Tuesday, October 28, 2008

ಸಂಗಮ - ವಿಮರ್ಶೆ

ಈ ಅಂಕಣ ಶುಕ್ರವಾರಾನೆ ಬರೀಬೇಕಂತ ಇದ್ದೆ. ಕಾರಣಾಂತರಗಳಿಂದ ಆಗ್ಲಿಲ್ಲ.

ಸಿನಿಮಾ ಬಗ್ಗೆ ಹೇಳಬೇಕಾದದ್ದು ಏನು ಇಲ್ಲ. ಇನ್ನೊಂದು ತಿಪ್ಪೆ ಸಿನಿಮಾ. ನಾನು ನೋಡಿರೋ ತಿಪ್ಪೆ ಸಿನಿಮಾಗಳಿಗೆ ಲೆಖ್ಖ ನೇ ಇಲ್ಲ ಬಿಡಿ. ಒಂದ್ ನಯಾ ಪೈಸ ಕಥೆ ಇಲ್ಲ. ನಾಯಕ, ನಾಯಕಿಗಳಿಗಂತೂ ಮೊದಲೇ ಕೆಲಸ ಇಲ್ಲ. ಐದು ನಿಮಿಷದಲ್ಲಿ ಮುಗಿಸಬಹುದಾದ ಕಥೇನ ೨:೩೦ ಗಂಟೆ ಕುಯ್ಯ್ದಿದ್ದಾರೆ.

ಆ ಕಥೆ ಅನ್ನೋ ಕಥೆ ನ ಹೇಳ್ತೀನಿ ಕೇಳಿ. ನಾಯಕ ಗಣೇಶ್ (ಸಿನೆಮಾದಲ್ಲಿ 'ಬಾಲು') ರಿಯಲ್ ಎಸ್ಟೇಟ್ ಉದ್ಯಮಿ. ಆದರೆ ಅವನು ಆ ಕೆಲಸ ಮಾಡೋಕಿಂತ ಬ್ರೋಕರ್ ಕೆಲಸಾನೇ ಜಾಸ್ತಿ. ಒಂದ್ ಹುಡುಗಿಗೆ ಗಂಡು ಕೂಡಿದರೆ, ಆ ಗಂಡಿನ ಪೂರ್ವಾಪರ ವಿಚಾರ್ಸ್ಕೊಂಡ್ ಬರೋದು, ಆ ಹುಡುಗಿಗೆ ಅವಳಿಗಿಷ್ಟ ಇರೋ ಗಂಡನ್ನು ಹುಡುಕೋದು, ಇತ್ಯಾದಿ ಕೆಲಸಗಳು.

ನಾಯಕಿ ವೇದಿಕಾ (ಸಿನೆಮಾದಲ್ಲಿ ಮಹಾಲಕ್ಷ್ಮಿ ಅಲಿಯಾಸ್ ಲಚ್ಚಿ ) , ತನ್ನ ಗಂಡ ಸಾಫ್ಟ್ವೇರ್ ಇಂಜಿನಿಯರೇ ಆಗಿರಬೇಕು, ವಿದೇಶದಲ್ಲೇ ಸೆಟ್ಟಲ್ ಆಗಿರಬೇಕು, ಕೈತುಂಬ ಸಂಬಳ ತರಬೇಕು ಅಂತ ಬಹಳ ಯೋಜನೆಗಳನ್ನ ಹಾಕಿಕೊಂಡಿರುವ ಹುಡುಗಿ. ಅದಕ್ಕೋಸ್ಕರ ಏನೇನೋ ವ್ರತಗಳನ್ನ ಮಾಡೋಳು. ಈ ಬಾಲು ಅವಳ ಸಹಾಯಕ್ಕೆ ಬರ್ತಾನಾದ್ರು ಅವನಿಗೆ ಅವಳಮೆಲೆಯಾಗಲಿ, ಅವಳಿಗೆ ಅವನ ಮೇಲಾಗಲಿ ಪ್ರೇಮಾಂಕುರವಾಗುವುದಿಲ್ಲ. ಅವಳ ವ್ರತಕ್ಕೆ ಸಹಾಯ ಮಾಡುವ ಸಮಯದಲ್ಲಿ ಅವಳಿಗೆ ಅವನ ಮೇಲೆ ಪ್ರೀತಿಯುಂಟಾಗಿ, ಇಷ್ಟರಲ್ಲೇ ಅವನು ಅವಳಿಗೆ ಜರ್ಮನಿ ಗಂಡು ನೋಡಿ, ಅವಳು ಅದನ್ನು ಎಲ್ಲರೆದುರು ನಿರಾಕರಿಸುವುದಿಲ್ಲ. ಆದರೂ ಅವಳು ಬಾಲುವನ್ನು ಪ್ರೀತಿಸುವುದನ್ನು ನಿಲ್ಲಿಸುವುದಿಲ್ಲ. ಅವಳ ರೀತಿಯೇ ಒಂದು ಅತಿರೇಕಕ್ಕೆ ಎಡೆಮಾಡಿಕೊಡುತ್ತದೆ. ಇವನು ಪಕ್ಕಾ ಜೆಂಟಲ್ ಮ್ಯಾನ್ ರೀತಿಯಲ್ಲಿ ಆಡ್ತಾನೆ. ಆದರೂ ಕೋಪ ಮಾಡ್ಕೋತಾನೆ. ಈ ಎಲ್ಲ ಅಸಂಬದ್ದಗಳ ನಡುವೆ ಆ ಮದುವೆ ದಿನ ಬಂದೇಬಿಡುತ್ತದೆ. ಅಲ್ಲಿ ನಡೆಯುವ ನಾಟಕ ಮಾತ್ರ ತೋರಿಸಿದ್ದಾರೆ ಸರಿ ಹೋಗುತ್ತಿತ್ತು.

