Showing posts with label ಅಭಿಪ್ರಾಯ. Show all posts
Showing posts with label ಅಭಿಪ್ರಾಯ. Show all posts

Sunday, April 01, 2012

ಗೂಗಲ್ ನ ಕನ್ನಡ ಅವತರಣಿಕೆಗೆ ಒಂದು ಸಲಹೆ.

ಹೀಗೆ ಗೂಗಲ್ ಕನ್ನಡ ಬಳಸುತ್ತಿದ್ದೆ. ನೀವು ಗೂಗಲ್ ಅನ್ನು ಕನ್ನಡದಲ್ಲಿ ಉಪಯೋಗಿಸುತ್ತಿದ್ದರೂ ಅದರ ಲಾಂಛನ ಆಂಗ್ಲದಲ್ಲಿಯೇ ಬರುತ್ತಿದೆ.

ಹಾಗಾಗಿ ಗೂಗಲ್ಗಾಗಿ ನಾವೇ ಏಕೆ ಒಂದು ಹೊಸ ಆಯಾಮ ಕೊಡಬಾರದೆನ್ನಿಸಿತು? ತಕ್ಷಣ ನನ್ನ ಪೆದ್ದು ತಲೆಗೆ ಹೊಳೆದ ಆಲೋಚನೆಯನ್ನು ಕಾರ್ಯರೂಪಕ್ಕೆ ತಂದಿರಿಸಿದ್ದೇನೆ. ಕೆಳಕಂಡ ಚಿತ್ರಗಳು ಬಾಲಿಶವಾದರೂ ಅವು ನನ್ನದೆಂಬ ಖುಷಿ ನನಗಿದೆ. ನಿಮ್ಮಲ್ಲೂ ಈ ರೀತಿ ಆಲೋಚನೆ ಬಂದಿರಬಹುದು. ಹಲವರು ಇದನ್ನು ಬರೆದಿರಲೂ ಬಹುದು. ನನ್ನ ಮಟ್ಟಿಗಿನ ಯೋಚನೆಯನ್ನು ಹೊರಹಾಕಲು ಈ ಅಂಕಣವನ್ನು ಉಪಯೋಗಿಸುತ್ತಿದ್ದೇನೆ. ಗೂಗಲ್ ಇದನ್ನು ಗಣನೆಗೆ ತಂದುಕೊಂಡರೆ ಇನ್ನೂ ಹೆಚ್ಚಿನ ಖುಷಿಯಾಗುತ್ತದೆ. (ಆದರೂ ಇದು ಚಾಲ್ತಿಯಲ್ಲಿ ಬರುವ ಯಾವುದೇ ಹಂಬಲವಾಗಲಿ ನನ್ನಲಿಲ್ಲವೆಂದು ಈ ಮುಂಚೆಯೇ ಹೇಳಿಕೊಂದಿರುತ್ತೇನೆ). ನನ್ನ ಹುಚ್ಚು ಕಲ್ಪನೆಗಳನ್ನು ಹೊರಗೆಡವುತ್ತೇನೆ.

ಗೂಗಲ್ ಕನ್ನಡದ ಮುಖಪುಟಕ್ಕೆ ಈ ಚಿತ್ರ...
ನಾವು ಏನೇ ಹುಡುಕಿದರೂ ಗೂಗಲ್ ತನ್ನದೇ ಅಡಿಪಟ್ಟಿಯಲ್ಲಿ ಪುಟಗಳ ಸಂಖ್ಯೆಗಳನ್ನು ಹಾಕಿರುವುದನ್ನು ನೀವು ಕಂಡಿರುತ್ತೀರ. ಪ್ರತಿಯೊಂದು ಪುಟಕ್ಕೂ ಆಂಗ್ಲದ 'o' ಅಕ್ಷರವನ್ನು ಅಳವಡಿಸಿರುತ್ತಾರೆ. ಇದನ್ನು ಹೇಗೆ ಹೊರತರಬಹುದೆಂದು ಯೋಚಿಸುತ್ತಿದ್ದಾಗ ನನಗೆ ಈ ರೀತಿ ಸರಿಯಾಗಿ ಕಂಡು ಬಂತು.

ತುಂಬಾ ಬಾಲಿಶವಾಗಿದೆ ಎಂದು ನನಗೆ ಗೊತ್ತು. ನನ್ನ ಲಿನಕ್ಸ್ ಡಬ್ಬಿಯಲ್ಲಿ ಇರುವ ತಂತ್ರಾಂಶಗಳನ್ನು ಉಪಯೋಗಿಸಿ ಈ ಚಿತ್ರವನ್ನು ಬಿಡಿಸಿರುತ್ತೇನೆ. Gimp ಅನ್ನು ಉಪಯೋಗಿಸಬಹುದಿತ್ತು ಎಂದು ಎಲ್ಲೋ ಅನಿಸುತ್ತಿದೆ. ಅದಾನ್ನು ಕಲಿತು ಬಿದಿಸುವಷ್ಟು ವ್ಯವಧಾನ ನನ್ನಲ್ಲಿ ಸಧ್ಯಕ್ಕೆ ಇಲ್ಲವಾದ ಕಾರಣ kolourpaint ಉಪಯೋಗಿಸಿ ಬರೆದಿರುತ್ತೇನೆ. ಗೂ ಕಾರ ಬರುಬರುತ್ತಾ ಸೋತ್ತಗಾಗಿರುವುದನ್ನು ನೀವೇ ಕಣ್ಣಾರೆ ನೋಡಿದ್ದೀರಿ. ನೀವು ಉತ್ತಮ ಚಿತ್ರವನ್ನು ಕೊತ್ತಿರಾದರೆ ಅದನ್ನು ಪ್ರಕಟಿಸಿ ನಿಮ್ಮ ಹೆಸರನ್ನು ನಮೂದಿಸುತ್ತೇನೆ. :-)

ಎಲ್ಲ ಭಾರತೀಯ ಭಾಷೆಗಳನ್ನು ಇದೇ ರೀತಿ ಬರೆಯಬಹುದು ಎಂದು ನಾನು ನಂಬಿರುತ್ತೇನೆ. ಕಡೆಯ ಪಕ್ಷ ತೆಲುಗಿಗೂ ಇದನ್ನೇ ಅಳವಡಿಸಬಹುದು ಅಲ್ಲವೇ? ಈ ಮೂಲಕ ಗೂಗಲ್ ಗೆ ಕನ್ನಡದ ಜನರ ಬಳಿ ಇನ್ನೂ ಹತ್ತಿರ ಸಾಗುವ ಒಂದು ಸೂಚನೆಯನ್ನು ಕೊಡುವ ಭಾಗ್ಯ ನನ್ನದು.

ಈ ಕಾಣಿಕೆಯು ಮೂರ್ಖರ ದಿನಕ್ಕಲ್ಲ. ರಾಮನವಮಿಗೆ.

ಅಂಕಣವನ್ನು ಓದಿದ್ದಕ್ಕೆ ಧನ್ಯವಾದಗಳು.

ಶ್ರೀರಾಮ.

Friday, August 26, 2011

ಎಲ್ಲರಿಗೂ ಕನ್ನಡ ಕಲಿಸುವ ಪದ: ಮಾಡಿ

ರೀ ಡ್ರೈವರ್!! ಡೋರ್ ಓಪನ್ ಮಾಡಿ!

ರೀ! ಸ್ವಾಮಿ! ಸ್ವಲ್ಪ ಅಡ್ಜಸ್ಟ್ ಮಾಡ್ಕೊಂಡ್ ಒಳಗ್ ನುಗ್ಗ್ರಿ!

ಎಂಜಾಯ್ ಮಾಡಿ!!

ಸ್ವಲ್ಪ ಸ್ಪೇಸ್ ಮಾಡಿ!!

ಹೋದ ತಕ್ಷಣ ನಂಗೆ ಒಂದು ಕಾಲ್ ಮಾಡಿ!

ಏನಿದು ಒಂದಕ್ಕೊಂದು ಸಂಬಂಧಾನೇ ಇಲ್ಲ ಅಂತ ಯೋಚಿಸ್ತಿದ್ದೀರಾ? ಇವು ನಮ್ಮ ಉದ್ಯಾನ ನಗರಿಯ ಕನ್ನಡದ ತುಣುಕುಗಳು (ಸ್ಯಾಂಪಲ್ಲುಗಳು) ಅಷ್ಟೇ.

ಮಾಡಿ.

ಬೆಂಗಳೂರಿನಲ್ಲಿ ಯಾರ ಬಳಿಗೂ ಹೋಗಿ ಕನ್ನಡದಲ್ಲಿ ಮಾತನಾಡಿದರೆ ಅವರು ಒಮ್ಮೆಯಾದರು ಈ ಪದವನ್ನು ಉಪಯೋಗಿಸದೇ ಇರುವುದಿಲ್ಲ. ಅವರಿಗೆ ಕನ್ನಡ ಬರಲಿ, ಬರದೇ ಇರಲಿ ಈ ಪದವಂತೂ ಹೆಚ್ಚಿನ ಪಕ್ಷ ತಿಳಿದೇ ಇರುತ್ತದೆ. ಕಾಲೇಜು, ಕಛೇರಿಗಳಲ್ಲಿಯ ಕನ್ನಡೇತರರಂತೂ ತುಸು ಹೆಚ್ಚಾಗಿಯೇ ಉಪಯೋಗಿಸಿದ್ದಾರೆ.

ಪ್ರಿಂಟ್ ಔಟ್ ಮಾಡಿ.
ಕ್ಲಾಸ್ ಬಂಕ್ ಮಾಡಿ.
ಲಂಚ್ ಮಾಡಿ.
ಸಿಗ್ನಲ್ ಜಂಪ್ ಮಾಡಿ.
ಸ್ಟಾಪ್ ಮಾಡಿ.
...
...
...

ಇಡೀ ವಾಕ್ಯವನ್ನು ಆಂಗ್ಲದಲ್ಲಿ ಹೇಳಿ ಕೊನೆಯಲ್ಲಿ ಈ 'ಮಾಡಿ' ಬಾಲಂಗೋಚಿಯನ್ನು ಅಂಟಿಸಿಬಿಡುತ್ತಾರೆ. ಹೀಗೆ ಹೇಳುವುದರಿಂದ ಅವರು ಕನ್ನಡ ಮಾತಾಡುತ್ತೇವೆ ಎಂದು ಸಾಧಿಸುತ್ತಾರೆ. ಕೆಲವೊಮ್ಮೆ ಈ ವಾಕ್ಯಗಳಿಗೆ ಸರಿಯಾದ ಅರ್ಥವಿರದಿದ್ದರೂ ನಮಗದು ಅರ್ಥವಾಗಿ ಬಿಡುತ್ತದೆ.

ಇದೆಲ್ಲಾ ಶುರುವಾಗಿದ್ದು ಎಲ್ಲಿಂದ? ಎಂಬ ಪ್ರಶ್ನೆಯನ್ನು ನಾವೇ ಹಾಕಿಕೊಳ್ಳುವುದು ಒಳ್ಳೆಯದು.

ನನಗೆ ತಿಳಿದ ಮಟ್ಟಿಗೆ ಇದನ್ನು ಮೊದಲು ಶುರು ಮಾಡಿದವರು ಮೊಬೈಲು ಸೇವೆಯ ವಿತರಕರಾದ 'ಸ್ಪೈಸ್' (ಈಗಿನ ಐಡಿಯಾ) ಸಂಸ್ಥೆಯವರು. ಮೊಬೈಲು ಕರೆಗಳು ದುಬಾರಿಯಾಗಿದ್ದ ಕಾಲದಲ್ಲಿ ಕಡಿಮೆ ದರದ ಪ್ಲ್ಯಾನ್ ಒಂದನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ 'ಸಿಂಪ್ಲಿ ಟಾಕ್ ಮಾಡಿ' ಎಂಬ ಅಡಿಬರಹದೊಂದಿಗೆ ಇದರ ಪ್ರಚಾರವನ್ನು ಮೊದಲುಮಾಡಿತು.

ವೃತ್ತಪತ್ರಿಕೆಗಳಲ್ಲಿ, ರೇಡಿಯೋಗಳಲ್ಲಿ ಇದನ್ನೇ ಕೇಳುತ್ತಿದ್ದ ಮಂದಿಗೂ ಇದೇ ರುಚಿ ಹಿಡಿದು ಇದರಂತೆಯೇ ತಮಾಷೆಯಾಗಿ ಮಾತನಾಡಲು ಪ್ರಾರಂಭಿಸಿತು. ಅದರಲ್ಲೇ ಒಂದು ರೀತಿಯ ಮೋಜು ಕಂಡಿತು. ಹಾಗೆ ಅದು ಬೃಹದಾಕಾರವಾಗಿ ಬೆಳೆದೂ ಬಿಟ್ಟಿತು. ನಮ್ಮ ಮಾಹಿತಿ ತಂತ್ರಜ್ಞರ ಕಿವಿಗಳ ಮೇಲೆ ಬಿದ್ದಮೇಲೆ ಅವರಿಗೆ ಎಲ್ಲಿಲ್ಲದ ಹುರುಪು ತುಂಬಿತು. ಸಿಕ್ಕ ಸಿಕ್ಕ ಕಡೆ ಇದನ್ನೇ ಉಪಯೋಗಿಸತೊಡಗಿದರು. ಬೆಂಗಳೂರಿನಲ್ಲಿರುವ ಎಲ್ಲರಿಗೂ ಈ 'ಮಾಡಿ' ಪದ ಕೆಲವೇ ದಿನಗಳಲ್ಲಿ ಎಂತಹ ಮೋಡಿ ಮಾಡಿತ್ತೆಂದು ತಿಳಿದವರೇ ಬಲ್ಲರು. ದಿನವಿಡೀ ಸಾವಿರ ಮಾಡಿಗಳನ್ನು ಕೇಳಿದವರಿದ್ದಾರೆ. ಕೇಳೀ ಕೇಳಿ ತಲೆ ಚಿಟ್ಟು ಹಿಡಿಸಿಕೊಂಡವರಿದ್ದಾರೆ.

ಪ್ರಮುಖ ಶೂ ತಯಾರಕರಾದ ನೈಕೀ ಗೆ ನಿಜವಾಗಿಯೂ ಈ ಪದದ ಅರ್ಥ ತಿಳಿದುಬಿಟ್ಟಿದ್ದರೆ ಅವರ 'Just Do it' ಕನ್ನಡದಲ್ಲಿ 'ಸುಮ್ನೆ ಮಾಡಿ' ಆಗಿಬಿಡುತ್ತಿತ್ತು. ಹೆಹ್ಹೆಹ್ಹೆ!!

ಇದನ್ನೇ ಹಲವರು ಪ್ರೇರಣೆಯಾಗಿ ತೆಗೆದುಕೊಂಡರು. ಬಟ್ಟೆ ಅಂಗಡಿಯವರು, ಚಿನ್ನದ ಅಂಗಡಿಯವರು ಇನ್ನೂ ಹಲವರು ಇದನ್ನೇ ಉಪಯೋಗಿಸಲು ಶುರು ಮಾಡಿದರು. ಎಲ್ಲರ ಬಾಯಲ್ಲಿಯೂ 'ಮಾಡಿ' ನಲಿದಾಡುತ್ತಿತ್ತು.

ಆದರೆ, ಈಗ;

ನಾವುಗಳೇ ಅದನ್ನು ಕನ್ನಡೇತರರಂತೆ ಉಪಯೋಗಿಸುತ್ತಿದ್ದೇವೆ. ಬಸ್ಸಿನಲ್ಲಿ ಎಷ್ಟು ಮಂದಿ 'ಬಾಗಿಲು ತೆಗೆಯಿರಿ' ಅನ್ನುತ್ತೇವೆ? ಎಲ್ಲರೂ 'ಡೋರ್ ಓಪನ್ ಮಾಡಿ'ಗೆ ಶರಣಾಗಿದ್ದೇವೆ. ಕಾಲ್ ಮಾಡಿ, ಫೋನ್ ಮಾಡಿ, ಕನೆಕ್ಟ ಮಾಡಿ, ಎಲ್ಲಾ ಮಾಮೂಲಾಗಿ ಬಿಟ್ಟಿದೆ. ಈ ಉದಾಹರಣೆಗಳು ಕೊಡುತ್ತಾ ಹೋದರೆ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಎಲ್ಲೋ ಒಂದು ಕಡೆ ಎಲ್ಲ ಕನ್ನಡ ಅಭಿಮಾನಿಗೂ ಇದು ಬೇಸರ ತರಿಸುತ್ತದೆ.

ಕನ್ನಡಿಗರೆಲ್ಲರಲ್ಲೂ ನನ್ನ ಮನವಿ ಇಷ್ಟೇ. ಕನ್ನಡ ಶ್ರೀಮಂತ ಭಾಷೆ. ಅದನ್ನು ಸಮೃದ್ಧವಾಗಿ ಬಳಸಿ. ಭಾಷೆ ಬರದಿರುವವರಂತೆ ಎಲ್ಲದಕ್ಕೂ 'ಮಾಡಿ'ಯನ್ನು ಆಂಟಿಸಬೇಡಿ. ಆಸಕ್ತ ಕನ್ನಡೇತರರಿಗೆ 'ಮಾಡಿ' ಯ ಬದಲು ಬೇರೆ ಪದಗಳನ್ನೂ ತಿಳಿಸಿ ಕೊಡಿ.

ಕೊನೆಯದಾಗಿ ಈ ಅಂಕಣವನ್ನು 'ಸಿಂಪ್ಲಿ ಎಂಜಾಯ್ ಮಾಡಿ' =)

Monday, August 15, 2011

ಕನ್ನಡ ವರ್ಣಮಾಲೆಯ ಅನಾಥ ಕೂಸು.

ೠ.

ನಾವೆಲ್ಲಾ ಪಾಠ ಮಾಡೋವಾಗ ಇದ್ದ ಈ ಅಕ್ಷರ ಸುಮಾರು ವರ್ಷಗಳಿಂದ ಕನ್ನಡ ವರ್ಣಮಾಲೆಯಿಂದ ಕಣ್ಮರೆಯಾಗಿದೆ. ಈಗಿನ ಮಕ್ಕಳು ಇವನ್ನು ತಮ್ಮ ಪಠ್ಯ ಪುಸ್ತಕದಲ್ಲಿ ಕಾಣುವುದಿಲ್ಲ. ನಮ್ಮ ಘನ ಕರ್ನಾಟಕ ಸರ್ಕಾರ ಈ ಅಕ್ಷರವನ್ನು ಕನ್ನಡದಿಂದ ಉಚ್ಚಾಟಿಸಿದೆ.

ನಮ್ಮ ಪುಣ್ಯ. ಇದು ಹೇಗೋ ತಂತ್ರಾಂಶದಿಂದ ಹೊರಗೆ ಹೋಗಿಲ್ಲ. ಈಗಲೂ ನಾವು ೠ ಎಂದು ಕೀಲಿಮಣೆಯಿಂದ ಬರೆಯಬಹುದು. ಇದನ್ನೂ ಹೊಡೆದೋಡಿಸದಿದ್ದರಷ್ಟೇ ಸಾಕು. ಈ ವಿಷಯ ಬರೆಯಲು ಆಗುತ್ತದೋ ಇಲ್ಲವೋ ಎಂದು ಶಂಕಿಸಿದ್ದ ನನಗೆ ತೃಪ್ತಿ ನೀಡಿತು.

ಇದಕ್ಕೆ ಕಾರಣ ಇನ್ನೂ ಹಾಸ್ಯಾಸ್ಪದ. ಸಂಸ್ಕೃತದಿಂದ ಆಯ್ದ ಈ ಸ್ವರ ಎಲ್ಲೂ ಉಪಯೋಗವಾಗಿಲ್ಲ. ಈ ಸ್ವರವನ್ನು ಉಪಯೋಗಿಸಿ ಯಾವ ಶಬ್ಧವಾಗಲಿ ಇಲ್ಲ. ಅದರಿಂದ ಇದರ ಉಪಯೋಗವಿಲ್ಲ.

ಇರಬಹುದು. ಆದರೆ ಆ ಕಾರಣ ಈ ಸ್ವರವನ್ನು ತೆಗೆದುಹಾಕಿದಲ್ಲಿ ನಾವು ಏನು ಸಾಧಿಸಿದಂತಾಗುತ್ತದೆ? ಅದು ಇದ್ದರೆ ನಮಗೇನು ಪ್ರಯೋಜನವಿಲ್ಲ; ಅಂದ ಮಾತ್ರಕ್ಕೆ ಅದನ್ನು ತೆಗೆದೇ ಬಿಡುವುದು ಯಾವ ನ್ಯಾಯ? ಸಂಸ್ಕೃತದಿಂದ ನಾವು ಎಷ್ಟೋ ಪದಗಳನ್ನು ಎರವಲು ಪಡೆದಿಲ್ಲವೇ? ಹಾಗೆಯೇ ಈ ಸ್ವರವನ್ನು ಪಡೆದಿದ್ದೆವಷ್ಟೇ. ಈ ಸ್ವರದ ಜಾಗ ಖಾಲಿ ಮಾಡಿ ನಾವು ಅಲ್ಲಿ ಏನಿಡಬೇಕಾಗಿದೆ? ಅದೆಷ್ಟು ಜಾಗ ಆಕ್ರಮಿಸಿಕೊಳ್ಳುತ್ತದೆ?

ಕೆಲವು ಜನರ ಅಭಿಪ್ರಾಯಕ್ಕೆ ಒಂದು ಸ್ವರವನ್ನೇ ಕಿತ್ತರೆ ಅದೆಷ್ಟರ ಮಟ್ಟಿಗೆ ಸರಿ?

ಆಗೀಗ ಹೊಸ ಪದಗಳನ್ನು ಟಂಕಿಸುವ ನಮಗೆ ಈ ಅಕ್ಷರ ಉಪಯೋಗಿಸಿ ಒಂದೂ ಪದವನ್ನು ಸೃಜಿಸಲು ಆಗಿಲ್ಲವೇ?

ಕನ್ನಡ ಶಬ್ದ ಬ್ರಹ್ಮರ ಎದುರು ಈ ಪ್ರಶ್ನೆಯನ್ನಿತ್ತು ಈ ಅಂಕಣವನ್ನು ಮುಗಿಸುತ್ತೇನೆ. ನನಗೇನಾದರೂ ಹೊಸ ಪದ ಆವಿಷ್ಕರಿಸಬೇಕಾಗಿ ಬಂದ ಸಂದರ್ಭದಲ್ಲಿ ಖಂಡಿತವಾಗಿಯೂ ಈ ಸ್ವರವನ್ನು ಗಣನೆಗೆ ತಂದುಕೊಳ್ಳುತ್ತೇನೆ ಎಂದು ಆಶ್ವಾಸನೆ ಕೊಡುತ್ತೇನೆ.

Sunday, January 24, 2010

ಕಂಗ್ಲಿಷ್: ಒಂದು ಅಧ್ಯಯನ.

ನಿಮಗೆಲ್ಲಾ ತಿಳಿದಿರುವ ಹಾಗೆ ಕಂಗ್ಲಿಷ್ ಎಂದರೆ ಇಂಗ್ಲಿಷ್ ಅಥವಾ ಆಂಗ್ಲ ಭಾಷೆ ಹಾಗು ಕನ್ನಡ ಭಾಷೆಯ ಮಿಶ್ರಣ. ಇದರಲ್ಲಿ ಕನ್ನಡಕ್ಕಿಂತ ಇಂಗ್ಲಿಷ್ ಹೆಚ್ಚು ಬೆರೆತಿರುವುದರಿಂದ 'ಇನ್ನಡ' ಎನ್ನದೇ ಕಂಗ್ಲಿಷ್ ಎಂದಿರಲೂ ಬಹುದು.

ಇದರ ಬಳಕೆ ಇಂದಿನ ದಿನಗಳಲ್ಲಿ ಎಷ್ಟು ಪ್ರಧಾನವಾಗಿಬಿಟ್ಟಿದೆ ಎಂದರೆ ಸ್ಪಷ್ಟ ಹಾಗು ಸುಲಲಿತ ಕನ್ನಡವನ್ನು ಯಾರಾದರೂ ಅಪ್ಪಿ ತಪ್ಪಿ ಆಡಿಬಿಟ್ಟರೆ, ಎಲ್ಲರೂ ಕಕಮಕರಾಗಿಬಿಡುತ್ತಾರೆ. ಎಲ್ಲಿಯೋ ಪರದೇಶದಿಂದ ಬಂದವನಿಗೆ ಬೀರುವ ನೋಟ ಇವರಿಗೆ ಪ್ರಾಪ್ತವಾಗಿಬಿಡುತ್ತದೆ.

ಮೊನ್ನೆ ಮೊನ್ನೆ ನಮ್ಮ ತೀ. ನಂ. ಶ್ರೀ ರವರ 'ನಂಟರು' ಪ್ರಬಂಧ ಸಂಕಲನ (ಅಥವಾ ನನ್ನ ಪ್ರಕಾರ ಅಂದಿನ ಬ್ಲಾಗು) ಓದುವಾಗ ಅವರ 'ಕಾಸಿನ ಸಂಘ' ಓದುತ್ತಿರುವಾಗ ಈ ಅಂಕಣ ಬರೆಯುವ ಹಂಬಲ ಉಂಟಾಯಿತು.

ಇದರ ಅಧ್ಯಯನ ಮಾಡುವ ಮುನ್ನ ಕೆಲವು ಉದಾಹರಣೆಗಳನ್ನು ನೋಡೋಣ.

೧. ಹೇಯ್! ಈಗ time ಎಷ್ಟಾಯ್ತು?
೨. ಈಗ ಸ್ವಲ್ಪ snacksu, coffee, tea ಕುಡ್ಕೊಂಡ್ ಬರೋಣ?
೩. ಬಟ್ಟೆ wash ಮಾಡಿದ್ದೀನಿ, ಸ್ವಲ್ಪ iron ಮಾಡ್ಬಿದ್ತೀರಾ?
೪. ನಂಗೆ ಸೀರೆ ಅಂದ್ರೆ allergy you know? ಯಾರು ಆ old model dress ಎಲ್ಲಾ ಹಾಕ್ಕೋತಾರೆ?
೫. ಹೇಯ್ come ya! ಈಗ shopping ಮಾಡಿ ಬರೋಣ.

ಇವು ಕೇವಲ ಉದಾಹರಣೆಗಳಷ್ಟೇ. ಬಸ್ಸಿನಲ್ಲಿಯೋ, ಕಾಲೇಜಿನಲ್ಲಿಯೋ ಅಥವಾ ಜನ ಹೆಚ್ಚು ಸೇರುವ ಯಾವುದೇ ಜಾಗಕ್ಕೆ ಹೋಗಿ ನೋಡಿದರೂ ಇಂತಹ ಲೆಕ್ಕವಿಲ್ಲದಷ್ಟು ಉದಾಹರಣೆಗಳು ನಮಗೆ ಸಿಗುತ್ತವೆ.

ಕಂಗ್ಲಿಷಿನ ಉಗಮ:

ಈ ಕಂಗ್ಲಿಷ್ ಯಾವ ಕಾಲಘಟ್ಟದಿಂದ ಉದಯಿಸಿರಬಹುದು? ಆಂಗ್ಲರು ನಮ್ಮ ದೇಶಕ್ಕೆ ಬರುವ ಮುಂಚೆಯಂತೂ ಇದು ಬಂದಿರುವುದು ಶಕ್ಯವಿಲ್ಲ. ಐರೊಪ್ಯ ರಾಷ್ಟ್ರಗಳು ನಮ್ಮ ದೇಶಕ್ಕೆ ಬಂದಿದ್ದು ೧೬ನೇ ಶತಮಾನದಲ್ಲಾದರೂ, ಅವರ ಸರ್ಕಾರ ಸ್ಥಾಪಿತವಾದದ್ದು ೧೭ನೇ ಶತಮಾನದಲ್ಲಿ. ಕರ್ನಾಟಕಕ್ಕೆ ಬ್ರಿಟೀಷರ ಕಿರುಕುಳ ಶುರುವಾದದ್ದು ೧೮ನೇ ಶತಮಾನದಲ್ಲಿಯೇ ಎಂದು ಹೇಳಬೇಕು. ನಮ್ಮ ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ಇವರೆಲ್ಲರೂ ೧೮ ನೇ ಶತಮಾನದವರೇ. ಹೈದರ್ ಅಲಿ, ಟಿಪ್ಪು ಸುಲ್ತಾನ್ ಇಬ್ಬರೂ ೧೮ ನೇ ಶತಮಾನ ಮುಗಿಯುವುದರೊಳಗೆ ಬ್ರಿಟೀಷರ ಮೇಲೆ ಯುದ್ಧ ಹೂಡಿ ಸತ್ತವರು. ನಮ್ಮ ಈ ಕಂಗ್ಲಿಷ್ ಪ್ರಾರಂಭವಾಗಿದ್ದರೆ ಇದರ ನಂತರವಷ್ಟೇ ಸಾಧ್ಯ.

ಬ್ರಿಟೀಷರು ಆಗ ನಮ್ಮನ್ನಾಳುತ್ತಿದ್ದರೂ ಅವರವರ ನಡುವೆ ಮಾತ್ರ ಆಂಗ್ಲ ಭಾಷೆ ಬಳಸುತ್ತಿದ್ದಿರಬೇಕು. ಪ್ರಜೆಗಳಿಗೆ ಇಂಗ್ಲಿಷ್ ಹೇರಲಿಲ್ಲ. ಇದರ ಬಗೆಗೆ ಯಾವುದೇ ಮಾಹಿತಿ ನನ್ನ ಬಳಿಯಿಲ್ಲವಷ್ಟೇ. ಅವರ ತಂತ್ರ ಕುತಂತ್ರಗಳೇನಿದ್ದರೂ ವಿಭಿನ್ನ ರೀತಿಯವು. ಅದರ ಬಗ್ಗೆ ಈಗ ಚರ್ಚೆ ಬೇಡ.

೧೯ನೇ ಶತಮಾನದ ಮಧ್ಯಂತರದ ಮೇಲೆ ಹಲವಾರು ಭಾರತೀಯರು ಉನ್ನತ ವ್ಯಾಸಂಗಕ್ಕಾಗಿ ಯೂರೋಪ್ ಗೆ ಮುಖ ಮಾಡಿದ ಕಾಲ. ಸುಮಾರು ಭಾರತೀಯರು ಲಂಡನ್ನಿಗೆ ಹೋಗಿರುವುದು ನಮಗೆಲ್ಲರಿಗೂ ತಿಳಿದ ವಿಷಯ. ರಾಜಾ ರಾಮ್ ಮೋಹನ್ ರಾಯ್, ಮಹಾತ್ಮಾ ಗಾಂಧಿ, ಜವಾಹರ್ ಲಾಲ ನೆಹರು, ಸರ್. ಎಂ. ವಿಶ್ವೇಶ್ವರಯ್ಯ ಇನ್ನೂ ಹಲವರ ಉದಾಹರಣೆ ನಮಗೆ ಇತಿಹಾಸದಿಂದ ಸಿಗುತ್ತದೆ.

ಹೊರದೇಶಕ್ಕೆ ಹೋದರೆ (ಸಮುದ್ರ ದಾಟಿದರೆ), ಧರ್ಮದಿಂದ ಉಚ್ಚಾಟನೆ ಆಗುತ್ತಿದ್ದ ಕಾಲ ಒಂದಿತ್ತು. ಕ್ರಮೇಣ ಹೊರದೇಶದಲ್ಲಿ ಓದಿ ಬಂದವರಿಗೆ ಭಾರಿ ಮನ್ನಣೆ ದೊರೆಯುವಂತಾಯಿತು. "ಓಹೋ! ಅವರು ಲಂಡನ್ನಿನಲ್ಲಿ ಓದಿ ಬಂದವರು! ಬಹಳ ಮೇಧಾವಿ ಇರಬೇಕು." ಎಂಬ ಮಾತುಗಳು ದಿನೇ ದಿನೇ ಬಹಳವಾಗುತ್ತಾ ಬಂತು.

ಹೀಗೆ ಬ್ರಿಟನ್ನಿಗೆ ಹೋಗಿ ಬಂದ ಹಲವರಲ್ಲಿ ಒಂದು ರೀತಿಯ ಜಂಭ. ತಮಗೆ ಇಂಗ್ಲಿಷ್ ಗೊತ್ತು. ಇತರರಿಗೆ ತಿಳಿದಿಲ್ಲ. ತಮ್ಮ ನಗರದಲ್ಲೇ ಅಥವಾ ಆಸುಪಾಸಿನಲ್ಲಿ ಯಾರಾದರು ಒಬ್ಬರು ವಿದೇಶ ಸುತ್ತಿ ಬಂದವರಿದ್ದರೆ ಅವರೊಡನೆ ಮಾತ್ರ ಮಾತು, ಇತರರೊಡನೆ ಮೂದಲಿಕೆ ಹೆಚ್ಚುತ್ತಾ ಬಂತು.

ಇದನ್ನು ಕಂಡ ಸಾಮಾನ್ಯ ಜನರು, ತಮಗೆ ತಿಳಿಯದ ಭಾಷೆ ಅರಿಯಲು ಅದನ್ನೇ ಮಾತನಾಡುವ ಜನರನ್ನು ಹೆಚ್ಚು ಮರ್ಯಾದೆಯಿಂದ ಮಾತನಾಡಲು ತೊಡಗಿದರು. ಹಾಗು ಹೀಗೂ ಸ್ವಲ್ಪ ಸಮಯ ಅವರೊಂದಿಗೆ ಕಳೆದರೆ ತಮ್ಮ ಜನ್ಮ ಉದ್ಧಾರವಾಗುವುದು ಎಂಬ ಭ್ರಮೆ ಅವರಿಗೆ ಬಂತು. ಮಾತನಾಡುವಾಗ ಅಲ್ಲಿ ಇಲ್ಲಿ ಅವರ ಬಾಯಿಂದ ಹೋರಾಟ ಕೆಲವು ಆಂಗ್ಲ ಪದಗಳು ಇವರ ಕಿವಿಗೆ ಬಿದ್ದು ಅದರ ಅರ್ಥವನ್ನು ಅವರಿಂದ ಎದ್ದು ಬಿದ್ದು ಪಡೆದು ತಮ್ಮ ಇತರ ಸ್ನೇಹಿತರ ಮುಂದೆ ಬಡಾಯಿ ಕೊಚ್ಚಲು ಉಪಯೋಗಿಸುತ್ತಿದ್ದರು.

ಇವೇ ಪದಗಳು ಮುಂದೆ ಕನ್ನಡ ವಾಕ್ಯಗಳಲ್ಲಿಯೇ ಬೆರೆತು ಈ ಹೊಸ ಕಂಗ್ಲಿಷ್ ಆಯಿತು ಎನ್ನುವುದು ನನ್ನ ನಂಬಿಕೆ.

ಕಂಗ್ಲಿಷ್ ಬೆಳವಣಿಗೆ:

ಉಗಮದ ಮಾತಾಯಿತು. ಇದು ಹೇಗೆ ಬೆಳೆಯಿತು? ಅಥವಾ, ಇದರ ಬೆಳವಣಿಗೆಗೆ ಹೇಗೆ ಪ್ರೋತ್ಸಾಹ ಸಿಕ್ಕಿರಬಹುದು? ನನಗೆ ಹೊಳೆಯುತ್ತಿರುವ ಕಾರಣಗಳೆಂದರೆ:

೧. ಮೊದಲೇ ಹೇಳಿದಂತೆ, ವಿದೇಶಿ ವಿದ್ಯಾರ್ಥಿಗಳು ಹೆಚ್ಚುತ್ತಾ ಹೋಗಿ ಅವರ ಮಾತೃಭಾಷೆಯ ಬಳಕೆಯಲ್ಲೆಲ್ಲ ಇಂಗ್ಲೀಷನ್ನು ತುರುಕುತ್ತಿದ್ದಿರಬೇಕು.
೨. ಅದನ್ನು ಕೇಳಿದ ಇಲ್ಲಿಯ ಜನ ಅದರ ಉಪಯೋಗದಲ್ಲಿ ಏನೋ ಒಂದು ಸಂತೋಷವನ್ನು ಮನಗಂಡು ಉಪಯೋಗಿಸುತ್ತಿದ್ದಿರಬಹುದು.
೩. ಹಲಕೆಲವು ವಿದೇಶಿ ವಸ್ತುಗಳು ಇಲ್ಲಿಗೆ ಬಂದು ಅವಕ್ಕೆ ಇಲ್ಲಿ ಸಮನಾದ ವಸ್ತುಗಳು ಇರದಿದ್ದುದ್ದರಿಂದ ಅವಕ್ಕೆ ಕನ್ನಡದಲ್ಲಿ ಹೊಸ ಪದವನ್ನು ಆವಿಷ್ಕರಿಸದೇ ಅದೇ ಹೆಸರನ್ನು ಇಲ್ಲಿಯೂ ಕಾಪಾಡಿಕೊಂಡು ಬಂದಿರಬಹುದು. ಉದಾ: ಬಸ್ಸು, ಟ್ರೇನು,ಇಂಜಿನ್, ಟೇಪ್ ರೆಕಾರ್ಡರ್, ಇತ್ಯಾದಿ ಹಲವು ವಸ್ತುಗಳು.
೪. ಈ ಮೇಲೆ ಹೇಳಿದ ಪದಗಳಿಗೆ ಕನ್ನಡ ಪದಗಳನ್ನು ಸೃಷ್ಟಿಸಿದರೂ ಜನರಿಗೆ ಅದು ಕ್ಲಿಷ್ಟವಾಗಿ ಕಂಡಿದ್ದಿರಬೇಕು. ಇತರ ಹಲವು ಕನ್ನಡ ಪದಗಳನ್ನು ಉಚ್ಚರಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಜನರು ಅದರ ಆಂಗ್ಲ ಸಮನ್ವಿತ ಪದದ ಮೊರೆ ಹೋಗಿರಲೂ ಬಹುದು. ಉದಾ: ಬಸ್ಸು ಎನ್ನುವ ಬದಲು ಯಾರು ಷಟ್ಚಕ್ರ ವಾಹನ ಎನ್ನುತ್ತಾರೆ?
೫. ಮೇಲೆ ಹೇಳಿದ ಕಾರಣ ಬರೀ ವಿದೇಶಿ ವಸ್ತುಗಳಿಗೆ ಸೀಮಿತವಾಗಿರಬೇಕೆಂದಲ್ಲ. ಆ ಪದ ಕನ್ನಡದಲ್ಲಿ ಬಹಳ ಹಿಂದಿನಿಂದ ಬಳಕೆಯಾಗುತ್ತಿದ್ದರೂ ಆಂಗ್ಲ ಭಾಷೆಯಲ್ಲಿ ಅದಕ್ಕೆ ಒಂದು ಪುಟ್ಟ ಪದವಿದ್ದರೆ ಜನ ಅದಕ್ಕೆ ಮೊರೆ ಹೋಗುವುದನ್ನು ನಾವು ನೋಡಿದ್ದೇವೆ. ಉದಾ: ಕನ್ನಡದ ಹುರುಳೀಕಾಯಿ ಎಂದರೆ ಕೆಲವರಿಗೆ ಅರ್ಥವಾಗುವುದಿಲ್ಲ; beans ಎಂದರೆ ಎಲ್ಲರಿಗೂ ಅರ್ಥವಾಗುತ್ತದೆ. ಇಂತಹ ವಸ್ತುಗಳನ್ನು ಮಾರಾಟ ಮಾಡುವವರೂ ಆಂಗ್ಲ ಭಾಷೆಯ ಮೊರೆ ಹೋದದ್ದರಿಂದ ಜನರಿಗೆ ಅದರ ಕನ್ನಡ ಪದ ಮರೆತೇ ಹೋಗಿರಬೇಕು.
೬. ಕೆಲವರಲ್ಲಿ ತಮ್ಮ ಮಾತೃಭಾಷೆಯಲ್ಲಿ ಮಾತನಾಡುವುದೆಂದರೆ ಅದೇನೋ ಮುಜುಗರ. ಕೀಳರಿಮೆ ಸ್ವಭಾವ. ಅಂಥವರನ್ನು ನೀವೂ ಕಂಡಿರುತ್ತೀರಷ್ಟೇ. ಅವರ ಬಾಯಲ್ಲಿ ಹೊರಬರುವ ಇಂಗ್ಲಿಷ್ ಹೆಚ್ಚಿನ ಪಕ್ಷ ಕಂಗ್ಲಿಷ್ಷೇ ಆಗಿರುತ್ತದಷ್ಟೇ. ಆ ಪ್ರಯೋಗದ ಎರಡು ಉದಾಹರಣೆ: ೧) Please give me some teaಅ. ೨) You today wonly comeಅ. ಪ್ರತೀ ವಾಕ್ಯದ ಕೊನೆಯಲ್ಲಿ ಕನ್ನಡದ ತಂತು ನಿಮಗೆ ಕಾಣಸಿಗುತ್ತದೆ. ೧೦೦ಕ್ಕೆ ೯೫ ಪ್ರತಿಶತ ಇಂಥವರಿಂದಲೇ ಕಂಗ್ಲಿಷ್ ಉದ್ಧಾರವಾಗುತ್ತಿರುವುದು.

ಇನ್ನೂ ಹಲವು ಕಾರಣಗಳಿರಬಹುದು. ಇವು ಪ್ರಮುಖವಾದವೆಂದು ನನ್ನ ಅನಿಸಿಕೆ. ನಿಮ್ಮ ಬಳಿ ಬೇರೆ ಕಾರಣಗಳಿದ್ದರೆ ಖಂಡಿತ ತಿಳಿಸಿ.

ಪರಿಹಾರ/ಸಲಹೆ:

ಅಪ್ಪಟ ಕನ್ನಡ ಪಂಡಿತರಿಗೆ, ಭಕ್ತರಿಗೆ ಈ ಕಂಗ್ಲಿಷ್ ಹಾವಳಿ ಎಂದಿನಿಂದಲೂ ಬೇಸರ ತಂದಿದೆ. ಒಂದೇ ವಾಕ್ಯದಲ್ಲಿ ಎರಡು ಭಾಷೆಯ ಪದಗಳನ್ನು ಬಳಸುವ ಬಗ್ಗೆ ಅವರಿಗೆ ವಿಪರೀತ ಕೋಪವಿದೆ. ಇದರ ಬಗ್ಗೆ ನನ್ನ ಅನಿಸಿಕೆ ಇಲ್ಲಿ ವ್ಯಕ್ತವಾಗಿದೆ.

೧. ಕನ್ನಡದಲ್ಲಿ ಮಾತನಾಡುವಾಗ ಆದಷ್ಟೂ ಅನ್ಯ ಭಾಷೆಯ ಪದಗಳನ್ನು ಬಳಸುವುದನ್ನು ನಿಲ್ಲಿಸಿ. ಇದು ಇಂಗ್ಲಿಷ್ ಒಂದಕ್ಕೆ ಸೀಮಿತವಾಗಿಲ್ಲ. ಇತರ ಭಾಷೆಗಳಿಗೂ ಅನ್ವಯಿಸುತ್ತದೆ.
೨. ನಾಮಪದಗಳನ್ನು ಹಾಗೆಯೇ ಕರೆಯುವುದು ಉತ್ತಮ. iPod ಗೆ ಕನ್ನಡ ಸಮನಾದ ಪದವಿಲ್ಲವೆಂದು ಅದಕ್ಕೆ ಒಂದು ಕನ್ನಡ ಪದ ಹುಡುಕುವುದು ಆಭಾಸಕ್ಕೆ ಎಡೆ ಮಾಡಿಕೊಟ್ಟ ಹಾಗಾಗುವ ಸಾಧ್ಯತೆಯೇ ಹೆಚ್ಚು. ಹಾಗೊಂದು ವೇಳೆ ಈ ಪ್ರಯತ್ನದಲ್ಲಿ ನಾವು ಸಫಲರಾಗಿ ಅದು ಎಲ್ಲರ ಬಾಯಲ್ಲಿ ನಲಿದಾಡಿದರೆ ಅದಕ್ಕಿಂತ ಹೆಚ್ಚು ಭಾಗ್ಯ ಯಾವುದಿದೆ? ಆದರೆ ಆ ಸಂಭವ ಕಡಿಮೆ ಎಂದು ನನ್ನ ಅನಿಸಿಕೆ.
೩. ಈ ಮೇಲೆ ಹೇಳಿದ ಭಾಗಕ್ಕೆ ಕೆಲವು ಕನ್ನಡ ಪಂಡಿತರ ವಿರೋಧವುಂಟು. ಅವರು ಪ್ರತಿ ಪದವನ್ನು ಕನ್ನಡೀಕರಿಸಿ ಆಡಿದರೆ ಸಂತೋಷ; ಜನರಿಗೆ ಅರ್ಥ/ಇಷ್ಟವಾಗದಿದ್ದ ಪಕ್ಷ, ಯಾರೂ ಏನು ಮಾಡುವ ಹಾಗಿಲ್ಲ.

ಕನ್ನಡವೂ ವಿರಾಜಮಾನವಾಗಿ ಆಡಲ್ಪದುತ್ತಿದ್ದ ಕಾಲವೊಂದಿತ್ತು. ಆಗ ಯಾವ ಪರಕೀಯರ ಕಾಟಗಳಿರಲಿಲ್ಲ. ಇಂದು ಇಂಗ್ಲಿಷಿನದ್ದೇ ಸಾಮ್ರಾಜ್ಯ. ಮುಂದೊಂದು ದಿನ ಕನ್ನಡ ತನ್ನ ಪೂರ್ವ ಸ್ಥಿತಿಗೆ ಮರಳುತ್ತದೆ ಎಂಬ ಪ್ರಬಲ ಆಶಯದೊಂದಿಗೆ ಈ ಅಂಕಣವನ್ನು ಮುಗಿಸುತ್ತೇನೆ.

Thursday, December 17, 2009

ಸೋನು ನಿಗಮ್ ಹಾಗು ಕನ್ನಡ ಹಾಡುಗಳು.

ಈ ಬ್ಲಾಗನ್ನು ಓದುವ ಹಲವರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು. ನನ್ನ ಸೋಂಬೇರಿತನವನ್ನು  ಮನ್ನಿಸಿ.

ಕನ್ನಡ ಚಿತ್ರಗೀತೆಗಳು  ಹಾಗು ಪರಕೀಯ ಗಾಯಕರು ಎಂದು ಪ್ರಕಟವಾಗಬೇಕಿದ್ದ ಈ ಅಂಕಣವು ಹಂತ ಹಂತವಾಗಿ ತೆರೆದುಕೊಳ್ಳಲಿದೆ. ಇದಕ್ಕೆ ಪ್ರೇರಣೆ ಸೀನಈ ಹಳೆಯ ಅಂಕಣ.

ಕನ್ನಡ ಚಿತ್ರಗೀತೆಗಳಲ್ಲಿ ಎಂದಿನಂತೆ ಪರಕೀಯ ಗಾಯಕರ ಹಾವಳಿ ಇದ್ದಿದ್ದೇ. ಇತ್ತೀಚಿನ ದಿನಗಳಲ್ಲಿ ಅದು ಇನ್ನು ಹೆಚ್ಚಿದೆ ಎನ್ನುವ ಮಾತು ಆಗಾಗ ಕೇಳಿಬರುತ್ತದೆ. ಇದರ ಇತಿಹಾಸವನ್ನು ಸ್ವಲ್ಪ ಮಟ್ಟಿಗೆ ತಿಳಿದುಕೊಳ್ಳೋಣ.

೧೯೩೪ನೇ ಇಸವಿಯಿಂದ ಪ್ರಾರಂಭವಾದ ಕನ್ನಡ ಚಿತ್ರರಂಗ, ಮೂಕಿಯಿಂದ ಟಾಕಿಯಾದದ್ದು ಸರಿ ಸುಮಾರು ೫೦ನೆ ದಶಕದಲ್ಲಿ ಎಂದು ಹಲವರ ಅಂಬೋಣ. [ಆಸಕ್ತರು ಜಾಲದಲ್ಲಿ ಹುಡುಕಾಡಿ] ಆಗಿನ ಕಾಲದಿಂದಲೂ ಕನ್ನಡದಲ್ಲಿ ಪರಕೀಯರ ಹಾಡುಗಾರಿಕೆಯೇ. ಸೀರ್ಕಾಳಿ ಗೋವಿಂದನ್, ಘಂಟಸಾಲ, ಪಿ ಸುಶೀಲ, ಹಲವರು. ಆಗಿನ ಕಾಲದಲ್ಲಿ ಕರ್ನಾಟಕದಲ್ಲಿ ಸ್ಟೂಡಿಯೋ ವ್ಯವಸ್ತೆಯಿಲ್ಲದಿರುವುದೂ ಇದಕ್ಕೆ ಒಂದು ಪ್ರಮುಖ ಕಾರಣವಾಗಿರಬಹುದು. ಇದೇ ಸಾಲಿನಲ್ಲಿ ಬರುವವರು ಪಿ. ಬಿ. ಶ್ರೀನಿವಾಸ್, ಎಸ್. ಜಾನಕಿ, ಎಸ್. ಪಿ. ಬಾಲಸುಬ್ರಮಣ್ಯಂ, ಎಸ್. ಪಿ. ಶೈಲಜಾ, ಎಲ್. ಆರ್. ಈಶ್ವರಿ, ವಾಣಿ ಜಯರಾಂ, ಕೆ. ಎಸ್. ಚಿತ್ರ, ಕೆ. ಜೆ. ಏಸುದಾಸ್, ಇನ್ನು ಹಲವರು.

ಇವರೆಲ್ಲ ದಕ್ಷಿಣ ಭಾರತದ ಪ್ರಮುಖರಾಯ್ತು.

ಉತ್ತರ ಭಾರತದವರ ಕಡೆ ಮುಖ ಮಾಡಿದರೆ ನಮಗೆ ಸಿಗುವುದು, ಮೊಹಮ್ಮದ್ ರಫಿ (ಒಂದು ಹಾಡು), ಕಿಶೋರ್ ಕುಮಾರ್ (೧ ಹಾಡು), ಲತಾ ಮಂಗೇಶ್ಕರ್ (೧ ಹಾಡು) ಆಶಾ ಭೋಂಸ್ಲೆ (೧ ಹಾಡು), ಮನ್ನಾ ಡೇ (೨-೩ ಹಾಡು). ಇವರೆಲ್ಲ ಹಳಬರು. ಹೊಸಬರಲ್ಲಿ ಕುಮಾರ್ ಸಾಣು, ಉದಿತ್ ನಾರಾಯಣ್, ಸೋನು ನಿಗಮ್, ಅಲ್ಕಾ ಯಾಗ್ನಿಕ್, ಸಾಧನ ಸರ್ಗಂ, ಕುನಾಲ್ ಗಾಂಜಾವಾಲ, ಅನುರಾಧ ಪೌದ್ವಾಲ್, ಕವಿತಾ ಕೃಷ್ಣಮೂರ್ತಿ, ಶ್ರೇಯಾ ಘೋಶಾಲ್, ಕೈಲಾಶ್ ಖೇರ್, ಶಾನ್ ಪ್ರಮುಖರು.

ಇವರ ಬಗ್ಗೆ ಇನ್ನೊಮ್ಮೆ ಯಾವಾಗಲಾದರು ಹೇಳಿದರಾಯ್ತು. ಈಗ ಈ ಅಂಕಣದ ಕೇಂದ್ರ ಬಿಂದು, ಸೋನು ನಿಗಮರ ಬಗ್ಗೆ ಬರೆಯೋಣ.

ಹೆಚ್ಚಿನ ಪಕ್ಷ ಉತ್ತರ ಭಾರತದ ಎಲ್ಲರೂ ಮೂಗಿನಿಂದಲೇ ಹಾಡುತ್ತಾರೆ. ಶ್ರೇಯಾ ಘೋಶಾಲ್ ಒಬ್ಬರು ಅಪವಾದ. ನಮ್ಮ ಸೋನು ನಿಗಮರಂತು ಮೂಗೀಶ್ವರನ ಅಪರಾವತಾರ. ಸರಿ ಸುಮಾರು ೨೦೦೦ ನೇ ಇಸವಿಯಿಂದ ಕನ್ನಡದಲ್ಲಿ ಹಾಡಲು ಬಂದ ಸೋನುವನ್ನು ಇಲ್ಲಿಯ ಹೆಚ್ಚಿನ ಜನ ಅಭಿನಂದಿಸಿದರು. ಸೋನು, ಹಿಂದಿಯಲ್ಲಿ ಉತ್ತಮ ಹಾಡುಗಾರ ನಿಜ. ಆದರೆ ಅವರನ್ನು ಕನ್ನಡಕ್ಕೆ ತಂದವರು ಕನ್ನಡದ ಉಚ್ಚ್ಹಾರವನ್ನು ಸರಿಯಾಗಿ ಕಲಿಸದೇ ಹಾಡಿಸುವುದು ಅಪರಾಧವೇ ಸರಿ.

೨೦೦೬ ನೇ ಇಸವಿಯ ತನಕ ವರ್ಷಕ್ಕೆ ೨-೩ ಕನ್ನಡ ಹಾಡುಗಳನ್ನು ಹಾಡುತ್ತಿದ್ದ ಸೋನು, ಏಕ ದಂ, ಪ್ರಸಿದ್ಧರಾದದ್ದು ಮುಂಗಾರು ಮಳೆಯ ಹಾಡುಗಳಿಂದ.

೨೦೦೬ರ ತನಕ ಸೋನು ನಿಗಮರ ಕೆಲವು ಪ್ರಸಿದ್ಧ ಕನ್ನಡ ಹಾಡುಗಳೆಂದರೆ:
೧. ಟೈಟಾನಿಕ್ ಹೀರೋಯಿನ್ ನನ್ನ ಚೆಲುವೆ (ಚಿತ್ರ: ಸ್ನೇಹ ಲೋಕ, ಸಾಹಿತ್ಯ, ಸಂಗೀತ: ಹಂಸಲೇಖ)
೨. ಮೊನಾಲೀಸಾ ಮೊನಾಲೀಸಾ (ಚಿತ್ರ: ಮೋನಲೀಸ, ಸಂಗೀತ: ವಲೀಶ ಸಂದೀಪ್)
೩. ಅಂಟ್ ಅಂಟ್ ಅಂಟ್ (ಚಿತ್ರ: ಸೂಪರ್ ಸ್ಟಾರ್,  ಸಾಹಿತ್ಯ, ಸಂಗೀತ: ಹಂಸಲೇಖ)
೪. ಉಸಿರೇ, ಉಸಿರೇ (ಚಿತ್ರ: ಹುಚ್ಚ, ಸಂಗೀತ: ರಾಜೇಶ್ ರಾಮನಾಥ್) 

ನಿಮಗೆ ತಿಳಿದಿರುವ ಹಲವಾರು ಹಾಡುಗಳನ್ನು ನಾನು ಬಿಟ್ಟಿರಬಹುದು. ಕ್ಷಮೆಯಿರಲಿ.

ಈ ಮೇಲ್ಕಂಡ ಹಾಡುಗಳೆಲ್ಲದರ ಸಾಹಿತ್ಯ, ಎಷ್ಟು ಬಾರಿ ಕೇಳಿದರು ಬೇಜಾರಾಗುವುದಿಲ್ಲ. (ನನ್ನ ಅಭಿಪ್ರಾಯದಲ್ಲಿ ೪ ನೇ ಹಾಡು, ಉಸಿರೇ, ಉಸಿರೇ ಕೂಡ ಕೇಳಲಾಗುವುದಿಲ್ಲ, ಆದರೆ ಹಲವರಿಗೆ ಹಾಗನ್ನಿಸುವುದಿಲ್ಲ, ಇರಲಿ...)

ಆದರೆ ಈ ಮುಂಗಾರು ಮಳೆ ಚಿತ್ರ ಬಂತು ನೋಡಿ, ಅದರ ಹಾಡುಗಳು ಪ್ರಸಿದ್ಧವಾಗಿದ್ದೆ ಆಗಿದ್ದು, ಸೋನು ನಿಗಮರ ಕನ್ನಡ ಹಾಡುಗಾರಿಕೆ ಬೇರೆಯದೇ ಮಟ್ಟವನ್ನು ಮುಟ್ಟಿತು. ಆ ಚಿತ್ರವನ್ನು ಜನ ಅದ್ಯಾಕೆ ಅಷ್ಟು ಹಚ್ಚಿಕೊಂಡರು ಎಂದು ನನಗೆ ಇನ್ನೂ ಸ್ಪಷ್ಟವಾಗಿಲ್ಲ. ಆ ಚಿತ್ರದಲ್ಲಿ ಇಷ್ಟವಾಗಬಹುದಾದದ್ದು ಒಂದಿದ್ದರೆ ಅಲ್ಲಿನ ಛಾಯಾಗ್ರಹಣ. ಅದೊಂದು ಬಿಟ್ಟರೆ ಆ ಚಿತ್ರದ ಗಣೇಶ್, ಪೂಜಾ ಗಾಂಧಿ ಅಭಿನಯವಾಗಲಿ, ಮನೋ ಮೂರ್ತಿಗಳ ಸಂಗೀತವಾಗಲಿ, ಯೋಗರಾಜಭಟ್ಟರ ನಿರ್ದೇಶನವಾಗಲಿ, ಭಟ್ಟರ ಹಾಗು ಕಾಯ್ಕಿಣಿಯವರ ಸಾಹಿತ್ಯವಾಗಲಿ  ದೈನ್ಯವೆನ್ನಿಸುತ್ತದೆ. ಕಥೆಯಂತೂ ಬಾಲಿಶವಾಗಿದೆ. ಇರಲಿ ಬಿಡಿ. ನಾವು ಈಗ ಮುಂಗಾರು ಮಳೆಯ ವಿಮರ್ಶೆ ಮಾಡುತ್ತಿಲ್ಲ.

ಇದಾದನಂತರ ಬಂದ ಸೋನು ನಿಗಮರ ಕೆಲವು ಹಾಡುಗಳ ಸಾಹಿತ್ಯದ ಬಗ್ಗೆ ನಾನು ಬರೆಯಲಿಚ್ಚಿಸುತ್ತೇನೆ. ಇಲ್ಲಿ ಒಂದು ವಿಷಯ ಸ್ಪಷ್ಟಪಡಿಸುತ್ತೇನೆ. ನನಗೆ ಇಲ್ಲಿ ಜಯಂತ ಕಾಯ್ಕಿಣಿಯವರ ಬಗ್ಗೆ ಅಪಾರ ಗೌರವವಿದೆ. ಮನೋ ಮೂರ್ತಿ ಹಾಗು ಸೋನು ನಿಗಮರ ಬಗ್ಗೆ ಯಾವುದೇ ವೈಷಮ್ಯವಿಲ್ಲ. ಹಾಗೆಯೇ ಈ ಹಾಡುಗಳನ್ನು ಹೊರತರುವಲ್ಲಿ ಕಷ್ಟಪಟ್ಟ ಎಲ್ಲರ ಬಗ್ಗೆ ನನ್ನ ಗೌರವ, ಸಹಾನುಭೂತಿ, ಕಳಕಳಿ ಇದೇ. ಯಾರೂ ಅನ್ಯತಾ ಭಾವಿಸಬಾರದೆಂದು ವಿನಂತಿ.

ಮೊದಲೇ ಹೇಳಿದಂತೆ, ಮುಂಗಾರು ಮಳೆಯ ನಂತರ ಬಂದ ಹೆಚ್ಚಿನ ಸೋನು ಹಾಡುಗಳು ಒಂದೇ ಕಾಯ್ಕಿಣಿಯವರು ಬರೆದದ್ದು ಅಥವಾ ಮನೋ ಮೂರ್ತಿ ಸಂಗೀತ ಸಂಯೋಜಿಸಿದ್ದು ಅಥವಾ ಎರಡೂ. ಇತರರೂ ಮಾಡಿದ್ದಾರೆ ಆದರೆ ಇವರುಗಳು ಜಾಸ್ತಿ. ಈ ಎಲ್ಲಾ ಹಾಡುಗಳಲ್ಲಿ ಒಂದು ಪ್ರಮುಖ ಗುಣ, ಹಾಡಿನ ದೈನ್ಯತೆ. ಹೆಚ್ಚಿನ ಪಕ್ಷ ಎಲ್ಲ ಹಾಡುಗಳಲ್ಲಿಯೂ ದೈನ್ಯತೆ ಎದ್ದು ಕಾಣುತ್ತದೆ. ಹಲವನ್ನು ಇಲ್ಲಿ ಉದಾಹರಿಸುತ್ತೇನೆ.

೧. ಚಿತ್ರ: ಮುಂಗಾರು ಮಳೆ
     ಹಾಡು: ಅನಿಸುತಿದೆ ಯಾಕೋ ಇಂದು...
     ಸಾಹಿತ್ಯ: ಜಯಂತ್ ಕಾಯ್ಕಿಣಿ.
     ಸಂಗೀತ: ಮನೋ ಮೂರ್ತಿ.
      ದೈನ್ಯತೆಯ ಪರಮಾವಧಿಯ ಸಾಲುಗಳು:  "ನೀನೇನೆ ನನ್ನವಳೆಂದು..." "ಇನ್ನ್ಯಾರ ಕನಸಲೋ ನೀನು ಬಂದರೆ ತಳಮಳ" "ನನ್ನ ಹೆಸರ ಕೂಗೆ ಒಮ್ಮೆ ಹಾಗೆ ಸುಮ್ಮನೆ"

೨. ಚಿತ್ರ: ಗಾಳಿಪಟ
     ಹಾಡು: ಮಿಂಚಾಗಿ ನೀನು ಬರಲು
     ಸಂಗೀತ: ಹರಿಕೃಷ್ಣ
     ದೈನ್ಯತೆಯ ಪರಮಾವಧಿ: "ನಾ ನಿನ್ನ ಕನಸಿಗೆ ಚಂದಾದಾರನು, ಚಂದಾ ಬಾಕಿ ನೀಡಲು ಬಂದೇ ಬರುವೆನು"
     ನನ್ನ ಅನಿಸಿಕೆ: ಅಯ್ಯೋ ಬೇಡ ಬಿಡು ಗುರು. ನಿಂಗ್ ಫ್ರೀಯಾಗೆ ಕೊಡ್ತೀನಿ. ನನ್ನ ಗೆಳೆಯ ಸೀನ ಇದಕ್ಕೆ ಅಣಕ ಹಾಡಿದ್ದ. "ನಾ ನಿನ್ನ ಚಪ್ಪಲಿಯ ಚಮ್ಮಾರನು, ಕಿತ್ತೋದ್ ಚಪ್ಪಲಿ ಹೊಲಿಯಲು ಬಂದೇ ಬರುವೆನು... ಯಪ್ಪಾ!!)

೩. ಚಿತ್ರ: ನವಗ್ರಹ
     ಹಾಡು: ಕಣ್ಣ ಕಣ್ಣ ಸಲಿಗೆ
     ಸಂಗೀತ: ಹರಿಕೃಷ್ಣ
     ದೈನ್ಯತೆಯ ಪರಮಾವಧಿ: ಇಡೀ ಹಾಡೇ ದೈನ್ಯವಾಗಿದೆ. ಅದರಲ್ಲಿಯೂ ಎರಡನೆಯ ಚರಣದಲ್ಲಿ "ಪ್ರೀತೀ ಮಾಡೇ" ಅಂತೂ ಅರಚಿಕೊಳ್ಳುವಂತಿದೆ. ಈ ಹಾಡು ಕೇಳಿದಾಗಲೆಲ್ಲ ಮೈ ಪರಚಿಕೊಳ್ಳುವಂತಾಗುತ್ತದೆ.

೪. ಚಿತ್ರ: ಸರ್ಕಸ್
     ಹಾಡು: ಪಿಸುಗುಡಲೇ... ಸವಿ ಮಾತೊಂದ...
     ಸಂಗೀತ: ಎಮಿಲ್
     ದೈನ್ಯತೆಯ ಪರಮಾವಧಿ: ಅಸಂಬದ್ಧ ಕಲ್ಪನೆಗಳು. "ನನ್ನ ನೂರು ಆಸೆಗೆಲ್ಲ, ಕೋಟಿ ಕೋಟಿ ಬಣ್ಣಗಳ ಕನಸಿನ ಅಂಗಿಯ ತೊಡಿಸಿ...."
     ಅಣಕ: ಇನ್ನ್ ಏನ್ ಏನ್ ಆಸೆ ಎಲ್ಲ ಇಟ್ಟುಕೊಂಡು ಇದ್ದೀಯ  ಸಿವಾ?

೫. ಚಿತ್ರ: ಮಳೆಯಲಿ... ಜೊತೆಯಲಿ...
     ಹಾಡು: ನೀ ಸನಿಹಕೆ ಬಂದರೆ...
     ಸಂಗೀತ: ಹರಿಕೃಷ್ಣ
     ದೈನ್ಯತೆಯ ಪರಮಾವಧಿ: ಶೀರ್ಷಿಕೆಯೇ ಹೇಳುತ್ತದೆ. "ನೀ ಸನಿಹಕೆ ಬಂದರೆ ಹೃದಯದ ಗತಿ ಏನು?"
     ಅಣಕ: ಹುಡ್ಗೀರ, ಇವನ್ ಹತ್ರ ಹೋಗಬೇಡಿರಮ್ಮ.

ಹೇಳುತ್ತಾ ಹೋದರೆ ಈ ಸರತಿ ತುಂಬಿ ಹೋಗಬಹುದು. ಸೋನು, ಮನೋ, ಕಾಯ್ಕಿಣಿ ತ್ರಯರು ಹೊರತಂದ ಆಲ್ಬಮ್ "ನೀನೆ, ಬರಿ ನೀನೆ" ಅಲ್ಲಿ ದೈನ್ಯತೆಯನ್ನು ಯಥೇಚ್ಚವಾಗಿ ಕಾಣಬಹುದು. ಇದರಲ್ಲಿ ಇನ್ನು ಹಲವು ಗಾಯಕರ ಪಾತ್ರವೂ ಇದೇ. ಆದರೆ ಸೋನು ನಿಗಮ್ ಎಲ್ಲರನ್ನು ಮೀರಿಸಿದ್ದಾರೆ. ದೈನ್ಯತೆಯಲ್ಲಿ.

ಮೇಲೆ ಹೇಳಿದ ಹಾಡುಗಳು ಶೇಕಡಾ ೯೮% ಜನರಿಗೆ ಅಚ್ಚು ಮೆಚ್ಚು. ಅದು ಅವರ ಇಚ್ಛೆ. ನನ್ನ ಅಭಿಪ್ರಾಯವನ್ನು ಇಲ್ಲಿ ನಿರ್ದಾಕ್ಷಿಣ್ಯವಾಗಿ ಮಂಡಿಸಿದ್ದೇನೆ. ಅಂಕಣವನ್ನು ಓದಿ ನೋವಾಗಿದ್ದರೆ ಕ್ಷಮೆಯಿರಲಿ.

ಕೊನೆಯದಾಗಿ ಒಂದು ಮಾತು. ಈ ಎಲ್ಲ ಹಾಡುಗಳನ್ನು ಇಷ್ಟಪಡುವವರು ದೈನ್ಯತೆಯೇ ಸಂಗೀತ, ದೈನ್ಯತೆಯೇ ಮಾಧುರ್ಯವೆಂದು (Melody) ತಿಳಿದಿದ್ದಾರೆ.  ಹಾಗೆಂದು ಘಂಟಾಘೋಷವಾಗಿ ಎಲ್ಲ ಕಡೆ ಹೇಳಿಕೊಂಡು ಬರುತ್ತಾರೆ. ಇಂಥವರಿಗೆ ನನ್ನದೊಂದು ಸಲಹೆ. ದೈನ್ಯತೆಯನ್ನು ಮೀರಿ ಸಂಗೀತವಿದೆ. ಅದರಲ್ಲಿ ಬರಿಯ ಸಂತೋಷವಿದೆ. ಉದಾಹರಣೆಗೆ ಹಂಸಲೇಖರ ಹಾಡುಗಳನ್ನು ಕೇಳಿ, ಸಾಧು ಕೋಕಿಲರವರ ಹಲವು ಹಾಡುಗಳನ್ನು ಕೇಳಿ. (ಹೌದು, ಸಾಧು ಅವರು ಕೆಲವು ಹಾಡುಗಳನ್ನು ಅಚ್ಚು ಇಳಿಸುತ್ತಾರೆ. ಆದರೂ ಅವರ ಹಲವು ಹಾಡುಗಳಲ್ಲಿ ಆನಂದವಿದೆ, ಉದಾ: ಗಂಡುಗಲಿಯ ಹಾಡುಗಳು, ಸವ್ಯಸಾಚಿಯ ಹಾಡುಗಳು, ನೋ. ೧ ಚಿತ್ರದ ಹಾಡುಗಳು, ಇಂತಿ ನಿನ್ನ ಪ್ರೀತಿಯ ಹಾಗು ದೇವ್ರು ಚಿತ್ರದ ಹಾಡುಗಳು) ಕೇಳಿ ನೋಡಿ. ಈ ಹಾಡುಗಳಲ್ಲಿ ದೈನ್ಯತೆ ಇಲ್ಲ. ಹಾಗೆಂದು ಇವರಾರೂ ದೈನ್ಯತೆಯ ಹಾಡುಗಳನ್ನು ಮಾಡಿದವರೇ ಅಲ್ಲವೆಂದಲ್ಲ. ಅತಿ ವಿರಳ. ಇಲ್ಲವೆಂದೇ ಹೇಳಬಹುದು. ವಯ್ಯಕ್ತಿಕವಾಗಿ ನನಗೆ ಇಂತಹ ಹಾಡುಗಳು ಇಷ್ಟವಾಗುತ್ತವೆ.

ಸರಿ. ಸೋನು (ನೋಸು??) ನಿಗಮರ ಅಭಿಮಾನಿಗಳೇ, ಅನಿಸಿಕೆ ಬರೆಯಲು ತಯಾರಾ?

Tuesday, August 04, 2009

ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಪುರಾಣ...

ಒಂದ್ ರಾತ್ರಿ ಬೆಂಗಳೂರಲ್ಲಿರೋ ಎಲ್ಲಾ ಪ್ರತಿಮೆಗಳು ವಿಧಾನ ಸೌಧದ ಎದುರು ಹಾಜರಾದವು. ರಾತ್ರಿ ಸುಮಾರು ಗಂಟೆ ಇರಬಹುದೋ ಏನೋ? ಒಬ್ಬೊಬ್ಬರೆ ಮಾತಾಡಕ್ಕೆ ಶುರು ಹಚ್ಚಿದವು.

ಮೊದಲಿಗೆ ಆನಂದ್ ರಾವ್ ಸರ್ಕಲ್ ಬಳಿಯ ಗಾಂಧಿ ಪ್ರತಿಮೆ ಮಾತು ಶುರು ಮಾಡಿತು.
ಗಾಂಧಿ: ಯಪ್ಪಾ! ಸಾಕಪ್ಪಾ! ಸಾಕು! ಬಿಸಿಲಲ್ಲಿ ಕೂರೋದೂ ಸಾಕು... ಮೈಯೆಲ್ಲಾ ಉರಿಯೋದು ಸಾಕು.
ಎಲ್ಲಾ ಪ್ರತಿಮೆಗಳು: ಹೌದು ಬಾಪು! ನಮಗಂತೂ ಬಿಸಿಲಲ್ಲಿ ನಿಂತು ನಿಂತೂ ಸಾಕಾಗ್ಹೊಯ್ತು.
ಗಾಂಧಿ: ಸಧ್ಯ! ಈಗ ಮೇಲೆ ಒಂದ್ ಫ್ಲೈ-ಓವರ್ ಇದೇ. ಇಲ್ಲಾಂದ್ರೆ ಮಧ್ಯಾಹ್ನ ಗಂಟೆ ಮೇಲೂ ಬಿಸಿಲಲ್ಲೇ ಕೂರ್ಬೇಕಾಗ್ತಿತ್ತು. ಇನ್ನೊಂದ್ ಒಳ್ಳೆ ಕೆಲಸ ಏನಪ್ಪಾ ಮಾಡಿದ್ರು ಅಂದ್ರೆ ಮುಂಚೆ, ಹಾಳು ರೇಸ್ ಕೋರ್ಸ್ ಗೇ ಮುಖ ಮಾಡಿ ಇಟ್ಟಿದ್ದರು. ಈಗ ಅದರ ವಿರುದ್ದ ಇಟ್ಟಿದ್ದಾರೆ.

ಅಷ್ಟರಲ್ಲಿ ಕಿತ್ತೂರು ಚೆನ್ನಮ್ಮ ತನ್ನ ನೋವು ಹೇಳಿಕೊಂಡಳು.
ಚೆನ್ನಮ್ಮ: ನಂಗೂ ಒಂದ್ ಪ್ರತಿಮೆ ಮಾಡ್ಸಿದ್ದಾರೆ ಟೌನ್ ಹಾಲ್ ಪಕ್ಕ. ಯುದ್ಧ ಮಾಡೋವಾಗ ಸತ್ತರು ಅಂತ ಕುದುರೆ ಮೇಲೆ ಕೂಡ್ಸಿ ಅದರ ಎರಡೂ ಕಾಲು ಮೇಲ ಎತ್ತಿದ್ದಾರೆ. ರೀತಿ ಕೂತೂ ಕೂತೂ ನನ್ನ ಬೆನ್ನೆಲ್ಲಾ ನೋವು. ಸಾಲದ್ದಕ್ಕೆ ಕೈಯಲ್ಲಿರೋ ಕತ್ತಿ ಕೂಡ ಮೇಲೆತ್ಹ್ಸಿದ್ದಾರೆ. ಕೈ ಕೂಡ ನೋವು.

ವಿಧಾನ ಸೌಧದ ಮುಂದೆ ಇರೋ ಅಂಬೇಡ್ಕರ್ ಪ್ರತಿಮೆ ಈಗ ಮಾತು ಶುರು ಹಚ್ಚಿತು.
ಅಂಬೇಡ್ಕರ್: ಅಮ್ಮ! ನೀವಾದ್ರೂ ಕುದುರೆ ಮೇಲೆ ಕುಳಿತಿರುತ್ತೀರಾ. ನಾನು ಬಡಪಾಯಿ. ನನ್ನನ್ನು ನಿಲ್ಲಿಸಿ ಎಡಗೈ ಗೆ ಒಂದು ಪುಸ್ತಕ, ಬಲಗೈಯನ್ನು ಮೇಲೆತ್ತಿ ಎಲ್ಲಿಗೋ ಬೆರಳು ಮಾಡುವಂತೆ ಮಾಡಿದ್ದಾರೆ. ಇಡೀ ದಿನ ಬಿಸಿಲಲ್ಲಿ ಕೈಯನ್ನು ರೀತಿ ಇಟ್ಟುಕೊಂಡು ನನಗಂತೂ ರೋಸಿ ಹೋಗಿದೆ.

ಪಕ್ಕದಲ್ಲೇ ಇದ್ದ ಸೆಂಟ್ರಲ್ ಬಳಿ ಇದ್ದ ರಾಜೀವ್ ಗಾಂಧಿ ಪ್ರತಿಮೆ ಅದಕ್ಕೆ ಹೂಂಕರಿಸಿತು.
ರಾಜೀವ್ ಗಾಂಧಿ: ಅದೇ ಮತ್ತೆ! ನಮ್ಮದು ಅದೇ ಪರಿಸ್ಥಿತಿ.

ಈಗ ಕಾರ್ಪೋರೇಷನ್ನಿನ ಕೆಂಪೇಗೌಡರು ಮಾತನಾಡಿದರು.
ಕೆಂಪೇಗೌಡರು: ನಮ್ಮದು ಬೇರೆಯದೇ ರಗಳೆ. ದಿನಕ್ಕೆ ಮೂರು ನಾಲ್ಕು ಹಕ್ಕಿಗಳು ನಮ್ಮ ತಲೆ, ಹೆಗಲಮೇಲೆ ಕುಳಿತುಕೊಂಡು ಅಸಹ್ಯ ಮಾಡುತ್ತವೆ. ಇದನ್ನೆಲ್ಲಾ ಯಾರಿಗೆ ಹೇಳೋದು? ವಾರಕ್ಕೋ ತಿಂಗಳಿಗೋ ಬರುವ ಮಳೆಗೆ ಕಾಯಬೇಕು. ಕಾರ್ಪೋರೇಷನ್ನಿನವರಂತೂ ನಮಗೆ ಸ್ನಾನ ಮಾಡಿಸುವುದಿಲ್ಲ. ಕೈಯಲ್ಲಿ ಕತ್ತಿ ಇದ್ದರೇನು ಪ್ರಯೋಜನ? ಹಕ್ಕಿಗಳನ್ನು ಓಡಿಸಲಾದೀತೇ?

ಎಲ್ಲರೂ ಒಗ್ಗೂಡಿದರು: ನಮ್ಮೆಲ್ಲರ ಗೋಳಿನಲ್ಲೂ ರಗಳೆ ಇದ್ದ್ದಿದ್ದೇ.

ಚಾಲುಕ್ಯ ಹೋಟೆಲಿನ ಬಳಿಯಿರುವ ವೃತ್ತ ಬಸವಣ್ಣನವರು ಈಗ ಮಾತನಾಡಿದರು.
ಬಸವಣ್ಣನವರು: ಇರುವುದರಲ್ಲಿ ನಮ್ಮ ಪರಿಸ್ಥಿತಿಯೇ ಮೇಲೆನ್ನಿಸುತ್ತಿದೆ. ತಂಪಾದ ನೆರಳಿದೆ. ಕುಳಿತುಕೊಳ್ಳಲು ಕುದುರೆಯಿದೆ. ರಣರಂಗದಲ್ಲಲ್ಲದಿದ್ದರೂ, ಯುದ್ಧ ಮಾಡುವಾಗ ಆದ ಗಾಯದಿಂದ ಸತ್ತೆನೆಂದು ಕುದುರೆಯ ಒಂದು ಕಾಳಿ ಮೇಲಿದೆ. ಆದರೆ ಅದರಿಂದ ನನ್ನ ಬೆನ್ನಿಗೇನು ನೋವಿಲ್ಲ. ಹಕ್ಕಿಗಳ ತಾಪತ್ರಯ ಬಿಟ್ಟರೆ, ಬೇರೆ ಯಾವ ತೊಂದರೆಯೂ ಇಲ್ಲವೆನ್ನಿಸುತ್ತದೆ.

ಗಾಂಧಿನಗರದ ಕೆಂಪೇಗೌಡ ವೃತ್ತದಲ್ಲಿರುವ ಡಾ|| ರಾಜಕುಮಾರ್ ಪ್ರತಿಮೆ ಈಗ ಮಾತನಾಡಿತು.
ರಾಜಕುಮಾರ್: ನೀವೊಬ್ಬರೇ ನೋಡಿ ಒಳ್ಳೆ ಮಾತಾಡ್ತಾ ಇರೋದು. ಎಷ್ಟೇ ಆಗ್ಲಿ ವಚನಕಾರರಲ್ಲವೇ? ನಮ್ಮ ಪರಿಸ್ಥಿತಿ ಯಾರಿಗೂ ಬೇಡ. ನಿಮಗೆಲ್ಲರಿಗೂ ನಿಮ್ಮ ಅಂಗಾಂಗ ನೆಟ್ಟಗಿದೆ. ನಮಗೆ ಕೈ ಕಾಲಿರಲಿ, ದೇಹವೇ ಇಲ್ಲ. ಎದೆಯ ಮಟ್ಟಕ್ಕೆ ಮಾತ್ರ ಪ್ರತಿಮೆ. ನಾವೇನು ಮಾಡಬೇಕು?

ವಿಧಾನ ಸೌಧದ ಮತ್ತೊಂದು ಪ್ರತಿಮೆ, ಡಿ. ದೇವರಾಜ್ ಅರಸ್ ಸರದಿ ಈಗ:
ನಮ್ಮ ಕಾಲದಲ್ಲಿ ಬೆಂಗಳೂರನ್ನು ಉದ್ಯಾನನಗರಿ ಎಂದು ಬೆಳೆಸಿದ್ದೆವು. ಎಲ್ಲೇ ಹೋಗಲಿ, ಎಲ್ಲವೂ ತಂಪು ತಂಪು. ಈಗ ಅದೇನೋ ಹಾಳಾದ . ಟಿ ಅಂತೆ. ಅದು ಬಂದ ಮೇಲೆ ಸರ್ವನಾಶವಾಯಿತು. ಉದ್ಯಾನನಗರಿ, ಅದ್ವಾನನಗರಿಯಾಯಿತು. ಬೆಂಗಳೂರಿನ ತಾಪಮಾನ ವರ್ಷೆ ವರ್ಷೇ ಏರುತ್ತಿದೆ ವಿನಃ ಇಳಿಯುವುದು ಕನಸಿನ ಮಾತಾಯಿತು. ನಮ್ಮ ಪ್ರತಿಮೆಗಳಿಗೂ ನೆರಳಿಲ್ಲ. ಈಗ ನಮ್ಮ ಬೆಂಗಳೂರಿನಲ್ಲಿ ಇನ್ನ್ಯಾವುದೋ ತಮಿಳು ಕವಿಯ ಪ್ರತಿಮೆ ಪ್ರತಿಷ್ಟಾಪಿಸುವುದಕ್ಕೆ ದೊಡ್ಡ ವಾಗ್ವಾದವೇ ನಡೆಯುತ್ತಿದೆಯಂತೆ. ನಮ್ಮ ಗೋಳಿನಲ್ಲಿ ಇನ್ನೊಬ್ಬರು ಬಂದು ಸೇರಿಕೊಂಡರು.


ಕೇಳಿದಿರಲ್ಲ ಈ ಪ್ರತಿಮೆಗಳ ಗೋಳು? ಇವು ಕೇವಲ ಸ್ಯಾಂಪಲ್ ಅಷ್ಟೆ. ಇನ್ನೂ ಬಹಳವಿರಬಹುದು ಇವರ ಗೋಳುಗಳು.

ಈಗ ವಿಚಾರಕ್ಕೆ ಬರೋಣ.

ಈ ತಮಿಳು ಕವಿ ತಿರುವಳ್ಳುವರ್ ಅವರ ಪ್ರತಿಮೆ, ಬೆಂಗಳೂರಿನಲ್ಲಿ ಬೇಕೇ ಬೇಡವೇ?

ಬೇಕು ಎನ್ನುವವರ ವಾದ ನೋಡೋಣ.
೧. ತಿರುವಳ್ಳುವರ್ ತಮಿಳಿನ ಶ್ರೇಷ್ಠ ಜ್ಞಾನಿ, ದಾರ್ಶನಿಕ, ಸಾಹಿತಿ ಇತ್ಯಾದಿ ಇತ್ಯಾದಿ. ಅಂತಹ ಮಹಾ ಪುರುಷರ ಪ್ರತಿಮೆ, ಬೆಂಗಳೂರಿನಲ್ಲಿ ಏಕೆ ಇರಬಾರದು?
೨. ಕನ್ನಡಿಗರು ಸಹಿಷ್ಣುಗಳು. ಅವರು ಕನ್ನಡಿಗರು, ತಮಿಳರು, ತೆಲುಗರು, ಉತ್ತರ ಭಾರತೀಯ, ಹೀಗೆ ಭೇದ ಭಾವ ಮಾಡುವುದಿಲ್ಲ. ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡುತ್ತಾರೆ. ಬೆಂಗಳೂರಿನಲ್ಲಿ ವಳ್ಳುವರ್ ರ ಪ್ರತಿಮೆ ಸ್ಥಾಪಿಸಿದರೆ ಕನ್ನಡಿಗರ ಸಹಿಷ್ಣುತೆ ಮೆರೆದಂತಾಗುತ್ತದೆ.
೩. ತಮಿಳುನಾಡಿನ ಜೊತೆ, ಹೊಗೆನೇಕಲ್ ಹಾಗು ಕಾವೇರಿ ವಿವಾದ ಒಂದು ಪ್ರತಿಮೆ ನೆಡುವುದರಿಂದ ಪರಿಹಾರವಾಗುವುದೆಂದರೆ, ಎಲ್ಲರ ಒಳಿತಿಗೆ ಪ್ರತಿಷ್ಟಾಪಿಸುವುದರಲ್ಲಿ ತಪ್ಪೇನು ಕಾಣಿಸುವುದಿಲ್ಲ.
೪. ಕನ್ನಡಕ್ಕೆ ಅನ್ಯಭಾಷಿಗರಿಂದ ತಕ್ಕ ಮಟ್ಟಿಗೆ ಕೊಡುಗೆಯಿದೆ (ತಮಿಳರು ಕೂಡ ಇದರಲ್ಲಿ ಸೇರಿದ್ದಾರೆ, ಉದಾ: ಮಾಸ್ತಿ, ಟಿ.ಪಿ.ಕೈಲಾಸಂ, ಮರಾಠಿಯ ದ. ರಾ. ಬೇಂದ್ರೆ). ಹಾಗಾಗಿ ವಳ್ಳುವರ್ ಪ್ರತಿಮೆ ಬರಲಿ. ಯಾಕೆ ಬೇಡ?

