ ಮೊದಲ ಅಂಕಣದ ಕೊನೆಯಲ್ಲಿ ಎಣಿಸಲಾರದ ತಿರುವು ಸಿಕ್ಕು ಕಥೆಯು ರೋಚಕವಾಗುತ್ತದೆ. 'ಮಣಿ ಚಿತ್ರ ತಾಳ್' ಎಂಬ ಮಲಯಾಳಿ ಚಿತ್ರದ ಕಥೆಗಾರರನ್ನು ಹುಡುಕಿ ಕೇರಳಕ್ಕೆ ಹೊರಟ ಗುರು, ಬಸ್ಸಿನಲ್ಲಿ ಸಿಕ್ಕ ಈ ನರ್ಸಿನ ಕಥೆ ಹುಡುಕಿಕೊಂಡು ಬರೆದಂತಿದೆ. ಮೊದಲ ಅಂಕಣದಲ್ಲಿ ಗುರು ರ ಅನುಭವವಾದರೆ, ಮಿಕ್ಕೆರಡು ಅಂಕಣಗಳು ಆ ನರ್ಸಿನ ಗೋರಿಯ ಚೀತ್ಕಾರಗಳು.

ಈ ಕಥೆಯಲ್ಲಿ ನನಗೆ ಅಚ್ಚರಿಯಾದ ಒಂದು ಅಂಶವೆಂದರೆ, ಗುರುಪ್ರಸಾದರಿಗೆ 'ಆಪ್ತಮಿತ್ರ' ಚಿತ್ರ ಇಷ್ಟವಾದುದು. ಬುದ್ಧಿವಂತರು ರೀಮೇಕ್ ಮಾಡಬಾರದು; ದಡ್ಡರು ಸ್ವಮೇಕ್ ಮಾಡಬಾರದು ಎಂದ ಗುರು ಗೆ, ಆಪ್ತಮಿತ್ರ ಇಷ್ಟವಾದುದು ಅಚ್ಚರಿಯೇ. ವಯ್ಯಕ್ತಿಕವಾಗಿ ನನಗೆ ಆ ಚಿತ್ರ ಹಿಡಿಸಲಿಲ್ಲ. ಅದರ ಬಗ್ಗೆ ಚರ್ಚೆ ಮಾಡಲು ಈ ಅಂಕಣವನ್ನು ಉಪಯೋಗಿಸಲಿಚ್ಚಿಸುವುದಿಲ್ಲ. ಏನಿದ್ದರೂ ಅದು ಈ ಕಥೆಯಲ್ಲಿ ಗೌಣ.

ಜಿನ್ಸಿ ಹಾಗು ಅವಳ ಪ್ರಿಯಕರನ ಸಂಭಾಷಣೆಗಳು ನಿಮ್ಮ ಮೆದುಳಿನಲ್ಲಿ ಹೊಸ ಆಲೋಚನೆಗಳು ತಂದರೆ ಅದರಲ್ಲಿ ಆಶ್ಚರ್ಯವಿಲ್ಲವಷ್ಟೇ.

ನಾಲ್ಕನೇ ಅಂಕಣ: ಲೇಖಕರೇ ಹೇಳಿಕೊಳ್ಳುವಂತೆ, ಈ ಕಥೆ, ಅವರಿಗೆ ಒಬ್ಬರೇ ಕೂತು ಗುಂಡು ಹಾಕುವಾಗ ಹೊಳೆದ ಕಥೆ. ಆ ಎಣ್ಣೆಯ ಗುಣ ಪೂರ್ತಿಯಾಗಿ ಈ ಕಥೆಗೆ ಎರಕ ಹೊಯ್ಯ್ದಂತಿದೆ. ಪ್ರತಿಯೊಬ್ಬ ಗಂಡ, ಹೆಂಡತಿ (ಕಡೆ ಪಕ್ಷ, ಹೆಚ್ಚಿನವರು) ತಮ್ಮ ಜೀವನದ ಯಾವುದಾದರೂ ಒಂದು ಹಂತದಲ್ಲಿ ಯೋಚಿಸುವ ಒಂದು ತಂತುವನ್ನು ಆಧಾರವಾಗಿಟ್ಟುಕೊಂಡು ಬರೆದ ಕಥೆ. ದಿನೇ ದಿನೇ ಹೊಸ ಮುಖದ ಅರ್ಧಾಂಗಿಯ ಪಡೆವ ಕಥೆ. ಇಂತಹ ಕಥೆಗೆ ಗುರು ಅವರು ಕೊಟ್ಟ ಕೊನೆಯೇ ಸರಿಯಾದುದು. ಅದನ್ನು ಓದಿಯೇ ಸವಿಯಬೇಕು.

ಈ ಕಥೆಯ ಜಾಣ, ಜಗತ್ತಿನ ಎಲ್ಲ ಗಂಡಂದಿರ ಪ್ರತೀಕ.

ಐದನೇ ಅಂಕಣ: ನರಕಕ್ಕೂ ಸ್ವರ್ಗಕ್ಕೂ ಇರುವ ವ್ಯತ್ಯಾಸವನ್ನು ಚಿಕ್ಕದಾಗಿ ಚೊಕ್ಕವಾಗಿ ಈ ಕಥೆಯಲ್ಲಿ ನಿರೂಪಿಸಿದ್ದಾರೆ ಗುರು. ಈ ಕಥೆಯಲ್ಲಿ ಬರುವ ಭಗ್ನ ಪ್ರೇಮಿ ಗಿರಿಧರ ಹಾಗು ಅಪಘಾತ ಮೃತ ನಂದಿನಿ ಈ ದೃಷ್ಠಾಂತಕ್ಕೆ ಸಾಕ್ಷಿಯಾಗುತ್ತಾರೆ. ನರಕದ ವರ್ಣನೆ, ಭೂಮಿಯ ಜೊತೆ ಅದರ ಹೋಲಿಕೆ, ನರಕದ ಹಿಟ್ಲರ್ ಹುಣಸೆ ಮರ, ನರಕದಿಂದ ಸ್ವರ್ಗಕ್ಕೆ ಹೋಗುವ ಪರಿ, ಲೇಖಕರ ಕ್ರಿಯಾಶೀಲತೆಗೆ ಒಂದು ಸಾಕ್ಷಿ.

ಆರನೇ ಅಂಕಣ: ಜಲಪ್ರಳಯದ ಕಥನ. ೨೦೦೮ರಲ್ಲಿ ಮಯುರಕ್ಕೆ ಬರೆದ ಕಥೆ. ಪ್ರಳಯದ ಕೊನೆಯ ಹಂತ ನಮ್ಮ ಬೆಂಗಳೂರಿನಲ್ಲಿ. ಕಥಾನಾಯಕ, ಭಾರಧ್ವಾಜ ಸನಾತನಿ ಹಾಗು ಈಜುಗಾರ. ಆಟ ಹಲಸೂರಿನಿಂದ ಯೆಶವಂತಪುರದ ವರೆಗೂ ಈಜಬಲ್ಲ. ನಾಯಕಿ ಭವತಿ. ಭಾರಧ್ವಾಜ ಭಾವತಿಯರು, ಪ್ರಕೃತಿ ಹಾಗು ಪುರುಷರಾಗಿ ವಿಶ್ವಮಾನವನನ್ನು ಹಡೆವ ಕಥೆಯೇ ಇದು. ಹೊಸ, ಆದರ್ಶ ಸಮಾಜವನ್ನು ಕಟ್ಟುವ ಕನಸನ್ನು ಹೊಂದಿದೆ. ಭಗವಂತನ ನಿಟ್ಟುಸಿರು ಈ ಕಥೆಗೆ ಮಂಗಳ ಹಾಡುತ್ತದೆ.

ಏಳನೇ ಅಂಕಣ: ೨೦೦೯ ರಲ್ಲಿ ಚಿತ್ತಾರಕ್ಕೆ ಬರೆದುಕೊಟ್ಟ ಕಥೆ. ಗುರು ಪ್ರಕಾರ ಇದು ಸತ್ಯ ಕಥೆ. ಆದರೆ ಅವರ ಅಭಿಮಾನಿಗಳಿಗೆ ಅದು ನಂಬಲಸದಳ. ಶಿಷ್ಯನ ವೃದ್ಧಿಯನ್ನು ಕಂಡು ಸಹಿಸದ ಗುರು ಅವನನ್ನು ಕೂಪಕ್ಕೆ ತಳ್ಳುವ ಕಥೆ. ಫೋನ್ ಮಾಡಿ ಕಾಡುವ ಶಿಷ್ಯ. ಶಿಷ್ಯ ವೃತ್ತಿ ಮಾಡಿಕೊಂಡಿರುತ್ತೇನೆ ಎಂಬ ಭರವಸೆ ಇತ್ತ ಮೇಲೆಯೇ ಶಿಷ್ಯನಾಗಿ ಸ್ವೀಕರಿಸುವ ಗುರು, ಅವನ ಏಳಿಗೆ ಕಂಡು ಕೊಂಚ ಕರುಬುತ್ತಾನೆ. ಕೊನೆಯಲ್ಲಿ ಅವನನ್ನು ಕಳಿಸಬೇಕಾದಲ್ಲಿಗೆ ಕಳಿಸಿ ನೆಮ್ಮದಿಯ ಉಸಿರು ಬಿಡುತ್ತಾನೆ. ಇದಕ್ಕಿಂತ ಹೆಚ್ಚು ಹೇಳಿದಲ್ಲಿ ನಿಮ್ಮ ಆಸಕ್ತಿ ಕರಗುತ್ತದೆ. ನೀವೇ ಕಥೆ ಓದಿ.

ಎಂಟನೆ ಅಂಕಣ: ಹೋಟೆಲ್ಲಿನ ಪುರಾಣ. ಲಾಬಿಯಲ್ಲಿ ಕುಳಿತು ಇತರ ಟೇಬಲ್ಲಿನತ್ತ ಕಣ್ಣು ಹಾಯಿಸುತ್ತ ಗೆಳತಿಗಾಗಿ ಕಾಯುತ್ತ ಕೂರುವ ನಿರ್ದೇಶಕರು. ಇನ್ನೊಂದು ಜೋಡಿಯನ್ನು ನೋಡಿ ಮರುಗುವವರು. ಕೊನೆಯಲ್ಲಿ ಒಂದು ಊಹಿಸಬಹುದಾದ ತಿರುವು. ಓಡಿಸಿಕೊಂಡು ಹೋಗುವ ಕಥೆ.

ಒಂಬತ್ತನೇ ಅಂಕಣ: ೨೦೦೯ರಲ್ಲಿ ಪ್ರಜಾವಾಣಿಯಲ್ಲಿ ಪ್ರಕಟಿಸಿದ ಕಥೆ. ನಿಜವಾದ ಜ್ಞಾನಾರ್ಜನೆ ಹೇಗೆ ಮಾಡಬೇಕು ಎಂದು ಕಲಿಸುವ ಕಥೆ. ಮಲ್ಲೇಪುರಂ ಜೀ. ವೆಂಕಟೇಶ್ ರವರು ತಮಗೆ ಕಲಿಸಿ ಕೊಟ್ಟ ಪಾಠವನ್ನು ಇಲ್ಲಿ ಬೇರೆಯದೇ ರೀತಿಯಲ್ಲಿ ಸ್ವಾಮಿ ಹಾಗು ಮಾನಸಿಯ ಸಂಭಾಷಣೆಯಲ್ಲಿ ಕೊಟ್ಟಿದ್ದಾರೆ. ಸ್ವಾಮಿಗಳಿಗೆ ಆಲುಗಡ್ಡೆ ಕೊಂಡು ಹೋಗುವುದು ಭೈರಪ್ಪ ನವರ 'ನಿರಾಕರಣ' ದಲ್ಲಿ ಓದಿದ್ದ ಜ್ಞಾಪಕ. ಗುರು ಕೂಡ ಅದರಿಂದಲೇ ಸ್ಪೂರ್ತಿ ಹೊಂದಿರಬಹುದು.

ಹತ್ತನೇ ಅಂಕಣ: ೨೦೦೫ ರಲ್ಲಿ ರೂಪತಾರಕ್ಕೆ ಬರೆದ ಅಂಕಣ. ಕನ್ನಡದಲ್ಲಿ ಕಥೆ ಇಲ್ಲ ಎಂದು ಸುಮಾರು ವರ್ಷಗಳ ಹಿಂದೆ ನಮ್ಮ ಎನ್. ಎಸ್. ರಾವ್ ರ ಸುಪುತ್ರ ಎನ್. ಓಂಪ್ರಕಾಶ್ ರಾವ್ ರವರು ಬಾಯಿ ಬಡಿದು ಕೊಳ್ಳುತ್ತಿದ್ದಾಗ ಬರೆದ ಕಥೆ. ರಾಮಾಯಣದಲ್ಲಿ ಹೇಳದಿದ್ದ ರಾಮನ ಕಲ್ಪಿತ ಕಥೆ. ರಾಮನು ಹೇಗೆ ಕಾಮನೆಗಳನ್ನು ನಿಗ್ರಹಿಸಿ, ಏಕ ಪತ್ನಿ ವ್ರತವನ್ನು ಆಚರಿಸುತ್ತಿದ್ದನೆಂದು ಸುಂದರವಾಗಿ ಚಿತ್ರಿಸುವ ಕಥೆ. ಕಥೆಯಲ್ಲಿ ಬರುವ ಶ್ಯಾಮಲೆಯ ಹಾಗು ಅನಂಗಪಾತ್ರ ಇಷ್ಟವಾಗುವುದು. ಜೈ ಶ್ರೀರಾಮ್.

ಹನ್ನೊಂದನೇ ಅಂಕಣ: ತಮ್ಮ ತಂಗಿಯ ಮದುವೆ ಪ್ರಕರಣವನ್ನು ಸವಿಸ್ತಾರವಾಗಿ ಎಲ್ಲರಿಗೂ ಹಿಡಿಸುವಂತೆ ಇಲ್ಲಿ ಗುರು ಕೊಟ್ಟಿದ್ದಾರೆ. ಉಗಾದಿಯ ದಿನ ಬರೆದ ಈ ಅಂಕಣ, ಉಗಾದಿಯ ಹಲವಾರು ಅರ್ಥಗಳನ್ನು ಮೆಲುಕು ಹಾಕುತ್ತದೆ. ಅಣ್ಣ ತಂಗಿ ಕಥೆ ಸಿನೆಮಾಗಳಲ್ಲಿ ತೋರಿಸುವಂತಲ್ಲದೆ ಸಹಜವಾಗಿ ಮೂಡಿಬಂದಿದೆ.

ಹನ್ನೆರಡನೆಯ ಅಂಕಣ: ತಮ್ಮ ಸ್ನೇಹಿತರ ಗರ್ವ ಎಂಬ ಪತ್ರಿಕೆಯ ಮೊದಲ ಪ್ರತಿಗೆ ಮಧ್ಯ ರಾತ್ರಿ ಕಳೆದು ಬರೆದ ಕಥೆ. ಪೂರ್ತಿ ಕಥೆಯನ್ನೋದಿದ ಮೇಲೆ ತಿಳಿಯುತ್ತದೆ ಇದೊಂದು ಸ್ವಗತ. ಎಲ್ಲರ ಮನದಲ್ಲಿಯೂ ಇಂತಹ ಸ್ವಗತಗಳು ಹಲವಿವೆ. ಈ ಸ್ವಗತದಿಂದಲೇ ಪತ್ರಿಕೆಯ ಓದುಗನನ್ನು ಸ್ವಾಗತಿಸುವ ಅಂಕಣ. ಸಂಭಾಷಣೆ ಓದಿಯೇ ಆನಂದಿಸ ತಕ್ಕದ್ದು.

ಹದಿಮೂರನೇ ಅಂಕಣ: ೨೦೦೫ರಲ್ಲಿ ರೂಪತಾರಕ್ಕೆ ಬರೆದುದು. ಒಬ್ಬ ಹತಾಶ ಪ್ರೇಕ್ಷಕನ ಸಾಕ್ಷಾತ್ ದರ್ಶನ ಮಾಡಿಸುತ್ತಾರೆ. ಹೊಣೆಯರಿಯದ ನಿರ್ದೇಶಕರ ಅಸಡ್ಡೆಗೆ ಈ ಕಥೆ ಕನ್ನಡಿ ಹಿಡಿಯುತ್ತದೆ. ಸಿನಿಮ ಹೇಗೆ ಮಾಡಬೇಕೆಂಬ ಜಿಜ್ಞಾಸೆಯನ್ನು ಇಲ್ಲಿ ಕಾಣಬಹುದು. ಹಲವಾರು ಉದಾಹರಣೆಗಳ ಸಹಿತ. ಅಂಕಣದ ಮೊದಲಿಗೆ ಹಾಗು ಕೊನೆಯಲ್ಲಿ ಬರುವ ಎರಡೂ ಪ್ರಸಂಗಗಳು ನಗಿಸುತ್ತವೆ. ಹೆಚ್ಚೇಕೆ? ನೀವೇ ಓದಿ ನೋಡಿ.

ಹದಿನಾಲ್ಕನೇ ಅಂಕಣ: ೨೦೦೬ರಲ್ಲಿ ರೂಪತಾರಕ್ಕೆ ಬರೆದುದು. ಈ ಅಂಕಣವನ್ನು ಎರಡು ಪ್ರಸಂಗಗಳಲ್ಲಿ ಪ್ರೇಮವನ್ನು ಬಣ್ಣಿಸಲು ವ್ಯಯಿಸಿದ್ದಾರೆ. ಒಂದು ಓರ್ವ ಹಿರಿಯ ಕಲಾವಿದೆಯದ್ದು. ನನಗನಿಸಿದ ಮಟ್ಟಿಗೆ ಅದು 'ಭಾರ್ಗವಿ ನಾರಾಯಣ್', ರಂಗ ಕರ್ಮಿ ನಾಣಿಯವರ ಪತ್ನಿ. ಇನ್ನೊಂದು ತಮ್ಮದೇ ಸ್ವಂತ ಅನುಭವ. ಎರಡೂ ಮೊದಲ ಪ್ರೇಮ. ಎರಡರ ಹೋಲಿಕೆಯನ್ನೂ ಲೇಖಕರು ಮಾಡುತ್ತಾರೆ. ಎರಡೂ ದುಖಾಂತದಲ್ಲಿ ಕೊನೆಗೊಳ್ಳುತ್ತದೆ.

ಹದಿನೈದನೇ ಹಾಗು ಹದಿನಾರನೇ ಅಂಕಣ: ಮಠ ಚಿತ್ರಕ್ಕೆ ಮೀಸಲು. ಸೆನ್ಸಾರ್ ಸ್ಕ್ರಿಪ್ಟು ನೋಡಿ ಸಿನಿಮಾ ನೋಡದೆಯೇ ಕೆಂಗಣ್ಣಿಗೆ ಗುರಿಯಾದದ್ದು, ಸಿನಿಮಾ ನೋಡಿ ಆನಂದಿಸಿದ್ದು, ನಿರ್ದೇಶಕರು ಅದರ ಪೂರ್ವ ತಯಾರಿಗೆ ಎರಡು ಸೂಟ್ ಕೇಸು ಸಾಕ್ಷಿ ಪುರಾವೆಗಳನ್ನು ಹೊತ್ತು ಕೊಂಡು ಹೋದದ್ದು ಎಲ್ಲವು ನಗಿಸುತ್ತದೆ. ತನ್ನ ಸ್ವ ಸಾಮರ್ಥದ ಮೇಲೆ ನಂಬಿಕೆ ಇರುವ ನಿರ್ದೇಶಕನ ಧೈರ್ಯ, ನಿಮ್ಮನ್ನು ಎರಡೂವರೆ ಗಂಟೆ ಖುಷಿ ಪಡಿಸುತ್ತೇನೆ ಎನ್ನುವ ಅಚಲ ವಿಶ್ವಾಸ, ಗುರು ಅವರ ಬಗ್ಗೆ ನಮ್ಮಲ್ಲಿ ಗೌರವ ನೂರ್ಮಡಿಸುವಂತೆ ಮಾಡುತ್ತದೆ.

ಹದಿನೇಳನೆ ಅಂಕಣ: ಸಿನಿಮಲೋಕದ ಹಲವು ಸತ್ಯಗಳನ್ನು ಹೊರಗೆಡಹುತ್ತಾ ಅದರ ವಿವಿಧ ರಂಗುಗಳ ಬಣ್ಣನೆ ಮಾಡುತ್ತಾರೆ ಗುರು. ಬ್ಲಾಕ್ ಎಂಬ ಹಿಂದಿ ಸಿನಿಮಾ ಬಿಡುಗಡೆ ಆದ ಸಮಯ. ಅವರು ಅ ಚಿತ್ರದ ಬಗ್ಗೆ ಬಹಳ ಖುಷಿಯಲ್ಲಿದ್ದಾರೆ. ನನಗೆ ತಿಳಿದ ಮಟ್ಟಿಗೆ ಅದು ಹೆಲ್ಲೇನ್ ಕೆಲ್ಲರ್ ರ ಕಥೆ. ನಾನು ಆ ಚಿತ್ರ ನೋಡಿಲ್ಲ. ಅದರ ಬಗ್ಗೆ ಇಲ್ಲಿ ಬರೆಯಲಿಚ್ಚಿಸುವುದೂ ಇಲ್ಲ.

ಹದಿನೆಂಟನೆ ಅಂಕಣ: ಇದು ಒಂದು ಸಂದರ್ಶನ. ಸಂಯುಕ್ತ ಕರ್ನಾಟಕದಲ್ಲಿ ಇದೇ(2010) ಜೂನ್ ನಲ್ಲಿ ಪ್ರಕಟವಾದುದು. ಇಲ್ಲಿ ಗುರು ತಮ್ಮ ಇಲ್ಲಿಯವರೆಗಿನ ಹಾದಿ, ಮುಂದಿನ ಗುರು ಎಲ್ಲವನ್ನು ಹೊರಗೆಡಹಿದ್ದಾರೆ. ಕನ್ನಡದಲ್ಲಿ ೨೦ ಸಿನಿಮಾ ಮಾಡುವ ಇರಾದೆ ಓದಿ ಬಹಳವೇ ಖುಷಿ ಆಯಿತು. ಇನ್ನೊಂದು ಕಡೆ ಬೇಜಾರೂ ಆಯಿತು. ಇನ್ನೂ ಹೆಚ್ಚು ಚಿತ್ರಗಳು ಅವರ ಬತ್ತಳಿಕೆಯಿಂದ ಬರಲಿ. ಅವರ ಸತತ ಅಧ್ಯಯನ, ೫೦೦೦ಕ್ಕೂ ಹೆಚ್ಚು ಚಿತ್ರ ವೀಕ್ಷಣೆಯ ಅನುಭವ, ಕನ್ನಡ ಚಿತ್ರಗಳ ಬಗೆಗೆ ಅವರಲ್ಲಿರುವ ಕಳಕಳಿ ಯಾರನ್ನಾದರೂ ಮೆಚ್ಚಿಸುವಂಥಹದ್ದೆ.ಚಿತ್ರರಂಗದ ಅವರ ಕೆಲ ಅನುಭವಗಳು, ಅವರ ಉಪೇಂದ್ರರ ನಡುವಿನ ಸಂಬಂಧ, ಎಲ್ಲದರ ಬಗ್ಗೆ ಮಾತನಾಡುತ್ತಾರೆ. ಕಡೆಗೆ ಆಸ್ಕರ್ ಪ್ರಶಸ್ತಿಗೂ ಕಣ್ಣು ಹಾಕಿದ್ದಾರೆ. ಅವರು ಇಚ್ಚಿಸುವ ಎಲ್ಲವೂ ಅವರಿಗೆ ದಕ್ಕಲಿ ಎಂದು ನಾವು ಹಾರೈಸುತ್ತೇವೆ. aಆದರೆ ಅವರು ಕನ್ನಡ ಚಿತ್ರಗಳನ್ನೇ ಯಾವಾಗಲು ಮಾಡಲಿ ಎಂಬುದು ನಮ್ಮ ಆಸೆಯಷ್ಟೇ.

ಗುರು ಅವರಲ್ಲಿ ಕಾಣಬಹುದಾದ ಇನ್ನೊಂದು ಪ್ರಮುಖ ಅಂಶವೇನೆಂದರೆ, ತನ್ನ ಸಾಮರ್ಥ್ಯದ ಬಗ್ಗೆ ಅಚಲ ವಿಶ್ವಾಸವಿರುವುದು. ಅವರ ಈ ಗುಣ ನಮಗೆ ದೇವುಡು ರನ್ನು ಭೈರಪ್ಪನವರನ್ನು ನೆನೆಯುವಂತೆ ಮಾಡುತ್ತದೆ. ಇವರುಗಳಂತೆಯೇ ಗುರು ರವರ ಕನ್ನಡ ಅಸ್ಖಲಿತವಾದುದು.

ಕಡೆಯದಾಗಿ ಯಾವುದೇ ಪುಸ್ತಕದ ಬಗ್ಗೆ ಎಷ್ಟೇ ವಿಮರ್ಶೆ ಬರೆದರೂ ಅದನ್ನು ಓದಿದಂತಾಗುವುದಿಲ್ಲ. ನಿಮ್ಮಲ್ಲಿ ನನ್ನ ಅರಿಕೆಯೇನೆಂದರೆ ಈ ಪುಸ್ತಕವನ್ನು ಕೊಂಡು ಓದಿ. ನೀವು ಖಂಡಿತ ಇಷ್ಟ ಪಡುತ್ತೀರ. ನಿಮಗೆ ಗುರುಪ್ರಸಾದರ ಬಗ್ಗೆ ಒಲವಿದ್ದಲ್ಲಿ ನೀವು ಖಂಡಿತ ಆ ಕೆಲಸವನ್ನು ಮಾಡುವಿರೆಂದು ನನಗೆ ತಿಳಿದಿದೆ. ಓದಿದ ಮೇಲೆ ಇಲ್ಲಿ ಬಂದು ಒಂದು ಕಾಮೆಂಟ್ ಬರೆಯಿರಿ. ಅವರಿಂದ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಪುಸ್ತಕಗಳೂ ಚಿತ್ರಗಳೂ ಬರಲಿ.

ಸರಿ ಮುಂದಿನ ಅಂಕಣದಲ್ಲಿ ಮತ್ತೆ ಭೇಟಿಯಾಗುತ್ತೇನೆ. ಬರ್ಲಾ?

ವಿಶೇಷ ಸೂಚನೆ: ಕೆಲವು ಕಡೆ ಉತ್ಪ್ರೇಕ್ಷೆ ಎನಿಸುವಂತೆ ಬರೆಯಲಾಗಿದೆ ಎಂದೆನಿಸಿದರೆ, ಅದು ಈ ಪುಸ್ತಕದ ಗುಣ. ಇದಕ್ಕೆ ನಾನು ಜವಾಬ್ದಾರನಲ್ಲ.

Saturday, August 28, 2010

ಲೈಫು ಇಷ್ಟೇನೇ...

ಇತ್ತೀಚಿಗೆ ಈ ಹಾಡು ಎಲ್ಲಾ ಕಡೆ ಕೇಳಿ ಬರ್ತಾ ಇರತ್ತೆ. ನಾನು ಇದನ್ನ ಒಂದ್ ಸರ್ತಿನೂ ಕೇಳಿಲ್ಲ... ಇದರ ಸಾಹಿತ್ಯ ಒಂದು ಬಾರಿಯೂ ನಾನು ಕೇಳಿಲ್ಲ... ಎಲ್ಲ ಹೋದರೂ ಜನ ಈ ಹಾಡ್ ಬಗ್ಗೆ ಮಾತಾಡ್ತಾ ಇರ್ತಾರೆ. ಅದರ್ ಬಗ್ಗೆ ಕೇಳೀ ಕೇಳೀ ನನ್ನ ತಲೇಲಿ ಇದರ ಒಂದು ಅಣಕ ಹೊಳೆಯಿತು. ಅದನ್ನ ಇಲ್ಲಿ ಬಿಚ್ಚಿಡೋ ಪ್ರಯತ್ನ. ಮೂರು ಸಾಲುಗಳಷ್ಟೇ. ಹೆಚ್ಚಿಗೆ ಹೊಳೆದರೆ ಮುಂದೆ ನೋಡೋಣ.

ಕಾಯ್ಕಿಣಿ ಕೈಲಿ ಪದ್ಯ ಬರೆಸಿ,
ಮನೋ ಮೂರ್ತಿ ಮ್ಯೂಸಿಕ್ ಕೊಟ್ಟು
ಸೋನು ನಿಗಮ್ ಕೈಲಿ ಹಾಡ್ಸೋ ಲೈಫು ಇಷ್ಟೇನೇ...

ಯೋಗರಾಜ್ ಭಟ್ತ್ರಿಗ್ ಚಿತ್ರ ಕೊಟ್ಟು
ಕಿತ್ತೋಗಿರೋ ಡೈಲಾಗ್ ಬರ್ಸಿ
ಡೆಸ್ಪೋ ಗಣೇಶ್ ಬಾಯಲಿ ಹೇಳ್ಸೋ ಲೈಫು ಇಷ್ಟೇನೇ...

ಇಂಥ ಕಿತ್ತೋದ್ ಪದ್ಯ ಬರದು,
ಫೇಸ್ಬುಕ್ ಟ್ವಿಟ್ಟರಲ್ಲಿ ಕೊರ್ದು,
ನಾನೇ ಗ್ರೇಟು ಅಂತ ಕೊಚ್ಚೋ ಲೈಫು ಇಷ್ಟೇನೇ...

Thursday, February 18, 2010

ಡಿ. ಎನ್. ಶಂಕರ್ ಭಟ್ಟರ ಕನ್ನಡ. ಒಂದು ವಿಮರ್ಶೆ. ಭಾಗ ೧

ಮಯೂರದಲ್ಲಿ ಡಿ. ಎನ್. ಶಂಕರ ಭಟ್ಟರ ಸಂದರ್ಶನವನ್ನೋದುತ್ತಿದ್ದಾಗ ಹೊಳೆದ ಈ ಲೇಖನ ಈಗ ನಿಮ್ಮ ಮುಂದೆ.

ಈ ತಿಂಗಳ ಮಯೂರವನ್ನು ಕೈಗೆತ್ತಿಕೊಂಡಾಗ ಅದರ ನವನೀತ ಅಂಕಣದಲ್ಲಿ ಪ್ರಕಟಗೊಂಡ ಈ ತಲೆಬರಹ ನನ್ನ ಗಮನವನ್ನು ಸೆಳೆಯಿತು. "ಓದುಕನ್ನಡವೇ ಬರಹಕನ್ನಡ".
ಸಂದರ್ಶಿತರು: ಡಿ. ಎನ್. ಶಂಕರ್ ಭಟ್,
ಸಂದರ್ಶಕರು: ಮೇಟಿ ಮಲ್ಲಿಕಾರ್ಜುನ, ಎಸ್. ಸಿರಾಜ್ ಅಹಮದ್.

ಆಸಕ್ತರು ಈ ಅಂಕಣವನ್ನು ಒಮ್ಮೆ ಓದಿ ಈ ಲೇಖನವನ್ನು ಓದಬೇಕಾಗಿ ಪ್ರಾರ್ಥನೆ.

ಡಿ. ಎನ್. ಶಂಕರ್ ಭಟ್ಟರು ಆಂಗ್ಲ ಭಾಷೆಯಲ್ಲಿ ಮಹಾನ್ ಪಂಡಿತರು. ಅವರ ಹಲವು ಪುಸ್ತಕಗಳು ಜಗದ್ವಿಖ್ಯಾತವಾಗಿವೆಯೆಂದು ಈ ಲೇಖನ ಹೇಳುತ್ತದೆ. ಅವರು ೭೦ರ ದಶಕದಲ್ಲಿ ಕನ್ನಡದಲ್ಲಿ ಬರೆಯಲು ಆರಂಭಿಸಿದ್ದರಾದರೂ ಹೆಚ್ಚಿನ ಸ್ಪೂರ್ತಿ, ಸಹಕಾರ ದೊರೆಯದ ಕಾರಣ ಆಂಗ್ಲಕ್ಕೆ ಅಂಟಿಕೊಂಡರು ಎಂದು ಹೇಳಿಕೊಂಡಿದ್ದಾರೆ. ಈಗ ಪ್ರೊ|| ಚಂದ್ರಶೇಖರ್ ಕಂಬಾರರ ನಲ್ಮೆಯ ಒತ್ತಾಯದ ಮೇರೆಗೆ ಕನ್ನಡ ಭಾಷೆಯ ಬಗೆಗೆ ವಿಸ್ತೃತ ಸಂಶೋಧನೆಗೈಯಲು ತೊಡಗಿದ್ದಾರೆ. ಈ ಸಂಶೋಧನೆಯ ಫಲಿತಾಂಶಗಳೇ ಅವರ ಹಲವು ಪುಸ್ತಕಗಳು

೧. ಕನ್ನಡ ನುಡಿ ನಡೆದು ಬಂದ ದಾರಿ.
೨. ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ.
೩. ಕನ್ನಡ ಬರಹವನ್ನು ಸರಿಪಡಿಸೋಣ.
೪. ಬಾಶೆಯ ಬಗೆಗೆ ನೀವೇನು ಬಲ್ಲಿರಿ?
೫. ಕನ್ನಡ ವಾಕ್ಯಗಳ ಒಳರಚನೆ.
೬. ಕನ್ನಡದ ಸರ್ವನಾಮಗಳು. (ಅರ್ಕ ಒತ್ತು ಅಲ್ಲ, ರ ಕಾರಕ್ಕೆ ವ ಒತ್ತು.)
೭. ಕನ್ನಡ ಬಾಶೆಯ ಕಲ್ಪಿತ ಚರಿತ್ರೆ
೮. ಕನ್ನಡ ಶಬ್ದ ರಚನೆ.

ಇನ್ನು ಹಲವು. ಏನ್ ಗುರು ತಂಡದವರು ಈ ಎಲ್ಲ ಹೊತ್ತಿಗೆಗಳನ್ನು ವಿದ್ಯುನ್ಮಾನ ರೂಪದಲ್ಲಿ ಹೊರತಂದಿದ್ದಾರೆ. ಅವುಗಳನ್ನು ನೀವು ಇಲ್ಲಿಂದ ಡೌನ್ಲೋಡ್ ಮಾಡಬಹುದು. (ನಾನು ಈ ಪುಸ್ತಕಗಳನ್ನು ಡೌನ್ಲೋಡ್ ಮಾಡಲು ನೋಡಿದೆ. ಸರ್ವರ್ ಎರರ್ ಒದಗಿತು. ಇನ್ನೊಮ್ಮ್ಮೆ ನೋಡಲಾಗಲಿಲ್ಲ).

ಈ ನಿಟ್ಟಿನಲ್ಲಿ ಏನ್ ಗುರು ತಂಡ ಒಂದು ಸಭೆಯನ್ನು ಏರ್ಪಡಿಸಿತ್ತು. ಅದರ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ತಂತುವನ್ನು ನೋಡಿ.

ಡಿ. ಏನ್. ಶಂಕರ್ ಭಟ್ ರ ಈಗಿನ ಕನ್ನಡದ ಮೇಲಿನ ಆರೋಪಗಳು.
೧. ಇದು ಕನ್ನಡವಲ್ಲ, ಸಂಸ್ಕೃತ.
೨. ಹೆಚ್ಚಾಗಿ ಸಂಸ್ಕೃತ ಪದಗಳನ್ನೇ ಅವಲಂಬಿತವಾಗಿರುವ ನಮ್ಮ ಇಂದಿನ ಕನ್ನಡವನ್ನು ನಾವು ಕನ್ನಡೀಕರಿಸಬೇಕು.
೩. ವ್ಯಾಕರಣವೂ ಸಂಸ್ಕೃತಮಯವಾಗಿದೆ. ಅದರ ಶುದ್ಧೀಕರಣವೂ ಸಾಗಬೇಕು.
೪. ಆಡುಭಾಷೆಯಲ್ಲಿ ಮಹಾಪ್ರಾಣಗಳನ್ನು ಬಳಸುವುದಿಲ್ಲ. ಅದೆಲ್ಲ ಬರಿಯ ಲಿಖಿತ ರೂಪದಲ್ಲಿವೆಯಷ್ಟೇ. ಹಾಗಾಗಿ ಇವನ್ನೆಲ್ಲ ನಮ್ಮ ಕನ್ನಡದಿಂದ ತೆಗೆದುಹಾಕಬೇಕು.
೫. ಪಠ್ಯ ಪುಸ್ತಕಗಳು ಕನ್ನಡದಲ್ಲಿ ಹೊರಬರುತ್ತಿಲ್ಲ. ಅದರಲ್ಲಿಯೂ ವೈಜ್ಞಾನಿಕ ವಿಷಯಗಳಿಗೆ ಸಂಬಂಧ ಪಟ್ಟಂತೆ ಕನ್ನಡದಲ್ಲಿ ಕಲಿಯಲು ಯಾವುದೇ ಸೌಲಭ್ಯಗಳಿರುವುದಿಲ್ಲ. ಇವೆಲ್ಲವನ್ನೂ ತೊಡೆದು ಹಾಕಲು ಕನ್ನಡದಲ್ಲಿ ಅದೂ ಆಡುಗನ್ನಡದಲ್ಲಿ ಹೆಚ್ಚಿನ ಪುಸ್ತಕಗಳನ್ನು ಹೊರತರಬೇಕು.
೬. ಹೊಸ ಹೊಸ ಕನ್ನಡ ಪದಗಳ ಆವಿಷ್ಕಾರ ಆಗಬೇಕು. ಇದು ನಡೆಯುತ್ತಲೇ ಇರಬೇಕು.
೭. ಹಳ್ಳಿ ಮಕ್ಕಳು, ಕೆಳ ವರ್ಗದವರು ಈಗಿನ ಪಠ್ಯ ಪುಸ್ತಕಗಳಲ್ಲಿ ಸಿಗುವ ಮಹಾಪ್ರಾಣಗಳಿಂದ ನಲುಗಿ ಹೋಗಿದ್ದಾರೆ. ಅದರಿಂದ ಅವರು ಶೈಕ್ಷಣಿಕವಾಗಿ ಮೇಲೆ ಬರಲಾಗುತ್ತಿಲ್ಲ. ಹೀಗಾಗಿ ಮಹಾಪ್ರಾಣಗಳನ್ನು ತೆಗೆದುಹಾಕಬೇಕು.

ಇನ್ನು ಹಲವು. ಇವು ಮುಖ್ಯವಾದವು.

ಇನ್ನು ನನ್ನ ನಿಲುವನ್ನು ಸ್ಪಷ್ಟಪಡಿಸುತ್ತೇನೆ. ನಾನು ಕನ್ನಡಕ್ಕೆ ಈ ಮಟ್ಟದ ಬದಲಾವಣೆಯಾಗುವುದನ್ನು ಪೂರ್ಣವಾಗಿ ಖಂಡಿಸುತ್ತೇನೆ. ಈ ಮೇಲೆ ಹೇಳಿರುವ ಅಂಶಗಳಿಗೆ ನನ್ನ ಉತ್ತರವನ್ನು ಈಗ ಕೊಡಲಿಚ್ಚಿಸುತ್ತೇನೆ.

೧. ಇದು ಕನ್ನಡವಲ್ಲ, ಸಂಸ್ಕೃತ: ಸ್ವಾಮಿ, ಕನ್ನಡದಲ್ಲಿ ಸಂಸ್ಕೃತ ಬಹಳಷ್ಟಿರಬಹುದು. ಆದರೆ ಕನ್ನದವೆಂದೂ ಸಂಸ್ಕ್ರುತವಗಲಾರದು. ಕನ್ನಡಕ್ಕೆ ಅದರದ್ದೇ ಸ್ಥಾನಮಾನಗಳಿವೆ. ಸಂಸ್ಕೃತಕ್ಕೂ ಅದರದ್ದೇ ಸ್ಥಾನಮಾನಗಳಿವೆ. ಎರಡು ಭಾಷೆಗಳನ್ನು ಈ ರೀತಿ ಏಕೆ ಹೋಲಿಸುತ್ತೀರಿ?ಸಂಸ್ಕೃತ ಭಾರತದ ಭಾಷೆ. ಅದರಿಂದ ಸ್ಪೂರ್ತಿ ಪಡೆಯದ ಭಾರತದ (ಅಷ್ಟೇ ಏಕೆ? ವಿಶ್ವದ) ಭಾಷೆಯೆಷ್ಟಿದೆ? ನಮ್ಮ ಕನ್ನಡವೂ ಇದೇ ರೀತಿ ಸಂಸ್ಕೃತದಿಂದ ಬಹಳ ಪಡೆದುಕೊಂಡಿದೆ. ಹಾಗೆಯೇ ಸಂಸ್ಕೃತವೂ ಇತರ ಭಾಷೆಗಳಿಂದ ಹೆಚ್ಚಲ್ಲದಿದ್ದರೂ ಅಷ್ಟು ಇಷ್ಟು ಪಡೆದುಕೊಂಡಿದೆ. ಭಾಷೆಗಳು ಬೆಳೆಯುವುದೇ ಹಾಗೆ ಅಲ್ಲವೇ?

೨. ಕನ್ನಡದ ಹೆಚ್ಚಿನ ಪದಗಳು ಸಂಸ್ಕೃತದಿಂದ ಆಯ್ದವಾಗಿವೆ. ಅವನ್ನು ಕನ್ನಡೀಕರಿಸಬೇಕು: ಕನ್ನಡೀಕರಿಸುವುದೆಂದರೆ ಏನು?ಹೊಸ ಪದಗಳನ್ನು ಹುಟ್ಟು ಹಾಕುವುದು. ಇದಕ್ಕೂ ಸಂಸ್ಕೃತಕ್ಕೂ ಏಕೆ ಥಳುಕು ಹಾಕುವಿರಿ? ಕೆಲವಕ್ಕೆ ಹಳಗನ್ನಡ ಪದಗಳನ್ನು ಹೊಂದಿಸಬಹುದು. ಇತ್ತೀಚಿನ ವಿಜ್ಞಾನ ಸಂಬಂಧೀ ಪದಗಳಿಗೆ ಏನು ಮಾಡುವಿರಿ?

ಉದಾಹರಣೆ: ನೀವು 'ಉದಾಹರಣೆ' ಎನ್ನುವ ಬದಲು 'ಎತ್ತುಗೆ' ಎನ್ನಲು ಪ್ರೋತ್ಸಾಹಿಸುತ್ತೀರಿ. ಹೆಚ್ಚಿನ ಜನಕ್ಕೆ ಉದಾಹರಣೆ ಎಂದೇ ಅಭ್ಯಾಸವಾಗಿರುವಾಗ ಯಾರು ಎತ್ತುಗೆ ಎನ್ನುತ್ತಾರೆ?

ಮುಂದುವರೆಯುವುದು...

Monday, February 08, 2010

ಸದಾನಂದ

ಸ್ಮಶಾನದಲ್ಲಿ ಅವನು ಅಳುತ್ತಾ ಕೂತಿದ್ದ. ಅವನ ತಂದೆ, ಅವನಿಗಿದ್ದ ಒಂದೇ ಆಸರೆ, ಅವನನ್ನಗಲಿದ್ದ. ತನಗಿನ್ನಾರು ದಿಕ್ಕು? ತಾನಿನ್ನು ಒಬ್ಬಂಟಿ ಎಂದು ಮರುಗುತ್ತಿದ್ದ.

ಸ್ಮಶಾನದ ಚಂಡಾಳ ಇವನನ್ನೇ ದಿಟ್ಟಿಸಿ ನೋಡುತ್ತಿದ್ದ. ಅವನ ಕೆಲಸವೆಲ್ಲ ಮುಗಿದಿತ್ತು. ಆ ದಿನ ಹೆಣ ಸುಟ್ಟು, ೩-೪ ಹೆಣಗಳನ್ನು ಹೂತಿದ್ದ.

ಇವನ ಬಳಿ ಬಂದು ಕೇಳಿದ: "ಯಾಕ್ ಮರಿ ಅಳತ ಇದ್ದೀಯ? ಮನೆಗ್ ಒಗಾಕಿಲ್ವ?"

"ನಮ್ಮಯ್ಯ ಸತ್ತ್ಹೊಗವ್ರೆ! ನಂಗ್ಯಾರು ಗತಿ ಇಲ್ಲ. ಮನೆಗ್ ಹೋದ್ರೆ ಬರೀ ಅಯ್ಯನ್ನ್ ನೆನಪೆ ಬತ್ತೈತೆ. ನಾ ಮನೆಗ್ ಹೊಗಾಕಿಲ್ಲ"

"ಹಂಗಲ್ಲ ಅನ್ನ್ಬ್ಯಾಡದು ಮಗಾ! ಮೇಲಿರೋ ನಿಮ್ಮಯ್ಯನ್ಗೆ ಸಿಟ್ಟ ಬರಾಕಿಲ್ವ? ಓಗು! ಮನೆಗ್ ಹೋಗಿ ಸಂದಾಗ್ ಬದುಕು"

"ನಾ ಒಗಾಕಿಲ್ಲಂದ್ರೆ ಒಗಾಕಿಲ್ಲ".

"ನೀ ಹೀಂಗ್ ಹೇಳಿದ್ರೆ ಹೋಗಲ್ಲ. ಇಲ್ ಬಾ. ಇದ ನೋಡು. ಏನಿದು?"

"ತಲೆ ಬುಲ್ಡೆ ಕಣ್ ಏಳು".

"ಇದ ಯಾವಗಾನ ಅತ್ತಿದ್ದೂ ಬೇಜಾರ್ ಮಾಡ್ಕಂದಿದ್ದೂ ನೀ ಕಂಡೀಯ?"

"ಏಯ್! ಆದ ಯಾಕ್ ಬೇಜಾರ್ ಮಾಡ್ಕತ್ತದೆ? ಅದ್ಕೆನ್ ಬುದ್ದಿ ಐತಾ?"

"ಅದೇ ನಾನು ಏಳೋದು. ನೀ ಬ್ಯಾಜಾರ್ ಮಾಡ್ಕಂದ್ರೂ, ಸಿಟ್ಟ ಮಾಡ್ಕಂದ್ರೂ ಏನೇ ಮಾಡ್ಕಂದ್ರೂ ಈ ತಲೆ ಬುಲ್ಡೆ ಮಾತ್ರ ಯಾವಾಗಲೂ ನಗ್ತಾ ಇರ್ತದೆ. ಅಳೋ ತಲೆ ಬುಲ್ಡೆ ನ ಯಾರೂ ಇಲ್ಲೀಗಂಟ ಕಂಡೇ ಇಲ್ಲ. ತಿಳ್ಕ. ನೀ ಹೆಂಗೆ ಇರು, ಈ ಬುಲ್ಡೆ ಮಾತ್ರ ಯಾವಾಗಲೂ ನಗ್ತಾನೆ ಇರ್ತೈತೆ. ಹಂಗೆ ಏನೇ ಆದ್ರೂ ನೀನು ನಗ್ತಾನೆ ಇರ್ಬೇಕು. ಈಗ ನಿಮ್ಮಪ್ಪ ಸತ್ತೋದ್ರು ಅಂತ ನೀ ಸುಮ್ಕಿದ್ದ್ರೆ ನೀನು ಸತ್ತ್ಹೊಯ್ತೀ. ನಿಮ್ಮಪ್ಪ ನಿನ್ನ ಕಷ್ಟ ಪಟ್ಟು ಸಾಕಿದ್ದು ಇದ್ಕೆಯ? ಹೋಗು. ಕಷ್ಟ ಪಟ್ಟು ದುಡಿದು ನಿಮ್ಮಪ್ಪನ್ ಋಣ ತೀರ್ಸೋಗು. "

ಬಾಳಿನಲ್ಲಿ ಏನೋ ಹೊಸ ಅರ್ಥ ಕಂಡ ಆ ಹುಡುಗ ಮುನ್ನಡೆದ.

Sunday, January 24, 2010

ಕಂಗ್ಲಿಷ್: ಒಂದು ಅಧ್ಯಯನ.

ನಿಮಗೆಲ್ಲಾ ತಿಳಿದಿರುವ ಹಾಗೆ ಕಂಗ್ಲಿಷ್ ಎಂದರೆ ಇಂಗ್ಲಿಷ್ ಅಥವಾ ಆಂಗ್ಲ ಭಾಷೆ ಹಾಗು ಕನ್ನಡ ಭಾಷೆಯ ಮಿಶ್ರಣ. ಇದರಲ್ಲಿ ಕನ್ನಡಕ್ಕಿಂತ ಇಂಗ್ಲಿಷ್ ಹೆಚ್ಚು ಬೆರೆತಿರುವುದರಿಂದ 'ಇನ್ನಡ' ಎನ್ನದೇ ಕಂಗ್ಲಿಷ್ ಎಂದಿರಲೂ ಬಹುದು.

ಇದರ ಬಳಕೆ ಇಂದಿನ ದಿನಗಳಲ್ಲಿ ಎಷ್ಟು ಪ್ರಧಾನವಾಗಿಬಿಟ್ಟಿದೆ ಎಂದರೆ ಸ್ಪಷ್ಟ ಹಾಗು ಸುಲಲಿತ ಕನ್ನಡವನ್ನು ಯಾರಾದರೂ ಅಪ್ಪಿ ತಪ್ಪಿ ಆಡಿಬಿಟ್ಟರೆ, ಎಲ್ಲರೂ ಕಕಮಕರಾಗಿಬಿಡುತ್ತಾರೆ. ಎಲ್ಲಿಯೋ ಪರದೇಶದಿಂದ ಬಂದವನಿಗೆ ಬೀರುವ ನೋಟ ಇವರಿಗೆ ಪ್ರಾಪ್ತವಾಗಿಬಿಡುತ್ತದೆ.

ಮೊನ್ನೆ ಮೊನ್ನೆ ನಮ್ಮ ತೀ. ನಂ. ಶ್ರೀ ರವರ 'ನಂಟರು' ಪ್ರಬಂಧ ಸಂಕಲನ (ಅಥವಾ ನನ್ನ ಪ್ರಕಾರ ಅಂದಿನ ಬ್ಲಾಗು) ಓದುವಾಗ ಅವರ 'ಕಾಸಿನ ಸಂಘ' ಓದುತ್ತಿರುವಾಗ ಈ ಅಂಕಣ ಬರೆಯುವ ಹಂಬಲ ಉಂಟಾಯಿತು.

ಇದರ ಅಧ್ಯಯನ ಮಾಡುವ ಮುನ್ನ ಕೆಲವು ಉದಾಹರಣೆಗಳನ್ನು ನೋಡೋಣ.

೧. ಹೇಯ್! ಈಗ time ಎಷ್ಟಾಯ್ತು?
೨. ಈಗ ಸ್ವಲ್ಪ snacksu, coffee, tea ಕುಡ್ಕೊಂಡ್ ಬರೋಣ?
೩. ಬಟ್ಟೆ wash ಮಾಡಿದ್ದೀನಿ, ಸ್ವಲ್ಪ iron ಮಾಡ್ಬಿದ್ತೀರಾ?
೪. ನಂಗೆ ಸೀರೆ ಅಂದ್ರೆ allergy you know? ಯಾರು ಆ old model dress ಎಲ್ಲಾ ಹಾಕ್ಕೋತಾರೆ?
೫. ಹೇಯ್ come ya! ಈಗ shopping ಮಾಡಿ ಬರೋಣ.

ಇವು ಕೇವಲ ಉದಾಹರಣೆಗಳಷ್ಟೇ. ಬಸ್ಸಿನಲ್ಲಿಯೋ, ಕಾಲೇಜಿನಲ್ಲಿಯೋ ಅಥವಾ ಜನ ಹೆಚ್ಚು ಸೇರುವ ಯಾವುದೇ ಜಾಗಕ್ಕೆ ಹೋಗಿ ನೋಡಿದರೂ ಇಂತಹ ಲೆಕ್ಕವಿಲ್ಲದಷ್ಟು ಉದಾಹರಣೆಗಳು ನಮಗೆ ಸಿಗುತ್ತವೆ.

ಕಂಗ್ಲಿಷಿನ ಉಗಮ:

ಈ ಕಂಗ್ಲಿಷ್ ಯಾವ ಕಾಲಘಟ್ಟದಿಂದ ಉದಯಿಸಿರಬಹುದು? ಆಂಗ್ಲರು ನಮ್ಮ ದೇಶಕ್ಕೆ ಬರುವ ಮುಂಚೆಯಂತೂ ಇದು ಬಂದಿರುವುದು ಶಕ್ಯವಿಲ್ಲ. ಐರೊಪ್ಯ ರಾಷ್ಟ್ರಗಳು ನಮ್ಮ ದೇಶಕ್ಕೆ ಬಂದಿದ್ದು ೧೬ನೇ ಶತಮಾನದಲ್ಲಾದರೂ, ಅವರ ಸರ್ಕಾರ ಸ್ಥಾಪಿತವಾದದ್ದು ೧೭ನೇ ಶತಮಾನದಲ್ಲಿ. ಕರ್ನಾಟಕಕ್ಕೆ ಬ್ರಿಟೀಷರ ಕಿರುಕುಳ ಶುರುವಾದದ್ದು ೧೮ನೇ ಶತಮಾನದಲ್ಲಿಯೇ ಎಂದು ಹೇಳಬೇಕು. ನಮ್ಮ ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ಇವರೆಲ್ಲರೂ ೧೮ ನೇ ಶತಮಾನದವರೇ. ಹೈದರ್ ಅಲಿ, ಟಿಪ್ಪು ಸುಲ್ತಾನ್ ಇಬ್ಬರೂ ೧೮ ನೇ ಶತಮಾನ ಮುಗಿಯುವುದರೊಳಗೆ ಬ್ರಿಟೀಷರ ಮೇಲೆ ಯುದ್ಧ ಹೂಡಿ ಸತ್ತವರು. ನಮ್ಮ ಈ ಕಂಗ್ಲಿಷ್ ಪ್ರಾರಂಭವಾಗಿದ್ದರೆ ಇದರ ನಂತರವಷ್ಟೇ ಸಾಧ್ಯ.

ಬ್ರಿಟೀಷರು ಆಗ ನಮ್ಮನ್ನಾಳುತ್ತಿದ್ದರೂ ಅವರವರ ನಡುವೆ ಮಾತ್ರ ಆಂಗ್ಲ ಭಾಷೆ ಬಳಸುತ್ತಿದ್ದಿರಬೇಕು. ಪ್ರಜೆಗಳಿಗೆ ಇಂಗ್ಲಿಷ್ ಹೇರಲಿಲ್ಲ. ಇದರ ಬಗೆಗೆ ಯಾವುದೇ ಮಾಹಿತಿ ನನ್ನ ಬಳಿಯಿಲ್ಲವಷ್ಟೇ. ಅವರ ತಂತ್ರ ಕುತಂತ್ರಗಳೇನಿದ್ದರೂ ವಿಭಿನ್ನ ರೀತಿಯವು. ಅದರ ಬಗ್ಗೆ ಈಗ ಚರ್ಚೆ ಬೇಡ.

೧೯ನೇ ಶತಮಾನದ ಮಧ್ಯಂತರದ ಮೇಲೆ ಹಲವಾರು ಭಾರತೀಯರು ಉನ್ನತ ವ್ಯಾಸಂಗಕ್ಕಾಗಿ ಯೂರೋಪ್ ಗೆ ಮುಖ ಮಾಡಿದ ಕಾಲ. ಸುಮಾರು ಭಾರತೀಯರು ಲಂಡನ್ನಿಗೆ ಹೋಗಿರುವುದು ನಮಗೆಲ್ಲರಿಗೂ ತಿಳಿದ ವಿಷಯ. ರಾಜಾ ರಾಮ್ ಮೋಹನ್ ರಾಯ್, ಮಹಾತ್ಮಾ ಗಾಂಧಿ, ಜವಾಹರ್ ಲಾಲ ನೆಹರು, ಸರ್. ಎಂ. ವಿಶ್ವೇಶ್ವರಯ್ಯ ಇನ್ನೂ ಹಲವರ ಉದಾಹರಣೆ ನಮಗೆ ಇತಿಹಾಸದಿಂದ ಸಿಗುತ್ತದೆ.

ಹೊರದೇಶಕ್ಕೆ ಹೋದರೆ (ಸಮುದ್ರ ದಾಟಿದರೆ), ಧರ್ಮದಿಂದ ಉಚ್ಚಾಟನೆ ಆಗುತ್ತಿದ್ದ ಕಾಲ ಒಂದಿತ್ತು. ಕ್ರಮೇಣ ಹೊರದೇಶದಲ್ಲಿ ಓದಿ ಬಂದವರಿಗೆ ಭಾರಿ ಮನ್ನಣೆ ದೊರೆಯುವಂತಾಯಿತು. "ಓಹೋ! ಅವರು ಲಂಡನ್ನಿನಲ್ಲಿ ಓದಿ ಬಂದವರು! ಬಹಳ ಮೇಧಾವಿ ಇರಬೇಕು." ಎಂಬ ಮಾತುಗಳು ದಿನೇ ದಿನೇ ಬಹಳವಾಗುತ್ತಾ ಬಂತು.

ಹೀಗೆ ಬ್ರಿಟನ್ನಿಗೆ ಹೋಗಿ ಬಂದ ಹಲವರಲ್ಲಿ ಒಂದು ರೀತಿಯ ಜಂಭ. ತಮಗೆ ಇಂಗ್ಲಿಷ್ ಗೊತ್ತು. ಇತರರಿಗೆ ತಿಳಿದಿಲ್ಲ. ತಮ್ಮ ನಗರದಲ್ಲೇ ಅಥವಾ ಆಸುಪಾಸಿನಲ್ಲಿ ಯಾರಾದರು ಒಬ್ಬರು ವಿದೇಶ ಸುತ್ತಿ ಬಂದವರಿದ್ದರೆ ಅವರೊಡನೆ ಮಾತ್ರ ಮಾತು, ಇತರರೊಡನೆ ಮೂದಲಿಕೆ ಹೆಚ್ಚುತ್ತಾ ಬಂತು.

ಇದನ್ನು ಕಂಡ ಸಾಮಾನ್ಯ ಜನರು, ತಮಗೆ ತಿಳಿಯದ ಭಾಷೆ ಅರಿಯಲು ಅದನ್ನೇ ಮಾತನಾಡುವ ಜನರನ್ನು ಹೆಚ್ಚು ಮರ್ಯಾದೆಯಿಂದ ಮಾತನಾಡಲು ತೊಡಗಿದರು. ಹಾಗು ಹೀಗೂ ಸ್ವಲ್ಪ ಸಮಯ ಅವರೊಂದಿಗೆ ಕಳೆದರೆ ತಮ್ಮ ಜನ್ಮ ಉದ್ಧಾರವಾಗುವುದು ಎಂಬ ಭ್ರಮೆ ಅವರಿಗೆ ಬಂತು. ಮಾತನಾಡುವಾಗ ಅಲ್ಲಿ ಇಲ್ಲಿ ಅವರ ಬಾಯಿಂದ ಹೋರಾಟ ಕೆಲವು ಆಂಗ್ಲ ಪದಗಳು ಇವರ ಕಿವಿಗೆ ಬಿದ್ದು ಅದರ ಅರ್ಥವನ್ನು ಅವರಿಂದ ಎದ್ದು ಬಿದ್ದು ಪಡೆದು ತಮ್ಮ ಇತರ ಸ್ನೇಹಿತರ ಮುಂದೆ ಬಡಾಯಿ ಕೊಚ್ಚಲು ಉಪಯೋಗಿಸುತ್ತಿದ್ದರು.

ಇವೇ ಪದಗಳು ಮುಂದೆ ಕನ್ನಡ ವಾಕ್ಯಗಳಲ್ಲಿಯೇ ಬೆರೆತು ಈ ಹೊಸ ಕಂಗ್ಲಿಷ್ ಆಯಿತು ಎನ್ನುವುದು ನನ್ನ ನಂಬಿಕೆ.

ಕಂಗ್ಲಿಷ್ ಬೆಳವಣಿಗೆ:

ಉಗಮದ ಮಾತಾಯಿತು. ಇದು ಹೇಗೆ ಬೆಳೆಯಿತು? ಅಥವಾ, ಇದರ ಬೆಳವಣಿಗೆಗೆ ಹೇಗೆ ಪ್ರೋತ್ಸಾಹ ಸಿಕ್ಕಿರಬಹುದು? ನನಗೆ ಹೊಳೆಯುತ್ತಿರುವ ಕಾರಣಗಳೆಂದರೆ:

೧. ಮೊದಲೇ ಹೇಳಿದಂತೆ, ವಿದೇಶಿ ವಿದ್ಯಾರ್ಥಿಗಳು ಹೆಚ್ಚುತ್ತಾ ಹೋಗಿ ಅವರ ಮಾತೃಭಾಷೆಯ ಬಳಕೆಯಲ್ಲೆಲ್ಲ ಇಂಗ್ಲೀಷನ್ನು ತುರುಕುತ್ತಿದ್ದಿರಬೇಕು.
೨. ಅದನ್ನು ಕೇಳಿದ ಇಲ್ಲಿಯ ಜನ ಅದರ ಉಪಯೋಗದಲ್ಲಿ ಏನೋ ಒಂದು ಸಂತೋಷವನ್ನು ಮನಗಂಡು ಉಪಯೋಗಿಸುತ್ತಿದ್ದಿರಬಹುದು.
೩. ಹಲಕೆಲವು ವಿದೇಶಿ ವಸ್ತುಗಳು ಇಲ್ಲಿಗೆ ಬಂದು ಅವಕ್ಕೆ ಇಲ್ಲಿ ಸಮನಾದ ವಸ್ತುಗಳು ಇರದಿದ್ದುದ್ದರಿಂದ ಅವಕ್ಕೆ ಕನ್ನಡದಲ್ಲಿ ಹೊಸ ಪದವನ್ನು ಆವಿಷ್ಕರಿಸದೇ ಅದೇ ಹೆಸರನ್ನು ಇಲ್ಲಿಯೂ ಕಾಪಾಡಿಕೊಂಡು ಬಂದಿರಬಹುದು. ಉದಾ: ಬಸ್ಸು, ಟ್ರೇನು,ಇಂಜಿನ್, ಟೇಪ್ ರೆಕಾರ್ಡರ್, ಇತ್ಯಾದಿ ಹಲವು ವಸ್ತುಗಳು.
೪. ಈ ಮೇಲೆ ಹೇಳಿದ ಪದಗಳಿಗೆ ಕನ್ನಡ ಪದಗಳನ್ನು ಸೃಷ್ಟಿಸಿದರೂ ಜನರಿಗೆ ಅದು ಕ್ಲಿಷ್ಟವಾಗಿ ಕಂಡಿದ್ದಿರಬೇಕು. ಇತರ ಹಲವು ಕನ್ನಡ ಪದಗಳನ್ನು ಉಚ್ಚರಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಜನರು ಅದರ ಆಂಗ್ಲ ಸಮನ್ವಿತ ಪದದ ಮೊರೆ ಹೋಗಿರಲೂ ಬಹುದು. ಉದಾ: ಬಸ್ಸು ಎನ್ನುವ ಬದಲು ಯಾರು ಷಟ್ಚಕ್ರ ವಾಹನ ಎನ್ನುತ್ತಾರೆ?
೫. ಮೇಲೆ ಹೇಳಿದ ಕಾರಣ ಬರೀ ವಿದೇಶಿ ವಸ್ತುಗಳಿಗೆ ಸೀಮಿತವಾಗಿರಬೇಕೆಂದಲ್ಲ. ಆ ಪದ ಕನ್ನಡದಲ್ಲಿ ಬಹಳ ಹಿಂದಿನಿಂದ ಬಳಕೆಯಾಗುತ್ತಿದ್ದರೂ ಆಂಗ್ಲ ಭಾಷೆಯಲ್ಲಿ ಅದಕ್ಕೆ ಒಂದು ಪುಟ್ಟ ಪದವಿದ್ದರೆ ಜನ ಅದಕ್ಕೆ ಮೊರೆ ಹೋಗುವುದನ್ನು ನಾವು ನೋಡಿದ್ದೇವೆ. ಉದಾ: ಕನ್ನಡದ ಹುರುಳೀಕಾಯಿ ಎಂದರೆ ಕೆಲವರಿಗೆ ಅರ್ಥವಾಗುವುದಿಲ್ಲ; beans ಎಂದರೆ ಎಲ್ಲರಿಗೂ ಅರ್ಥವಾಗುತ್ತದೆ. ಇಂತಹ ವಸ್ತುಗಳನ್ನು ಮಾರಾಟ ಮಾಡುವವರೂ ಆಂಗ್ಲ ಭಾಷೆಯ ಮೊರೆ ಹೋದದ್ದರಿಂದ ಜನರಿಗೆ ಅದರ ಕನ್ನಡ ಪದ ಮರೆತೇ ಹೋಗಿರಬೇಕು.
೬. ಕೆಲವರಲ್ಲಿ ತಮ್ಮ ಮಾತೃಭಾಷೆಯಲ್ಲಿ ಮಾತನಾಡುವುದೆಂದರೆ ಅದೇನೋ ಮುಜುಗರ. ಕೀಳರಿಮೆ ಸ್ವಭಾವ. ಅಂಥವರನ್ನು ನೀವೂ ಕಂಡಿರುತ್ತೀರಷ್ಟೇ. ಅವರ ಬಾಯಲ್ಲಿ ಹೊರಬರುವ ಇಂಗ್ಲಿಷ್ ಹೆಚ್ಚಿನ ಪಕ್ಷ ಕಂಗ್ಲಿಷ್ಷೇ ಆಗಿರುತ್ತದಷ್ಟೇ. ಆ ಪ್ರಯೋಗದ ಎರಡು ಉದಾಹರಣೆ: ೧) Please give me some teaಅ. ೨) You today wonly comeಅ. ಪ್ರತೀ ವಾಕ್ಯದ ಕೊನೆಯಲ್ಲಿ ಕನ್ನಡದ ತಂತು ನಿಮಗೆ ಕಾಣಸಿಗುತ್ತದೆ. ೧೦೦ಕ್ಕೆ ೯೫ ಪ್ರತಿಶತ ಇಂಥವರಿಂದಲೇ ಕಂಗ್ಲಿಷ್ ಉದ್ಧಾರವಾಗುತ್ತಿರುವುದು.

ಇನ್ನೂ ಹಲವು ಕಾರಣಗಳಿರಬಹುದು. ಇವು ಪ್ರಮುಖವಾದವೆಂದು ನನ್ನ ಅನಿಸಿಕೆ. ನಿಮ್ಮ ಬಳಿ ಬೇರೆ ಕಾರಣಗಳಿದ್ದರೆ ಖಂಡಿತ ತಿಳಿಸಿ.

ಪರಿಹಾರ/ಸಲಹೆ:

ಅಪ್ಪಟ ಕನ್ನಡ ಪಂಡಿತರಿಗೆ, ಭಕ್ತರಿಗೆ ಈ ಕಂಗ್ಲಿಷ್ ಹಾವಳಿ ಎಂದಿನಿಂದಲೂ ಬೇಸರ ತಂದಿದೆ. ಒಂದೇ ವಾಕ್ಯದಲ್ಲಿ ಎರಡು ಭಾಷೆಯ ಪದಗಳನ್ನು ಬಳಸುವ ಬಗ್ಗೆ ಅವರಿಗೆ ವಿಪರೀತ ಕೋಪವಿದೆ. ಇದರ ಬಗ್ಗೆ ನನ್ನ ಅನಿಸಿಕೆ ಇಲ್ಲಿ ವ್ಯಕ್ತವಾಗಿದೆ.

೧. ಕನ್ನಡದಲ್ಲಿ ಮಾತನಾಡುವಾಗ ಆದಷ್ಟೂ ಅನ್ಯ ಭಾಷೆಯ ಪದಗಳನ್ನು ಬಳಸುವುದನ್ನು ನಿಲ್ಲಿಸಿ. ಇದು ಇಂಗ್ಲಿಷ್ ಒಂದಕ್ಕೆ ಸೀಮಿತವಾಗಿಲ್ಲ. ಇತರ ಭಾಷೆಗಳಿಗೂ ಅನ್ವಯಿಸುತ್ತದೆ.
೨. ನಾಮಪದಗಳನ್ನು ಹಾಗೆಯೇ ಕರೆಯುವುದು ಉತ್ತಮ. iPod ಗೆ ಕನ್ನಡ ಸಮನಾದ ಪದವಿಲ್ಲವೆಂದು ಅದಕ್ಕೆ ಒಂದು ಕನ್ನಡ ಪದ ಹುಡುಕುವುದು ಆಭಾಸಕ್ಕೆ ಎಡೆ ಮಾಡಿಕೊಟ್ಟ ಹಾಗಾಗುವ ಸಾಧ್ಯತೆಯೇ ಹೆಚ್ಚು. ಹಾಗೊಂದು ವೇಳೆ ಈ ಪ್ರಯತ್ನದಲ್ಲಿ ನಾವು ಸಫಲರಾಗಿ ಅದು ಎಲ್ಲರ ಬಾಯಲ್ಲಿ ನಲಿದಾಡಿದರೆ ಅದಕ್ಕಿಂತ ಹೆಚ್ಚು ಭಾಗ್ಯ ಯಾವುದಿದೆ? ಆದರೆ ಆ ಸಂಭವ ಕಡಿಮೆ ಎಂದು ನನ್ನ ಅನಿಸಿಕೆ.
೩. ಈ ಮೇಲೆ ಹೇಳಿದ ಭಾಗಕ್ಕೆ ಕೆಲವು ಕನ್ನಡ ಪಂಡಿತರ ವಿರೋಧವುಂಟು. ಅವರು ಪ್ರತಿ ಪದವನ್ನು ಕನ್ನಡೀಕರಿಸಿ ಆಡಿದರೆ ಸಂತೋಷ; ಜನರಿಗೆ ಅರ್ಥ/ಇಷ್ಟವಾಗದಿದ್ದ ಪಕ್ಷ, ಯಾರೂ ಏನು ಮಾಡುವ ಹಾಗಿಲ್ಲ.

ಕನ್ನಡವೂ ವಿರಾಜಮಾನವಾಗಿ ಆಡಲ್ಪದುತ್ತಿದ್ದ ಕಾಲವೊಂದಿತ್ತು. ಆಗ ಯಾವ ಪರಕೀಯರ ಕಾಟಗಳಿರಲಿಲ್ಲ. ಇಂದು ಇಂಗ್ಲಿಷಿನದ್ದೇ ಸಾಮ್ರಾಜ್ಯ. ಮುಂದೊಂದು ದಿನ ಕನ್ನಡ ತನ್ನ ಪೂರ್ವ ಸ್ಥಿತಿಗೆ ಮರಳುತ್ತದೆ ಎಂಬ ಪ್ರಬಲ ಆಶಯದೊಂದಿಗೆ ಈ ಅಂಕಣವನ್ನು ಮುಗಿಸುತ್ತೇನೆ.

Wednesday, January 13, 2010

ಕೃಷ್ಣದೇವರಾಯನ ೫೦೦ನೇ ಪಟ್ಟಾಭಿಷೇಕ ಮಹೋತ್ಸವ, ಒಂದು ವರದಿ.

ನಿನ್ನೆ ನಡೆದ ಕೃಷ್ಣದೇವರಾಯನ ಪಟ್ಟಾಭಿಷೇಕ ಮಹೋತ್ಸವದ ೫೦೦ನೇ ವರ್ಷಾಚರಣೆ ಸಂಭ್ರಮವನ್ನು ನೋಡಲು ನಾನು ನಿನ್ನೆಯ ದಿನ ಕಂಠೀರವ ಹೊರಾಂಗಣ ಮೈದಾನಕ್ಕೆ ಹೊರಟೆ. ಇದೇ ಸಂಸರ್ಭದಲ್ಲಿ ವಿವೇಕಾನಂದ ಜಯಂತಿಯೂ ಬಂದದ್ದರಿಂದ ಕಾರ್ಯಕ್ರಮಕ್ಕೆ ಇನ್ನೂ ಮೆರಗು ಬಂದಿತ್ತು.

೪ ಗಂಟೆಗೆ ಪ್ರಾರಂಭವಾಗಬೇಕಿದ್ದ ಕಾರ್ಯಕ್ರಮವು ೪:೧೦ಕ್ಕೆ ಆರಂಭವಾಯಿತು. ಅಭ್ಯಾಗತರನ್ನು ಕಾಯುವಲ್ಲಿ ಆ ಹತ್ತು ನಿಮಿಷಗಳು ಕಳೆದವು. ಅವರು ಬರದಿದ್ದನ್ನು ನೋಡಿ ಅಲ್ಲಿಯವರೆಗೂ ನೆರೆದಿರುವ ಸಮೂಹಕ್ಕೆ ಗಾಯನವಾದರೂ ಮನರಂಜನೆಯನ್ನು ನೀಡಲಿ ಎಂಬುದು ಅವರ ಆಶಯವಾಗಿತ್ತು.

ಮನೆಯಿಂದ ಹೊರಡುವ ಮುನ್ನ ಅಭ್ಯಾಗತರ ಪಟ್ಟಿಯನ್ನು ಓದಿದ್ದೆ.
೧. ಕರ್ನಾಟಕದ ಮುಖ್ಯಮಂತ್ರಿ ಶ್ರೀ|| ಬಿ. ಎಸ್. ಯಡಿಯೂರಪ್ಪ.
೨. ಆರ್ಟ್ ಆಫ್ ಲಿವಿಂಗ್ ನ ಸಂಸ್ಥಾಪಕರಾದ ಪೂಜ್ಯ ಶ್ರೀ|| ಶ್ರೀ|| ರವಿಶಂಕರ್ ಗುರೂಜಿ
೩. ಸ್ಥಳೀಯ ಶಾಸಕ ಶ್ರೀ|| ರೋಶನ್ ಬೇಗ್.
೪. ಉನ್ನತ ಶಿಕ್ಷಣ ಮಂತ್ರಿ ಶ್ರೀ|| ಅರವಿಂದ ಲಿಂಬಾವಳಿ.
೫. ಪ್ರವಾಸೋದ್ಯಮ ಹಾಗು ಕನ್ನಡ ಏಳಿಗೆ ಮಂತ್ರಿ ಶ್ರೀ|| ಜನಾರ್ಧನ ರೆಡ್ಡಿ.
೬. ಕೇಂದ್ರ ಉನ್ನತ ಶಿಕ್ಷಣ ಇಲಾಖೆಯ ವತಿಯಿಂದ ಆಗಮಿಸಿದ್ದ ಶ್ರೀ|| ಕೆ. ಏನ್. ರಘುನಂದನ್

ಇನ್ನೂ ಹಲವರು.

೩:೫೦ಕ್ಕೆ ಕಾರ್ಪೋರೇಶನ್ ತಲುಪಿದ ನಾನು ದೊಡ್ಡ ಹೆಜ್ಜೆ ಹಾಕುತ್ತ ಸರಿಯಾಗಿ ೪ ಗಂಟೆಗೆ ಸಭಾಂಗಣ ಸೇರಿದೆ. ಅಲ್ಲೇ ನೆರೆದಿದ್ದ ಒಬ್ಬ ಸಂಚಾರಿ ಆರಕ್ಷಕರನ್ನು ಕುರಿತು ಒಳಗೆ ಹೋಗಲು ದಾರಿ ಯಾವುದೆಂದು ಕೇಳಿ ತಿಳಿದು ಹೊರಟೆ. ಅದು ವಿದ್ಯಾರ್ಥಿಗಳ ಗುಂಪು. ಅವರಲ್ಲಿಯೇ ನಾನು ಒಬ್ಬನಾಗಿ ಕುಳಿತೆ.

ಸಭಾಂಗಣಕ್ಕೆ ಆಗಮಿಸಿದ ವಿದ್ಯಾರ್ಥಿಗಳನೇಕರಲ್ಲಿ ಸಭ್ಯತೆ ಕಾಣಿಸಲಿಲ್ಲ. ಅಸಭ್ಯವಾಗಿ ಶಿಳ್ಳೆ ಹೊಡೆಯುತ್ತ ವೇದಿಕೆಯ ಮೇಲೆ ನೆರೆದಿರುವ ಸಂಗೀತಗಾರರನ್ನು ಹೀಯಾಳಿಸುತ್ತ ಕಾಲ ಕಳೆಯುತ್ತಿದ್ದರು. ಮೇಲಿನ ಅಂಕಣದಿಂದ ಕಾಗದದ ಕ್ಷಿಪಣಿಗಳು, ಉಂಡೆಗಳು ಎಸೆಯಲ್ಪಟ್ಟವು. ನನ್ನ ಪಕ್ಕದಲ್ಲೇ ಓರ್ವ ಆರಕ್ಷಕ ಬಂದು ಕುಳಿತರೂ ಇವು ನಿಲ್ಲಲಿಲ್ಲ.

ಎಂ. ಡಿ. ಪಲ್ಲವಿಯವರ ಗಾಯನ ಶುರುವಾಯಿತು. ಮೊದಲಿಗೆ ಡಿ. ಎಸ್. ಕರ್ಕಿಯವರ 'ಹಚ್ಚೇವು ಕನ್ನಡದ ದೀಪ' ಹಾಡಲು ಕೆಲವು ವಿದ್ಯಾರ್ಥಿಗಳು ಚಪ್ಪಾಳೆಗಳ ಸುರಿಮಳೆಗೈದರು. ನಂತರ ರಾಷ್ಟ್ರಕವಿ ಕುವೆಂಪು ವಿರಚಿತ 'ಎಲ್ಲಾದರೂ ಇರು, ಎಂತಾದರು ಇರು' ಹಾಡು ಹಾಡುವಾಗಲಂತೂ ಜನ ಕೇಕೆ ಹಾಕಲು ಮುಂದಾದರು. ಇದರ ಜೊತೆ ಹೊರವಲಯದಲ್ಲಿ ಡೊಳ್ಳು ಕುಣಿತವೂ ಸಾಗುತ್ತಲಿತ್ತು.

ಇಷ್ಟರಲ್ಲಿಯೇ ಬಲಿಷ್ಠ ಸುತ್ತುಗಾವಲಿನೊಂದಿಗೆ ಮುಖ್ಯ ಮಂತ್ರಿಗಳ ಆಗಮನ. ಹಾಡಿನ ನಂತರ ವೇದಿಕೆಯನ್ನು ಭಾಷಣಗಳಿಗೆ ಅನುವು ಮಾಡಿಕೊಡಲಾಯಿತು. ನಿರೂಪಣೆಯ ಕಾರ್ಯವನ್ನು ಹೊತ್ತವರು ಕನ್ನಡ ಚಿತ್ರರಂಗದ ಖ್ಯಾತ ತಾರೆ ವಿನಯಾ ಪ್ರಸಾದ್ ರವರು. ಈ ಕಾರ್ಯಕ್ರಮಕ್ಕೆ ಬೆನ್ನೆಲುಬಾದವರು ಸಂಭ್ರಮ ಸುರಭ ಸಂಸ್ಥೆಯ ಸಂಜೀವ್ ಕುಲಕರ್ಣಿಯವರು.

ಅಭ್ಯಾಗತರಲ್ಲಿ ಶ್ರೀ|| ರವಿಶಂಕರರನ್ನು ಹೊರತು ಪಡಿಸಿ ಎಲ್ಲರೂ ಇದ್ದರು. ರಾಜಾಜಿನಗರ ಶಾಸಕರಾದ ನೆ. ಲ. ನರೇಂದ್ರ ಬಾಬುರವರು ಜೊತೆಗೊಂಡರು. ಮೊದಲಿಗೆ ಇವರೆಲ್ಲ ದೀಪ ಬೆಳಗಿಸಿದರು. ಇದಾದ ನಂತರ ನಾಡಗೀತೆ ಹಾಡಲನುವಾದರು. ಈ ಬಡ ವಿದ್ಯಾರ್ಥಿಗಳಿಗೆ ನಾಡಗೀತೆಯ ಸಂದರ್ಭದಲ್ಲಿ ನಿಂತುಕೊಳ್ಳಬೇಕೆನ್ನುವ ಕನಿಷ್ಠ ಸೌಜನ್ಯವನ್ನೂ ಅವರ ಶಿಕ್ಷಕರು ಹೇಳಿಕೊಟ್ಟಿಲ್ಲವೇ? ನಾನೊಬ್ಬನೇ ನಿಂತಾಗ ನನಗೊಮ್ಮೆ ಭ್ರಾಂತಿಯೆದುರಾಯಿತು. ನಂತರ ಧ್ವನಿವರ್ಧಕದಲ್ಲಿ ವಿನಯಾ ಪ್ರಸಾದರು ಹೇಳಿದ ನಂತರವಷ್ಟೇ ಅವರು ಎದ್ದು ನಿಂತದ್ದು. ರಾಜ್ಯ ಸರ್ಕಾರದ ನಾಡಗೀತೆಯಲ್ಲಿ ಕೆಲವು ಹೊಸ ಪದಗಳನ್ನು ಸೇರಿಸಿರುವುದು ನನಗೆ ಕಂಡುಬಂದಿತು.

ನಂತರ ಮುಖ್ಯಮಂತ್ರಿಗಳು ರಾಜ ಶೈಲಿಯಲ್ಲಿ ರೇಶಿಮೆ ವಸ್ತ್ರದಲ್ಲಿ ಮುದ್ರಿಸಿದ ಕೃಷ್ಣದೇವರಾಯರ ಪಟ್ಟಾಭಿಷೇಕ ಮಹೋತ್ಸವದ ಒಕ್ಕಣೆಯನ್ನು ನುಡಿದರು.

ನಂತರ ಮಾತನಾಡಿದ ಕೆ. ಎನ್. ರಘುನಂದನರವರು ಕೃಷ್ಣದೇವರಾಯರ ಬಗ್ಗೆ ಹಾಗು ವಿವೇಕಾನಂದರ ಬಗ್ಗೆ ಸವಿವರವಾಗಿ ಎಲ್ಲರಿಗೂ ತಿಳಿಯುವಂತೆ ಗುಣಗಾನ ಮಾಡಿದರು. ಆದರೆ ನಮ್ಮ ಸುತ್ತಮುತ್ತಲಿದ್ದ ಯಾವುದೇ ವಿದ್ಯಾರ್ಥಿಗಳು ಅದನ್ನು ಕಿವಿಯ ಮೇಲೆ ಹಾಕಿಕೊಂಡರೆಂದು ನನಗನ್ನಿಸಲಿಲ್ಲ. ಎಲ್ಲರೂ ಅವರವರಲ್ಲೇ ಗುಸು ಗುಸು ಪಿಸ ಪಿಸ ಮುಂದುವರೆಸಿದ್ದರು. ನನ್ನ ಹಿಂದೆಯೇ ಕುಳಿತ ಅವರ ಶಿಕ್ಷಕರೊಬ್ಬರು ಕಾಗದದ ಕ್ಷಿಪಣಿಗಳನ್ನು ತಯಾರು ಮಾಡಿ ಗುಂಪಿನತ್ತ, ಕೆಲವೊಮ್ಮೆ ಆರಕ್ಷಕರತ್ತ ತೂರುತಿದ್ದರು. ಇನ್ನು ವಿದ್ಯಾರ್ಥಿಗಳನ್ನು ಕೇಳಬೇಕೆ? ಅವರು ಇವರನ್ನು ಹುರಿದುಂಬಿಸುತ್ತಿದ್ದರು.

ಇದೇ ವೇಳೆ ಒಂದು ಸುಸಂಧರ್ಭ ಒದಗಿ ಬಂತು. ನಮ್ಮೊಟ್ಟಿಗೆ ಕುಳಿತಿದ್ದ ಸುಮಾರು ಐವತ್ತು ಮೀರಿದ ದಂಪತಿಗಳಿಬ್ಬರು ಮೈದಾನಕ್ಕೆ ಅಂಟಿದಂತಿದ್ದ ಬಾಗಿಲ ಬಳಿ ಇರುವ ಆರಕ್ಷಕರನ್ನು ಕೇಳಿ ಮೈದಾನಕ್ಕೆ ಹೋಗಬಹುದೇ ಎಂದು ಕೇಳಿದರು. ಅವರು ಅವರದೇ ತಲೆನೋವಿನಲ್ಲಿ ಹೋಗಿ, ಪರವಾಗಿಲ್ಲವೆಂದರು. ಆನೆಯ ಜೊತೆ ಬಾಲದಂತೆ ನಾನು ಅವರೊಂದಿಗೆ ನಡೆದುಬಿಟ್ಟೆನು.

ನನ್ನ ಸೌಭಾಗ್ಯಕ್ಕೆ ನನಗೆ ಪತ್ರಕರ್ತರ ಹಿಂಬದಿಯಲ್ಲಿಯೇ ಆಸನ ದೊರೆಯಿತು. ವೇದಿಕೆಯ ಮೇಲೆ ನೆರೆದಿರುವರೆಲ್ಲರೂ ಇನ್ನೂ ಸ್ಪಷ್ಟವಾಗಿ ಕಾಣಿಸತೊಡಗಿದರು.

ರಘುನಂದನರು ಸುಮಾರು ೪೦ ನಿಮಿಷಕ್ಕೂ ಹೆಚ್ಚು ತಮ್ಮ ಅಮೋಘ ಭಾಷಣವನ್ನು ಮಾಡಿದರು. ಬ್ರಹ್ಮ ತೇಜಸ್ಸನ್ನು ವಿವೇಕಾನಂದರು ಹಾಗು ಕ್ಷಾತ್ರ ತೇಜಸ್ಸನ್ನು ಕೃಷ್ಣದೇವರಾಯ ಪ್ರತಿನಿಧಿಸುವಲ್ಲಿ ಯಾವುದೇ ಸಂಶಯವಿಲ್ಲ. ಇಂದಿನ ಯುವ ಪೀಳಿಗೆಗೆ ಅದು ಮಾರ್ಗದರ್ಶಿಯಾಗಲಿ ಎಂದು ಹಾರೈಸಿದರು. ವಿಜಯನಗರವನ್ನು ವೀಕ್ಷಿಸಲು ಬಂದ ಪರದೇಶದ ರಾಯಭಾರಿಗಳು ಅದನ್ನು ಬಣ್ಣಿಸಿದ ರೀತಿಯನ್ನು ವಿವರಿಸಿದರು.

ನಂತರ ಉನ್ನತ ಶಿಕ್ಷಣ ಮಂತ್ರಿಗಳು, ಅರವಿಂದ ಲಿಂಬಾವಳಿ ಅವರು ಹಂಪೆಯಲ್ಲಿ ಕೃಷ್ಣದೇವರಾಯನ ಹೆಸರಿನಲ್ಲಿ ಮಾಡಬೇಕೆಂದಿರುವ ಮ್ಯೂಸಿಯುಂಗಾಗಿ ವಿಶ್ವವಿದ್ಯಾಲಯದ ವತಿಯಿಂದ ಯಾವುದೇ ಸಹಾಯವಾಗಲಿ ಮಾಡಲು ತಯಾರಿದ್ದೇವೆ ಎಂದು ಘೋಷಿಸಿದರು.

ಜನಾರ್ಧನ ರೆಡ್ಡಿಗಳು ನಂತರ ಮಾತನಾಡಿ ಕೃಷ್ಣದೇವರಾಯನ ಕಾಲದ ವಿಜಯನಗರ, ಇಂದು ಮರುಕಳಿಸುವ ದಿನ ಹೆಚ್ಚೇನೂ ದೂರವಿಲ್ಲ. ರಾಜ್ಯದಲ್ಲಿ ವ್ಯವಹರಿಸಲು ದೊಡ್ಡ ದೊಡ್ಡ ಕುಳರಾದ ಲಕ್ಷ್ಮಿ ಮಿತ್ತಲ್, ಜಿಂದಾಲ್, ಪೆಸ್ಕೋ(??) ಕಂಪನಿಗಳು ಮುಂದಾಗುತ್ತಿರುವಲ್ಲಿ ನಮಗೆಲ್ಲ ಸಂತಸ ತಂದಿದೆ ಎಂದು ಕೊಂಡಾಡಿದರು.

ಈ ಮೂವರಲ್ಲಿ ಕಂಡ ಸಮಾನಂಶವೆಂದರೆ, ಅವರು ಮುಖ್ಯ ಮಂತ್ರಿಗಳನ್ನು ಸಂಬೋಧಿಸುತ್ತಿದ್ದ ಶೈಲಿ. ನಾಟಕೀಯವೆನ್ನುವಂತೆ ಯಡಿಯೂರಪ್ಪನವರನ್ನು ಎರಡು ಮೂರು ಬಿರುದುಗಳಿಂದ ಮೊದಲು ಕರೆದಿದ್ದು ನೋಡಿ ನನಗಂತೂ ನಗು ಬಂತು.

ಮುಖ್ಯ ಮಂತ್ರಿಗಳು ಈಗ ಮಾತನಾಡಿದರು. ವಿದ್ಯಾರ್ಥಿಗಳೆಲ್ಲರೂ ತಮ್ಮ ವಿದ್ಯಾರ್ಥಿ ದೆಸೆಯಲ್ಲಿರುವಾಗ ಒಮ್ಮೆಯಾದರೂ ಹಂಪಿಯನ್ನು ನೋಡಲು ಬರಬೇಕು. ಅದಕ್ಕೆ ನಮ್ಮ ಸರಕಾರ ಶ್ರಮವಹಿಸಿ ಕೆಲಸ ಮಾಡುತ್ತದೆ. ವಿಜಯನಗರದ ಹಿರಿಮೆ ಗರಿಮೆಯ ಬಗ್ಗೆ ಮಾತನಾಡಿದ ಅವರು, ಅದೇ ಸುವರ್ಣ ಯುಗ ಇನ್ನೊಮ್ಮೆ ಮರುಕಳಿಸಲಿದೆ ಎಂದು ಹೇಳಿದರು. ಆ ನಿಟ್ಟಿನಲ್ಲಿ ನಮ್ಮ ಸರಕಾರ, ತನ್ನೆಲ್ಲ ಮಂತ್ರಿವರ್ಯರ ಜೊತೆ ತೀವ್ರ ಗತಿಯಲ್ಲಿ ಕಾರ್ಯವಹಿಸಲಿದೆಯೆಂದರು.

ಆನಂತರ ಮಾತನಾಡಿದ ಶಿವಾಜಿನಗರದ ಶಾಸಕ ರೋಶನ್ ಬೇಗ್ ರವರು ತಮ್ಮ ಅಜ್ಞಾನವನ್ನು ಜಗವೆಲ್ಲ ಪಸರಿಸಿದರು. ಬಹುಷಃ ಅವರು ಕನ್ನಡ ಸಿನೆಮಗಳನ್ನೇ ನೋಡಿಲ್ಲವೆನ್ನಿಸುತ್ತದೆ. ಎಲ್ಲರಿಗೂ ಶುಭ ಕೋರಿದ ಅವರು ಹೇಳಿದ್ದು "ನಾನು ನಿಮ್ಮ ಟೈಮ್ ಅನ್ನು ಹೆಚ್ಚಿಗೆ ವ್ಯರ್ಥ ಮಾಡುವುದಿಲ್ಲ. ಮುಖ್ಯಮಂತ್ರಿಗಳಿಗೆ ನನ್ನ ಒಂದೇ ಸಲಹೆ ಏನೆಂದರೆ 'ನಮ್ಮ ಸಂಜಯ್ ಖಾನ್', ಏನು 'ಟಿಪ್ಪು ಸುಲ್ತಾನ್' ರ ಬಗ್ಗೆ ಒಂದು ಸೀರಿಯಲ್ ಮಾಡಿದರು, ಹಾಗೆ ಕೃಷ್ಣದೇವರಾಯರ ಕುರಿತು ಒಂದು ಸಿನಿಮಾನೋ ಸೀರಿಯಲನ್ನೋ ಮಾಡಬೇಕು" ಎಂದು ವಿನಂತಿಸಿದರು. ಡಾ|| ರಾಜಕುಮಾರ್ ಅವರು ೭೦ ರ ದಶಕದಲ್ಲಿ ಮಾಡಿದ ಕೃಷ್ಣದೇವರಾಯ ಸಿನಿಮಾದ ಬಗ್ಗೆ ಇವರಿಗೆ ತಿಳಿದೇ ಇಲ್ಲವೆನಿಸುತ್ತದೆ. ಇವರ ಕನ್ನಡವೂ ಅಷ್ಟೇ. ಎಲ್ಲಾದ್ರೂ ಉನ್ನತ ಶಿಕ್ಷಣ ಮಂತ್ರಿಗಳು, ಪ್ರವಾಸೋದ್ಯಮ ಸಚಿವರೂ ಎನ್ನುತ್ತಿದ್ದಾರೆ, ಇವರು Higher Education Minister ಮತ್ತೆ Tourism Minister ಎಂದೇ ಸಂಬೋಧಿಸುತ್ತಿದ್ದರು.

ಇವರೆಲ್ಲರ ಭಾಷಣದ ನಂತರ ಚಿಕ್ಕದಾಗಿ ವಂದನಾರ್ಪಣೆಯನ್ನು ಮಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದುವರಿದವು. ಮೊದಲಿಗೆ ಬಿ. ಜಯಶ್ರಿಯವರಿಂದ ರಂಗಗೀತೆಗಳು. ಮೊದಲ ಬಾರಿಗೆ ಅಂತಹ ದೊಡ್ಡ ಆವರಣದಲ್ಲಿ ರಂಗಗೀತೆಗಳನ್ನು ಅವರ ಉಚ್ಚ ಕಂಠದಿಂದ ಕೇಳಲು ಮನ ಪುಳಕವಾಯಿತು. ಅವರ ಉತ್ಸಾಹ ನಮ್ಮಲ್ಲಿಯೂ ಮೂಡುವಂತೆ ಅವರ ಬಳಗದೆಲ್ಲರೂ ಹಾಡಿದರು. ಒಟ್ಟು ಮೂರು ಗೀತೆಗಳನ್ನು ಅವರು ಹಾಡಿದರು.

೧. ಯಾವುದೇ ನಾಟಕದ ಆದಿಯಲ್ಲಿ ಹಾಡುವ 'ಗಜವದನಾ ಹೇರಂಬ, ವಿಜಯಧ್ವಜ ಶತರವಿಪ್ರತಿಭ'
೨. ಹೆಚ್. ಎಸ್. ವೆಂಕಟೇಶ ಮೂರ್ತಿ ವಿರಚಿತ 'ಈ ಯಮ್ಮ ನೋಡೇ ನಿಂತ ಭಂಗಿ'
೩. ನಾಗಮಂಡಲ ನಾಟಕದ ಸಿ. ಅಶ್ವಥ್ ಸಂಗೀತದ 'ಹಿಂಗಿದ್ದಳೊಬ್ಬಳು ಹುಡುಗಿ'
೪. 'ಸಾವಿರದ ಶರಣವ್ವ ಕರಿಮಾಯಿ ತಾಯಿ' (ನಾಟಕ, ರಚನೆ, ಸಂಗೀತ ತಿಳಿದಿಲ್ಲ, ಕ್ಷಮಿಸಿ...)

ಈ ಎಲ್ಲ ಹಾಡುಗಳಿಗೂ ಸಭೆ ಶಿಳ್ಳೆ, ಕರತಾಡನ ಹೊಡೆದು ಸ್ವಾಗತಿಸಿತು. ಉತ್ಸಾಹದಲ್ಲಿ ನಾಟಕರಂಗವನ್ನು ಮೀರಿಸುವವರಿಲ್ಲವೆಂದು ನನಗನ್ನಿಸಿತು.

ನಂದಿತಾರವರು ಹಾಡಲು ಈಗ ಸಭೆಗೆ ಬಂದರು. ೩ ಸಿನಿಮಾ ಹಾಡುಗಳನ್ನು ಹಾಡಿದರು. ಎಲ್ಲವೂ ಕನ್ನಡ, ಕರ್ನಾಟಕಕ್ಕೆ ಸಂಬಂಧಿಸಿದ್ದವು.

೧. ಜೀವನದಿ ಚಿತ್ರದ 'ಕನ್ನಡ ನಾಡಿನ ಜೀವನದಿ ಓ ಕಾವೇರಿ'
೨. ಉಪಾಸನೆ ಚಿತ್ರದ 'ಭಾರತ ಭೂಶಿರ ಮಂದಿರ ಸುಂದರಿ'
೩. ಅಮೃತಘಳಿಗೆ ಚಿತ್ರದ 'ಹಿಂದೂಸ್ಥಾನವು ಎಂದು ಮರೆಯದ ಭಾರತ ರತ್ನವು ನೀನಾಗು'

ರಾಜೇಶ್ ಕೃಷ್ಣ ರವರು ಕೂಡ ಈ ಹಾಡುಗಳನ್ನು ಹಾಡಲು ಬರಬೇಕಿತ್ತು. ಅವರ ಕಾರ್ಯಕ್ರಮವೂ ಇದೆಯೆಂದು ಪತ್ರಿಕೆಗಳು ಹೇಳಿದ್ದರೂ ಅವರು ಕಾರಣಾಂತರಗಳಿಂದ ಬರಲಾಗಲಿಲ್ಲ. ಸಭೆ ಎಂದಿನಂತೆ ಚಪ್ಪಾಳೆ, ಶಿಳ್ಳೆ ಮುಂದುವರಿಸಿದರು.

ಆಮೇಲೆ, ವಿನಯ್ ಕುಮಾರ್ ರವರು, 'ಕೋಡಗನ ಕೋಳಿ ನುಂಗಿತ್ತ' ಹಾಡು ಹಾಡಿದರು. ಈ ಹಾಡಿಗಂತೂ 'ಜನ ರೈಲು' ಮೈದಾನದ ಸುತ್ತ ಓಡಾಡಿತು. ನಂತರ ಎಂ. ಡಿ. ಪಲ್ಲವಿಯವರು ದ. ರಾ. ಬೇಂದ್ರೆ ಅವರ 'ನಾಕು ತಂತಿ' ಯನ್ನು ಹಿಂದುಸ್ತಾನಿ ಶೈಲಿಯಲ್ಲಿ ಹಾಡಿದರು.

ಎಂ. ಎಸ್. ನರಸಿಂಹ ಮೂರ್ತಿ ಹಾಗು ಗಂಗಾವತಿ ಬೀಚಿ ಎಂದು ಪ್ರಸಿದ್ದವಾಗಿರುವ ಪ್ರಾಣೇಶಾಚಾರರು ನಗೆ ಚಟಾಕಿಗಳಿಂದ ಸಭೆಯ ಮೈ ಪುಳಕಿಸಿದರು.

ಹಂಸಲೇಖ ರವರ 'ಭರತಭೂಮಿ ವರಪುತ್ರ' ನಾಟಕ ನಂತರ ಮೂಡಿಬಂತು. ಎಲ್ಲರಲ್ಲಿಯೂ ವಿಷೆಶತಹ ಮಕ್ಕಳಲ್ಲಿ ದೇಶಭಕ್ತಿ ಜಾಗೃತಗೊಳಿಸಲು ಈ ನಾಟಕ ಒಂದು ಒಳ್ಳೆಯ ಮಾಧ್ಯಮ. ಆದರೆ ನೀವು ಒಮ್ಮೆ ಈ ನಾಟಕ ನೋಡಿ ಬನ್ನಿ.

ಮುಂದುವರಿದಂತೆ, ಲೆಜರ್ ಶೋ, ಬಿತ್ತರವಾಯಿತು. ಒಂದು ಎಲೆಕ್ಟ್ರೋ ಹಾಡಿಗೆ ಹೊಗೆಯಲ್ಲಿ ಬೆಳಕು ಮೂಡಿಬಂದ ರೀತಿ ಎಲ್ಲರೂ ಮೂಗಿನಮೇಲೆ ಬೆರಳಿಡುವಂತೆ ಮಾಡಿತು. ಇದೇ ಲೆಜರ್ ಶೋ ಮುಂದುವರಿದು, ವಿಜಯನಗರ ಸಾಮ್ರಾಜ್ಯ, ಕೃಷ್ಣದೇವರಾಯ, ಹಂಪೆಯ ಒಂದು ಕಿರುಚಿತ್ರ ಮೂಡಿಬಂತು.

ಇವೆಲ್ಲ ಆದಮೇಲೆ ಕೃಷ್ಣದೇವರಾಯನ ಕುರಿತು ಒಂದು ನೃತ್ಯರೂಪಕ ಸುಮಾರು ಅರ್ಧಗಂಟೆಗೂ ಮೀರಿ ಮೂಡಿಬಂತು. ಸಾರಾಂಶ ಇಷ್ಟು. ಕೃಷ್ಣದೇವರಾಯ ತನ್ನ ಆಸ್ಥಾನವನ್ನು ನಡೆಸಿಕೊಂಡು ಬಂದ ರೀತಿ, ತನ್ನ ಅಷ್ಟ ದಿಗ್ಗಜರ ಕುರಿತು ತೋರುವ ಆದರ ಇವೆಲಾಲ್ ಚಿತ್ರಿತವಾದವು. 'ಪಾರಿಜಾತ ಪರಿಣಯ' ನೋಡುತ್ತಿದ್ದ ವೇಳೆ, ಬೇಹುಗಾರನ ಸುದ್ದಿ ಬಂದು ಒರಿಸ್ಸಾ ದೇಶದ ರಾಜ ಗಜಪತಿ ದಂಡೆತ್ತಿ ಬರುವ ಸುದ್ದಿ ಕೇಳಿ ಯುದ್ಧಕ್ಕೆ ಸನ್ನದ್ಧನಾಗುತ್ತಾನೆ. ಅವನನ್ನು ಪರಾಕ್ರಮದಲ್ಲಿ ಸೋಲಿಸಿ ಬಿಜಯನ್ಗೈದು ಬರುತ್ತಾನೆ. ಆಗ ಸಭೆ ಅವನನ್ನು ಬರಮಾಡುವ ರೀತಿ, ಬಿಜಾಪುರದ, ಗೋಲಕೊಂಡದ ಹಾಗು ಅಹ್ಮೆದ್ ನಗರದ ಸುಲ್ತಾನರು, ಅವನಿಗೆ ಕಪ್ಪ ಕಾಣಿಕೆ ಸಲ್ಲಿಸುವ ಸನ್ನಿವೇಶ. ನೃತ್ಯರೂಪಕಗಳಲ್ಲಿ ಹೆಚ್ಚು ತಿಳಿವಿಲ್ಲದ ನನಗೆ ಅಷ್ಟಾಗಿ ಗೊತ್ತಾಗಲಿಲ್ಲ. ತಿಳಿವಿದ್ದವರು ಖುಷಿಪಟ್ಟರು ಎಂದು ಭಾವಿಸುತ್ತೇನೆ. ಈ ನೃತ್ಯರೂಪಕದ ರೂವಾರಿ ಡಾ|| ಮಾಯಾ ರಾವ್.

ಹಂಸಲೇಖ, ಮಾಯಾ ರಾವ್ ರವರಿಗೆ ಅರವಿಂದ ಲಿಂಬಾವಳಿ, ಜನಾರ್ಧನರೆಡ್ಡಿ, ಹಾಗು ವಿಶ್ವೇಶ್ವರ ಹೆಗ್ಗಡೆ ಕಾಗೇರಿ ರವರು ಸಮ್ಮಾನಿಸಿದರು.

ಇದೆಲ್ಲದರ ನಂತರ ಲೆಜರ್ ಶೋ ಮುಂದುವರೆಯಿತು. ಸರಕಾರದ ಲೋಕೋಪಯೋಗಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡುವ ಕಿರುಚಿತ್ರ ಲೆಜರ್ ನಲ್ಲಿ ಬಿತ್ತರವಾಯಿತು. ಪಟಾಕಿಗಳನ್ನು ಸಿಡಿಸುವ ಮೂಲಕ ಕಾರ್ಯಕ್ರಮಕ್ಕೆ ತೆರೆಯೆಳೆಯಲಾಯಿತು.

Wednesday, December 30, 2009

ಎರಡು ದಿನ ಎರಡು ಸಾವು.

ನೀವು ಕರ್ನಾಟಕದಲ್ಲಿದ್ದರೆ ಮಾಧ್ಯಮದಲ್ಲಿ, ಮೊಬೈಲಿನಲ್ಲಿ ನೀವೆಲ್ಲ ಈ ಸುದ್ದಿಯನ್ನು ಕೇಳೇ ಇರುತ್ತೀರಿ. ನಿನ್ನೆ ಸರಿ ಸುಮಾರು ಮಧ್ಯಾಹ್ನ ಹನ್ನೆರಡು ಗಂಟೆಗೆ ಸುಗಮ ಸಂಗೀತ, ಜನಪದ ಪ್ರಾಕಾರಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡ ಪ್ರಸಿದ್ಧ ಸಂಗೀತ ನಿರ್ದೇಶಕ, ಸಿ. ಅಶ್ವಥ್ ತೀರಿಕೊಂಡರು. ಕಿಡ್ನಿ ವೈಫಲ್ಯ ಅವರ ಸಾವಿಗೆ ಕಾರಣವಾಯಿತು. ಅದಾದ ದಿನದ ಒಳಗೆ ಕನ್ನಡ ಚಿತ್ರರಂಗದ ಪ್ರಮುಖ ನಟ ಡಾ|| ವಿಷ್ಣುವರ್ಧನ್ ಹೃದಯ ವೈಫಲ್ಯದಿಂದ ಬಳಲಿ ಆಸ್ಪತ್ರೆಗೆ ಸೇರುವ ಮುನ್ನವೇ ತೀರಿಕೊಂಡರೆಂದು ಈ ಬೆಳಿಗ್ಗೆ ಸುದ್ದಿ ಬಂತು.

ಇಬ್ಬರ ಸಾವನ್ನೂ ಬೇರೆ ಬೇರೆಯಾಗಿ ನಿರಪೇಕ್ಷವಾಗಿ ನೋಡೋಣ.

ಮೊದಲು ಅಶ್ವಥ್. ವಾರಗಳ ಹಿಂದೆ ಪತ್ರಿಕೆಯಲ್ಲಿ ಅಶ್ವಥ್ ರವರು ಅಸ್ವಸ್ಥರಾಗಿದ್ದರು ಎಂದು ಪ್ರಕಟವಾಗಿತ್ತು. ಅವರ ಆರೋಗ್ಯ ಅಷ್ಟರ ಮಟ್ಟಿಗೆ ಸರಿಯಾಗಿಲ್ಲವೆಂದು ಆಗಲೇ ಎಲ್ಲರಿಗೂ ತಿಳಿದಿತ್ತು. ಅವರು ಅಗಲುವ ಸಮಯ ಸನ್ನಿಹಿತವಾಯಿತೆಂದು ನಮಗೆಲ್ಲ ಆಗಲೇ ತಿಳಿಯಿತು. ಅವರ ಹುಟ್ಟಿದ ದಿನವೇ (ಆಂಗ್ಲ ನಿಯತಕಾಲಿಕದ ಪ್ರಕಾರ) ಅವರು ದೇಹತ್ಯಾಗ ಮಾಡಿದ್ದು ಅವರ ಸುಕೃತವೋ, ಕರ್ಮವೋ ನಾ ಕಾಣೆ. ೭೦ ವಸಂತಗಳನ್ನು ಅವರು ಕಳೆದದ್ದು ಹಲವಾರು ಸುಮಧುರ ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ ಕೀರ್ತಿಗೆ ಪಾತ್ರರಾಗುತ್ತಾರೆ. ಅವರ ಶ್ರಾವಣ, ದೀಪಿಕಾ, ಕೈಲಾಸಂ ಹಾಡುಗಳು, ಕುವೆಂಪು ಹಾಡುಗಳನ್ನು ನಾನು ಹಲವಾರು ಬಾರಿ ಕೇಳಿದ್ದೇನೆ. ಇನ್ನಿತರ ಹಾಡುಗಳನ್ನು ನಾನು ರೇಡಿಯೋದಲ್ಲಿ ಕೇಳಿ ಆನಂದಿಸಿದ್ದೇನೆ.

ಹಲವಾರು ಸಿನಿಮಾ ಹಾಡುಗಳಿಗೆ ಧ್ವನಿಯಾದ ಅಶ್ವಥ್ ಕೆಲವು ಚಿತ್ರಗಳಿಗೆ ಸಂಗೀತವನ್ನೂ ನೀಡಿದ್ದಾರೆ. ಕಾಕನಕೋಟೆ, ಕಾಡು ಕುದುರೆ, ಹೀಗೆ ಹಲವು ಚಿತ್ರಗಳಿಗೆ ಸಂಗೀತವನ್ನೋದಗಿಸಿದ್ದಾರೆ. ಅವರ ಇತ್ತೀಚಿನ ಹಾಡುಗಳು 'ತಪ್ಪು ಮಾಡದವ್ರ್ ಯಾರವ್ರೆ?' 'ಕೆಂಚಾಲೋ ಮಚ್ಚಾಲೋ' ಇಂದಿಗೂ ಎಲ್ಲ ಚಿತ್ರ ರಸಿಕರ ಬಾಯಲ್ಲಿ ಓಡಾಡುತ್ತಿರುತ್ತದೆ. ಈ ರಸಿಕರಲ್ಲಿ ಹಲವರಿಗೆ ಅಶ್ವಥ್ ರ ಬಗ್ಗೆ ಹೆಚ್ಚು ತಿಳಿದಿಲ್ಲವೆಂಬುದು ವಿಷಾದಕರ.

ಹುಟ್ಟಿದವರು ಸಾಯಲೇ ಬೇಕು, ಇದು ಶತ ಸಿದ್ಧ. ಜನರಿಗೆ ಈ ನೇರ ಸತ್ಯವು ಯಾಕೆ ತಟ್ಟುವುದಿಲ್ಲವೋ ನನಗೆ ತಿಳಿಯುತ್ತಿಲ್ಲ. ಯಾವುದೇ ಪ್ರಮುಖ ವ್ಯಕ್ತಿ ಸತ್ತನಂತರ ಹುಯಿಲಿಡುವುದು ಸರ್ವೇ ಸಾಮಾನ್ಯ ಸಂಗತಿಯಾಗಿದೆ. ಅದಕ್ಕೆ ತುಪ್ಪ ಸುರಿಯಲು ನಮ್ಮ ಹಲವು ಮಾಧ್ಯಮಗಳು ಬಕಪಕ್ಷಿಯಂತೆ ಕಾತರರಾಗಿರುತ್ತಾರೆ. ಅವರಿಗೆ ಸಾವಿನ ಬಗ್ಗೆ ಸಂತಾಪವಾಗಲಿ ಸಂಕತವಾಗಲಿ alla.  ಸುದ್ದಿ ಬಿತ್ತರಿಸುವ ತವಕವಷ್ಟೇ. ಈ ತತ್ವವನ್ನೆಲ್ಲ ಆಮೇಲೆ ಮಾತಾಡೋಣ.

ಬೆಳಿಗ್ಗೆ ಏಳುತ್ತಲೇ ನನ್ನ ಗೆಳೆಯ, ಗೆಳತಿಯರೆಲ್ಲರಿಗೂ ಒಂದು ಎಸ್.ಎಂ.ಎಸ್. ಕಳಿಸುವುದು ನನ್ನ ಅಭ್ಯಾಸ. ಇಂದಿನ ಮೆಸೇಜ್ ಕಳಿಸಿದ ನಂತರ, ೩ ಜನ ನನಗೆ ವಿಷ್ಣುವರ್ಧನರ ಸಾವಿನ ಸುದ್ದಿ ಹೇಳಿದರು. ಬೆಳಿಗ್ಗೆ ಏಳುತ್ತಲೇ ಸಾವಿನ ಸುದ್ದಿ. ಟಿವಿ ಹಚ್ಚುತ್ತಲೇ ಇದೇ ಸುದ್ದಿ. ೫ ನಿಮಿಷ ನೋಡುತ್ತಾ ನನ್ನ ಪ್ರಾತಃಕರ್ಮಗಳನ್ನು ಮುಗಿಸಲು ಎದ್ದೆ.

ಎಲ್ಲ ಮುಗಿಸಿ ಪುನಃ ಸ್ವಲ್ಪ ಹೊತ್ತು ಟಿವಿ ನೋಡುತ್ತಾ ಕುಳಿತೆ. ಎಲ್ಲೆಡೆಯೂ ಇದೇ ಸುದ್ದಿ. ಈ ಇಡೀ ದಿನ ಇದೇ ಸುದ್ದಿಯೆಂದು ಖಾಯಂ ಆದ ಮೇಲೆ ಟಿವಿ ನೋಡುವುದನ್ನು ಬಿಟ್ಟು ಎದ್ದೆ.

ವಿಷ್ಣುವರ್ಧನರ ಬಗ್ಗೆ ಬರೆಯುವುದು ಸ್ವಲ್ಪವಿದೆ. ಈ ಹೊತ್ತಿನಲ್ಲಿ ಕೆಲವರಿಗೆ ಅದು ಸ್ವಲ್ಪ ಆಘಾತಕಾರಿಯಾದರೂ ನಿಷ್ಟುರವಾಗಿ ಹೇಳುವುದು ನನ್ನ ಕರ್ತವ್ಯವೆಂದು ಭಾವಿಸುತ್ತಾ ಬರೆಯುತ್ತೇನೆ.

ವಿಷ್ಣುವರ್ಧನ್ ಒಬ್ಬ ಒಳ್ಳೆಯ ನಟ ಎಂಬುದು ಎಲ್ಲರೂ ತಿಳಿದ ವಿಷಯ. ಅವರ ಸಾವಿನ ನಂತರ ಕೆಲವು ವೆಬ್ ಸೈಟುಗಳು ಕೆಲವು ಕಳಪೆ ದರ್ಜೆಯ ಸರ್ವೆಗಳನ್ನು  ಮಾಡುತ್ತಿದ್ದಾರೆ. ರಾಜಕುಮಾರ್ ಹಾಗು ವಿಷ್ಣುವರ್ಧನ್ರಲ್ಲಿ   ಯಾರು ಉತ್ತಮ? ರಾಜಕುಮಾರ್ ಹಾಗು ವಿಷ್ಣುವರ್ಧನ್ರಲ್ಲಿನ ದ್ವೇಷವನ್ನು ಅಭಿವ್ಯಕ್ತಿಸಿದ್ದಾರೆ. ಅವರೆಲ್ಲರಿಗೆ ಬುದ್ಧಿ ಬರಲಿ ಎಂದು ನಾವು ಹಾರೈಸೋಣ.

ಚಿತ್ರರಂಗದಲ್ಲಿ ಅವರು ನಡೆದ ಹಾದಿಯನ್ನು ನೋಡೋಣ. ೯೦ರ ದಶಕದವರೆಗೂ ಅವರ ಹೆಚ್ಚಿನ ಚಿತ್ರಗಳಲ್ಲಿ ಸತ್ವಯುತವಾದ ಕಥೆಯಿರುವುದನ್ನು ನಾವು ಕಾಣಬಹುದು. ವಂಶವೃಕ್ಷದಲ್ಲಿ ಬಾಲನಟನಾಗಿ ಬಣ್ಣದ ಬದುಕಿಗೆ ನಾಂದಿ ಹಾಡಿದ ವಿಷ್ಣು, ಪ್ರಮುಖ ನಟರಾದದ್ದು ಪುಟ್ಟಣ್ಣ ಕಣಗಾಲರ 'ನಾಗರಹಾವು' ಚಿತ್ರದ ಬಳಿಕ. ಆಶ್ಚರ್ಯವೆಂದರೆ ಅಂಬರೀಶ್ ರವರೂ  ಇದೇ ಚಿತ್ರದಿಂದ ತಮ್ಮ  ಪ್ರಯಾಣವನ್ನು ಪ್ರಾರಂಭಿಸಿದರು. ನಾಗರಹಾವಿನ ಸಿಟ್ಟಿನ ಯುವಕನ ಪಾತ್ರದಲ್ಲಿ ಅವರು ಮಿಂಚಿದರು.

ಅಲ್ಲಿಂದ ಹೆಚ್ಚಿನ ಪಕ್ಷ ಅಂತಹ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತ ಬಂದರು. ಸಹೋದರರ ಸವಾಲ್, ಕಳ್ಳ ಕುಳ್ಳ, ಚಾಣಕ್ಯ, ಜಿಮ್ಮಿ ಗಲ್ಲು, ಖೈದಿ, ಸಾಹಸ ಸಿಂಹ ಹೀಗೆ ಇನ್ನಿತರ ಚಿತ್ರಗಳಲ್ಲಿ ಕಾಣಿಸಿಕೊಂಡರು. ವೈವಿಧ್ಯ ಬೇಕೆಂದು ಇನ್ನು ಹಲವು ಪಾತ್ರ ಮಾಡಿದ್ದರಲ್ಲಿ ಪ್ರಮುಖವಾದದ್ದು ಹೊಂಬಿಸಿಲು, ಅವಳ ಹೆಜ್ಜೆ, ಗಲಾಟೆ ಸಂಸಾರ. ಇಂತಹ ಪಾತ್ರಗಳಲ್ಲೂ ಗಟ್ಟಿಗರು ಎಂದೆನಿಸಿಕೊಂಡರು.

ಇದಾದ ನಂತರ, ೮೦ರ ದಶಕದಲ್ಲಿ ಹೆಚ್ಚಾಗಿ ಕೌಟುಂಬಿಕ ಚಿತ್ರಗಳತ್ತ ವಾಲಿದರು. ಕರ್ಣ, ಕಥೆಗಾರ, ಜೀವನ ಚಕ್ರ, ಕರುಣಾಮಯಿ, ಒಂದಾಗಿ ಬಾಳು, ಹೃದಯಗೀತೆ, ಮಲಯ ಮಾರುತ ಎಲ್ಲವೂ ಹೆಸರು ಮಾಡಿದ ಚಿತ್ರಗಳು. ಇಲ್ಲಿ ಹಲವು ಚಿತ್ರಗಳನ್ನು ನಾನು ಹೆಸರಿಸಿಲ್ಲ. ೮೦ನೆ ದಶಕದ ಮೊದಲಲ್ಲಿ ಬಂದ 'ಬಂಧನ' ಚಿತ್ರ ಒಂದು ಹೊಸ ರೀತಿಯ ಚಿತ್ರಗಳನ್ನು ಹುಟ್ಟು ಹಾಕಿತೆಂದು ಹೇಳಿದರೆ ಅತಿಶಯವಲ್ಲ.

೯೦ರ ದಶಕದ ಮೊದಲಿನಲ್ಲಿ ಒಳ್ಳೆಯ ಚಿತ್ರಗಳನ್ನೇ ಕೊಡುತ್ತ ಬಂದ ವಿಷ್ಣು, ಅದಾದ ನಂತರ ಸತ್ವಯುಕ್ತವಾದ ಯಾವುದೇ ಸ್ವಮೇಕ್ ಚಿತ್ರದಲ್ಲಿ ನಟಿಸದಿದ್ದಿದ್ದು ವಿಷಾದಕರ. ೯೦ರ ದಶಕದ ಮೊದಲಲ್ಲಿ ಬಂದ ಸುಪ್ರಭಾತ, ಮುತ್ತಿನಹಾರ ಭರ್ಜರಿ ಯಶಸ್ಸು ಗಳಿಸಿತು. ನಂತರ ಸುನಿಲ್ ಕುಮಾರ್ ದೇಸಾಯಿ ಅವರ ಸಂಘರ್ಷ, ನಿಷ್ಕರ್ಶ ಚಿತ್ರಗಳೂ ಚೆನ್ನಾಗಿದ್ದವು. ನಂತರ ವಿಷ್ಣು ಹೆಚ್ಚಾಗಿ ರಿಮೇಕ್ ಚಿತ್ರಗಳತ್ತ ವಾಲಿದರು. ಈ ಮಧ್ಯ ಕೆಲವು ಸ್ವಮೇಕ್ ಚಿತ್ರಗಳಲ್ಲಿ ಕೆಲಸ ಮಾಡಿದ್ದೆಂದರೆ ಹಾಲುಂಡ ತವರು, ಮಾತಾಡ್ ಮಾತಾಡ್ ಮಲ್ಲಿಗೆ ಚಿತ್ರಗಳು.

ಅವರ ರಿಮೇಕ್ ಚಿತ್ರಗಳು ಗೆದ್ದಿರಬಹುದು. ಆದರೆ ಅವರ ನೈಜ ಅಭಿಮಾನಿಗಳನ್ನು ಕಳೆದುಕೊಳ್ಳುವಲ್ಲಿ ಅದು ಸಹಕಾರಿಯಾಯಿತು. ೯೦ರ ದಶಕದ ನಂತರ ಅವರು ಮಾಡಿದ ೯೦% ಹೆಚ್ಚಿನ ಚಿತ್ರಗಳು ರಿಮೇಕ್ ಗಳು. ಕೆಲವನ್ನು ಹೆಸರಿಸಬೇಕೆಂದರೆ ಯಜಮಾನ, ಸಿಂಹಾದ್ರಿಯ ಸಿಂಹ, ಕೋಟಿಗೊಬ್ಬ, ಆಪ್ತಮಿತ್ರ, ಜಮೀನ್ದಾರರು, ಸೂರ್ಯವಂಶ, ಬಳ್ಳಾರಿ ನಾಗ, ನಮ್ ಯಜಮಾನ್ರು, ವಿಷ್ಣು ಸೇನಾ, ಇತ್ಯಾದಿ ಇತ್ಯಾದಿ. ಹಲವು ಚಿತ್ರಗಳು ಕಳಪೆ ದರ್ಜೆಯವು ಎಂದು ಹೇಳಲು ವಿಷಾದಿಸುತ್ತೇನೆ.

ಅದರಲ್ಲಿಯೂ ಆ ಆಪ್ತಮಿತ್ರ ಚಿತ್ರವಂತೂ ನೋಡಿ ತಲೆ ಕೆಟ್ಟುಹೋಯಿತು. ೯೦ರ ದಶಕದ ನಂತರ ನಾನು ಅವರ ಸಿನೆಮ ನೋಡುವುದಿಲ್ಲವೆಂದು ತೀರ್ಮಾನಿಸಿದ್ದಕ್ಕೆ ಇದೇ ಕಾರಣ.

ಇರಲಿ. ರಾಜಕುಮಾರ್ ರ ನಂತರ ಕನ್ನಡ ಚಿತ್ರರಂಗದ ಚುಕ್ಕಾಣಿ ಹಿಡಿಯಲು ಸರಿಯಾದ ವ್ಯಕ್ತಿ ವಿಷ್ಣುವರ್ಧನ್ ಎಂದು ಎಲ್ಲರೂ ತೀರ್ಮಾನಿಸಿದ್ದಕ್ಕೆ ಖಡಾಖಂಡಿತವಾಗಿ ಆಗುವುದಿಲ್ಲವೆಂದು ನಿರಾಕರಿಸಿದ್ದು ಇದೇ ವಿಷ್ಣುವರ್ಧನ್. ಕನ್ನಡ ಭಾಷೆ, ಚಿತ್ರರಂಗಕ್ಕೆ ಸಂಬಂಧಿಸಿದಂತೆ ಯಾವುದೇ ಬಿಕ್ಕಟ್ಟಿಗೆ ಮುಂದೊತ್ತಿ ಹೋಗಲು ನಿರಾಕರಿಸುತ್ತಿದ್ದರು. ಇಂಥಾದ್ದರಲ್ಲಿ ಕೆಲವರು ರಾಜಕುಮಾರ್ ರಿಗೂ ವಿಷ್ಣುವರ್ಧನ್ ರಿಗೂ ತುಲನೆಯಲ್ಲಿ ತೊಡಗುತ್ತಾರೆ.  ವಿಪರ್ಯಾಸ.

ಕೊನೆಯದ್ದಾಗಿ ಒಂದು ಹೇಳಲಿಚ್ಛಿಸುತ್ತೇನೆ. ಆಪ್ತಮಿತ್ರ ಬಿಡುಗಡೆಯಾಗುವ ಮುನ್ನ ನಟಿ ಸೌಂದರ್ಯ ಸತ್ತರು. ಆ ಅನುಕಂಪದಿಂದಷ್ಟೇ ಆ ಚಿತ್ರ ೧ ವರ್ಷ ಓಡಿತು. ಇನ್ನು ಅದರ ಮುಂದುವರಿದ ಭಾಗ, ಆಪ್ತರಕ್ಷಕ, ವಿಷ್ಣುವರ್ಧನರ ಸಾಆವಿನ ಛಾಯೆಯಲ್ಲಿ ಅದೇನೇ ಕಥೆಯಿದ್ದರೂ ೧ ವರ್ಷ ಓಡುವುದು ಶತಸಿದ್ದ.

ಸತ್ತವರ ಬಗೆಗೆ ಕಟುವಾಗಿ ಮಾತಾಡಬಾರದು ನಿಜ. ವಿಷ್ಣುವರ್ಧನರ ಹಳೆಯ ಸಿನೆಮಾಗಳ ಬಗ್ಗೆ ಈಗಲೂ ನನಗೆ ಗೌರವವಿದೆ. ಆದರೆ ಅವರು ಅದನ್ನು ಕೊನೆಯ ತನಕ ಉಳಿಸಿಕೊಳ್ಳಲ್ಲಿಲ್ಲ ಎಂಬುದಷ್ಟೇ ನನ್ನ ಅಂಬೋಣ.

ಸತ್ತವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೇಡಿಕೊಳ್ಳುವುದರಲ್ಲಿ ನನಗೆ ನಂಬಿಕೆ ಅಷ್ಟಾಗಿ ಇಲ್ಲ. ಆದದ್ದಾಯಿತು ಎನ್ನುವ ಜಾಯಮಾನ ನನ್ನದು. ಕನ್ನಡ ಚಿತ್ರರಂಗ ಹಾಗು ಸುಗಮ ಸಂಗೀತ ಕ್ಷೇತ್ರ ಇಬ್ಬರು ರತ್ನಗಳನ್ನು ಕಳೆದುಕೊಂಡಿತು ಎನ್ನುವುದು ನಾಟಕೀಯವೆನ್ನಿಸುತ್ತದೆ. ಅವರು ಸತ್ತರೂ ಅವರ ಕೆಲಸದಲ್ಲಿ ಅವರನ್ನು ನೋಡಬಹುದೆನ್ನುವುದು ನನ್ನ ನೋಟ. ಏನಂತೀರ?

Monday, August 31, 2009

ಮೊಝಿಲ್ಲಾ ಫೈರ್ಫಾಕ್ಸ್ ಕನ್ನಡದಲ್ಲಿಯೂ ಲಭ್ಯ!

ಮೊಝಿಲ್ಲಾ ಫೈರ್ಫಾಕ್ಸ್ ಕನ್ನಡದಲ್ಲಿ ತಮ್ಮ ತಂತ್ರಾಂಶವನ್ನು ಹೊರತಂದಿದ್ದಾರೆ. ಬಹಳ ಹಿಂದೆಯೇ ಈ ಕೆಲಸ ಮಾಡಿರಬೇಕಾದರೂ ನಾನು ಇದನ್ನು ನೋಡಿದ್ದು ಇತ್ತೀಚಿಗೆ, ಅಂದರೆ ಒಂದು ವಾರದ ಕೆಳಗೆ. ನೀವೂ ಉಪಯೋಗಿಸುವ ಹಾಗಿದ್ದರೆ ಇಲ್ಲಿದೆ ನೋಡಿ ತಂತು.

ವಿಂಡೋಸ್, ಮ್ಯಾಕ್ ಓ.ಎಸ್ X ಹಾಗು ಲಿನಕ್ಸ್ ಎಲ್ಲ ಆಪರೇಟಿಂಗ್ ಸಿಸ್ಟಂಗಳಿಗೂ ಇದನ್ನು ಪೋರ್ಟ್ ಮಾಡಲಾಗಿದೆ. ಕನ್ನಡಿಗರಾಗಿ ನಾವೇ ಇದನ್ನು ಉಪಯೋಗಿಸದಿದ್ದರೆ ಇನ್ನ್ಯಾರು ಉಪಯೋಗಿಸುತ್ತಾರೆ ನೀವೇ ಹೇಳಿ? ನಾನು ದಿನಂಪ್ರತಿ ಇದನ್ನೇ ಬಳಸುತ್ತಿದ್ದೇನೆ. ಇಲ್ಲಿಯ ವರೆಗೂ ಯಾವ ತೊಂದರೆಯೂ ಅಥವಾ ತೊಡಕೂ ಕಂಡುಬಂದಿಲ್ಲ.

ನೀವುಗಳೂ ಇದನ್ನು ಉಪಯೋಗಿಸಿ ಎಂದು ನನ್ನ ಸವಿನಯ ಪ್ರಾರ್ಥನೆ.

Tuesday, August 04, 2009

ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಪುರಾಣ...

ಒಂದ್ ರಾತ್ರಿ ಬೆಂಗಳೂರಲ್ಲಿರೋ ಎಲ್ಲಾ ಪ್ರತಿಮೆಗಳು ವಿಧಾನ ಸೌಧದ ಎದುರು ಹಾಜರಾದವು. ರಾತ್ರಿ ಸುಮಾರು ಗಂಟೆ ಇರಬಹುದೋ ಏನೋ? ಒಬ್ಬೊಬ್ಬರೆ ಮಾತಾಡಕ್ಕೆ ಶುರು ಹಚ್ಚಿದವು.

ಮೊದಲಿಗೆ ಆನಂದ್ ರಾವ್ ಸರ್ಕಲ್ ಬಳಿಯ ಗಾಂಧಿ ಪ್ರತಿಮೆ ಮಾತು ಶುರು ಮಾಡಿತು.
ಗಾಂಧಿ: ಯಪ್ಪಾ! ಸಾಕಪ್ಪಾ! ಸಾಕು! ಬಿಸಿಲಲ್ಲಿ ಕೂರೋದೂ ಸಾಕು... ಮೈಯೆಲ್ಲಾ ಉರಿಯೋದು ಸಾಕು.
ಎಲ್ಲಾ ಪ್ರತಿಮೆಗಳು: ಹೌದು ಬಾಪು! ನಮಗಂತೂ ಬಿಸಿಲಲ್ಲಿ ನಿಂತು ನಿಂತೂ ಸಾಕಾಗ್ಹೊಯ್ತು.
ಗಾಂಧಿ: ಸಧ್ಯ! ಈಗ ಮೇಲೆ ಒಂದ್ ಫ್ಲೈ-ಓವರ್ ಇದೇ. ಇಲ್ಲಾಂದ್ರೆ ಮಧ್ಯಾಹ್ನ ಗಂಟೆ ಮೇಲೂ ಬಿಸಿಲಲ್ಲೇ ಕೂರ್ಬೇಕಾಗ್ತಿತ್ತು. ಇನ್ನೊಂದ್ ಒಳ್ಳೆ ಕೆಲಸ ಏನಪ್ಪಾ ಮಾಡಿದ್ರು ಅಂದ್ರೆ ಮುಂಚೆ, ಹಾಳು ರೇಸ್ ಕೋರ್ಸ್ ಗೇ ಮುಖ ಮಾಡಿ ಇಟ್ಟಿದ್ದರು. ಈಗ ಅದರ ವಿರುದ್ದ ಇಟ್ಟಿದ್ದಾರೆ.

ಅಷ್ಟರಲ್ಲಿ ಕಿತ್ತೂರು ಚೆನ್ನಮ್ಮ ತನ್ನ ನೋವು ಹೇಳಿಕೊಂಡಳು.
ಚೆನ್ನಮ್ಮ: ನಂಗೂ ಒಂದ್ ಪ್ರತಿಮೆ ಮಾಡ್ಸಿದ್ದಾರೆ ಟೌನ್ ಹಾಲ್ ಪಕ್ಕ. ಯುದ್ಧ ಮಾಡೋವಾಗ ಸತ್ತರು ಅಂತ ಕುದುರೆ ಮೇಲೆ ಕೂಡ್ಸಿ ಅದರ ಎರಡೂ ಕಾಲು ಮೇಲ ಎತ್ತಿದ್ದಾರೆ. ರೀತಿ ಕೂತೂ ಕೂತೂ ನನ್ನ ಬೆನ್ನೆಲ್ಲಾ ನೋವು. ಸಾಲದ್ದಕ್ಕೆ ಕೈಯಲ್ಲಿರೋ ಕತ್ತಿ ಕೂಡ ಮೇಲೆತ್ಹ್ಸಿದ್ದಾರೆ. ಕೈ ಕೂಡ ನೋವು.

ವಿಧಾನ ಸೌಧದ ಮುಂದೆ ಇರೋ ಅಂಬೇಡ್ಕರ್ ಪ್ರತಿಮೆ ಈಗ ಮಾತು ಶುರು ಹಚ್ಚಿತು.
ಅಂಬೇಡ್ಕರ್: ಅಮ್ಮ! ನೀವಾದ್ರೂ ಕುದುರೆ ಮೇಲೆ ಕುಳಿತಿರುತ್ತೀರಾ. ನಾನು ಬಡಪಾಯಿ. ನನ್ನನ್ನು ನಿಲ್ಲಿಸಿ ಎಡಗೈ ಗೆ ಒಂದು ಪುಸ್ತಕ, ಬಲಗೈಯನ್ನು ಮೇಲೆತ್ತಿ ಎಲ್ಲಿಗೋ ಬೆರಳು ಮಾಡುವಂತೆ ಮಾಡಿದ್ದಾರೆ. ಇಡೀ ದಿನ ಬಿಸಿಲಲ್ಲಿ ಕೈಯನ್ನು ರೀತಿ ಇಟ್ಟುಕೊಂಡು ನನಗಂತೂ ರೋಸಿ ಹೋಗಿದೆ.

ಪಕ್ಕದಲ್ಲೇ ಇದ್ದ ಸೆಂಟ್ರಲ್ ಬಳಿ ಇದ್ದ ರಾಜೀವ್ ಗಾಂಧಿ ಪ್ರತಿಮೆ ಅದಕ್ಕೆ ಹೂಂಕರಿಸಿತು.
ರಾಜೀವ್ ಗಾಂಧಿ: ಅದೇ ಮತ್ತೆ! ನಮ್ಮದು ಅದೇ ಪರಿಸ್ಥಿತಿ.