ಈ ನಡುವೆ ಕೋಮಲ್ ನಗಿಸುವಲ್ಲಿ ಬಹಳವಾಗಿ ಎಡವಿದ್ದಾರೆ. ಆದರೂ ಕೆಲವು ದೃಶ್ಯಗಳು ನಗಿಸುತ್ತವೆ. ಸಾಧು ಕೋಕಿಲ ಪರವಾಗಿಲ್ಲ. ಮೈನ ಚಂದ್ರು ಖೋಜ ಪಾತ್ರದಲ್ಲಿ ನ್ಯಾಯ ಸಲ್ಲಿಸಿದ್ದಾರಾದರೂ ಅವರ ಪಾತ್ರವೇ ಬೇಡವಾಗಿತ್ತು ಎಂದರೂ ಅತಿಶಯವಲ್ಲ.

ಸಂಗೀತಕ್ಕೆ ಬಂದರೆ ತೆಲುಗಿನ ದೇವಿಶ್ರೀಪ್ರಸಾದರ ಹಾಡುಗಳಲ್ಲಿ ಎರಡು ಕೇಳಬಹುದು. ಆದರು ಕನ್ನಡದವರಿಗೆ ಆದ್ಯತೆ ಕೊಟ್ಟಿದ್ದಾರೆ ಅವು ಇನ್ನೂ ಸಹನೀಯವಾಗುತ್ತಿತ್ತೋ ಏನೋ? ಅವರೇ ಹಾಡಿರುವ ಹಾಡಲ್ಲಿ ಕೆಲವು ಉಚ್ಚಾರ ತೆಲುಗಿನದು ಎಂದು ಗೊತ್ತಾಗುತದೆ.

ನಾಯಕಿ ವೇದಿಕಾರವರಿಂದ ಏನನ್ನು ಅಪೇಕ್ಷಿಸಲು ಸಾಧ್ಯವಿಲ್ಲ. ಇಲ್ಲಿ ನಿರ್ದೇಶಕರೇ ಎಡವಿದ್ದಾರೆ. ಅವರ ಬೇರೆ ಸಿನಿಮಾ ಬಂದರೆ ಅಲ್ಲಿಂದ ಅವರ ಅಭಿನಯವನ್ನು ಅಳೆಯಬಹುದು. ಒಟ್ಟಾರೆ ಹೇಳಬೇಕೆಂದರೆ ಹಾಡಿನಲ್ಲಿ ಕುಣಿಯುವುದಕ್ಕೆ ಮಾತ್ರ ಇಲ್ಲಿ ಅವರನ್ನು ಬಳಸಲಾಗಿದೆ.

ಗಣೇಶ್ ಬಗ್ಗೆ ಏನ್ ಹೇಳಿದರೂ ವಾಕರಿಕೆ ಬರುತ್ತದೆ. ಇದು ಅವರ ೪ನೇ ನಿಶ್ಚಿತಾರ್ತೋತ್ತರ ಸಿನಿಮಾ. (post engagement syndrome cinema). ಅಂದರೆ, ನಿಶ್ಚಿತಾರ್ಥ ಆದಮೇಲೆ ಹುಡುಗಿಯ ಮನ ಸೆಳೆಯುವ ಚಿತ್ರ. (ಮುಂಗಾರು ಮಳೆ, ಅರಮನೆ, ಬೊಂಬಾಟ್, ಮುಂಚಿನ ಮೂರು ಚಿತ್ರಗಳು, ಇದೇ ಕಾರಣಕ್ಕೆ ಈ ಮೇಲಿನ ಮೂರು ಚಿತ್ರಗಳು ನನಗೆ ಇಷ್ಟ ಆಗಲಿಲ್ಲ) ಇವರು ಹೀಗೆ ಮಾಡ್ತಾ ಇದ್ದರೆ ಗೋಲ್ಡನ್ ಸ್ಟಾರ್ ಹೋಗಿ ಗುಲ್ದು ಸ್ಟಾರ್ ಆಗೋದ್ರಲ್ಲಿ ಏನು ಅನುಮಾನಾನೆ ಇಲ್ಲ. ಚಿತ್ರಗಳನ್ನು ಎದ್ವಾತದ್ವ ಸೆಲೆಕ್ಟ್ ಮಾಡ್ತಾ ಇದ್ದಾರೆ. ಹುಶಾರಾಗಿರೋದು ಒಳ್ಳೇದು ಅಂತ ಒಂದು ಸಲಹೆ ಕೊಡಬಹುದು ಏನಂತೀರಾ?

ಚಿತ್ರ ನೀವು ನೋಡಿಲ್ಲದಿದ್ದರೆ ನೋಡದಿರುವುದೇ ಲೇಸು. ನೋಡಿದ್ದರೆ ನಿಮ್ಮ ಅನಿಸಿಕೆ ಬರೆಯಿರಿ.

No comments: