Tuesday, August 16, 2011

ಪರಿವರ್ತನ

ಮಾರ್ಕೆಟ್ಟಲ್ಲಿ ಅವನು ಬಸ್ ಹತ್ತಿ ಕೂತ. ರಾತ್ರಿ ಒಂಬತ್ತೂ ಕಾಲಾದ್ದರಿಂದ ಖಾಲಿ ಖಾಲಿಯಾಗೆಯೇ ಇತ್ತು. ಗಾಳಿ ಬರಲೆಂದು ಕಿಟಕಿ ತೆರೆದು ಪುಸ್ತಕ ಓದಲು ಕೂತ.

ಮೆಜೆಸ್ಟಿಕ್ಕಿಗೆ ಬಂದ ಬಸ್ಸನ್ನು ಹಲವಾರು ಜನ ಏರಿದರು. ಇವನ ಎದುರುಗಡೆ ಒಬ್ಬ ಧಡೂತಿ ಆಸಾಮಿ ಬಂದು ಕೂತ. ಕೂತವನೇ ತನಗೆ ಬೇಕಾದಷ್ಟು ಕಿಟಕಿಯನ್ನು ತಳ್ಳಿ ತಣ್ಣನೆಯ ಗಾಳಿಯನ್ನು ಆಸ್ವಾದಿಸುತ್ತಾ ಕೂತ.

ಇವನಿಗೆ ಇರಿಸು ಮುರುಸಾಯಿತು. ಛಕ್ಕನೆ ಅವನಿಗೆ ಹೇಳಿದ: "ಸ್ವಾಮೀ, ನಾವೂ ಬಸ್ಸಲ್ಲಿದ್ದೇವೆ. ನಮಗೂ ಗಾಳಿ ಬೇಕು" ಎಂದವನೇ ಕಿಟಕಿಯನ್ನು ಮೊದಲಿದ್ದ ಹಾಗೆಯೇ ತಳ್ಳಿ ಓದಲು ಮುಂದುಮಾಡಿದ.

ಮನಸಿನಲ್ಲೇ ಬೈದುಕೊಳ್ಳುತ್ತಾ ಎದುರಿನಲ್ಲಿ ನಗುತ್ತ ಸಾವರಿಸಿಕೊಂಡು ಅವನೂ ತೆಪ್ಪಗಾದ.

ಐದು ನಿಮಿಷ ಕಳೆಯಿತು. ಸುಯಿ ಎಂದು ಬೀಸುತ್ತಿದ್ದ ಗಾಳಿ ತನ್ನ ಜೊತೆ ಭೋರ್ಗರೆಯುವ ಮಳೆಯನ್ನೂ ತಂದಿತು.

ಈಗ ಅವರಿಬ್ಬರೂ ಕಿಟಕಿ ಮುಚ್ಚುವುದಕ್ಕೆ ಮುಂದಾದರು.

No comments: