Monday, April 13, 2009

ಉಪೇಂದ್ರ ನಿರ್ದೇಶನದ ಹೊಸ ಚಿತ್ರ : ಲಂಡನ್ ಗೌಡ

ಉಪೇಂದ್ರ ಅವರು 'ತಮಸೋಮಾ ಜ್ಯೋತಿರ್ಗಮಯ' ಅನ್ನೋ ಚಿತ್ರ ನಿರ್ದೇಶಿಸುತ್ತಿದ್ದಾರೆ ಅಂತ ವರ್ಷದ ಹಿಂದೆ ಒಂದು ಸುದ್ದಿ ಬಂದಿತ್ತು. ಗಾಳಿಸುದ್ದಿಗಳು ಬಹು ಬೇಗ ಹರಡಿತ್ತು. ಒಮ್ಮೆ ಆ ಚಿತ್ರದಲ್ಲಿ ಉಪೇಂದ್ರ ದಂಪತಿಗಳು ಅಭಿನಯಿಸುತ್ತಾರೆ ಅಂತ ಇದ್ದರೆ, ಇನ್ನೊಮ್ಮೆ ಆ ಚಿತ್ರದ ನಾಯಕ ಶಿವರಾಜಕುಮಾರ್ ಅಂತ ಇತ್ತು.

ಇವೆಲ್ಲ ಸುದ್ದಿ ಆದಮೇಲೆ ಈಗ, ಒಂದು ವಾರದ ಹಿಂದೆ ತಾಜಾ ಸುದ್ದಿಯೊಂದು ಬಂದಿದೆ. ಅದೇನೆಂದರೆ, ಉಪೇಂದ್ರ ತಮ್ಮದೇ ನಿರ್ದೇಶನದಲ್ಲಿ ೧೦ ವರ್ಷಕ್ಕೂ ಮೇಲ್ಪಟ್ಟು ಒಂದು ಸಿನೆಮ ಮಾಡುತ್ತಿದ್ದರೆ. ಅದರ ಹೆಸರು ಲಂಡನ್ ಗೌಡ ಎಂದು. ನಾಯಕ ಅವರೇ, ನಾಯಕಿ ಕನ್ನಡದವರೇ ಆದ ಸ್ನೇಹ ಉಳ್ಳಾಲ್ ಎಂದು.

ಕೆಲವರು ಉಪೇಂದ್ರ ಈ ಚಿತ್ರ ನಿರ್ದೇಶನ ಮಾಡುವುದಿಲ್ಲ ಅಂದರೆ, ಇನ್ನು ಕೆಲವರು ಅವರು ಮಾಡುತ್ತಾರೆ ಅನ್ನುತ್ತಾರೆ. ಅದೇನೆಂದು ಕಾದು ನೋಡಬೇಕು. ಆದರೆ ಕಥೆ, ಚಿತ್ರಕಥೆ, ಉಪೇಂದ್ರರದ್ದೇ ಆಗಿರುತ್ತದೆ.

ಅವರು ಈ ಸಿನಿಮಾಕ್ಕೆ 'ಲಂಡನ್ ಗೌಡ' ಎಂದೆ ಏಕೆ ಹೆಸರಿಟ್ಟರು? ದುಬೈ ಬಾಬು ತರಹದ್ದೇ ಒಂದು ಹೆಸರು ಇಡಲು ಹೋಗಿ ಹೀಗಿತ್ತಿದ್ದರೆ ಎಂದು ಕೆಲವರು ಹೇಳುತ್ತಾರೆ. ನನಗೇನೋ ಹಾಗನ್ನಿಸುವುದಿಲ್ಲ. ಉಪೇಂದ್ರ ಯಾವಾಗಲು ತಮ್ಮ ಕಥೆಗೆ ವಿಶಿಷ್ಟ ಹೆಸರಿಡುತ್ತಾರೆ ಎಂದು ನನ್ನ ನಂಬಿಕೆ. ಕೆಲವರಿಗೆ ಅದು ವಿಚಿತ್ರವೂ ಆಗಬಹುದು, ಹೇಸಿಗೆಯೂ ಆಗಬಹುದು. ಏನೇ ಇರಲಿ. ನನ್ನ ಮಟ್ಟಿಗೆ ಆ ಹೆಸರಿಡಲು ಒಂದು ವಿಚಿತ್ರ ಕಾರಣವೆಂದರೆ

'ಲಂಡನ್ ಗೌಡ' ಈ ಹೆಸರಲ್ಲಿ ಮೊದಲ ಅಕ್ಷರಗಳ ವ್ಯಂಜನ ಭಾಗವನ್ನು ಪರಸ್ಪರ ಬದಲಾಯಿಸಿ. ಸ್ವರವು ಹಾಗೆಯೇ ಇರಲಿ. ಆಗ ನಿಮಗೆ ಉಪೇಂದ್ರರ ರಸಿಕತನ ತಿಳಿಯುವುದು. ಅದನ್ನು ನಾನು ಇಲ್ಲಿ ಬರೆಯುವುದಿಲ್ಲ. ಬರೆದರೆ ಕೆಲವರಿಗೆ ಮುಜುಗರವಾಗಬಹುದು.

ಉದಾಹರಣೆಗೆ : 'ದುಬೈ ಬಾಬು'ವನ್ನು ಇದೇ ರೀತಿ ಬದಲಾಯಿಸಿದರೆ, 'ಬುಬೈ ದಾಬು' ಎಂದಾಗುತ್ತಾರೆ. ಹೀಗೆ ಲಂಡನ್ ಗೌಡಕ್ಕೂ ಮಾಡಿ ನೋಡಿ.

=) ಮುಂದಿನ ಅಂಕಣದಲ್ಲಿ ಸಿಗೋಣ.

Sunday, April 12, 2009

ಮೋಹನ ಮುರಲಿ

ಸುಮಾರು ೨ ವರ್ಷಗಳ ಹಿಂದೆ ಶ್ರೀನಿಧಿ ಹಂದೆ, ಅಡಿಗರ ಮೋಹನ ಮುರಲಿ ಯ ಸಾಹಿತ್ಯ ಸಿಗುವುದೇ ಎಂದು ಕೇಳಿದ್ದನು. ಅದಕ್ಕೆ ಉತ್ತರವಾಗಿ ಇಷ್ಟು ಬೇಗ ಅದನ್ನು ಇಲ್ಲಿ ಕೊಟ್ಟಿರುತ್ತೇನೆ. ತಾಳ್ಮೆಗಾಗಿ ವಂದನೆಗಳು.

ಕೃತಿ - ಮೋಹನ ಮುರಲಿ.
ರಚನೆ - ಗೋಪಾಲ ಕೃಷ್ಣ ಅಡಿಗ

ವಿ.ಸೂ : ಇದರ ಎಲ್ಲಾ ಹಕ್ಕುಗಳು ಆಯಾ ಪ್ರಕಾಶಕರಿಗೆ ಸೇರಿದ್ದು. ಅಂತರ್ಜಾಲದಲ್ಲಿ ಹುಡುಕುವವರಿಗೆ ಲಭ್ಯವಾಗಲಿ ಎಂದು ಇಲ್ಲಿ ಒಂದು ಪ್ರತಿಯನ್ನು ಪ್ರಕಟಿಸಿದ್ದೇನೆ. ತಪ್ಪಾದಲ್ಲಿ ಕ್ಷಮೆಯಿರಲಿ.

---------------------------------------------------------

ಯಾವ ಮೋಹನಮುರಲಿ ಕರೆಯಿತು ದೂರ ತೀರಕೆ ನಿನ್ನನು ?
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು ?

ಹೂವು ಹಾಸಿಗೆ, ಚಂದ್ರ, ಚಂದನ, ಬಾಹುಬಂಧನ ಚುಂಬನ;
ಬಯಕೆತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ;

ಒಲಿದ ಮಿದುವೆದೆ, ರಕ್ತಮಾಂಸದ ಬಿಸಿದುಸೋಂಕಿನ ಪಂಜರ;
ಇಷ್ಟೆ ಸಾಕೆಂದಿದ್ದೆಯಲ್ಲೋ! ಇಂದು ಏನಿದು ಬೇಸರ?

ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ?
ಯಾವ ಸುಮಧುರ ಯಾತನೆ? ಯಾವ ದಿವ್ಯದ ಯಾಚನೆ?

ಮರದೊಳಡಗಿದ ಬೆಂಕಿಯಂತೆ ಎಲ್ಲೊ ಮಲಗಿದೆ ಬೇಸರ;
ಏನೊ ತೀಡಲು ಏನೊ ತಾಗಲು ಹೊತ್ತಿ ಉರಿವುದು ಕಾತರ.

ಸಪ್ತಸಾಗರದಾಚೆಯೆಲ್ಲೋ ಸುಪ್ತಸಾಗರ ಕಾದಿದೆ,
ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗು ಹಾಯಿತೆ?

ವಿವಶವಾಯಿತು ಪ್ರಾಣ; ಹಾ! ಪರವಶವು ನಿನ್ನೀ ಚೇತನ;
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?

ಯಾವ ಮೋಹನಮುರಲಿ ಕರೆಯಿತು ಇದ್ದಕಿದ್ದೊಲೆ ನಿನ್ನನು ?
ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು?

----------------------------------------------------------