Thursday, February 18, 2010

ಡಿ. ಎನ್. ಶಂಕರ್ ಭಟ್ಟರ ಕನ್ನಡ. ಒಂದು ವಿಮರ್ಶೆ. ಭಾಗ ೧

ಮಯೂರದಲ್ಲಿ ಡಿ. ಎನ್. ಶಂಕರ ಭಟ್ಟರ ಸಂದರ್ಶನವನ್ನೋದುತ್ತಿದ್ದಾಗ ಹೊಳೆದ ಈ ಲೇಖನ ಈಗ ನಿಮ್ಮ ಮುಂದೆ.

ಈ ತಿಂಗಳ ಮಯೂರವನ್ನು ಕೈಗೆತ್ತಿಕೊಂಡಾಗ ಅದರ ನವನೀತ ಅಂಕಣದಲ್ಲಿ ಪ್ರಕಟಗೊಂಡ ಈ ತಲೆಬರಹ ನನ್ನ ಗಮನವನ್ನು ಸೆಳೆಯಿತು. "ಓದುಕನ್ನಡವೇ ಬರಹಕನ್ನಡ".
ಸಂದರ್ಶಿತರು: ಡಿ. ಎನ್. ಶಂಕರ್ ಭಟ್,
ಸಂದರ್ಶಕರು: ಮೇಟಿ ಮಲ್ಲಿಕಾರ್ಜುನ, ಎಸ್. ಸಿರಾಜ್ ಅಹಮದ್.

ಆಸಕ್ತರು ಈ ಅಂಕಣವನ್ನು ಒಮ್ಮೆ ಓದಿ ಈ ಲೇಖನವನ್ನು ಓದಬೇಕಾಗಿ ಪ್ರಾರ್ಥನೆ.

ಡಿ. ಎನ್. ಶಂಕರ್ ಭಟ್ಟರು ಆಂಗ್ಲ ಭಾಷೆಯಲ್ಲಿ ಮಹಾನ್ ಪಂಡಿತರು. ಅವರ ಹಲವು ಪುಸ್ತಕಗಳು ಜಗದ್ವಿಖ್ಯಾತವಾಗಿವೆಯೆಂದು ಈ ಲೇಖನ ಹೇಳುತ್ತದೆ. ಅವರು ೭೦ರ ದಶಕದಲ್ಲಿ ಕನ್ನಡದಲ್ಲಿ ಬರೆಯಲು ಆರಂಭಿಸಿದ್ದರಾದರೂ ಹೆಚ್ಚಿನ ಸ್ಪೂರ್ತಿ, ಸಹಕಾರ ದೊರೆಯದ ಕಾರಣ ಆಂಗ್ಲಕ್ಕೆ ಅಂಟಿಕೊಂಡರು ಎಂದು ಹೇಳಿಕೊಂಡಿದ್ದಾರೆ. ಈಗ ಪ್ರೊ|| ಚಂದ್ರಶೇಖರ್ ಕಂಬಾರರ ನಲ್ಮೆಯ ಒತ್ತಾಯದ ಮೇರೆಗೆ ಕನ್ನಡ ಭಾಷೆಯ ಬಗೆಗೆ ವಿಸ್ತೃತ ಸಂಶೋಧನೆಗೈಯಲು ತೊಡಗಿದ್ದಾರೆ. ಈ ಸಂಶೋಧನೆಯ ಫಲಿತಾಂಶಗಳೇ ಅವರ ಹಲವು ಪುಸ್ತಕಗಳು

೧. ಕನ್ನಡ ನುಡಿ ನಡೆದು ಬಂದ ದಾರಿ.
೨. ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ.
೩. ಕನ್ನಡ ಬರಹವನ್ನು ಸರಿಪಡಿಸೋಣ.
೪. ಬಾಶೆಯ ಬಗೆಗೆ ನೀವೇನು ಬಲ್ಲಿರಿ?
೫. ಕನ್ನಡ ವಾಕ್ಯಗಳ ಒಳರಚನೆ.
೬. ಕನ್ನಡದ ಸರ್ವನಾಮಗಳು. (ಅರ್ಕ ಒತ್ತು ಅಲ್ಲ, ರ ಕಾರಕ್ಕೆ ವ ಒತ್ತು.)
೭. ಕನ್ನಡ ಬಾಶೆಯ ಕಲ್ಪಿತ ಚರಿತ್ರೆ
೮. ಕನ್ನಡ ಶಬ್ದ ರಚನೆ.