ಈಗ ಕಾರ್ಪೋರೇಷನ್ನಿನ ಕೆಂಪೇಗೌಡರು ಮಾತನಾಡಿದರು.
ಕೆಂಪೇಗೌಡರು: ನಮ್ಮದು ಬೇರೆಯದೇ ರಗಳೆ. ದಿನಕ್ಕೆ ಮೂರು ನಾಲ್ಕು ಹಕ್ಕಿಗಳು ನಮ್ಮ ತಲೆ, ಹೆಗಲಮೇಲೆ ಕುಳಿತುಕೊಂಡು ಅಸಹ್ಯ ಮಾಡುತ್ತವೆ. ಇದನ್ನೆಲ್ಲಾ ಯಾರಿಗೆ ಹೇಳೋದು? ವಾರಕ್ಕೋ ತಿಂಗಳಿಗೋ ಬರುವ ಮಳೆಗೆ ಕಾಯಬೇಕು. ಕಾರ್ಪೋರೇಷನ್ನಿನವರಂತೂ ನಮಗೆ ಸ್ನಾನ ಮಾಡಿಸುವುದಿಲ್ಲ. ಕೈಯಲ್ಲಿ ಕತ್ತಿ ಇದ್ದರೇನು ಪ್ರಯೋಜನ? ಹಕ್ಕಿಗಳನ್ನು ಓಡಿಸಲಾದೀತೇ?

ಎಲ್ಲರೂ ಒಗ್ಗೂಡಿದರು: ನಮ್ಮೆಲ್ಲರ ಗೋಳಿನಲ್ಲೂ ರಗಳೆ ಇದ್ದ್ದಿದ್ದೇ.

ಚಾಲುಕ್ಯ ಹೋಟೆಲಿನ ಬಳಿಯಿರುವ ವೃತ್ತ ಬಸವಣ್ಣನವರು ಈಗ ಮಾತನಾಡಿದರು.
ಬಸವಣ್ಣನವರು: ಇರುವುದರಲ್ಲಿ ನಮ್ಮ ಪರಿಸ್ಥಿತಿಯೇ ಮೇಲೆನ್ನಿಸುತ್ತಿದೆ. ತಂಪಾದ ನೆರಳಿದೆ. ಕುಳಿತುಕೊಳ್ಳಲು ಕುದುರೆಯಿದೆ. ರಣರಂಗದಲ್ಲಲ್ಲದಿದ್ದರೂ, ಯುದ್ಧ ಮಾಡುವಾಗ ಆದ ಗಾಯದಿಂದ ಸತ್ತೆನೆಂದು ಕುದುರೆಯ ಒಂದು ಕಾಳಿ ಮೇಲಿದೆ. ಆದರೆ ಅದರಿಂದ ನನ್ನ ಬೆನ್ನಿಗೇನು ನೋವಿಲ್ಲ. ಹಕ್ಕಿಗಳ ತಾಪತ್ರಯ ಬಿಟ್ಟರೆ, ಬೇರೆ ಯಾವ ತೊಂದರೆಯೂ ಇಲ್ಲವೆನ್ನಿಸುತ್ತದೆ.

ಗಾಂಧಿನಗರದ ಕೆಂಪೇಗೌಡ ವೃತ್ತದಲ್ಲಿರುವ ಡಾ|| ರಾಜಕುಮಾರ್ ಪ್ರತಿಮೆ ಈಗ ಮಾತನಾಡಿತು.
ರಾಜಕುಮಾರ್: ನೀವೊಬ್ಬರೇ ನೋಡಿ ಒಳ್ಳೆ ಮಾತಾಡ್ತಾ ಇರೋದು. ಎಷ್ಟೇ ಆಗ್ಲಿ ವಚನಕಾರರಲ್ಲವೇ? ನಮ್ಮ ಪರಿಸ್ಥಿತಿ ಯಾರಿಗೂ ಬೇಡ. ನಿಮಗೆಲ್ಲರಿಗೂ ನಿಮ್ಮ ಅಂಗಾಂಗ ನೆಟ್ಟಗಿದೆ. ನಮಗೆ ಕೈ ಕಾಲಿರಲಿ, ದೇಹವೇ ಇಲ್ಲ. ಎದೆಯ ಮಟ್ಟಕ್ಕೆ ಮಾತ್ರ ಪ್ರತಿಮೆ. ನಾವೇನು ಮಾಡಬೇಕು?

ವಿಧಾನ ಸೌಧದ ಮತ್ತೊಂದು ಪ್ರತಿಮೆ, ಡಿ. ದೇವರಾಜ್ ಅರಸ್ ಸರದಿ ಈಗ:
ನಮ್ಮ ಕಾಲದಲ್ಲಿ ಬೆಂಗಳೂರನ್ನು ಉದ್ಯಾನನಗರಿ ಎಂದು ಬೆಳೆಸಿದ್ದೆವು. ಎಲ್ಲೇ ಹೋಗಲಿ, ಎಲ್ಲವೂ ತಂಪು ತಂಪು. ಈಗ ಅದೇನೋ ಹಾಳಾದ . ಟಿ ಅಂತೆ. ಅದು ಬಂದ ಮೇಲೆ ಸರ್ವನಾಶವಾಯಿತು. ಉದ್ಯಾನನಗರಿ, ಅದ್ವಾನನಗರಿಯಾಯಿತು. ಬೆಂಗಳೂರಿನ ತಾಪಮಾನ ವರ್ಷೆ ವರ್ಷೇ ಏರುತ್ತಿದೆ ವಿನಃ ಇಳಿಯುವುದು ಕನಸಿನ ಮಾತಾಯಿತು. ನಮ್ಮ ಪ್ರತಿಮೆಗಳಿಗೂ ನೆರಳಿಲ್ಲ. ಈಗ ನಮ್ಮ ಬೆಂಗಳೂರಿನಲ್ಲಿ ಇನ್ನ್ಯಾವುದೋ ತಮಿಳು ಕವಿಯ ಪ್ರತಿಮೆ ಪ್ರತಿಷ್ಟಾಪಿಸುವುದಕ್ಕೆ ದೊಡ್ಡ ವಾಗ್ವಾದವೇ ನಡೆಯುತ್ತಿದೆಯಂತೆ. ನಮ್ಮ ಗೋಳಿನಲ್ಲಿ ಇನ್ನೊಬ್ಬರು ಬಂದು ಸೇರಿಕೊಂಡರು.


ಕೇಳಿದಿರಲ್ಲ ಈ ಪ್ರತಿಮೆಗಳ ಗೋಳು? ಇವು ಕೇವಲ ಸ್ಯಾಂಪಲ್ ಅಷ್ಟೆ. ಇನ್ನೂ ಬಹಳವಿರಬಹುದು ಇವರ ಗೋಳುಗಳು.

ಈಗ ವಿಚಾರಕ್ಕೆ ಬರೋಣ.

ಈ ತಮಿಳು ಕವಿ ತಿರುವಳ್ಳುವರ್ ಅವರ ಪ್ರತಿಮೆ, ಬೆಂಗಳೂರಿನಲ್ಲಿ ಬೇಕೇ ಬೇಡವೇ?

ಬೇಕು ಎನ್ನುವವರ ವಾದ ನೋಡೋಣ.
೧. ತಿರುವಳ್ಳುವರ್ ತಮಿಳಿನ ಶ್ರೇಷ್ಠ ಜ್ಞಾನಿ, ದಾರ್ಶನಿಕ, ಸಾಹಿತಿ ಇತ್ಯಾದಿ ಇತ್ಯಾದಿ. ಅಂತಹ ಮಹಾ ಪುರುಷರ ಪ್ರತಿಮೆ, ಬೆಂಗಳೂರಿನಲ್ಲಿ ಏಕೆ ಇರಬಾರದು?
೨. ಕನ್ನಡಿಗರು ಸಹಿಷ್ಣುಗಳು. ಅವರು ಕನ್ನಡಿಗರು, ತಮಿಳರು, ತೆಲುಗರು, ಉತ್ತರ ಭಾರತೀಯ, ಹೀಗೆ ಭೇದ ಭಾವ ಮಾಡುವುದಿಲ್ಲ. ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡುತ್ತಾರೆ. ಬೆಂಗಳೂರಿನಲ್ಲಿ ವಳ್ಳುವರ್ ರ ಪ್ರತಿಮೆ ಸ್ಥಾಪಿಸಿದರೆ ಕನ್ನಡಿಗರ ಸಹಿಷ್ಣುತೆ ಮೆರೆದಂತಾಗುತ್ತದೆ.
೩. ತಮಿಳುನಾಡಿನ ಜೊತೆ, ಹೊಗೆನೇಕಲ್ ಹಾಗು ಕಾವೇರಿ ವಿವಾದ ಒಂದು ಪ್ರತಿಮೆ ನೆಡುವುದರಿಂದ ಪರಿಹಾರವಾಗುವುದೆಂದರೆ, ಎಲ್ಲರ ಒಳಿತಿಗೆ ಪ್ರತಿಷ್ಟಾಪಿಸುವುದರಲ್ಲಿ ತಪ್ಪೇನು ಕಾಣಿಸುವುದಿಲ್ಲ.
೪. ಕನ್ನಡಕ್ಕೆ ಅನ್ಯಭಾಷಿಗರಿಂದ ತಕ್ಕ ಮಟ್ಟಿಗೆ ಕೊಡುಗೆಯಿದೆ (ತಮಿಳರು ಕೂಡ ಇದರಲ್ಲಿ ಸೇರಿದ್ದಾರೆ, ಉದಾ: ಮಾಸ್ತಿ, ಟಿ.ಪಿ.ಕೈಲಾಸಂ, ಮರಾಠಿಯ ದ. ರಾ. ಬೇಂದ್ರೆ). ಹಾಗಾಗಿ ವಳ್ಳುವರ್ ಪ್ರತಿಮೆ ಬರಲಿ. ಯಾಕೆ ಬೇಡ?

ಈಗ ಬೇಡ ಎನ್ನುವವರ ವಾದ ನೋಡೋಣ.
೧. ವಳ್ಳುವರ್, ತಮಿಳಿನ ಶ್ರೇಷ್ಠ ದಾರ್ಶನಿಕನಾದರೇನಂತೆ? ಕನ್ನಡ ಅಥವಾ ಕರ್ನಾಟಕಕ್ಕೆ ಅವರ ಕೊಡುಗೆಯೇನಾದರು ಇದೆಯೇ? ಅಂದ ಮೇಲೆ ಅವರ ಪ್ರತಿಮೆಯನ್ನು ಕರ್ನಾಟಕದಲ್ಲಿ ಏಕೆ ನೆಡಬೇಕು?
೨. ಸ್ವಾಮಿ, ಕನ್ನಡಿಗರು ಸಹಿಷ್ಣುಗಳು, ಎಂದು ಕನ್ನಡಿಗರನ್ನು ತುಳಿದಿದ್ದು ಸಾಕು. ಕನ್ನಡಿಗರ ಸಹಿಷ್ಣುತೆಗೆ ಆ ಕಾಲದಿಂದಲೂ ಅನ್ಯರು ಪೆಟ್ಟು ಕೊಡುತ್ತಲೇ ಬಂದಿದ್ದಾರೆ. ಇನ್ನು ಮೇಲೆ ಹಾಗಾಗಬಾರದು. ಕನ್ನಡಿಗರು ಅತಿಯಾಗಿ ಸಹಿಷ್ಣುಗಳಾಗಿದ್ದಕ್ಕೇ ಅವರಿಗೆ ಈ ಪರಿಸ್ಥಿತಿ ಬಂದಿರುವುದು. ತಮ್ಮ ನಾಡಿನಲ್ಲಿ ತಮ್ಮ ಭಾಷೆಯನ್ನೂ ಮಾತನಾಡುವುದಕ್ಕೆ ಅಂಜುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೇನಾಗಬೇಕು? ಆದ್ದರಿಂದ ಕನ್ನಡಿಗರೇ, ಎಚ್ಚೆತ್ತುಕೊಳ್ಳಿ.
೩. ಇದು ತಮಿಳರದ್ದೆ ಕುತಂತ್ರ. ಸಮಸ್ಯೆಯ ಹಿನ್ನೆಲೆಯಲ್ಲಿ ತಮ್ಮ ಬೇಳೆಕಾಳು ಬೇಯಿಸಿಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿರುವ, ಅದರಲ್ಲೂ ಬೆಂಗಳೂರಿನಲ್ಲಿರುವ ತಮಿಳರ ಪರವಾಗಿ ಈ ರೀತಿಯಾಗಿ ತ.ನಾ ಸರಕಾರ ಹುನ್ನಾರ ಮಾಡುತ್ತಿದೆ. ಇದಕ್ಕೆ ಕರ್ನಾಟಕ ಬಲಿಯಾಗಬಾರದು.
೪. ಅನ್ಯಭಾಶಿಗರೆಂದು ಇವರು ಹೇಳುವ ಜನರು, ತಾವೆಂದು ಅನ್ಯಭಾಷಿಗರು ಎಂದು ಹೇಳಿಕೊಂಡಿಲ್ಲ. ಅವರೆಲ್ಲರೂ ತಾವು ಕನ್ನಡಿಗರೆಂದೇ ಮೆರೆದಿದ್ದಾರೆ. ಈ ರೀತಿ ಮಾತನಾಡಿ ಅವರ ಗೌರವಕ್ಕೆ ಧಕ್ಕೆ ಉಂಟುಮಾಡುತ್ತಿದ್ದೀರಿ. ಇದನ್ನು ನಿಲ್ಲಿಸಿ.
೫. ಸಮತೋಲನ ಮಾಡಲು ತಮಿಳುನಾಡಿನ ಚೆನ್ನೈ ಅಲ್ಲಿ ನಮ್ಮವನೇ ಆದ ಸರ್ವಜ್ಞ ಕವಿಯ ಪ್ರತಿಮೆಯನ್ನು ಸ್ಥಾಪಿಸುತ್ತೆವೆಂದು ಹೇಳಿ, ಅದನ್ನು ಚೆನ್ನೈ ಇಂದ ಸುಮಾರ್ ಮೈಲಿ ದೂರವಿರುವ ಯಾವುದೋ ಕೊಂಪೆಯಲ್ಲಿ ಪ್ರತಿಷ್ಠಾಪಿಸುತ್ತಿದ್ದೀರಿ. ಇದು ಎಲ್ಲಿಯ ನ್ಯಾಯ?

ಹೀಗೆ ಮುಂದುವರೆಯುತ್ತಾ ಸಾಗುತ್ತದೆ ಎರಡೂ ಕಡೆಗಿನ ಮಾತುಕತೆ.

ಈಗ ನನ್ನ ನಿಲುವಿಗೆ ಬರೋಣ.

ವೈಯಕ್ತಿಕವಾಗಿ ನನಗೆ ಆ ಪ್ರತಿಮೆಯೋಳಗಿರುವ ಎಲ್ಲಾ ಮಹಾನುಭಾವರ ಬಗ್ಗೆ ಗೌರವ ಇದ್ದೆ ಇದೆ. (ಕೆಲವರ ಬಗ್ಗೆ ಭಿನ್ನಾಭಿಪ್ರಾಯವೂ ಉಂಟು. ಇಲ್ಲಿ ಅದು ಅಪ್ರಸ್ತುತ). ನನ್ನ ನಿಲುವೇನೆಂದರೆ, ಮಹಾನುಭಾವರಿಗೆ ಪ್ರತಿಮೆ ಮಾಡಿದರೆ ಅವರಿಗೆ ಗೌರವ ಕೊಟ್ಟ ಹಾಗೆ ಎನ್ನುವುದು ಸುಳ್ಳು. ಏನೇ ಗೌರವವಿರಲಿ, ಅದು ನಿಮ್ಮ ಮನಸ್ಸಿನಲ್ಲಿರಬೇಕು. ಮನಸ್ಸಿನಲ್ಲಿ ಯಾವ ರೀತಿಯ ಗೌರವವು ಇಲ್ಲದೆ, ಬಾಹ್ಯವಾಗಿ ಈ ರೀತಿ ಪ್ರತಿಮೆಗಳಾಗಲಿ, ಸ್ಮಾರಕಗಳಾಗಲಿ ಎಷ್ಟೇ ಕಟ್ಟಿದರೂ ಏನೂ ಪ್ರಯೋಜನವಿಲ್ಲ.

ಅಲ್ಲದೇ, ಎಲ್ಲರಿಗೂ ಪ್ರತಿಮೆ ಕಟ್ಟುತ್ತಾ ಹೋದರೆ, ಅದನ್ನು ಎಲ್ಲಿ ಇಡುತ್ತೀರಿ? ಕೊನೆಗೊಂದು ದಿನ ಪ್ರತಿಮೆಗಳಿಗೆ ಜಾಗವೇ ಇರುವುದಿಲ್ಲ.

ಇನ್ನು ಕೆಲವರಿಗೆ ಪ್ರತಿಮೆಗಳು ಬೇಕು. ತಮ್ಮ ಮುಂದಿನ ಜನಾಂಗಕ್ಕೆ ಮಾದರಿಯಾಗಲಾದರೂ ಅವು ಬೇಕು ಎನ್ನುತ್ತಾರೆ. ಹೋಗಲಿ. ಹಾಗೆ ಎಂದಿಟ್ಟುಕೊಳ್ಳೋಣ. ಬೆಂಗಳೂರಿನಲ್ಲೇ, ಸರ್ವಜ್ಞನ ಪ್ರತಿಮೆ, ಯಾವ ಪ್ರಮುಖ ಜಾಗದಲ್ಲಿದೆ? ಪಂಪ, ರನ್ನ, ಜನ್ನ, ಪೊನ್ನ, ಕುಮಾರವ್ಯಾಸ ಇವರನ್ನೆಲ್ಲಾ ಎಲ್ಲಿ ಪ್ರತಿಷ್ಠಾಪಿಸಿದ್ದಾರೆ? ಹೋಗಲಿ. ಅವರೆಲ್ಲಾ ಹಳೆಯ ಕವಿಗಳಾದರು. ನಮ್ಮ ಪಂಜೆ ಮಂಗೇಶರಾಯರು, ಗೋವಿಂದ ಪೈಗಳು, ಗೊರೂರು ರಾಮಸ್ವಾಮಿ ಅಯ್ಯಂಗಾರರು, ಕುವೆಂಪು, ಬೀ. ಎಂ. ಶ್ರೀ, ದ. ರಾ. ಬೇಂದ್ರೆ, ಮಾಸ್ತಿ, ಇವರಿಗೆಲ್ಲ ಎಲ್ಲಿ ಜಾಗ ಕೊಟ್ಟಿದ್ದಾರೆ?

ಮೊದಲು ಇವರಿಗೆಲ್ಲಾ ಪ್ರತಿಮೆ ಮಾಡಿಸಿ ಆಮೇಲೆ ವಳ್ಳುವರ್, ನಾಣಯ್ಯ, ಕಬೀರ, ಇನ್ನೆಲ್ಲಾರಿಗೂ ಪ್ರತಿಮೆ ಮಾಡಿಸಲಿ. ಏನಂತೀರಾ?