Wednesday, December 30, 2009

ಎರಡು ದಿನ ಎರಡು ಸಾವು.

ನೀವು ಕರ್ನಾಟಕದಲ್ಲಿದ್ದರೆ ಮಾಧ್ಯಮದಲ್ಲಿ, ಮೊಬೈಲಿನಲ್ಲಿ ನೀವೆಲ್ಲ ಈ ಸುದ್ದಿಯನ್ನು ಕೇಳೇ ಇರುತ್ತೀರಿ. ನಿನ್ನೆ ಸರಿ ಸುಮಾರು ಮಧ್ಯಾಹ್ನ ಹನ್ನೆರಡು ಗಂಟೆಗೆ ಸುಗಮ ಸಂಗೀತ, ಜನಪದ ಪ್ರಾಕಾರಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡ ಪ್ರಸಿದ್ಧ ಸಂಗೀತ ನಿರ್ದೇಶಕ, ಸಿ. ಅಶ್ವಥ್ ತೀರಿಕೊಂಡರು. ಕಿಡ್ನಿ ವೈಫಲ್ಯ ಅವರ ಸಾವಿಗೆ ಕಾರಣವಾಯಿತು. ಅದಾದ ದಿನದ ಒಳಗೆ ಕನ್ನಡ ಚಿತ್ರರಂಗದ ಪ್ರಮುಖ ನಟ ಡಾ|| ವಿಷ್ಣುವರ್ಧನ್ ಹೃದಯ ವೈಫಲ್ಯದಿಂದ ಬಳಲಿ ಆಸ್ಪತ್ರೆಗೆ ಸೇರುವ ಮುನ್ನವೇ ತೀರಿಕೊಂಡರೆಂದು ಈ ಬೆಳಿಗ್ಗೆ ಸುದ್ದಿ ಬಂತು.

ಇಬ್ಬರ ಸಾವನ್ನೂ ಬೇರೆ ಬೇರೆಯಾಗಿ ನಿರಪೇಕ್ಷವಾಗಿ ನೋಡೋಣ.

ಮೊದಲು ಅಶ್ವಥ್. ವಾರಗಳ ಹಿಂದೆ ಪತ್ರಿಕೆಯಲ್ಲಿ ಅಶ್ವಥ್ ರವರು ಅಸ್ವಸ್ಥರಾಗಿದ್ದರು ಎಂದು ಪ್ರಕಟವಾಗಿತ್ತು. ಅವರ ಆರೋಗ್ಯ ಅಷ್ಟರ ಮಟ್ಟಿಗೆ ಸರಿಯಾಗಿಲ್ಲವೆಂದು ಆಗಲೇ ಎಲ್ಲರಿಗೂ ತಿಳಿದಿತ್ತು. ಅವರು ಅಗಲುವ ಸಮಯ ಸನ್ನಿಹಿತವಾಯಿತೆಂದು ನಮಗೆಲ್ಲ ಆಗಲೇ ತಿಳಿಯಿತು. ಅವರ ಹುಟ್ಟಿದ ದಿನವೇ (ಆಂಗ್ಲ ನಿಯತಕಾಲಿಕದ ಪ್ರಕಾರ) ಅವರು ದೇಹತ್ಯಾಗ ಮಾಡಿದ್ದು ಅವರ ಸುಕೃತವೋ, ಕರ್ಮವೋ ನಾ ಕಾಣೆ. ೭೦ ವಸಂತಗಳನ್ನು ಅವರು ಕಳೆದದ್ದು ಹಲವಾರು ಸುಮಧುರ ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ ಕೀರ್ತಿಗೆ ಪಾತ್ರರಾಗುತ್ತಾರೆ. ಅವರ ಶ್ರಾವಣ, ದೀಪಿಕಾ, ಕೈಲಾಸಂ ಹಾಡುಗಳು, ಕುವೆಂಪು ಹಾಡುಗಳನ್ನು ನಾನು ಹಲವಾರು ಬಾರಿ ಕೇಳಿದ್ದೇನೆ. ಇನ್ನಿತರ ಹಾಡುಗಳನ್ನು ನಾನು ರೇಡಿಯೋದಲ್ಲಿ ಕೇಳಿ ಆನಂದಿಸಿದ್ದೇನೆ.

ಹಲವಾರು ಸಿನಿಮಾ ಹಾಡುಗಳಿಗೆ ಧ್ವನಿಯಾದ ಅಶ್ವಥ್ ಕೆಲವು ಚಿತ್ರಗಳಿಗೆ ಸಂಗೀತವನ್ನೂ ನೀಡಿದ್ದಾರೆ. ಕಾಕನಕೋಟೆ, ಕಾಡು ಕುದುರೆ, ಹೀಗೆ ಹಲವು ಚಿತ್ರಗಳಿಗೆ ಸಂಗೀತವನ್ನೋದಗಿಸಿದ್ದಾರೆ. ಅವರ ಇತ್ತೀಚಿನ ಹಾಡುಗಳು 'ತಪ್ಪು ಮಾಡದವ್ರ್ ಯಾರವ್ರೆ?' 'ಕೆಂಚಾಲೋ ಮಚ್ಚಾಲೋ' ಇಂದಿಗೂ ಎಲ್ಲ ಚಿತ್ರ ರಸಿಕರ ಬಾಯಲ್ಲಿ ಓಡಾಡುತ್ತಿರುತ್ತದೆ. ಈ ರಸಿಕರಲ್ಲಿ ಹಲವರಿಗೆ ಅಶ್ವಥ್ ರ ಬಗ್ಗೆ ಹೆಚ್ಚು ತಿಳಿದಿಲ್ಲವೆಂಬುದು ವಿಷಾದಕರ.

ಹುಟ್ಟಿದವರು ಸಾಯಲೇ ಬೇಕು, ಇದು ಶತ ಸಿದ್ಧ. ಜನರಿಗೆ ಈ ನೇರ ಸತ್ಯವು ಯಾಕೆ ತಟ್ಟುವುದಿಲ್ಲವೋ ನನಗೆ ತಿಳಿಯುತ್ತಿಲ್ಲ. ಯಾವುದೇ ಪ್ರಮುಖ ವ್ಯಕ್ತಿ ಸತ್ತನಂತರ ಹುಯಿಲಿಡುವುದು ಸರ್ವೇ ಸಾಮಾನ್ಯ ಸಂಗತಿಯಾಗಿದೆ. ಅದಕ್ಕೆ ತುಪ್ಪ ಸುರಿಯಲು ನಮ್ಮ ಹಲವು ಮಾಧ್ಯಮಗಳು ಬಕಪಕ್ಷಿಯಂತೆ ಕಾತರರಾಗಿರುತ್ತಾರೆ. ಅವರಿಗೆ ಸಾವಿನ ಬಗ್ಗೆ ಸಂತಾಪವಾಗಲಿ ಸಂಕತವಾಗಲಿ alla.  ಸುದ್ದಿ ಬಿತ್ತರಿಸುವ ತವಕವಷ್ಟೇ. ಈ ತತ್ವವನ್ನೆಲ್ಲ ಆಮೇಲೆ ಮಾತಾಡೋಣ.

ಬೆಳಿಗ್ಗೆ ಏಳುತ್ತಲೇ ನನ್ನ ಗೆಳೆಯ, ಗೆಳತಿಯರೆಲ್ಲರಿಗೂ ಒಂದು ಎಸ್.ಎಂ.ಎಸ್. ಕಳಿಸುವುದು ನನ್ನ ಅಭ್ಯಾಸ. ಇಂದಿನ ಮೆಸೇಜ್ ಕಳಿಸಿದ ನಂತರ, ೩ ಜನ ನನಗೆ ವಿಷ್ಣುವರ್ಧನರ ಸಾವಿನ ಸುದ್ದಿ ಹೇಳಿದರು. ಬೆಳಿಗ್ಗೆ ಏಳುತ್ತಲೇ ಸಾವಿನ ಸುದ್ದಿ. ಟಿವಿ ಹಚ್ಚುತ್ತಲೇ ಇದೇ ಸುದ್ದಿ. ೫ ನಿಮಿಷ ನೋಡುತ್ತಾ ನನ್ನ ಪ್ರಾತಃಕರ್ಮಗಳನ್ನು ಮುಗಿಸಲು ಎದ್ದೆ.

ಎಲ್ಲ ಮುಗಿಸಿ ಪುನಃ ಸ್ವಲ್ಪ ಹೊತ್ತು ಟಿವಿ ನೋಡುತ್ತಾ ಕುಳಿತೆ. ಎಲ್ಲೆಡೆಯೂ ಇದೇ ಸುದ್ದಿ. ಈ ಇಡೀ ದಿನ ಇದೇ ಸುದ್ದಿಯೆಂದು ಖಾಯಂ ಆದ ಮೇಲೆ ಟಿವಿ ನೋಡುವುದನ್ನು ಬಿಟ್ಟು ಎದ್ದೆ.

ವಿಷ್ಣುವರ್ಧನರ ಬಗ್ಗೆ ಬರೆಯುವುದು ಸ್ವಲ್ಪವಿದೆ. ಈ ಹೊತ್ತಿನಲ್ಲಿ ಕೆಲವರಿಗೆ ಅದು ಸ್ವಲ್ಪ ಆಘಾತಕಾರಿಯಾದರೂ ನಿಷ್ಟುರವಾಗಿ ಹೇಳುವುದು ನನ್ನ ಕರ್ತವ್ಯವೆಂದು ಭಾವಿಸುತ್ತಾ ಬರೆಯುತ್ತೇನೆ.

ವಿಷ್ಣುವರ್ಧನ್ ಒಬ್ಬ ಒಳ್ಳೆಯ ನಟ ಎಂಬುದು ಎಲ್ಲರೂ ತಿಳಿದ ವಿಷಯ. ಅವರ ಸಾವಿನ ನಂತರ ಕೆಲವು ವೆಬ್ ಸೈಟುಗಳು ಕೆಲವು ಕಳಪೆ ದರ್ಜೆಯ ಸರ್ವೆಗಳನ್ನು  ಮಾಡುತ್ತಿದ್ದಾರೆ. ರಾಜಕುಮಾರ್ ಹಾಗು ವಿಷ್ಣುವರ್ಧನ್ರಲ್ಲಿ   ಯಾರು ಉತ್ತಮ? ರಾಜಕುಮಾರ್ ಹಾಗು ವಿಷ್ಣುವರ್ಧನ್ರಲ್ಲಿನ ದ್ವೇಷವನ್ನು ಅಭಿವ್ಯಕ್ತಿಸಿದ್ದಾರೆ. ಅವರೆಲ್ಲರಿಗೆ ಬುದ್ಧಿ ಬರಲಿ ಎಂದು ನಾವು ಹಾರೈಸೋಣ.

ಚಿತ್ರರಂಗದಲ್ಲಿ ಅವರು ನಡೆದ ಹಾದಿಯನ್ನು ನೋಡೋಣ. ೯೦ರ ದಶಕದವರೆಗೂ ಅವರ ಹೆಚ್ಚಿನ ಚಿತ್ರಗಳಲ್ಲಿ ಸತ್ವಯುತವಾದ ಕಥೆಯಿರುವುದನ್ನು ನಾವು ಕಾಣಬಹುದು. ವಂಶವೃಕ್ಷದಲ್ಲಿ ಬಾಲನಟನಾಗಿ ಬಣ್ಣದ ಬದುಕಿಗೆ ನಾಂದಿ ಹಾಡಿದ ವಿಷ್ಣು, ಪ್ರಮುಖ ನಟರಾದದ್ದು ಪುಟ್ಟಣ್ಣ ಕಣಗಾಲರ 'ನಾಗರಹಾವು' ಚಿತ್ರದ ಬಳಿಕ. ಆಶ್ಚರ್ಯವೆಂದರೆ ಅಂಬರೀಶ್ ರವರೂ  ಇದೇ ಚಿತ್ರದಿಂದ ತಮ್ಮ  ಪ್ರಯಾಣವನ್ನು ಪ್ರಾರಂಭಿಸಿದರು. ನಾಗರಹಾವಿನ ಸಿಟ್ಟಿನ ಯುವಕನ ಪಾತ್ರದಲ್ಲಿ ಅವರು ಮಿಂಚಿದರು.

ಅಲ್ಲಿಂದ ಹೆಚ್ಚಿನ ಪಕ್ಷ ಅಂತಹ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತ ಬಂದರು. ಸಹೋದರರ ಸವಾಲ್, ಕಳ್ಳ ಕುಳ್ಳ, ಚಾಣಕ್ಯ, ಜಿಮ್ಮಿ ಗಲ್ಲು, ಖೈದಿ, ಸಾಹಸ ಸಿಂಹ ಹೀಗೆ ಇನ್ನಿತರ ಚಿತ್ರಗಳಲ್ಲಿ ಕಾಣಿಸಿಕೊಂಡರು. ವೈವಿಧ್ಯ ಬೇಕೆಂದು ಇನ್ನು ಹಲವು ಪಾತ್ರ ಮಾಡಿದ್ದರಲ್ಲಿ ಪ್ರಮುಖವಾದದ್ದು ಹೊಂಬಿಸಿಲು, ಅವಳ ಹೆಜ್ಜೆ, ಗಲಾಟೆ ಸಂಸಾರ. ಇಂತಹ ಪಾತ್ರಗಳಲ್ಲೂ ಗಟ್ಟಿಗರು ಎಂದೆನಿಸಿಕೊಂಡರು.

ಇದಾದ ನಂತರ, ೮೦ರ ದಶಕದಲ್ಲಿ ಹೆಚ್ಚಾಗಿ ಕೌಟುಂಬಿಕ ಚಿತ್ರಗಳತ್ತ ವಾಲಿದರು. ಕರ್ಣ, ಕಥೆಗಾರ, ಜೀವನ ಚಕ್ರ, ಕರುಣಾಮಯಿ, ಒಂದಾಗಿ ಬಾಳು, ಹೃದಯಗೀತೆ, ಮಲಯ ಮಾರುತ ಎಲ್ಲವೂ ಹೆಸರು ಮಾಡಿದ ಚಿತ್ರಗಳು. ಇಲ್ಲಿ ಹಲವು ಚಿತ್ರಗಳನ್ನು ನಾನು ಹೆಸರಿಸಿಲ್ಲ. ೮೦ನೆ ದಶಕದ ಮೊದಲಲ್ಲಿ ಬಂದ 'ಬಂಧನ' ಚಿತ್ರ ಒಂದು ಹೊಸ ರೀತಿಯ ಚಿತ್ರಗಳನ್ನು ಹುಟ್ಟು ಹಾಕಿತೆಂದು ಹೇಳಿದರೆ ಅತಿಶಯವಲ್ಲ.

೯೦ರ ದಶಕದ ಮೊದಲಿನಲ್ಲಿ ಒಳ್ಳೆಯ ಚಿತ್ರಗಳನ್ನೇ ಕೊಡುತ್ತ ಬಂದ ವಿಷ್ಣು, ಅದಾದ ನಂತರ ಸತ್ವಯುಕ್ತವಾದ ಯಾವುದೇ ಸ್ವಮೇಕ್ ಚಿತ್ರದಲ್ಲಿ ನಟಿಸದಿದ್ದಿದ್ದು ವಿಷಾದಕರ. ೯೦ರ ದಶಕದ ಮೊದಲಲ್ಲಿ ಬಂದ ಸುಪ್ರಭಾತ, ಮುತ್ತಿನಹಾರ ಭರ್ಜರಿ ಯಶಸ್ಸು ಗಳಿಸಿತು. ನಂತರ ಸುನಿಲ್ ಕುಮಾರ್ ದೇಸಾಯಿ ಅವರ ಸಂಘರ್ಷ, ನಿಷ್ಕರ್ಶ ಚಿತ್ರಗಳೂ ಚೆನ್ನಾಗಿದ್ದವು. ನಂತರ ವಿಷ್ಣು ಹೆಚ್ಚಾಗಿ ರಿಮೇಕ್ ಚಿತ್ರಗಳತ್ತ ವಾಲಿದರು. ಈ ಮಧ್ಯ ಕೆಲವು ಸ್ವಮೇಕ್ ಚಿತ್ರಗಳಲ್ಲಿ ಕೆಲಸ ಮಾಡಿದ್ದೆಂದರೆ ಹಾಲುಂಡ ತವರು, ಮಾತಾಡ್ ಮಾತಾಡ್ ಮಲ್ಲಿಗೆ ಚಿತ್ರಗಳು.

ಅವರ ರಿಮೇಕ್ ಚಿತ್ರಗಳು ಗೆದ್ದಿರಬಹುದು. ಆದರೆ ಅವರ ನೈಜ ಅಭಿಮಾನಿಗಳನ್ನು ಕಳೆದುಕೊಳ್ಳುವಲ್ಲಿ ಅದು ಸಹಕಾರಿಯಾಯಿತು. ೯೦ರ ದಶಕದ ನಂತರ ಅವರು ಮಾಡಿದ ೯೦% ಹೆಚ್ಚಿನ ಚಿತ್ರಗಳು ರಿಮೇಕ್ ಗಳು. ಕೆಲವನ್ನು ಹೆಸರಿಸಬೇಕೆಂದರೆ ಯಜಮಾನ, ಸಿಂಹಾದ್ರಿಯ ಸಿಂಹ, ಕೋಟಿಗೊಬ್ಬ, ಆಪ್ತಮಿತ್ರ, ಜಮೀನ್ದಾರರು, ಸೂರ್ಯವಂಶ, ಬಳ್ಳಾರಿ ನಾಗ, ನಮ್ ಯಜಮಾನ್ರು, ವಿಷ್ಣು ಸೇನಾ, ಇತ್ಯಾದಿ ಇತ್ಯಾದಿ. ಹಲವು ಚಿತ್ರಗಳು ಕಳಪೆ ದರ್ಜೆಯವು ಎಂದು ಹೇಳಲು ವಿಷಾದಿಸುತ್ತೇನೆ.

ಅದರಲ್ಲಿಯೂ ಆ ಆಪ್ತಮಿತ್ರ ಚಿತ್ರವಂತೂ ನೋಡಿ ತಲೆ ಕೆಟ್ಟುಹೋಯಿತು. ೯೦ರ ದಶಕದ ನಂತರ ನಾನು ಅವರ ಸಿನೆಮ ನೋಡುವುದಿಲ್ಲವೆಂದು ತೀರ್ಮಾನಿಸಿದ್ದಕ್ಕೆ ಇದೇ ಕಾರಣ.

ಇರಲಿ. ರಾಜಕುಮಾರ್ ರ ನಂತರ ಕನ್ನಡ ಚಿತ್ರರಂಗದ ಚುಕ್ಕಾಣಿ ಹಿಡಿಯಲು ಸರಿಯಾದ ವ್ಯಕ್ತಿ ವಿಷ್ಣುವರ್ಧನ್ ಎಂದು ಎಲ್ಲರೂ ತೀರ್ಮಾನಿಸಿದ್ದಕ್ಕೆ ಖಡಾಖಂಡಿತವಾಗಿ ಆಗುವುದಿಲ್ಲವೆಂದು ನಿರಾಕರಿಸಿದ್ದು ಇದೇ ವಿಷ್ಣುವರ್ಧನ್. ಕನ್ನಡ ಭಾಷೆ, ಚಿತ್ರರಂಗಕ್ಕೆ ಸಂಬಂಧಿಸಿದಂತೆ ಯಾವುದೇ ಬಿಕ್ಕಟ್ಟಿಗೆ ಮುಂದೊತ್ತಿ ಹೋಗಲು ನಿರಾಕರಿಸುತ್ತಿದ್ದರು. ಇಂಥಾದ್ದರಲ್ಲಿ ಕೆಲವರು ರಾಜಕುಮಾರ್ ರಿಗೂ ವಿಷ್ಣುವರ್ಧನ್ ರಿಗೂ ತುಲನೆಯಲ್ಲಿ ತೊಡಗುತ್ತಾರೆ.  ವಿಪರ್ಯಾಸ.

ಕೊನೆಯದ್ದಾಗಿ ಒಂದು ಹೇಳಲಿಚ್ಛಿಸುತ್ತೇನೆ. ಆಪ್ತಮಿತ್ರ ಬಿಡುಗಡೆಯಾಗುವ ಮುನ್ನ ನಟಿ ಸೌಂದರ್ಯ ಸತ್ತರು. ಆ ಅನುಕಂಪದಿಂದಷ್ಟೇ ಆ ಚಿತ್ರ ೧ ವರ್ಷ ಓಡಿತು. ಇನ್ನು ಅದರ ಮುಂದುವರಿದ ಭಾಗ, ಆಪ್ತರಕ್ಷಕ, ವಿಷ್ಣುವರ್ಧನರ ಸಾಆವಿನ ಛಾಯೆಯಲ್ಲಿ ಅದೇನೇ ಕಥೆಯಿದ್ದರೂ ೧ ವರ್ಷ ಓಡುವುದು ಶತಸಿದ್ದ.

ಸತ್ತವರ ಬಗೆಗೆ ಕಟುವಾಗಿ ಮಾತಾಡಬಾರದು ನಿಜ. ವಿಷ್ಣುವರ್ಧನರ ಹಳೆಯ ಸಿನೆಮಾಗಳ ಬಗ್ಗೆ ಈಗಲೂ ನನಗೆ ಗೌರವವಿದೆ. ಆದರೆ ಅವರು ಅದನ್ನು ಕೊನೆಯ ತನಕ ಉಳಿಸಿಕೊಳ್ಳಲ್ಲಿಲ್ಲ ಎಂಬುದಷ್ಟೇ ನನ್ನ ಅಂಬೋಣ.

ಸತ್ತವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೇಡಿಕೊಳ್ಳುವುದರಲ್ಲಿ ನನಗೆ ನಂಬಿಕೆ ಅಷ್ಟಾಗಿ ಇಲ್ಲ. ಆದದ್ದಾಯಿತು ಎನ್ನುವ ಜಾಯಮಾನ ನನ್ನದು. ಕನ್ನಡ ಚಿತ್ರರಂಗ ಹಾಗು ಸುಗಮ ಸಂಗೀತ ಕ್ಷೇತ್ರ ಇಬ್ಬರು ರತ್ನಗಳನ್ನು ಕಳೆದುಕೊಂಡಿತು ಎನ್ನುವುದು ನಾಟಕೀಯವೆನ್ನಿಸುತ್ತದೆ. ಅವರು ಸತ್ತರೂ ಅವರ ಕೆಲಸದಲ್ಲಿ ಅವರನ್ನು ನೋಡಬಹುದೆನ್ನುವುದು ನನ್ನ ನೋಟ. ಏನಂತೀರ?

Thursday, December 17, 2009

ಸೋನು ನಿಗಮ್ ಹಾಗು ಕನ್ನಡ ಹಾಡುಗಳು.

ಈ ಬ್ಲಾಗನ್ನು ಓದುವ ಹಲವರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು. ನನ್ನ ಸೋಂಬೇರಿತನವನ್ನು  ಮನ್ನಿಸಿ.

ಕನ್ನಡ ಚಿತ್ರಗೀತೆಗಳು  ಹಾಗು ಪರಕೀಯ ಗಾಯಕರು ಎಂದು ಪ್ರಕಟವಾಗಬೇಕಿದ್ದ ಈ ಅಂಕಣವು ಹಂತ ಹಂತವಾಗಿ ತೆರೆದುಕೊಳ್ಳಲಿದೆ. ಇದಕ್ಕೆ ಪ್ರೇರಣೆ ಸೀನಈ ಹಳೆಯ ಅಂಕಣ.

ಕನ್ನಡ ಚಿತ್ರಗೀತೆಗಳಲ್ಲಿ ಎಂದಿನಂತೆ ಪರಕೀಯ ಗಾಯಕರ ಹಾವಳಿ ಇದ್ದಿದ್ದೇ. ಇತ್ತೀಚಿನ ದಿನಗಳಲ್ಲಿ ಅದು ಇನ್ನು ಹೆಚ್ಚಿದೆ ಎನ್ನುವ ಮಾತು ಆಗಾಗ ಕೇಳಿಬರುತ್ತದೆ. ಇದರ ಇತಿಹಾಸವನ್ನು ಸ್ವಲ್ಪ ಮಟ್ಟಿಗೆ ತಿಳಿದುಕೊಳ್ಳೋಣ.

೧೯೩೪ನೇ ಇಸವಿಯಿಂದ ಪ್ರಾರಂಭವಾದ ಕನ್ನಡ ಚಿತ್ರರಂಗ, ಮೂಕಿಯಿಂದ ಟಾಕಿಯಾದದ್ದು ಸರಿ ಸುಮಾರು ೫೦ನೆ ದಶಕದಲ್ಲಿ ಎಂದು ಹಲವರ ಅಂಬೋಣ. [ಆಸಕ್ತರು ಜಾಲದಲ್ಲಿ ಹುಡುಕಾಡಿ] ಆಗಿನ ಕಾಲದಿಂದಲೂ ಕನ್ನಡದಲ್ಲಿ ಪರಕೀಯರ ಹಾಡುಗಾರಿಕೆಯೇ. ಸೀರ್ಕಾಳಿ ಗೋವಿಂದನ್, ಘಂಟಸಾಲ, ಪಿ ಸುಶೀಲ, ಹಲವರು. ಆಗಿನ ಕಾಲದಲ್ಲಿ ಕರ್ನಾಟಕದಲ್ಲಿ ಸ್ಟೂಡಿಯೋ ವ್ಯವಸ್ತೆಯಿಲ್ಲದಿರುವುದೂ ಇದಕ್ಕೆ ಒಂದು ಪ್ರಮುಖ ಕಾರಣವಾಗಿರಬಹುದು. ಇದೇ ಸಾಲಿನಲ್ಲಿ ಬರುವವರು ಪಿ. ಬಿ. ಶ್ರೀನಿವಾಸ್, ಎಸ್. ಜಾನಕಿ, ಎಸ್. ಪಿ. ಬಾಲಸುಬ್ರಮಣ್ಯಂ, ಎಸ್. ಪಿ. ಶೈಲಜಾ, ಎಲ್. ಆರ್. ಈಶ್ವರಿ, ವಾಣಿ ಜಯರಾಂ, ಕೆ. ಎಸ್. ಚಿತ್ರ, ಕೆ. ಜೆ. ಏಸುದಾಸ್, ಇನ್ನು ಹಲವರು.

ಇವರೆಲ್ಲ ದಕ್ಷಿಣ ಭಾರತದ ಪ್ರಮುಖರಾಯ್ತು.

ಉತ್ತರ ಭಾರತದವರ ಕಡೆ ಮುಖ ಮಾಡಿದರೆ ನಮಗೆ ಸಿಗುವುದು, ಮೊಹಮ್ಮದ್ ರಫಿ (ಒಂದು ಹಾಡು), ಕಿಶೋರ್ ಕುಮಾರ್ (೧ ಹಾಡು), ಲತಾ ಮಂಗೇಶ್ಕರ್ (೧ ಹಾಡು) ಆಶಾ ಭೋಂಸ್ಲೆ (೧ ಹಾಡು), ಮನ್ನಾ ಡೇ (೨-೩ ಹಾಡು). ಇವರೆಲ್ಲ ಹಳಬರು. ಹೊಸಬರಲ್ಲಿ ಕುಮಾರ್ ಸಾಣು, ಉದಿತ್ ನಾರಾಯಣ್, ಸೋನು ನಿಗಮ್, ಅಲ್ಕಾ ಯಾಗ್ನಿಕ್, ಸಾಧನ ಸರ್ಗಂ, ಕುನಾಲ್ ಗಾಂಜಾವಾಲ, ಅನುರಾಧ ಪೌದ್ವಾಲ್, ಕವಿತಾ ಕೃಷ್ಣಮೂರ್ತಿ, ಶ್ರೇಯಾ ಘೋಶಾಲ್, ಕೈಲಾಶ್ ಖೇರ್, ಶಾನ್ ಪ್ರಮುಖರು.

ಇವರ ಬಗ್ಗೆ ಇನ್ನೊಮ್ಮೆ ಯಾವಾಗಲಾದರು ಹೇಳಿದರಾಯ್ತು. ಈಗ ಈ ಅಂಕಣದ ಕೇಂದ್ರ ಬಿಂದು, ಸೋನು ನಿಗಮರ ಬಗ್ಗೆ ಬರೆಯೋಣ.

ಹೆಚ್ಚಿನ ಪಕ್ಷ ಉತ್ತರ ಭಾರತದ ಎಲ್ಲರೂ ಮೂಗಿನಿಂದಲೇ ಹಾಡುತ್ತಾರೆ. ಶ್ರೇಯಾ ಘೋಶಾಲ್ ಒಬ್ಬರು ಅಪವಾದ. ನಮ್ಮ ಸೋನು ನಿಗಮರಂತು ಮೂಗೀಶ್ವರನ ಅಪರಾವತಾರ. ಸರಿ ಸುಮಾರು ೨೦೦೦ ನೇ ಇಸವಿಯಿಂದ ಕನ್ನಡದಲ್ಲಿ ಹಾಡಲು ಬಂದ ಸೋನುವನ್ನು ಇಲ್ಲಿಯ ಹೆಚ್ಚಿನ ಜನ ಅಭಿನಂದಿಸಿದರು. ಸೋನು, ಹಿಂದಿಯಲ್ಲಿ ಉತ್ತಮ ಹಾಡುಗಾರ ನಿಜ. ಆದರೆ ಅವರನ್ನು ಕನ್ನಡಕ್ಕೆ ತಂದವರು ಕನ್ನಡದ ಉಚ್ಚ್ಹಾರವನ್ನು ಸರಿಯಾಗಿ ಕಲಿಸದೇ ಹಾಡಿಸುವುದು ಅಪರಾಧವೇ ಸರಿ.

೨೦೦೬ ನೇ ಇಸವಿಯ ತನಕ ವರ್ಷಕ್ಕೆ ೨-೩ ಕನ್ನಡ ಹಾಡುಗಳನ್ನು ಹಾಡುತ್ತಿದ್ದ ಸೋನು, ಏಕ ದಂ, ಪ್ರಸಿದ್ಧರಾದದ್ದು ಮುಂಗಾರು ಮಳೆಯ ಹಾಡುಗಳಿಂದ.

೨೦೦೬ರ ತನಕ ಸೋನು ನಿಗಮರ ಕೆಲವು ಪ್ರಸಿದ್ಧ ಕನ್ನಡ ಹಾಡುಗಳೆಂದರೆ:
೧. ಟೈಟಾನಿಕ್ ಹೀರೋಯಿನ್ ನನ್ನ ಚೆಲುವೆ (ಚಿತ್ರ: ಸ್ನೇಹ ಲೋಕ, ಸಾಹಿತ್ಯ, ಸಂಗೀತ: ಹಂಸಲೇಖ)
೨. ಮೊನಾಲೀಸಾ ಮೊನಾಲೀಸಾ (ಚಿತ್ರ: ಮೋನಲೀಸ, ಸಂಗೀತ: ವಲೀಶ ಸಂದೀಪ್)
೩. ಅಂಟ್ ಅಂಟ್ ಅಂಟ್ (ಚಿತ್ರ: ಸೂಪರ್ ಸ್ಟಾರ್,  ಸಾಹಿತ್ಯ, ಸಂಗೀತ: ಹಂಸಲೇಖ)
೪. ಉಸಿರೇ, ಉಸಿರೇ (ಚಿತ್ರ: ಹುಚ್ಚ, ಸಂಗೀತ: ರಾಜೇಶ್ ರಾಮನಾಥ್) 

ನಿಮಗೆ ತಿಳಿದಿರುವ ಹಲವಾರು ಹಾಡುಗಳನ್ನು ನಾನು ಬಿಟ್ಟಿರಬಹುದು. ಕ್ಷಮೆಯಿರಲಿ.

ಈ ಮೇಲ್ಕಂಡ ಹಾಡುಗಳೆಲ್ಲದರ ಸಾಹಿತ್ಯ, ಎಷ್ಟು ಬಾರಿ ಕೇಳಿದರು ಬೇಜಾರಾಗುವುದಿಲ್ಲ. (ನನ್ನ ಅಭಿಪ್ರಾಯದಲ್ಲಿ ೪ ನೇ ಹಾಡು, ಉಸಿರೇ, ಉಸಿರೇ ಕೂಡ ಕೇಳಲಾಗುವುದಿಲ್ಲ, ಆದರೆ ಹಲವರಿಗೆ ಹಾಗನ್ನಿಸುವುದಿಲ್ಲ, ಇರಲಿ...)

ಆದರೆ ಈ ಮುಂಗಾರು ಮಳೆ ಚಿತ್ರ ಬಂತು ನೋಡಿ, ಅದರ ಹಾಡುಗಳು ಪ್ರಸಿದ್ಧವಾಗಿದ್ದೆ ಆಗಿದ್ದು, ಸೋನು ನಿಗಮರ ಕನ್ನಡ ಹಾಡುಗಾರಿಕೆ ಬೇರೆಯದೇ ಮಟ್ಟವನ್ನು ಮುಟ್ಟಿತು. ಆ ಚಿತ್ರವನ್ನು ಜನ ಅದ್ಯಾಕೆ ಅಷ್ಟು ಹಚ್ಚಿಕೊಂಡರು ಎಂದು ನನಗೆ ಇನ್ನೂ ಸ್ಪಷ್ಟವಾಗಿಲ್ಲ. ಆ ಚಿತ್ರದಲ್ಲಿ ಇಷ್ಟವಾಗಬಹುದಾದದ್ದು ಒಂದಿದ್ದರೆ ಅಲ್ಲಿನ ಛಾಯಾಗ್ರಹಣ. ಅದೊಂದು ಬಿಟ್ಟರೆ ಆ ಚಿತ್ರದ ಗಣೇಶ್, ಪೂಜಾ ಗಾಂಧಿ ಅಭಿನಯವಾಗಲಿ, ಮನೋ ಮೂರ್ತಿಗಳ ಸಂಗೀತವಾಗಲಿ, ಯೋಗರಾಜಭಟ್ಟರ ನಿರ್ದೇಶನವಾಗಲಿ, ಭಟ್ಟರ ಹಾಗು ಕಾಯ್ಕಿಣಿಯವರ ಸಾಹಿತ್ಯವಾಗಲಿ  ದೈನ್ಯವೆನ್ನಿಸುತ್ತದೆ. ಕಥೆಯಂತೂ ಬಾಲಿಶವಾಗಿದೆ. ಇರಲಿ ಬಿಡಿ. ನಾವು ಈಗ ಮುಂಗಾರು ಮಳೆಯ ವಿಮರ್ಶೆ ಮಾಡುತ್ತಿಲ್ಲ.

ಇದಾದನಂತರ ಬಂದ ಸೋನು ನಿಗಮರ ಕೆಲವು ಹಾಡುಗಳ ಸಾಹಿತ್ಯದ ಬಗ್ಗೆ ನಾನು ಬರೆಯಲಿಚ್ಚಿಸುತ್ತೇನೆ. ಇಲ್ಲಿ ಒಂದು ವಿಷಯ ಸ್ಪಷ್ಟಪಡಿಸುತ್ತೇನೆ. ನನಗೆ ಇಲ್ಲಿ ಜಯಂತ ಕಾಯ್ಕಿಣಿಯವರ ಬಗ್ಗೆ ಅಪಾರ ಗೌರವವಿದೆ. ಮನೋ ಮೂರ್ತಿ ಹಾಗು ಸೋನು ನಿಗಮರ ಬಗ್ಗೆ ಯಾವುದೇ ವೈಷಮ್ಯವಿಲ್ಲ. ಹಾಗೆಯೇ ಈ ಹಾಡುಗಳನ್ನು ಹೊರತರುವಲ್ಲಿ ಕಷ್ಟಪಟ್ಟ ಎಲ್ಲರ ಬಗ್ಗೆ ನನ್ನ ಗೌರವ, ಸಹಾನುಭೂತಿ, ಕಳಕಳಿ ಇದೇ. ಯಾರೂ ಅನ್ಯತಾ ಭಾವಿಸಬಾರದೆಂದು ವಿನಂತಿ.

ಮೊದಲೇ ಹೇಳಿದಂತೆ, ಮುಂಗಾರು ಮಳೆಯ ನಂತರ ಬಂದ ಹೆಚ್ಚಿನ ಸೋನು ಹಾಡುಗಳು ಒಂದೇ ಕಾಯ್ಕಿಣಿಯವರು ಬರೆದದ್ದು ಅಥವಾ ಮನೋ ಮೂರ್ತಿ ಸಂಗೀತ ಸಂಯೋಜಿಸಿದ್ದು ಅಥವಾ ಎರಡೂ. ಇತರರೂ ಮಾಡಿದ್ದಾರೆ ಆದರೆ ಇವರುಗಳು ಜಾಸ್ತಿ. ಈ ಎಲ್ಲಾ ಹಾಡುಗಳಲ್ಲಿ ಒಂದು ಪ್ರಮುಖ ಗುಣ, ಹಾಡಿನ ದೈನ್ಯತೆ. ಹೆಚ್ಚಿನ ಪಕ್ಷ ಎಲ್ಲ ಹಾಡುಗಳಲ್ಲಿಯೂ ದೈನ್ಯತೆ ಎದ್ದು ಕಾಣುತ್ತದೆ. ಹಲವನ್ನು ಇಲ್ಲಿ ಉದಾಹರಿಸುತ್ತೇನೆ.

೧. ಚಿತ್ರ: ಮುಂಗಾರು ಮಳೆ
     ಹಾಡು: ಅನಿಸುತಿದೆ ಯಾಕೋ ಇಂದು...
     ಸಾಹಿತ್ಯ: ಜಯಂತ್ ಕಾಯ್ಕಿಣಿ.
     ಸಂಗೀತ: ಮನೋ ಮೂರ್ತಿ.
      ದೈನ್ಯತೆಯ ಪರಮಾವಧಿಯ ಸಾಲುಗಳು:  "ನೀನೇನೆ ನನ್ನವಳೆಂದು..." "ಇನ್ನ್ಯಾರ ಕನಸಲೋ ನೀನು ಬಂದರೆ ತಳಮಳ" "ನನ್ನ ಹೆಸರ ಕೂಗೆ ಒಮ್ಮೆ ಹಾಗೆ ಸುಮ್ಮನೆ"

೨. ಚಿತ್ರ: ಗಾಳಿಪಟ
     ಹಾಡು: ಮಿಂಚಾಗಿ ನೀನು ಬರಲು
     ಸಂಗೀತ: ಹರಿಕೃಷ್ಣ
     ದೈನ್ಯತೆಯ ಪರಮಾವಧಿ: "ನಾ ನಿನ್ನ ಕನಸಿಗೆ ಚಂದಾದಾರನು, ಚಂದಾ ಬಾಕಿ ನೀಡಲು ಬಂದೇ ಬರುವೆನು"
     ನನ್ನ ಅನಿಸಿಕೆ: ಅಯ್ಯೋ ಬೇಡ ಬಿಡು ಗುರು. ನಿಂಗ್ ಫ್ರೀಯಾಗೆ ಕೊಡ್ತೀನಿ. ನನ್ನ ಗೆಳೆಯ ಸೀನ ಇದಕ್ಕೆ ಅಣಕ ಹಾಡಿದ್ದ. "ನಾ ನಿನ್ನ ಚಪ್ಪಲಿಯ ಚಮ್ಮಾರನು, ಕಿತ್ತೋದ್ ಚಪ್ಪಲಿ ಹೊಲಿಯಲು ಬಂದೇ ಬರುವೆನು... ಯಪ್ಪಾ!!)

೩. ಚಿತ್ರ: ನವಗ್ರಹ
     ಹಾಡು: ಕಣ್ಣ ಕಣ್ಣ ಸಲಿಗೆ
     ಸಂಗೀತ: ಹರಿಕೃಷ್ಣ
     ದೈನ್ಯತೆಯ ಪರಮಾವಧಿ: ಇಡೀ ಹಾಡೇ ದೈನ್ಯವಾಗಿದೆ. ಅದರಲ್ಲಿಯೂ ಎರಡನೆಯ ಚರಣದಲ್ಲಿ "ಪ್ರೀತೀ ಮಾಡೇ" ಅಂತೂ ಅರಚಿಕೊಳ್ಳುವಂತಿದೆ. ಈ ಹಾಡು ಕೇಳಿದಾಗಲೆಲ್ಲ ಮೈ ಪರಚಿಕೊಳ್ಳುವಂತಾಗುತ್ತದೆ.

೪. ಚಿತ್ರ: ಸರ್ಕಸ್
     ಹಾಡು: ಪಿಸುಗುಡಲೇ... ಸವಿ ಮಾತೊಂದ...
     ಸಂಗೀತ: ಎಮಿಲ್
     ದೈನ್ಯತೆಯ ಪರಮಾವಧಿ: ಅಸಂಬದ್ಧ ಕಲ್ಪನೆಗಳು. "ನನ್ನ ನೂರು ಆಸೆಗೆಲ್ಲ, ಕೋಟಿ ಕೋಟಿ ಬಣ್ಣಗಳ ಕನಸಿನ ಅಂಗಿಯ ತೊಡಿಸಿ...."
     ಅಣಕ: ಇನ್ನ್ ಏನ್ ಏನ್ ಆಸೆ ಎಲ್ಲ ಇಟ್ಟುಕೊಂಡು ಇದ್ದೀಯ  ಸಿವಾ?

೫. ಚಿತ್ರ: ಮಳೆಯಲಿ... ಜೊತೆಯಲಿ...
     ಹಾಡು: ನೀ ಸನಿಹಕೆ ಬಂದರೆ...
     ಸಂಗೀತ: ಹರಿಕೃಷ್ಣ
     ದೈನ್ಯತೆಯ ಪರಮಾವಧಿ: ಶೀರ್ಷಿಕೆಯೇ ಹೇಳುತ್ತದೆ. "ನೀ ಸನಿಹಕೆ ಬಂದರೆ ಹೃದಯದ ಗತಿ ಏನು?"
     ಅಣಕ: ಹುಡ್ಗೀರ, ಇವನ್ ಹತ್ರ ಹೋಗಬೇಡಿರಮ್ಮ.

ಹೇಳುತ್ತಾ ಹೋದರೆ ಈ ಸರತಿ ತುಂಬಿ ಹೋಗಬಹುದು. ಸೋನು, ಮನೋ, ಕಾಯ್ಕಿಣಿ ತ್ರಯರು ಹೊರತಂದ ಆಲ್ಬಮ್ "ನೀನೆ, ಬರಿ ನೀನೆ" ಅಲ್ಲಿ ದೈನ್ಯತೆಯನ್ನು ಯಥೇಚ್ಚವಾಗಿ ಕಾಣಬಹುದು. ಇದರಲ್ಲಿ ಇನ್ನು ಹಲವು ಗಾಯಕರ ಪಾತ್ರವೂ ಇದೇ. ಆದರೆ ಸೋನು ನಿಗಮ್ ಎಲ್ಲರನ್ನು ಮೀರಿಸಿದ್ದಾರೆ. ದೈನ್ಯತೆಯಲ್ಲಿ.

ಮೇಲೆ ಹೇಳಿದ ಹಾಡುಗಳು ಶೇಕಡಾ ೯೮% ಜನರಿಗೆ ಅಚ್ಚು ಮೆಚ್ಚು. ಅದು ಅವರ ಇಚ್ಛೆ. ನನ್ನ ಅಭಿಪ್ರಾಯವನ್ನು ಇಲ್ಲಿ ನಿರ್ದಾಕ್ಷಿಣ್ಯವಾಗಿ ಮಂಡಿಸಿದ್ದೇನೆ. ಅಂಕಣವನ್ನು ಓದಿ ನೋವಾಗಿದ್ದರೆ ಕ್ಷಮೆಯಿರಲಿ.

ಕೊನೆಯದಾಗಿ ಒಂದು ಮಾತು. ಈ ಎಲ್ಲ ಹಾಡುಗಳನ್ನು ಇಷ್ಟಪಡುವವರು ದೈನ್ಯತೆಯೇ ಸಂಗೀತ, ದೈನ್ಯತೆಯೇ ಮಾಧುರ್ಯವೆಂದು (Melody) ತಿಳಿದಿದ್ದಾರೆ.  ಹಾಗೆಂದು ಘಂಟಾಘೋಷವಾಗಿ ಎಲ್ಲ ಕಡೆ ಹೇಳಿಕೊಂಡು ಬರುತ್ತಾರೆ. ಇಂಥವರಿಗೆ ನನ್ನದೊಂದು ಸಲಹೆ. ದೈನ್ಯತೆಯನ್ನು ಮೀರಿ ಸಂಗೀತವಿದೆ. ಅದರಲ್ಲಿ ಬರಿಯ ಸಂತೋಷವಿದೆ. ಉದಾಹರಣೆಗೆ ಹಂಸಲೇಖರ ಹಾಡುಗಳನ್ನು ಕೇಳಿ, ಸಾಧು ಕೋಕಿಲರವರ ಹಲವು ಹಾಡುಗಳನ್ನು ಕೇಳಿ. (ಹೌದು, ಸಾಧು ಅವರು ಕೆಲವು ಹಾಡುಗಳನ್ನು ಅಚ್ಚು ಇಳಿಸುತ್ತಾರೆ. ಆದರೂ ಅವರ ಹಲವು ಹಾಡುಗಳಲ್ಲಿ ಆನಂದವಿದೆ, ಉದಾ: ಗಂಡುಗಲಿಯ ಹಾಡುಗಳು, ಸವ್ಯಸಾಚಿಯ ಹಾಡುಗಳು, ನೋ. ೧ ಚಿತ್ರದ ಹಾಡುಗಳು, ಇಂತಿ ನಿನ್ನ ಪ್ರೀತಿಯ ಹಾಗು ದೇವ್ರು ಚಿತ್ರದ ಹಾಡುಗಳು) ಕೇಳಿ ನೋಡಿ. ಈ ಹಾಡುಗಳಲ್ಲಿ ದೈನ್ಯತೆ ಇಲ್ಲ. ಹಾಗೆಂದು ಇವರಾರೂ ದೈನ್ಯತೆಯ ಹಾಡುಗಳನ್ನು ಮಾಡಿದವರೇ ಅಲ್ಲವೆಂದಲ್ಲ. ಅತಿ ವಿರಳ. ಇಲ್ಲವೆಂದೇ ಹೇಳಬಹುದು. ವಯ್ಯಕ್ತಿಕವಾಗಿ ನನಗೆ ಇಂತಹ ಹಾಡುಗಳು ಇಷ್ಟವಾಗುತ್ತವೆ.

ಸರಿ. ಸೋನು (ನೋಸು??) ನಿಗಮರ ಅಭಿಮಾನಿಗಳೇ, ಅನಿಸಿಕೆ ಬರೆಯಲು ತಯಾರಾ?