ಇನ್ನು ಹಲವು. ಏನ್ ಗುರು ತಂಡದವರು ಈ ಎಲ್ಲ ಹೊತ್ತಿಗೆಗಳನ್ನು ವಿದ್ಯುನ್ಮಾನ ರೂಪದಲ್ಲಿ ಹೊರತಂದಿದ್ದಾರೆ. ಅವುಗಳನ್ನು ನೀವು ಇಲ್ಲಿಂದ ಡೌನ್ಲೋಡ್ ಮಾಡಬಹುದು. (ನಾನು ಈ ಪುಸ್ತಕಗಳನ್ನು ಡೌನ್ಲೋಡ್ ಮಾಡಲು ನೋಡಿದೆ. ಸರ್ವರ್ ಎರರ್ ಒದಗಿತು. ಇನ್ನೊಮ್ಮ್ಮೆ ನೋಡಲಾಗಲಿಲ್ಲ).

ಈ ನಿಟ್ಟಿನಲ್ಲಿ ಏನ್ ಗುರು ತಂಡ ಒಂದು ಸಭೆಯನ್ನು ಏರ್ಪಡಿಸಿತ್ತು. ಅದರ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ತಂತುವನ್ನು ನೋಡಿ.

ಡಿ. ಏನ್. ಶಂಕರ್ ಭಟ್ ರ ಈಗಿನ ಕನ್ನಡದ ಮೇಲಿನ ಆರೋಪಗಳು.
೧. ಇದು ಕನ್ನಡವಲ್ಲ, ಸಂಸ್ಕೃತ.
೨. ಹೆಚ್ಚಾಗಿ ಸಂಸ್ಕೃತ ಪದಗಳನ್ನೇ ಅವಲಂಬಿತವಾಗಿರುವ ನಮ್ಮ ಇಂದಿನ ಕನ್ನಡವನ್ನು ನಾವು ಕನ್ನಡೀಕರಿಸಬೇಕು.
೩. ವ್ಯಾಕರಣವೂ ಸಂಸ್ಕೃತಮಯವಾಗಿದೆ. ಅದರ ಶುದ್ಧೀಕರಣವೂ ಸಾಗಬೇಕು.
೪. ಆಡುಭಾಷೆಯಲ್ಲಿ ಮಹಾಪ್ರಾಣಗಳನ್ನು ಬಳಸುವುದಿಲ್ಲ. ಅದೆಲ್ಲ ಬರಿಯ ಲಿಖಿತ ರೂಪದಲ್ಲಿವೆಯಷ್ಟೇ. ಹಾಗಾಗಿ ಇವನ್ನೆಲ್ಲ ನಮ್ಮ ಕನ್ನಡದಿಂದ ತೆಗೆದುಹಾಕಬೇಕು.
೫. ಪಠ್ಯ ಪುಸ್ತಕಗಳು ಕನ್ನಡದಲ್ಲಿ ಹೊರಬರುತ್ತಿಲ್ಲ. ಅದರಲ್ಲಿಯೂ ವೈಜ್ಞಾನಿಕ ವಿಷಯಗಳಿಗೆ ಸಂಬಂಧ ಪಟ್ಟಂತೆ ಕನ್ನಡದಲ್ಲಿ ಕಲಿಯಲು ಯಾವುದೇ ಸೌಲಭ್ಯಗಳಿರುವುದಿಲ್ಲ. ಇವೆಲ್ಲವನ್ನೂ ತೊಡೆದು ಹಾಕಲು ಕನ್ನಡದಲ್ಲಿ ಅದೂ ಆಡುಗನ್ನಡದಲ್ಲಿ ಹೆಚ್ಚಿನ ಪುಸ್ತಕಗಳನ್ನು ಹೊರತರಬೇಕು.
೬. ಹೊಸ ಹೊಸ ಕನ್ನಡ ಪದಗಳ ಆವಿಷ್ಕಾರ ಆಗಬೇಕು. ಇದು ನಡೆಯುತ್ತಲೇ ಇರಬೇಕು.
೭. ಹಳ್ಳಿ ಮಕ್ಕಳು, ಕೆಳ ವರ್ಗದವರು ಈಗಿನ ಪಠ್ಯ ಪುಸ್ತಕಗಳಲ್ಲಿ ಸಿಗುವ ಮಹಾಪ್ರಾಣಗಳಿಂದ ನಲುಗಿ ಹೋಗಿದ್ದಾರೆ. ಅದರಿಂದ ಅವರು ಶೈಕ್ಷಣಿಕವಾಗಿ ಮೇಲೆ ಬರಲಾಗುತ್ತಿಲ್ಲ. ಹೀಗಾಗಿ ಮಹಾಪ್ರಾಣಗಳನ್ನು ತೆಗೆದುಹಾಕಬೇಕು.

ಇನ್ನು ಹಲವು. ಇವು ಮುಖ್ಯವಾದವು.

ಇನ್ನು ನನ್ನ ನಿಲುವನ್ನು ಸ್ಪಷ್ಟಪಡಿಸುತ್ತೇನೆ. ನಾನು ಕನ್ನಡಕ್ಕೆ ಈ ಮಟ್ಟದ ಬದಲಾವಣೆಯಾಗುವುದನ್ನು ಪೂರ್ಣವಾಗಿ ಖಂಡಿಸುತ್ತೇನೆ. ಈ ಮೇಲೆ ಹೇಳಿರುವ ಅಂಶಗಳಿಗೆ ನನ್ನ ಉತ್ತರವನ್ನು ಈಗ ಕೊಡಲಿಚ್ಚಿಸುತ್ತೇನೆ.

೧. ಇದು ಕನ್ನಡವಲ್ಲ, ಸಂಸ್ಕೃತ: ಸ್ವಾಮಿ, ಕನ್ನಡದಲ್ಲಿ ಸಂಸ್ಕೃತ ಬಹಳಷ್ಟಿರಬಹುದು. ಆದರೆ ಕನ್ನದವೆಂದೂ ಸಂಸ್ಕ್ರುತವಗಲಾರದು. ಕನ್ನಡಕ್ಕೆ ಅದರದ್ದೇ ಸ್ಥಾನಮಾನಗಳಿವೆ. ಸಂಸ್ಕೃತಕ್ಕೂ ಅದರದ್ದೇ ಸ್ಥಾನಮಾನಗಳಿವೆ. ಎರಡು ಭಾಷೆಗಳನ್ನು ಈ ರೀತಿ ಏಕೆ ಹೋಲಿಸುತ್ತೀರಿ?ಸಂಸ್ಕೃತ ಭಾರತದ ಭಾಷೆ. ಅದರಿಂದ ಸ್ಪೂರ್ತಿ ಪಡೆಯದ ಭಾರತದ (ಅಷ್ಟೇ ಏಕೆ? ವಿಶ್ವದ) ಭಾಷೆಯೆಷ್ಟಿದೆ? ನಮ್ಮ ಕನ್ನಡವೂ ಇದೇ ರೀತಿ ಸಂಸ್ಕೃತದಿಂದ ಬಹಳ ಪಡೆದುಕೊಂಡಿದೆ. ಹಾಗೆಯೇ ಸಂಸ್ಕೃತವೂ ಇತರ ಭಾಷೆಗಳಿಂದ ಹೆಚ್ಚಲ್ಲದಿದ್ದರೂ ಅಷ್ಟು ಇಷ್ಟು ಪಡೆದುಕೊಂಡಿದೆ. ಭಾಷೆಗಳು ಬೆಳೆಯುವುದೇ ಹಾಗೆ ಅಲ್ಲವೇ?

೨. ಕನ್ನಡದ ಹೆಚ್ಚಿನ ಪದಗಳು ಸಂಸ್ಕೃತದಿಂದ ಆಯ್ದವಾಗಿವೆ. ಅವನ್ನು ಕನ್ನಡೀಕರಿಸಬೇಕು: ಕನ್ನಡೀಕರಿಸುವುದೆಂದರೆ ಏನು?ಹೊಸ ಪದಗಳನ್ನು ಹುಟ್ಟು ಹಾಕುವುದು. ಇದಕ್ಕೂ ಸಂಸ್ಕೃತಕ್ಕೂ ಏಕೆ ಥಳುಕು ಹಾಕುವಿರಿ? ಕೆಲವಕ್ಕೆ ಹಳಗನ್ನಡ ಪದಗಳನ್ನು ಹೊಂದಿಸಬಹುದು. ಇತ್ತೀಚಿನ ವಿಜ್ಞಾನ ಸಂಬಂಧೀ ಪದಗಳಿಗೆ ಏನು ಮಾಡುವಿರಿ?

ಉದಾಹರಣೆ: ನೀವು 'ಉದಾಹರಣೆ' ಎನ್ನುವ ಬದಲು 'ಎತ್ತುಗೆ' ಎನ್ನಲು ಪ್ರೋತ್ಸಾಹಿಸುತ್ತೀರಿ. ಹೆಚ್ಚಿನ ಜನಕ್ಕೆ ಉದಾಹರಣೆ ಎಂದೇ ಅಭ್ಯಾಸವಾಗಿರುವಾಗ ಯಾರು ಎತ್ತುಗೆ ಎನ್ನುತ್ತಾರೆ?

ಮುಂದುವರೆಯುವುದು...

Monday, February 08, 2010

ಸದಾನಂದ

ಸ್ಮಶಾನದಲ್ಲಿ ಅವನು ಅಳುತ್ತಾ ಕೂತಿದ್ದ. ಅವನ ತಂದೆ, ಅವನಿಗಿದ್ದ ಒಂದೇ ಆಸರೆ, ಅವನನ್ನಗಲಿದ್ದ. ತನಗಿನ್ನಾರು ದಿಕ್ಕು? ತಾನಿನ್ನು ಒಬ್ಬಂಟಿ ಎಂದು ಮರುಗುತ್ತಿದ್ದ.

ಸ್ಮಶಾನದ ಚಂಡಾಳ ಇವನನ್ನೇ ದಿಟ್ಟಿಸಿ ನೋಡುತ್ತಿದ್ದ. ಅವನ ಕೆಲಸವೆಲ್ಲ ಮುಗಿದಿತ್ತು. ಆ ದಿನ ಹೆಣ ಸುಟ್ಟು, ೩-೪ ಹೆಣಗಳನ್ನು ಹೂತಿದ್ದ.

ಇವನ ಬಳಿ ಬಂದು ಕೇಳಿದ: "ಯಾಕ್ ಮರಿ ಅಳತ ಇದ್ದೀಯ? ಮನೆಗ್ ಒಗಾಕಿಲ್ವ?"

"ನಮ್ಮಯ್ಯ ಸತ್ತ್ಹೊಗವ್ರೆ! ನಂಗ್ಯಾರು ಗತಿ ಇಲ್ಲ. ಮನೆಗ್ ಹೋದ್ರೆ ಬರೀ ಅಯ್ಯನ್ನ್ ನೆನಪೆ ಬತ್ತೈತೆ. ನಾ ಮನೆಗ್ ಹೊಗಾಕಿಲ್ಲ"

"ಹಂಗಲ್ಲ ಅನ್ನ್ಬ್ಯಾಡದು ಮಗಾ! ಮೇಲಿರೋ ನಿಮ್ಮಯ್ಯನ್ಗೆ ಸಿಟ್ಟ ಬರಾಕಿಲ್ವ? ಓಗು! ಮನೆಗ್ ಹೋಗಿ ಸಂದಾಗ್ ಬದುಕು"

"ನಾ ಒಗಾಕಿಲ್ಲಂದ್ರೆ ಒಗಾಕಿಲ್ಲ".

"ನೀ ಹೀಂಗ್ ಹೇಳಿದ್ರೆ ಹೋಗಲ್ಲ. ಇಲ್ ಬಾ. ಇದ ನೋಡು. ಏನಿದು?"

"ತಲೆ ಬುಲ್ಡೆ ಕಣ್ ಏಳು".

"ಇದ ಯಾವಗಾನ ಅತ್ತಿದ್ದೂ ಬೇಜಾರ್ ಮಾಡ್ಕಂದಿದ್ದೂ ನೀ ಕಂಡೀಯ?"

"ಏಯ್! ಆದ ಯಾಕ್ ಬೇಜಾರ್ ಮಾಡ್ಕತ್ತದೆ? ಅದ್ಕೆನ್ ಬುದ್ದಿ ಐತಾ?"

"ಅದೇ ನಾನು ಏಳೋದು. ನೀ ಬ್ಯಾಜಾರ್ ಮಾಡ್ಕಂದ್ರೂ, ಸಿಟ್ಟ ಮಾಡ್ಕಂದ್ರೂ ಏನೇ ಮಾಡ್ಕಂದ್ರೂ ಈ ತಲೆ ಬುಲ್ಡೆ ಮಾತ್ರ ಯಾವಾಗಲೂ ನಗ್ತಾ ಇರ್ತದೆ. ಅಳೋ ತಲೆ ಬುಲ್ಡೆ ನ ಯಾರೂ ಇಲ್ಲೀಗಂಟ ಕಂಡೇ ಇಲ್ಲ. ತಿಳ್ಕ. ನೀ ಹೆಂಗೆ ಇರು, ಈ ಬುಲ್ಡೆ ಮಾತ್ರ ಯಾವಾಗಲೂ ನಗ್ತಾನೆ ಇರ್ತೈತೆ. ಹಂಗೆ ಏನೇ ಆದ್ರೂ ನೀನು ನಗ್ತಾನೆ ಇರ್ಬೇಕು. ಈಗ ನಿಮ್ಮಪ್ಪ ಸತ್ತೋದ್ರು ಅಂತ ನೀ ಸುಮ್ಕಿದ್ದ್ರೆ ನೀನು ಸತ್ತ್ಹೊಯ್ತೀ. ನಿಮ್ಮಪ್ಪ ನಿನ್ನ ಕಷ್ಟ ಪಟ್ಟು ಸಾಕಿದ್ದು ಇದ್ಕೆಯ? ಹೋಗು. ಕಷ್ಟ ಪಟ್ಟು ದುಡಿದು ನಿಮ್ಮಪ್ಪನ್ ಋಣ ತೀರ್ಸೋಗು. "

ಬಾಳಿನಲ್ಲಿ ಏನೋ ಹೊಸ ಅರ್ಥ ಕಂಡ ಆ ಹುಡುಗ ಮುನ್ನಡೆದ.