Monday, August 15, 2011

ಕನ್ನಡ ವರ್ಣಮಾಲೆಯ ಅನಾಥ ಕೂಸು.

ೠ.

ನಾವೆಲ್ಲಾ ಪಾಠ ಮಾಡೋವಾಗ ಇದ್ದ ಈ ಅಕ್ಷರ ಸುಮಾರು ವರ್ಷಗಳಿಂದ ಕನ್ನಡ ವರ್ಣಮಾಲೆಯಿಂದ ಕಣ್ಮರೆಯಾಗಿದೆ. ಈಗಿನ ಮಕ್ಕಳು ಇವನ್ನು ತಮ್ಮ ಪಠ್ಯ ಪುಸ್ತಕದಲ್ಲಿ ಕಾಣುವುದಿಲ್ಲ. ನಮ್ಮ ಘನ ಕರ್ನಾಟಕ ಸರ್ಕಾರ ಈ ಅಕ್ಷರವನ್ನು ಕನ್ನಡದಿಂದ ಉಚ್ಚಾಟಿಸಿದೆ.

ನಮ್ಮ ಪುಣ್ಯ. ಇದು ಹೇಗೋ ತಂತ್ರಾಂಶದಿಂದ ಹೊರಗೆ ಹೋಗಿಲ್ಲ. ಈಗಲೂ ನಾವು ೠ ಎಂದು ಕೀಲಿಮಣೆಯಿಂದ ಬರೆಯಬಹುದು. ಇದನ್ನೂ ಹೊಡೆದೋಡಿಸದಿದ್ದರಷ್ಟೇ ಸಾಕು. ಈ ವಿಷಯ ಬರೆಯಲು ಆಗುತ್ತದೋ ಇಲ್ಲವೋ ಎಂದು ಶಂಕಿಸಿದ್ದ ನನಗೆ ತೃಪ್ತಿ ನೀಡಿತು.

ಇದಕ್ಕೆ ಕಾರಣ ಇನ್ನೂ ಹಾಸ್ಯಾಸ್ಪದ. ಸಂಸ್ಕೃತದಿಂದ ಆಯ್ದ ಈ ಸ್ವರ ಎಲ್ಲೂ ಉಪಯೋಗವಾಗಿಲ್ಲ. ಈ ಸ್ವರವನ್ನು ಉಪಯೋಗಿಸಿ ಯಾವ ಶಬ್ಧವಾಗಲಿ ಇಲ್ಲ. ಅದರಿಂದ ಇದರ ಉಪಯೋಗವಿಲ್ಲ.

ಇರಬಹುದು. ಆದರೆ ಆ ಕಾರಣ ಈ ಸ್ವರವನ್ನು ತೆಗೆದುಹಾಕಿದಲ್ಲಿ ನಾವು ಏನು ಸಾಧಿಸಿದಂತಾಗುತ್ತದೆ? ಅದು ಇದ್ದರೆ ನಮಗೇನು ಪ್ರಯೋಜನವಿಲ್ಲ; ಅಂದ ಮಾತ್ರಕ್ಕೆ ಅದನ್ನು ತೆಗೆದೇ ಬಿಡುವುದು ಯಾವ ನ್ಯಾಯ? ಸಂಸ್ಕೃತದಿಂದ ನಾವು ಎಷ್ಟೋ ಪದಗಳನ್ನು ಎರವಲು ಪಡೆದಿಲ್ಲವೇ? ಹಾಗೆಯೇ ಈ ಸ್ವರವನ್ನು ಪಡೆದಿದ್ದೆವಷ್ಟೇ. ಈ ಸ್ವರದ ಜಾಗ ಖಾಲಿ ಮಾಡಿ ನಾವು ಅಲ್ಲಿ ಏನಿಡಬೇಕಾಗಿದೆ? ಅದೆಷ್ಟು ಜಾಗ ಆಕ್ರಮಿಸಿಕೊಳ್ಳುತ್ತದೆ?

ಕೆಲವು ಜನರ ಅಭಿಪ್ರಾಯಕ್ಕೆ ಒಂದು ಸ್ವರವನ್ನೇ ಕಿತ್ತರೆ ಅದೆಷ್ಟರ ಮಟ್ಟಿಗೆ ಸರಿ?

ಆಗೀಗ ಹೊಸ ಪದಗಳನ್ನು ಟಂಕಿಸುವ ನಮಗೆ ಈ ಅಕ್ಷರ ಉಪಯೋಗಿಸಿ ಒಂದೂ ಪದವನ್ನು ಸೃಜಿಸಲು ಆಗಿಲ್ಲವೇ?

ಕನ್ನಡ ಶಬ್ದ ಬ್ರಹ್ಮರ ಎದುರು ಈ ಪ್ರಶ್ನೆಯನ್ನಿತ್ತು ಈ ಅಂಕಣವನ್ನು ಮುಗಿಸುತ್ತೇನೆ. ನನಗೇನಾದರೂ ಹೊಸ ಪದ ಆವಿಷ್ಕರಿಸಬೇಕಾಗಿ ಬಂದ ಸಂದರ್ಭದಲ್ಲಿ ಖಂಡಿತವಾಗಿಯೂ ಈ ಸ್ವರವನ್ನು ಗಣನೆಗೆ ತಂದುಕೊಳ್ಳುತ್ತೇನೆ ಎಂದು ಆಶ್ವಾಸನೆ ಕೊಡುತ್ತೇನೆ.

No comments: