Monday, November 03, 2008

ಶ್ರೀ ಸತ್ಯನಾರಾಯಣ ದೇವರ ಕಥೆ.

ನಮ್ಮಮ್ಮ ನನಗೆ ಚಿಕ್ಕವನಾಗಿದ್ದಗ್ಯೂ ಹೇಳಿದ ಕಥೆಯಿದು. ಮೊನ್ನೆ ಇದರ ಒಂದು ಗಣಕೀಕೃತ ಪ್ರತಿಯನ್ನು ಸಿದ್ಧಪಡಿಸಲು ಆಗುತ್ತದ ಏನು ನನ್ನನ್ನು ಕೇಳಿದ್ದರು. ಆಗಲೀ ಏನು ಎರಡು ದಿನದಲ್ಲಿ ಈ ರೀತಿ ತಿದ್ದಿದ್ದೇನೆ. ಅಲ್ಲಿ ಇಲ್ಲಿ ಕೆಲವು ತಪ್ಪುಗಳಿರಬಹುದು. ಅದನ್ನು ಕ್ಷಮಿಸಬೇಕೆಂದು ನನ್ನ ಸವಿನಯ ಪ್ರಾರ್ಥನೆ.

ಮದುವೆ, ಮುಂಜಿ ಮುಂತಾದ ಸಮಾರಂಭದಲ್ಲಿ ಇದನ್ನೂ ನಡೆಸುವುದು ಒಂದು ಪ್ರತೀತಿ. ಈ ಕಥೆಯನ್ನು ನೀವು ಕೇಳಿರಬಹುದು. ಇದರ ಒಂದು ಗಣಕೀಕೃತ ಪ್ರತಿಯೊಂದಿರಲಿ ಎಂದು ನನ್ನ ಈ ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ. ಇದನ್ನು ನಮ್ಮ ಅಮ್ಮನ ರಾಮ ನಾಮದ ಪುಸ್ತಕದಿಂದ ತೆಗೆದು ಪ್ರತಿ ಮಾಡಿದ್ದೇನೆ. ಇದರಲ್ಲಿ ಯಾರದೇ ಕಾಪಿರೈಟ್ಸ್ ಭಂಗವಾಗಿದೆಯೆಂದು ನನಗೆ ಅನ್ನಿಸುವುದಿಲ್ಲ. ಹಾಗೊಂದು ವೇಳೆ ಅವರು ಹಾಗೆಂದರೂ, ಇದೇ ಕಥೆ ನಡೆಸುವ ಸಭೆ ಸಮಾರಂಭಗಳಿಗೂ ಅವರು ಹೋಗಬೇಕಾಗುತ್ತದೆಯಷ್ಟೇ.

ನನ್ನ ಇದುವರೆಗಿನ ಬ್ಲಾಗುಗಳಲ್ಲಿ ಇದೇ ಅತಿ ದೊಡ್ಡ ಅಂಕಣ. ಓದಿ. ಆನಂದಿಸಿ.

ಶ್ರೀ ಸತ್ಯನಾರಾಯಣ ದೇವರ ಕಥೆ.

ಶ್ರೀ ಲಕ್ಷ್ಮೀ ಸಹಿತ ಶ್ರೀ ಸತ್ಯನಾರಯಣನಿಗೆ ನಮಸ್ಕಾರಗಳು.

ನೈಮಿಷ್ಯವೆಂಬ ಅರಣ್ಯದಲ್ಲಿ ವಾಸಿಸುವ ಮೊದಲಾದ ಋಷಿಗಳು ಪುರಾಣಗಳನ್ನು ಬಲ್ಲ ಸೂತಪುರಾಣಿಕನನ್ನು ಕುರಿತು ಒಂದು ದಿನ ಮಾನವರ ಹಿತಾರ್ಥವಾಗಿ ಪ್ರಶ್ನಿಸಿದರು. ಏನೆಂದರೆ 'ಎಲೈ ಮುನಿಯೇ, ಮಾನವರ ಮನೋಬಯಕೆಗಳು ಅದಾವ ವ್ರತದಿಂದ ಇಲ್ಲವೇ ಅದಾವ ತಪಸ್ಸಿನಿಂದ ಈಡೇರುವುವು?' ಸೂತನು ಅದಕ್ಕೆ ಹೀಗೆ ಉತ್ತರವಿತ್ತನು. 'ಎಲೈ ಋಷಿಗಳೇ, ಇದೇ ಪ್ರಶ್ನೆಯನ್ನು ಮೊದಲು ನಾರದ ಮಹರ್ಷಿಯು, ಕಲಾವತಿಯಾದ ಶ್ರೀಮನ್ನಾರಾಯಣನನ್ನು ಕೇಳಿದನು. ಅದಕ್ಕೆ ಲೋಕ ರಕ್ಷಕನಾದ ಆ ಭಗವಂತನು, ನಾರದರಿಗೆ ಕೊಟ್ಟ ಉತ್ತರವನ್ನೇ ಈಗ ಹೇಳುವೆನು. ಚಿತ್ತಗೊಟ್ಟು ಕೇಳಿರಿ ಎಂದು ಹೇಳಲು ಉಪಕ್ರಮಿಸಿದನು. ಒಂದು ಸಲ ನಾರದ ಯೋಗಿಯು 'ಪರಾನುಗ್ರಹ ಕಾಂಕ್ಷಯಾ' ಎರಡನೆಯವರಿಗೆ ಹಿತ ಮಾಡಬೇಕೆಂಬ ಬಯಕೆಯಿಂದ ಎಲ್ಲಾ ಲೋಕಗಳನ್ನು ಸಂಚರಿಸುತ್ತಾ, ನಮ್ಮ ಈ ಮೃತ್ಯು ಲೋಕಕ್ಕೆ ಬಂದರು. ಇಲ್ಲಿಯೂ ತಮ್ಮ ತಮ್ಮ ದುಷ್ಕರ್ಮಗಳಿಗೆ ತಕ್ಕಂತೆ ಹಲವಾರು ನೀಚ ಯೋನಿಗಳಲ್ಲಿ ಜನಿಸಿ, ಬಹು ದುಃಖದಿಂದ ಬಳಲುತ್ತಿರುವುದನ್ನು ಕಂಡರು. 'ಸಜ್ಜನಸ್ಯ ಹೃದಯ ನವನೀತಂ' - ಬೆಣ್ಣೆಯಂತಹ ಹೃದಯ ಕರಗಿತು. ಕಳವಳಗೊಂದರು. ಅದಾವ ಉಪಾಯದಿಂದ ಈ ಜನರ ದುಃಖವು ದೂರವಾಗುವುದು? ಎಂದು ಮನಮುಟ್ಟಿ ಚಿಂತಿಸಿದರು. ಕೊನೆಗೆ ಈ ಬಗ್ಗೆ ವಿಚಾರಿಸುವುದಾಗಿ, ಅಧಿಕಾರವುಳ್ಳ ಸೃಷ್ಠಿ ಸ್ಥಿತಿಯನ್ನು ಕಾಯುವ ಶ್ರೀಮನ್ನಾರಾಯಣನನ್ನು ಕಾಣಲು ವಿಷ್ಣುಲೋಕಕ್ಕೆ ತೆರಳಿದರು.

ಅಲ್ಲಿ ಚತುರ್ಭುಜನೂ ಸುಂದರನೂ ಆದ ಸದ್ಗುಣೈಶ್ವರ್ಯ ಸಂಪನ್ನನಾದ ಶ್ರೀಮನ್ನಾರಾಯಣನನ್ನು ಕಂಡೊಡನೆ ಭಕ್ತಶ್ರೇಷ್ಠರಾದ ಅವರ ಅಂತಃಕರಣದಲ್ಲಿ ಭಕ್ತಿರಸವು ಉಕ್ಕೇರಿತು. ದೇವ ದೇವೇಂದ್ರನಾದ ಆತನನ್ನು ಸ್ತುತಿಸತೊಡಗಿದರು.

ಸ್ತೋತ್ರ: - ನಮೋ ವಾಙ್ಮನ ಸಾತೀತ ರೂಪಾಯಂತ ಶಕ್ತಿಯೇ ಆದಿಮಧ್ಯಾಂತ ಹಿನಾ ಗುಣಾತ್ಮನೇ ಸವೇಷಮಿಥಿ ಭೂತಾಯ |

ಭಕ್ತಿ ಮೂರ್ತಿಯೇ ಸರ್ವ ಸ್ವಾಮಿಯೇ ನೀನು ಮನಸ್ಸು ಮಾತುಗಳಿಗೆ ನಿಲುಕದ ರೂಪವುಳ್ಳವನು. ನೆಲೆ ಇಲ್ಲದ ಶಕ್ತಿವಂತನು. ಹುಟ್ಟು ಬೆಳೆ ಸಾವುಗಳಿಂದ ಹೀನನು ಅಥವಾ ಮೊದಲು ಕೊನೆಗಳಿಲ್ಲದ್ದು. ಗುಣಗಳಿಂದ ರಹಿತನು ನಾಂದಿಗುಣಗಳಿಂದ ಅರ್ಥವುಳ್ಳವನು. ನಿರ್ಗುಣನಾದ ನೀನು ಸುಗುಣ ರೂಪ ತಳೆದಾಗ ಎಲ್ಲಾ ಭೂತಮಾತ್ರ ಸೃಷ್ಠಿಗೆ ಕಾರಣನಾದ ನೀನು ಸರ್ವಾಂತರ್ಯಾಮಿ. ನಿನ್ನನ್ನೇ ನೆರೆ ತುಂಬಿದ ಭಕ್ತರ ಪಾಪಕಾರ್ಯಗಳನ್ನು ನಾಶ ಮಾಡುವವನು ಆಗಿರುವಿ. ನಾರದರ ಪರಹಿತ ಭಾವಪೂರ್ಣವೂ ಆದ ಸ್ತೋತ್ರಗಳನ್ನು ಕೇಳಿ ಶ್ರೀ ವಿಷ್ಣುವು 'ಎಲೈ ಸಾಧುವೇ, ನೀನು ಇಲ್ಲಿಗೆ ಯಾವ ಕಾರ್ಯಕ್ಕಾಗಿ ಬಂದಿರುವೆ? ನಿನ್ನ ಬಯಕೆ ಏನು? ಹೇಳು. ಅದೆಲ್ಲವನ್ನೂ ನಾನು ಪೂರೈಸುವೆ' ಎಂದು ಹೇಳಿದನು. 'ಒಡೆಯನೇ, ಮೃತ್ಯುಲೋಕದ ಜನತೆ ಎಲ್ಲವೂ ಹಲವು ಬಗೆಯ ದುಃಖವನ್ನು ಅನುಭವಿಸುತ್ತಿರುವರು. ಆ ಜನರ ದುಃಖವನ್ನು ಹೋಗಲಾಡಿಸುವುದಕ್ಕಾಗಿ ನೀನು ನಮಗೆ ದಾರಿ ತೋರಿಸ ಬೇಕೆಂದು ಕೇಳಿ ಕೊಂಡನು.

ಶ್ರೀ ಭಗವಂತನು ನಾರದನ ಪರಹಿತ ಬುದ್ಧಿಯನ್ನರಿತು 'ವತ್ಸ ನಾರದಾ, ಜನರ ಮೇಲೆ ಅನುಗ್ರಹ ಮಾಡಬೇಕೆಂಬ ಬಯಕೆಯಿಂದ ಒಳ್ಳೆಯ ಪ್ರಶ್ನೆಯನ್ನು ಕೇಳಿದೆ. ಏನು ಮಾಡುವುದಂತ ದುಃಖ ಮುಕ್ತರಾಗುವರೆಂಬುದನ್ನು ಹೇಳುವೆ. ಕೇಳು. ಅದೊಂದು ಮಹತ್ಪುಣ್ಯಕರವಾದ ಸತ್ಯನಾರಾಯಣ ವ್ರತವು. ಅದು ಸ್ವರ್ಗ ಮೃತ್ಯುಲೋಕದಲ್ಲಿ ದುರ್ಲಭವಾದುದು. ವತ್ಸಾ, ಕೇವಲ ಅದು ನಿನ್ನ ಮೇಲಿನ ಪ್ರೀತಿಯ ಮೂಲಕ ಗುಪ್ತವಾಗಿದ್ದರೂ ಪ್ರಕಟಗೊಳಿಸುವೆ. ಅದು ಶ್ರೀ ಸತ್ಯನಾರಾಯಣ ಎಂಬ ವ್ರತವು. ಅದನ್ನು ಒಳ್ಳೆಯ ವಿಧಾನಪೂರ್ವಕವಾಗಿ ಮಾಡುವುದರಿಂದ ಇಹದಲ್ಲಿನ ದುಃಖವೆಲ್ಲಾ ನಾಶವಾಗಿ ಸುಖ ಉಂಟಾಗುವುದು ಮತ್ತು ಮುಂದೆ ಮರಣಾನಂತರ ಮೋಕ್ಷವನ್ನು ಹೊಂದುವನು. ಭಗವಂತನ ಮಾತುಗಳನ್ನು ಕೇಳಿ ನಾರದ ಮಹರ್ಷಿಯು 'ಕೀ ಫಲಂ ಕಿಂ ವಿಧಾನಂ ಚ ಕೃತಂ ಕೇನ್ವರ ತವ ವ್ರತಂ'. ಈ ವ್ರತಕ್ಕೆ ಫಲವೆನಿದೆ? ಇದನ್ನು ಮಾಡುವ ವಿಧಾನ ಹೇಗೆ? ಮೊದಲು ಯಾರು ಇದನ್ನು ಮಾಡಿದ್ದರು? ಮತ್ತು 'ಕದಾ ಕಾರ್ಯಂ ದ ವ್ರತಂ' ವ್ರತ ಮಾಡಲಿಕ್ಕೆ ಕಾಲವು ಯಾವುದು? ಇದನ್ನು ವಿಸ್ತಾರವಾಗಿ ಹೇಳಬೇಕೆಂದು ಕೇಳಿದನು. ಅದಕ್ಕೆ ಭಗವಂತನು - 'ಈ ವ್ರತಾಚರಣೆಯಿಂದ ದುಃಖಗಳೆಲ್ಲಾ ನಾಶವಾಗುವುದು. ಧನ ಮತ್ತು ಧಾನ್ಯಗಳು ಸಮೃದ್ಧಿಯಾಗುವುದು. ಅಲ್ಲದೇ 'ಸೌಭಾಗ್ಯಂ ಸಂತತಿಕರಂ ಸರ್ವತ್ರ ವಿಜಯ ಪ್ರದಂ. ಸೌಭಾಗ್ಯವನ್ನು, ಸಂತತಿಯನ್ನು ಕೊಡುವುದು. ಎಲ್ಲಾ ಕಾರ್ಯಗಳಲ್ಲೂ ಗೆಲುವೇ ದೊರಕುವುದು. ಇದೇ ಈ ವ್ರತದಿಂದ ದೊರಕುವ ಫಲಗಳು.

ಯಾವ ಕಾಲ, ಯಾವ ದಿನದಲ್ಲಾದರೂ ಶ್ರದ್ಧೆ, ಭಕ್ತಿಯಿಂದ ಈ ಕರಟವನ್ನು ಮಾಡಬಹುದು. ಧರ್ಮ ತತ್ಪರನಾಗಿ ಬ್ರಾಹ್ಮಣರಿಂದ ಕೂಡಿಕೊಂಡು ಈ ಸತ್ಯನಾರಾಯಣ ದೇವನನ್ನು ಸಾಯಂಕಾಲದ ಸಮಯಕ್ಕೆ ಪೂಜಿಸಬೇಕು. ಉತ್ತಮವಾದ ಸಪಾತಪಕ್ಷ ನೈವೇದ್ಯವನ್ನು ಭಕ್ತಿಯಿಂದ ಕೊಡಬೇಕು. ಭಕ್ಷ್ಯವೆಂದರೆ ಬಾಳೆಹಣ್ಣು, ತುಪ್ಪ, ಹಾಲು ಮತ್ತು ಗೋಧಿಯ ಸಜ್ಜಿಗೆ ದೊರೆಯದಿದ್ದಲ್ಲಿ ಅಕ್ಕಿಯ ಸಜ್ಜಿಗೆಯನ್ನೂ ಸಕ್ಕರೆ ದೊರೆಯದಿದ್ದಲ್ಲಿ ಬೆಲ್ಲವನ್ನೂ ಅಭಾವಶಾಲಿ ಚೂರ್ಣಂ ಯಾ ಚರ್ಕಣ ಚ ಡಸ್ತಬಾ' ಉಪಯೋಗಿಸಬೇಕು. ಎಲ್ಲಾ ಪದಾರ್ಥಗಳನ್ನು "ಸಪಾದ" ಅಂದರೆ ಯಾವುದೊಂದು ಪ್ರಮಾಣ ಐದುಮಡಿ ಮಾಡಿ ನಿವೇದಿಸಬೇಕು. ಅನಂತರ ತನ್ನ ಆಪ್ತೇಷ್ಠರುಗಳಿಂದ ಕೂಡಿ ಬ್ರಾಹ್ಮಣರಿಗೆ ಊಟಕ್ಕೆ ಹಾಕಿ ತಾಂಬೂಲ ದಕ್ಷಿಣೆಗಳನ್ನು ಕೊಡಬೇಕು. ರಾತ್ರಿ ಎಲ್ಲಾ ನೃತ್ಯ ಗಾನಾದಿಗಳಿಂದ ಹೊತ್ತು ಕಳೆದು ಶ್ರೀ ಸತ್ಯನಾರಾಯಣನನ್ನು ಮನಮುಟ್ಟಿ ಸ್ಮರಿಸುತ್ತಾ ಮನೆಗೆ ಹೋಗಬೇಕು. ಇಂತು ವ್ರತವನ್ನು ಆಚರಿಸಿದರೆ, ಮನುಜನ ಮನೋರಥವು ಸಿದ್ಧಿಸುವುದು. ವಿಶೇಷವಾಗಿ ಈ ವ್ರತವು ಕಲಿಯುಗದಲ್ಲಿ ಬಹು ಬೇಗನೆ ಫಲವನ್ನು ಕೊಡುವಂತಹದಾಗಿದೆ. ಹೀಗೆಂದು ಭಗವಂತನು ನಾರದರಿಗೆ ಹೇಳಿದನು. ಇದೇ ಶ್ರೀ ಸ್ಕಂದ ಪುರಾಣ ರೇವಾ ಖಂಡದ ಸತ್ಯನಾರಾಯಣ ಕಥಾಯೋ ಪ್ರಥಮಾಧ್ಯಾಯಂ ಸಮಾಪ್ತಿರಸ್ತು.

೨ನೇ ಅಧ್ಯಾಯ

ಸೂತಪುರಾಣಿಕನು ಋಷಿಗಳನ್ನು ಕುರಿತು 'ಎಲೈ ಋಷಿಗಳಿರಾ! ಇನ್ನೂ ಈ ವ್ರತವನ್ನು ಪೂರ್ವದಲ್ಲಿ ಅದಾರು ಮಾಡಿದ್ದಾರೆಂಬುವುದನ್ನು ಹೇಳುತ್ತೇನೆ ಕೇಳಿರಿ. ಕಾಶಿಪಟ್ಟಣದಲ್ಲಿ ತೀರ ದರಿದ್ರನಾದ ಬ್ರಾಹ್ಮಣ ಇರುತ್ತಿದ್ದನು. ಬಡತನದ ಮೂಲಕ ಆತ ಯಾವಾಗಲೂ ಹಸಿವೆ, ನೀರಡಿಕೆಗಳಿಂದ ಪೀಡಿತನಾಗಿದ್ದನು. ಅದಕ್ಕಾಗಿ ದಿನವೂ ಭಿಕ್ಷೆಗಾಗಿ ಭೂಮಿಯ ಮೇಲೆ ಸಂಚರಿಸುತಿದ್ದನು. 'ಭಗವಾನ್ ಬ್ರಾಹ್ಮಣ ಪ್ರಿಯ' ಭಗವಂತನು ಬ್ರಾಹ್ಮಣರ ಮೇಲೆ ಪ್ರೀತಿಯುಳ್ಳವನು. ಆದ್ದರಿಂದ ಬ್ರಾಹ್ಮಣನ ಕಷ್ಟಮಯ ಸ್ಥಿತಿಯು ಆತನಿಗೆ ಸಹಿಸದಾಯಿತು.

ಕೂಡಲೇ ಆತನು ಮುದಿಯನ ವೇಷದಿಂದ ಆ ದರಿದ್ರ ಬ್ರಾಹ್ಮಣನ ಬಳಿಗೆ ಬಂದನು. ಮತ್ತು ಅವನನ್ನು ಕುರಿತು ಒಳ್ಳೆಯ ಆದರದಿಂದ 'ಎಲೈ ಬ್ರಾಹ್ಮಣನೆ! ನೀನು ನಿತ್ಯವೂ ದುಃಖಿತನಾಗಿ ಭೂಮಿಯ ಮೇಲೆ ಅದೇನು ಕಾರಣ ಸಂಚರಿಸುತ್ತಿರುವಿ? ಅದನ್ನು ಕೇಳಲು ನಾನು ಬಯಸುವೆ. ಅದೇನು ಹೇಳು?' ಎಂದು ಕೇಳಿದನು.

ಅದಕ್ಕೆ ಕಂಗಾಲಾದ ಬ್ರಾಹ್ಮಣನು 'ಬ್ರಾಹ್ಮಣೋತಿ ದ್ರ ದ್ರೋಹ' ನಾನು ಬ್ರಾಹ್ಮಣನಿದ್ದೂ ತುಂಬಾ ಬಡವನಾಗಿರುವೆ. ಭಿಕ್ಷೆ ಬೇಡಿ ಹೊಟ್ಟೆ ಹೊರೆದುಕೊಳ್ಳುವ ನಿಮಿತ್ತ ಯಾವಾಗಲೂ ಭೂಮಿಯ ಮೇಲೆ ತಿರುಗಾಡುತ್ತಿರುವೆ. ಈ ನನ್ನ ದಾರಿದ್ರ್ಯವು ದೂರಾಗಲು ಉಪಾಯವೇನಾದರೂ ತಿಳಿದಿದ್ದರೆ ಅದನ್ನು ತಿಳಿಸುವ ಕೃಪೆಯಾಗಬೇಕೆಂದು ಕೇಳಿದನು. ಬ್ರಾಹ್ಮಣನ ದೀನವಾಣಿಯನ್ನು ಕೇಳಿ ವೇಷಧಾರಿಯಾದ ಭಗವಂತನು 'ಎಲೈ ಬ್ರಾಹ್ಮಣನೇ, ಸತ್ಯನಾರಾಯಣೋ ವಿಷ್ಣುವಾಂಚಿತ ಫಲ ಪ್ರಧದಂ' ನಿಜವಾಗಿ ಸತ್ಯನಾರಾಯಣನೂ ವಿಷ್ಣುವೂ ಆತನೇ ಭಕ್ತರ ಪೂಜಕರ ಬಯಕೆಯನ್ನು ಪೂರೈಸುವನು. ಆದ್ದರಿಂದ ಆ ಸತ್ಯನಾರಾಯಣನನ್ನು ನೀನು ಭಕ್ತಿಪೂರ್ವಕವಾಗಿ ಪೂಜಿಸು. ಇದೊಂದು ಮೇಲಾದ ವ್ರತವು. ಈ ವ್ರತಾಚರಣೆಯಿಂದ ಮಾನವನ ಎಲ್ಲಾ ಬಗೆಯ ದುಃಖಗಳಿಂದ ಕೂಡಲೇ ಮುಕ್ತನಾಗುವನು. ಎಂದು ನುಡಿದು ಆ ವ್ರತದ ವಿಧಿ ವಿಧಾನಗಳನ್ನು ದರಿದ್ರನಾದ ಬ್ರಾಹ್ಮಣನಿಗೆ ತಿಳಿಸಿ ಆ ವೃದ್ಧ ಬ್ರಾಹ್ಮಣನ ರೂಪವನ್ನು ಕಳೆದು ಸತ್ಯನಾರಾಯಣನು ಅಲ್ಲಿಯೇ ಅಂತರ್ಧಾನನಾದನು.

ಆಗ ಬ್ರಾಹ್ಮಣನು ಆಶ್ಚರ್ಯಚಕಿತನಾಗಿ ಆ ಮುಡಿ ಹಾರುವನ ಹೇಳಿಕೆಯಲ್ಲಿ ಪೂರ್ಣ ವಿಶ್ವಾಸವುಳ್ಳವನಾದನು. ಆತನ ಹೇಳಿಕೆಯಂತೆ ನಾನು ಶ್ರೀ ಸತ್ಯನಾರಾಯಣ ವ್ರತವನ್ನು ಮಾಡಿಯೇ ತೀರುವೆನು ಎಂದು ಮನಸ್ಸಿನಲ್ಲಿ ನಿಶ್ಚಯಿಸಿದನು. ಬಡತನದಿಂದ ಪಾರಾಗಿ ಸುಖವುಂಟಾಗುವ ಕರ್ಮದ ಚಿಂತನೆಯಿಂದ 'ಕರ್ತಾಗಧಾಂ ನಲಬ್ಧಾ'. ಆತನಿಗೆ ರಾತ್ರಿಯಲ್ಲಿ ನಿದ್ರೆ ಬರಲಿಲ್ಲ. ಬೆಳಗಾಗುವ ಮಾರ್ಗವನ್ನು ಕಾಣುತ್ತಲೇ ರಾತ್ರಿಯನ್ನು ಕಳೆದನು. ಮರುದಿನ ಬೆಳಗಾಯಿತು. ಅದನ್ನೇ ನಿರೀಕ್ಷಿಸುತ್ತಿದ್ದ ಬ್ರಾಹ್ಮಣನು ಕೂಡಲೇ ಹಾಸಿಗೆಯಿಂದ ಮೇಲೆದ್ದನು. ಆ ಹೊತ್ತು ತಾನು ಸತ್ಯನಾರಾಯಣನ ವ್ರತವನ್ನು ಮಾಡುವೆನೆಂದು ನಿಶ್ಚಯಿಸಿದನು. ಹಾಗೆಂದು ಸಂಕಲ್ಪ ಮಾಡಿಕೊಂಡನು. ಪ್ರಾತಃವಿಧಿಗಳನ್ನು ಮುಗಿಸಿ ಭಿಕ್ಷೆಗಾಗಿ ಹೊರಟನು. 'ಭಾವೇನ ದೇವಂ' ಎಂಬಂತೆ ದೇವನು ಭಾವನೆಗೆ ತಕ್ಕಂತೆ ಅಂದು ಆ ಬ್ರಾಹ್ಮಣನಿಗೆ ದೈವವಶಾತ್ ಪ್ರತಿನಿತ್ಯಕ್ಕಿಂತಲೂ ಹೆಚ್ಚಿನ ಭಿಕ್ಷೆಯು ದೊರಕಿತು. ಆಗ ಆತನು ಸಂತುಷ್ಟಚಿತ್ತನಾಗಿ ಆ ಹಣವನ್ನು ವೆಚ್ಚಿಸಿ ಬಂಧುಬಾಂಧವರೊಡನೆ ಕೂಡಿಕೊಂಡು ಶ್ರೀ ಸತ್ಯನಾರಾಯಣ ವ್ರತವನ್ನು ನೆರವೇರಿಸಿದನು.

ಅಂದು ಮಾಡಿದ ವ್ರತದ ಪ್ರಭಾವದಿಂದ ಆ ಬ್ರಾಹ್ಮಣನು 'ಸರ್ವದುಃಖ ವಿಮುಕ್ತ'. ಎಲ್ಲಾ ದುಃಖಗಳಿಂದ ವಿಮುಕ್ತನಾದನು ಮತ್ತು 'ಸರ್ವ ಸಂಪತ್ ಮಯವಿತ' ಎಲ್ಲಾ ಸುಖ ಸಂಪತ್ತುಗಳನ್ನು ಹೊಂದಿದನು. ವ್ರತದ ಪ್ರಭಾವವನ್ನು ಮನಗಂಡ ಆ ಬ್ರಾಹ್ಮಣನು ಆ ದಿನದಿಂದ ಪ್ರತೀ ತಿಂಗಳಲ್ಲೂ ಉಪಾಯದಿಂದ ಮಹತ್ಫಲವನ್ನು ಕೊಡುವ ಆ ಉತ್ತಮ ವ್ರತವನ್ನು ತಪ್ಪದೇ ಮಾಡತೊಡಗಿದನು. ಆತನ ಸಂಚಿತ ಪಾಪಗಳೆಲ್ಲವೂ ಸುಟ್ಟುಹೋದವು. ಕೊನೆಗೆ ಆತನು ದುರ್ಲಭವಾದ ಮೋಕ್ಷವನ್ನು ಹೊಂದಿದನು. ಹಾಗೆಂದು ಭಗವಂತನು ನಾರದರಿಗೆ ಹೇಳಿ, ನಾರದ ಭೂಲೋಕದ ಜನರ ದುಃಖದ ನಿವೃತ್ತಿಗೆ ಸುಖ ಪ್ರಾಪ್ತಿಗೆ ಈ ಸತ್ಯನಾರಾಯಣ ವ್ರತವೇ ಉತ್ತಮ ಉಪಾಯವೆಂದು ಹೇಳಿದನು.' ಎಂದು ಸೂತಪುರಾಣಿಕನು ನುಡಿದನು.

ಆಗ ಆ ಋಷಿಗಳು ಆ ಬ್ರಾಹ್ಮಣನ ಮುಖದಿಂದ ಈ ವ್ರತದ ಪ್ರಭಾವವನ್ನು ಮತ್ತು ಯಾರು ಕೇಳಿದು? ಈ ವ್ರತವು ಭೂಮಿಯ ಮೇಲೆ ಹೇಗೆ ಪ್ರಸಿದ್ದಿ ಹೊಂದಿತು ಎಂಬ ಸಂಗತಿಗಳನ್ನು ಕೇಳಿ ತಿಳಿದುಕೊಳ್ಳಲು ನಮ್ಮಲ್ಲಿ ಭಕ್ತಿ ಉಂಟಾಗಿದೆ. ಅದಕ್ಕೆ ಎಲ್ಲಾ ಸಂಗತಿಗಳನ್ನು ವಿಸ್ತರಿಸಿ ಹೇಳಬೇಕೆಂದು ನುಡಿದರು. ಋಷಿಗಳ ಪ್ರಶ್ನೆಯನ್ನು ಕೇಳಿ ಸೂತಪುರಾಣಿಕನು 'ಋಷಿಗಳಿರಾ! ಈ ವ್ರತವನ್ನು ಭೂಮಿಯಲ್ಲಿ ಯಾರು ಮಾಡಿದ್ದಾರೆಂಬುದನ್ನು ಹೇಳುತ್ತೇನೆ ಕೇಳಿರಿ!'

ಮೊದಲು ದರಿದ್ರನಾಗಿದ್ದ ಬ್ರಾಹ್ಮಣನು ಒಂದು ದಿನ ತನ್ನ ಐಶ್ವರ್ಯಾನುಸಾರವಾಗಿ ಬಾಂಧವರಿಂದಲೂ ಆಪ್ತೇಷ್ಠರಿಂದಲೂ ಕೂಡಿಕೊಂಡು ಶ್ರೀ ಸತ್ಯನಾರಾಯಣ ಸ್ವಾಮಿಯ ವ್ರತವನ್ನು ಮಾಡತೊಡಗಿದನು. ಒಬ್ಬ ಕಟ್ಟಿಗೆ ಹೊರೆಯನ್ನು ಮಾರುವವನು ಆ ಬ್ರಾಹ್ಮಣನ ಮನೆಯ ಬಾಗಿಲಿಗೆ ಬಂದನು. ತಲೆಯ ಮೇಲಿನ ಹೊರೆಯನ್ನು ಮನೆಯ ಹೊರಗೋಡೆಗೆ ನಿಲ್ಲಿಸಿದನು. ನೀರಡಿಕೆಯಿಂದ ಪೀಡಿತನಾಗಿ ಆ ಬ್ರಾಹ್ಮಣನ ಮನೆಯ ಒಳಕ್ಕೆ ಹೋದನು. ಅಲ್ಲಿ ಆತನು ಮಾಡುತ್ತಿರುವ ಶ್ರೀ ಸತ್ಯನಾರಾಯಣ ವ್ರತವನ್ನು ನೋಡಿದನು. ಆಗ ಆತನಲ್ಲಿ ಭಕ್ತಿ ಅಂಕುರಿಸಿತು. ನಮಸ್ಕರಿಸಿದನು. ಪೂಜೆ ಮಾಡುತ್ತಿರುವ ಬ್ರಾಹ್ಮಣನನ್ನು ಕುರಿತು 'ಎಲೈ ಬ್ರಾಹ್ಮಣನೇ, ಕಿಮಿದಂ ಕ್ರಿಯೇ ತತ್ಪಯ, ನೀನು ಇದನ್ನೇನು ಮಾಡಲಾರಂಭಿಸಿರುವೆ? ಮತ್ತು ಇದನ್ನು ಮಾಡುವುದರಿಂದ ದೊರೆಯುವ ಫಲವನ್ನು ಇದನ್ನೆಲ್ಲಾ ನನ್ನ ಮುಂದೆ ಸವಿಸ್ತಾರವಾಗಿ ಹೇಳು' ಎಂದು ಬೇಡಿಕೊಂಡನು. ಕಟ್ಟಿಗೆ ಹೊರೆಯನ್ನು ಹೊರುವವನಲ್ಲಿ ಪೂಜೆಯ ಬಗ್ಗೆ ಉಂಟಾದ ಉತ್ಸುಕತೆಯನ್ನು ಕಂಡು ಬ್ರಾಹ್ಮಣನು 'ಎಲೈ ಕಾಷ್ಠ ಕೊತನೇ! ಎಲ್ಲರ ಮನೋರಥಗಳನ್ನು ಪೂರ್ಣಮಾಡಿಕೊಡುವಂತಹ ಶ್ರೀ ಸತ್ಯನಾರಾಯಣ ವ್ರತಾನ್ನು ನಾನು ಹೇಳುತಲಿರುವೆ. ಮೊದಲು ಅಷ್ಟ ದರಿದ್ರನಾದ ನನಗೆ ಈ ವ್ರತದ ಪ್ರಭಾವದಿಂದ ಈಗ ಧನ ಧಾನ್ಯ ಮುಂತಾದ ಸಿರಿಗಳೆಲ್ಲವೂ ದೊರಕಿದೆ ಎಂದನು. ನಂತರ ಕಟ್ಟಿಗೆ ಹೊರೆ ಮಾರುವವನು ಆ ಬ್ರಾಹ್ಮಣನ ಮುಖದಿಂದ ಆ ವ್ರತದ ವಿಧಿ ವಿಧಾನಗಳನ್ನು ತಿಳಿದುಕೊಂಡನು. ಸಂತೋಷದಿಂದ ಶ್ರೀ ಸತ್ಯನಾರಾಯಣನ ಪ್ರಸಾದವನ್ನು ತಿಂದನು. ನೀರು ಕುಡಿದನು. ಊಟ ಮಾಡಿ ತನ್ನ ಊರಿಗೆ ಹೊರಟು ಹೋದನು. ಅನಂತರ ಅವನು ಶುದ್ಧ ಮನಸ್ಸಿನಿಂದ ಶ್ರೀ ಸತ್ಯನಾರಾಯಣ ದೇವನನ್ನು ಸ್ಮರಿಸಿ 'ದೇವ ಸತ್ಯನಾರಾಯಣನೇ, ಈ ಊರಿನಲ್ಲಿ ಈ ಕಟ್ಟಿಗೆ ಹೊರೆಯನ್ನು ಮಾರಿಬಂದ ಹಣವನ್ನು ವೆಚ್ಚಮಾಡಿ ನಿನ್ನ ಸಂಬಂಧವಾದ ಶ್ರೀ ಸತ್ಯನಾರಾಯಣ ವ್ರತವನ್ನು ಆಚರಿಸುವೆನು.' ಎಂದು ಮನಮುಟ್ಟಿ ನಿರ್ಧರಿಸಿದನು.

ಅದೇ ನಿರ್ಧಾರಮನದಿಂದಲೇ ಕಟ್ಟಿಗೆ ಹೊರೆಯನ್ನು ಹೊತ್ತುಕೊಂಡು ಹೊರಟನು. ತನ್ನ ಗ್ರಾಮದೊಳಗಿನ ಸಿರಿವಂತರು ವಾಸಿಸುವ ಓಣಿಗೆ ಹೋದನು. ಅಲ್ಲಿ ತನ್ನ ಹೊರೆಯನ್ನು ಮಾರುತ್ತಿರಲು 'ಕಾಷ್ಠಾ ಮೂಲ್ಯಯಂ ಚ ದ್ವಿಗುಣಂ ಪ್ರಾಪ್ತವಾನಸಿ' ಅಂದು ಆತನಿಗೆ ದಿನಕ್ಕಿಂತ ಎರಡು ಪಟ್ಟು ಹೆಚ್ಚು ಹಣವು ಸಿಕ್ಕಿತು. ಆದ್ದರಿಂದ ಆತನು ಶ್ರೀ ಸತ್ಯನಾರಾಯಣನ ಪ್ರಭಾವದಿಂದ ಸಂತುಷ್ಟನಾದನು. ಅಲ್ಲದೇ ಪ್ರಸಾದಕ್ಕೆ ಬೇಕಾಗುವ ಬಾಳೆಹಣ್ಣು, ತುಪ್ಪ, ಸಕ್ಕರೆ, ಹಾಲು ಮತ್ತು ಗೋಧಿಯ ಸಜ್ಜಿಗೆಯನ್ನು ಕೊಂಡು ಅವನ್ನೆಲ್ಲ 'ಸಪಾದ' ಸರಿಯಾದ ಪ್ರಮಾಣದಲ್ಲಿ ಕೂಡಿಸಿ ಪ್ರಸಾದವನ್ನು ಮಾಡಿದನು. ತನ್ನ ಬಂಧು ಬಾಂಧವ ಸಹಿತನಾಗಿ ಶ್ರೀ ಸತ್ಯನಾರಾಯಣ ದೇವರನ್ನು ಪೂಜಿಸಿ ನೈವೇದ್ಯವನ್ನು ಸಮರ್ಪಿಸಿದನು. ಭಕ್ತಿಯಿಂದ ಕಥೆ ಕೀರ್ತನೆಗಳನ್ನು ಶ್ರವಣ ಮಾಡಿ ವ್ರತವನ್ನು ಮುಗಿಸಿದನು. 'ತದ್ ವ್ರತಸ್ಯ ಪ್ರಭಾವೇಣ ಧನ ಪುತ್ರಾನ್ವಿತೋ ಭವತ್ ಲೋಕೇ ಸುಖಂ ಭೂಕ್ತ ಚಾಂತೇ ಸತ್ಯ ಪೂರಂ ಯಂತಿತ್ವ' ಆ ವ್ರತದ ಪ್ರಭಾವದಿಂದ ಮಕ್ಕಳನ್ನೂ ಧನವನ್ನೂ ಪಡೆದನು. ಇಹಲೋಕದಲ್ಲಿ ಸುಖವನ್ನುಂಡು ಕೊನೆಗೆ ಸತ್ಯಪುರವನ್ನು (ಮೋಕ್ಷವನ್ನು) ಹೊಂದಿದನು. ಇಂತು ಶ್ರೀ ಸ್ಕಂದ ಪುರಾಣದ ರೇಖಾಖಂಡದಲ್ಲಿ ಹೇಳಲಾದ ಶ್ರೀ ಸತ್ಯನಾರಾಯಣನ ಕಥೆಯಲ್ಲಿ ಎರಡನೆಯ ಅಧ್ಯಾಯವು ಇಲ್ಲಿಗೆ ಮುಗಿಯಿತು ಎಂದು ಸೂತನು ಹೇಳಿದನು.

೩ನೇ ಅಧ್ಯಾಯ

ತರುವಾಯ ಸೂತಪುರಾಣಿಕನು ಶೋತೃಗಳಾದ ಋಷಿಶ್ರೇಷ್ಠರನ್ನು ಕುರಿತು ಶ್ರೀ ಸತ್ಯನಾರಾಯಣನ ಅತುಲ ಪ್ರಭಾವದ ಬಗೆಯನ್ನು ವ್ಯಕ್ತಪಡಿಸಲು ಒಂದು ಕಥೆಯನ್ನು ಹೇಳುವೆನು ಕೇಳಿರಿ ಎಂದು ಪ್ರಸ್ತಾಪಿಸಿ ಹೇಳಲು ಆರಂಭಿಸಿದನು.

ಪೂರ್ವಕಾಲದಲ್ಲಿ ನಮ್ಮ ಆರ್ಯವರ್ತದೊಳಗೆ ಒಂದು ವಿಸ್ತೃತವಾದ ರಾಜ್ಯವನ್ನು ಉಲ್ಕಾಮುಖನೆಂಬ ಅರಸನು ಆಳುತ್ತಿದ್ದನು. ಆತನು 'ಜಿತೇಂದ್ರಿಯದ ಸತ್ಯವಾದಿ'. ಜಿತೇಂದ್ರಿಯನು ಇಂದ್ರಿಯವನ್ನು ಗೆದ್ದವನು. ಮನಸ್ಸನ್ನು ಅಂಕೆಯಲ್ಲಿ ಇರಿಸಿದವನು ಮತ್ತು ಸತ್ಯವಾದಿಯೂ ಆಗಿದ್ದನು. ಧರ್ಮನಿರತವಾದ ಅರಸನು ಪ್ರತಿ ನಿತ್ಯವೂ ತಪ್ಪದೇ ದೇವಸ್ಥಾನಗಳಿಗೆ ಹೋಗುವನು. ದೇವರ ದರ್ಶನ ಪಡೆಯುವನು, ದೀನ ಯಾಚಕರಿಗೂ, ಬ್ರಾಹ್ಮಣರಿಗೂ ದಾನ ಮಾಡಿ ಅವರನ್ನು ಸಂತೋಷಗೊಳಿಸುವನು. ಅದೇ ಈಶ್ವರ ಪೂಜೆ ಎಂದು ನಂಬುವನು. 'ಪ್ರಮಗ್ಧ' ಎಂಬ ಸುಶೀಲವತಿಯಾದ ಸಾಧ್ವಿಯು ಆತನ ಧರ್ಮಪತ್ನಿಯು. ಪತಿಪತ್ನಿಯರೀರ್ವರೂ ಆಗಿನ ಕಾಲಕ್ಕೆ ಆದರ್ಶಪ್ರಾಯರಾಗಿದ್ದರು. 'ರಾಜಕಾಲಸ್ಯ ಕಾರಣಂ' ಎಂಬಂತೆ ಇಂತಹ ರಾಜನ ಆಳ್ವಿಕೆಯಲ್ಲಿ ಪ್ರಜೆಗಳೆಲ್ಲರೂ ಸುಖಿಯಾಗಿದ್ದರು. ಅರಸ ಅರಸಿಯರೀರ್ವರೂ ಹಲವು ಬಗೆಯ ವ್ರತಗಳನ್ನು ಆಚರಿಸುವರು.

ಒಂದು ದಿನ ಅದೇ ಬುದ್ಧಿಯಿಂದ ಶ್ರೀ ಸತ್ಯನಾರಾಯಣ ವ್ರತವನ್ನು ಆಚರಿಸುವೆವೆಂದು ಸಂಕಲ್ಪಿಸಿದರು. ಬದ್ರಶೀಲಂ ಎಂಬ ನದೀ ತೀರಕ್ಕೆ ಬಂದಿಳಿದರು. ಪೂಜೆಯ ಸಾಮಗ್ರಿಗಳೆಲ್ಲವನ್ನೂ ಮುಂದಾಗಿಯೇ ಸಜ್ಜುಗೊಳಿಸಲಾಗಿತ್ತು. ಆದ್ದರಿಂದ ಅವರು ಶ್ರೀ ಸತ್ಯನಾರಾಯಣ ಪೂಜೆಯನ್ನು ಆರಂಭಿಸಿದರು. ಅಷ್ಟರಲ್ಲಿ ಒಬ್ಬ ಸಾಧುವು ಹೊಳೆಯ ಮಾರ್ಗವಾಗಿ ಬಂದಿಳಿದನು. ಅವನು ತನ್ನ ಹಾದಿಯಲ್ಲಿ ಬಹಳಷ್ಟು ಪದಾರ್ಥಗಳನ್ನು ತುಂಬಿಕೊಂಡು ವ್ಯಾಪಾರ ಮಾಡಲು ಮುಂದೆ ಹೊರಟಿದ್ದನು. ಅಲ್ಲಿಯೇ ನದಿ ದಂಡೆಯಲ್ಲಿ ವ್ರತವನ್ನು ಮಾಡುತ್ತಾ ಕುಳಿತ ರಾಜನನ್ನು ನೋಡಿದನು. ಈ ಪ್ರಕಾರವು ಎನೆಂಬುವುದನ್ನು ತಿಳಿದುಕೊಳ್ಳಲು ಕುತೂಹಲ ಉಂಟಾಯಿತು. ಅದಕ್ಕಾಗಿ ನಾವೆಯನ್ನು ಅಲ್ಲಿಯೇ ನಿಲ್ಲಿಸಿದನು. ತಾನು ರಾಜನು ಮಾಡುತಲಿದ್ದ ಕರ್ಮದತ್ತ ನೋಡಿದನು. ತನ್ನ ಕರ್ಮದಲ್ಲಿ ನಿರತನಾದ ಅರಸನನ್ನು ಕಂಡು ಆ ವ್ಯಾಪಾರಿಯು 'ಅರಸನೇ! ನಿಮಗೆ ನನ್ನ ನಮಸ್ಕಾರವು. ತಾವು ಇದೀಗ ಇಷ್ಟೊಂದು ಭಕ್ತಿಯುತವಾದ ಮನಸ್ಸಿನಿಂದ ಮಾಡುತ್ತಲಿರುವ ಕರ್ಮ ಅದಾವುದು? ಅದಾವ ಫಲವನ್ನು ಹೊಂದಲು ಈ ಕರ್ಮವನ್ನು ಮಾಡುತ್ತಲಿರುವಿರಿ? ಎಂಬುದನ್ನು ಕೇಳಲು ನಾನು ಬಯಸುವೆ. ಅದೆಲ್ಲವನ್ನೂ ಪ್ರಕತಗೊಲಿಸುವ ಕೃಪೆಯಾಗಬೇಕೆಂದು ಕೇಳಿದನು. ವ್ಯಾಪಾರಿಯಾದ ಅವನ ನುಡಿಗಳನ್ನು ಕೇಳಿ ಅರಸನು 'ಪೂಜನಂ ಕ್ರಿಯತೇ ಸಾದ್ಯವೋ ವಿಷ್ಣೊರ ತೂಲತೇಜಸಹ' ಎಲೈ ಸಾಧುವೇ! ಈಗ ನಾನು ವ್ರತಸ್ಥನಾಗಿ ಮಹಾ ತೇಜಸ್ವಿಯಾದ ವಿಷ್ಣುವನ್ನು ಶ್ರೀಮನ್ನಾರಾಯಣನನ್ನು ಪೂಜಿಸುತಲಿರುವೆ. ಈ ವ್ರತದ ಫಲವಾಗಿ ಮಾನವನು ಧನ ಧಾನ್ಯ ಸಂತಾನಗಳ ನಿಧಿಯನ್ನು ಹೊಂದುವನು. ಬಹಳ ಹೇಳುವುದೇನು? ಮಾನವನ ಮನೋರಥಗಳೆಲ್ಲವೂ ಕೈಗೂಡುವುವು. ಇದು ನಿಶ್ಚಿತ ಎಂದು ಸಾಧುವಿಗೆ ವ್ರತದ ಪ್ರಭಾವವನ್ನು ವಿವರಿಸಿದನು.

ರಾಜನ ಮಾತುಗಳಿಂದ ಆ ವ್ಯಾಪಾರಿಯ ಮನದಲ್ಲಿ ಕೂಡಲೇ ಭಕ್ತಿ ಭಾವನೆಯು ಉದಯಿಸಿತು. ರಾಜನನ್ನು ಕುರಿತು 'ಅರಸನೇ ಈ ವ್ರತವನ್ನು ಯಾವ ರೀತಿಯಾಗಿ ಆಚರಿಸಬೇಕೆಂದು ಸವಿಸ್ತಾರವಾಗಿ ಹೇಳು'. 'ಮಮಕ್ಷೇಮ ಸಂತತಿ ನಾಸ್ತಿ' ತನಗೂ ಸಂತತಿ ಇಲ್ಲ. ಈ ವ್ರತದಿಂದ ಸಂತತಿ ಉಂಟಾಗುವುದೆಂದು ನಿಶ್ಚಿತವಿದ್ದರೆ ನಾನಾದರೂ ಈ ವ್ರತವನ್ನು ಮಾಡುವೆನು ಎಂದು ಹೇಳಿದನು. ಮತ್ತು ರಾಜನ ಮುಖದಿಂದ ಕರಟದ ವಿಧಾನವನ್ನೆಲ್ಲ ಅರಿತುಕೊಂಡನು ಮತ್ತು ಸಂತೋಷಮನಸ್ಕನಾಗಿ ವ್ಯಾಪಾರವನ್ನು ಅಲ್ಲಿಯೇ ನಿಲ್ಲಿಸಿ ಮನೆಗೆ ಬಂದನು. ಮನೆಯಲ್ಲಿರುವ ಲೀಲಾವತಿ ಎಂಬ ತನ್ನ ಪ್ರಿಯ ಪತ್ನಿಯನ್ನು ಕುರಿತು ಸಂತತಿಯನ್ನು ಕೊಡುವಂತಹ ಆ ವ್ರತವನ್ನು ತಿಳಿಸಿ ಅರಸನಿಂದ ಅರಿತುಕೊಂಡ ವಿಧಾನಗಳನ್ನೆಲ್ಲಾ ಹೇಳಿ 'ಪ್ರಿಯೇ, ನನಗೆ ಸಂತತಿಯಾದ ನಂತರ ನಾನಾದರೂ ಈ ವ್ರತವನ್ನು ಮಾಡುವೆನೆಂದು ಹೇಳಿದನು. ವ್ಯಾಪಾರಿ ಬಣಜಿಗ ತನ್ನ ಹೆಂಡತಿಯೊಡನೆ ಇಂತೂ ಮಾಡಿದ ಮೇಲೆ ಕೆಲ ದಿನಗಳು ಕಳೆದವು. ಲೀಲಾವತಿಯು ಗಂಡನೊಡನೆ ಕೂಡಿಕೊಂಡು ಸಂತೋಷದಿಂದ ಇರಹತ್ತಿದಳು. ನಾನಾದರೂ ಈ ವ್ರತವನ್ನು ಮಾಡುವೆನೆಂದು ಸಂಕಲ್ಪಿಸಿದ ಮಾತ್ರಕ್ಕೆ ಶ್ರೀ ಸತ್ಯನಾರಾಯಣನು ಸುಪ್ರೀತನಾಗಿ ಮಕ್ಕಳ ಫಲವನ್ನು ನೀಡಲು ಉದ್ಯುಕ್ತನಾದನೆಂಬಂತೆ ಆತನ ಅನುಗ್ರಹದಿಂದ 'ಗರ್ಭಿಣಿ ಸಾ ಬೇತಸ್ಯ ಭಾರ್ಯ' ಲೀಲಾವತಿಯು ಗರ್ಭಿಣಿಯಾದಳು. ಸಾಧುವು ಹೆಂಡತಿಗೆ ಉಂಟಾಗುವ ಬಯಕೆಗಳನ್ನೆಲ್ಲಾ ಪೂರೈಸಿದನು. ಬಸಿರ್ವತಿಗೆ ಮಾಡಬೇಕಾದ ಶಿಷ್ಠಾಚಾರಗಳೆಲ್ಲಾ ಸಾಗಿದವು. ಈ ರೀತಿಯಾಗಿ ಲೀಲಾವತಿಯ ಗರ್ಭಕ್ಕೆ ಒಂಭತ್ತು ತಿಂಗಳು ತುಂಬಿದವು. ಹತ್ತನೆಯ ತಿಂಗಳು ಪ್ರಾಪ್ತವಾಯ್ತು. ಬಳಿಕ ಒಂದು ಶುಭ ದಿನದಲ್ಲಿ ಕೋಮಲತನವೂ ಸುಂದರವೂ ಆದ ಒಂದು ಕನ್ಯಾರತ್ನವು ಜನಿಸಿತು. ಆಗ ದಂಪತಿಗಳಿಗೆ ಆದ ಆನಂದವು ಹೇಳತೀರದು. ಗಂಡಾಗಲಿ, ಹೆಣ್ಣಾಗಲಿ ಹುಟ್ಟಿದ ಕೂಸಿನಿಂದ ತಮ್ಮ ಬಂಜೆತನ ದೂರವಾಯಿತೆಂದು ಅವರು ಒಳ್ಳೆಯ ಉಲ್ಲಸಿತರಾದರು. ಮಗುವಿಗೆ ಜಾತಕ ಕರ್ಮ, ನಾಮಕರಣಾದಿ ಸಂಸ್ಕಾರಗಳು ಮಾಡಲ್ಪಟ್ಟವು. ಕೂಸಿಗೆ ಕಲಾವತಿ ಎಂದು ಹೆಸರಿಟ್ಟರು.

ಶುಕ್ಲ ಪಕ್ಷದ ಚಂದ್ರನಂತೆ ಆ ಮಗಳು ಬೆಳೆಯುತ್ತಾ ದೊಡ್ದವಳಾಗ ಹತ್ತಿದಳು. ಬಳಿಕ ಒಂದು ದಿನ ಲೀಲಾವತಿಯು ತನ್ನ ಪತಿಯನ್ನು ಕುರಿತು 'ಸ್ವಾಮಿಯೇ ಶ್ರೀ ಸತ್ಯನಾರಾಯಣ ದೇವನ ಕೃಪೆಯಿಂದ ನಮಗೆ ಸಂತತಿ ಲಭಿಸಿತು. ಕೂಸು ಬೆಳೆಯಿತು. ಮಗಳು ದೊಡ್ಡವಳಾದಳು. ಆದರೆ ನೀವು ಹಿಂದಕ್ಕೆ ಹರಕೆ ಹೊತ್ತಂತೆ ಇದುವರೆಗೆ ಶ್ರೀ ಸತ್ಯನಾರಾಯಣ ವ್ರತವನ್ನು ಆಚರಿಸಲಿಲ್ಲವಲ್ಲಾ' ಎಂದು ಸಂಕಲ್ಪಿಸಿದ ಸ್ಮರಣೆಯನ್ನು ಇತ್ತಳು. ಅದಕ್ಕೆ ಪ್ರತ್ಯುತ್ತರವಾಗಿ ಆ ಬಣಜಿಗನು 'ಪ್ರಿಯೇ! ಅಹುದು. ನಾನು ಬೇಡಿಕೊಂಡ ಹರಕೆಯು ನನ್ನ ಸ್ಮರಣೆಯಲ್ಲಿದೆ. ಆದರೆ ಈಗ ಕಾರ್ಯಬಾಹುಲ್ಯದ ಮೂಲಕ ಆ ವ್ರತವನ್ನು ಆಚರಿಸಲು ಸಾಧ್ಯವಿಲ್ಲ. "ಹರಕೆಗೆ ಹನ್ನೆರಡು ವರ್ಷ" ಎಂದು ಗಾದೆಯುಂಟು. ನಮ್ಮ ಕಲಾವತಿಗೆ ವರನನ್ನು ಶೋಧಿಸಿ ಬೇಗನೆ ವಿವಾಹವನ್ನು ಮಾಡಬೇಕಾಗಿದೆ. ಅದೇ ಸಮಯಕ್ಕೆ ಹರಕೆಯನ್ನು ಮುಗಿಸಿದರಾಯ್ತು' ಎಂದು ಬಾರ್ಯಂ ಮಸ್ಲಾಸ್ಯ ಹೆಂಡತಿಯನ್ನು ಸಮಾಧಾನಗೊಳಿಸಿದನು. ಕಾರ್ಯ ನಿಮಿತ್ತ ಪರ ಊರಿಗೆ ಹೋದನು. ಕಲಾವತಿ ಕನ್ಯೆಯು ತಂದೆಯ ಮನೆಯಲ್ಲಿ ದಿನದಿನಕ್ಕೆ ಬೆಳೆಯಹತ್ತಿದಳು. ಒಂದು ದಿನ ಗೆಳತಿಯರೊಡನೆ ಆಡುವ ತನ್ನ ಮಗಳನ್ನು ನೋಡಿ ಲಗ್ನಕ್ಕೆ ತಕ್ಕವಳಾದುದನ್ನು ಮನಗಂಡನು. ಕೂಡಲೇ ತನ್ನ ಪುರೋಹಿತನನ್ನು ಕರೆದು ಮಗಳಿಗಾಗಿ ಕುಲಶೀಲ ರೂಪಗಳಿಂದ ಉತ್ತಮನಾದ ವರನನ್ನು ಗೊತ್ತುಪಡಿಸು ಎಂದು ಹೇಳಿ ಕಳುಹಿಸಿದನು. ಸಾಧುವಿನಿಂದ ಆಜ್ಞಾಪಿತನಾದ ಪುರೋಹಿತನು ತಿರುಗುತ್ತಾ ತಿರುಗುತ್ತಾ ಕಾಂಚನ ಎಂಬ ಪಟ್ಟಣಕ್ಕೆ ಹೋದನು.

ಅಲ್ಲಿ ಒಬ್ಬ ವಣಿಕ ಪುತ್ರನನ್ನು ವರನನ್ನಾಗಿ ಆರಿಸಿದನು. ಅವನನ್ನು ಕರೆತಂದು ಸಾಧುವಿಗೆ ತೋರಿಸಿದನು. ಕುಲೀನನೂ ಆದ ಚೆಲುವನೂ ಆದ ಎಲ್ಲ ಸದ್ಗುಣಗಳಿಂದ ಪೂರ್ಣನೂ ಆದ ವಣಿಕಪುತ್ರನನ್ನು ನೋಡಿ ಸಾಧುವು ಸಂತೋಷಭರಿತನಾದನು. ತನ್ನ ಜ್ಞಾತಿಗಳಿಂದ ಬಾಂಧವರಿಂದಲೂ ಕೂಡಿಕೊಂಡು ವಿಧಿಯುಕ್ತ ಮಾರ್ಗದಿಂದ ಮಗಳನ್ನು ವಣಿಕಪುತ್ರನಿಗೆ ಮಾಡುವೆ ಮಾಡಿಕೊಟ್ಟನು. ವಿವಾಹ ಸಮಾರಂಭವು ಬಣಜಿಗನ ಸಿರಿವಂತಿಕೆಗೆ ತಕ್ಕಂತೆ ಒಳ್ಳೆಯ ಸಡಗರದಿಂದ ನೆರವೇರಿತು. ಮದುವೆಗಾಗಿ ಅಪರಿಮಿತ ಧನವನ್ನು ವ್ಯಯಿಸಿದನು. ಆದರೆ ಮನೆಯಲ್ಲಿ ಭಾಗ್ಯವು ಹೆಚ್ಚಾಗುತ್ತಾ ಹೋದಂತೆ ಆ ಐಶ್ವರ್ಯದ ಮದದಲ್ಲಿ 'ದಶ್ವ ಸ್ತೇನಂ ವಿಸ್ಮಯೇ ಮೃತ ಮುಕ್ತಮಂ' ಮಗಳ ಲಗ್ನದ ಕಾಲಕ್ಕಾದರೂ ಆ ಸಾಧುವು ಶ್ರೀ ಸತ್ಯನಾರಾಯಣನ ವ್ರತವನ್ನು ಮರೆತುಬಿಟ್ಟನು. 'ತೇನ ರೂಪ್ಯೋಭ ಕ್ರಬಂ' ಆದ್ದರಿಂದ ಶ್ರೀ ಸತ್ಯನಾರಾಯಣನು ಸಿಟ್ಟಾದನು. ಮುಂದೆ ಕೆಲಕಾಲದ ನಂತರ ತನ್ನ ವ್ಯವಹಾರ ಕರ್ಮದಲ್ಲಿ ಕುಶಲನಾದ ಸಾಧುವು ಬ್ಯಾಪಾರ ಮಾದುವುದಕಾಗಿ ಅಳಿಯನ ಜತೆಗೂಡಿ ಸಿಂಧೂ ನದಿ ತೀರದಲ್ಲಿರುವ ರತ್ನಸಾರವೆಂಬ ಪಟ್ಟಣಕ್ಕೆ ಹೋದನು. ಅಲ್ಲಿ ಕೆಲವು ದಿನಗಳವರೆಗೆ ವ್ಯಾಪಾರ ಮಾಡಿದನು. ಅಲ್ಲಿ ಹೇರಳ ಹಣವನ್ನು ಸಂಪಾದಿಸಿಕೊಂಡು ಸಾಧುವು ಆತನ ಅಳಿಯನು ಇಬ್ಬರೂ ಅಲ್ಲಿಂದ ಹೊರಟರು.

ಅತೀ ಮನೋಹರನಾದ ಚಂದ್ರಕೆತು ರಾಜನ ರಾಜಧಾನಿಗೆ ವ್ಯಾಪಾರ ಮಾಡುವುದಕ್ಕಾಗಿ ಬಂದರು. ಅಲ್ಲಿರುವಾಗ ಆ ಬಣಜಿಗನಿಗೆ ಒಂದು ಸ್ವಪ್ನ ದೃಷಾಂತವಾಯಿತು. ಕನಸಿನಲ್ಲಿ ಅವನಿಗೆ ಶ್ರೀ ಸತ್ಯನಾರಾಯಣನು ಕಾಣಿಸಿಕೊಂಡನು ಮತ್ತು ಆ ದೇವನು ಸಾಧುವನ್ನು ಕುರಿತು 'ಎಲೈ ಸಾಧುವೇ! ನೀನು ವ್ರತ ಮಾಡುವ ಪ್ರತಿಜ್ಞೆಯನ್ನು ಮಾಡಿ ಈಗ ಭ್ರಷ್ಟ ಪ್ರತಿಜ್ಞಾನಾಗಿರುವೆ. ಅದಕ್ಕಾಗಿ ರಾಜಕಾಲಸ್ಯ ಜಾಸ್ಯ ಮಹಾದುಃಖ ಭವಿಷ್ಯತಿಃ. ಭಯಂಕರವಾಗಿಯೂ ಕಠಿಣವಾಗಿಯೂ ಇರುವ ಮಹಾ ದುಃಖವೂ ಉಂಟಾಗಲಿ.' ಎಂದು ಶಾಪವಿತ್ತನು. ಬಳಿಕ ಸಾಧುವು ಸ್ವಪ್ನದಿಂದ ಎಚ್ಚೆತ್ತು ಬಳಿಕ ಅವನ್ನು ನಂಬಲಾಗದೆ ಎಂದಿನಂತೆ ತನ್ನ ವ್ಯವಹಾರವನ್ನು ಸಾಗಿಸುತಲಿದ್ದನು. ಅನಂತರ ಕೆಲಕಾಲದ ಮೇಲೆ ಚಂದ್ರಕೆತು ರಾಜನಲ್ಲಿ ರಾಜಧಾನಿಯಲ್ಲಿ ಕಳವು ಸಂಭವಿಸಿತು. ಒಬ್ಬ ಕಳ್ಳನುರಾಜನ ದ್ರವ್ಯವನ್ನು ಕದ್ದು ಸಾಧು ಮತ್ತು ಸಾಧುವಿನ ಅಳಿಯನಿರುವಲ್ಲಿಗೆ ಓಡಿಬಂದನು. ಅಷ್ಟರಲ್ಲಿ ಆ ಕಳ್ಳನನ್ನು ಹಿಡಿಯುವುದಕ್ಕಾಗಿ ಆತನ ಹಿಂದಿನಿಂದಲೇ ರಾಜದೂತರು ಬೆನ್ನಟ್ಟಿ ಬಂದರು. ತನ್ನನ್ನು ಬೆನ್ನಟ್ಟಿದ ರಾಜದೂತರ ಸುಳಿವನ್ನು ಕಂಡು ಅಂಜಿ ಕಳ್ಳನು ತಾನು ತಂದ ರಾಜದ್ರವ್ಯವನ್ನು ಅಲ್ಲಿಯೇ ಬಿಟ್ಟು ಬಹು ಬೇಗನೆ ಅಡಗಿಕೊಂಡನು. ರಾಜದೂತರು ಸಾಧುವಿದ್ದ ಸ್ಥಳಕ್ಕೆ ಬರಲು ಅಲ್ಲಿ ರಾಜದ್ರವ್ಯವು ಕಾಣಿಸಿತು. ಆದ್ದರಿಂದ ಅವರೇ ಕಳ್ಳರೆಂದು ಭಾವಿಸಿ ಅವರಿಬ್ಬರನ್ನೂ ಹೆಡೆಮುರಿಬಿಗಿದು ಕಟ್ಟಿ ರಾಜನೆಡೆಗೆ ಒಯ್ದರು. ರಾಜದೂತರು ಅವರಿಬ್ಬರನ್ನೂ ನಿಲ್ಲಿಸಿ ಸಂತೋಷದಿಂದ ಇದೋ ಪ್ರಭುವೇ! ಇವೇ ಕಳುವಿನಿಂದ ಮಾಯವಾದ ದ್ರವ್ಯವು. ಇವರೇ ಈ ದ್ರವ್ಯವನ್ನು ಕದ್ದ ಕಳ್ಳರು. ಇವರಿಗೆ ಅದ್ಯಾವ ಶಿಕ್ಷೆಯನ್ನು ವಿಧಿಸಬೇಕು? ವಿಚಾರ ಮಾಡಿ ನಮಗೆ ಅಪ್ಪಣೆ ದಯಪಾಲಿಸಬೇಕೆಂದು ಕೇಳಿಕೊಂಡರು. ಅರಸನು ಅವರ ಬಗ್ಗೆ ವಿಚಾರವೇ ಮಾಡಲಿಲ್ಲ. ಹಾಗೆಯೇ ಆಜ್ಞಾಪಿಸಿದನು. ಆತನ ಆಜ್ಞೆಯಂತೆ ರಾಜದೂತರು ಆ ಬಣಜಿಗರನ್ನು ತೀರ ಕಠಿಣಮಾರ್ಗದಲ್ಲಿರುವ ಒಂದು ಸೆರೆಮನೆಯಲ್ಲಿ ಒಯ್ದು ಇಟ್ಟರು. ಸಾಧುವು ತಾವು ಕಳ್ಳರಲ್ಲವೆಂದು ರಾಜನಿಗೆ ಪರಿಪರಿಯಾಗಿ ಕೇಳಿಕೊಂಡನು. ಆದಾಗ್ಯೂ ಅರಣ್ಯರೋಧನವಾಯ್ತು. ರಾಜನು ತನ್ನ ದ್ರವ್ಯದೊಂದಿಗೆ ಅವರ ದ್ರವ್ಯವನ್ನೂ ತನ್ನ ಭಂಡಾರಕ್ಕೆ ಕಳುಹಿಸಿದನು.

ಆಗ ಸಾಧುವು ತಾನು ಶ್ರೀ ಸತ್ಯನಾರಾಯಣ ದೇವರ ಸಂಕಲ್ಪ ಮಾಡಿ ವ್ರತ ಮಾಡದೇ ಭ್ರಷ್ಟನಾದೆನಲ್ಲಾ? ದೇವನೇ ಕೋಪಿಸಿಕೊಂಡಮೇಲೆ ನಮ್ಮನ್ನು ಕಾಪಾಡುವವರಾರು? ಎಂದು ಪಶ್ಚಾತ್ತಾಪದಿಂದ ತಳಮಳಗೊಂಡನು. ಕಳವು ಮಾಡದೇ ಸಾಧುವು ಮತ್ತು ಆತನ ಅಳಿಯನು ಶಿಕ್ಷೆಗೊಳಗಾಗಬೇಕಾಯ್ತು.

ಇತ್ತ ಸಾಧುವಿನ ಹೆಂಡತಿ, ಮಗಳು ದುಃಖಪೂರಿತರಾದರು. ಮನೆಯೊಳಗಿನ ದ್ರವ್ಯವೆಲ್ಲವೂ ಕಳುವಾಗಿದ್ದರಿಂದ ಅವರು ಅನ್ನಾನ್ನಗತಿತರಾದರು. ಆದಿ ವ್ಯಾಧಿಗಳಿಂದ ಪೀಡೆಗೊಂಡರು. ಹಸಿವೆ ನೀರಡಿಕೆಗಳಿಂದ ಕಣಗಾಲ ಸ್ಥಿತಿಯನ್ನು ಹೊಂದಿದರು. ಆಹಾರಹೀನತೆಗಳಿಂದ ಅವರಿಬ್ಬರೂ ಭಿಕ್ಷಾವೃತ್ತಿಯನ್ನು ಅವಲಂಬಿಸಬೇಕಾಯ್ತು. ಕಲಾವತಿಯಂತಹ ಹರೆಯದವಳು ಮತ್ತು ಸಿರಿವಂತಿಕೆಯಲ್ಲಿ ಬೆಳೆದವಳು ಹೊಟ್ಟೆಯ ಕಿಚ್ಚನ್ನು ತಣಿಸಲು ಭಿಕ್ಷೆಗಾಗಿ ಮನೆಮನೆಗೆ ತಿರುಗಹತ್ತಿದಳು. ಇಂತೂ ಸಾಧುವಿನ ಹೆಂಡತಿಯೂ ಮಗಳೂ ಅಷ್ಟದರಿದ್ರರಾದರು. ಸಾಧುವೂ ಮತ್ತು ಅಳಿಯನೂ ಸೆರೆಮನೆವಾಸಿಗಳಾಗಿಯೂ ದುಃಖದಿಂದ ಕಾಲಕಳೆಯಹತ್ತಿದರು. ಇಂತಹ ಸಹಿಸಲಸಾಧ್ಯವಾದ ಅಪವಾದ ಆ ಸಿರಿವಂತಿಕೆಯ ಕುಟುಂಬಕ್ಕೆ ಒದಗಿತೆಂದು ಭಾವಿಸಿದನು.

ಒಂದು ದಿನ ಕಲಾವತಿಯು ಹಸಿವೆಯಿಂದ ಬಹಳ ಬಳಲಿ ಒಬ್ಬ ಬ್ರಾಹ್ಮಣನ ಮನೆಯ ಬಾಗಿಲಿಗೆ ಹೋದಳು. ಭಿಕ್ಷೆಯ ಬೇಡಿಕೆಗಾಗಿ ಕೂಗಬೇಕೆನ್ನುವಷ್ಟರಲ್ಲಿ ಬ್ರಾಹ್ಮಣನು ಮಾಡುತ್ತಿರುವ ಶ್ರೀ ಸತ್ಯನಾರಯಣನ ವ್ರತವು ಆಕೆಯ ಕಣ್ಣಿಗೆ ಬಿತ್ತು. ಕೂಡಲೇ ಭಕ್ತಿಯುತರಾಗಿ ಅಂತಃಕರಣ ಉಳ್ಳವರಾಗಿ 'ಉಪವಿಶ್ವ ಕಥಾಯಂ ರಾತ್ರೋ ಗೃಹಂ ಪ್ರತಿ' ಅಲ್ಲಿ ಸ್ವಲ್ಪ ಹೊತ್ತು ಕುಳಿತಳು. ದೈವೀ ಪ್ರಭಾವದಿಂದ ಕಥೆಯನ್ನು ಕೇಳಿದಳು. ಶ್ರೀ ಸತ್ಯನಾರಾಯಣನನ್ನು ಮನಸ್ಸಿನಲ್ಲಿ ಪ್ರಾರ್ಥಿಸಿದಳು. ಭಕ್ತಿಯಿಂದ ಪ್ರಸಾದವನ್ನು ಭಕ್ಷಿಸಿದಳು. ರಾತ್ರಿಯೂ ಬಹಳವಾದ ಪ್ರಯುಕ್ತ ಹೊರಟು ಮನೆಗೆ ಬಂದಳು. ಆಗ ಲೀಲಾವತಿಯು ಮಗಳನ್ನು ಕಂಡು 'ಮಗಳೇ! ಇಷ್ಟು ರಾತ್ರಿಯ ಹೊತ್ತಿಗೆ ನೀನು ಅದೆಲ್ಲಿ ಕುಳಿತಿದ್ದಿ? ನಿನ್ನ ಮನದ ಬಯಕೆಗಳೇನು?' ಎಂದು ಕೇಳಿದಳು. ಕಲಾವತಿಯು 'ತಾಯೀ! ನಾನು ಇದುವರೆಗೂ ಒಬ್ಬ ಬ್ರಾಹ್ಮಣನ ಮನೆಯಲ್ಲಿ ಕುಳಿತಿದ್ದೆನು. ಅಲ್ಲಿ ಬ್ರಾಹ್ಮಣನು ಒಂದು ವ್ರತವನ್ನು ಮಾಡುತಲಿದ್ದನು. ಅದಕ್ಕೆ ಶ್ರೀ ಸತ್ಯನಾರಾಯಣವ್ರತವೆಂದು ಹೇಳುವರಂತೆ. ಅದು ಮನದ ಬಯಕೆಗಳನ್ನು ಪೂರ್ಣ ಮಾಡಲು ಸಮರ್ಥವಾದುದಂತೆ. ನಾನು ಆ ಪೂಜೆಯ ಕ್ರಮವನ್ನು ಕಣ್ತುಂಬ ನೋಡಿದೆ.' ಎಂದು ಹೇಳಿ ತನ್ನ ತಾಯಿಗೂ ತುಸು ಪ್ರಸಾದವನ್ನು ಕೊಟ್ಟಳು. ಈ ಸಂಗತಿಯನ್ನು ಕೇಳಿ ಲೀಲಾವತಿಗೆ ಒಳ್ಳೆಯ ಹರ್ಷವಾಯಿತು. ತನ್ನ ಪತಿಯು ಹರಕೆ ಹೊತ್ತ ವ್ರತವು ಇದೇ ಆಗಿರಬೇಕೆಂದು ಭಾವಿಸಿ ತಾವೂ ಅದನ್ನು ಕೈಗೊಂಡರು.

ತಾವು ಕೈ ಹಿಡಿದಿರುವ ವ್ರತವು ಇದೇ ಆಗಿರಬೇಕೆಂದು ಕಲಾವತಿಯ ಲಗ್ನವಾದರೂ ಆಚರಿಸಪಡಲಿಲ್ಲವೆಂದು ಅವಳ ಸ್ಮರಣೆಗೆ ಬಂದಿತು. ದೈವೀಕೊಪದಿಂದ ತನ್ನ ಪತಿ ಹಾಗು ಅಳಿಯ ಶಿಕ್ಷೆ ಅನುಭವಿಸುತ್ತಲಿರುವರೆಂದು ತಮ್ಮ ಐಶ್ವರ್ಯವೆಲ್ಲಾ ನಾಶವಾಗಿ ಭಿಕ್ಷಾವೃತ್ತಿಗೆ ಇಳಿದೆವೆಂದು ನಿಶ್ಚಿತ ತಿಳುವಳಿಕೆಯು ಅವಳಲ್ಲಿ ಉಂಟಾಯಿತು. ಆದ್ದರಿಂದ ಅವಳು ತಳಮಳಗೊಂಡಳು. ಕೂಡಲೇ ಪೂಜೆಯ ಮತ್ತು ಪ್ರಸಾದದ ಸಾಮಗ್ರಿಗಳನ್ನು ತಂದಳು. ಒಳ್ಳೆಯ ಸಂತೋಷದಿಂದ ತಾನೂ ತನ್ನ ಭಾಂದವರಿಂದಲೂ ಜ್ಞಾತಿಯ ಜನರಿಂದಲೂ ಭಕ್ತಿಪೂರ್ವಕವಾಗಿ ಶ್ರೀ ಸತ್ಯನಾರಾಯಣನ ಪೂಜೆ ಮಾಡಿದಳು. ಅಲ್ಲಿ ಶ್ರೀ ಸತ್ಯನಾರಾಯಣನನ್ನು ಕುರಿತು 'ದೇವಾ! ನನ್ನ ಗಂಡನೂ ಮತ್ತು ಅಳಿಯನೂ ಬೇಗ ಬರಲಿ. ಅವರು ಮಾಡಿದ ಅಪರಾಧವನ್ನು ಕ್ಷಮಿಸು' ಎಂದು ಬೇಡಿಕೊಂಡಳು. ಸಾಧುವಿನ ಹೆಂಡತಿಯಾದ ಲೀಲಾವತಿಯೂ ಅಂತಃಕರಣದಿಂದ ಮಾಡಿದ ಪೂಜೆಯ ವ್ರತದಿಂದ ಶ್ರೀಮನ್ನ್ನಾರಾಯಣನು ಸಂತುಷ್ಟನಾದನು. ಆ ಕೂಡಲೇ ಚಂದ್ರಕೇತು ರಾಜನ ಸ್ವಪ್ನದಲ್ಲಿ ಹೋಗಿ 'ರಾಜನೇ! ನೀನು ಕಾರಾಗೃಹದಲ್ಲಿ ಇತ್ತ ಇಬ್ಬರು ಬಣಜಿಗರನ್ನು ಬೆಳಗಾದ ಕೂಡಲೇ ಮುಕ್ತಮಾಡು. ನೀನು ತೆಗೆದುಕೊಂಡ ಅವರ ದ್ರವ್ಯವನ್ನು ಅವರಿಗೇ ಕೊಡು. ಧನಲಾಭದಿಂದ ನೀನು ಹಾಗೆ ಮಾಡದೇ ಹೋದರೆ "ನಾಶಯಾಮಿ ಸ್ವರಾಜ್ಯ ಧನ ಪುತ್ರಕಂ' ರಾಜ್ಯ ಐಶ್ವರ್ಯ ಹಾಗು ಮಕ್ಕಳೊಂದಿಗೆ ನಿನ್ನನ್ನು ನಾಶಮಾಡಿಬಿಡುವೆ.' ಎಂದು ಹೇಳಿ ಅದೃಶ್ಯನಾದನು.


ಅನಂತರ ರಾಜನು ಮುಂಜಾವಿನಲ್ಲಿ ಎದ್ದು ಸೃಜನರಿಂದ ಕೂಡಿಕೊಂಡು ತನ್ನ ಸ್ವಪ್ನ ದೃಷ್ಟಾಂತವನೆಲ್ಲಾ ತಿಳಿಸಿದನು. ಅನಂತರ ಬಣಜಿಗರು ರಾಜನಿಗೆ ನಮಸ್ಕರಿಸಿ ತಮ್ಮ ಹಿಂದಿನ ವೃತ್ತಾಂತವನ್ನೆಲ್ಲ ತಿಳಿಸಿದರು. ಬಳಿಕ ರಾಜನು ಅವರಿಗೆ ಏನೋ ನಿಮ್ಮ ದುರ್ದೈವದಿಂದ ಇಂತಹ ದುಃಖವನ್ನು ಅನುಭವಿಸಬೇಕಾಯ್ತು. ಇನ್ನು ಮುಂದೆ ನಿಮಗೆ ಏನೂ ಭಯವಿಲ್ಲವೆಂದು ಹೇಳಿ ಅವರಿಬ್ಬರ ಸಂಕೋಲೆಯನ್ನು ಕಡಿಸಿದನು. ಕ್ಷ್ಹೌರಕರ್ಮವನ್ನು ಮಾಡಿಸಿದನು. ವಸ್ತ್ರಾಲಂಕಾರ ನೀಡಿದನು. ಅವರನ್ನು ಸಂತೋಷಗೊಳಿಸಿ ಒಳ್ಳೆಯ ಮಾತುಗಳಿಂದ ಸಮಾಧಾನಪದಿಸಿದನು. ತಾನು ತೆಗೆದುಕೊಂಡ ಅವರ ದ್ರವ್ಯದಲ್ಲಿ ಅಷ್ಟೇ ದ್ರವ್ಯವನ್ನು ಹೆಚ್ಚಾಗಿ ಹಾಕಿ 'ಸಾಧುವೇ! ಇನ್ನು ನೀನು ಮನೆಗೆ ಹೋಗು.' ಎಂದು ಆಜ್ಞಾಪಿಸಿದನು. ರಾಜನು ಹೀಗೆ ಹೇಳುತ್ತಾನೆಂದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ಆದರೆ ಆ ದೈವೀ ಕ್ಷೋಭೆಗೆ ಯಾವುದು ತಾನೇ ಅಸಾಧ್ಯ?ಅದೆಷ್ಟು ತಾನೇ ಅವಕಾಶ?

'ಸುಖಾಸ್ಯಾ ನಂತರಂ ದುಃಖಂ ದುಃಖಾಸ್ಯಾನಂತರ ಸುಖಂ" ಅಂದರೆ, ಈ ಪ್ರಪಂಚದಲ್ಲಿ ಸುಖದ ಹಿಂದೆ ದುಃಖವೂ ದುಃಖದ ಹಿಂದೆ ಸುಖವೂ ಬರುವುದುಂಟು. ಸುಖ, ದುಃಖ, ಚಕ್ರದಂತೆ ಒಂದರ ಹಿಂದೆ ಒಂದು ಬರುವುವು. ಸಂಸಾರವು ಸುಖದುಃಖದ ಕಲಸುಮೆಲೋಗರವೆಂದು ಹೇಳುವುದುಂಟು. ಇದೆಲ್ಲವೂ ನಿಜವೇ. ಈವರೆಗೆ ದುಃಖಸಾಗರದಲ್ಲಿ ಮುಳುಗಿದ್ದ ಸಾಧುವಿನ ಕುಟುಂಬವು ಇನ್ನು ಮುಂದೆ ಸುಖವನ್ನು ಕಾಣುವ ಯೋಗ ಪರಮಾತ್ಮನ ಬಯಕೆಯಿಂದ ಒದಗಿಬಂತು.

ಅಲ್ಲಿ ಸಾಧುವು ರಾಜನಿಗೆ ನಮಸ್ಕರಿಸಿ 'ರಾಜನೇ! ನಿನ್ನ ಅನುಗ್ರಹದಿಂದ ನಾವು ಇನ್ನು ಹೋಗಿ ಬರುವೆವು.' ಎಂದು ಹೇಳಿದರು.ಊರಿಗೆ ತೆರಳಲು ಅವರೀರ್ವರೂ ಹೊರಟರು. ಮಾರ್ಗ ಕ್ರಮಿಸತೊಡಗಿತು. 'ಋಷಿಶಿಷ್ಯರೇ! ಆ ಸಾಧು ವೈಶ್ಯನ ಕಥೆಯು ಇಲ್ಲಿಗೇ ಮುಗಿಯಲಿಲ್ಲ. ಅದನ್ನೇ ಮುಂದುವರಿಸಿ ಹೇಳುವೆ ಕೇಳಿರಿ' ಎಂದು ಸೂತಪುರಾಣಿಕನು ಹೇಳಿದ್ದನ್ನೇ ಸ್ಕಂದ ಪುರಾಣದ ರೇಖಾ ಖಂಡದಲ್ಲಿ ಉಲ್ಲೇಖಿತವಾಗಿದ್ದ ಸಂಗತಿಗಳನ್ನೊಳಗೊಂಡ ಮೂರನೇ ಅಧ್ಯಾಯವು ಮುಗಿಯಿತು.


೪ನೇ ಅಧ್ಯಾಯ

ಸೂತಪುರಾಣಿಕನು ಹಿಂದಿನ ಕಥೆಯನ್ನೇ ಮುಂದುವರಿಸುತ್ತಾ ಋಷಿಗಳನ್ನು ಕುರಿತು ಶ್ರೀ ಸತ್ಯನಾರಾಯಣನ ಕೃಪೆಯಿಂದ ಸಾಧುವು ಆತನ ಅಳಿಯನೂ ಬಂಧಿವಾಸದಿಂದ ಮುಕ್ತರಾದರು. ಅನಂತರ ಆ ಸಾಧುವು ಆ ಚಂದ್ರಕೇತು ರಾಜನ ನಗರದಿಂದ ತನ್ನ ಊರಿಗೆ ಹೋಗಬೇಕೆಂದು ಆಲೋಚಿಸಿದನು. ವ್ಯಾಪಾರವು ಚೆನ್ನಾಗಿ ಸಾಗಿದ್ದರಿಂದ ಚೆನ್ನಾಗಿ ದ್ರವ್ಯ ಸಂಪಾದನೆ ಆಗಿತ್ತು. ಸಾಧುವು ಹೊರಡುವ ಮುನ್ನ ಬ್ರಾಹ್ಮಣನಿಂದ ಪುಣ್ಯವಾಚನವನ್ನು ಮಾಡಿಸಿಕೊಂಡನು. 'ಬ್ರಾಹ್ಮಣವೋ ದೈನರ ತತ್ವ ತದಾಕು ನಗರಂ.' ಬ್ರಾಹ್ಮಣನಿಗೆ ದಾನವಾಗಿ ದ್ರವ್ಯವನ್ನು ಕೊಟ್ಟು ಹೊರಟನು. ಅನಂತರ ಮಾವ ಅಳಿಯರೀರ್ವರೂ ಸಿಂಧೂ ನದಿಯ ಹತ್ತಿರ ಬಂದರು. ಸಾಧುವು ತಮ್ಮ ಬಳಿಯಲ್ಲಿದ್ದ ದ್ರವ್ಯವನ್ನೆಲ್ಲಾ ನಾವೆಯಲ್ಲಿ ತುಂಬಿದರು ಮತ್ತು ಆ ನಾವೆಯ ಹತ್ತಿರ ನಿಂತುಕೊಂಡನು. ಅಷ್ಟರಲ್ಲಿ ಶ್ರೀ ಸತ್ಯನಾರಾಯಣನು ಸಾಧು ವೈಶ್ಯನ ಚಿತ್ತವನ್ನು ಪರೀಕ್ಷಿಸುವ ಕುರಿತು ಶ್ರೀ ದಂಡಿ ಸನ್ಯಾಸಿಯ ವೇಷದಿಂದ ಅಲ್ಲಿಗೆ ಬಂದು ಅವನನ್ನು ಕುರಿತು 'ಕಿಮಸ್ತಿ ಕಪನೌಸ್ತಿತು?' ಈ ನಾವೆಯಲ್ಲಿ ನೀನು ಏನನ್ನು ತುಂಬಿರುವೆ? ಎಂದು ಕೇಳಿದನು. ಎಲ್ಲಾ ಮದದಲ್ಲಿ ಧನಮದಕ್ಕಿಂತ ಬಲಿಷ್ಟವಾದುದು ಇನ್ನೊಂದಿಲ್ಲ. ಆ ಈರ್ವರೂ ಬಣಜಿಗರು ವಿಪುಲವಾದ ಧನಸಂಗ್ರಹವಾದ್ದರಿಂದ ತೀವ್ರ ಮಧೋನ್ನ್ಮತ್ತರಾಗಿದ್ದರು. ಸಾಧುವಿನ ಪ್ರಶ್ನೆಯನ್ನು ಕೇಳಿ ಆ ಬಣಜಿಗರು ಸೊಕ್ಕಿನಿಂದ ದೊಡ್ಡ ಧ್ವನಿ ತೆಗೆದು ನಗಹತ್ತಿದರು. ನಂತರ ಸಾಧುವೈಶ್ಯನು ಸನ್ಯಾಸಿಯನ್ನು ಕುರಿತು 'ಎಲೈ ಸನ್ಯಾಸಿಯೇ! ನೀನು ಇದನ್ನೆಲ್ಲಾ ಕೇಳಿ ಮಾಡುವುದೇನಿದೆ? ಹೆಂಡಿರು ಮಕ್ಕಳು ಇಲ್ಲದವನು ನೀನು. ಎಲ್ಲಾ ಆಸೆಯನ್ನು ತೊರೆದು ವೈರಾಗ್ಯದಿಂದ ವರ್ತಿಸುವವನು. ಹೀಗಿದ್ದೂ ಈ ಜಿಜ್ಞಾಸೆ ನಿನಗೇಕೆ? ಹಣವನ್ನೆಲ್ಲಾ ಕಳುವಿನಿಂದ ಎಬ್ಬಿಸಬೇಕೆಂದಿರುವಿ ಏನು? ಈ ಬಯಕೆ ನಿನ್ನಲ್ಲಿದ್ದರೆ ಅದು ಈಡೇರಬಾರದು. ಏಕೆಂದರೆ ನಾವು ಇದರಲ್ಲಿ ಹಣವನ್ನು ತುಂಬಿಲ್ಲ.' ಲತಾ ಪ್ರಪ್ರಾದಿಕಂ ಚೈವ್ಯ ವರ್ತ ತರನ ಮಮ. ಸಾಧುವು ನಾವೆಯಲ್ಲಿ ಬಳ್ಳಿ ಎಲೆ ಪತ್ರಾದಿಗಳು ತುಂಬಿವೆ ಎಂದನು. ಆ ತರಹ ತೀರ ನಿಷ್ಟುರವಾದ ನುಡಿಯನ್ನು ಕೇಳಿ 'ಒಳ್ಳೆಯದು. ಸತ್ಯಮ್ ಭಾವ ತಂತೇ ವಚಂ. ನೀವು ನುಡಿದದ್ದೇ ಸತ್ಯವಾಗಲಿ' ಎಂದು ಸನ್ಯಾಸಿಯು ನುಡಿದನು ಮತ್ತು ಅಲ್ಲಿಂದ ಹೊರಟು ತುಸು ದೂರ ಹೋಗಿ ಅಲ್ಲಿಯೇ ಸಿಂಧೂ ನದಿಯ ದಡದಲ್ಲಿ ಭವಿತವ್ಯವನ್ನು ನಿರೀಕ್ಷಿಸುತ್ತ ಕುಳಿತುಕೊಂಡನು.

ಸನ್ಯಾಸಿಯು ಹೋದನಂತರ ಇತ್ತ ಸಾಧುವು ತನ್ನ ನಿತ್ಯಕರ್ಮವನ್ನು ತೀರಿಸಿಕೊಂಡು ಆ ನಾವೆಯ ಹತ್ತಿರ ಬಂದನು. ನಾವೆಯನ್ನು ನೋಡುತ್ತಿರಲು ತಾವು ತುಂಬಿರುವ ದ್ರವ್ಯವೆಲ್ಲಾ ಮಾಯವಾಗಿತ್ತು. ಕೇವಲ ಎಲೆ ಬಳ್ಳಿಗಳಿಂದಲೇ ಆ ನಾವೆಯು ತುಂಬಿದಂತೆ ತೋರಿತು. ದೈವಲೀಲೆಯು ಅಗಾಧವಾದುದು. ಒಮ್ಮೆಲೇ ದ್ರವ್ಯವು ಇಲ್ಲದ್ದನ್ನು ಕಂಡು ಆಶ್ಚರ್ಯದಿಂದಲೂ ಭಯದಿಂದಲೂ ಪೂರ್ಣವಾಗಿ ಸಾಧುವು ಮೂರ್ಛೆಗೊಂಡು ನೆಲಕ್ಕುರುಳಿದನು. ಮುಂದೆ ತುಸು ಹೊತ್ತಿನ ಬಳಿಕ ತಿಳಿದು ಎದ್ದು ಕುಳಿತನು. ಚಿಂತೆಯು ಆತನನ್ನು ಕಾಡತೊಡಗಿತು. ನಿಡಿದಾದ ಶ್ವಾಸವನ್ನು ಉಸುರಿದನು. ಕಿಂಕರ್ತವ್ಯ ಮೂಢನಾದನು. ಜೊತೆಯಲ್ಲಿದ್ದ ಅಳಿಯನು ಮಾವನ ದೀನನಾದ ಅವಸ್ಥೆಯನ್ನು ಕಂಡು 'ಕಿಮರ್ಥಂ ಕ್ರಿತತೇ ಶೋಕಂ' ನೀವು ಅದೇನು ಕಾರಣ ಇಷ್ಟೊಂದು ಶೋಕ ಮಾಡುವಿರಿ? 'ಶಾಪೋ ವತ್ಯಸ್ಯ ದಂಡಿನಾ' ಆ ಸನ್ಯಾಸಿಯು ಶಾಪ ನೀಡಿರುವನು. ಆ ಮೂಲಕವಾಗಿಯೇ ಈ ಸ್ಥಿತಿ ಉಂಟಾಗಿದೆ. ಆತನಿಗೆ ನಾವು ಶರಣಾಗತರಾಗಬೇಕು. ಅಂದರೆ ಅವನು ನಮ್ಮ ದಬುಕನ್ನೆಲ್ಲಾ ಮೊದಲು ಇದ್ದಂತೆ ಮಾಡಿಕೊಡುವನು. ನಮ್ಮ ಕಾರ್ಯವೂ ಆಗುವುದು. ಕಾರಣ ಆತನಿಗೆ ಶರಣು ಹೋಗುವುದೇ ಯೋಗ್ಯವಾಗಿದೆ ಎಂದು ನಿರ್ಮಲ ಮನಸ್ಸಿನ ಮೂಲಕ ಮಾವನಿಗೆ ಮಾರ್ಗದರ್ಶನ ಮಾಡಿದನು. ಅಳಿಯನ ಯುಕ್ತವಾದದ ಮಾತುಗಳು ಮಾವನಿಗೆ ಸರಿದೋರಿದವು. ಕೂಡಲೇ ಆತನು ಅಳಿಯನೊಂದಿಗೆ ಸನ್ಯಾಸಿಯನ್ನು ಹುಡುಕಲು ಹೊರಟನು. ತುಸು ದೂರ ಹೋಗುವಷ್ಟರಲ್ಲಿಯೇ ಅವರು ಅಲ್ಲಿ ಕುಳಿತಿರುವ ಸನ್ಯಾಸಿಯನ್ನು ಕಂಡರು. ಅವನ ಹತ್ತಿರ ಹೋಗಿ ಭಕ್ತಿಭಾವದಿಂದ ನಮಸ್ಕರಿಸಿದರು. ಆಧಾರಪೂರ್ವಕವಾಗಿ ಕೈಗಳನ್ನು ಮುಗಿದುಕೊಂಡು ಸಂಪ್ರೀತಿಯಿಂದ ನಿಂತುಕೊಂಡರು. ಸಾಧುವೈಶ್ಯನು ತಮ್ಮಿಂದಾದ ಅಪರಾಧಕ್ಕೆ ಸಮ್ಮತಿಸಿ ಪಶ್ಚಾತ್ತಾಪವನ್ನು ವ್ಯಕ್ತಪಡಿಸಿದನು. ತಾವು ಆಡಿದ ಮರುತ್ತರವನ್ನು ಕ್ಷಮಿಸಬೇಕಾಗಿ ಪ್ರಾರ್ಥಿಸಿದನು. ಮೇಲಿಂದ ಮೇಲೆ ನಮಸ್ಕರಿಸುತ್ತಾ ತೀವ್ರ ದುಃಖಕ್ಕೆ ಒಳಗಾಗಿ ನಿಂತನು. ಸತ್ಪುರುಷರ ಹೃದಯ ಕುಸುಮಕ್ಕಿಂತ ಕೋಮಲವೆಂಬ ಮಾತು ಅಂದು ಆ ಸಾಧು ವೈಶ್ಯನ ಅನುಭವಕ್ಕೆ ಬಂತು. ದುಃಖಪೂರ್ನನಾದ ಸಾಧುವನ್ನು ಕಂಡು ಸನ್ಯಾಸಿವೇಷದ ಸತ್ಯದೇವನು ಕೃಪಾಕಟಾಕ್ಷವನ್ನು ಬೀರಿ 'ಮಾ ಅನ್ಯತಾ ಶರಣಂ ನಾಸ್ತಿ' ತನ್ನ ಪೂಜೆಯನ್ನು ನಿರ್ಲಕ್ಷಿಸಿದ ಸಾಧುವೇ ಹೀಗೆ ವ್ಯರ್ಥವಾಗಿ ದುಃಖಿಸಬೇಡ. ನನ್ನ ಮಾತನ್ನು ಕೇಳು. ದುರ್ಬುದ್ಧಿಯೇ ಧನ ಮಧಾಂಧನೆ ನನಗೆ ನೀನು ಅವಮಾನ ಮಾಡಿದಿ. ಆದ್ದರಿಂದಲೇ ನೀನು ಈ ಬಗೆಯ ದುಃಖವನ್ನು ಅನುಭವಿಸಬೇಕಾಯ್ತು ಎಂದನು. ಸಂಕಟ ಬಂದಾಗ ವೆಂಕಟರಮಣ. ಎಂಬುವುದು ಮನುಷ್ಯ ಸ್ವಭಾವವು. ಸನ್ಯಾಸಿಯ ಮಾತನ್ನು ಕೇಳಿ ಸಾಧುವು ಆತನನ್ನು ಸ್ತುತಿಸಲು ಉದ್ಯುಕ್ತನಾದನು.

ಸಾಧುವೈಶ್ಯನು ಮಾಡಿದ ಸ್ತೋತ್ರವು :- ತ್ವನ್ಮಯ ಮೋಹಿತಾದ ಸರ್ವೇ ಬ್ರಹ್ಮಸ್ಸಾಸ್ತ್ರಿ ದ್ವಿವಪೌಕನದೆ ನಜಾನಂತಿ ಗುಜೌನ ರೂಪಂ ತವಾಶರ್ಯ ವಿದಂ ಪ್ರಭೋ ಮುದೋಹಂ ತ್ವಾರಕಂ ಜಾನೇ ಮೋಹಿಕಸ್ತವ ಮಾಯೇಯಾಪನಿರಾ ಪೂಜೆಯಷ್ಯಾಮಿಯಿದಾ ವಿಭವ ನಿಸ್ತರಹ್ಯ ||೨||
ಪರಾವಿತ್ತ ಚ ತಸ್ಸಿಣಂ ತ್ರಾಹಿಮಾಂ ಶರನಾಗತಥ ||೩||

ಅರ್ಥ: ಎಲೈ ಭಗವಂತನೇ, ಬ್ರಹ್ಮನೇ ಮೊದಲಾದ ಎಲ್ಲಾ ದೇವತೆಗಳು ನಿನ್ನ ಮಾಯೆಯಂತೆ ಮೋಹಿತರಾಗಿರುವರು. ಅಂದ ಮೇಲೆ ಮನುಷ್ಯರಾದ ನಮ್ಮ ಪಾಡೇನು? ಭಗವಂತಾ ನಾನು ಮಹಾ ಮೂರ್ಖನು. ನಿನ್ನ ಮಾಯೆಯನ್ನರಿಯಲು ದೇವತೆಗಳೇ ಅಸಮರ್ಥರಾಗಿರುವಾಗ ಮನುಷ್ಯರಾದ ನಮ್ಮ ಪಾಡೇನು? ಇನ್ನು ಸದಾ ಭಕ್ತಿಯಿಂದ ನಿನ್ನನ್ನು ಪೂಜಿಸುವೆ.

ನಮ್ಮ ದ್ರವ್ಯವನ್ನು ಮೊದಲಿನಂತೆ ಮಾಡಿಕೊಡು. ಭಕ್ತವತ್ಸಳನಾದ ನೀನು ಶರಣಾಗತನಾದ ನನ್ನನ್ನು ಕಾಪಾಡು. ನಾನು ನಿನಗೆ ಶರಣಾಗತನಾಗಿದ್ದೇನೆ. ಎಂದು ಬೇಡಿಕೊಂಡನು.

'ಶ್ರುತ್ವಾ ಭಕ್ತಿಯುತಂ ವಾಕ್ಯಂ ಪರಿಷಿಷ್ಟೋ ಜನಾರ್ಧನ' ಭಕ್ತಿಭಾವದ ನುಡಿಯನ್ನು ಕೇಳಿ ಶ್ರೀ ಸತ್ಯನಾರಾಯಣನು ಸಂತುಷ್ಟನಾದನು. ದೇವರು ಭಕ್ತಿ ಭಾವನೆಗೆ ಮಾತ್ರ ವಶನು. ಎಂಬ ಮಾತು ಸುಳ್ಳಾಗದು. ಆತನು ಬೇಡಿದ ವರವನ್ನು ಕೊಟ್ಟು ಅಲ್ಲಿಯೇ ಅದೃಶ್ಯನಾದನು. ಸಾಧುವೈಷ್ಯನೂ ಆತನ ಅಳಿಯನೂ ಈ ದೃಶ್ಯವನ್ನು ಕಂಡು ಬೆರಗಾದರು. ಬಳಿಕ ಅವರು ಶ್ರೀ ಸತ್ಯನಾರಾಯಣನ ಸ್ಮರಣೆಯಲ್ಲಿಯೇ ನಾವೆಯತ್ತ ಹಿಂದಿರುಗಿದರು. ನಾವೆಯ ಬಳಿಗೆ ಬಂದು ನೋಡುವಷ್ಟರಲ್ಲಿ ನಾವೆಯೊಳಗಿನ ಎಲೆಬಳ್ಳಿ ಎಲ್ಲವೂ ಇಲ್ಲವಾಗಿತ್ತು. ನಾವೆಯ ತುಂಬಾ ದ್ರವ್ಯವು ಕಾಣಿಸಿಕೊಂಡಿತು. ಆಗ ಅವರ ಆನಂದಕ್ಕೆ ನೆಲೆ ಇರಲಿಲ್ಲ. ಶ್ರೀ ಸತ್ಯನಾರಾಯಣನ ಅನುಗ್ರಹದಿಂದಲೇ ತಮ್ಮ ವ್ರತವು ಪೂರ್ನವಾಯಿತೆಂದು ನಿಶ್ಚಿತವಾಗಿ ನಂಬಿದರು. ಕೂಡಲೇ ಸಾಧುವೈಶ್ಯನು ತೀರ ಸಂಭ್ರಮದೊಡನೆ ಸೃಜನರಿಂದ ಕೂಡಿಕೊಂಡು ವಿಧಿಯುಕ್ತರಾಗಿ ಶ್ರೀ ಸತ್ಯನಾರಾಯಣನನ್ನು ಪೂಜಿಸಿದರು. ಕಥೆಯನ್ನು ಶ್ರವಣ ಮಾಡಿ ಈರ್ವರೂ ಪ್ರಸಾದವನ್ನು ಸ್ವೀಕರಿಸಿ ನಾವೆಯ ಹತ್ತಿರ ಬಂದರು. ನಾವೆಯಲ್ಲಿ ಕುಳಿತು ಸಂತೋಷದಿಂದ ತಮ್ಮ ಗ್ರಾಮಕ್ಕೆ ಹೊರಡಲನುವಾದರು.

ಹೋಗಹೊಗುತ್ತಿರಲು ಅವರಿಗೆ ತಮ್ಮ ರತ್ನಾಸಾರಪುರವು ತೋರತೊಡಗಿತು. ವೈಶ್ಯನು ಅಳಿಯನಿಗೆ ರತ್ನಾಸರವನ್ನು ತೋರಿಸತೊದಗಿದನು. ನಾವೆಯನ್ನು ಭರದಿಂದ ಸಾಗಿಸಿ ಪಟ್ಟಣದ ಬಳಿಗೆ ಬಂದರು. ತಾವು ಬಂದಿರುವ ವಾರ್ತೆಯನ್ನು ದೂತನ ಮುಖಾಂತರ ಮನೆಗೆ ಹೇಳಿ ಕಳುಹಿಸಿದನು. ಸಾಧುವೈಶ್ಯನು ಹೇಳಿ ಕಳುಹಿಸಿದ ವಾರ್ತೆಯು ಲೀಲಾವತಿಗೂ ಮಗಳಾದ ಕಲಾವತಿಗೂ ತಿಳಿಯಿತು. ಹಗಲಿರುಳೂ ಅವರು ಅದೇ ಸ್ಮರಣೆಯಲ್ಲಿದ್ದರು. ಅವರು ಬಯಸಿದ್ದು ಕಿವಿಗೆ ಬಿದ್ದುದರಿಂದ ಅವರು ಹರ್ಷಚಿತ್ತಗೊಂಡರು. ತಮ್ಮ ತಮ್ಮ ಪತಿಗಳ ಶುಭ ಆಗಮನದ ವಾರ್ತೆಯನ್ನು ಕೇಳಿ ಶ್ರೀ ಸತ್ಯನಾರಾಯಣನನ್ನು ಅರ್ಚಿಸಿದರು. ವ್ರತವನ್ನು ವಿಧಿಯುಕ್ತವಾಗಿ ಮುಗಿಸಿದರು. ಪತಿಯನ್ನು ಕಾಣುವ ಆತುರದ ಹುಮ್ಮಸ್ಸಿನಲ್ಲಿ ಕಲಾವತಿಯು ಸತ್ಯದೇವನ ಪ್ರಸಾದವನ್ನು ಸ್ವೀಕರಿಸದೇ ಹಾಗೆಯೇ ನಾವೆಯ ಕಡೆಗೆ ಹೋದಳು. ಶ್ರೀ ಸತ್ಯನಾರಾಯಣನು ಅವಳ ಗಂಡನನ್ನೂ ಆತನು ಕುಳಿತಿರುವ ನಾವೆಯನ್ನು ದ್ರವ್ಯಸಹಿತವಾಗಿ ಮುಳುಗಿಸಿಬಿಟ್ಟನು. ಗಂಡನು ಕಾಣದ ಹಾಗಾಗಲು ಕಲಾವತಿಯು ದುಃಖಾವೇಗದಿಂದ ಭೂಮಿಗೆ ಬಿದ್ದಳು. ಆ ಸ್ಥಿತಿಯನ್ನು ಕಂಡು ಸಾಧುವೈಶ್ಯನು ಭಯಚಕಿತನಾಗಿ ಚಿಂತಿಸಹತ್ತಿದನು. ನಾವಟಿಗರಾದ ಅಂಬಿಗರೆಲ್ಲರೂ ಚಿಂತಾತುರರಾದರು. ಆ ಸನ್ನಿವೇಶದಿಂದ ಲೀಲಾವತಿಯು ಭಯಭ್ರಾಂತಳಾಗಿ ದುಃಖದಿಂದ ಪತಿಯನ್ನು ಕುರಿತು ಈಗಲೇ ಬರುವ ಅಳಿಯನು ಒಮ್ಮೆಲೇ ಕಾಣದಾಗಲು ಕಾರಣವೇನಿರಬಹುದು? ನಮ್ಮ ಮೇಲೆ ಅದಾವ ದೇವರ ಕ್ಷೋಭೆ ಉಂಟಾಯಿತು? ನನಗಂತೂ ಏನೂ ತಿಳಿಯಲೊಲ್ಲದು. ಈ ಸತ್ಯನಾರಾಯಣನ ಮಹಿಮೆಯನ್ನು ಅರಿಯಲು ಅದಾರು ಸಮರ್ಥರು? ಎಂದು ದುಃಖಿಸುತ್ತ ನುಡಿದಳು. ಮಗಳನ್ನು ಎದೆಗೆ ಅವುಚಿಕೊಂಡಳು. ಕಲಾವತಿಯು ತನ್ನ ಗಂಡನು ಮೃತಪಟ್ಟನೆಂದು ದುಃಖದಿಂದ ಪತಿಯ ಪಾದುಕೆಗಳೊಡನೆ ಸಹಗಮನ ಮಾಡಲು ನಿಶ್ಚಯಿಸಿದಳು. ಇದರಿಂದ ವೈಶ್ಯನಿಗೂ ಆತನ ಹೆಂಡತಿಗೂ ಅಪಾರ ಸಂಕಟ ಉಂಟಾಯಿತು. ಇದೆಲ್ಲವೂ ಆ ಸತ್ಯದೇವನ ಮಾಯೆ ಎಂದೇ ಬಗೆದು ಆ ಸಾಧುವು ಶ್ರೀ ಸತ್ಯದೇವನನ್ನು ಸ್ಮರಿಸುತ್ತಾ ತನ್ನ ಐಶ್ವರ್ಯಾನುಸಾರ ಪೂಜಿಸುವುದಾಗಿ ತೀರ್ಮಾನಿಸಿದನು. ತನ್ನ ಸಂಕಲ್ಪವನ್ನು ತಿಳಿಸಿ ಅಲ್ಲಿಯೇ ಭೂಮಿಯಲ್ಲಿ ಶ್ರೀ ಸತ್ಯನಾರಾಯಣನನ್ನು ಕುರಿತು ಸಾಷ್ಟಾಂಗ ವಂದನೆಗಳನ್ನು ಮಾಡಹತ್ತಿದನು.

ಅದರಿಂದ ದೀನ ರಕ್ಷಕನಾದ ಶ್ರೀ ಸತ್ಯನಾರಾಯಣನು ಸಂತುಷ್ಟನಾದನು ಮತ್ತು ಸಾಧುವನ್ನು ಕುರಿತು 'ಎಲೈ ಸಾಧುವೇ! ನಿನ್ನ ಮಗಳು ಪತಿಯನ್ನು ಕಾಣುವ ಆತುರದಲ್ಲಿ ನನ್ನ ಪ್ರಸಾದವನ್ನು ದುರ್ಲಕ್ಷಿಸಿ ಹಾಗೆಯೇ ಬಂದಿರುವಳು. ಅಂತೆಯೇ ಅವಳ ಗಂಡನು ಕಾಣದಾಗಿರುವನು. ನನ್ನ ಪ್ರಸಾದವನ್ನು ಸ್ವೀಕರಿಸಿದರೆ ಗಂಡನು ಅವಳಿಗೆ ದೊರಕುವನು.' ಎಂದು ಆಕಾಶವಾಣಿಯಿಂದ ತಿಳಿಸಿದನು. ಅದರಂತೆಯೇ ಕಲಾವತಿಯು ಪ್ರಸಾದವನ್ನು ತಿಂದು ಬಂದೊಡನೆಯೇ ಎಲ್ಲರೊಡನೆ ನಿಂತ ಪತಿಯನ್ನು ಕಂಡಳು. ತೀರ ಹರ್ಷಚಿತ್ತಳಾಗಿ ತಂದೆಗೆ 'ತಾತಾ ಇನ್ನು ಮನೆಗೆ ಹೋಗೋಣ ನಡೆಯಿರಿ. ಇನ್ನೇಕೆ ತಡ' ಎಂದಳು. ಮಗಳ ಮಾತನ್ನು ಕೇಳಿ ವೈಶ್ಯನು ಅಲ್ಲಿಯೇ ಸಿಂಧೂ ನದಿಯ ತೀರದಲ್ಲಿ ವಿಧಿಯುಕ್ತವಾಗಿ ಶ್ರೀ ಸತ್ಯನಾರಾಯಣನನ್ನು ಪೂಜಿಸಿದನು. ಎಲ್ಲಾ ಬಂಧು ಬಾಂಧವರಿಂದ ಕೂಡಿಕೊಂಡು ದ್ರವ್ಯಸಹಿತ ಮನೆಗೆ ಹೋದನು.

'ಪೂರ್ಣ ಮಾ ಸಂಚ ಸಂಕ್ರಾಂತ್ ಕೃತವಾ ಸತ್ಯಪೂಜನಂ ಇಹಲೋಖೀ ಸುಖಂ ಭೂಕ್ತ ಚೌಂತೇ ಸತ್ಯಪೂರಂ ಮಯ' ಮುಂದೆ ಸಾಧುವೈಶ್ಯನು ಪ್ರತೀ ಮಾಸದ ಹುಣ್ಣಿಮೆ ಅಮಾವಾಸ್ಯೆ ಮತ್ತು ಸಂಕ್ರಮಣದಲ್ಲಿ ಶ್ರೀ ಸತ್ಯನಾರಾಯಣನ ವ್ರತವನ್ನು ತಪ್ಪದೇ ಆಚರಿಸುತ್ತಾ ಹೋದನು. ಅದರಿಂದ ಆತನ ಅನುಗ್ರಹವನ್ನು ಪಡೆದು ಇಹಲೋಕದಲ್ಲಿ ಮೇಲಾದ ಸುಖವನ್ನು ಅನುಭವಿಸಿದನು. ಕಾಲಕ್ರಮೇಣವಾಗಿ ಕೊನೆಗೆ ಸತ್ಯಪುರ ಮೋಕ್ಷವನ್ನು ಹೊಂದಿದನು.

'ಋಷಿಶ್ರೇಷ್ಟರೇ! ಇಂತಿದೆ ಸಾಧುವೈಶ್ಯನ ಕಥೆ. ಇದನ್ನು ನಿಮಗಾಗಿ ಹೇಳಿದೆನು.' ಎಂದು ಸೂತಪುರಾಣಿಕನು ಹೇಳಿದ ಸ್ಕಂದ ಪುರಾಣದ ರೇವಾಖಂಡದಲ್ಲಿ ಉಕ್ತವಾಗಿರುವ ಶ್ರೀ ಸತ್ಯನಾರಾಯಣ ದೇವರ ೪ನೇ ಅಧ್ಯಾಯದ ಕಥೆಯು ಮುಗಿಯಿತು. ಇತೀ ಶ್ರೀ ಸ್ಕಂದ ಪುರಾಣ ರೇವಾ ಖಂಡೇ ಸತ್ಯನಾರಾಯಣ ವ್ರತ ಕಥಾಯಾಂ ಚತುರ್ಥೊಧ್ಯಾಯಂ ಸಮಾಪ್ತಿರಸ್ತು.

೫ನೇ ಅಧ್ಯಾಯ

ಸೂತಪುರಾಣಿಕನು ಶ್ರೋತ್ರಗಳಾದ ಋಷಿಗಳನ್ನು ಕುರಿತು 'ಎಲೈ ಋಷಿಶ್ರೇಷ್ಟರೇ! ಶ್ರೀ ಸತ್ಯದೇವರ ವ್ರತಾಚರನೆಯಿಂದ ದೊರಕುವ ಫಲದ ಮಹತ್ವವು ಹೆಚ್ಚಿನದೆಂಬ ಬಗ್ಗೆ ಇನ್ನೊಂದು ಕಥೆಯನ್ನು ಹೇಳುವೆನು ಕೇಳಿರಿ.' ಎಂದು ಹೇಳಲು ಪ್ರಾರಂಭಿಸಿದನು. 'ಆ ನಿತ್ತುಂಗ ಧ್ವಜೋರಂಚಾ ಪೂಜಾ ತತ್ಪರಂ ಪ್ರಸಾದಂ ಸತ್ಯದೇವಸ್ಥ ತತ್ವಾ ದುಃಖಂ ಮಹಾಪಸ' ತುಂಗಧ್ವಜನೆಂಬ ಹೆಸರಿನ ಒಬ್ಬ ಅರಸನಿದ್ದನು, ಆತನು ಪ್ರಜೆಗಳನ್ನು ಮಕ್ಕಳಂತೆ ಪರಿಪಾಲಿಸುತ್ತಿದ್ದನು. ಅದಕ್ಕಾಗಿ ದುಷ್ಟನಿಗ್ರಹ ಶಿಷ್ಟ ಪರಿಪಾಲನೆಯೇ ಆತನ ರಾಜನೀತಿಯ ಆದರ್ಶವಾಗಿತ್ತು. ಆದರೆ ಈತನು ಒಮ್ಮೆ ಶ್ರೀ ಸತ್ಯನಾರಾಯಣನ ಪ್ರಸಾದಕ್ಕೆ ಅವಮಾನ ಮಾಡಿದ್ದರಿಂದ ತೀರ ದುಃಖವನ್ನು ಹೊಂದಿದನು. ಅದು ಹೇಗೆಂದರೆ

ಒಂದು ದಿನ ಈ ರಾಜನು ಮೃಗದ ಬೇಟೆಗೆ ಅರಣ್ಯಕ್ಕೆ ಹೋದನು. ಅಲ್ಲಿ ಎಷ್ಟೋ ಕ್ರೂರ ಮೃಗಗಳನ್ನು ಬೆನ್ನಟ್ಟಿ ಹಲವಾರು ಪ್ರಾಣಿಗಳನ್ನು ಸಂಹರಿಸಿದನು. ಅದರಿಂದ ಅವನಿಗೆ ಬಹಳ ದಣಿವಾಯ್ತು. ಬಿಸಿಲೇರಿ ನೆಲಕಾಯ್ತು. ಆದ್ದರಿಂದ ವಿಶ್ರಾಂತಿಯನ್ನು ಪಡೆಯಲು ದೊಡ್ಡದಾಗಿ ಬೆಳೆದು ವಿಸ್ತಾರಗೊಂಡ ಆಲದ ಮರವನ್ನು ಕಂಡು ಅದರ ನೆರಳಿಗೆ ಬಂದು ಕುಳಿತನು. ಹಲವು ಗೋಪಾಲಕರು ತಮ್ಮ ಆಕಳು ಹಿಂಡನ್ನು ಮೇಯಿಸಲು ಆ ಅರಣ್ಯಕ್ಕೆ ಬಂದಿದ್ದರು. ಅದೇ ಆಲದ ಮರದ ನೆರಳಿನಲ್ಲಿ ಬರಿದೇ ಕುಳಿತು ಆಡುವರು. ನಿತ್ಯದಂತೆ ಅವರು ಅಡವಿಗೆ ಬಂದು ಒಂದು ದಿನ ಆ ಆಲದಮರದ ಕೆಳಗೆ ಶ್ರೀ ಸತ್ಯನಾರಾಯಣನ ಪೂಜೆಯ ಆಟವನ್ನು ಆಡಿದರು. ಕಲ್ಲು ದುಂಡಿಗೆಗಳೇ ಅವರ ದೇವರು. ಅಲ್ಲಿ ದೊರಕುವ ಪುಷ್ಪಗಳೇ ದೇವರಿಗೆ ಬೇಕಾಗುವ ಹೂವು ಪತ್ರೆಗಳು. ತಾಯಿಯಿಂದ ಕಟ್ಟಿಸಿಕೊಂಡು ಬಂದ ರೊಟ್ತಿಬುತ್ತಿಗಳೇ ದೇವರಿಗೆ ಬೇಕಾಗುವ ಮಹಾ ನೈವೆದ್ಯಗಳು. ಮಹಾಪ್ರಸಾದವು. ಅದರೊಳಗಿದ್ದ ಒಬ್ಬ ವಾಕ್ಚಾತುರ್ಯವುಳ್ಳ ಹುಡುಗನೇ ದೇವರ ಪೂಜೆ ಕಥೆಗಳಿಂದ ಕೂಡಿದ ವ್ರತವನ್ನು ಸಾಂಗಗೊಳಿಸುವ ಬ್ರಾಹ್ಮಣನು. ಈ ಆಲೋಚನೆಯಿಂದ ಅವರು ಸತ್ಯದೇವನ ಪೂಜೆಯ ಪ್ರಕಾರವನ್ನು ಸಾಗಿಸಿದ್ದರು.

ತುಂಗಧ್ವಜ ರಾಜನು ಅದೇ ಮರದ ನೆರಳಿನಲ್ಲಿ ಬಂದು ಒಂದು ಬದಿಗೆ ವಿಶ್ರಮಿಸುತ್ತಿದನಷ್ಟೇ. ಗೋಪಾಲಕರು ಸಂತೋಷದಿಂದ ಭಕ್ತಿಯುತರಾಗಿ ದನಗಾಹಿ ಬಂಧುಗಳೊಡನೆ ಮಾಡುತ್ತಿರುವ ಶ್ರೀ ಸತ್ಯನಾರಾಯಣನ ಪೂಜೆಯನ್ನು ನೋಡುತ್ತಾ ಸ್ವಲ್ಪ ಹೊತ್ತು ಕುಳಿತಿದ್ದನು. ಗೋಪಾಲಕರು ಕರೆದರೂ ಅವರ ಹತ್ತಿರ ಹೋಗಲಿಲ್ಲ. ನಮಸ್ಕರಿಸಲಿಲ್ಲ. ಇಂದೊಂದು ಅಶಿಕ್ಷಿತ ಹುಡುಗರ ಆಟವೆಂದು ಆತನು ತನ್ನ ಮನದಲ್ಲಿ ಹೇಯ ಭಾವನೆಯನ್ನು ಹೊಂದಿದನು. ಗೋಪಾಲಕನು ಶ್ರೀ ಸತ್ಯನಾರಾಯಣನನ್ನು ಪೂಜಿಸಿ ಪ್ರಸಾದವನ್ನು ತಂದರು. ತಂದು ರಾಜನ ಮುಂದೆ ಒಂದು ಎಲೆಯ ಮೇಲಿಟ್ಟು ಹೋದರು. ಕುಳಿತುಕೊಳ್ಳುವ ಎಂಬಂತೆ ಅವರೆಲ್ಲಾಒಂದೆಡೆಗೆ ಸೇರಿ ತಮ್ಮ ತಮ್ಮ ಗಂಟುಗಳನ್ನು ಬಿಚ್ಚಿ ಶ್ರೀ ಸತ್ಯನಾರಾಯಣನ ಪ್ರಸಾದವನ್ನು ಸ್ವೀಕರಿಸಿ ಮನದಣಿಯೆ ಊಟ ಮಾಡಿದರು. ತುಂಗಧ್ವಜರಾಜನು ಅದೊಂದು ಹುಡುಗಾಟಿಕೆಯ ಪ್ರಕಾರವೆಂದು ತಿರಸ್ಕರಿಸಿ ಪ್ರಸಾದವನ್ನು ಅಲ್ಲಿಯೇ ಬಿಟ್ಟು ಹೊರಟುಹೋದನು. ಮುಂದೆ ತುಸು ದಿನಗಳಲ್ಲಿಯೇ ಅವನು ಪ್ರಸಾದವನ್ನು ತ್ಯಜಿಸಿದ ಕರ್ಮಫಲವನ್ನು ಅನುಭವಿಸಬೇಕಾಗಿ ಬಂದಿತು.

ರಾಜ್ಯವನ್ನೆಲ್ಲಾ ಕಳೆದುಕೊಂಡನು. ಆತನ ನೂರು ಜನ ಮಕ್ಕಳು ನಾಶ ಹೊಂದಿದರು. ಆತನು ಧನ ಧಾನ್ಯವನ್ನೆಲ್ಲಾ ಕಳೆದುಕೊಂಡು ಸಂಪತ್ತೆಲ್ಲವೂ ನಾಶವಾಯ್ತು. ಹೀಗಾಗಿ ಅವನು ಬಹಳ ಸಂಕಷ್ಟಕ್ಕೆ ಒಳಗಾದನು. ಬಹಳ ಹೀನಾವಸ್ಥೆಯನ್ನು ಹೊಂದಿದನು. ಆಗ ಶ್ರೀ ಸತ್ಯದೇವನ 'ತನಸ್ಸರ್ವಂ ನಾಶಿತಂ ಜವನು ನಿಶ್ಚಿತಂ' ಶ್ರೀ ಸತ್ಯನಾರಾಯಣನ ಪೂಜೆಯನ್ನು ಪ್ರಸಾದವನ್ನು ಹೀಗಳಿಸಿ ಅವಮಾನಿಸಿದ್ದರಿಂದಲೇ ತನಗೆ ಈ ಗತಿ ಉಂಟಾಯಿತೆಂದು ಆತನು ಕಂಡುಹಿಡಿದನು. ಆದ್ದರಿಂದ ಯಾವ ಸ್ಥಳದಲ್ಲಿ ಶ್ರೀ ಸತ್ಯದೇವನಿಗೆ ಅವಮರ್ಯಾದೆ ಮಾಡಿದ್ದನೋ ಅದೇ ಸ್ಥಳಕ್ಕೆ ಹೋಗಬೇಕೆಂದು ನಿಶ್ಚಯಿಸಿದನು. ಅಲ್ಲಿಯೇ ಶ್ರೀ ಸತ್ಯನಾರಾಯಣನನ್ನು ಪೂಜಿಸಿ ಅವನ ಕೃಪಾಕಟಾಕ್ಷ ಪಡೆಯಬೇಕೆಂದು ಮನಮುಟ್ಟಿ ಗೊತ್ತು ಮಾಡಿದನು.

ಅದೇ ಆಲದ ಮರದ ಕೆಳಗೆ ಹೋದನು. ಪೂಜೆ ಪ್ರಸಾದಗಳಿಗೆ ಬೇಕಾದ ಸಾಮಗ್ರಿಗಳನ್ನು ಸಂಗಡ ಒಯ್ದನು. ಅಲ್ಲಿ ಆ ಗೋಪಾಲಕರ ಗುಂಪಿನಲ್ಲಿ ತಾನೂ ಸೇರಿಕೊಂಡು ಗೋಪಾಲಕರೊಡನೆ ಭಕ್ತಿಭಾವದಿಂದ ವಿಧಾನ ಪೂರ್ವಕವಾಗಿ ಶ್ರೀ ಸತ್ಯನಾರಾಯಣನ ವ್ರತವನ್ನು ಮಾಡಿದನು. ಕಥೆಯನ್ನು ಕೇಳಿದನು. ಅಕಟಕ ಘಟನಾ ಸಾಮರ್ಥ್ಯವನ್ನು ನೆನೆದು ತಲೆಬಾಗಿದನು. ತನಗೆ ಮೊದಲಿನ ಸುಸ್ಥಿತಿಯನ್ನು ಉಂಟುಮಾಡೆಂದು ಅಂತಃಕರಣದಿಂದ ಪ್ರಾರ್ಥಿಸಿದನು. ಅದರಿಂದ ಆದುದೇನೆಂದರೆ 'ಸತ್ಯದೇವಾ ಪ್ರಸಾದೇನ ಧನ ಪೂಲನ್ವಿಕೋ ಭವತ್ ಇಹಲೋಕೇ ಸುತಂ ಯಕ್ತ್ವಚಾರಿತೆ ಸತ್ವ ಪೂರಂ ಮಮ' ಸತ್ಯದೇವನ ಪ್ರಸಾದದಿಂದಲೂ ಆ ರಾಜನು ರಾಜೈಶ್ವರ್ಯಗಳಿಂದಲೂ ಮಕ್ಕಳಿಂದಲೂ ಕೂಡಿ ಇಹಲೋಕದಲ್ಲಿ ಸುಖದಿಂದ ಇದ್ದು ಅನಂತರ ಸತ್ಯಪುರಕ್ಕೆ ಅಂದರೆ 'ಯದ್ವತ್ವಾನಂ ತದ್ವಾಯ ಪುರಂ' ಮನು, ಮಾನವನು ಮರಳಿ ಜನ್ಮಕ್ಕೆ ಬಾರದಂತಹ ಪರಮಾತ್ಮನ ಸನ್ನಿಧಿಗೆ ಹೋದನು. ಅರ್ಥಾತ್ ಕೊನೆಗೆ ಮೋಕ್ಷವನ್ನು ಹೊಂದಿದನು.

ಋಷಿಗಳೇ! ಇಂತಹ ಪರಮದುರ್ಲಭಾನಾದ ಶ್ರೀ ಸತ್ಯನಾರಾಯಣ ವ್ರತವನ್ನು ಭಕ್ತಿಪೂರ್ವಕವಾಗಿ ಮಾಡುವವರು ಎಲ್ಲ ಫಲಗಳನ್ನು ಸಮೃದ್ಧಿಯಾಗಿ ಹೊಂದುವರು. 'ಯಾತ ಪ್ರಮುಚೇತ್ ಸತ್ಯಮೇವನ ಸಂಶಯಂ' ಶ್ರೀ ಸತ್ಯನಾರಾಯಣನ ಅನುಗ್ರಹಕ್ಕೆ ಒಳಗಾದವರು ಧನಧಾನ್ಯಾದಿಗಳಿಂದ ಸಮೃದ್ಧರಾಗುವರು. ದರಿದ್ರನು ವ್ರತವನ್ನು ಮಾಡಲಿ ಐಶ್ವರ್ಯದಿಂದ ಪೂರ್ಣನಾಗುವನು. ಕಾರಾಗ್ರಹದಲ್ಲಿರುವವನು ಬಂಧಮುಕ್ತನಾಗುವನು. ಇದರಲ್ಲಿ ಸಂಶಯವಿಲ್ಲ. ಇಷ್ಟೇ ಅಲ್ಲ, 'ಈಪಸಿತಂ ಕಲಂ ಬತಿಕ್ತಾ ಚಾಂತೇ ಸತ್ಯಪೂರಂ ವ್ರಜತೆ' ಮನದ ಎಲ್ಲ ಬಯಕೆಗಳನ್ನು ಪೂರ್ಣವಾಗಿ ಭೋಗಿಸಿ ಅಂತ್ಯದಲ್ಲಿ ಸತ್ಯಪುರವನ್ನು ಹೊಂದುವನು.

ಸೂತನು:- ಋಷಿಗಳಿರಾ! 'ಯತ್ ಕೃಪ್ವಾ ಸರ್ವ ದುಃಖ್ಯೆಭ್ಯೋ ಮುಕ್ತೊಭಾವತಿ ಮಾನವಹಃ' ಈ ವ್ರತವನ್ನು ಮಾಡಿದ ಮಾತ್ರದಿಂದ ಮನುಷ್ಯನು ಎಲ್ಲ ದುಖಗಳಿಂದ ಮುಕ್ತನಾಗುವನೋ ಅಂತಹ ಈ ಸತ್ಯನಾರಾಯಣನ ಪೂಜೆಯು ಬಹಳೇ ಫಲವನ್ನು ಕೊಡುತ್ತದೆ. ವ್ರತವನ್ನು ಮಾಡುವುದರಿಂದ ದುಃಖಗಳೆಲ್ಲಾ ನಾಶವಾಗಿ ಸುಖ ಹೊಂದುವರು. ಈತನಿಗೆ ಕೆಲವರು ಸತ್ಯನಾರಾಯಣ ಎಂತಲೂ ಸತ್ಯದೇವ ಅಂತಲೂ ಕರೆಯುವರು. ಮನೋರಥವನ್ನು ಪೂರ್ಣ ಮಾಡಿ ಕೊಡುವ ಭಗವಂತನು ಈ ಕಲಿಗಾಲದಲ್ಲಿ ಸತ್ಯವ್ರತ ಎಂಬ ನಾಮದಲ್ಲಿ ಅವತರಿಸಿದ್ದಾನೆ. 'ಇದಂ ಪಡತೇ ಶ್ರುಣೋತಿ ಮುನಿಸತ್ತಾ ಮಮಂ ಸತ್ಯಸಶ್ಯಂತಿ ಪಪಾನಿ ಸತ್ಯದೇವತಹ' ಋಷಿಶ್ರೇಷ್ಟರೇ! ಈ ಸತ್ಯನಾರಾಯಣನ ಕಥೆಯನ್ನು ನಿತ್ಯದಲ್ಲೂ ಯಾರು ಪಠಿಸುವರೊ ಮತ್ತು ಯಾರು ಶ್ರವಣ ಮಾಡುವರೋ ಅವರ ಪಾಪ ದುಃಖಗಳೆಲ್ಲಾ ಶ್ರೀ ಸತ್ಯನಾರಾಯಣನ ಅನುಗ್ರಹದಿಂದ ನಿಶ್ಚಯವಾಗಿ ನಾಶ ಹೊಂದುವುದು. ಮಹರ್ಷಿಗಳೇ! ಇಂತಿದೆ ಶ್ರೀ ಸತ್ಯನಾರಾಯಣನ ದೇವರ ವ್ರತವು. (ಪೂಜನ ಮತ್ತು ಶ್ರವಣ) ಫಲಶ್ರುಥಿಯು ಎಂದು ಸೂತಪುರಾಣಿಕನು ನೈಮಿಷಾರಣ್ಯದಲ್ಲಿ ಕೇಳಿದ ಋಷಿಗಳ ಪ್ರಶ್ನೆಗೆ ಉತ್ತರ ರೂಪವಾಗಿ ಹೇಳಿದ ಈ ಕಥೆಯು ಸ್ಕಂದ ಪುರಾಣದ ರೇವಾ ಖಂಡ ಎಂಬ ಭಾಗದಲ್ಲಿ ಹೇಳಲಾಗಿದೆ. ಅದನ್ನೇ ಇಲ್ಲಿ ಐದನೆಯ ಅಧ್ಯಾಯವಾಗಿ ಮುಗಿಸಿ ಮಂಗಳ ಹಾಡಲಾಗಿದೆ.

ಶ್ರೀ ಸತ್ಯನಾರಾಯಣ ದೇವನ ಕಥೆಯ ಪಂಚಮೊಧ್ಯಾಯ ಸಮಾಪ್ತಿರಸ್ತು.


Saturday, November 01, 2008

ರಾಜ್ಯೋತ್ಸವಕ್ಕೆ ನಮ್ಮ ಸಣ್ಣ ಕಾಣಿಕೆ

ನಮ್ಮ ಕಾಲೇಜಿನ ಒಂದು ಕಾರ್ಯಕ್ರಮಕ್ಕೆ ಹೋಗಿದ್ದಾಗ ನಮ್ಮ ಗೆಳೆಯರ ಬಳಗದ ಮಧುಕರ ಭಂಡಾರಿಯ ಯೋಜನೆಯಂತೆ ರಾಜ್ಯೋತ್ಸವಕ್ಕೆ ನಾವುಗಳು ಒಂದು ಟೀ-ಶರ್ಟ್ ತಯಾರು ಮಾಡಿದ್ದೇವೆ. ಅದರ ಒಂದು ಭಾವಚಿತ್ರ ಕೆಳಗಿರುವಂತೆ ಇದೆ.



ನಿಮ್ಮಲ್ಲಿ ಯಾರಿಗಾದರೂ ಈ ಮಾದರಿಯ ಅಂಗಿ ಬೇಕಾದಲ್ಲಿ ನನಗೆ ಒಂದು ಈ-ಮೇಲ್ ಮಾಡತಕ್ಕದ್ದು. kannadigaa@hotmail.com