ಈಗ ಬೇಡ ಎನ್ನುವವರ ವಾದ ನೋಡೋಣ.
೧. ವಳ್ಳುವರ್, ತಮಿಳಿನ ಶ್ರೇಷ್ಠ ದಾರ್ಶನಿಕನಾದರೇನಂತೆ? ಕನ್ನಡ ಅಥವಾ ಕರ್ನಾಟಕಕ್ಕೆ ಅವರ ಕೊಡುಗೆಯೇನಾದರು ಇದೆಯೇ? ಅಂದ ಮೇಲೆ ಅವರ ಪ್ರತಿಮೆಯನ್ನು ಕರ್ನಾಟಕದಲ್ಲಿ ಏಕೆ ನೆಡಬೇಕು?
೨. ಸ್ವಾಮಿ, ಕನ್ನಡಿಗರು ಸಹಿಷ್ಣುಗಳು, ಎಂದು ಕನ್ನಡಿಗರನ್ನು ತುಳಿದಿದ್ದು ಸಾಕು. ಕನ್ನಡಿಗರ ಸಹಿಷ್ಣುತೆಗೆ ಆ ಕಾಲದಿಂದಲೂ ಅನ್ಯರು ಪೆಟ್ಟು ಕೊಡುತ್ತಲೇ ಬಂದಿದ್ದಾರೆ. ಇನ್ನು ಮೇಲೆ ಹಾಗಾಗಬಾರದು. ಕನ್ನಡಿಗರು ಅತಿಯಾಗಿ ಸಹಿಷ್ಣುಗಳಾಗಿದ್ದಕ್ಕೇ ಅವರಿಗೆ ಈ ಪರಿಸ್ಥಿತಿ ಬಂದಿರುವುದು. ತಮ್ಮ ನಾಡಿನಲ್ಲಿ ತಮ್ಮ ಭಾಷೆಯನ್ನೂ ಮಾತನಾಡುವುದಕ್ಕೆ ಅಂಜುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೇನಾಗಬೇಕು? ಆದ್ದರಿಂದ ಕನ್ನಡಿಗರೇ, ಎಚ್ಚೆತ್ತುಕೊಳ್ಳಿ.
೩. ಇದು ತಮಿಳರದ್ದೆ ಕುತಂತ್ರ. ಸಮಸ್ಯೆಯ ಹಿನ್ನೆಲೆಯಲ್ಲಿ ತಮ್ಮ ಬೇಳೆಕಾಳು ಬೇಯಿಸಿಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿರುವ, ಅದರಲ್ಲೂ ಬೆಂಗಳೂರಿನಲ್ಲಿರುವ ತಮಿಳರ ಪರವಾಗಿ ಈ ರೀತಿಯಾಗಿ ತ.ನಾ ಸರಕಾರ ಹುನ್ನಾರ ಮಾಡುತ್ತಿದೆ. ಇದಕ್ಕೆ ಕರ್ನಾಟಕ ಬಲಿಯಾಗಬಾರದು.
೪. ಅನ್ಯಭಾಶಿಗರೆಂದು ಇವರು ಹೇಳುವ ಜನರು, ತಾವೆಂದು ಅನ್ಯಭಾಷಿಗರು ಎಂದು ಹೇಳಿಕೊಂಡಿಲ್ಲ. ಅವರೆಲ್ಲರೂ ತಾವು ಕನ್ನಡಿಗರೆಂದೇ ಮೆರೆದಿದ್ದಾರೆ. ಈ ರೀತಿ ಮಾತನಾಡಿ ಅವರ ಗೌರವಕ್ಕೆ ಧಕ್ಕೆ ಉಂಟುಮಾಡುತ್ತಿದ್ದೀರಿ. ಇದನ್ನು ನಿಲ್ಲಿಸಿ.
೫. ಸಮತೋಲನ ಮಾಡಲು ತಮಿಳುನಾಡಿನ ಚೆನ್ನೈ ಅಲ್ಲಿ ನಮ್ಮವನೇ ಆದ ಸರ್ವಜ್ಞ ಕವಿಯ ಪ್ರತಿಮೆಯನ್ನು ಸ್ಥಾಪಿಸುತ್ತೆವೆಂದು ಹೇಳಿ, ಅದನ್ನು ಚೆನ್ನೈ ಇಂದ ಸುಮಾರ್ ಮೈಲಿ ದೂರವಿರುವ ಯಾವುದೋ ಕೊಂಪೆಯಲ್ಲಿ ಪ್ರತಿಷ್ಠಾಪಿಸುತ್ತಿದ್ದೀರಿ. ಇದು ಎಲ್ಲಿಯ ನ್ಯಾಯ?

ಹೀಗೆ ಮುಂದುವರೆಯುತ್ತಾ ಸಾಗುತ್ತದೆ ಎರಡೂ ಕಡೆಗಿನ ಮಾತುಕತೆ.

ಈಗ ನನ್ನ ನಿಲುವಿಗೆ ಬರೋಣ.

ವೈಯಕ್ತಿಕವಾಗಿ ನನಗೆ ಆ ಪ್ರತಿಮೆಯೋಳಗಿರುವ ಎಲ್ಲಾ ಮಹಾನುಭಾವರ ಬಗ್ಗೆ ಗೌರವ ಇದ್ದೆ ಇದೆ. (ಕೆಲವರ ಬಗ್ಗೆ ಭಿನ್ನಾಭಿಪ್ರಾಯವೂ ಉಂಟು. ಇಲ್ಲಿ ಅದು ಅಪ್ರಸ್ತುತ). ನನ್ನ ನಿಲುವೇನೆಂದರೆ, ಮಹಾನುಭಾವರಿಗೆ ಪ್ರತಿಮೆ ಮಾಡಿದರೆ ಅವರಿಗೆ ಗೌರವ ಕೊಟ್ಟ ಹಾಗೆ ಎನ್ನುವುದು ಸುಳ್ಳು. ಏನೇ ಗೌರವವಿರಲಿ, ಅದು ನಿಮ್ಮ ಮನಸ್ಸಿನಲ್ಲಿರಬೇಕು. ಮನಸ್ಸಿನಲ್ಲಿ ಯಾವ ರೀತಿಯ ಗೌರವವು ಇಲ್ಲದೆ, ಬಾಹ್ಯವಾಗಿ ಈ ರೀತಿ ಪ್ರತಿಮೆಗಳಾಗಲಿ, ಸ್ಮಾರಕಗಳಾಗಲಿ ಎಷ್ಟೇ ಕಟ್ಟಿದರೂ ಏನೂ ಪ್ರಯೋಜನವಿಲ್ಲ.

ಅಲ್ಲದೇ, ಎಲ್ಲರಿಗೂ ಪ್ರತಿಮೆ ಕಟ್ಟುತ್ತಾ ಹೋದರೆ, ಅದನ್ನು ಎಲ್ಲಿ ಇಡುತ್ತೀರಿ? ಕೊನೆಗೊಂದು ದಿನ ಪ್ರತಿಮೆಗಳಿಗೆ ಜಾಗವೇ ಇರುವುದಿಲ್ಲ.

ಇನ್ನು ಕೆಲವರಿಗೆ ಪ್ರತಿಮೆಗಳು ಬೇಕು. ತಮ್ಮ ಮುಂದಿನ ಜನಾಂಗಕ್ಕೆ ಮಾದರಿಯಾಗಲಾದರೂ ಅವು ಬೇಕು ಎನ್ನುತ್ತಾರೆ. ಹೋಗಲಿ. ಹಾಗೆ ಎಂದಿಟ್ಟುಕೊಳ್ಳೋಣ. ಬೆಂಗಳೂರಿನಲ್ಲೇ, ಸರ್ವಜ್ಞನ ಪ್ರತಿಮೆ, ಯಾವ ಪ್ರಮುಖ ಜಾಗದಲ್ಲಿದೆ? ಪಂಪ, ರನ್ನ, ಜನ್ನ, ಪೊನ್ನ, ಕುಮಾರವ್ಯಾಸ ಇವರನ್ನೆಲ್ಲಾ ಎಲ್ಲಿ ಪ್ರತಿಷ್ಠಾಪಿಸಿದ್ದಾರೆ? ಹೋಗಲಿ. ಅವರೆಲ್ಲಾ ಹಳೆಯ ಕವಿಗಳಾದರು. ನಮ್ಮ ಪಂಜೆ ಮಂಗೇಶರಾಯರು, ಗೋವಿಂದ ಪೈಗಳು, ಗೊರೂರು ರಾಮಸ್ವಾಮಿ ಅಯ್ಯಂಗಾರರು, ಕುವೆಂಪು, ಬೀ. ಎಂ. ಶ್ರೀ, ದ. ರಾ. ಬೇಂದ್ರೆ, ಮಾಸ್ತಿ, ಇವರಿಗೆಲ್ಲ ಎಲ್ಲಿ ಜಾಗ ಕೊಟ್ಟಿದ್ದಾರೆ?

ಮೊದಲು ಇವರಿಗೆಲ್ಲಾ ಪ್ರತಿಮೆ ಮಾಡಿಸಿ ಆಮೇಲೆ ವಳ್ಳುವರ್, ನಾಣಯ್ಯ, ಕಬೀರ, ಇನ್ನೆಲ್ಲಾರಿಗೂ ಪ್ರತಿಮೆ ಮಾಡಿಸಲಿ. ಏನಂತೀರಾ?

Saturday, June 06, 2009

ಸಂಸ್ಕೃತ ವೇದ ವಿಶ್ವವಿದ್ಯಾಲಯ ಏಕೆ ಬೇಡ?

ನಮ್ಮ ಕರ್ನಾಟಕ ಸರಕಾರ ರಾಜ್ಯದಲ್ಲಿ ಒಂದು ಸಂಸ್ಕೃತ ವೇದ ವಿಶ್ವವಿದ್ಯಾಲಯ ತೆರೆಯಬೇಕೆಂಬ ನಿರ್ಧಾರ ಕೈಗೊಂಡಿದೆ. ನಿಜಕ್ಕೂ ವೈಯ್ಯಕ್ತಿಕವಾಗಿ ನನಗೆ ಈ ನಿರ್ಧಾರ ಸಂತಸ ತಂದಿದೆ.

ಇನ್ನೂ ಹೆಚ್ಚಿನ ಆನಂದ ಎಂದರೆ ನಮ್ಮ ರಾಜ್ಯಪಾಲರು ಇದಕ್ಕೆ ತಮ್ಮ ಅನುಮೋದನೆ ಕೊಟ್ಟಿದ್ದಾರೆ.

ಆದರೆ ನಮ್ಮ ಕೆಲ ಬಂಡಾಯ ಸಾಹಿತಿಗಳು ಇದಾಗುವುದು ಬೇಡ ಎಂದು ತಕರಾರು ಎತ್ತಿದ್ದಾರೆ. ಅವರ ನಿಲುವೇ ನನಗೆ ಅಷ್ಟಾಗಿ ಅರ್ಥವಾಗುತ್ತಿಲ್ಲ.

ಪ್ರಜಾವಾಣಿಯಲ್ಲಿ ಒಂದು ವಾರದ ಹಿಂದೆ ಪ್ರಕಟವಾದ ಡಾ|| ಚಂದ್ರಶೇಖರ ಕಂಬಾರ ರ ಲೇಖನ ಓದಿ ಜನ ಯಾಕೆ ಈ ರೀತಿ ಯೋಚಿಸುತ್ತಾರೆ ಎಂದು ಖೇದವಾಯಿತು. ಇದನ್ನೇ ಅವರ ಹಲವಾರು ಮಿತ್ರರೂ (ಜೀಎಸ್ಸ್ಎಸ್ಸ್, ಚೆನ್ನವೀರ ಕಣವಿ, ಎಂ ಎಂ ಕಲ್ಬುರ್ಗಿ, ಕೆ. ಎಸ್. ಭಗವಾನ್, ಹಂ. ಪಾ. ನಾಗರಾಜಯ್ಯ, ಇನ್ನೂ ಹಲವರು...) ಇಂದಿನ ಪ್ರಜಾವಾಣಿಯ ಕಂತಿನಲ್ಲಿ ಪ್ರತಿಧ್ವನಿಸಿದ್ದಾರೆ. ಈ ಬಂಡಾಯ ಸಾಹಿತಿಗಳು ಎತ್ತುವ ಮಾತುಗಳೇನೆಂದರೆ:

೧. ಕನ್ನಡಕ್ಕೆ ಕಳೆದ ವರ್ಷವಷ್ಟೇ ಶಾಸ್ತ್ರೀಯ ಭಾಷೆಯ ಸ್ಥಾನ ದೊರೆತಿದೆ. ಕನ್ನಡ ಪರ ಕೆಲಸ ಮಾಡುವುದು ಬಿಟ್ಟು ಸಂಸ್ಕೃತದ ಉದ್ಧಾರದಲ್ಲಿ ಸರಕಾರ ತೊಡಗಿದೆ.

೨. ಸಂಸ್ಕೃತ ಸತ್ತ ಭಾಷೆ. ಅದರ ಅಧ್ಯಯನ ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ. ಸರಕಾರ ಜನರ ದುಡ್ಡು ಪೋಲು ಮಾಡುತ್ತಿದೆ.

೩. ಸಂಸ್ಕೃತ ಬರೀ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾದ ಭಾಷೆ. ಸರ್ಕಾರ ಆ ಸಮುದಾಯಕ್ಕೆ ಪುಷ್ಟಿ ಕೊಡಲು ಈ ರೀತಿ ಮಾಡುತ್ತಿದೆ.

೪.ನಮ್ಮ ಭಾಷೆಯ ಅಕ್ಕ ತಂಗಿಯರಾದ ತುಳು, ಕೊಂಕಣಿಗಳನ್ನು ಉದ್ಧಾರ ಮಾಡುವ ಬದಲು ಈ ನಿರ್ಧಾರವೆಕೆ ತೆಗೆದುಕೊಂಡಿತು?

೫. ಕೆಲವರು ಲ್ಯಾಟಿನ್, ಉರ್ದು, ಪಾಳಿ, ಎಲ್ಲದಕ್ಕೂ ಒಂದೊಂದು ಅಥವಾ ಎಲ್ಲವನ್ನೂ ಒಗ್ಗೂಡಿಸಿ ಒಂದು ಮಿಶ್ರ ವಿಶ್ವವಿದ್ಯಾಲಯ ತೆರೆಯಬೇಕೆಂದು ಆಗ್ರಹಿಸಿದ್ದಾರೆ.

೬. ಭಾರತದಲ್ಲಿ ಈಗಾಗಲೇ ೧೨ ಸಂಸ್ಕೃತ ವಿಶ್ವವಿದ್ಯಾಲಯ ತೆರೆಯಲಾಗಿದೆ. ಇನ್ನೊಂದು ಬೇಕಿತ್ತೆ?

೭. ಬರಿಯ ಸಂಸ್ಕೃತ ವಿಶ್ವವಿದ್ಯಾಲಯ ಮಾಡದೆ ಅದಕ್ಕೆ ವೇದದ ಅಡಿಪತ್ತಿ ಕೊಟ್ಟಿರುವುದು ಎಷ್ಟರ ಮಟ್ಟಿಗೆ ಸರಿ?

ಇನ್ನೂ ಹಲವು ಅಂಶಗಳು ಇವೆ. ಇವು ಮುಖ್ಯವಾದವು.

ಇವನ್ನು ಒಂದೊಂದಾಗಿ ತೆಗೆದುಕೊಳ್ಳೋಣ.

ಮೊದಲನೆಯದು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ದೊರಕಿದೆ. ಅದರ ಪರವಾಗಿ ಕೆಲಸ ಮಾಡುವುದು ಬಿಟ್ಟು ಸಂಸ್ಕೃತದ ಅಡಿಯಾಳಾಗಬೇಕಾ? ಯಾಕೆ ಈ ರೀತಿ ಯೋಚಿಸುತ್ತೀರಾ? ಕನ್ನಡ ದ್ರಾವಿಡ ಭಾಷೆಯಾದರೂ ಸಂಸ್ಕೃತದಿಂದ ಅದು ಪಡೆದಿರುವ ಸಂಪತ್ತು ಅಮೂಲ್ಯ. ಅದನ್ನು ಎರವಲು ಎಂದುಕೊಂಡರೆ ಅದು ನಿಮ್ಮ ತಪ್ಪು. ಕನ್ನಡ ಸ್ವತಂತ್ರ ಭಾಷೆ ಎಂದು ನಾನೂ ಒಪ್ಪುತ್ತೇನೆ ಹಾಗು ಪ್ರತಿಪಾದಿಸುತ್ತೇನೆ, ಆದರೆ ಸಂಸ್ಕೃತದಿಂದ ಅದು ಸಾಕಷ್ಟು ಪ್ರೇರಿತವಾಗಿದೆ ಎಂದೂ ನಾನು ಮಾತ್ರ ಅಲ್ಲ, ಎಲ್ಲ ಕನ್ನಡಾಭಿಮಾನಿಯೂ ಒಪ್ಪಲೇಬೇಕಾದ ಮಾತು. ಸಂಸ್ಕೃತ ಭಾರತೀಯ ಭಾಷೆಗಳ ತಾಯಿ. ಅದರಿಂದ ಪ್ರೇರಿತರಾಗದ ಭಾಷೆಯೇ ಇಲ್ಲ. ಭಾಷೆಯ ಬೆಳವಣಿಗೆಯ ರೀತಿಯೇ ಹಾಗೆ. ಈ ಸರಕಾರ ಕನ್ನಡ ಪರ ಕೆಲಸ ಮಾದುತ್ತಿಲ್ಲವೆನ್ದಾದಲ್ಲಿ ಅದನ್ನು ಖಂಡಿಸಬೇಕೆ ಹೊರತು ಇದು ಸಂಸ್ಕೃತ ವೇದ ವಿ. ವಿ.ಯೊಂದನ್ನು ತರುತ್ತಿದೆ ಎಂದರೆ ಅದಕ್ಕೆ ಅಡ್ಡಿ ಮಾಡುವುದು ಕನ್ನಡತನವಲ್ಲ.

ಎರಡನೆಯದಾಗಿ, ಸಂಸ್ಕೃತ ಸತ್ತ ಭಾಷೆ. ಅದರ ಅಧ್ಯಯನದಲ್ಲಿ ಯಾವುದೇ ಉಪಯೋಗವಿಲ್ಲ. ಜನರ ಹಣ ಸರ್ಕಾರ ಪೋಲು ಮಾಡುತ್ತಿದೆ. ಸಂಸ್ಕೃತ ಸತ್ತದ್ದೇ ಆದರೆ, ಸಾಯಿಸಿದ್ದು ಯಾರು? ಅದನ್ನು ಮಾತನಾಡದ ನಾವು. ಯಾವುದೋ ಒಂದು ಶ್ಲೋಕದಲ್ಲಿ ಸಂಸ್ಕೃತವನ್ನು ಸರಿಯಾಗಿ ಉಚ್ಚಾರ ಮಾಡದಿದ್ದರೆ ಅವನು ನರಕಕ್ಕೆ ಹೋಗುತ್ತಾನೆ ಎನ್ನುವ ಮಾತನ್ನು ಕಟ್ಟಿಕೊಂಡು ಸಾಮಾನ್ಯರು ಅದನ್ನು ಸರಳಗೊಳಿಸಿ ಪ್ರಾಕೃತ ಎಂದರು. ಅದನ್ನೇ ಸ್ವಲ್ಪ ಬದಲಾಯಿಸಿ ಪಾಳಿ ಮಾಡಿದರು. ಹೀಗೆ ಸಂಸ್ಕೃತ ಹಲವು ಕವಲು ಒಡೆದು ಹಲವು ಭಾಷೆಗೆ ದಾರಿ ಮಾಡಿಕೊಟ್ಟಿತು. ಆ ಶ್ಲೋಕದ ಭಾವ, ಉಚ್ಚಾರ ಸರಿಯಾಗಿರಬೇಕು ಎಂದು ಸಾರುವುದಿತ್ತೇ ಹೊರತು ನರಕಕ್ಕೆ ಹೋಗುವುದಲ್ಲ. ಸಾಮನ್ಯ ಜನರು ಇದನ್ನೇ ತಪ್ಪಾಗಿ ತಿಳಿದು ಅದನ್ನು ಉಪಯೋಗಕ್ಕೆ ಬಾರದ ಭಾಷೆಯನ್ನಾಗಿ ಮಾಡಿಬಿಟ್ಟರು. ಸಂಸ್ಕೃತ ಸತ್ತ ಭಾಷೆಯಾದರೆ, ನಮ್ಮದೇ ಕರ್ನಾಟಕದಲ್ಲಿ ಇರುವ ಮತ್ತೂರಿನಲ್ಲಿ ಮಾತನಾಡುವ ಭಾಷೆಗೆ ಏನೆಂದು ಹೇಳುತ್ತಾರೆ?

ಸಂಸ್ಕೃತದ ಅಧ್ಯಯನದಲ್ಲಿ ಯಾವುದೇ ಉಪಯೋಗವಿಲ್ಲ ಎನ್ನುವವರು, ಸಂಸೃತವನ್ನು ಮೇಲ್ಪದರದ ಮಟ್ಟಿಗಾದರೂ ತಿಳಿದು ಈ ಮಾತನ್ನಾಡಿದ್ದಾರೆ ಎಂದು ಅನ್ನಿಸುವುದಿಲ್ಲ. ಸಂಸ್ಕೃತದಷ್ಟು ವ್ಯಾಕರಣಬದ್ಧವಾದ ಭಾಷೆ ಈ ಭೂಮಿ ಮೇಲೆ ಇನ್ನೊಂದಿಲ್ಲ. ಅದರ ಒಂದೊಂದು ಪದವೂ ಅರ್ಥಬದ್ಧ, ಪ್ರಮಾಣಬದ್ಧ. ಇಂಗ್ಲೀಷಿನಲ್ಲಿ ನೀವು ಹೇಳುವ ಹಾಗೆ 'Completely Etymological'. ಇದನ್ನು ನೀವು ಯಾವುದೇ ಶಾಸ್ತ್ರಜ್ಞರೊಂದಿಗೆ ಚರ್ಚಿಸಬಹುದು. ಅದರ ಪ್ರತಿಯೊಂದು ಧಾತುವೂ ಪ್ರಮಾಣಬದ್ಧ. ಅದನ್ನು ಕಲಿಯುವುದೂ ಒಂದು ಕಲೆ. ತಿಳಿಯದೆ, ನಮ್ಮದೇ ಭಾಷೆಗೆ ಈ ರೀತಿ ಅಪಮಾನ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಜನರ ತೆರಿಗೆ ಹಣ ಸರ್ಕಾರ ವ್ಯರ್ಥ ಮಾಡುತ್ತಿದೆ ಎನ್ನುವ ಇವರು, ನಮ್ಮ ರಾಜಕಾರಣಿಗಳು ಪೋಲು ಮಾಡುತ್ತಿರುವ ಕೋಟ್ಯಾಂತರ ರುಪಾಯಿಗಳನ್ನು ನೋಡಿಲ್ಲವೇನು? ಅದಕ್ಕೆ ಬಾಯಿ ಮುಚ್ಚಿಕೊಂಡು ಹೇಗೆ ಸುಮ್ಮನಿದ್ದಾರೆ ಇವರು?

ಮೂರನೆಯದಾಗಿ, ಸಂಸ್ಕೃತ ಬರೀ ಒಂದು ಸಮುದಾಯದ ಭಾಷೆ. ಆ ಸಮುದಾಯಕ್ಕೆ ಪುಷ್ಟಿ ಕೊಡಲು ಸರ್ಕಾರ ಈ ರೀತಿಯ ನಿಲುವನ್ನು ತೆಗೆದುಕೊಂಡಿದೆ ಎನ್ನುವ ಮಾತು. ನೇರವಾಗಿ ಬ್ರಾಹ್ಮಣರ ಭಾಷೆಯೇನ್ನಲೂ ಹಿಂಜರಿಯುವ ಇವರನ್ನು ಏನೆನ್ನಬೇಕು? ಅದನ್ನು ಬರಿಯ ಬ್ರಾಹ್ಮಣರ ಭಾಷೆಯನ್ನಾಗಿ ಮಾಡಿದವರು ಯಾರು? ಅದನ್ನು ಉಪಯೋಗಿಸದೆ ಬಿಟ್ಟ (ಅವರೇ ಹೇಳಿಕೊಳ್ಳುವಂತೆ, ಇತರ ಸಮುದಾಯದವರು). ಬ್ರಾಹ್ಮಣರೇನಾದರು ಇವರಿಗೆ ಸಂಸ್ಕೃತ ಉಪಯೋಗಿಸಬೇಡಿ ಎಂದಿದ್ದರೆ? ವೇದ ಉಪನಿಷತ್ತು ಏಕೆ? ರಾಮಾಯಣ ಬರೆದಿದ್ದು ಪೂರ್ವಾಶ್ರಮದಲ್ಲಿ ಶೂದ್ರನಾಗಿದ್ದ (ಬೇಡ) ವಾಲ್ಮಿಕಿಯಲ್ಲವೇ? ರಾಜರೆಲ್ಲರೂ ಸಂಸ್ಕೃತವನ್ನು ಮಾತನಾಡುತ್ತಲಿರಲಿಲ್ಲವೇ? ಮೊದಲೇ ಹೇಳಿದ ಒಂದು ಶ್ಲೋಕದ ಅಪಾರ್ಥದಿಂದ ಸಂಸ್ಕೃತ ಮಾತನಾಡದಿದ್ದರೆ ಅದು ಬ್ರಾಹ್ಮಣರ ತಪ್ಪೇ? ನಾನೇ ವರ್ಣಾಶ್ರಮ ಧರ್ಮದ ಬಗ್ಗೆ ಬರೆದಿರುವ ಅಂಕಣವನ್ನು ತಾವು ಓದಬೇಕೆಂದು ಕೋರುತ್ತೇನೆ. ಅದರ ಎರಡನೆಯ ಭಾಗವು ಇಲ್ಲಿದೆ. ಅದರ ಬಗ್ಗೆ ಇನ್ನೂ ಹಲವು ವಿಚಾರಗಳು ಬರೆಯುವುದಿದೆ. ವರ್ಣಾಶ್ರಮ ಧರ್ಮ ತಪ್ಪು ಎನ್ನುವ ಇವರು, ಈಗ ಪಾಲಿಸುತ್ತಿರುವುದು ಇವರು ಜರಿಯುತ್ತಿದ್ದ ವರ್ಣಾಶ್ರಮವಲ್ಲದೆ ಮತ್ತಿನೇನು? ಅವರು ಹೇಳುವಂತೆ ಮೊದಲು ಬ್ರಾಹ್ಮಣರಿಗೆ ಪ್ರಾಧಾನ್ಯ ಕೊಡುತ್ತಿದ್ದರೆ, ಈಗ ಪರಿಶಿಷ್ಟ ಜಾತಿ ಹಾಗು ಪಂಗಡಗಳಿಗೆ ಮಾನ್ಯತೆ ಸಿಗುತ್ತಿಲ್ಲವೇನು? ಇದರಿಂದ ಏನು ಸಾಧಿಸಿದಂತಾಗುತ್ತದೆ? ಚಕ್ರ ತಿರುಗುತ್ತದೆ. ನಾಳೆ ಇದೇ ವ್ಯವಸ್ಥೆ ಇದ್ದರೆ ಬ್ರಾಹ್ಮಣರು ಇವರು ತಿಳಿದುಕೊಂಡ ರೀತಿಯಲ್ಲಿ ಮೇಲೆ ಬರುವುದರಲ್ಲೂ ಯಾವ ಸಂಶಯವೂ ಇಲ್ಲ. ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡುವ ಬದಲು ಸಮಾಜದ ಯಾವುದೇ ಸಮುದಾಯಕ್ಕೆ ವಿಶೇಷ ಅನುದಾನ ನೀಡಿದರೆ ಆಗುವುದೇ ಹೀಗೆ. ಇದರ ಬಗ್ಗೆ ಇನ್ನೊಂದು ಅಂಕಣದಲ್ಲಿ ಬರೆಯೋಣ. ಇವರು ಏನೇ ಮಾಡಿದರೂ ವರ್ಣಾಶ್ರಮ ಧರ್ಮವನ್ನು ಅಲ್ಲಗಳೆಯಲು ಯಾರಿಂದಲೂ ಸಾಧ್ಯವಿಲ್ಲ (ಹೇಗೆ ಎಂದು ಹೇಳುವುದಕ್ಕೆ ಇನ್ನೊಂದು ಅಂಕಣ ಮೀಸಲು). ಈ ರೀತಿ ಸಂಸ್ಕೃತ ಒಂದು ಪಂಗಡದ ಭಾಷೆ ಎನ್ನುವವರು ತಮ್ಮ ಮೇಲೆ ತಾವೇ ಕೆಸರು ಎರಚಿಕೊಳ್ಳುವವರು ಎನ್ನೋಣವೇ?

ನಾಲ್ಕನೆಯದಾಗಿ ನಮ್ಮ ಇತರ ಭಾಷೆಗಳ ಬಗ್ಗೆ. ಅವನ್ನೂ ಉಧ್ಧಾರ ಮಾಡಲಿ. ನಾವೇನು ಬೇಡ ಎನ್ನುತ್ತೆವೆಯೇ?ಅದರ ಜೊತೆ ಸಂಸ್ಕೃತದಂತಹ ಉಚ್ಚ ಭಾಷೆಯನ್ನೂ ಕಲಿತರೆ ಯಾವ ನಷ್ಟ ಒದಗೀತು?

ಕೆಲವು ಬುದ್ಧಿಜೀವಿಗಳು, ಐದನೇ ಮಾತನ್ನು ಕೇಳುತ್ತಾರೆ. ಅವರಿಗೆ ನಮ್ಮ ಭಾಷೆಯಾವುದೂ ಬೇಡ. ಅವರಿಗೆ ಲ್ಯಾಟಿನ್, ಇಂಗ್ಲಿಷ್, ಉರ್ದು ಎರವಲು ಭಾಷೆಗಳೇ ಪ್ರಾತಃಸ್ಮರಣೀಯ. ಈ ಮಾತಿಗೆ ನಿರ್ಧಾರ ನಿಮಗೇ ಬಿಟ್ಟದ್ದು. ನಾನು ಇನ್ನ್ನು ಹೆಚ್ಚು ವಿಸ್ತಾರವಾಗಿ ಹೇಳಲಾರೆ.

ಆರನೆಯದಾಗಿ ಇನ್ನೊಂದು ಸಂಸ್ಕೃತ ವಿ.ವಿ ಬೇಕಿತ್ತೆ ಎನ್ನುವ ವಿಚಾರ. ಇದ್ದರೆ ತಪ್ಪೇನು? ಕರ್ನಾಟಕದಲ್ಲಿರುವ ಸಂಸ್ಕೃತ ಆಸಕ್ತರು, ಅಧ್ಯಯನಕ್ಕಾಗಿ ಹೊರಗೆಲ್ಲೂ ಓದುವ ಬದಲು ಇಲ್ಲೇ ಓದಲಿ ಎನ್ನುವುದು ಸರ್ಕಾರದ ಅಂಬೋಣ. ತರಕಾರಿಗೆ ಪರವೂರಿಗೆ ಹೋಗುವ ಬದಲು ನಮ್ಮ ಊರಿನಲ್ಲೇ ಒಂದು ಅಂಗಡಿ ಇದ್ದರೆ ಎಷ್ಟು ಚೆನ್ನ ಅಲ್ಲವೇ?

ಕೊನೆಯದಾಗಿ, ಈ ವಿ.ವಿ ಗೆ ವೇದದ ಅಡಿಪಟ್ಟಿ ಬೇಕಿತ್ತೆ ಎಂಬುದು. ಅಲ್ಲ್ರಿ? ಕನ್ನಡ ಅಧ್ಯಯನ ಮಾಡಲು ಕವಿರಾಜಮಾರ್ಗ ಬೇಡ ಎಂದ ಹಾಗಾಯಿತು ಇವರ ವಾದ. ಸಂಸ್ಕೃತದ ವ್ಯಾಕರಣ, ಛಂದಸ್ಸು , ಅಲಂಕಾರ ಎಲ್ಲವೂ ವೇದೊಪನಿಶತ್ತುಗಳಲ್ಲಿ ಇರುವಾಗ, ಬೇರೆ ಏನು ಇಡಬೇಕು? ಸಂಸ್ಕೃತದ ಜೊತೆಗೆ ವೇದವನ್ನೂ ಓದಲಿ ಎನ್ನುವ ಅಂಬೋಣವನ್ನು ಏಕೆ ತಳ್ಳಿಹಾಕಬೇಕು?ವಾದದಲ್ಲಿ ಅಡಗಿರುವ ಸನಾತನ ಸತ್ಯಗಳ ಅನ್ವೇಷಣೆಯನ್ನು ಇದರ ಮೂಲಕ ಏಕೆ ಸಾಧಿಸಬಾರದು? ನಮ್ಮ ನೆಲದಲ್ಲಿ ಹುಟ್ಟಿ ಬೆಳೆದ ನಮ್ಮದೇ ಸಂಸ್ಕೃತಿಯನ್ನು ನಾವು ಉದ್ಧಾರ ಮಾಡದೆ ಇನ್ನ್ಯಾರು ಮಾಡಿಯಾರು? ನಮ್ಮ ವೇದಗಳನ್ನು ಹೊರಗಿನ ಜನ ಈ ೫ ದಶಕಗಳಲ್ಲಿ ನಮಗಿಂತ ಹೆಚ್ಚಾಗಿ ಅಧ್ಯಯನ ಮಾಡುವುದು, ನಮಗೆ ನಾಚಿಕೇಡಲ್ಲವೇ? ಸಂಸ್ಕೃತ ವಿ. ವಿ. ಬೇಡ ಎನ್ನುವವರು ಈ ಮಾತನ್ನು ಸ್ವಲ್ಪ ಯೋಚಿಸಬೇಕು. ನಮ್ಮ ಸಂಸ್ಕೃತಿಯಲ್ಲಿರುವಷ್ಟು ಪಾರಮಾರ್ಥಿಕ ಸತ್ಯಗಳು ಬೇರೆ ಯಾವ ಸಂಸ್ಕೃತಿಯಲ್ಲೂ ಸಿಗುವುದಿಲ್ಲವೆನ್ನುವುದು ಉತ್ಪ್ರೇಕ್ಷೆಯಲ್ಲ. (ನಮ್ಮ ಬುದ್ಧಿಜೀವಿಗಳಿಗೆ ಇದು ಉತ್ಪ್ರೇಕ್ಷೆಯಾಗಬಹುದು, ನಾವು ಅದಕ್ಕೇನೂ ಮಾಡಲಾಗುವುದಿಲ್ಲ. ಗೋರ್ಕಲ್ಲ ಮೇಲೆ ಮಳೆ ಸುರಿದಂತೆ.)

ಇಷ್ಟೆಲ್ಲಾ ಮಾತನಾಡುವ ಈ ಬಂಡಾಯ ಸಾಹಿತಿಗಳು, ವೇದ ಉಪನಿಷತ್ತುಗಳ ಕನ್ನಡ ಅವತರಣಿಕೆಗಳನ್ನು ಯಥಾವಥ್ಥ್ ಉಧ್ಧರಿಸಿದ್ದಾರೆಯೇ? ಇಲ್ಲ? ಮಾಡುವ ಕೆಲಸ ಬಹಳವಿದ್ದರೂ, ಈ ರೀತಿ ಟೀಕೆ ಮಾಡುವರೇ ವಿನಃ, ಅದಕ್ಕಾಗಿ ಏನು ಮಾಡಬಹುದು ಎಂದು ಯೋಚಿಸುವವರು ಬಹಳ ಕಡಿಮೆ. ಸ್ವಲ್ಪ ನಾನು ಹೇಳಿರೋ ಮಾತುಗಳನ್ನು ವಿಶ್ಲೇಷಿಸಿ ನೋಡಿ.

ನಾನೇನು ಕನ್ನಡ ವಿರೋಧಿಯಲ್ಲ. ನಾನು ಕನ್ನಡಪರನೇ. ಆದರೆ ಕನ್ನಡ ಪರರೆಂದು ಹೇಳಿಕೊಳ್ಳುವ ಈ ಬಂಡಾಯ ಸಾಹಿತಿಗಳ ಸಂಸ್ಕೃತ ದ್ವೇಷ ಸಲ್ಲದೆನ್ನುವುದು ನನ್ನ ಧೋರಣೆ.

ತಮಗೆ ನಾನು ಉದ್ಧರಿಸಿರುವ ಯಾವುದೇ ಮಾತು ಸರಿಯಿಲ್ಲವೆನ್ನಿಸಿದರೆ ದಯಮಾಡಿ ಸೂಚಿಸಿ. ಸರಿಯಾದಲ್ಲಿ ತಿದ್ದಿಕೊಳ್ಳುತ್ತೇನೆ. ತಪ್ಪಾದಲ್ಲಿ ನನ್ನ ನಿಲುವನ್ನು ಸಮರ್ಥಿಸುತ್ತೇನೆ. ಚರ್ಚೆ ನಡೆಯಲಿ.

Monday, January 19, 2009

ಮತಾಂತರ, ವರ್ಣಾಶ್ರಮ ಧರ್ಮ ಹಾಗು ಅಸ್ಪೃಶ್ಯತೆ. ಭಾಗ ೨

ಒಂದೇ ಅಂಕಣದಲ್ಲಿ ಬರೆಯ ಹೋದ ವಿಚಾರವನ್ನು ಎರಡು ಭಾಗವನ್ನಾಗಿ ಬಿಡಿಸಲು ಬ್ಲಾಗರ್ ನ ಕೆಲವು ಅಡಚಣೆಗಳಾದವು. ವರ್ಣಾಶ್ರಮ ಧರ್ಮದಲ್ಲಿ ತಾರತಮ್ಯ ಹೇಗೆ ಹುಟ್ಟಿರಬಹುದು ಎಂಬ ಪ್ರಶ್ನೆಯಿಂದ ಮುಕ್ತಾಯಗೊಳಿಸಿದ್ದ ಕಳೆದ ಅಂಕಣವನ್ನು ನಮ್ಮ ಕಥೆಯಿಂದ ಮುಂದುವರೆಸೋಣ.

ರೀತಿ ಎಲ್ಲರೂ ತಮ್ಮ ತಮ್ಮ ಕೆಲಸಗಳನ್ನು ಮಾಡಿಕೊಂಡು ಹೋಗ್ತಾ ಇದ್ದರು. ಕಾಲಕ್ರಮೇಣ ಆಯಾ ಕುಟುಂಬಗಳು ಆಯಾ ಕೆಲಸಗಳನ್ನು ಮಾಡುವುದು ಪದ್ಧತಿಯಂತೆ ಬೆಳೆದು ಬಂತು. ನಾಲ್ಕು ಕುಟುಂಬಗಳು ನಾಲ್ಕು ವರ್ಗಗಳಾಗ, ವರ್ಗಗಳೇ ವರ್ಣಗಳೆಂದು ಆಚರಣೆಗೆ ಬಂತು. ಅವೇ:
. ಬ್ರಾಹ್ಮಣರು: ಯಾವುದೇ ಪೂಜೆ ಪುನಸ್ಕಾರಗಳನ್ನು ಮಾಡುವಾಗ ಇವರನ್ನು ಕರೆತರುವುದು. ಆಧ್ಯಾತ್ಮ, ತತ್ವ, ಜಿಜ್ಞಾಸೆ, ರೀತಿ ಹಲವು ವಿಚಾರಗಳ ಏಳಿಗೆಗೆ ಕಾರಣೀಭೂತರು ಕುಟುಂಬದವರು. ಬಹುಪಾಲು ಸಮಾಜದ ವಿಧಿವಿಧಾನಗಳನ್ನು ರೂಪಿಸುತ್ತಿದ್ದವರು ಕ್ಷತ್ರಿಯರಾದರೂ ಪರೋಕ್ಷವಾಗಿ ಅವರಿಗೆ ಸಲಹೆ ಸೂಚನೆ ಕೊಡುತ್ತಿದ್ದವರು ಇವರುಗಳು.
. ಕ್ಷತ್ರಿಯರು: ಸಮಾಜದ ಒಳಿತು ಕೆಡುಕುಗಳನ್ನು ರೂಪಿಸುವರು, ಅದರ ರಕ್ಷಕರು ಇವರುಗಳು. ಊರನ್ನು ಕಾಪಾಡುವವರು. ಒಟ್ಟಿನಲ್ಲಿ ಎಲ್ಲ ರೀತಿಯ ರಕ್ಷಣೆ, ಎಲ್ಲ ಕುಟುಂಬಗಳು ಸಾವಕಾಶವಾಗಿ ಜೀವಿಸಲು ಬೇಕಾದ ಸೌಲಭ್ಯಗಳನ್ನು ಒದಗಿಸಬೇಕಾದದ್ದು ಇವರ ಕರ್ತವ್ಯ.
. ವೈಶ್ಯರು: ವ್ಯಾಪಾರ, ಉದ್ದಿಮೆ, ವಹಿವಾಟುಗಳನ್ನು ನೋಡಿಕೊಳ್ಳಲು ವರ್ಗವನ್ನು ನೇಮಿಸಲಾಗಿತ್ತು. ಸಾಮಾನು, ಸರಂಜಾಮುಗಳು ಖಾಲಿಯಾದಾಗ ಪಕ್ಕದ ಊರಿಗೆ ಹೋಗಿ ತರುವುದು, ಇಲ್ಲಿ ಅದನ್ನು ತಂದು ವ್ಯಾಪಾರ ಮಾಡಿ ತಮ್ಮ ಜೀವನ ನಡೆಸುವುದು .
. ಶೂದ್ರರು: ಸಮಾಜದ ಶುದ್ದಿ, ಇವರ ಕೆಲಸ. ಕಸ ಗುಡಿಸುವುದು, ಬಟ್ಟೆ ಒಗೆಯುವುದು, ಕ್ಷೌರ, ಈ ರೀತಿ ಹಲವು ಕೆಲಸಗಳನ್ನು ಮಾಡುವುದು.

ಇಲ್ಲಿ ಕೆಲಸದ ಆಧಾರದ ಮೇಲೆ ರೀತಿ ವರ್ಗಗಳನ್ನು ನಿಯೋಜಿಸಲ್ಪಟ್ಟಿದೆಯೇ ಹೊರತು ಇಲ್ಲಿ ಯಾವುದೇ ತಾರತಮ್ಯಗಳಿಲ್ಲ. ವೇದಗಳ ಕಾಲದಲ್ಲಿ ಈ ರೀತಿ ತಾರತಮ್ಯಗಳಾವುದೂ ಕಂಡು ಬರುವುದಿಲ್ಲ ಎಂದು ಮೇಲೆ ಹೇಳಿದಂತೆ ಹಲವು ಜಿಜ್ನಾಸಿಗಳು ಉದಾಹರಿಸಿದ್ದಾರೆ.

ಈ ರೀತಿ ತಾರತಮ್ಯ ಹೇಗೆ ಹುಟ್ಟಿಕೊಂಡಿತು? ನನಗೆ ನಮ್ಮ ಹೆಚ್. ನರಸಿಂಹಯ್ಯ ನವರ ವೈಚಾರಿಕತೆ ಇಲ್ಲಿ ಸಹಾಯ ಮಾಡುತ್ತದೆ. ನಮ್ಮ PUC ಮೊದಲ ವರ್ಷದಲ್ಲಿ ಓದಿದ ಜ್ಞಾಪಕ. ಅವರ ವೈಚಾರಿಕತೆ ಪ್ರಬಂಧದಲ್ಲಿ ಅವರು ಒಂದು ಸಣ್ಣ ಕಥೆ ಹೇಳುತ್ತಾರೆ.

ಒಂದು ಬ್ರಾಹ್ಮಣ ಕುಟುಂಬ. ಮನೆಯ ಯಜಮಾನ ತನ್ನ ತಂದೆಯ ತಿಥಿ ಮಾಡುವಾಗ ಮನೆಯ ಬೆಕ್ಕು ಅಲ್ಲಿ ಇಲ್ಲಿ ಓಡಾಡಿ ತೊಂದರೆ ಮಾಡೀತು ಎಂದು ಅದನ್ನು ಮನೆಯ ಒಂದು ಕಂಭಕ್ಕೆ ಕಟ್ಟುತ್ತಿದ್ದನಂತೆ. ಅವನ ಕಾಲಾನಂತರ ಅವನ ಮಗ ಅವನ ತಿಥಿ ಮಾಡುವಾಗ ಮನೆಯ ಬೆಕ್ಕು ಸತ್ತಿತೆಂದು ಪಕ್ಕದ ಮನೆಯ ಬೆಕ್ಕನ್ನು ತಂದು ತಿಥಿ ಮಾಡುತ್ತಿದ್ದನಂತೆ.

ಒಂದು ಕೆಲಸವನ್ನು ಮಾಡುವಾಗ ಅದೇಕೆ ನಾವು ಹಾಗೆ ಮಾಡುತ್ತಿದ್ದೀವಿ ಎಂದು ತಿಳಿಯದವರಿಗೆ ಹೇಳದೆ ಹೋದರೆ ಆಗುವುದೇ ಹೀಗೆ. ಒಂದು ವೇಳೆ ಆ ಬ್ರಾಹ್ಮಣ ತನ್ನ ಮಗನಿಗೆ ಬೆಕ್ಕನ್ನು ಕಟ್ಟುತ್ತಿದ್ದ ಕಾರಣ ಹೇಳಿದ್ದರೆ ಈ ರೀತಿ ಆಗುತ್ತಿರಲಿಲ್ಲ. ಇದೇ ರೀತಿ ನಮ್ಮ ಕಥೆಯಲ್ಲಿ ಈ ರೀತಿ ನಡೆದಿರಬಹುದು.

ಒಬ್ಬ ಶೂದ್ರ ತನ್ನ ಕೆಲಸಗಳನ್ನ ಮುಗಿಸಿ ಮನೆಯ ಹಾದಿ ಹಿಡಿದಿದ್ದನು. ಕೆಲಸ ಮುಗಿಸಿ ಮಲಿನವಾಗಿದ್ದ ಶೂದ್ರನನ್ನು ಬ್ರಾಹ್ಮಣನು ತನ್ನ ಮಗನೊಂದಿಗೆ ಅದೇ ದಾರಿಯಲ್ಲಿ ನಡೆದುಬರುವಾಗ ಅಕಸ್ಮಾತ್ ಈ ಬ್ರಾಹ್ಮಣನ ಮಗನು ಅವನನ್ನು ಮುಟ್ಟಿದ. ಮಲಿನವಾಗಿದ್ದ ಅವನನ್ನು ಮುಟ್ಟಬೇಡ ಎಂದು ಹೇಳದೇ, "ಅವನನ್ನು ಮುಟ್ಟಬೇಡ" ಎಂದಷ್ಟೇ ಹೇಳಿರಬಹುದು. ಮುಂದೆ ಆ ಮಗನ ಮಗ, ತನ್ನ ಅಪ್ಪನ ಜೊತೆ ಬರುವಾಗ ಅವನೂ ಅದನ್ನೇ ಹೇಳಿರಬಹುದು. ಹೀಗೆ ಬೆಳೆದುಬಂದು ಶೂದ್ರರನ್ನು ಮುಟ್ಟಬಾರದೆಂಬ ಪ್ರತೀತಿ ಹುಟ್ಟಿರಬಹುದು.

ಹೀಗೆ ಆಗುತ್ತಿರಲು, ನಮ್ಮ ನಿಮ್ಮಂತಹ ಯಾರೋ ಒಬ್ಬ ತನ್ನಪ್ಪನನ್ನ ಯಾಕೆ ಅವನನ್ನು ಮುಟ್ಟಬಾರದೆಂದು ಕೇಳಿರಬಹುದು. ತನ್ನಪ್ಪ ಹಾಗೆ ಹೇಳಿಕೊಟ್ಟಿದ್ದಾಗ ಪ್ರಶ್ನೆ ಕೇಳದ ಅವನು, ಹಾರಿಕೆ ಉತ್ತರ ಕೊಟ್ಟಿರಬಹುದು. "ಭಾರೀ ಪ್ರಶ್ನೆ ಕೇಳಿಬಿಟ್ಟ! ಬುದ್ಧಿವಂತ! ಸುಮ್ನೆ ಬಾರೋ! ನನಗೆ ಎದುರಾಡ್ತಾನೆ!" ಎಂದು ಅವನನ್ನು ಎಳೆದುಕೊಂಡು ಹೋಗಿರಬಹುದು. ಈ ರೀತಿ ಹಲವಾರು ಪ್ರತೀತಿಗಳು ಕಾರಣ ತಿಳಿಯದೆ ಹುಟ್ಟಿರಬಹುದು.


ಈ ರೀತಿ ನಡೆಯದೇ, ಪ್ರತಿಯೊಂದಕ್ಕೂ ತಕ್ಕ ಕಾರಣ, ಅದನ್ನು ಯಾಕೆ ಮಾಡುತ್ತಿದ್ದೇವೆ ಎಂದು ವಿವರಿಸಿದ್ದರೆ, ಹೀಗಾಗುತ್ತಿರಲಿಲ್ಲವೇನೋ?

ಮೊನ್ನೆ ಹೀಗೆ ಚಾಮರಾಜಪೇಟೆಯಲ್ಲಿ ನಡ್ಕೊಂಡ್ ಬರ್ತಿದ್ದಾಗ ರಾಷ್ಟ್ರೋತ್ತಾನ ಪರಿಷತ್ತಿನ ಒಂದು ಪುಸ್ತಕ ಮಳಿಗೆಯಲ್ಲಿ ಕಳೆದ ಅಂಕಣದಲ್ಲಿ ವಿವರಿಸಿದ್ದಂತೆ, ಮತಾಂತರದ ವಿರುದ್ಧ ನಿಂತ ಬಣದ ಅಂಕಣಗಳು ಒಂದು ಪುಸ್ತಕವಾಗಿ ಬಿಡುಗಡೆಯಾಗಿದೆ. ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ ಇವರಿಂದ ಈ ಪುಸ್ತಕವು ಬಿಡುಗಡೆಯಾಗಿದೆ. ಮತಾಂತರದ ಪರವಾಗಿ ಯಾವ ಲೇಖನವು ಇಲ್ಲ. ಅಷ್ಟಕ್ಕೂ ಅದರ ಪರ ಯಾರೂ ಬರೆದಿಲ್ಲ. ಎಲ್ಲ ಬರೀ ಭೈರಪ್ಪನವರನ್ನು ಹಳಿದಿದ್ದಾರೆ. ಆಸಕ್ತರು ಕೊಂಡುಕೊಳ್ಳಬಹುದು. ಬೆಲೆ ನೂರು ರೂಪಾಯಿಗಳು.

ಹೀಗೆ ಬೆಳೆದು ಬಂದ ಪ್ರವೃತ್ತಿಯಿಂದ ಶೂದ್ರರು ಹೀನರು ಎಂಬ ಪ್ರತೀತಿ ಹುಟ್ಟಿತು. ಎಲ್ಲ ವರ್ಗಗಳಲ್ಲಿ ಒಳ ಪಂಗಡಗಳಾದವು. ಬ್ರಾಹ್ಮಣರಲ್ಲಿ ಸ್ಮಾರ್ತ, ವೈಷ್ಣವ, ಶಿವಳ್ಳಿ, ಹವ್ಯಕ, ಮಾಧ್ವ, ಹೀಗೆ ಹಲವಾರು ಆದರೆ, ಕ್ಷತ್ರಿಯರಲ್ಲಿ ಕೂಡ ಹಲವು ಪಂಗಡಗಳಾದವು. ಗೌಡ, ಜಮೀನ್ದಾರ, ಹೀಗೆ ಹಲವು ಎಂದು ತಿಳಿಯೋಣ, ವೈಶ್ಯರಲ್ಲಿ, ಶೆಟ್ಟರು, ಬಣಜಿಗರು, ಶೂದ್ರರಲ್ಲಿ ಮಾದಿಗ, ಹೊಲೆಯ, ನಾಯಿಂದ, ಹೀಗೆ ಹಲವಾರು ಪಂಗಡಗಳು ಹುಟ್ಟಿಕೊಂಡವು.

ಒಂದು ವರ್ಗದಲ್ಲೇ ಹಲವು ತಾರತಮ್ಯ ಹುಟ್ಟಿಕೊಂಡಿದ್ದು ವೈದಿಕ ಧರ್ಮವನ್ನು ಹಳಿಯುವವರಿಗೆ ಒಂದು ಕಾರಣ ಮಾಡಿಕೊಟ್ಟಿತು. ಒಳಜಗಳಗಳಿಂದ ಕಿತ್ತಾಡಿಕೊಳ್ಳುತ್ತಿದ್ದ ವೈದಿಕ ಧರ್ಮಿಯರನ್ನು ನೋಡಿ ಹೊರಗಿನಿಂದ ಬಂದ ಮುಸಲ್ಮಾನರು, ಕ್ರೈಸ್ತರು, ಇದರ ಲಾಭ ಪಡೆಯಲು ಶುರು ಮಾಡಿದರು. ಒಬ್ಬರನ್ನೊಬ್ಬರು ಎತ್ತಿಕಟ್ಟಿ ತಮ್ಮ ಬೇಳೆ ಬೇಯಿಸಲು ಶುರು ಮಾಡಿದರು. ಹಲವಾರು ಸಿದ್ಧಾಂತಗಳನ್ನು ತಂದರು. ಆರ್ಯರು, ಮೂಲತಃ ಭಾರತೀಯರಲ್ಲ, ಅವರುಗಳು ಐರೋಪ್ಯ ರಾಷ್ಟ್ರಗಳಿಂದ ಇಲ್ಲಿಗೆ ವಲಸೆ ಬಂದಿದ್ದರು ಹಾಗೆ ಹೀಗೆ ಎಂದು.